ಕಾದಂಬರಿ
ಶಾಮಣ್ಣ ಅಂತರ್ಜಾಲ ಆವೃತ್ತಿ ಭಾಗ ಎರಡು (ಪುಟ 101 ರಿಂದ 200)
ಕುಂ ವೀರಭದ್ರಪ್ಪ
ಯಶಸ್ವಿಯಾದ ಮಗಳನ್ನು ಯಾವ ಭಾವನೆಗಳಿಂದ ಅಭಿನಂದಿಸುವುದು! ಇಷ್ಟೊಂದು ಜಾಣ ಮಗಳು ತಾನು
ಪ್ರೀತಿಸಿದವನನ್ನು ಕೈಹಿಡಿದರೆ ಅದಕ್ಕಿಂತ ಮಿಗಿಲಾದ ಸಂತೋಷ ಯಾವುದು!. ಆ ದೇವರೇ ಮದ್ಯಸ್ಥಿಕೆ
ವಹಿಸಿ ಈಕೆ ಮತ್ತು ಆತನ ನಡುವೆ ಇರುವ ಅಂತರದ ಅಗಾಧತೆಯನ್ನು ಕಡಿಮೆ ಮಾಡಬಾರದೇಕೆ? ಹೀಗೆ
ಯೋಚಿಸುತ್ತ ಹನಿಗೂಡಿದ ರುಕ್ಕಮ್ಮನ ಕಣ್ಣುಗಳಾದರೂ ಎಂಥವು? ಆ ಕಣ್ಣುಗಳ ಬೆಳಕಿನಲ್ಲಿ ರುದ್ರನಾಯಕ
ದೇವಿಯ ಉಪಾಸನೆ ಮಾಡುತ್ತಿದ್ದ. ಆ ಕಣ್ಣುಗಳ ಬೆಳಕಿನಲ್ಲಿ ಸ್ನಾನಮಾಡಿ ರುದ್ರ ನಾಯಕ ಕುಜಗ್ರಹದ
ಶಕ್ತಿಯನ್ನು ಆವಾಹಿಸಿಕೊಳ್ಳುತ್ತಿದ್ದ.
ರುಕ್ಕೂ ಸದಾ ನಿನ್ನ ಕಣ್ಣುಗಳು ಹೀಗೇ ಮಿನುಗುತ್ತಿರಬೇಕೆಂದು ಗದ್ಗದಿತನಾಗಿದ್ದ. ಅಂಥ
ಕಣ್ಣುಗಳಲ್ನೀರು ತುಂಬುವುದೆಂದರೇನು?
ಅಂಥ ಕಣ್ಣುಗಳಿಂದ ಒಂದು ಹನಿ ನೆಲಕ್ಕುರುಳಿದರೆಲ್ಲಿ ಸಚರಾಚರಗಳು ದುಃಖದ ಕಡಲಲ್ಲಿ ಮುಳುಗುವುವೋ
ಎಂದು ಹೆದರಿದ ಅನಸೂಯ ಸೆರಗಿನ ಚುಂಗನ್ನು ತಾಯಿಯ ಕಣ್ಣುಗಳಿಗೆ ಅಂಟಿಸಿದಳು.
"ಯಾಕಮ್ಮಾ ಕಣ್ಣಲ್ಲಿ ನೀರು ತಂದ್ಕೊಂಡಿ? ನೀನು ಬೇಡಾಂದ್ರೆ ನಾನ್ ಹೋಗದಿಲ್ಲ ಬಿಡು" ಕೈಯಲ್ಲಿದ್ದ
ಚೀಟಿಯನ್ನು ಹರಿದು ಚೂರು ಚೂರು ಮಾಡಲೆಂದು ಮಡಿಚಿದಳು. ಆಕೆ ಹರಿಯದಿದ್ದಾಗ ತೊಲೆ ಸಂದಿಯಲ್ಲಿ
ಪಿಳಿಪಿಳಿ ಕಣ್ಣು ಬಿಡುತ್ತ ನೋಡುತ್ತಿದ್ದ ಮೂಷಕಕಕ್ಕೆ ನಿರಾಸೆಯಾಯಿತು.
ಶಾಮು ಆಕೆಗೆ ಬರೆಯುತ್ತಿದ್ದ ಎಷ್ಟೋ ಪ್ರೇಮಪತ್ರಗಳು ಉಪಾಯದಿಂದ ಅಪಹರಿಸಿ ಒಯ್ದು ತನ್ನ
ಪ್ರಿಯತಮೆಗೆ ಒಪ್ಪಿಸಿ ಸಂತೋಷಪಡುವ ಪರಿಪಾಟ ಇಟ್ಟುಕೊಂಡಿತ್ತು. ಪ್ರತಿಯೊಂದು ಪ್ರೇಮಪತ್ರವನ್ನು
ಮೊದಲದಿನ ಓದಿದ ನಂತರ ಅದನ್ನು ತನ್ನ ಸುಂದರ ವಕ್ಷಸ್ಥಳದಲ್ಲಿ ಭದ್ರಪಡಿಸುತ್ತಿದ್ದಳು ಅನಸೂಯ. ಆಕೆಯ
ಬೆವರಿನಿಂದ ತೊಯ್ದು ಅದರಲ್ಲಿನ ಅಕ್ಷರಗಳ ಮೌಲ್ಯ ಹೆಚ್ಚುತ್ತಿತ್ತು. ಜೊತೆಗೆ ರುಚಿಯೂ ಕೂಡ.
ಇಲಿಯ ನಿರೀಕ್ಷೆಯಂತೆ ಚೀಟಿಯನ್ನು ಬ್ಲೌಜಿನೊಳಗೆ ಇರಿಸದೆ ಮುಷ್ಟಿಯಲ್ಲಿ ಭದ್ರಪಡಿಸಿದಳು.
"ನಾನ್ಯಾಕೆ ಕಣ್ಣಲ್ಲಿ ನೀತಂದ್ಕೊಳ್ಲೇ ಮಗಳೇ ನಿಮ್ಮಪ್ಪ ಇಷ್ಟೊತ್ಗೆ ವಾಪಸು ಬಂದಿದ್ರೆ ನಾನು
ಇಷ್ಟೊಂದು ಚಿಂತೆ ಮಾಡಬೇಕಾಗಿಲಿಲ್ಲ ಕಣಮ್ಮಾ... ನಿನ್ನ ಚಿನ್ನದಂಥ ಮನಸ್ಸನ್ನು ಅರ್ಥ ಮಾಡ್ಕೊಂಡು
ಮದ್ವೆ ಆಗೋಕೂ ಶಾಮಾ ಶಾಸ್ತ್ರಿ ಪುಣ್ಯ ಮಾಡಿಬೇಕು" ಒಂದು ನಿಟ್ಟುಸಿರು ಬಿಟ್ಟು ಮಗಳ ಮುಡಿ
ನೇವರಿಸಿ ಮುಂದುವರೆದು ಹೇಳಿದಳು.
"ನೀನು ಹೋಗು... ಅವನ ಜೊತೆ ಮಾತಾಡಿ ನಿರ್ಧಾರ ಮಾಡ್ಕೊಂಡು ಬಾ... ತಾಯೀನ ತುಂಬ ಹಚ್ಕೊಂಡಿರೋ ಅವನ್
ಮನಸ್ಸಿಗೆ ನೋವಾಗುವಂತೆ ಮಾತಾಡಿ ಬಿಡಬೇಡ... ಹಣೆಯಲ್ಲಿ ಬರೆದಂತಾಗ್ತದೆ’
ಆ ಕ್ಷಣ ಹೊರಡುವ ಉತ್ಸಾಹ ಕೂಡಲೆ ಪ್ರಕಟಿಸಲಿಲ್ಲ. ನಿಟ್ಟುಸಿರು, ಬೇಸರಗಳಿಂದ ಅಲಂಕೃತಗೊಂಡಿರುವ
ಮುಖಕ್ಕೆ ಏನು ಹಚ್ಚಿಕೊಂಡರೆ ಏನು? ಕನ್ನಡಿ ಎದುರು ನಿಂತು ಮುಷ್ಠಿ ತೆರೆದಳು. ಪತ್ರ ಬೆವರಿನಿಂದ
ಸಂಪೂರ್ಣ ನೆನೆದಿತ್ತು. ಅದರಲ್ಲಿನ ಯಾವೊಂದು ಅಕ್ಷರವೂ ಅರ್ಥವಾಗಿರುವ ಸ್ಥಿತಿಯಲ್ಲಿರಲಿಲ್ಲ.
ಒಂಚೂರು ಅನ್ನದ ಉಂಡೆಯಂತಿದ್ದ ಅದನ್ನು ನಗಂದಿ ಮೇಲಿಡುತ್ತಲೆ ಮೂಷಕಕ್ಕೆ ಹೋದ ಜೀವ ಮರಳಿ ಬಂದಿತು.
"ಒಬ್ಬರ ಪ್ರೇಮಪತ್ರಾನ ಇನ್ನೊಬ್ರು ಓದಬಾರದೆಂಬ ಸಾಮಾನ್ಯ ತಿಳುವಳಿಕೆಯೂ ಈ ಇಲಿಗಳಿಗೆ
ಇಲ್ಲವಾಯಿತಲ್ಲಾ" ಎಂಬರ್ಥ ಬರುವಂತೆ ಸಂದೂಕದ ಮರೆಯಲ್ಲಿದ್ದ ಬೆಕ್ಕು ಮ್ಯಾಂವ್ ಗುಟ್ಟಿ
ಎಚ್ಚರಿಸಿತು.
"ಇನ್ನೊಬ್ರು ಓದಿದಾಗ್ಲೇ ಪ್ರೇಮ ಪತ್ರಗಳಿಗೆ ಹೆಚ್ಚಿನ ಬೆಲೆ ಬರೋದೂಂತ ಮಾರ್ಜಾಲ ಜಾತಿಗೆ
ಅರ್ಥವಾಗುವುದಾದರೂ ಹೇಗೆ!. ನಮ್ಮ ಪರಮ ಶತ್ರುವಾದ ಮಾರ್ಜಾಲ ಕುಲಕ್ಕೆ ಧಿಕ್ಕಾರ ಅವುಗಳ
ಬುದ್ಧಿವಾದಕ್ಕೆ ಧಿಕ್ಕಾರ" ಎಂದು ಚೀಂವ್ ಚೀಂವ್ ಭಾಷೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತ ಮೂಷಕ
ಪ್ರೇಮ ಪತ್ರದಕಡೆ ಕಳ್ಳ ಹೆಜ್ಜೆ ಇಡತೊಡಗಿತು.
ಆದರೆ ಜಂತಿಯ ಸಂದಿಯಲ್ಲಿದ್ದ ಅದರ ಪ್ರಿಯತಮೆಗೋ ಭಯ ಅಂದರೆ ಭಯ, ನೋಟದ ಗುರಿಯ ಗಾಳ ಎಸೆದು ಕೂತಿರುವ
ಮಾರ್ಜಾಲಕ್ಕೋ ಸಿಟ್ಟು, ತನ್ನ ಅಪ್ಪಣೆ ಮೀರಿ ಮೂಷಕ ಪ್ರೇಮಪತ್ರ ಲಪಟಾಯಿಸುವುದೆಂದರೇನು!...
"ಅಕ್ಕಾ ತಕ್ಕೊಳ್ಳೀ... ನಿನ್ ಪ್ರೇಮ ಪತ್ರಾನ ಆ ದರಿದ್ರ ಇಲಿ ಲಪಟಾಯಿಸುತ್ತಾ ಇದೆ. ಪ್ರೇಮದ
ಗುಟ್ಟನ್ನು ಇಲಿಗಳು ಕಾಪಾಡೊಲ್ಲ ಕಣಮ್ಮಾ" ಎಂದು ತನ್ನ ಭಾಷೆಯಲ್ಲಿ ಹೆಲನ್ ಪರಿಪರಿಯಾಗಿ ಹೇಳಿತು.
(ತೀಸ್ರಿಮಂಜಿಲ್ನಲ್ಲಿ ನರ್ತಕಿ ಹೆಲನ್ ಅಮೋಘ ಅಭಿನಯಕ್ಕೆ ಮನಸೋತು ಶಾಮು ಅದಕ್ಕೆ ಆ ಹೆಸರು
ಇಟ್ಟಿದ್ದನು.)
ಎದೆ ತುಂಬ ಮುಡಿ ಹರಡಿಕೊಂಡಿದ್ದ ಅನಸೂಯ ಬೇರೆ ಸಂದರ್ಭದಲ್ಲಾಗಿದ್ದರೆ ಹೆಲೆನ್ನಳ ಭಾಷೆಯನ್ನು ಶತಾಯ
ಗತಾಯ ಅರ್ಥಮಾಡಿಕೊಳ್ಳುತ್ತಿದ್ದಳು.
"ಹೆಲನ್ ಹಸ್ಕೊಂಡು ಅರಚ್ತಿದೆ. ಅಮ್ಮಾ ಅದ್ಕೆ ಅನ್ನ ಹಾಲು ಕಲೆಸಿಡೇ" ಬಾಚಿಕೊಳ್ಳುತ್ತ ಆಕೆ
ಕೂಗಿದ್ದು ಕೇಳಿಸಿಕೊಂಡು ಬೆಕ್ಕಿಗೋ ಪ್ರಾಣಸಂಕಟ ಇಲಿಗೋ ಚಿನ್ನಾಟ.
ಆ ದರಿದ್ರ ಶಾಮಾಶಾಸ್ತ್ರಿಯ ಸಹವಾಸದಿಂದಾಗಿ ಅಪ್ಪಟ ವೆಜಿಟೇರಿಯನ್ನಾಗಿರುವ ಈ ಲಲನಾಮಣಿ ಗಂಡಸಾದ
ತನಗೆ ಹೆಲನ್ ಎಂಬ ಹೆಸರಿಟ್ಟು ತಪ್ಪು ಮಾಡಿರೋದಲ್ದೆ ತನ್ನ ಭಾಷೆ ಅರ್ಥಮಾಡಿಕೊಳ್ಳಲಾಗದೆ
ಪ್ರೇಮವನ್ನು ಜಗಜ್ಜಾಹಿರು ಮಾಡುತ್ತಿರುವಳಲ್ಲಾ ಎಂದು ಹೆಲನ್ ಮಮ್ಮಲನೆ ಮರುಗಿತು.
"ಲವ್ ಅಂದರೇನೆಂದು ಗೊತ್ತಿಲ್ಲದ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭನಿಗೆ ವಾಹನವಾಗಿರುವ
ನಿಮಗೆ ಪ್ರೇಮಪತ್ರ ಲಪಟಾಯಿಸುವ ಹಕ್ಕು ಯಾವ ಬೋಳಿಮಗ ಕೊಟ್ಟ... ಒಳ್ಳೆ ಮಾತಿಂದ ಹೇಳ್ತಿದೀನಿ...
ಚೀಟಿ ಬಳಿಗೆ ಬರಬೇಡ... ಹುಷಾರ್" ಹೆಲೆನ್ ಬೆದೆಗೆ ಬಂದಾಗ ಉಪಯೋಗಿಸುವ ಭಾಷೆ ಬಳಸಿ ಎಚ್ಚರಿಕೆ
ನೀಡಿತು. ಅದರ ರೂಕ್ಷ ಸ್ವರಕ್ಕೆ ಬೇಸತ್ತು ಅನಸೂಯ ಬಾಚಣಿಕೆಯನ್ನು ಅದರತ್ತ ಎಸೆದಳು. ಅದನ್ನೇ
ಪಾಶುಪತಾಶ್ತ್ರವೆಂದು ಭಾವಿಸಿ ಹೆಲೆನ್ ಹಿಡಿಹಿಡಿ ಶಾಪ ಹಾಕುತ್ತ ಅಲ್ಲಿಂದ ಓಡಿತು.
ಅದು ಓಡಿದ್ದು ನೋಡಿ ಮೂಷಕಕ್ಕೆ ಖುಷಿಯೋ ಖುಷಿ. ತನ್ನ ಪ್ರಿಯತಮೆಯ ಕಡೆಗೆ ನೋಡಿ ಕಣ್ಣು
ಮಿಟುಕಿಸಿತು. ಬಿಚ್ಚುಗತ್ತಿ ಭರಮಣ್ಣ ನಾಯಕನಂತೆ ಭಲೆ ಠೀವಿಯಿಂದ ಹೆಜ್ಜೆ ಹಾಕುತ್ತ ಪ್ರೇಮಪತ್ರ
ಸಮೀಪಿಸಿತು. ತನ್ನ ಮೂತಿಯನ್ನು ಇಷ್ಟಗಲ ತೆರೆದು ಅದನ್ನು ಕಚ್ಚಿಕೊಂಡು ರೋಮಾಂಚನಗೊಂಡಿತು. ಎಂಥ
ರೋಚಕ ಅನುಭವ ಪ್ರೇಮಪತ್ರ ಮುಟ್ಟುವುದೆಂದರೆ!. ಬರಿ ನೆನೆದರೇನುಂಟು ಪ್ರೇಮಪತ್ರದ ರುಚಿಯ...
ಜೋಹನ್ಸ್ಬರ್ಗ್ನಲ್ಲಿ ಅಧಿಕಾರ ವಹಿಸಿಕೊಳ್ಳುವ ತನ್ನ ಗಂಡನ ಕಡೆ ವಿನ್ನಿಮಂಡೇಲಾ
ನೋಡುತ್ತಿದ್ದಳಲ್ಲ... ಹಾಗೆ... ಅಂಥ ನೋಟ ಬೀರುತ್ತಿದ್ದ
ಪತ್ನಿಯ ಕಡೆ ಗಂಭೀರವಾದ ಹೆಜ್ಜೆ ಹಾಕತೋಡಗಿತು.
"ಸ್ವಾಗತಂಽಽ ಸುಸ್ವಾಗತಂಽಽ ದೊರಾ" ಅದರ ಪ್ರಿಯತಮೆ ಮಾಲಕೌಂಸ್ ಆಲಾಪನೆ ಮಾಡಿತು. ಜಂತಿಯ ಸಂದಿಯಿಂದ
ಹಿಡಿಬಯಲನ್ನೇ ಸ್ಯಾಂಕಿ ಕೆರೆಯ) ಡಾ. ಜೀವರಾಜ್ ಆಳ್ವರ ಮನೆ ಎದುಗಿರುವ) ಪಾರ್ಕ್ ಎಂದೇ ಭಾವಿಸಿ
ಅವೆರಡು ಭಲೆ ರೊಮಾಂಟಿಚ್ ಮೂಡಿನಲ್ಲಿ ಎದುರುಬದುರು ಕೂತುಕೊಂಡವು. ಪ್ರಿಯಕರ ತನ್ನ ಪ್ರಿಯತಮೆಯ
ಎದುರಿಗೆ ಪ್ರೇಮಪತ್ರ ಹರಡಿತು. ಕೋಮಲಕಾಯದ ಹೆಣ್ಣು ಇಲಿ ಲವ್ ಲೆಟರಿನೊಳಗೆ ಬಗ್ಗಿ ಬಗ್ಗಿ ನೋಡಿತು.
ಬೆವರಿಗೆ ಅಳಿಸಿಹೋಗಿದ್ದ ಅಕ್ಷರಗಳನ್ನು ನೋಡಿ ಮನನೊಂದಿತು. ನಿಲುಗನ್ನಡಿ ಎದುರು ಮ್ಲಾನವದನಳಾಗಿ
ಕೂತಿದ್ದ ತರುಣಿ ಕಡೆ ನೋಡಿ ’ಅಯ್ಯೋ ಪಾಪ’ ಎಂದಿತು.
"ಪ್ರಿಯತಮೆ ತನ್ನ ಪ್ರಿಯತಮನ ಪತ್ರ ಬಂದ ನಂತರವೂ ಆಕೆ ಇಷ್ಟು ಮಂಕಾಗಿರುವಳಲ್ಲ... ಅಯ್ಯೋ ಪಾಪ"
ಹೆಣ್ಣು ಸ್ತ್ರೀಸಹಜ ಮನೋಭಾವದಿಂದ ಖೇದ ವ್ಯಕ್ತಪಡಿಸಿತು.
"ಹೆಣ್ಣಿನ ಮನೋವೇದನೆಗೆ ಹೆಣ್ಣಾದ ನಿನಗೆ ಅರ್ಥವಾಗದಿದ್ದರೆ ಹೇಗೆ ಚಿನ್ನಾ... ಆ ಶಾಮಾಶಾಸ್ತ್ರಿ
ಪ್ರೇಮವೆಂಬ ತುಪ್ಪವನ್ನು ಈ ಹುಡುಗಿಯ ನೀಳ ನಾಸಿಕದ ಮೇಲೆ ಹಚ್ಚಿ ಮಾಡಿರುವ ದೊಡ್ಡ ತಪ್ಪು ಕಣೆ.
ಮೊದಲೇ ಅವನು ಹುಟ್ಟಿರುವುದ ಸಂಸ್ಕೃತ ಭೂಯಿಷ್ಠ ವಂಶದಲ್ಲಿ... ಸಂಸ್ಕೃತ ತಾಂಡವವಾಡುವ ಸ್ಥಳದಲ್ಲಿ
ಪ್ರೇಮ ಸಾಯುಜ್ಯ ಜಾಗವಿರುವುದಿಲ್ಲ. ನೆನ್ನೆ ಕೋಡುಬಳೆ ವಾಸನೆ ಹಿಡಿದು ಶಾಸ್ತ್ರಿಗಳ ಮನೆಗೆ
ಹೋಗಿದ್ದೆ."
"ಓಹೋ ಕೋಡುಬಳೆ ತತೀನೆಂದು ಹೋಗಿದ್ದೆಯಲ್ಲ... ಕೋಡುಬಳೆ ಸಂಗತಿ ಹಾಳಾಗಲಿ... ಅಲ್ಲಿ ಏನೇನು
ಮಾತುಕಥೆ ನಡೀತು ಎಂಬುದರ ಬಗ್ಗೆ ಹೇಳು. ಕೇಳಲು ಉತ್ಸುಕಳಾಗಿದ್ದೇನೆ" ಹೆಣ್ಣಿಲಿ ತನ್ನ ನಿರಾಭರಣದ
ಕರ್ಣವನ್ನು ತನ್ನ ಪ್ರಿಯತಮನ ಬಾಯಿ ಬಳಿ ಇಟ್ಟಿತು.
"ಅದನ್ನೆಲ್ಲ ಹೇಳಿ ನಾನ್ಯಾವ ನರಕಕ್ಕೆ ಹೋಗಲಿ ಬಂಗಾರ... ಉತ್ತಮ ನಕ್ಷತ್ರದಲ್ಲಿ ಋತುಮತಿಯಾದ
ಕನ್ಯಾನ್ವೇಷಣೆಗೆ ಆ ವೃದ್ಧ ಶಾಸ್ತ್ರಿಗಳು ಯಾವುದೋ ಊರಿಗೆ ಹೋಗಿದ್ದರು. ಅರೆ ಬೆತ್ತಳಾಗಿದ್ದ ತಾಯಿ
ಅಲುಮೇಲಮ್ಮಳ ತೊಡೆಮೇಲೆ ಶಾಮಾಶಾಸ್ತ್ರಿ ತಲೆ ಇಟ್ಟು ಮಲಗಿದ್ದ. ಅವನ ಕಣ್ಣುಗಳಿಂದ ನೀರು
ಧಾರಾಕಾರವಾಗಿ ಹರಿದು ತೊಡೆಯಸೀಳಿನಲ್ಲಿ ಇಂಗಿಹೋಗುತ್ತಿತ್ತು. "ಆ ಶೂದ್ರ ಹುಡುಗಿಯನ್ನು
ಮದುವೆಯಾಗುವುದಾದರೆ ಮೊದಲು ನನಗೆ ವಿಷ ಕೊಡು" ಎಂದು ಆ ಮಹಿಳೆ ಖಡಾಖಂಡಿತವಾಗಿ ಕಣ್ಣೀರು ತೆಗೆದು
ಮಾತಾಡುತ್ತಿದ್ದಳು. "ಅಮ್ಮಾ ಈ ಪ್ರಪಂಚದಲ್ಲಿ ತಾಯಿಯಾದ ನಿನಗಿಂತ ಬೆಲೆಬಾಳುವ ಹೆಣ್ಣು ಯಾರೂ
ಇಲ್ಲ" ಎಂದು ಹೇಳುತ್ತಿದ್ದ. "ಮತ್ತೇಕೆ ಕಣ್ಣೀರು ತೆಗೆಯುತ್ತಿರುವಿ" ಎಂದು ತಾಯಿ ಪ್ರಶ್ನಿಸಿದಳು.
"ಇಷ್ಟು ವರ್ಷಗಳ ಕಾಲ ನನ್ನನ್ನು ಪ್ರೀತಿಸಿದವಳನ್ನು, ನನಗೆ ಸೃಜನಾತ್ಮಕವಾಗಿ ದೇಹ ಮತ್ತು ಮನಸ್ಸು
ಎರಡನ್ನು ಹಂಚಿಕೊಂಡವಳನ್ನು ಮರೆಯುವ ಕಷ್ಟ ನಿನಗೆ ಅರ್ಥವಾಗುವುದಿಲ್ಲ ತಾಯಿ" ಎಂದವನು
ಗದ್ಗದಿತನಾಗಿ ಚಿನ್ನಾ"ಗಿ ಎಂದನು.
"ಅಂದರೆ ಅವನು ತಾನು ಮದುವೆಯಾಗುವುದಿಲ್ಲ ಎಂದು ಹೇಳಲಿಕ್ಕಾಗಿಯೇ ಅನಸೂಯಳಿಗೆ ಚೀಟಿ
ಕಳಿಸಿದ್ದಾನೆಂದಾಯಿತು."
"ಹೌದು. ಖಂಡಿತ ಅದಕ್ಕೇನೆ."
"ಹಾಗಿದ್ದರೆ ಆಕೆಯನ್ನು ಅಲ್ಲಿಗೆ ಹೋಗದಂತೆ ತಡೆಯಬೇಕಲ್ಲ."
"ತಡೆಯೋದಾದ್ರೂ ಯಾಕೆ ಚಿನ್ನಾಽಽ ಆಕೆಗೀಗಾಗ್ಲೇ ಎಲ್ಲಾ ಅರ್ಥವಾಗಿದೆ. ಆಕೆ ನೀಚ
ಕುಲದಲ್ಲಿ ಹುಟ್ಟಿರಬಹುದು. ಆದರೆ ಆಕೆ ಉಚ್ಚಕುಲ ಸಂಜಾತನಾದ ಶ್ಜಾಮಾಶಾಸ್ತ್ರಿಗಿಂತಲೂ
ಬುದ್ಧಿವಂತೆ. ವಸ್ತುಸ್ಥಿತಿಯನ್ನು ಅರ್ಥಮಾಡಿಕೊಂಡು ಬದುಕನ್ನು ರೂಪಿಸಿಕೊಳ್ಳಬಲ್ಲ ಮನೋದಾರ್ಡ್ಯ
ಆಕೆಗುಂಟು."
"ಮುಂದೇನಾಗಬಹುದು?"
"ಮಾತೆಂಬ ಚಿಮಣಿಯನ್ನು ಅಡ್ಡಗೋಡೆ ಮೇಲಿರಿಸುವುದಷ್ಟೆ ಶಾಮಾಶಾಸ್ತ್ರಿಗೆ ಗೊತ್ತು. ಮುಟ್ಟು
ನಿಲ್ಲುವವರೆಗೆ ಕಾಯಬೇಕೆಂದು ಅವನು ಹೇಳಬಹುದು, ಅಥವಾ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಸೇರಿ
ಆಧ್ಯಾತ್ಮ ಕಲಿತು ಕಾಮವೇ ಮೊದಲಾದ ಮನೋವಾಂಛೆಗಳನ್ನು ನಿಗ್ರಹಿಸಿಕೊಂಡು ಮೋಕ್ಷ ಪಡೆ ಎಂದು ಸಲಹೆ
ಮಾಡಬಹುದು."
"ಅಲ್ಲಾ ಎಷ್ಟೊಂದು ಸ್ವಾರ್ಥಿಗಳೇ ಗಂಡಸರು. ನನಗ್ಯಾಕೋ ನಿನ್ ಬಗ್ಗೆ ಅನುಮಾನ ಡಾರ್ಲಿಂಗ್ಽಽ
ಅವರಿಬ್ಬರ ಬಗ್ಗೆ ನೀನಿಷ್ಟೊಂದು ಆಸಕ್ತಿ ವಹಿಸಿರುವೆ ಅಂತ" ಹೆಣ್ಣಿಲಿ ಕುಡಿಗಣ್ಣಿಂದ ನೋಡಿತು.
ಪ್ರಿಯ ಸಖಿ ಮಾತು ಕೇಳಿ ಗಂಡಿಲಿ ತಿಕ ಬಡಕೊಂದು ನಗಾಡಿತು.
"ಈಸ್ತ್ರೀ ಜಾತಿಯೇ ಇಷ್ಟು ನೋಡು. ಆದ್ರೆ ಅನಸೂಯ ಮಾತ್ರ ಅಪವಾದ!"
"ಆಕೆ ಪರ ವಕಾಲತ್ತು ವಹಿಸ್ತಿರೋದು ಯಾಕೇಂತ!?"
"ಆಕೆ ಸ್ತ್ರೀ ಜಾತಿಗೇ ಒಂದು ಮುಕುಟಪ್ರಾಯವೆಂದು ಹೇಳಬಹುದು. ರೂಪದಲ್ಲೂ ಅಷ್ಟೇ ಗುಣದಲ್ಲೂ ಅಷ್ಟೇ.
ಆಕೆ ಶಾಮಾಶಾಸ್ತ್ರಿಗೆ ಬೆಂಬಲವಾಗಿ ನಿಲ್ಲದಿದ್ದಲ್ಲಿ ಬಾಡಿ ಬಿಲ್ಡರ್ ಜಲಜಾಕ್ಷಿ ಕೈಯಲ್ಲಿ ಆ
ಶಾಸ್ತ್ರಿ ಏನಾಗ್ತಿದ್ದನೋ ಏನೋ! ಜಲಜಾಕ್ಷಿ ರೇಪ್ ಮಾಡಲು ಪ್ರಯತ್ನಿಸಿದ್ದು; ಮೊಲೆ ಮುಟ್ಟು ಎಂದು
ಶತ್ತಾಯಿಸಿದ್ದು; ಹುಸಿ ಬೆದರಿಕೆ ಹಾಕಿ ಪ್ರೇಮದ ಬಗ್ಗೆ ವಿಲಕ್ಷಣವಾದ ಒತ್ತಡ ತಂದದ್ದು ಎಲ್ಲ
ಅನಸೂಯಳಿಗೆ ಗೊತ್ತಿಲ್ಲದಿಲ್ಲ. ಆಕೆ ಎಂದಾದ್ರೂ ಈ ಬಗ್ಗೆ ಮುಖ ಸಿಡರಿಸಿಕೊಂಡದ್ದುಂಟಾ?!" ಸಹಜವಾಗಿ
ಗಂಡಿಲಿ ಹೇಳಿತು.
ಆದರೆ ಹೆಣ್ಣಿಲಿ ಒಂದೊಂದು ಮಾತಿಗೆ ಸಾವಿರ ಸಾವಿರ ಅರ್ಥ ಕಲ್ಪಿಸಿಕೊಂಡು ತನ್ನ ಪ್ರಿಯಕರನೂ
ಆಕೆಯನ್ನು ಒಳಗೊಳಗೇ ಲವ್ ಮಾಡುತ್ತಿರಬಹುದೇ ಎಂಬ ಸಂದೇಹ ಕಾಡಿತು. ಮೂಷಕ ಸಹಜ ವಿಧ್ವಂಸಕ
ಸ್ವಭಾವದಿಂದ ತಿಂಡಿ ತಿನಿಸುಗಳಿರೋ ಕಡೆ; ಉಗ್ರಾಣದ ಕಡೆ ಸುಳಿಯಬೇಕಾದ ತನ್ನ ಕಾಂತ ಹಗಲಿರುಳು
ಅನಸೂಯಾಳ ಡ್ರಾಯಿಂಗ್ ರೂಂ; ಬೆಡ್ ರೂಂಗಳಲ್ಲಿ ಬಿಡಾರ ಹೂಡುತ್ತಿದ್ದುದು ನೆನಪಿಗೆ ತಂದುಕೊಂಡಿತು.
ಆ ಕ್ಷಣ ಕಣ್ಣುಗಳು ಹನಿಗೂಡಿದವು. ಬಿಕ್ಕಿ ಬಿಕ್ಕಿ ಅಳತೊಡಗಿತು.
ಅಯ್ಯೋ ತನ್ನ ಕಾಂತೆಯ ಕಣ್ಣಲ್ಲಿ ನೀರೆ! ಗಂಡಿಲಿ ಗಾಬರಿಗೊಂಡಿತು. ಮೂಷಕ ಭಾಷೆಯಲ್ಲಿ ಪರಿಪರಿಯಾಗಿ
ರಮಿಸಲು ಪ್ರಯತ್ನಿಸಿತು. ತಾನು ಗುಟ್ಟಾಗಿ ಅನಸೂಯಳನ್ನು ಪ್ರೀತಿಸುತ್ತಿರುವುದು; ಕದ್ದು ಮುಚ್ಚಿ
ಆಕೆಯ ಕುಪ್ಪಸದ ಕಂಕುಳ ಭಾಗವನ್ನು; ಬ್ರಾದ ತುದಿಯನ್ನು; ಲಂಗದ ಆಯಕಟಿನ ಭಾಗವನ್ನು ಕಚ್ಚಿ ಕಚ್ಚಿ
ಕಿಂಡಿ ಮಾಡಿರುವುದಾಗಲೀ; ಎಷ್ಟೋ ರಾತ್ರಿ ಆಕೆಯ ಹಾಸಿಗೆ ಏರಿ ಆಕೆ ಹೊದ್ದಿರುವ ಹೂವಿನ ಹಚ್ಚಡದೊಳಗೆ
ಸುಳಿದಾಡಿ ಕಚಗುಳಿ ಇಡುತ್ತಿದ್ದುದಾಗಲೀ; ಶಾಸ್ತ್ರಿಮೇಲಿನ ಹೊಟ್ಟೆಕಿಚ್ಚಿನಿಂದ ಅವನು
ಬರೆಯುತ್ತಿದ್ದ ಪ್ರೇಮ ಪತ್ರಗಳನ್ನು ಅಪಹರಿಸಿ ವಿರೂಪಗೊಳಿಸುತ್ತಿರುವುದಾಗಲೀ; ಇದಕ್ಕಿಂದ್ದಂತೆ
ಆಕೆ ಎದುರಿಗೆ ದುತ್ತನೆ ಪ್ರತ್ಯಕ್ಷವಾಗಿ ಕಣ್ಣು ಮಿಟುಕಿಸಿ ರತಿಕ್ರೀಡೆಗೆ
ಆಮಂತಿಸುತ್ತಿದ್ದುದಾಗಲೀ; ಈ ಎಲ್ಲ ಹೃದಯ ವಿಹಂಗಮ ಚೇಷ್ಟೆಗಳನ್ನು
ತನ್ನ ಪ್ರಾಣವಲ್ಲಭೆ ಸೂಕ್ಷ್ಮವಾಗಿ ಗಮನಿಸಿರಬಹುದೆಂಬ ಅನುಮಾನ ಮೂಡಿತು.
ಈಗಿನಿಂದಲೇ ಈಕೆಯ ದುಃಖವನ್ನು ಶಮನಗೋಳಿಸದಿದ್ದಲ್ಲಿ ತಮ್ಮ ಮಾನಸ ಸರೋವರದಂಥಹ ಸುಖಸಂಸಾರ
ಉರಗಪತಾಕನು ಹೊಕ್ಕ ವೈಶಂಪಾಯನ ಸರೋವರವಾಗುವುದರಲ್ಲಿ ಸಂದೇಹವಿಲ್ಲವೆಂದೂಹಿಸಿತು.
"ಇಲ್ಲ ಕಣೇ ನೀನು ಹುಲು ಮಾನವರಂತೆ ಅಪಾರ್ಥ ಕಲ್ಪಿಸಿಕೊಂಡಿದ್ದೀಯಾ; ನಿನ್ನಾಣೆಯಾಗೂ, ನಮ್ಮ
ಕುಲದೇವತೆಯಾದ ವಿನಾಯಕನ ಆಣೆಯಾಗೂ ನಾನು ನಿನ್ನ ಹೊರತು ಇನ್ನೊಂದು ಹೆಣ್ಣನ್ನು ಪ್ರೀತಿಸಿಲ್ಲ!
ಕನಸು ಮನಸಲೂ ನಿನೆ ನಿನ್ನಾಣೆ ಶಾಮಾ ಶಾಸ್ತ್ರಿ ಮನೆಯಾಗಲಿ; ಅನಸೂಯಳ ಮನೆಯಾಗಲೀ ನನಗೆ ಬೇರೆ
ಅಲ್ಲವೇ ಅಲ್ಲ. ನಗರದ ಪ್ರಸಿದ್ಧ ವಣಿಕರಾಗಿದ್ದ ಕುಪ್ಪಂ ವೆಂಕಟರಮಣ ಶ್ರೇಷ್ಟಿಗಳ ಬಗ್ಗೆ ನಿನಗೆ
ಹಿಂದೊಮ್ಮೆ ವಿವರವಾಗಿ ಹೇಳಿದ್ದೆ. ಹೊಟ್ಟೆ ಹುಣ್ಣಾಗುವಂತೆ ನಗಾಡಿದ್ದಿ. ಘಂಟಾ ಶಾಮಾಶಾಸ್ತ್ರಿಗಳು
ನಿಧನರಾದಾಗ ಕಾಶಿಗೆ ಹೋಗಿಬರುವ ವೆಚ್ಚ ಧರಿಸುವುದಾಗಿ ಹೇಳಿ ಹಣ ತರಲೆಂದು ಮನೆ ತಲುಪಿದ ಅವರನ್ನು
ಅವರ ಹೆಂಡತಿ ಮಕ್ಕಳು ಉಗ್ರಾಣದ ಕೋಣೆಯಲ್ಲಿ ಬಂಧಿಸಿಟ್ಟಿದ್ದು; ತಮ್ಮ ಪೂರ್ವಿಕನಂತಿದ್ದ
ಶ್ರೇಷ್ಠಿಯನ್ನು; ನಮ್ಮ ಪೂರ್ವಿಕರೆಲ್ಲ ಸೇರಿಕೊಂಡು ಬಗೆ ಬಗೆ ಹಿಂಸಿಸಿದ ಬಗ್ಗೆ ಹೇಳಿದ್ದೆ. ಹಾಗೆ
ಅವತ್ತು ಆಕ್ರಮಣ ನಡೆಸಿದ ಗುಂಪಿನಲ್ಲಿ ನನ್ನ ಗಿರಿಗಿರಿ ಮುತ್ತಾತನಿದ್ದ, ಶವ ಸಂಸ್ಕಾರಕ್ಕೆ
ಸಹಾಯಹಸ್ತ ಚಾಚಿದವನ ಮರ್ಮಾಂಗದ ತುದಿ ಕಚ್ಚಿದ್ದರ ಬಗ್ಗೆ ಪಶ್ಚಾತ್ತಾಪಪಟ್ಟಿದ್ದ. ವೇದಾಂತಿ
ಪರಮೇಶ್ವರ ಶಾಸ್ತ್ರಿಗಳ ಸೇವೆ ಮಾಡಿ ಪಾಪದಿಂದ ಮುಕ್ತಿ ಪಡೆಯಬೇಕೆಂದು ನಿರ್ಧರಿಸಿ ನಮ್ಮ ಗಿರಿಗಿರಿ
ಮುತ್ತಾತ ತನ್ನ ಯಾವತ್ತೂ ಬಂಧು ಬಳಗದೊಂದಿಗೆ ಅಗ್ರಹಾರದ ಶಾಸ್ತ್ರಿಗಳ ಮನೆಗೆ ರಾತ್ರೋರಾತ್ರಿ
ಸೇರಿಕೊಂಡುಬಿಟ್ಟ. ಬಾತ್ರೂಮಿನಲ್ಲಿ; ಅಡುಗೆಮನೆಯಲ್ಲಿ; ಉಗ್ರಾಣದ ಮನೆಯಲ್ಲಿ; ಶಯನ ಗೃಹದಲ್ಲಿ
ಹೀಗೆ ಎಲ್ಲಿ ನೋಡಿದರೂ ನಮ್ಮ ಪೂರ್ವಿಕರೇ ಪೂರ್ವಿಕರು. ಚಿಂವ್ ಚಿಂವ್ ಗುಟ್ಟುತ್ತ ಬಗೆಬಗೆಯಾದ
ಸೇವೆ ಮಾಡಿದ್ದೇ ಮಾಡಿದ್ದು. ಶಾಸ್ತ್ರಿಗಳು ಅರ್ಚನೆ ಮಾಡುವ ಕಡೆ; ವೈದಿಕ ಮಾಡುವ ಕಡೇಲೆಲ್ಲಾ ಹೋಗಿ
ಮಂತ್ರೋಚ್ಚಾರಣೆಗೆ ಸರಿಯಾದ ಹಿನ್ನೆಲೆ
ಸಂಗೀತ ಒದಗಿಸಿದ್ದೇ ಒದಗಿಸಿದ್ದು. ಆದರೆ ನಮ್ಮ ಸೇವಾಕೈಂಕರ್ಯ ಶಾಸ್ತ್ರಿಗಳಿಗೆ ಅರ್ಥವಾಗಬೇಕಲ್ಲ?
ಶಾಸ್ತ್ರಿಗಳು ತಮ್ಮ ಧರ್ಮಪತ್ನಿಯವರೊಡನೆ ಸಮಾಲೋಚಿಸಿ ನಮ್ಮ ಪರಮ ಶತ್ರುವಾದ ಮಾರ್ಜಾಲದ ಮರಿಯನ್ನು
ಸಾಕಿಬಿಟ್ಟರು. ಅದಕ್ಕೆ ಹಾಲು ಹೈನದ ವ್ಯವಸ್ಥೆಗೆಂದು ದಿವಾನ್ ಗೋಪಾಲಯ್ಯ ಶಾಸ್ತ್ರಿಗಳಿಗೆ ಗೋದಾನ
ಮಾಡಿ ಪುಣ್ಯ ಕಟ್ಟಿಕೊಂಡರು. ದಾನವಾಗಿ ಬಂದ ಹಸುವಾಗಿದ್ದರೂ ಹೇಗಿತ್ತು ಅಂತಿಯಾ? ಪ್ರಾಥಮಿಕ ಶಾಲಾ
ಬಾಲಕ ಅದರ ಮೈ ಎಲುಬುಗಳನ್ನು ಸುಲಭವಾಗಿ ಎಣಿಸಿಬಿಡುವಂತಿತ್ತು ಅದರ ಫಿಸಿಕ್ಕು. ಸರಕಾರಿ ಪಾಠಶಾಲೆಯ
ವಿಜ್ಞಾನ ಶಿಕ್ಷಕರು ಅನಾಟಮಿ ಪಾಠ ಮಾಡುವಾಗೆಲ್ಲ ತಮ್ಮ ತರಗತಿಯ ಮಕ್ಕಳನ್ನು ಶಾಸ್ತ್ರಿಗಳ ಮನೆಗೆ
ಕರೆದುಕೊಂಡು ಬಂದು: ಇದು ಇಂಥ ಎಲುಬು: ಅದು ಅಂಥ ಎಲುಬು ಎಂದು ಪರಿಚಯ ಮಾಡಿಸಿಕೊಂಡು
ಹೋಗುತ್ತಿದ್ದರು, ಪರಿಚಿಯಕೊಂಡ ಹಿಂಸೆಗೆ ಹಸು ನೆಲಕಚ್ಚಿಬಿಟ್ಟಿತೆಂದರೆ ಮುಗಿಯಿತು, ಅದನ್ನು
ಮೇಲೆಬ್ಬಿಸಲು ಶಾಸ್ತ್ರೀ ದಂಪತಿಗಳು ತಿಣುಕಿ ಟಿಣುಕಿ ಪ್ರಯತ್ನಿಸುತ್ತಿದ್ದರು. ಆ ಪ್ರಯತ್ನದ
ಫಲವಾಗಿ ಹಸು ಎದ್ದು ನಿಂತುಕೊಂಡು ಮರು ಗಳಿಗೆಯಲ್ಲಿಯೇ ಆ ಆದಿದಂಪತಿಗಳು ಉಸ್ಸಪ್ಪೋ ಅಂತ ನೆಲಕಚ್ಚಿ
ಬಿಡುತ್ತಿದ್ದರು. ಎಷ್ಟೋ ಮೇವು ಹಾಕಿ ಉಪಚಾರ
ಮಾಡಿದರೂ ಅಷ್ಟೆ.
ಮದ್ರಾಸ್ನ ರೋಗ ಪೀಡಿತ ಕಣ್ಣುಗಳಿಗೆ ಎರಡೆರಡು ಹಾಲುದುರಿಸುತ್ತಿದುದು ಬಿಟ್ಟರೆ ಮೂರನೆ ಹನಿ
ಉದುರಿಸುತ್ತಿರಲಿಲ್ಲ. ಆ ಕೃಪಣ ಬಡಕಲು ಹಸು ಕೇವಲ ಪೂಜೆಗೇಂತ ಹಸು ಯಾಕಾದರೂ ಇರಬೇಕು, ದಾನ ಕೊಟ್ಟ
ದಿವಾನರ ಮನೆಗೇ ಅದನ್ನು ಸಾಗಿಸಲು ಪ್ರಯತ್ನಿಸಿದ್ದುಂಟು. ಆದರೆ ಅದನ್ನು ಮರಳಿ ಪಡೆಯಲು ದಿವಾನರೇನು
ದಡ್ಡರೇ! "’ಬೇಡ ಸ್ವಾಮಿ ಗೋ ಸಾವಿನ ಸುತಕದಿಂದ ನಮ್ಮ ಆಳಿ ಬಾಳುವ ಮನೆ ಹಾಳಾದೀತು. ಅದರ ಮರಣ
ಅಗ್ರಹಾರದಲ್ಲೇ ಸಂಭವಿಸಲೆಂದೇ ತಮಗೆ ದಾನರೂಪದಲ್ಲಿ ಕೊಟ್ಟಿರುವುದು. ವೇದೋತ್ತಮ ಪಂಡಿತರಿರುವ
ಅಗ್ರಹಾರದಲ್ಲಿ ಯಾವ ಸಾವು ಸಂಭವಿಸಿದರೂ ಸೂತಕವಾಗಲಾರದು’ ಎಂದು ಬಿಲ್ಕುಲ್ ನಿರಾಕರಿಸಿ ದಾನದ
ಮರ್ಮ ತೋರಿಸಿಕೊಟ್ಟರು. ಅದರಿಂದ ಶಾಸ್ತ್ರಿದಂಪತಿಗಳು ನಿರಾಶರಾಗಲಿಲ್ಲ. ಗೋಮಾತೆಯನ್ನು ದೂರ
ದೂರದಲ್ಲಿ ಬಿಟ್ಟು ಬರಲು ಪ್ರಯತ್ನಿಸಿದರು. ಎಲ್ಲೇ ಬಿಡಲಿ ಗೋಮಾತೆ ಮಾತ್ರ ಹಾಜರಾಗಿ ಬಿಟ್ಟು
’ಅಂಬಾಽಽಽ’ ಎಂದು ಕರುಳು ಕತ್ತರಿಸುವಂತೆ ಕೂಗುತ್ತಿತ್ತು. ಮತ್ತೆ ಅದನ್ನು ಪ್ರೀತಿಯಿಂದ
ಬರಮಾಡಿಕೊಳ್ಳುತ್ತಿದ್ದರು. ಅದು ಪುನಃ ಗರ್ಭ ಧರಿಸಿದರೆ ಅದರ ಮೈಮಾಟ ಸುಧಾರಿಸಬಹುದೆಂದು ಸಮರ್ಥ
ಗೂಳಿಗಳ ಬಳಿಗೆ; ದಷ್ಟಪುಷ್ಟಹೋರಿಗಳ ಬಳಿಗೆ ಅದನ್ನು ಕರೆದೊಯ್ದು ರತಿಕ್ರೀಡೆಗೆ ಸಹಕರಿಸು ಎಂದು
ತಿಳಿಹೇಳಿ ದೂರ ನಿಲ್ಲುತ್ತಿದ್ದರು. ಅಲ್ಲದೆ ಹೋರಿ/ಗೂಳಿಗಳ ಬಳಿಗೆ ಹೋಗಿ ತಮ್ಮ ಹಸು ದೈಹಿಕವಾಗಿ
ದುರ್ಬಲಳು ಕಣಪ್ಪಾ, ನಿನ್ನ ಭಾರ ಹೊರುವಷ್ಟು ಸಾಮರ್ಥ್ಯ ಇವಳಿಗಿಲ್ಲ, ಪೂರ್ತಿ ಭಾರ ಬಿಡದಂತೆ
ರತಿಕಾರ್ಯ ಜರುಗಿಸಿ ಗರ್ಭದಾನ ಮಾಡಿ ಪುಣ್ಯ ಕಟ್ಟಿಕೋ’ ಂದು ಪರಿಪರಿಯಿಂದಲಿ
ಬೇಡಿಕೊಳ್ಳದಿರುತ್ತಿರಲಿಲ್ಲ.
ಅದಕ್ಕೆ ಅಂಗೀಕಾರ ಮುದ್ರೆ ಒತ್ತುವಂತೆ ಬ್ರುಸ್ ಬ್ರುಸ್ ಎಂದು ಮೂಗಿನಿಂದಲೂ ಬಾಯಿಂದಲೂ ಅವು ಸವಂಡು
ಹೊರಡಿಸುತ್ತಿದ್ದವು. ಆದರೆ ಶಾಸ್ತ್ರಿಗಳು ಗೋಮಾತೆಗೆ ಸಂತಾನಭಾಗ್ಯವಿಲ್ಲವೆಂದು
ನಿಟ್ಟುಸಿರಿಡುತ್ತಿದ್ದರೇ ಹೊರತು ಆ ಬಡಪಾಯಿ ಚತುಷ್ಪಾದಿ ಮೇಲೆ ಕೋಪಿಸಿಕೊಳ್ಳುತ್ತಿರಲಿಲ್ಲ.
ಆದರೆ, ಆ ಶಾಸ್ತ್ರಕೋವಿದರ ಕ್ಷಮಾದಾನದಿಂದ ಗೋಮಾತೆ ನಿಜಕ್ಕೂ ದುಃಖಕ್ಕೀಡಾಗುತ್ತಿದ್ದಳು.
ತನ್ನನ್ನು ಯಾರಾದರೂ ಅಪಹರಿಸಿಕೊಂಡೊಯ್ದು ಕಗ್ಗೊಲೆ ಮಾಡಬಾರದೆ ಎಂದು ಪ್ರತಿಕ್ಷಣ
ಚಿಂತಿಸುತ್ತಿದ್ದಳು. ಒಂದು ದಿನ ಆಕೆಯೇ ಸ್ವ ಇಚ್ಛೆಯಿಂದ ಕಟುಕರ ಮನೆ ಬಾಗಿಲು ತಟ್ಟಿದಳು. ಕಟುಕರ
ದಯಾನಂದನನ್ನು ತನ್ನನ್ನು ದಯವಿಟ್ಟು ಕಡಿದು ತುಂಡರಿಸಿ ಪುಣ್ಯ ಕಟ್ಟಿಕೊಳ್ಳುವಂತೆ
ಪ್ರಾರ್ಥಿಸಿದಳು. ಅವನು ಆಕೆಯ ಕೋರಿಕೆಯನ್ನು ಮನ್ನಿಸಿದ.
ಗೋಮಾತೆಯ ಅವಸಾನ ಈ ಬಗೆಯದಾದರೆ ಕಾಂಬೋಜಿರಾಗದ ಲಕ್ಷ್ಮಿಕಾಂತರಾಯ ದೇಣಿಗೆ ರೂಪದಲ್ಲಿ ನೀಡಿದ
ಮಾರ್ಜಾಲ ಕಥೆಯೇ ಇನ್ನೊಂದು ರೀತಿಯದಾಗಿತ್ತು. ಅದು ಜನ್ಮ ತಳೆದಿದ್ದು ಪುಳಿಯೋಗರೆಯವರ ಮನೆಯಲ್ಲಿ;
ಸೇರಿಕೊಂಡಿರುವುದು ತಿಳಿಸಾರಿನವರ ಮನೆಯಲ್ಲಿ. ಹುಟ್ಟಿದ ಮತ್ತು ಸೇರಿಕೊಂಡ ಕೆಲ ದಿನಗಳಲ್ಲಿ ಆ
ಮಾರ್ಜಾಲ ತನ್ನ ಬೇಟೆಗುಣವನ್ನು ಸಂಪೂರ್ಣ ಬಿಟ್ಟುಬಿಟ್ಟಿತ್ತು. ಆ ಸನಾತನೀಯ ವಾತಾವರನವೂ ಅದಕ್ಕೆ
ಕಾರಣ. ನಮ್ಮ ಪೂರ್ವಿಕರಿಗಂತೂ ಉಲ್ಲಾಸವೇ ಉಲ್ಲಾಸ. ಒಂದು ದಿನ ಸೊಂಪಾಗಿ ನಿದ್ದೆ ಹೋಗಿದ್ದ ಆ
ಮಾರ್ಜಾಲದ ಕೊರಳಿಗೆ ನಮ್ಮ ಪೂರ್ವಿಕರು ಘಂಟೆ ಕಟ್ಟಿ ಲೋಕಾರೂಡಿ ಮಾತನ್ನು ಸುಳ್ಳುಮಾಡಿಬಿಟ್ಟರು.
ನಮ್ಮ ಪೂರ್ವಿಕರು
ನೀಡುತ್ತಿದ್ದ ಕಿರುಕುಳ ಉಪಟಳ ತಾಳಲಾರದೆ ಮಾರ್ಜಾಲ ತಿರುಪತಿಗೋ, ರಾಮೇಶ್ವರಕ್ಕೋ ಹೋಯಿತು.
ಹೀಗಾಗಿ ನಮ್ಮ ಪೂರ್ವಿಕರು ಎರಡು ಮೂರು ತಲೆಮಾರುಗಳವರೆಗೆ ಶಾಸ್ತ್ರಿಗಳ ಗೃಹಕೃತ್ಯದ ಸೇವೆಯನ್ನು
ನಿರ್ವಿರಾಮವಾಗಿ ಮಾಡಿ ಸಾಯುಜ್ಯ ಹೊಂದಿದರು. ಅವರ ಶ್ರೇಷ್ಟ ವಂಶದವನಾದ ನಾನು ಶಾಮಾ ಶಾಸ್ತ್ರಿಗಳ
ಯೋಗಕ್ಷೇಮ ವಿಚಾರಿಸಿಕೊಳ್ಳದಿದ್ದರಾದೀತೇನು? ವೇದಾಗಮ ಅಲಂಕಾರ ಗ್ರಂಥಗಳ ಮೇಲೆಲ್ಲ ಹಿಕ್ಕಿ
ಉದುರಿಸುವ ಸೇವೆ ಮಾಡುತ್ತ; ನಾನೂ ಪರಮೇಶ್ವರ ಶಾಸ್ತ್ರಿಗಳಂತೆ ಮಹಾಪಂಡಿತನಾಗಬೇಕೆಂಬ
ಸತ್ಸಂಕಲ್ಪದಿಂದ ತಾಳೆಗರಿ ಕಟ್ಟುಗಳನ್ನು; ವೇದಾಗಮ ಶಾಸ್ತ್ರ ಗ್ರಂಥಗಳ ಶ್ಲೋಕ ಭಾಗಗಳನ್ನು
ಸಾಧ್ಯವಾದಷ್ಟು ತಿಂದುಂಡು ಸುಖವಾಗಿದ್ದೆ. ಈ ಸಂದರ್ಭದಲ್ಲಿಯೇ ಶಾಮಾ ಶಾಸ್ತ್ರಿ ಮನಸ್ಸನ್ನು ಗೆದ್ದ
ಸುಂದರಿಯನ್ನು ನೋಡುವ ಆತಂಕದಿಂದ ಹ್ರಾಂ ಹ್ರೀಂ ಹ್ರೂಂ ರುದ್ರನಾಯಕನ ಮನೆಯನ್ನು ಪ್ರವೇಶಿಸಿದ್ದು.
ಅನಸೂಯಳಾನ್ನು ನೋಡಿದ್ದು, ಬೆಕ್ಕಸ ಬೆರಗಾಗಿದ್ದು. ಪರವಾ ಇಲ್ಲ, ಶ್ರೀಕೃಷ್ಣನ ಕೊಳಲನ್ನು ಹೋಲುವ
ಜುಟ್ಟಿನ; ಆ ಜುಟ್ಟಿನ ಮೂಲಕ ಅನೇಕ ರಾಗಗಳನ್ನು ಹೊರಡಿಸಿ ಶಾಮಾ ಶಾಸ್ತ್ರಿ ತನಗೆ ಅನುರೂಪಳಾದ
ಕನ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದಾನೆಂದು ಹೆಮ್ಮೆ ಪಟ್ಟಿದ್ದು. ಆ ಸಂದರ್ಭದಲ್ಲಿಯೇ ಶಾಮಲ
ಸುಂದರಿಯಾದ ನೀನು ಕಿಲಕಿಲಗುಟ್ಟುತ್ತ ಎದುರಾಗಿದ್ದು. ಬಿನ್ನಾಣ, ವೈಯಾರದಿಂದ ನನ್ನ ಮನ
ಸೂರೆಗೊಂಡಿದ್ದು, ನಾನು ಆ ಕ್ಷಣದಿಂದ ನಿನ್ನನ್ನು ತ್ರಿಕರಣಪೂರ್ವಕವಾಗಿ ಪ್ರೀತಿಸತೊಡಗಿದ್ದು.
ನಿನ್ನ ಇಚ್ಛೆಯಂತೆಯೇ ನಾನು ನಿನ್ನ ಮನೆಯೊಳಗೆ ಠಿಕಾಣಿ ಹೂಡಿದ್ದು... ಇಂಥ ಅದ್ಭುತ ಪ್ರೇಮಿಯಾದ
ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತ ದುಃಖಿಸುತ್ತಿರುವೆಯಲ್ಲ!... ಇದು ನ್ಯಾಯವೇನೆ ಬಂಗಾರ’
ಎಂದು ನಿರರ್ಗಳವಾಗಿ ಮಾತಾಡಿ ಉದ್ವಿಗ್ನಗೊಂಡಿತು ಗಂಡಿಲಿ.
ತನ್ನ ಪ್ರಿಯತಮನ ವಾಗ್ ವೈಖರಿಗೆ ಹೆಣ್ಣಿಲಿಯ ಮನದೊಳಗಿನ ಸಮಸ್ತ ಅನುಮಾನವು ವೈಶಾಖದ ಸೂರ್ಯನಿಗೆ
ಹಿಡಿದ ಮಂಜುಗಡ್ಡೆಯಂತೆ ಕರಗಿಹೋಯಿತು.
’ಅನುಮಾನವೂ ಪ್ರೀತಿಯ ಒಂದು ಭಾಗವೆಂದು ತಿಳಿಯಲೈ ಕಾಂತಾ ಅತಿಗುಣವಂತ." ಎಂದು ಹೆಣ್ಣಿಲಿ ತನ್ನ
ಪ್ರಿಯಕರನನ್ನು ಉತ್ಕಟವಾಗಿ ಚುಂಬಿಸಿತು.
ಆ ಅಪರೂಪದ ಚುಂಬನದಿಂದ ಗಂಡಿಲಿಗೆ ಆನೆ ಬಲ ಸಂದಿತು.
"ನಮ್ಮೆಲ್ಲರ ಪ್ರೀತಿಯ ಕನ್ಯಾಮಣಿಯನ್ನು ಶಾಮಾಶಾಸ್ತ್ರಿ ವರಿಸುವಂತಾಗಲು ನಾವು ನಮ್ಮ ಕುಲದೇವತೆಯಾದ
ಗಣನಾಯಕನನ್ನು ಸ್ತುತಿಸೋಣ" ಎಂದು ಚರ್ಚೆಗೆ ಶ್ರೀಕಾರ ಹಾಕಿತು ಗಂಡಿಲಿ.
ಪಾರ್ವತಿ ಪುತ್ರನೇ ಸಿದ್ಧಿ ವಿನಾಯಕ
ಕೊಡು ಸುದ್ಭುದ್ಧಿಯನು ಶಾಮಾಶಾಸ್ತ್ರಿಗೆ ಕೊನೆಯ ತನಕ
ಅವರಿಬ್ಬರನು ದೂರ ಮಾಡದಿರು ಆನೆ ಮುಖದವನೆ
ಅಲುಮೇಲಮ್ಮ ಬರದಿರಲಿ ಇವರ ಪ್ರೀತಿಗೆ ಅಡ್ಡ
ಹಾಕಲಿ ಅವರವರ ಮನೆ ಮುಂದೆ ಹಂದರ ಬಹು ದೊಡ್ಡ
ಹಾಕಲಿ ಅಕ್ಷತೆ ಹಿರಿಕಿರಿಯರೆಲ್ಲರು
ಉಂಡುಂಡು ಡೇಗಲು ಹಾಲು ಕೀರು
ಮೂಶಕ ದಂಪತಿಗಳು ತಮ್ಮ ಬಾಲಗಣೇಶನನ್ನು ಸ್ತುತಿಸಿ ಹಾಡುತ್ತಿರಲು ಶಾಸ್ತ್ರಿಗಳ ಮನೆ ಹಿತ್ತಲ
ಕಡೆಯಿಂದ ಯಾವುದೋ ಒಂದು ಸಂದೇಶ ಹೊತ್ತು ತಂದಿದ್ದ ಬಣ್ಣಬಣ್ಣದ ರೆಕ್ಕೆಯ ಪತಂಗವೊಂದು ಆ ಡ್ರಾಯಿಂಗ್
ರೂಮನ್ನು ಒಂದು ಕಡೆಯಿಂದ ಸರ್ವೆ ಮಾಡಿ ಅನಸೂಯಳ ಮುಡಿಮೇಲೆ ರತ್ನಾಭರಣೋಪಾದಿಯಲ್ಲಿ ಅಲಂಕೃತವಾಗಿ
ಕೂತುಕೊಂಡಿತು.
ರೂಪು ತೇರಾ ಮಸ್ತಾನ ಪ್ಯಾರ್ ಮೇರಾ ದಿವಾನ ಎಂದು ರಿಕಾಟು ಸೊಸೂಟಿ ಬಯಲಿಂದ ಕೇಳಿ ಬರುತ್ತಿತ್ತು.
ನಡುನಡುವೆ ಹಲೋ ಹಲೋ ಮೈಕ್ ಟೆಸ್ಟಿಂಗ್ ಒನ್ಟೂತ್ರೀ ಎಂದು ಪೋಣಿಸುತ್ತಿದ್ದುದು ಸಿನಿಮಾ ಹಾಡಿಗಿಂತ
ಬೊಂಬಾಟಾಗಿತ್ತು.
ಮಾಳಿಗೆ ಮೇಲೆ ನಿಂತವರಿಗೆಲ್ಲ ಅದು ಸಲೀಸಾಗಿ ಕಾಣುತ್ತಿತ್ತು. ಆ ಧೂಳು, ಆ ಜನ, ಸದರಿ ಗ್ರಾಮಕ್ಕೆ
ಹೊಸದು. ಎಲ್ಲಿ ಭಾಷಣ ಮಾಡುವುದೋ? ಅಲ್ಲಿ ಇಂದಿರಾ ಗಾಂಧಿಯನ್ನು ಬಯ್ಯುವರೆಂದೇ ಜನ ಸ್ವಾಭಾವಿಕವಾಗಿ
ಅರ್ಥಮಾಡಿಕೊಂಡು ಬಿಡುತ್ತಿದ್ದರು.
ಆಕೆ ಅಂಥಾಕಿಯಲ್ಲ... ಆಕಿ ಹಡಕೊಂಡಿರೋದೈತಲ್ಲ... ಅದೇ ಹಂಗ ಮಾಡಿಸಾಕ್ಕತ್ತೈತಿ ಕೆಲವರು.
ಹುಟ್ಟಿರೋದು ಸೆಗಣಿ ತಿನ್ನಂತತಿ, ತಾಯಿಯಾದಾಕಿ ತಿಂದ ಬಿಡೋದೇನು! ಅಂತಕೆಲವರು. ತಾಯಿ ಮಗ ಇಬ್ರೂ
ಸೇಕೊಂಡು ಮಾಡಬಾರ್ದೆಲ್ಲ ಮಾಡ್ಯಾರಂತೆ... ಸಾವಿರಾರು ಮನೆ ಕೆಡವಿಸ್ಯಾರಂತೆ... ಲಕ್ಷಾಂತರ ಮಂದಿ
ಮುದಕ ನರ ಕುಯ್ದರಂತೆ... ಇಡೀ ದೇಸದ ಮೂಗಿಗೆ ಮೂಗುದಾರ ಪೋಣಿಸಿ ತಮಗಿಷ್ಟ ಬಂದಂಗ
ಕುಣಿಸಾಗಹತ್ಯಾರಂತೆ ಎಂದು ಕೆಲವರು ಮಾತಾಡಿಕೊಳ್ಳುತ್ತಿದ್ದರು. ಇದಕ್ಕಿಂತ ಮುಖ್ಯವಾಗಿ ತನ್ನ
ವಿರುದ್ಧವಾಗಲಿ ತನ್ ಮಗನ ವಿರುದ್ಧಾಗ್ಲಿ ಮಾತಾಡಿದ್ದವರನ್ನು ಪೋಲಿಸರು ಹಿಡಕೊಂಡುಹೋಗ್ತಾರಂತೆ...
ಕನಸಿನಾಗ ಮಾತಾಡಿದ್ರೂ ಬಿಡೋದಿಲ್ಲವಂತೆ... ಎಬ ಸುದ್ದಿಯನ್ನು ರುಕ್ಕಮ್ಮ ಲೆಟ್ರಿನ್ನಿಗೆ ಹೋದಾಗ
ಕೇಳಿಸಿಕೊಂಡದ್ದು ಆಕೆಯ ಗಾಬರಿಗೆ ಕಾರಣವಾಗಿತ್ತು. ಅದನ್ನೆಲ್ಲ ನೆನಪಿಸಿಕೊಂಡು ಮನಸ್ಸಿನಲ್ಲಿ
ಇಂದರಾ ಗಾಂಧಿಗೆ ಕೋರೆ ಹಲ್ಲು ಕೆದರು ಜಡೆ; ಗುಳಾಪು ಕಣ್ಣು; ಸೀಳು ನಾಲಿಗೆ ಇತ್ಯಾದಿ ಮೇಕಪ್ಪು
ಮಾಡುತ್ತ ರುಕ್ಕಮ್ಮ ಪಡಸಾಲೆಯ ಕಂಭಕ್ಕಾತು ಕೂತು ನಿಟ್ಟುಸಿರುಬಿಟ್ಟಳು.
"ಮಗಳೇ ಅನಸೂಯ" ಎಂದು ಕೂಗಿದಳು.
"ಹ್ಹಾಂ!" ಅನಸೂಯಾ ಸೆರಗನ್ನು ಹಲ್ಲಲ್ಲಿ ಕಚ್ಚಿ ಹಿಡಿದು ಬ್ರಾಗಾಗಿ ಹುಡುಕಾಟ ನಡೆಸಿದ್ದಳು.
"ಅಂಥ ಕಡೆ ನೀ ಹೋಗ್ಲೇಬೇಕೇನವ್ವಾ?"
"ಹೂನವ್ವಾ! ಎರಡಲೊಂದು ಪೈಸಲ್ ಮಾಡ್ಕೊಂಡು ಬರೋಕೆ ಹೋಗ್ಲೇಬೇಕು" ಭಗೀರಥ ಪ್ರಯತ್ನದಿಂದ ನಗಂದಿ
ಗುಂಟ ನೇತಾಡುತ್ತಿದ್ದ ಬ್ರಾ ಪತ್ತೆ ಹಚ್ಚಿ ಬಿಟ್ಟಳು. ಅದರ ಆಯಕಟ್ಟಾದಭಾಗವನ್ನು ಕಡಿದು ತೂತು
ಮಾಡಿದ್ದ ಗಂಡಿಲಿಯನ್ನು ಶಪಿಸಿದಳು. ಅಯ್ಯೋ ನನ್ನ ಗಂಡನನ್ನು ಬೈತಿದಾಳಲ್ಲ... ನಮ್ಮನ್ನು ಉಂಡು
ನಮ್ಮ ಬಟ್ಟೆ ತೊಟ್ಟು ಅವಿವಾಹಿತೆ ಕೈಲಿ ನನ್ನ ಗಂಡ ಬಯ್ಯಿಸಿಕೊಳ್ಳುವಂತಾಯಿತಲ್ಲ... ಅಯ್ಯೋ ಸಿವನೇ
ನನ್ನ ಗಂಡನನ್ನು ಬಯ್ದು ಪಾಪ ಕಟ್ಟಿಕೊಳ್ತೀರೋ ನೀನು ಯಾರನ್ನು ಹುಡುಕಿಕೊಂಡು ಹೋಗುತ್ತಿರುವೆಯೋ
ಅವನು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿ ನಿರಾಸೆಗೊಳಿಸಲಿ’ ಎಂದು ಒಂದು ಹಿಡಿ ಶಾಪ
ಕೊಟ್ಟಿತು. ಶಾಪ ಕೊಡುವಾಗ ಅದು ಒದ್ದಾಡಿದ ಕಾರಣಕ್ಕೆ ಜಂತಿ ಸಂದಿಯಿಂದ ಗುಲಗಂಜಿ ಗಾತ್ರದಷ್ಟು
ಮಣ್ಣು ಆಕೆಯ ಮುಡಿ ಮೇಲುದುರಿ ಅಲ್ಲಿದ್ದ ಪತಂಗಕ್ಕೆ ತೊಂದರೆ ಕೊಟ್ಟಿತು. ಎಲಾ ಕ್ಷುದ್ರ ಮೂಷಕವೇ
ಅಂತ ಪತಂಗ ತೆರೆಯಲೆತ್ನಿಸಿದ ಮೂರನೆ ಕಣ್ಣಿಗೂ ಮಣ್ಣು ಬಿತ್ತು. ಅದು ಲಂಗದ ಮೇಲೆ ಕೂತು
ಕಣ್ಣುಜ್ಜಿಕೊಳ್ಳುತ್ತಿರುವಾಗ ಅನಸೂಯಾ ಬೇಕು ಬೇಕೋ; ಬೇಡಬೇಡವೋ ಎಂಬಂತೆ ಉಡುವುದನ್ನೆಲ್ಲ ಉಟ್ಟು,
ತೊಡುವುದನ್ನೆಲ್ಲ ತೊಟ್ಟು; ಬಡಿಯುವುದನ್ನೆಲ್ಲ ಬಡಿದುಕೊಂಡು ರೆಡಿಯಾಗಿ ಹುತ್ತದೊಳಗಿಂದ ವಾಲ್ಮೀಕಿ
ಮಹರ್ಷಿ ಹೊರಬರುವಂತೆ; ಮಜ್ಜಿಗೆ ಆಳದಿಂದ ಬೆಣ್ಣೆ ತೇಲಿದಂತೆ ಕೋಣೆಯಿಂದ ಹೊರಗಡೆ ಬಂದಳು
"ಏನವ್ವಾ ಹೀಗ್ಯಾಕ ಕೂತುಕೊಂಡಿದ್ದೀ?" ಮೇವಾಡದ ರಾಜನಂತೆ ಯುದ್ಧಕ್ಕೆ ಹೊರಟಿರುವ ತನ್ನನ್ನು
ನಗುಮುಖದಿಂದ ಬೀಳ್ಕೊಡುವುದು ಬಿಟ್ಟು ರುದ್ರನಾಯಕನ ವೀರವನಿತೆ ಮ್ಲಾನವದನಳಾಗಿ
ಕುಳಿತಿರುವುದರೆಂದರೇನು? ಅನಸೂಯ ತಾಯಿ ಕಡೆ ನೋಡಿದಳು.
"ನಿನ್ನ ಗಂಡು ಮಗನಂತೆ ಬೆಳೆಸಿದ್ದೀವಿ ಮಗಳೇ. ನೀನು ಓದಿಕೊಂಡಿರೋಕೆ, ನಿನ್ಗೆ ಬುದ್ಧಿಹೇಳೋ ಶಕ್ತಿ
ಆ ದೇವ್ರು ನನಗೆ ಕೊಟ್ಟಿಲ್ಲ... ಆ ಬ್ರಾಂಬ್ರು ಹುಡುಗನತ್ತ ನಿಷ್ಠುರವಾಗಿ ಕೇಳಿ ಬಂದುಬಿಡು...
ಆದ್ರೆ ಹತ್ತು ಆಗದಿದ್ರೆ ಇಪ್ಪತ್ತು" ಆಕೆ ಇಷ್ಟೊಂದು ವೀರಾವೇಶದಿಂದ ಮಾತಾಡಿದ್ದು ಅದೇ ಮೊದಲು.
"ಹೌದವ್ವಾ ಕಡ್ಡಿ ಮುರುದಾಂಗ ಮಾತಾಡಿ ಬತೀನಿ... ನನ್ ಹಣೇಲಿ ಯಾರು ಗಂಡ ಅಂತ ಐತೋ ಅವನಿಂದ ನನ್
ಕುತ್ತಿಗೀಗೆ ತಾಳೀ ಬೀಳೋದಂತೂ ಗ್ಯಾರಂಟಿ. ಅದನ್ಯಾರು ತಪ್ಪಿಸೋಕಾಗಲ್ಲ..."
"ನಮ್ಮಂಥ ಕಪ್ಪುಜನ ಎಷ್ಟು ಅಂಗಲಾಚಿದರೂ ಬ್ರಾಂಬ್ರು ಮನ್ಸು ಕರಗೋದಿಲ್ಲಾಂತ ನಿಮ್ಮಪ್ಪ ಹೇಳಿದ್ರು.
ಕಾಡೋದು ಬ್ಯಾಡ, ಬೇಡೋದು ಬ್ಯಾಡ... ಹ್ಹೂಂ ಅಂದ್ರೂ ಸರೆ; ಹೂಂ ಅನದಿದ್ರೂ ಸರೆ"
"ಹೌದವ್ವಾ... ನಾನೂ ಹಂಗೇ ಅಂದ್ಕೊಂಡಿರೋದು ನನ್ಗೂ ಅನುಮಾನ. ಆದ್ರೂ ಹೋಗ್ತಿದೀನಿ. ನೀನು
ಯಾವುದ್ಕೂ ಧೈರ್ಯವಾಗಿರು."
"ನಾನೂ ಅಷ್ಟು ದೂರ ಬರಲೇನವ್ವಾ... ಅಲ್ಲಿ ಪೋಲಿಸರು ಬಾಳ ಮಂದಿ ಇತಾರಂತೆ" ಎಷ್ಟದರೂ ತಾಯಿ ದುಗುಡ
ಪ್ರಕಟಿಸಿದಳು.
"ನಮ್ಮ ಶಾಮೂನೇ ಏನು ಮಾಡೋದಿಲ್ಲ. ಅಂದ ಮ್ಯಾಲ ಪೋಲಿಸರೇನು ಮಾಡ್ಯಾರು ಬಿಡೆವ್ವ... ಅವ್ರೂ
ನಮ್ಮಂಗೆ ಮನುಷ್ಯರು. ನೀನು ಚಿಂತೆ ಮಾಡದೆ ಮನೇಲಿರು. ನಾನು ಸರ್ರಂತ ಹೋಗಿ ಬರ್ರಂತ ಬತೀನಿ."
ಅನಸೂಯಾ ತಾಯಿಯ ತಲೆ ನೇವರಿಸಿ, ಪಾದಗಳಿಗೆ ಮಾಮೂಲು ಚಪ್ಪಲಿ ಧರಿಸಿಕೊಂಡು ಮಂತ್ರಿಸಿದ್ದ
ತೆಂಗಿನಕಾಯಿ ಕೆಳಗಿನಿಂದ ಹಾಯ್ದು ವಿಕ್ಟೋರಿಯಾ ಮುಖಗಳಿದ್ದ ನಾಣ್ಯಗಳನ್ನು
ಅಂಗುಲಂಗುಲಕ್ಕೊಂದೊಂದರಂತೆ ಜಡೆದಿದ್ದ ಹೊಸ್ತಿಲು ದಾಟಿದಳು.
ಇದನ್ನೆಲ್ಲ ನೋಡಿ ಒಣ ನಿಷ್ಟುರ ಕಟ್ಟಿಕೊಳ್ಳುವುದು ಯಾಕೇಂತ ಮುಳುಗುವ ಅವಸರದಲ್ಲಿದ್ದ ಸೂರ್ಯ ತನ್ನ
ಕಿರಣಗಳನ್ನು ಉಪಸಂಹರಿಸಿಕೊಳ್ಳತೊಡಗಿದ್ದ. ಜನರ ಪದಾಘಾತದಿಂದಾಗಿ ಎದ್ದಿದ್ದ ಧೂಳು ಬಹುಪಾಲು
ಕಿರಣಗಳನ್ನು ಮಂಕುಗೊಳಿಸಿತ್ತು. ಹೀಗಾಗಿ ಸಂಜೆ ಸಮಯ ಹೋಗಲು, ಬರಲು ಒಂಥರಾ ಮಜವಾಗಿತ್ತು. ಮನುಷ್ಯ
ಮನುಷ್ಯನ ನಡುವೆ ಒಂದು ರೀತಿ ತೆರೆ ಎಳೆದಂತಿತ್ತು. ಆದ್ದರಿಂದ ಇವರು ಇಂಥವರೇ ಎಂದು ಎಂಟು ಫೂಟು
ದೂರದಿಂದಲೂ ಗುರುತಿಸುವುದು ಸಾಧ್ಯವಿರಲಿಲ್ಲ.
ಕಾದಂಬರಿಯೊಳಗೆ ಕಥೆಯೇ ನಡೆಯುತ್ತಿರುವಂತೆ; ವಾಕ್ಯದೊಳಗಿನ
ವ್ಯಾಕರಣವೇ ನಡೆಯುತ್ತಿರುವಂತೆ ಅನಸೂಯಾ ಹೆಜ್ಜೆಗೊಮ್ಮೊಮ್ಮೆ ಚೀಟಿಯ ಸಾರಾಂಶ ನೆನಪು
ಮಾಡಿಕೊಳ್ಳುತ್ತ ನಡೆಯತೊಡಗಿದ್ದಳು. ಅವನು ತನ್ನ ತಲೆಯೊಳಗಿನ ಕವಿತೆಗಳನ್ನು ಒಂದೊಂದಾಗಿ ತೆಗೆದು
ಖಾಲಿಮಾಡಿರುವನೆನೆಸಿತು. ಅವನು ತನ್ನ ತಲೆಯೊಳಗಿನ ಛಂದಸ್ಸು, ಅಲಂಕಾರ ಬೆಟ್ಟಿಯಾದಾಗರೊಂದೊಂದರಂತೆ
ಲಪಟಾಯಿಸಿ ಬಿಟ್ಟಿರುವನೆನ್ನಿಸಿತು. ಈಗ ತನ್ನಲ್ಲಿ ಉಳಿದಿರುವುದು ಅರ್ಥವಿಲ್ಲದ ಅಕ್ಷರಗಳು ಮಾತ್ರ.
ವಾಕ್ಯದ ಸುತ್ರ ಕಳೆದುಕೊಂಡ ಶಬ್ದಗಳು ಮಾತ್ರ, ಪ್ರತಿಯೊಂದು ಶಬ್ದಗಳು ಖಚಿತ ಆಕಾರ ಪಡೆಯದೆ
ಗುರುತ್ವಾಕರ್ಷಣೆ ಯಿಲ್ಲದ ಉಪಗ್ರಹದ ಮೇಲೆ ತೇಲಾಡುತ್ತಿರುವ ಘನವಸ್ತುಗಳು ಮಾತ್ರ.
ನೆನಪುಗಳನ್ನು ಒಂದರ ಹಿಂದೆ ಒಂದರಂತೆ ನೆನಪು ಮಾಡಿಕೊಳ್ಳುತ್ತ ಸೊಸೂಟಿಯ ಬಯಲು ಅಷ್ಟು ದೂರ ಇದೆ
ಅನ್ನುವಷ್ಟಲ್ಲಿ ನಿಂತುಕೊಂಡಳು. ಆಕೆಯ ಚಂಚಲ ನೇತ್ರಗಳು ಗಾಳಿಗಿಟ್ಟ ಸೊಡರ ಕುಡಿಯಂತೆ ಸುತ್ತ
ಹೊಯ್ದಾಡಿದವು. ಮೈತುಂಬ ಧೂಳು ಮೆತ್ತಿಕೊಂಡು ಕಾದಕಾವಲಿ ಮೇಲಿನ ಕೋಳಿಮರಿಗಳಂತೆ ಚಡಪಡಿಸುತ್ತಿರುವ
ಸಾವಿರಾರು ಜನ ನಿಂತಲ್ಲಿ ನಿಲ್ಲುತ್ತಿಲ್ಲ. ಕೂತಲ್ಲಿ ಕೂಡುತ್ತಿಲ್ಲ. ಸಾಧಾರಣ ವೇದಿಕೆ ಮೇಲೆ
ಬಲಿಪಶುವಿನಂತಿದ್ದ ಮೈಕು. ಪ್ರಧಾನ ಮಂತ್ರಿ ಕುರ್ಚಿಯೊಂದಿಗೇ ಅಲಹಾಬಾದಿನ ಆನಂದಭವನದಲ್ಲಿ
ಹುಟ್ಟಿರುವಂಥ ಇಂದಿರಾಗಾಂಧಿ ಬಗ್ಗೆ ಏನೇನೋ ಹೇಳಲಿರುವ ಜಾರ್ಜ್ ಫರ್ನಾಂಡಿಸ್, ಕಿಶನ್ ಪತ್ನಾಯಕ ಈಗ
ಬಂದಾರು? ಆಗ ಬಂದಾರು? ಎಂದು ಕಾಯುತ್ತಿರುವ ಮಂದಿ ನಡುವೆ ಗೊಬ್ಬರದಂಗಡಿಯ ಜಲಜಾಕ್ಷಿ ದುತ್ತನೆ
ಕಾಣಿಸಿಕೊಂಡಳು. ಬಿಳಿ ಸೀರೆ; ಹಸಿರು ಕುಪ್ಪಸ ತೊಟ್ಟು; ಎಡ ಸ್ತನದ ಮೇಲೆ ಪಾರಿಜಾತದ ಹೂವಿನಂತ
ಬ್ಯಾಡ್ಜು ಸಿಕ್ಕಿಸಿಕೊಂಡಿದ್ದ ಆಕೆಗೆ ಕಣ್ಣಿಗೆ ಬೀಳಬಾರದೆಂದು ಅನಸೂಯ ಪ್ರಯತ್ನಿಸಿದ್ದು
ವಿಫಲವಾಯಿತು. ಅಶ್ವತ್ಥಾಮ ಪ್ರಯೋಗಿಸಿದ ನಾರಾಯಣಾಸ್ತ್ರದಂತೆ ಆಕೆ ಒಮ್ಮೆ ಎಡಗೈಯನ್ನೂ, ಇನ್ನೊಮ್ಮೆ
ಬಲಗೈಯನ್ನೂ ಅಭಯ ನೀಡುತ್ತಿರುವ ರೀತಿಯಲ್ಲಿ ಮೇಲಕ್ಕೆತ್ತಿ ಅಲುಗಾಡಿಸುತ್ತ, ಪುರುಷ ಪ್ರೇಮಿಗಿಂತ
ತಾನೇನು ಕಡಿಮೆ ಇಲ್ಲವೆಂಬಂತೆ ಬಂದು ಎದುರಿಗೆ ನಿಂತುಕೊಂಡೇಬಿಟ್ಟಳು.
"ಅನಸೂಯಾ! ಬಾ ಬಂದು ಕೂತ್ಕೋ... ರಾಜಕೀಯ ಅರ್ಥ ಮಾಡ್ಕೊಂಡ್ರೆ ಎಲ್ಲಾ ಪುಳಿಚಾರು ಅರ್ಥವಾಗ್ತದೆ"
ಎಂದು ಕೂಡ್ರಲು ಸೋಡಾ ಸಿದ್ದಲಿಂಗಪ್ಪನ ಬಾಡಿಗೆಯ ಮೂರುಕಾಲಿನ ಕುರ್ಚಿ ತೋರಿಸಿದಳು.
"ಬೇಡ ಬಿಡೆ... ಅದಿಲಿ... ಏನಿದು ನಿನ್ನವತಾರ?" ಜಡ ಒನಕೆಯ ಗೊಂಬೆಯಂಥ ಮನಸ್ಸಿನ ಅನಸೂಯ ಕೇಳಿದಳು.
"ಒಲಂಪಿಕ್ಸ್ನಲ್ಲಿ ಹಂಡ್ರೆಡ್ ಮೀಟರ್ಸ್ ಹರ್ಡಲ್ಸ್ನಲ್ಲಿ ಭಾಗವಹಿಸಿ ಒಂದು ಚಿನ್ನದ ಪದಕ
ತೊಗುಳ್ಳಿಕ್ಕಾಗಿಲ್ಲ. ರಾಜಕೀಯ ರಂಗದಲ್ಲಾದ್ರು ಧುಮುಕಿ ಕನಿಷ್ಟ ಲೊಕಲ್ ಮಟ್ಟದಲ್ಲಾದ್ರು
ಮಿಂಚಬೇಕೆಂದು ನಿರ್ಧಾರ ಮಾಡ್ದೆ ಅನಸೂಯಾ; ಇಂದಿರಗಾಂಧಿ ವಿರುದ್ಧದ ನವನಿರ್ಮಾಣ ಚಳುವಳಿಗೆ ಒಳ್ಳೆ
ಫ್ಯೂಚರಿದೆ, ಏನಾದ್ರು ಮಾತಾಡಿ ಕೆಲ ದಿನದ ಮಟ್ಟಿಗಾದ್ರು ಜೈಲಿಗೆ ಹೋಗಿ ಬಂದುಬಿಟ್ರೆ ಪೊಲಿಟಿಕಲ್
ಐಡೆಂಡಿಟಿ ಸಿಗೋದಂತೂ ಗ್ಯಾರಂಟಿ... ಮುಂದೊಂದಿನ ನಾನು ಮಿನಿಷ್ರಾದ್ರೂ ಆಶ್ಚರ್ಯಪಡಬೇಕಿಲ್ಲ.
ಇವತ್ತಿನ ಪಾಲಿಟಿಕ್ಸಿಗೆ ನನ್ನಂಥ ಸದೃಡ ಮಹಿಳೆಯರ ಅಗತ್ಯ ತುಂಬಾ ಇದೆ. ಅದು ಅಲ್ಲದೆ ನನ್ನಂಥ ಬಾಡಿ
ಬಿಲ್ಡಸು ಭಾಗವಹಿಸಿದಾಗ ಮಾತ್ರ ಯಾವುದೇ ಚಳುವಳಿಗೆ ಅರ್ಥ ಬರೋದು... ಒಂದು ದುರ್ದೈವದ ಸಂಗತಿ
ಎಂದರೆ ಇಂದಿರಾಗಂಧಿಯಂಥ
ಉಕ್ಕಿನ ಮಹಿಳೆ ವಿರುದ್ಧ ನನ್ನಂಥ ಮಹಿಳೆಯರು ಹೋರಾಡಬೇಕಾಗಿ ಬಂದಿರೋದು... ಈಗ ನೀನೇನು
ಮಾಡ್ತಿದೀಯಾ? ಪ್ರೇಮ ಪ್ರೀತಿ ಅಂತ ತಲೆಕೆಡಿಸಿಕೊಂಡು ಆ ಅರೆಹುಚ್ಚ ಶಾಮಾ ಶಾಸ್ತ್ರಿಯ ಹಿಂದೆ
ಇನ್ನೂ ತಿರುಗಿತ್ತಿದೀಯಾ ಹೇಗೆ? ನಿನ್ನ ಮದುವೆ ಆಗೋ ಧೈರ್ಯ ಆ ಪುಳಿಯೋಗರೆಗಿಲ್ಲ. ಅಂಥೋರೆಲ್ಲ
ಮುಷ್ಠಿ ಮೈಥುನ ಮಾಡಿಕೊಳ್ಲಿಕ್ಕಷ್ಟೆ ಲಾಯಕ್. ಆ ಪ್ರಾಕ್ರುತ ಜಾನುವಾರು ಮತ್ತು ನೀನೂ ನನ್ನಂಗೆ
ಪಾಲಿಟಿಕ್ಸ್ಗೆ ಇಳ್ದುಬಿಡು. ಪಾಲಿಟಿಕ್ಸ್ಗೆ ನಿನ್ನಂಥ ಬ್ಯಾಕ್ವರ್ಡ್ ಕ್ಲಾಸ್ ಬ್ರಿಲಿಯಂಟ್
ಹುಡುಗೀರ ಅಗತ್ಯ ತುಂಬ ಇದೆ" ಭಾಷಣದ ತಾಲೀಮು ಮಾಡುತ್ತಿರುವಂತೆ ಜಲಜಾಕ್ಷಿ ಪಟಪಟಾಂತ ಮಾತಾಡಿದಳು.
ಅದನ್ನೆಲ್ಲಾ ಕೇಳಿ ಅನಸೂಯಾಗೆ ಆಶ್ಚರ್ಯವೋ ಅಶ್ಚರ್ಯ. ಎಷ್ಟೊಂದು ಚೆನ್ನಾಗಿ ಮಾತಾಡುವುದನ್ನು
ಕಲಿತಿರುವಳಲ್ಲ ನನ್ನ ಗೆಳತಿ! ಕೆಳಗೂ ಮೇಲೂ ನೋಡಿದಳು.
"ನಾನು ಪಾಲಿಟಿಕ್ಸಿಗಿಳಿದು ಸಮಾಜ ಉದ್ಧಾರ ಮಾಡೋದು ಒತ್ತಟ್ಟಿಗಿಲಿ... ಇದ್ನ್ನೆಲ್ಲ ನಿನ ತಲೆಗೆ
ತುಂಬ್ದೋರು ಯಾರೂಂತ?" ಎಂದು ಕೇಳಲು
ಬಾಡಿಬಿಲ್ಡರು ಕೆಮ್ಮಿ ಗಂಟಲು ಸರಿಪಡಿಸಿಕೊಂಡು, ಒಂದಿನ ತಮ್ಮ ಮನೆಗೆ ಕಾಫಿ ಪುಡಿ ಬಣ್ಣದ ಮಸಾಲೆ
ಮಾಯಣ್ಣ ತನ್ನ ಮೂರಡಿ ಕಾಯವನ್ನು ಆರಡಿ ಮಾಡಿಕೊಂಡು ಬಂದದ್ದು, ಉಪ್ಪಿಟ್ಟು ತಿಂದ ಕೈಯನ್ನು
ತೊಳೆದುಕೊಳ್ಳಲೆಂದು ಹಿತ್ತಲಿಗೆ ಹೋಗಿದ್ದಾಗ ಡಂಬಲ್ಸು; ಬುಲ್ವರ್ಕರ್ ಮುಂತಾದ ವ್ಯಾಯಾಮದ
ಪರಿಕರಗಳನ್ನು ನೋಡಿದ್ದೂ; ಈ ಹುಡುಗಿ ಇಷ್ಟೆಲ್ಲಾ ಮಾಡ್ತಾಳ ಎಂದು ಆಶ್ಚರ್ಯಪಟ್ಟಿದ್ದು; ಆ ನಂತರ
’ಅಲ್ಲೋ ಗುರುಬಸ್ವಾ... ನಿನ್ ಕೈಲಂತೂ ಪಾಲಿಟಿಕ್ಸಿಗೆ ಬರೋದಾಗ್ಲಿಲ್ಲ, ನಿನ್ ಮಗಳನ್ಯಾಕ
ಪಾಲಿಟಿಕ್ಸಿಗೆ ಇಳಿಸಬಾರ್ದು! ಇಂಥ ಪರ್ಸನಾಲಿಟಿ ಇರೋರಿದ್ರೇನೆ ಇಂದಿರಾ ವಿರೋದಿ ಚಳುವಳಿಗೆ ಶಕ್ತಿ
ಬರೋದು, ನಾನು ಕಾಂಗ್ರೆಸ್ನೋನು ಅಂತ ಅನುಮಾನ ಪಡಬೇಡ, ಲೈಸನ್ಸೂ ಹಾಳೂ ಮೂಳೂ ಬೇಳೆ ಬೆಂದ ಕೂಡ್ಲೆ
ಪ್ರಧಾನಿಯ ಸರ್ವಾಧಿಕಾರಿ ಮನೋಭಾವ ಪ್ರತಿಭಟಿಸಿ ನಾನೂ ಪಕ್ಷಾಂತರ ಮಾಡಿಬಿಡ್ತಿನಿ" ಎಂದು ಹೇಷಾರವ
ಮಾಡಿದ್ದು; ಎರಡು ಸಾರಿ ಎಮ್ಮೆಲ್ಲೆಯಾಗಿ ಸಾಕಷ್ಟು ಆಸ್ತಿ ಮಾಡ್ಕೊಂಡಿರೋ ಮಾಯಣ್ಣನಿಗೆ ಮಗಳನ್ನು
ಕಟ್ಟಿಬಿಡುವುದೆಂದು ಗುರುಬಸಪ್ಪಾ ದಂಪತಿಗಳು ಸಮಾಲೋಚಿಸಿ, ಒಪ್ಪಿಗೆ ಕೊಟ್ಟಿದ್ದೂ ಎಲ್ಲವನ್ನೂ
ಕೂಲಂಕುಷವಾಗಿ ವಿವರಿಸಿದಳು ಜಲಜಾಕ್ಷಿ.
ಅದನ್ನೆಲ್ಲ ಕೇಳಿ ಅನಸೂಯ ದಿಗ್ಭ್ರಮೆಗೊಂಡಳು.
ಬೆಸ್ಟ್ ಆಫ್ ಲಕ್ ಎಂದು ಹೇಳಬೇಕೆನ್ನುವಷ್ಟರಲ್ಲಿ ಬುರ್ರ್ ಅಂತ ಕಪ್ಪು ಕಾರೊಂದು ಬಂದು
ನಿಂತಿದ್ದು, ಅದರಿಂದ ಆವಿರ್ಭವಿಸುತ್ತಿರುವ ರೀತಿಯಲ್ಲಿ ನೆಸ್ ಕೆಫೆ ಬಣ್ಣದ ಕುಳ್ಳು ವ್ಯಕ್ತಿ ಭಲೆ
ಸ್ಟೈಲಿನಿಂದ ನಡೆದು ಬಂದದ್ದು... ಹಾಯ್ ಎಂದು ಕೂಗಿದ್ದು ಎಲ್ಲಾ ಸರಿಹೋಯ್ತು.
"ಹಲೋ ಮಯೂ ಡಾರ್ಲಿಂಗ್ ಇಷ್ಟೊತ್ತು ಎಲ್ಲಿ ಹೋಗಿದ್ದೆ? ಒನ್ಮಿನಿಟ್ ಬಾ ಇಲ್ಲಿ" ಎಂದಳು. ಆತ ತನ್ನ
ಕೈಯ ಸಮಸ್ತ ಬೆರಳುಗಳಿಗಿದ್ದ ಉಂಗುರಗಳನ್ನು ಝಳಪಿಸುತ್ತ ಹತ್ತಿರ ಬಂದ.
"ಅನಸೂಯಾ! ನಾನ್ ಹೇಳ್ತಿದ್ನಲ್ಲ! ಇವ್ರೆ ನನ್ನ ಉಡ್ಬೀ... ಸಿಂಗಟ್ಲೂರ್ ಕ್ಷೇತ್ರದಿಂದ ಎರಡು ಸಾರಿ
ಎಮ್ಮೆಲ್ಲೆಯಾಗಿ ಎಲೆಕ್ಟಾಗಿದಾರೆ" ಎಂದು ಜಲಜಾಕ್ಷಿ ಹತ್ತಿರ ನಿಂತು ಪರಿಚಯಿಸಿದಳು.
"ಹಲೋ! ತುಂಬ ಸಂತೋಷವಾಯ್ತು. ನಿಮ್ಮನ್ನು ನೋಡಿ" ಕೈಮುಗಿದಳು. ಅಕ್ಕಿರೊಟ್ಟಿ ಮೇಲೆ ಹುಚ್ಚೆಳ್ಳು
ಚಟ್ನಿ ನೆನಪಿಸಿಕೊಂಡಳು.
ಆ ಇಬ್ಬರು ಭವಿಷ್ಯತ್ ಕಾಲದ ದಂಪತಿಗಳು ಅಷ್ಟುದೂರ ಸರಿದು (ಅವರ ಉಸಿರು ಇವರಿಗೆ
ಬಡಿಸಿ ಇವರ ಉಸಿರು ಅವರಿಗೆ ಬಡಿಸಿ) ರಾಜಕೀಯ ಪರಿಭಾಷೆಯಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಟುಸ್ಸಾ
ಪುಸ್ಸಾ ಮಾತಾಡಿಕೊಂಡರು. ಮಸಾಲೆ ಮಾಯಣ್ಣನೆಂಬ ಆಗಸದಲ್ಲಿ ಫಳಫಳ ಹೊಳೆಯುವ ಬೆಳ್ಳಿಚುಕ್ಕಿಯಂಥ
ಜಲಜಾಕ್ಷಿ ತನ್ನ ಜೀವನದ ಗೆಳತಿಯ ಬಳಿಗೆ ಓಡಿಬಂದಳು.
"ಜಾರ್ಜ್ ಫರ್ನಾಂಡಿಸ್ಸಿಗೆ ಗಾರ್ಲೆಂಡಾಕೋದ್ಕೆ ನನ್ನೇ ಆಯ್ಕೆ ಮಾಡಿದ್ದಾರೆ ಕಣೆ. ಕಣ್ತುಂಬ
ನೋಡ್ವಂತಿ, ಆ ಶಾಮು ಇದ್ರೆ ಜೊತೆಗೆ ಕರೆದೊಯ್ಯಬೌದಿತ್ತು. ನೀನು ಬತೀ ಏನು? ಕಾನಲ್ಲಿ ಹೋಗೋಣ.’
ಚಟಪಟ ನುಡಿದಳು.
"ಇಲ್ಲ... ನನಗದೆಲ್ಲ ಆಗೋದಿಲ್ಲ... ನೀನು ಹೋಗಿ ಬಾ... ಬೆಸ್ಟ್ ಆಫ್ ಲಕ್"ಎಂದಳು ಅನಸೂಯ.
"ಆಗ್ಲಿ ನಿನ್ನಿಷ್ಟ. ಇಂದಿರಾಗಾಂಧಿ ವಿರೋಧಿ ಕವಿತೆ ಬರೆಯೋದ್ಕೆ ಆ ನಿನ್ನ ಶಾಮುಗೆಮ್ ಹೇಳು;
ಇದ್ಕೆಲ್ಲ ಸಾಹಿತ್ಯದ ಅಗತ್ಯ ತುಂಬ ಇದೆ... ಬತೀನಿ" ಜಲಜಾಕ್ಷಿ ಬುಡುಬುಡು ಓಡಿ ಕಾರೊಳಗೆ ಮುಖ
ಯಾರಿಗು ಕಾಣಬಾರದೂಂತ ಮರೆಮಾಚಿ ಸ್ಟೇರಿಂಗ್ ಮುಂದೆ ಕೂತಿದ್ದ ತನ್ನ ವುಡ್ಬೀ ಪಕ್ಕ ಕೂತುಕೊಂಡಳು.
ಕಾರು ಬುರ್ರಂತ ಓಡಿಹೋಯಿತು.
ಒಂದು ಕ್ಷಣ ಭಯಂಕರ ಸುಂಟರಗಾಳಿಯಲ್ಲಿ ಸಿಕ್ಕು ಬಿಡುಗಡೆಗೊಂಡ ಅನಿರ್ವಚನೀಯ ಅನುಭವವಾಯಿತು
ಅನಸೂಯಳಿಗೆ.
ಜನ ಎಷ್ಟು ವೇಗವಾಗಿ ಬದಲಾಗುತ್ತಿರುವರಲ್ಲ ಎಂದೆನಿಸಿತು. ರಾಜಕೀಯ ರಂಗವೆಂಬ ಅಖಾಡದೊಳಗೆ
ಧೈರ್ಯವಾಗಿ ನುಗ್ಗಿರುವ ತನ್ನ ಗೆಳತಿ ಬಗ್ಗೆ ಹೆಮ್ಮೆ ತಾಳಿದಳು.
ಎಲ್ಲಿ ಹೋದನೀ ಶಾಮ ಎಂದು ಸುತ್ತ ಕಣ್ಣಾಡಿಸಿದ ಆಕೆಗೇನು ಗೊತ್ತು - ಶಾಮಾಶಾಸ್ತ್ರಿ ರಸ್ತೆ ಪಕ್ಕ
ಅರಳಿ ಮರದ ದೊಡ್ಡೆ ಬಂಡೆಹಿಂದೆ ಜಲಜಾಕ್ಷಿಗೆ ಹೆದರಿ ಅವಿತುಕೊಂಡಿದ್ದುದು. ತಾನು ಕಣ್ಣಿಗೆ
ಬಿದ್ದರೆಲ್ಲಿ ಬಾಡಿಬಿಲ್ಡರ್ ಅಪ್ಪಚ್ಚಿ ಮಾಡಿಬಿಡುವಳೋ ಎಂದು ಅವನು ಪ್ರತಿವಿದ್ಯಮಾನದವನ್ನು
ಭಯದಿಮ್ದ ಇಣುಕಿ ನೋಡತೊಡಗಿದ್ದ. ಕಾರು ಅತ್ತ ಹೋದ ಕೂಡಲೆ ಇತ್ತ ಅವನು ಧೈರ್ಯವಾಗಿ ಅನಸೂಯಳಿಗೆ
ಕಾಣಿಸಿಕೊಳ್ಳಬೇಕೆಂದು ನೆಲಕ್ಕೆ ಬಲವಾಗಿ ಅಂಟಿಕೊಂಡಿದ್ದ ಕಾಲನ್ನು ಕಿತ್ತೀಚೆ ಇಡಬೇಕೆಂದು
ಪ್ರಯತ್ನಿಸಿದ. ಸರ್ಪಾಸ್ತ್ರ ಹೇಗೆ ಕರ್ಣನ ಬತ್ತಳಿಕೆ ಸೇರಿಕೊಂಡು ಬಿಟ್ಟಿತ್ತೋ ಹಾಗೆ ಕೆಂಪನೆಯ
ವೃಶ್ಚಿಕವೊಂದು ಕುಡುತಿನಿ ಮಗ್ಗಿಯಿಂದ ಒಂಟಿಕಣ್ಣು ರಾಮನ ಬಂಡಿ ಈರಿ ಬಂದು ಅಲ್ಲಿ ಕಾಂಡದ ಮೇಲೆ
ಕೂಂತುಬಿಟ್ಟಿತ್ತು. ಏನೋ ಆಪ್ಯಾಯಮಾನವಾದ ವಾಸನೆ ಶಾಮನ ಪುಷ್ಠಭಾಗದಿಂದ ಮೂಗಿಗೆ ಬಡಿದು ಅದು ಕೊಂಡು
ನಿಗರಿಸಿ ಅಲರ್ಟಾಗಿ ಬಿಟ್ಟಿತ್ತು. ಆ ವಾಸನೆ ಯಾವುದಪ್ಪಾ ಎಂದರೆ; ತನ್ನ ತಾಯಿಯ ಮೈಲಿಗೆಯಾಗಿದ್ದ
ಒಳ ಉಡುಪುಗಳೊಂದಿಗಿದ್ದ ಡ್ರಾಯರನ್ನು ಉಟ್ಟುಕೊಂಡಿಡು ಬಂದಿದ್ದುದು. ಅದರ ವಾಸನೆ ಹೆಂಗೆಂಗೆ
ಬರುವುದೋ ಆ ಕೆಂಜೇಳು ಹಂಗಂಗೆ ಆಡತೊಡಗಿತು. ಅಲ್ಲಿಂದ ಬಹಿರಂಗವಾಗಿ ಕಾಣಿಸಿಕೊಳ್ಳಲು ಭೂಗತ
ಹೋರಾಟಗಾರನಂತೆ ಅವನು ಕಾಂಡಕ್ಕೆ ಹೊಕ್ಕಳು ಭಾಗವನ್ನು ಅಂಟಿಸಿದ. ತಾನೆಲ್ಲಿ ಸತ್ತುಹೋಗಿಬಿಡುವೆನೋ
ಎಂಬ ಪ್ರಾಣ ಭಯದಿಂದ ಅದು ಅವನ ಶಿಶ್ನದ ತುದಿಯನ್ನು ಕುಟುಕ್ಕನೆ ಕುಟಿಕಿಬಿಟ್ಟಿತು. ಆ ಕೂಡಲೆ ತನ್ನ
ತೊಡೆ ಸಂದಿಯ ಆಯಕಟ್ಟಾದ ಭಾಗಕ್ಕೆ ಯಾರೋ ಸುಡುಸುಡುವ ಕೆಂಡದುಂಡೆಗಳನ್ನು ಎಸೆದು ಬಿಟ್ಟಂತೆ
ಅನುಭವವಾಯಿತು. ಭೀಮಸೇನಂ ಗದಾಘಾತದೋಳೂರು ಭಗಮಂ ಮಾಡಿದೊಡನೆ ಅಭಿಮಾನಧನಂ ಚೀರಿಕೊಂಡಂತೆ ಶಾಮ
’ಮಾತೋಶ್ರೀ ಪಾಹಿಮಾಂ’ ಎಂದು ಗಟ್ಟಿಯಾಗಿ ಚೀರಿಕೊಂಡುಬಿಟ್ಟನು. ಅದು ಅಲ್ಲೆಲ್ಲ ಪ್ರತಿಧ್ವನಿಸಿತು.
ಆ ರೌರವಕ್ಕೆ ಹೆದರಿ ಪಕ್ಷಿಗಳೆಲ್ಲ ಮರದಿಂದ ಪುರ್ರನೆ ಆಗಸಕ್ಕೆ ಹಾರಿದವು. ಯವುದೋ ಅಶರೀರವಾಣಿ
ಕೇಳಿಸಿಕೊಂಡಂತೆ ಜನ ಕಂಗಾಲಾಗಿ ಜನ ಸುತ್ತಮುತ್ತ ನೋಡಿದರು.
ಅರಳೀ ಮರವೇ ಮಾತಾಡಿತೆಂದು ಅಪಾರ್ಥ ಮಾಡಿಕೊಂಡು ಆ ರಾಜಕೀಯ ಕಾರ್ಯಕರ್ತರು ಅಪ್ಪಿಕೊಳ್ಳಲೆಂದು ಮರದ
ಕಡೆ ಉರವಣಿಸಿದರು. ಕೆಲವರು ಬೊಡ್ಡೆಗೆ ಕಿವಿಯಾನಿಸಿ ಸಂಸ್ಕೃತ ಭಾಷೆಯನ್ನು ಕೇಳುವ ಪ್ರಯತ್ನ
ನಡೆಸಿದರು. ಕೆಲವರು ಮರಕ್ಕೆ ದೆವ್ವ ಬಡಕೊಂದೈತಿ ಎಂದು ಕಾಲಿಗೆ ಬುದ್ಧಿ ಹೇಳಿದರು. "ಪಾಪ!
ದೇವ್ರಂಥಾಕಿ ನಮ್ ಇಂದ್ರಾ ಗಾಂಧೀನ ಬಯ್ದ್ರೆ, ಮರ ಮಾತಾಡದಂಗಿತದೇನು?" ಎಂದು ದೂರ ನಿಂತು ಚುಟ್ಟ
ಸೇದತೊಡಗಿದರು.
ಆದ್ರೆ ನಮ್ಮ ಕಥಾನಾಯಕ ಶಾಮಾಶಾಸ್ತ್ರಿ ಅವರೆಲ್ಲ ತನ್ನನ್ನು ಒದೆಯಲಿಕ್ಕೇ ಬಂದರೆಂದೇ ಭಾವಿಸಿ ತೊಡೆ
ಸಂದಿಯ ಅಗ್ಗಿಷ್ಟಿಕೆಯನ್ನು ಮೌನವಾಗಿ ಸಹಿಸಿಕೊಂಡನು. ಬಟ್ಟೆಯಿಂದ ದಾರ ಹೊರಬರುವಂತೆ ಹೊರಬಂದನು.
ಅದೇ ಹೊತ್ತಿಗೆ ಶಾಮೂ ಎಂಬ ಧ್ವನಿ ಕೇಳಿಸಿ ಆ ಕಡೆ ತಿರುಗಿದನು. ಅನಸೂಯ ಕಂಡಳು. ಅಗ್ನಿ ಪ್ರವೇಶ
ಮಾಡಿ ವೀರ ಸ್ವರ್ಗ ಸೇರಲುತ್ಸುಕದ ಸತಿಯಂತೆ ಗೋಚರಿಸಿದಳು. ಅನೂಽಽ ಎಂದು ಬಳಿಸಾರ್ದನು. ಆಕೆ
ಕಿಮಕ್ಕೆನ್ನದಿರುವುದು ಕಂಡ ಆತನಿಗೆ ಆಶ್ಚರ್ಯ ಮತ್ತು ದುಃಖವಾಯಿತು. ಅವನು ತೊಡೆ ನಡುವೆ ಯಾಕೆ
ತನ್ನೆರಡೂ ಕೈಗಳನ್ನಿರಿಸಿಕೊಂಡಿರುವನೆನ್ನುವುದೇ ಆಕೆ ಕಿಮಖ್ ಎನ್ನದಿರುವುದಕ್ಕೆ ಕಾರಣ.
ಆಕೆ ಶಾಮಾಽಽ ಎಂದಳು. ಅನೂ ಅಂದ. ಯಾಕೆ? ಏನಾಯ್ತು ಅಂದಳು ಚೇಳು ಕುಟುಕ್ತೂ ಅಂದ. ಎಲ್ಲಿ ಕುಟುಕ್ತೂ
ಅಂದಳು. ಏನೋ ಒಂದು ನೆವ ಹುಡುಕಿಕೊಂಡಿರುವನೆಂದೇ ಆಕೆಗೆ ಅನುಮಾನ. ಕುಟಿಕಿರುವ ಜಾಗದ ಬಗ್ಗೆ ಅವನು
ಏನು ಹೇಳಿಯಾನು! ಅವನ ಕಣ್ಣಲ್ಲಿದ್ದ ನೀರನ್ನು ಆಕೆ ಗಮನಿಸಲಿಲ್ಲ.
ಅವರಿಬ್ಬರು ಹಾಗೆ ನಡಕೋತ ಬಯಲ ಕೊನೆಗೆ ಹೋದರು. ಆ ಜಾಗ ಪ್ರಾಯಶಃ ನಿರ್ಮಾನುಷವಾಗಿತ್ತು. ಅಲ್ಲೊಂದು
ಹಾಳುಗುಡಿ ಇತ್ತು. ದುರ್ಗದ ಪಾಲೇಗಾರ ಮೂರನೆ ಮುದ್ದು ಮದಕರಿ ನಾಯಕ ಗುಡೇಕೋಟೆಯ ವಿಜಯಶಾಲಿಯಾದ
ನೆನಪಿಗೆ ಕಟ್ಟಿಸಿದ್ದಂತೆ. ಗುಡೆಕೋಟೆ ಮತ್ತು ದುರ್ಗದವರ ನಡುವೆ ಘೋರ ಯುದ್ಧ ನಡೆದು ಹತ್ತಾರು
ಮಂದಿ ಸತ್ತು; ನೂರಾರು ಮಂದಿ ಕೈಕಾಲು ಕಳೆದುಕೊಂಡಿದ್ದು ಅದೇ ಬಯಲಿನಲ್ಲಂತೆ. ನಾಯಕ ತಾನು
ಕಟ್ಟಿಸಿದ ಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಹೆಣ್ಣು ದೇವರಿಗೋ; ಗಂಡು ದೇವರಿಗೋ ಒಂದೂ
ತಿಳಿಯದು. ರಜಸ್ವಲೆಯಾದವರಿಂದ ಹಿಡಿದು ಮುಟ್ಟುನಿಲ್ಲುವವರೆಗೆ ಸ್ತ್ರೀಯರೂ; ಗಡ್ಡ ಮೂಡಿದಂದಿನಿಂದ
ಹಿಡಿದು ಗುದ್ದಿನ ಹಾದಿ ಹಿಡಿಯುವವರೆಗೆ ಗಂಡಸರೂ ಏಕಪ್ರಕಾರವಾಗಿ ನೂರಾರು ವರ್ಷಗಳಿಂದ ಖಾದ್ಯ ತೈಲ
ಎರೆದೂ ಎರೆದೂ ಆ ಶಿಲ್ಪ ಬೋಡಾಗಿ ಬಿಟ್ಟಿರುವುದು. ಅಲ್ಲಿ ದೀಪ ಮುಡಿಸಲು ಆಳುವ ಸರಕಾರದಿಂದ ಪ್ರತಿ
ತಿಂಗಳು ರುಷುವತ್ತು ಪಡೆಯುತ್ತಿರುವ ಅಧಿಕೃತ ಪೂಜಾರಿ ದಾಸರಿ ತಿಮ್ಮಪ್ಪ ಯುಕ್ತ ವಯಸ್ಸಿನಲ್ಲಿ
ಹೆಂಡತಿ ಕಳೆಕೊಂಡ ಲಾಗಾಯ್ತು ಸಮಾನ್ಯವಾಗಿ ಅಲ್ಲಿಯೇ ಮಲಗಿಕೊಂಡಿರುತ್ತಿದ್ದ. ವಾರಕ್ಕೊಮ್ಮೆ
ಹದಿನೈದು ದಿನಕ್ಕೊಮ್ಮೆ ಟೆಂಪ್ಟೇಷನ್ ಹೆಚ್ಚಾದಾಗ ಚಲವಾದಿ ರಂಗಮ್ಮ ಎಂಬ ಅರವತ್ತು ವರ್ಷದ ಅಪ್ಸರೆ
ಬಳಿಗೆ ಹೋಗಿ ಅವತ್ತಿನವರೆಗಿನ ದುಡಿಮೇನೆಲ್ಲ ಸುರಿದು ಏದುಸಿರು ಬಿಡುತ್ತ ಸಿನೆಮಾ ಟಾಕೀಸಿನ ಬಳಿಗೆ
ಬಂದು ಅರ್ಧ ಚಾ ಉದ್ರಿ ಕುಡಿದು, ಎರಡು ಬೀಡಿ ಬಿಟ್ಟಿ ಸೇದಿ ಗುಡಿ ಕಡೆ ಸಾಷ್ಟಾಂಗ ಹಾಕುತ್ತಾ
ಬರುತ್ತಿದ್ದ.
ಅವರ ಪುಣ್ಯಕ್ಕೆ ಅವನು ಅಂಥದೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದ.
"ಶಾಮೂ... ಅದೇನು ಮನಸ್ನಲೈತೋ ಹೇಳಿಬಿಡು" ಅನಸೂಯ ಮೊಟ್ಟಮೂದಲ ಬಾರಿಗೆ ಗದ್ಗದಿತಳಾಗಿದ್ದಳು.
ಎಷ್ಟು ತಡೆದರೂ ಕಣ್ಣುಗಳು ಒದ್ದೆಯಾದವು. "ಮೂಗಿಗೆ ತುಪ್ಪ ಹಚ್ಚೋ ಮಾತು ಮಾತ್ರ ಆಡಬೇಡ" ಎಂದು
ಕಡ್ಡಿ ಮುರಿದಂತೆ ನುಡಿದಳು.
ಈ ಭಾರತೀಯ ತರುಣಿ ಹೀಗೆ ನುಡಿಯುತ್ತಿರುವಳಲ್ಲ! ಗಂಟಲಲ್ಲಿರುವ ಬಿಸಿ ತುಪ್ಪವನ್ನು ನುಂಗುವುದು
ಹೇಗೆ! ಉಗುಳುವುದು ಹೇಗೆ! ಶಾಮುಗೆ ಪಜೀತಿಗಿಟ್ಟುಕೊಂಡಿತು. ತನ್ನ ಇಷ್ಟದೇವತೆಗಳಾದ ಪಿತಾಮಹಾಶ್ರೀ;
ಮಾತಾಶ್ರೀ ಒಟ್ಟಿಗೆ ಚಿಕ್ಕ ಮೆದುಳಿನಲ್ಲಿ ಪ್ರತ್ಯಕ್ಷರಾಗಿ "ಎಲೈ ವಂಶ ಜ್ಯೋತಿಯೆಽಽ ಯಾವುದೇ
ಕಾರಣಕ್ಕೂ ನನಗೆ ಆತ್ಮಹತ್ಯೆಗೆ ಕಾರನವಾಗುವಂಥ ಮಾತುಗಳನ್ನು ಆಡಬೇಡ. ಕೆಲವು ಕಠಿಣ ಸಂಸ್ಕೃತ
ಶಬ್ದಗಳಿಂದ ಕರ್ಣ ಕಠೋರವಾದ ವಾಕ್ಯ ಮಾಡಿ ನಾಲಿಗೆ ತುದಿಯಿಂದ ಚಿಮ್ಮಿ ಬಿಡು. ಇದರಿಂದ ಲೋಕ
ಕಲ್ಯಾಣವಾಗುತ್ತದೆ" ಎಂದು ಅಪ್ಪಣೆ ಕೊಡಿಸಿದರು.
ಹಾಗೆ ಮಾಡುವುದರಲ್ಲಿ ನಾನು ನಿಸ್ಸೀಮನೇ. ಆದರೆ ತೊಡೆ ಸಂದಿಯ ಉರಿ ಮಾತಾಡದಂತೆ ಮಾಡಿರುವುದಲ್ಲ!
"ಅನಸೂಯಾ... ಚೇಳಿನಿಂದ ಕಟಿಕಿಸ್ಕೊಂಡಿರೋದೆ ಸಾಕಾಗಿದೆ. ಸ್ವಲ್ಪ ಶಮನವಾದ ಮೇಲೆ ಯಾವುದಾದರೊಂದು
ಹೇಳುವುದೇನು! ಅಲ್ಲಿವರೆಗೆ ತಾಳ್ಮೆಯಿಂದಿರಲಾರೆಯಾ!" ನಾಟಕದ ಪಾತ್ರಧಾರಿಯಂತೆ ತಡೆದು ತಡೆದು
ನುಡಿದ.
"ನನಗಾಗಿರೋ ನೋವು ಕಡಿಮೆ ಆಗಬೇಕೂಂದ್ರೆ ನೀನು ಹೇಳ್ಲೇಬೇಕು... ಇನ್ನೊಂದು ಗಳಿಗೆ ಕಾಯ್ಲಿಕ್ಕೂ
ನಾನು ಸಿದ್ಧಳಿಲ್ಲ" ಅನಸೂಯಳಿಗೆ ಅನುವುಮಾಡಿಕೊಡಲೆಂದು ಗಾಳಿ ದೂರಹೋಗಿ ನಿಶ್ಶಬ್ದ ಆವರಿಸಿತು.
ಶಾಮುಗೆ ದಿಕ್ಕುಗಳು ಅದುಲುಬದಲುಗೊಂಡವೆಂದೆನಿಸಿತು. ತೊಡೆ ಸಂದಿಯಲ್ಲಿ ಮರಣಾಂತಿಕ
ವೇದನೆಯನ್ನುಂಟುಮಾಡುತ್ತಿರುವ ನೋವು; ಎದೆಯ ತ್ರಾಸಿನೆರಡೂ ಪಗಡಿಗಳಲ್ಲಿ ತಾಯಿ ಮತ್ತು ಅನಸೂಯಾ;
ತಾಯಿ ಇರುವ ಪಗಡೆ ನೆಲಕ್ಕೆ ತಾಕಿರುವುದೆಂದು ಹೇಗೆ ಹೇಳುವುದು? ಏನಾದರೂ ಹೆಚ್ಚುಕಡಿಮೆಯಾದರೆ ತಾಯಿ
ಶಾಪಕೊಡದಿರುತ್ತಾಳೆಯೆ? ತಾತ ಕೂಡಲೆ ಆತ್ಮಹತ್ಯೆ ಮಾಡಿಕೊಂಡು ಬ್ರಹ್ಮ ಪಿಶಾಚಿಯಾಗಿ ಹೋದಲ್ಲಿ
ಬಂದಲ್ಲಿ ಕಾಡದಿರುತ್ತಾನೆಯೇ? ಒಂದೊಂದು ನಿಟ್ಟುಸಿರು ಬಿಡುತ್ತ ಒಂದು ಕ್ಷಣ ಆಗಸದ ಕಡೆಗೂ
ಮತ್ತೊಂದು ಕ್ಷಣ ನೆಲದ ಕಡೆಗೂ ನೋಡುತ್ತ ನಿಂತಿದ್ದ ಅವನು ಅಪ್ಪಿತಪ್ಪಿ ಅನಸೂಯಳ ಕಡೆಗೆ ನೋಡುವ
ಧೈರ್ಯ ಮಾಡಲಿಲ್ಲ. ಅದಕ್ಕೆಲ್ಲ ಪ್ರಾಯಶ್ಚಿತ್ತಾರ್ಥವಾಗಿ ಚೇಳು ಕುಟುಕಿರುವುದು ಬೇರೆ? ಆದರೂ
ಧೈರ್ಯ ಆವಹಿಸಿಕೊಂದು ಆಕೆಯ ಕಡೆಗೆ ತಿರುಗಿದ.
"ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿರೋ ನನ್ನ ಸಮಸ್ಯೆ ನಿನ್ಗೆ ಅರ್ಥ ಆಗಿರಬೌದೆಂದು
ತಿಳ್ಕೊಂಡಿದೀನಿ. ನನಗ್ಯಾಕೋ ಹೆಜ್ಜೆ ಹೆಜ್ಜೆಗೆ ಮನುಸ್ಮೃತಿ ಗರುಡ ಪುರಾಣಗಳನ್ನೆಲ್ಲ
ಎದುರಾಕಿಸಿಕೊಂಡೇನು. ಆದ್ರೆ ನನ್ತಾಯೀನ ಮಾತ್ರ ಎದುರಾಕ್ಕೊಳ್ಳೋ ಧೈರ್ಯನ ಆ ದೇವರು ನನಗೆ
ಕೊಟ್ಟಿಲ್ಲ... ಏನು ಮಾಡೋದು? ನೀನೇ ಒಂದು ಪರಿಹಾರಾನ ಸೂಚಿಸಲಾರೆಯೇನು?" ತನ್ನ ಮುತ್ತಾತನ
ಗಿರಿಮುತ್ತಾತರ ತಪೋಬಲದಿಂದಲೇ ಅವನಿಗೆ ಇಷ್ಟು ನಿರರ್ಗಳವಾಗಿ ಮಾತಾಡಲು
ಸಾಧ್ಯವಾಯಿತು. ಮರ್ಮಸ್ಥಾನ ಎಲ್ಲಿ ಉದುರಿಬಿಡುವುದೋ ಎಂಬ ಭಯದಿಂದ ಒಂದು ಕೈಯನ್ನು ಮಾತ್ರ ತೆಗೆದು
ಮುಖದ ಬೆವರೊರಸಿಕೊಂಡ. ಬೆಳಗಿನಿಂದ ಭಾವಗೀತೆಯೊಂದನ್ನು ಬರೆಯುವ ಪ್ರಯತ್ನದಲ್ಲಿದ್ದಾಗ ಪೆನ್ನು
ಕಾರಿಕೊಂಡ ಮಸಿಯನ್ನು ಸಮಯ ಸ್ಪೂರ್ತಿಯಿಂದ ಲುಂಗಿಯ ತುದಿಗೆ ಒರಸಿಕೊಂಡಿದ್ದ. ಅದರ ಇಂಕು ಮುಖದ
ಹಲವು ಕಡೆ ಹತ್ತಿ ಬಿಟ್ಟಿತು.
"ಹುಚ್ಚಪ್ಪ ಇಷ್ಟು ಹೇಳೋಕ್ಯಾಕೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಿ, ನೀನು ನನ್ನ ಮದ್ವೆ ಆಗದಿದ್ರೆ
ಪ್ರಪಂಚ ಪ್ರಳಯ ಆಗೋದಿಲ್ಲ. ನಾನೂ ಭಗ್ನಪ್ರೇಮಿಯಂತೆ ಆತ್ಮಹತ್ಯೆ ಮಾಡ್ಕೊಳ್ಳೋದಿಲ್ಲ. ಅಥವಾ ನಿನ್ನ
ನೆನಪಿನಲ್ಲಿ ಚಿರವಿರಹಿಯಾಗಿ ಕಾಲ ಕಳೆಯೋದಿಲ್ಲ. ಒಂದು ಮಾತು ಕೇಳೋಣ ಅಂತ ಬಂದೆ ಅಷ್ಟೆ"
ಕಟ್ಟೆಯಿಂದ ಕೆಳಗಿಳಿದು ಚಪ್ಪಲಿಗಳಿಗೆ ಪಾದ ಪೋಣಿಸಿದಳು. ನನ್ನ ನಿರಾಸೆ ಅಂತ ಭಾವಿಸಿ ಬದುಕಿನ
ಬಗ್ಗೆ ಉತ್ಸಾಹ ಕಳ್ಕೋಬೇಡ. ಇರೋವಷ್ಟು ಕಾಲ ಸ್ವಂತ ವ್ಯಕ್ತಿದಿಂದ ಬದುಕೋದನ್ನು ಕಲ್ತುಕೋ ಬರ್ತೀನಿ
ತುಂಬ ಹೋತ್ತಾಯ್ತು" ಎಂದು ಹೊರಡಲುವಾದಳು.
"ಅನೂ ನಿಂತ್ಕೋ" ಶತಪದಿಯಂತೆ ನಡೆಯುತ್ತ ಬಂದ ಶಾಮು.
"ಮತ್ತೇನಿದೆ?" ಹಿಂತಿರುಗದೆ ಕೇಳಿದಳು.
"ಹೀಗೆ ಮಾಡಿದ್ರೆ ಹೇಗೆ?" ಉಗುಳು ನುಂಗಿದ.
"ಕೇಳೋದೇನಿದ್ರು ನೇರವಾಗಿ ಕೇಳೂಂತ ಎಷ್ಟು ಸಾರಿ ಹೇಳೋದು?"
"ನಾನು ಮದ್ವೆ ಆಗೋವಗೂ... "
"ಹ್ಹಾಂ"
"ನಾನು ಮದ್ವೆಯಾದ್ಮೇಲೆ ಇಬ್ರೂಒಟ್ಟಿಗೆ..." ಮುಂದಿನ ಮಾತು ಹೇಳುವ ಮೊದಲೆ ಅನಸೂಯ ಕೆರಳಿದಳು.
ಆಕೆಯ ಕಣ್ಣುಗಳು ಬೆಂಕಿಯ ಎರಡು ನಮೂನೆಗಳಂತೆ ಪ್ರಜ್ವಲಿಸಿದವು.
"ಇದೇ ಮಾತ್ನ ಬೇರೆ ಯಾರಾದ್ರು ಹೇಳಿದ್ರೆ ಕಪಾಳಕ್ಕೆರಡು ಬಿಡ್ತಿದ್ದೆ ಆಷ್ಟೆ... ಹುಷಾರ್...
ಬರ್ತೀನಿ" ಅನಸೂಯ ದುರ್ದಾನ ತೆಗೆದುಕೊಂಡವಳಂತೆ ಹೊರಟುಹೋದಳು.
ಶಾಮಾಶಾಸ್ತ್ರಿ ಆಕಾಶ ತಲೆ ಮೇಲೆ ಹೊತ್ತುಕೊಂಡವನಂತೆ ಬಹಳ ಹೊತ್ತಿನವರೆಗೆ ಅಲ್ಲಿಯೇ ಕುಸಿದು
ಕೂತಿದ್ದ. ಜಾರ್ಜ್ ಫರ್ನಾಂಡಿಸ್ ಮಾಡುತ್ತಿದ್ದ ಭಾಷಣ ಅಲೆಅಲೆಯಾಗಿ ಕೇಳಿಬರುತ್ತಿತ್ತು. ಆ ಭಾಷಣ
ಕೇಳಿಸಿಕೊಳ್ಳುತ್ತ ಬರುವ ಚುನಾವಣೆಯಲ್ಲಿ ಇಂದಿರಾಗಾಂಧಿ ಪರ ಮತ ಚಲಾಯಿಸುವುದೋ? ವಿರುದ್ಧ
ಚಲಾಯಿಸುವುದೋ? ಎಂದು ಯೋಚಿಸುತ್ತ ಬರುತ್ತಿದ್ದ ದಾಸರಿ ತಿಮ್ಮಪ್ಪ ತೀರ ಹತ್ತಿರ ಬಂದು ನೋಡಿದಾಗಲೇ
ಗೊತ್ತಾದದ್ದು. ಚಲವಾದಿ ರಂಗಮ್ಮನೆದುರು ತಾನು ಅಸಹಾಯಕತೆಯಿಂದ ಕೂತಿದ್ದಂತೆಯೇ ಯಾರೋ
ಕೂತಿರುವರೆಂಬುದು.
"ಯಾರದೂ" ಕಣ್ಣುಜ್ಜಿಕೋಳ್ಳುತ್ತ ಕೇಳಿದ.
’ಮಾತೋಶ್ರೀ ಪಾಹಿಮಾಂ’
ತುಪ್ಪದ ದೀಪದ ಮಂಗಳಮಯ ಬೆಳಕಿನಲ್ಲಿ ಸ್ವಲ್ಪ ಹೊತ್ತಿನ ಹಿಂದೆ ವಿರಹೇನ ವಿಕಲ ಹೃದಯದ ಅಲಮೇಲಮ್ಮ
ಮಲಗಿದ್ದಳು. ಎದೆಯ ವಕ್ಷಸ್ಥಳದ ಮೇಲೆ ಕೃಷ್ಣ ಯಜುರ್ವೇದದ ಮೈತ್ರಾಯಿಣಿ ಶಾಖೆಗೆ ಸೇರಿದ
ಗ್ರಂಥವನ್ನು ತೆಗೆದಿಟ್ಟುಕೊಂಡಿದ್ದಳು. ಅತ್ತೈವ ಚ ಪಶುಂ ಹಿಂಸ್ಯಾನ್ನಾನ್ಯಥೇತ್ಯಬ್ರವೀನ್ಮನುಃ
ಎಂಬ ವಾಕ್ಯವನ್ನು ಬಾಯಿಪಾಠ ಮಾಡುತ್ತಲೇ ಮಂಪರು ಹತ್ತಿತ್ತು.
ವ್ಯಾಸಪೀಠಕ್ಕೆ ತಲೆ ಕೊಟ್ಟಿದ್ದರಿಂದ ಅಪರೂಪದ ನಿದ್ದೆ ಒಲಿದಿತ್ತು. ಸಿಂದಾಮಣಿ ಕೋಮಟಿಗರ
ಮನೆಯಲ್ಲಿ ಗರುಡ ಪುರಾಣ ಪ್ರವಚನಾರ್ಥವಾಗಿ ಪರಮೇಶ್ವರ ಶಾಸ್ತ್ರಿಗಳು ಕೆಲಹೊತ್ತಿನ ಹಿಂದೆ ವಿಶೇಷ
ಸಂಧ್ಯಾವಂದನೆ ಮುಗಿಸಿ ಹೋಗಿದ್ದರು. ಮನುಸ್ಮೃತಿಯ ಐದನೇ ಅಧ್ಯಾಯದಲ್ಲಿ ಗುರ್ತಿಗೆ ನವಿಲು ಗರಿ
ಇಟ್ಟಂತೆ ಪ್ರೀತಿಯ ಬೆಕ್ಕು ನಗಂದಿ ಮೇಲೆ ಹಿಂಗಾಲು ಮುಂಗಾಲುಗಳನ್ನುದ್ದವಾಗಿ ಚಾಚಿ ನಿದ್ದೆ
ಹೋಗಿತ್ತು. ಹೀಗಾಗಿ ಯಾವ ಅಡೆ ತಡೆ ಇಲ್ಲದೆ ನಿದ್ದೆ ಒಲಿದಿತ್ತು.
’ಮಾತೋಶ್ರೀ ಪಾಹಿಮಾಂಽಽಽ’
ಸೂರ್ಯಪುತ್ರನಾದ ವೈವಸ್ವತ ಮನು ತನ್ನ ತಪಸ್ಸಿಗೆ ಆಯ್ದುಕೊಂಡ ಬದರಿಕಾಶ್ರಮದ ಪಕ್ಕದಲ್ಲಿ ಚಾರಿಣಿ
ಜುಳುಜುಳು ಹರಿದಂತೆ ಮನಸ್ಸಿನ ಘನಘೋರ ಮೂತಿಯಿಂದ ಯಾರೋ ಕೂಗಿದಂತೆ ಭಾಸವಾಯಿತು.
ಯಾರದಿರಬಹುದೀ ಧ್ವನಿ?
ತನಗಿನ್ನೊಂದು ಹುಟ್ಟಬಹುದಿದ್ದ ಮಗುವಿನ ದ್ವನಿ ಇದಾಗಿರಬಹುದೇ? ಹರೆಯದಲ್ಲಿ ಗಂಡನನ್ನು
ಕಳೆದುಕೊಂಡಿರುವ ಮಾತ್ರಕ್ಕೆ ತನಗೆ ಮಾನವ ರೂಪ ಕೊಡಲಿಲ್ಲವೆಂದು ಅದು ರೋದಿಸುತ್ತಿರಬಹುದೇ?
ಮಾತೋಶ್ರೀ ಪಾಹಿಮಾಂ
ವ್ಯಾಧನ ಬಾಣದಿಂದ ಗಾಯಗೊಂಡ ಕ್ರೌಂಚ ಪಕ್ಷಿಯ ಆರ್ತರವದಂತೆ ಕೇಳಿ ಬರುತ್ತಿರುವ ಧ್ವನಿ
ಯಾರದಿರಬಹುದು? ಪ್ರಶ್ನಿಯ ಗರ್ಭದಲ್ಲಿ ಶ್ರೀಮನ್ನಾರಾಯಣ ಮಿಸುಕಾಡಿದಂತೆ ಸುಪ್ತಾವಸ್ಥೆಯಿಂದ
ಜಾಗೃತಾವಸ್ಥೆಗೆ ಬರುವ ಕಂಪನಕ್ಕೆ ಸಿಕ್ಕು ಮಗ್ಗುಲು ಬದಲಾಯಿಸಿದಳು ವ್ಯಾಸಪೀಠ ಕೀರ್ಕು, ಕೀರ್ಕು
ಎಂದು ಸದ್ದು ಮಾಡಿತು. ಎದೆ ಮೇಲಿದ್ದ ಪ್ರಾಚೀನ ಗ್ರಂಥ ಪಕ್ಕಕ್ಕುರುಳಿ ಸ್ತನಕ್ಕೊತ್ತಿತು.
ಮಾತೋಶ್ರೀ ಪಾಹಿಮಾಂ...
ಪುಷ್ಪದ ಮೇಲೆ ಪತಂಗದ ಕಾಲುಗಳು ಗಾಯಮಾಡಿದಂತೆ; ಎಸಳು ಮುಲುಕಿದಂತೆ... ತಾಯಿ ಅಲುಮೇಲಮ್ಮ ಓಹ್ ಇದು
ತೀರ ಪರಿಚಿತ ಧ್ವನಿ ಎಂದು ಗುರುತಿಸಿದಳು. ಇದು ಖಂಡಿತ ತನ್ನ ಕರುಳ ಕುಡಿಯದೆಂಬುದರಲ್ಲಿ
ಸಂದೇಹವಿಲ್ಲ.
ಒಮ್ಮೆಗೆ ಸಾವಿರಾರು ನೆನಪುಗಳು ನುಗ್ಗಿಬಂದವು.
ತನ್ನ ಮಗ ಅದ್ಯಾರದೋ ಭಾಷಣ ಕೇಳಲೆಂದು ಹೋಗಿರುವುದು ನೆನಪಾಯಿತು. ಆ ಜನಜಂಗುಳಿ ನಡುವೆ ನಸು ಕೋಮಲ
ಕಾಯದ ತನ್ನ ಮಗ ಏನಾದನೋ?
ಬಡಿದೆಬ್ಬಿಸಿದಂತೆ ಎದ್ದು ಕೂತಳು. ಮುಖದ ಮೇಲಿಂದ ಸುರಿದ ಬೆವರು ಪಕ್ಕದ ಅಣೆಕಟ್ಟಿನಲ್ಲಿ ನೆಲೆ
ನಿಂತಿತು. ದೀರ್ಘವಾಗಿ ಉಸಿರಾಡತೊಡಗಿದಳು. ಅಕೆಯ ದುಗುಡಕ್ಕೆ ಬೆಂಬಲಾರ್ಥವಾಗಿ ಇಡೀ ಮನೆಗೆ ಮನೆಯೇ
ಉಸಿರಾಡತೊಡಗಿತು. ಸಾವಿರಾರು ಮಂದಿ ಅದೃಶ್ಯ ರೀತಿಯಲ್ಲಿ ಮನೆಯ ಅಂಗುಲಂಗುಲದಲ್ಲಿ ಅಡಗಿ
ಕೂತಿರುವಂತೆ ಭಾಸವಾಯಿತು. ಅದಕ್ಕೆ ಹಲೋ ಹಲೋ ಎನ್ನುತ್ತಿರುವ ರೀತಿಯಲ್ಲಿ ಹೃದಯ ಲಬ್ಡಬ್ ಅಂತ
ಜೋರಾಗಿ ಬಡಿದುಕೊಳ್ಳತೊಡಗಿತು.
ಮಗೂ ಶಾಮೂ... ಶಾಮೂ... ಎಲ್ಲಿದ್ದೀಯಪ್ಪಾ?... ಏನಾಗಿದೆಯೋ?... ತಂದೆ ನಿನಗೆ... ನೀನು
ಕ್ಷೇಮವಾಗಿರುವಿ ತಾನೆ...? ಮಾಡಿನ ಕಡೆ ಮುಖ ಮಾಡಿ ಜೋರಾಗಿ ಕೂಗಿದಳು... ಅದು ಅಲೆ ಅಲೆಯಾಗಿ
ಹರಡಲು...
ದಾಸರಿ ತಿಮ್ಮಪ್ಪನಿಂದ ಬಿಡಿಸಿಕೊಳ್ಳಲು ಭಗೀರಥ ಪ್ರಯತ್ನ ನಡೆಸಿದ್ದ ಶಾಮನಿಗೆ ತಾಯಿಯ ಆತಂಕದ ಕರೆ
ಕೇಳಿಸಿದಂತಾಯಿತು. ’ಬಿಡೋ ಬಿಡೋ’ ಎಂದು ಎಷ್ಟು ಹೇಳಿದರೂ ದಾಸರಿ ಬಿಡಲೊಲ್ಲನು.
"ನನ್ನಾಸೆ ಪೂರೈಸದಿದ್ರೆ ಅದೆಂಗ ಬಿಟ್ಟೇನು!... ಏನೂ ಆಗಕ್ಕಿಲ್ಲ... ನೀನೊಂದೆ ನಾನ್ಹೋಳಂದೆ
ಕೇಳು..." ಎಂದು ಕೆವುಕೊಂಡು ಬಿದ್ದಿದ್ದ ದಾಸರಿ ಜೋಲು ಎದೆಗೆ ತನ್ನೆರಡು ಕಾಲುಗಳನ್ನು ಕೊಟ್ಟು
ಝಾಡಿಸಿ ತಳ್ಳಲು ಅವನು ಅಷ್ಟು ದೂರ ಬಿದ್ದು ಗೋವಿಂದಾ ಎಂದನು.
ಏಕಬಾಕ ಲುಂಗಿ ಸರಿಪಡಿಸಿಕೊಂಡು ನಿಟಾರನೆ ನಿಂತನು. ತೊಡೆ ಸಂದಿನಲ್ಲಿ ಮತ್ತೊಮ್ಮೆ ದಗ್ ಅಂತು.
ಒಂದು ಹೆಜ್ಜೆ ಮುಂದಿಡಕ್ಕಾಗಲೊಲ್ಲದು. ಇನ್ನೊಂದು ಕ್ಷಣ ಹಾಗೇ ನಿಂತುಬಿಟ್ಟಲ್ಲಿ ದಾಸರಿ ಪುನರ್
ಚೇತಿಸಿಕೊಂಡು ತನ್ನ ಪಾಕ್ಷಿಕದ ವಿಶೇಷಾಂಕವನ್ನು ಪೂರ್ಣಗೊಳಿಸದೆ ಬಿಡನು. ದೇಹದ ಸಮಸ್ತ
ಜಂಘಾಬಲವನ್ನು ಕಾಲುಗಳಿಗೆ ತಂದುಕೊಂಡನು. ಸೂರ್ಯ ಶ್ವೇತಸ್ವ ಮಂತ್ರಸ್ಯ ಎಂದು ಶಕ್ತಿ
ಸಂಚಯಿಸಿಕೊಂಡನು. ಶ್ರೀ ಪರಮೇಶ್ವರ ಪ್ರಿತ್ಯರ್ಥ ಎಂದೆನ್ನುವಷ್ಟರಲ್ಲಿ ದಾಸರಿ ತಿಮ್ಮ ಫಿನಿಕ್ಸ್
ಪಕ್ಷಿಯಂತೆ, ಯಗ್ನಕುಂಡದಲ್ಲಿ ಅಗ್ನಿ ಪ್ರಜ್ವಲಿಸಿದಂತೆ, ತ್ರಿವಿಕ್ರಮನಂತೆ ಎದ್ದು ನಿಂತು ’ಏಯ್
ಬ್ರಾಂಬ್ರ ಹುಡ್ಗಾ... ನನ್ಗೆ ನಿರಾಸೆ ಮಾಡಿ ಹ್ವಾದಿ ಅಂದ್ರೆ ನಿಂಗೆ ಒಳ್ಳೇದಾಗಕ್ಕಿಲ್ಲ ನೋಡು...
ನಿಂತ್ಗ... ಒಂದೈದು ಮಿನಿಟ್ನಾಗ ಮುಗ್ಸಿ ಜ್ವಾಪಾನವಾಗಿ ಮನಿ ಮುಟ್ಟುಸ್ತೀನಿ’ ಎಂದು ತುಂಬ
ದೈನ್ಯದಿಂದ ಬೇಡಿಕೊಳ್ಳುತ್ತ ಒಂದೊಂದು ಹೆಜ್ಜೆ ಇಡುತ್ತ ಮುಂದೆ ಬರತೊಡಗಿದನು. ಆ ಮಸುಕು
ಬೆಳಕಿನಲ್ಲಿ ಆ ನಗ್ನಾಕೃತಿ ಘನ ಭೀಕರವಾಗಿದ್ದಿತು. ಅವನು ಇನ್ನೇನು ಹಿಡಿದೇ
ಬಿಟ್ಟನೆನ್ನುವಷ್ಟರಲ್ಲಿ ಶಾಮನಿಗೆ ಅದೇನು ಸಕುತಿ ಬಂತೇನೋ ಕಿರ್ಧಬಲ ಓಡತೊಡಗಿದನು. ಓಡಲಾಗದಿದ್ದರೂ
ದಾಸರಿ ಸುಮ್ಮನಿರುವನೇನು! ತನ್ನಾಜ್ಞೆಗಾಗಿ ಮೌನ ವ್ರತದಲ್ಲಿದ್ದ ನಾರಾನಿಗೆ ’ಛೂ’ ಎಂದನು. ಒಡನೆಯೇ
ಅದು ಬೌ ಬೌ ಎಂದು ಅಪ್ಪಟ ಕನ್ನಡದಲ್ಲಿ ಬೊಗಳುತ್ತ ಹಿಂಬಾಲತ್ತಿತು. ಮುಂದೆ ಮುಂದೆ ಓಡುತ್ತಿರುವ
ಅವನು, ಹಿಂದೆ ಹಿಂದೆ ಓಡುತ್ತಿರುವ ನಾರಾಣಿ, ಆ ಓಣಿ ದಾಟಿ ಈ ಓಣಿಗೆ ಬಂದಾಗ ಜಗದ್ರಕ್ಷಕ ಪಿಸಿ
ತ್ರೀನಟ್ಟೂ ಒಂದು ವಾರದಿಂದ ಯಾರನ್ನೂ ಹೊಡೆದಿಲ್ಲವಲ್ಲ ಎಂದು ಕುದಿಯುತ್ತಿದ್ದನು ಅದು ಅಲ್ಲದೆ
ಅವನು ಚಿಕ್ಕಂದಿನಿಂದ ನಾಯಿ ಹೊಡ್ದೂ ಹೊಡ್ದೂ ಸಾಕಷ್ಟು ಹೆಸರು ಸಂಪಾದಿಸಿದ್ದನು. ’ನೀನು ಪೋಲೀಸ್
ನೌಕರಿ ಸೇರಿದ್ದರೆ ಸರಿಹೋಗೋದು" ಎಂದು ಮನೆಯಲ್ಲಿ ತಂದೆತಾಯಿ ಶಾಲೆಯಲ್ಲಿ ಮಾಸ್ತರುಗಳು ಜೀವ
ತಿನ್ನುತ್ತಿದ್ದರು. ಹೀಗಾಗಿ ಆತ ಪೋಲಿಸ್ ನೌಕರಿ ಸೇರೋದಕ್ಕೂ ಮೊದಲೆ ತನ್ನ ಹೆಸರಿನ
ಉತ್ತರಾರ್ಧದಲ್ಲಿ ಪೋಲಿಸ್ ಎಂಬ ಪದದ ’ಕ್ಳಿಮ್ಮು’ಗೆ ಫೆವಿಕಾಲ್ ಲೇಪಿಸಿ ಅಂಟಿಸಿಕೊಂಡು
ಬಿಟ್ಟಿದ್ದನು. ಅಂಥಾತ ಸಾರ್ವಜನಿಕರಿಗೆ ತೊಂದರೆ ಕೊಡುವ ನರಾಣಿಯನ್ನು ಸುಮ್ಮನೆ ಬಿಡುತ್ತಾನೇನು?
ಜೋರಾಗಿ ಸೀಟಿ ಊದತೊಡಗಿದನು. ಪ್ರಧಾನಿ ವಿರೋಧಿ ಅಂತ ತಮ್ಮನ್ನು ಹೀಡಿದಾನು ಅಂತ ಜನ
ಕ್ಳಿಮ್ಮುನಲ್ಲಿ ಬಾಲ ಇಟ್ಟುಕೊಂಡು ಪಿತುಗಲಾರಂಭಿಸಿದರು. ಇದೇ ಒಂಥರಾ ಮಜಾ ಅನ್ನಿಸಿತು ಪೀಸಿಗೆ.
ಮತ್ತಷ್ಟು ಜೋರಾಗಿ ಊದುತ್ತ ಓಡೋಡಿ ಕೈಲಿದ್ದ ಲಾಠಿ ಕೋಲನ್ನು ಅಶ್ವತ್ಥಾಮ ’ಉತ್ತರ ಗರ್ಭಕ್ಕೆ
ಪ್ರಳಯ’ ಎಂದು ಅಭಿಮಂತ್ರಿಸಿ ದರ್ಭೆಯನ್ನು ಪ್ರಯೋಗಿಸಿದಂತೆ ಪ್ರಯೊಗಿಸಲು ಅದು ಸೀದ ಹೋಗಿ ನಾರಾಣಿಯ
ಹಿಂಗಾಲುಗಾಲಿಗೆ ಬಿದ್ದಿತು. ನಾರಾಣಿ ತೊಂಕ ಕಳೆದುಕೊಂಡು ಮುಗಿಲ ಕಡೆ ಮುಖಮಾಡಿ ಏಕಕಾಲಕ್ಕೆ ಸಮಸ್ತ
ಶ್ಲೋಕಗಳನ್ನು ಲೋಕ
ವಿದ್ರಾವಕವಾಗಿ ಬೊಗಳತೊಡಗಿತು. ನಂತರ ಅವನು ಅದನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ನೋಡಿ
ಕಣ್ಣಿನ ಮೂಲಕ ಪಾಪ ಕಟ್ಟಿಕೊಳ್ಳಬಾರದೆಂದು ಶಾಮಾ ಶಾಸ್ತ್ರಿ ಓಡಿ ಮುಖ್ಯ ರಸ್ತೆ ತಲುಪಿದನು.
ಅವನ ಆ ಅವಸ್ಥೆ ನೋಡಿ ನಗಬಹುದಾಗಿದ್ದವರೆಲ್ಲರೂ ಇಂದಿರಾ ವಿರೋಧಿ ಭಾಷಣ ಕೇಳಲು ಹೋಗಿದ್ದರು. ಅದು
ಅವನ ಪುಣ್ಯ... ಓಂ ಕೇಶವಾಯ ಸ್ವಾಹ ಒಂದು ಆಚಮನ ಮಂತ್ರಗಳನ್ನು ಮನಸ್ಸಿನಲ್ಲಿ ಪಠಿಸುತ್ತ ಮನೆ ಕಡೆ
ಹೆಜ್ಜೆ ಹಾಕಿದನು. ಪ್ರತಿ ಹೆಜ್ಜೆ ಇಡುವಾಗಲೂ ಅವನ ನಾಲಿಗೆ ಅಮ್ಮಾ... ಅಮ್ಮಾ ಎಂದು
ನುಡಿಯುತ್ತಿದ್ದಿತು.
ಇತ್ತ ಕಡೆ ಅಲುಮೆಲಮ್ಮನ ಕರುಳು ಅಡಿಗಡಿಗೆ ಕಿತ್ತು ಬಾಯಿಗೆ ಬರತೊಡಗಿತ್ತು. ಆಕೆಯ ಹೃದಯ ಕವಾಟಗಳು
ಶಾಮೂ ಶಾಮೂ ಎಂದು ಬಡಿದುಕೊಳ್ಳತೊಡಗಿದ್ದವು. ಬೋರಲು ಬಿದ್ದಿದ್ದ ವ್ಯಾಸಪೀಠಕ್ಕಿಂತ ಮಗನ ನೆನಪು
ಹೆಚ್ಚಿನದು. ಮನು ಸ್ಮೃತಿಗಿಂತ ಮಾತೃತ್ವ ಹೆಚ್ಚಿನದು. ಆದ್ದರಿಂದ ಆಕೆ ಅವ್ಯಾವುದನ್ನೂ ಸರಿಪಡಿಸುವ
ಗೋಜಿಗೆ ಹೋಗಲಿಲ್ಲ.
"ಯಾಕೆ ಇಷ್ಟೊಂದು ಗಾಬರಿಯಾಗಿರಿವಿ? ಏನಾಯ್ತು ಹೇಳಬಾರ್ದೇ ತಾಯೀ?" ಎಂದು ಬೆಕ್ಕು ನಗಂದಿ ಮೇಲಿಂದ
ಜಿಗಿದು ಮ್ಯಾವ್ಗುಟ್ಟುತ್ತ ಆಕೆಯ ಕಾಲು ಸಂದಿಯಲ್ಲಿ ನುಸಿಯತೊಡಗಿತ್ತು. ಅದನ್ನು ಅಪಶಕುನವೆಂದು
ಆಕೆ ಅದನ್ನು ಕಾಲಿನಿಂದ ಝಾಡಿಸಿ ತಳ್ಳಿದಳು. ಏನಾದ್ರು ಹೆಲ್ಪು ಮಾಡೋಣಾಂತ ಬಂದ್ರೆ ಇದ್ಯಾಕೆ
ಹಿಂಗ್ ಮಾಡ್ತಾಳೆ ಒಟ್ಟಿನಲ್ಲಿ ನನಗೆ ಬುದ್ಧಿ ಇಲ್ಲವಷ್ಟೆ ಎಂದು ಬೆಕ್ಕು ಮುಖ ಕಮಲ
ಸಿಂಡರಿಸಿಕೊಂಡು ಈ ಮನೆಗೂ ತನ್ನ ಋಣ ಸಂಬಂಧ ತೀರಿತೆಂಬಂತೆ ಮನೆ ಬಿಟ್ಟು ಹೊರಟುಹೋಯಿತು.
ದುರ್ಯೋಧನಾಸ್ಥಾನದಲ್ಲಿ ಧನುವ ಬಿಸುಟು ತೊತ್ತಿನ ಮಗ ವಿದುರ ಹೊರಟು ಹೋದನಲ್ಲ ಹಾಗೆ.
ಸಂಪ್ರದಾಯಸ್ಥರ ಮನೆಯಲ್ಲಿ ಬೆಕ್ಕು ಕ್ಷೇಮದಿಂದಿರುವುದಿಲ್ಲ ಕೂಡ. ಹಾಗೆಯೇ ಸಮ್ಪ್ರದಾಯಸ್ಥರಾದರೂ
ಅಷ್ಟೆಯೇ.
"ಎಲ್ಲಿ ಹೋದನು? ಏನಾದನು?" ಅಲಮೇಲಮ್ಮ ತನ್ನ ಮಾವ ಮನೇಲಿ ಇಲ್ಲದಿರುವುದರಿಂದ ಮತ್ತಷ್ಟು
ಬೇಸರಗೊಂಡಳು. ಪರಮೇಶ್ವರ ಶಾಸ್ತ್ರಿಗಳು ಬೆಳಗ್ಗೇನೇ ತಮ್ಮ ನಿವಾಸದ ತೊಲೆ ಜಂತಿಗೆಲ್ಲ ಕೇಳಿಸುವಂತೆ
"ರಾಜಖಿಯ ಭಾಷಣ ಕೇಳೋಕೆ ಹೋಗೋದು ವೇದ ಪ್ರಾಮಾಣ್ಯವಲ್ಲ... ಹೋಗಿ ನಾನು ಕಾಲು ಊನ ಮಾಡಿಕೊಂಡಿದ್ದು
ಸಾಕು. ಈ ದುರವಸ್ಥೆ ಮತ್ತಾರಿಗೂ ಬಾರದಿರಲಿ" ಎಂದು ಸೂಚ್ಯವಾಗಿ ಶಾಮುವನ್ನುದ್ದೇಶಿಸಿ ಹೇಳಿದ್ದರು.
ಶಾಮು ತಿಳುವಳಿಕಸ್ಥ, ವಿದ್ಯಾವಂತ, ಸುಮ್ಮನಿದ್ದಾನು. ಆದರೆ ಅವನ ಮೈಯೊಳಗೆ ಹರೀತಿರೋ ಬಿಸಿ ರಕ್ತ
ಸುಮ್ಮನಿರಬೇಕಲ್ಲ!... ಮೊದಮೊದಲು ಹೋಗುವುದಿಲ್ಲವೆಂದು ತನ್ನ ತೊಡೆ ಮೇಲೆ ಮಲಗಿಕೊಂಡಿದ್ದ.
ಆತಂಕಗೊಂಡಿರುವಂತಿದ್ದ. ಕೆಲ ಸಮಯದ ನಂತರ ದಿಡೀರನೆ ಎದು "ಅಮ್ಮಾ ನನಗೇಕೋ ಜಾರ್ಜ್ ಫರ್ನಾಂಡಿಸನ
ನೋಡೊ ಆಸೆಯಾಗಿದೆ! ಹೋಗಿ ಬತೀನಿ" ಅಂದ. ಅದಕ್ಕೆ ತಾನು, "ಅದೆಂಥ ಹೆಸರೋ; ನಾಲಿಗೇನೇ ಹೊರಳುವಲ್ದೂ!
ಅವರೂ ನಮ್ಮಂತೆ ಬ್ರಾಹ್ಮಣ್ರಾ!" ಎಂದು ಪ್ರಶ್ನೆ ಹಾಕಿದ್ದಳು. ತಾಯಿಯ ಸಂತೋಷಕ್ಕಿಂತ
ದೊಡ್ಡದೊಂದಿದೆ! ಲುಂಗಿಯನ್ನೇ ಸುತ್ತಿಕೊಳ್ಳುತ್ತ ಹ್ಹೂಂ ಅಂದಿದ್ದ. ಹೆಸ್ರಿನ ಕೊನೆಗೆ ಶರ್ಮನೋ
ರಾವ್ ಅಂತ್ಲೋ ಇಟ್ಕೋಬಹುದಿತ್ತಲ್ಲ" ಎಂದು ತಾನು ಮುಗ್ದತೆಯಿಂದ ಕೇಳಿದ್ದಳು. ಅದಕ್ಕೆ
ನಿರುತ್ತರವಾಗಿ ಶಾಮು ಗೋಧೂಳೀ ಸಮಯದಲ್ಲಿ ಹೋಗಿದ್ದ. ಅಷ್ಟರೊಳಗೆ ಇಷ್ಟೊಂದು ಹಳಹಳಿಕೆ.
ಅಲುಮೇಲಮ್ಮ ಓಣಿಯ ನಂಬಿಕಸ್ಥರನ್ನು ಕರೆದು ಹಿಂಗಿಂಗೇಂತ ಹೇಳಿ ಕಳಿಸಬೇಕೆಂದು ತಲೆಬಾಗಿಲಿಗೆ
ಬಂದಳು. ಇನ್ನೇನು ಆಕೆ ಒಂದು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ತುಳಸೀ ಕಟ್ಟೆಯ ಹಿಂದೆ ಮಾನವಾಕೃತಿ
ಕಾಣಿಸಿಕೊಂಡು ಅದು ಮರುಕ್ಷಣದಲ್ಲಿಯೇ ಅಪ್ಪಿಕೊಂಡುಬಿಟ್ಟಳು.
"ಶ್ಯಾಮಾ!!" ಒಮ್ಮೆಗೆ ಜಿಗಿದು ಮಗನನ್ನು ಬಲವಾಗಿ ಅಪ್ಪಿಕೊಂಡುಬಿಟ್ಟಳು.
ಬದುಕಿನ ಸುರಕ್ಷಿತ ವಲಯ ತಲುಪಿದ ಉದ್ವೇಗದ ಸೆಳವಿಗೆ ಸಿಲುಕಿ ಅವನು "ಅಮ್ಮಾ" ಎಂದ ಯುದ್ಧದಿಂದ
ಮರಳಿ ಬಂದವನಂತೆ.
"ಅಯ್ಯೋ... ಶಿವಶಿವಾ... ನಾರಾಯಣ... ನನ್ನ ಶಾಮು ಯಾಕೆ ಹಿಂಗೆ ನಡೀತಾ ಇದ್ದಾನೆ. ತಾತನವ್ರ ಮಾತು
ಕೇಳಿ ಮನೆಲಿದ್ದಿದ್ರೆ..." ತಾಯಿ ಮಗನನ್ನು ಎತ್ತಿ ಕೊಂಡೊಯ್ಯುತ್ತಿರುವಳೆಂಬಂತೆ ಒಳಗಡೆ
ಕರೆದುಕೊಂಡು ಹೋದಳು.
"ಏನಾಯ್ತೂಂತ ಹೇಳಬಾರ್ದೇನೋ?" ಮುಖದಲ್ಲಿ ಮುಖ ಇಟ್ಟು ಕೇಳಿದಳು.
"ಏನಂತ ಹೇಳ್ಲಿ ಅಮ್ಮಾ!" ಎಷ್ಟು ಚಂದ ಅಮ್ಮಾ ಎಂದು ನುಡಿಯುತ್ತಿರುವುದಲ್ಲ ತನ್ನ ಕಂದ. ಯಾಕೆ ಮುಖ
ತಗ್ಗಿಸಿಬಿಡ್ತಿದೆ. ಏನಾದರೂ ಗ್ರಹ ಪೀಡೆಗಳು ಕಾಟವೋ? ಯಾರಾದರೂ ಲಲನಾಮಣಿಯರು
ಕಣ್ಣುಬಿಟ್ಟಿರಬಹುದೋ? ಹೇಳುವುದೇನಿದೆ? ಕೇಳುವುದೇನಿದೆ? ಮಾಡೋದ ಮಾಡಿದರಾಯ್ತು.
ಅಲುಮೇಲಮ್ಮ ವಿಳಂಬ ಮಾಡಲಿಲ್ಲ. ತಾಮ್ರದ ಬೋಗುಣಿಯಲ್ಲಿ ಪಂಚತೈಲ ಸುರಿದುಕೊಂಡು ಬಂದು ಅದರಲ್ಲಿ ಅವನ
ಪ್ರತಿಬಿಂಬ ನೋಡಿಸಿದಳು. ಮೆನಸಿನಕಾಯಿ, ಉಪ್ಪು ಪೊರಕೆಯೇ ಮೊದಲಾದ ವಸ್ತುಗಳಿಂದ ನೀವಳಿಸಿ ಲಟಿಗೆ
ತೆಗೆದಳು. ಅವನು ಹ್ಹಾ ಅನ್ನಲಿಲ್ಲ. ಉಸಿರು ಬಿಡಲಿಲ್ಲ. ಕಂಚಿಯಿಂದ ತಂದಿದ್ದ ಲೋಭಾನ ಹಾಕಿದಳು.
ಇಷ್ಟೆಲ್ಲ ಮಾಡಿದ ಮೇಲೆ ಅವನ ಮುಖ ತಿಳಿಗೊಂಡಂತೆ ಕಂಡಿತು.
ಅವನ ಮುಖವನ್ನು ತನ್ನೆರಡು ಬೊಗಸೆಯಲ್ಲಿ ಹಿಡಿದುಕೊಂಡು, ಮೂಗಿಗೆ ಮೂಗು ತಾಕಿಸಿ (ಥೇಟ್ ಅವರಪ್ಪನದೇ
ಮೂಗು, ಮೂಗಿನಲ್ಲಿ ಅವಿತುಕುಳಿತಿರುವರೋ ಹೇಗೆ? ಸ್ಪರ್ಶದ ಮಾತ್ರದಿಂದಲೇ ಯಾಕೆ ರೋಮಾಂಚನವಾಗಬೇಕು?)
"ಮಗೂ ಏನಾಯ್ತೂ ಅಂತ ಈಗ್ಲಾದ್ರೂ ಬಾಯ್ಬಿಟ್ಟು ಹೇಳೋ? ಇಲ್ಲಾಂದ್ರೆ ಎದೆ ಒಡೆದ್ಹೊಗ್ತದೆ!" ಎಂದು
ಅಂಗಲಾಚಿದಳು.
ತಾಯಿಯ ಪ್ರೀತಿಗೆ ಸಮನಾದುದುಂಟೇನು ಲೋಕದಲಿ.
ರಂಗೋಲಿಗಿಂತ ಮಿಗಿಲಾದುದುಂಟಯ್ಯಾ ಈ ಜಗದ ಬಾಗಿಲಲಿ.
ಇದ್ದಕ್ಕಿದ್ದಂತೆ ಶಾಮನ ಎದೆಯಲ್ಲಿ ಮೂಡಿದ ಪದ್ಯ ಮಿದುಳಿಗೆ ಫೋನ್ ಮಾಡಿತು. ಮಿದುಳು ’ಬರೆದು
ಎಸೆದುಬಿಡು’ ಎಂದು ಆಜ್ಞೆ ವಿದಿಸಿತು. ಕೈಗೆ ನಿಲುಕುವಂತೆ ಪೆನ್ನು ಪುಸ್ತಕ ಇಲ್ವಲ್ಲ!
ಸಿಡುಕಿದನು.
ತಾಯಿ ಹೇಳೋ ಅಂದಳು. ಮಗ ಹೊಳೆದ ಪದ್ಯ ಹೇಳಿದ. ಅದಲ್ವೋ ನೀನು ಸೊಟ್ ಸೊಟ್ಟ ನಡೀತಿರೋದು. ಹೊಲದಲ್ಲಿ
ದುಡ್ಯೋ ಶೂದ್ರರ ಥರ ಅಸ್ತವ್ಯಸ್ತವಾಗಿರೋದ್ಯಾಕೋ... ಹೇಳೋ!" ಕೊರಳಪಟ್ಟಿ ಹಿಡಿದು ಜಗ್ಗಿದಳು.
"ಅಮ್ಮಾ..." ಉಗುಳು ನುಂಗಿದ.
"ಏನಪ್ಪಾ"
"ಹೇಗೆ ಹೇಳ್ಲಮ್ಮಾ!"
"ಹೇಳೋ ಮಗ್ನೇ ಮಗುವಿನ್ತರ ಹಠಮಾಡ್ಬೇಡಪ್ಪಾ!"
"ನನ್ಗೆ ನಾಚ್ಕೆಯಾಗ್ತದೆ!"
"ಈ ತಾಯಿಹತ್ರ ಅದೆಂಥದೋ ನಾಚ್ಕೆ!"
"ಮತ್ತೆ... ಮತ್ತೆ!!!"
"ಹೇಳೋ ಕಂದಾ!"
"ನನಗೆ ಚೇಳು ಕುಟುಕ್ತಮ್ಮಾ" ಗಂಟಲ ಅಣೆಕಟ್ಟು ಢಮಾರನೆ ಸ್ಪೋಟಿಸಿಬಿಟ್ಟಿತು. ಹೋ ಎಂದು ಅಳತೊಡಗಿದ.
ಚೇಳು ಕುಟುಕಿದ್ದು ಕಾಲು ಭಾಗವಾಗಿದ್ದರೆ, ಅನಸೂಯ ಮುಖಕ್ಕೆ ರಾಚಿದಂತೆ ಮಾತಾಡಿದ್ದೂ; ದಾಸರಿ
ತಿಮ್ಮ ರೇಪ್ ಮಾಡಲು ಪ್ರಯತ್ನಿಸಿದ್ದೂ; ನಂತರ ಅವನು ನಾಯಿ ’ಛೂ’ ಬಿಟ್ತಿದ್ದೂ ಇದೆಲ್ಲ ಒಂದರ
ಮೇಲೆಂದು ಸೇರಿಕೊಂಡು ದುಃಖವನ್ನು ನೂಮಡಿಗೊಳಿಸಿಬಿಟ್ಟಿತು. ಪ್ರಪಂಚದ ಸಮಸ್ತ ದುರಂತ ಕಾವ್ಯ
ನಾಟಕವೇ ಮೊದಲಾದ ಸಾಹಿತ್ಯ ಗಂಥಗಳಲ್ಲಿ ಅಭಿವ್ಯಕ್ತಗೊಂಡಿರುವ ದುಃಖವನ್ನು ಮೈತುಂಬ ಪಂಚೇದ್ರಿಯಗಳ
ತುಂಬ ತುಂಬಿಕೊಂಡುಬಿಟ್ಟನು. ಗಂಟಲಿ ಮರು ನುಡಿಯಲರಿಯದೆ ಮತ್ತೆ ಕಟ್ಟಿ ಬಿಟ್ಟಿತು. ಮೂಗಿನ ಎರಡು
ಹೊಳ್ಳೆಗಳಿಂದ ಹಾಲು ಜೇನಿನ ಹಳ್ಳ ಹರಿಯತೊಡಗಿತು. ಕಣ್ಣುಗಳೆರಡು ನಯಾಗರ ಜೋಗದ ಪಾತ್ರಗಳನ್ನು
ಅಭಿನಯಿಸತೊಡಗಿದವು.
ತಾಯಿಯ ವಕ್ಷದ ಮೇಲೆ ತನ್ನ ಮುಖಾರವಂದವನ್ನಿರಿಸಿ ’ಅಮ್ಮಾ’ ಎಂದು ಮತ್ತೆ ಮತ್ತೆ ಬಿಕ್ಕಿದ.
ಕಣ್ಣೀರು ವಕ್ಷದ ಕಣಿವೆಗುಂಟ ಅಗ್ನಿ ದಿವ್ಯದಂತೆ ಹರಿಯಿತು.
ತನ್ನ ಪ್ರಾಣಪದಕಕ್ಕೆ ಚೇಳು ಕುಟುಕುವುದೆಂದರೇನು! ಋತುಮತಿಯಾದಾಗ ಮೈಲಿಗೆ ಲಂಗದ ಮೇಲೆ ಉಭಯ
ಕುಶಲೋಪರಿಯಲ್ಲಿ ತೊಡಗಿದ್ದ ಐದಾರು ಚೇಳುಗಳನ್ನು ನೋಡಿದ ಮಾತ್ರಕ್ಕೆ ಏಳರ ಜ್ವರ ಏಳು ದಿನಗಳ
ಪರ್ಯಂತರ ಕಾಡಿದ್ದವು. ಚೇಳು ಕುಟುಕಿದವರ ಸಂದರ್ಶನ ಮಾಡಿ ಹೌಹಾರಿದ್ದಳು ಎಷ್ಟೋ ಸಲ.
"ಶಿವ! ಶಿವಾ!" ಕಣ್ಣು ಮುಚ್ಚಿಕೊಂಡಳು ತಾಯಿ
"ನನ ಕಂದಾ ಏನು ಹೇಳ್ತಿರುವೆಯೋ?" ಏನು ಮಾಡುವುದೀಗ? ಮಾವನವರಿದ್ದಿದ್ರೆ ಮಂತ್ರಿಸುತ್ತಿದ್ದರು...
"
ಕಂದ ಚೇಳು ಕುಟಿಕಿಸಿಕೊಂಡ ಸಂಕಟದಲ್ಲಿ ಇಷ್ಟು ದೂರ ನಡೆದು ಬಂದಿರುವನಲ್ಲ ಎಷ್ಟೊಂದು
ತಾಕತ್ತಿರುವುದಿವನ ಮೈಯೊಳಗೆ! ಎಷ್ಟಾದರೂ ಇವನು ಸರ್ವಶಾಸ್ತ್ರಪಾರಂಗತನಾದ ಗಂಡಸಲ್ಲವೆ?
ಮಗುವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದಳು. ಆಗಲಿಲ್ಲ. ಹಾಗೇ ಜೋಪಾನವಾಗಿ ನಡೆಸಿಕೊಂಡು
ಶಯನಗೃಹಕ್ಕೆ ನಡೆಸಿಕೊಂಡು ಹೋದಳು. ಮುಲುಕುತ್ತ, ನರಳುತ್ತ; ಅಡಿಗಡಿಗೆ ಅಮ್ಮಾ ಅಮ್ಮಾ ಅನ್ನುತ್ತ
ನಡೆದನಾ ಗಂಡುಗಲಿ ಕುಮಾರ ರಾಮನು.
ಅರ್ಜುನನ ಹಸ್ತಲಾಘವದ ಶರಪಂಜರದ ಮೇಲೆ ಕುರುಪಿತಾಮಹ ಪವಡಿಸೋಪಾದಿಯಲ್ಲಿ ಶಾಮು ಮಲಗಿಕೊಂಡನು.
"ಕಂದಾ... ಚೇಳು ಕುಟಿಕಿದ ಜಾಗವನ್ನಾದರೂ ತೋಸೋ?" ದುಃಖಿತಳಾಗಿ ಕೇಳಿದಳು ವಾತ್ಸಲ್ಯ ಮೂರ್ತಿ.
ಇಂಥದೊಂದು ಪ್ರಶ್ನೆ ತಾಯಿಯ ಬಾಯಿಂದ ಉದುರುತ್ತಲೆ ಶಾಮು ಹೌಹಾರಿದ.
"ಹೋಗಮ್ಮ... ಎಲ್ಲೋ ಒಂದ್ಕಡೆ ಕುಟುಕ್ತು" ದುಃಖದ ವಲ್ಮೀಕದೊಡಲಿಂದ ನಾಚಿಕೆ ಒಡಮೂಡಿತು.
"ಹಾಗಂದ್ರೆ ಹೆಂಗಪ್ಪಾ" ಕಂದನ ದೇಹದ ಪ್ರತಿಯೊಂದು ಭಾಗವನ್ನು ಪರಾಮರ್ಶಿಸುತ್ತಾ ಕೇಳಿದಳು ತಾಯಿ."
"ನೀನು ಹೇಳದಿದ್ರೆ ಇಗೋ ನೋಡು ಮತ್ತೆ!"
"ಅಮ್ಮಾ ನನ್ಗೆ ನಾಚ್ಕೆ ಆಗ್ತದೆ" ವಧುವಿನಂತೆ ನಾಚುತ್ತಿರುವ ಮಗ.
ತಾಯಿಯಾದ ನನ್ನ ಬಳಿ ಅದೆಂಥದದೋ ನಾಚ್ಕೆ!"
"ಕುಟುಕಿರೋ ಜಾಗ!"
"ಜಾಗ!"
"ನಿನಗೆ ತೋರಿಸುವಂಥದಲ್ಲ!"
"ಅಂದ್ರೆ"
"ಥೂ! ಹೋಗಮ್ಮಾ!"
"ಛೀ ಹುಚ್ಚಪ್ಪ... ನಾನು ನೋಡ ಬಾರದಂಥ ಜಾಗ ಯಾವುದೋ ಇದೆ ನಿನ್ನ ದೇಹದಲ್ಲಿ?"
"ಇದೆ ಅದನ್ಕಟ್ಕೊಂಡೇನೀಗ?"
"ನಾನು ನಿನ್ನ ತಾಯಿ. ನನ್ನ ಏಕ ಮಾತ್ರ ಪುತ್ರ ನೀನು, ನಿನ್ನ ದೇಹ ನನ್ನ ಹಕ್ಕು."
"ಅಮ್ಮಾ ದಯವಿಟ್ಟು... ಸ್ವಲ್ಪ ಹೊತ್ತು ಆಚೆ ಹೋಗ್ತೀಯಾ?"
"ಇಂಥ ಸಂಕಟದ ಸಮಯದಲ್ಲಿ ನಿನ್ನೊಬ್ನೆ ಬಿಟ್ಟು ಅದ್ಹೇಗೆ ಹೋಗ್ಲೋ?"
ಶಾಮನಿಗೆ ಫಜೀತಿಗಿಟ್ಟುಕೊಂಡಿತು. ಹೇಗೆ ಹೇಳೋದು! ಹೇಳಲಾಗದೆ ಹೇಗೆ ಇರೋದು? ಪಂಚವಿಂಶತಿ ನಾಚಿಕೆಯ
ತ್ರಯೋದಶಿ ಹೊಂಡದಲ್ಲಿ ಲಿಬಿಲಿಬಿ ಒದ್ದಾಡತೊಡಗಿದ. ಯಾಕಾದರೂ ಮನೆಗೆ ಮರಳಿದೆನೋ? ನೋವು
ಶಮನವಾಗುವವರೆಗೆ ಅಲ್ಲೆಲ್ಲೊ ಒಂದುಕಡೆ ಬಿದ್ದಿರಬಹುದಿತ್ತು.
ಹೇಳಪ್ಪಾ... ಹೆತ್ತಕರುಳು ಚೂರುಚೂರಾಗ್ತಿದೆ" ಅಲುಮೇಲಮ್ಮ ಚಂಡಿಹಿಡಿದವಳಂತೆ ಕೇಳಿದಳು.
"ನನ್ಗೆ ನಾಚಿಕೆ ಆಗ್ತದಮ್ಮಾಽಽ" ಗೋಗರಿದ.
"ನಾನು ಬದುಕಿರೋವಗೂ ನನ್ನೆದುರಿಗೆ ನಾಚ್ಕೆ ಪಡಬೇಡ... ನಾನು ನಿನ್ನ ತಾಯಿ. ತಾಯಿ ಎದುರು ಅದೆಂಥದೋ
ನಾಚಿಕೆ."
"ನಾನೀಗ ಮಗು ಅಲ್ಲ... ಬೆಳ್ದು ದೊಡ್ಡವನಾಗಿದ್ದೀನಿ."
"ನಾನು ಸತ್ತ ಮೇಲೆ ಮೇಲೆಯೇ ನೀನು ದೊಡ್ಡವನಾಗೋದು."
"ನೀನು ಸಾಯೋ ಮಾತಾಡಬೇಡಮ್ಮಾ ನನ್ಗೆ ದುಃಖವಾಗ್ತದೆ."
"ಹಾಗಾದ್ರೆ ಹೇಳು ಮತ್ತೆ... ಇಲ್ಲಿ ಕುಟುಕ್ತಾ... ಇಲ್ಲಿ ಕುಟುಕ್ತಾ" ಅಲುಮೇಲಮ್ಮ ಮಗನ ದೇಹದ
ಬಹುಪಾಲು ಭಾಗವನ್ನು ಮುಟ್ಟಿ ಮುಟ್ಟಿ ಕೇಳಿದಳು.
"ಅಲ್ಲೆಲ್ಲೂ ಅಲ್ಲ."
"ಹಾಗಿದ್ರೆ ಎಲ್ಲಿ?"
"ಹೇಳೋಕೆ ನನ್ ಮನ್ಸು ಒಪ್ಪುತ್ತಿಲ್ಲ."
"ಹೆತ್ತ ತಾಯಿಗಿಂತ ನಿನ್ಗೆ ನಿನ್ ಮನಸೇ ಹೆಚ್ಚಾಯ್ತೇನೋ?"
"ತಾತ ಬಂದ ಮೇಲೆ ಹೇಳ್ತೀನಿ"
"ನಿನಗೆ ಜನ್ಮ ಕೊಟ್ಟಿರೋದು ತಾತನಲ್ಲ.
"ಹೌದಮ್ಮಾ ನೀನೆ ನನ್ನ ಜನ್ಮದಾತೆ"
"ಹಾಗಿದ್ರೆ ನಿಸ್ಸಂಕೋಚವಾಗಿ ಹೇಳು ಮತ್ತೆ!"
ತತ್ಸರ್ವಂ ಶ್ರೀವಾಸುದೇವಾರ್ಪಣಮಸ್ತು... ಶಾಮು ಸರ್ವಸ್ವವನ್ನೂ ತನ್ನಿಷ್ಟ ದೈವಕ್ಕರ್ಪಿಸಿಬಿಟ್ಟ.
ಯಾಕೆ ಹಠ ಮಾಡುತ್ತಿರುವಳೀ ತಾಯಿ; ತಂದೆ ಬದುಕಿದ್ದರೆ ತಾನೀ ಪರಿಯಾಗಿ ಮಾತೃತ್ವದ ಸಂಕೋಲೆಗೆ
ಸಿಲುಕುವ ಸಂಧಿಗ್ದಕ್ಕೆ ಬಲಿಯಾಗುತ್ತಿರಲಿಲ್ಲ.
ಮಾತೃತ್ವ ಪಿತೃ ರೂಪಾಯಾ | ಪಿತೃತ್ವ ರೂಪಾಯ ಮಾತೃವೇ
ಮಾತೃತ್ವಸ್ಯ ಹೃದಯ್ಂ ಪಿತೃಃ | ಪಿತೃಶ್ಚ ಹೃದಯಂ ಮಾತೃಃ
ಎಂದು ಗೊಣಗಿಕೊಂಡ. ಪಾಲಕ ಮತ್ತು ಪೋಷಕ ಶಕ್ತಿಗಳ ತ್ರಿವೇಣಿ ಸಂಗಮದಂತಿರುವ ತನ್ನ ತಾಯಿ ಈ ಪರಿ
ಮಾತೃತ್ವದ ಪಾರಾಕಾಷ್ಠೆ ತಲುಪಬಹುದೆಂದು ಗೊತ್ತಿದ್ದರೆ ತಾನು ಆ ಕಡೆ ಹೋಗುತ್ತಲೇ ಇರಲಿಲ್ಲ.
"..." ಶಾಮು ಹೇಳಲೆಂದು ಬಾಯಿ ಏನೋ ತೆರೆದ. ಶಬ್ದ ಹೊರಡಲಿಲ್ಲ. ಮುಚ್ಚಿದ.
"ಹೇಳೋ" ಅಲುಮೇಲಮ್ಮನ ಕಂಠ ಬಿಗಿಯಿತು. "ನೀನು ಹೇಳ್ಲಿಲ್ಲಾಂದ್ರೆ ನನ್ನಾಣೆ ನೋಡು."
"ಆಣೆ!" ಬರಸಿಡಿಲಿನಂತೆ ಎರಗಿತು. ಶಿವಶಿವಾ, ಕಿವಿ ಮುಚ್ಚಿಕೊಂಡ.
ಚಿಕ್ಕಪುಟ್ಟ ಸಂಗತಿಗಳಿಗೆಲ್ಲ ಆಣೆ ಪ್ರಮಾಣ ಮಾಡುವ ತಾಯಿ ಈ ಪ್ರಪಂಚದಲ್ಲಿ ತನಗೊಂದೆ ಇರುವಳೋ
ಮತ್ತಾರಿಗಾದರೂ ಇರುವಳೋ?
ಮಾತೃಸನ್ನಿಧಿಯ ಒಂದೊಂದು ಗಳಿಗೆಯೂ ಎಷ್ಟೊಂದು ಆತಂಕಕಾರಿಯಾಗಿರುವುದಲ್ಲ!
ಹೋಗಿ ಹೋಗಿ ಆ ಚೇಳು ತನ್ನನ್ನೇ ಕುಟುಕುವುದೇನು? ಹೋಗಿ ಹೋಗಿ ಅತ್ಯತಿಷ್ಟದ್ದಶಾಂಗುಲಂಗೇ
ಕುಟುಕಬೇಕೇನು? ಒಟ್ಟಿನಲ್ಲಿ ನನ್ನ ಕರ್ಮ! ಪ್ರಭಾತಸಮಯ ಪ್ರಭಾಂ ಸಮಯದಲ್ಲಿ ಸೂರ್ಯನಿಗೆ
ಅಶ್ರುತರ್ಪಣ ಮಾಡುತ್ತಿದ್ದ ಹಜಾಮರ ವೆಂಕೋಬಿಯ ಹೆಂಡತಿ ಇಠೋಬಿಯನ್ನು ನೋಡಿದ್ದು; ಸದರಿ ದಿನ
ಏನಾದರೂ ಸಂಭವಿಸಬಹುದೆಂದು ಆ ಕ್ಷಣವೇ ಅಂದುಕೊಂಡು ಶೌಚ ಕಾರ್ಯಕ್ಕೆ ಹೋಗಿದ್ದ. ಅಬ್ಬಬ್ಬಾ ಅಂದರೆ
ಅನಸೂಯಾ ತನ್ನ ಕಪಾಳಕ್ಕೆ ಎರಡು ಬಿಡಬಹುದು! ಇಲ್ಲವೆ ಇತ್ತೀಚಿಗೆ ರಾಜಕೀಯ ಸೇರಿರುವ ಬಾಡಿ ಬಿಲ್ದರ್
ತನ್ನನ್ನಟ್ಟಿಸಿಕೊಂಡು ಬರಬಹುದೆಂದುಕೊಳ್ಳುತ್ತ ಪ್ರಾತರ್ವಿಧಿಗಳನ್ನು ಮುಗಿಸಿದ್ದ. ಸೂರ್ಯಾಸ್ತದ
ನಂತರ ಕಂಟಕದ ಸರಮಾಲೆಯೇ ಆರಂಭವಾಗಿರುವುದು ದುರದೃಷ್ಟಕರ ಸಂಗತಿ.
ತಾಯಿ ಮುಖ ಬಳ್ಳಾರಿ ಬಿಸಲಿಗೆ ತತ್ತರಿಸಿದ ಎಳೆಲತೆಯಂತಾಗಿರುವುದನ್ನು ಕಂಡ. ಮಮ್ಮಲನೆ ಮರುಗಿದ.
ಹೇಳಿದರೆ ಅಶ್ಲೀಲದ ಪಾಪ ಸಂಚಯಕ್ಕೆ ತಾನುಒಳ್ಳೆಯ ಚೀಲ... ಹೇಳಿಯೇ ಬಿಡಬೇಕೆಂದು ನಿರ್ಧರಿಸಿದ.
ಸ್ವಧಾ ಸಮರ್ಪಯಾಮಿ... ತನಗೆ ತಾನು ತರ್ಪಣಕೊಟ್ಟುಕೊಂಡು ಬಾಯನ್ನು ಮೆಲ್ಲಗೆ ತೆರೆದ.
"ಅಮ್ಮಾಽಽ... ಆಣೆಇಟ್ಟು ನನ್ನನ್ನು ಧರ್ಮಸಂಕಟಕ್ಕೆಸಿಲುಕಿಸಿದ ನನ್ನಪ್ರೀತಿಯ ತಾಯೇ... ಇದೋ
ಇಲ್ಲಿ ಚೇ...ಳು... " ಎಂದು ಆ ಚಂದ್ರೋಪರಾಗ ಪರ್ವಣಿ ಪುಣ್ಯಕಾಲದಲ್ಲಿ ಶಾಮನು
ಕೈಯಿಂದ ಸಂಜ್ಞೆ ಮಾಡಿ ತೋರಿಸಿಬಿಟ್ಟನು.
ಸಕಲಗತನುಗತಂ ಶಂಕರಂ ಅಂತ ತನ್ನೆರಡು ಕೈಗಳಿಂದ ಮುಖವನ್ನು ಮುಚ್ಚಿಕೊಂಡುಬಿಟ್ಟ.
ಪ್ರೌಡೋಽಹಂ ಯೌವನಸ್ಥೋ ವಿಷಯ ವಿಷಧರೈಃ ಅಂತ ನಾಚಿ ಕೆಂಪಗಾಗಿದ್ದ ಮುಖವನ್ನು ಬೆಳಕಿನಿಂದ
ಮರೆಮಾಚಿದ.
ಅದನ್ನು ಕೇಳಿದ ತಾಯಿ ಗುರುತ್ವಾಕರ್ಷಣೆ ಕಳೆದುಕೊಂಡಂತಾದಳು. ಅರ್ಧ ನಿಮೀಲಿತ ನೋಟದಿಂದ ಆ ಭಾಗ
ನೋಡಿದಳು. ಆ ಭಾಗದ ಬಗ್ಗೆ ಆಕೆಗೆ ಸಿಟ್ಟು, ದುಃಖ, ಸಂತೋಷ ಒಟ್ಟೊಟ್ಟಿಗೆ ಬಂದವು.
"ಸಿಟ್ಟು!... ತನ್ನನ್ನು ತನ್ನ ಮಗನಿಂದ ದೂರ ಮಾಡುತ್ತಿರುವ ಕಂಕಲಾಡಿತನದ ಜಾಗವದು. ದಿನೇ ದಿನೇ ಮಗ
ಆ ಕಡೆ ಧ್ಯಾನಸ್ಥನಾಗುತ್ತಿರುವನು, ತನ್ನಿಂದ ದ್ವಿದಳ ಧಾನ್ಯದಂತೆ ಬೇರ್ಪಡುತ್ತಿರುವನು. ಎಲ್ಲಾ
ವಿಷಯಾಸಕ್ತಿಗಳ ಕೇಂದ್ರದಂತಿರುವ ಆ ಜಾಗವನ್ನು ತಾನಿದುವರೆಗೆ ನೋಡಿಯೇ ಇಲ್ಲ. ಮಾತೃತ್ವದ
ಪರಮಾಧಿಕಾರದ ಮೇಲೆ ಧಾಳಿ ಮಾಡುವ ಆ ಸ್ವಯಂ ಚಾಲಿತ ಶಕ್ತಿಗೆ ದಿಕ್ಕಾರ!
’ದುಃಖ’ ಎಂಥ ಹುಚ್ಚಪ್ಪನಿದ್ದಾನೆ ತನ್ನ ಪ್ರೀತಿಯ ಮಗ! ಅದನ್ನೂ ತನ್ನಿಂದ ಮರೆಮಾಚುವಷ್ಟು
ಸ್ವಾರ್ಥಿಯಾಗಿರುವನಲ್ಲ! ಅದವನಿಗೆ ಗುಣ, ತಾನು ಗೌಣ ಯಾಕೆ ಹೀಗಾಗ್ತಿದೆ! ತನನೆ ತನ್ನ ಮಗನ
ತ್ರಿಕಾಲ ಸತ್ಯಗಳ ಮೇಲೆ, ದೈಹಿಕ ವಿಘಟನೆಗಳ ಮೂಲ ಸೆಲೆಯ ಬಗ್ಗೆ ತಾಯಿಯಾದ ತನಗೆ
ಅಧಿಕಾರವಿಲ್ಲವೇನು?
’ಸಂತೋಷ’ ಅರೆ! ಮೊನ್ನೆ ಮೊನ್ನೆ ತಾನು ಎತ್ತಿ ಆಡಿಸಿ; ಮೊಲೆಯೂಡಿಸಿ; ಶೌಚವೇ ಮೊದಲಾದ ಸಹಜ
ಕ್ರಿಯೆಗಳನ್ನು ಮಾಡಿಸಿ; ಸಂಬಂದ ವಾಚಕ ಪದ ವಿಶೇಷಣಗಳನ್ನು ಕಲಿಸಿ ಮಾತೃ ಮುಗ್ಧತೆಯ ಋಷ್ಯ ಶೃಂಗ
ತುದಿಯ ಮೇಲೆ ನಿಂತಿದ್ದ ತನಗೆ ಅವನಿಷ್ಟೊಂದು ಬೆಳೆದು ದೊಡ್ಡವನಾಗಿರುವುದರಿಂದಲ್ಲವೇ ಈ ನಾಚಿಕೆ
ಬಿಗುಮಾನಗಳಿತ್ಯಾದಿ! ತಾನು ಗಮನಿಸದಂಥ; ತನ್ನ ಮಾತ್ರುತ್ವದ ಅರಿವಿಗೆ ಬಾರದಿರುವಂಥ ಬೆಳವಣಿಗೆ ಅವನ
ದೇಹದಲ್ಲಿ ಇರುವುದಾದರೂ ಯಾವುದು? ಅದರ ಪೂರ್ವೋತ್ತರ ಅಗತ್ಯಗಳನ್ನು ಪೂರೈಸುವ ಅಧಿಕಾರ
ತನಗಿನ್ನಷ್ಟು ಬೇಗನೆ ದೊರಕುತ್ತಿರುವುದಲ್ಲವೆ!
ಎಷ್ಟೊಂದು ನಾಚಿಕೊಡಿರುವನಲ್ಲ ತನ್ನ ಮಗ, ತಾಯಿಯ ಸಾನ್ನಿಧ್ಯದಲ್ಲೂ ನಾಚಿಕೆ ಏನು?
"ಮಗೂ... ಮುಖವನ್ಯಾಕೆ ಹಾಗೆ ಮುಚ್ಕೊಂಡಿದ್ದೀಯೋ ಹುಚ್ಚಪ್ಪಾ... ಕೈ ತೆಗೆ... ನಿನ್ ಮುಖದ ಹೊಸ
ಭಾವನೆಯನ್ನು ನೋಡೋ ಆಸೆಯಾಗಿದೆ..." ಅಲುಮೇಲಮ್ಮ ಬಲವಂತದಿಂದ ಮುಖದ ಮೇಲಿದ್ದ ಕೈಗಳನ್ನು ತೆಗೆದಳು.
ಅವನಲ್ಲಿ ಒಂದೆರಡು ಕ್ಷಣ ಹಿಂದಿದ್ದ ಗೊಂದಲವಿರಲಿಲ್ಲ. ಮಾತೃತ್ವದ ಗರಿಷ್ಠತೆಗೆ ಅರ್ಪಿಸಿಕೊಂಡಿದ್ದ
ಅವನು ಅವನತಮುಖನಾದ...
ತಾಯಿ ತನ್ನ ಕೈಗಳನ್ನು ಮೇಲಿರಿಸಿದಳು...
ಮೆಲ್ಲಗೆ ನಿಧಾನವಾಗಿ ಕೆಳಗೆ ಸರಿಸಿದಳು.
ಸೃಷ್ಟಿ ಕಲೆಗೆ ಪ್ರಧಾನ ಸ್ವಯಂಚಾಲಿತ ಕೇಂದ್ರಕ್ಕೆ ಕುಟುಕಿರುವ ಚೇಳೇ ನಿನಗೆ ಧಿಕ್ಕಾರ!... ಏನೇನೋ
ಗೊಣಗುತ್ತ ಕಣ್ಣು ಮುಚ್ಚಿದಳು ಅವನು ನಿರಾಕರಿಸಿದರೂ ಕೇಳದೆ ಕೈಗಳನ್ನು ಮತ್ತಷ್ಟು ಕೆಳಗೆ
ಸರಿಸಿದಳು.
ಆ ದರಿದ್ರದ ಹುಡುಗಿ ಅನಸೂಯಳ ಸ್ಪರ್ಶ ಮೈಲಿಗೆಯ ಕಲ್ಪನೆ ಪ್ರಾಯಶ್ಚಿತ್ತವಾಗಿಯೇ ಚೇಳು
ಕುಟುಕಿರಬಹುದೆಂದು ಆ ತಾಯಿ ಗೊಣಗುತ್ತಿರಲು...
ಬೆಂಗಳೂರಿನಲ್ಲಿದ್ದ ರಾಘೂ ಮಾಮನಿಗೆ ಪತ್ರಬರೆಯೋದಕ್ಕೂ ಮೂರು ದಿನ ಮೊಡಲು ಅನಸೂಯಾ ಮಾತಿನಿಂದ
ಸಂಬಂಧ ಹರಕೊಂಡು ಬರೋದೇನೋ ಬಂದುಬಿಟ್ಟಳು. ಅದರ ಸಮಾಧಾನ ಎಂಬುದು ಪುರ್ರನೆ ಹಾರಿ ಹೋಗ ಬಿಡಬೇಕೇ
ಹಾಳಾದ್ದು! ಬದು ಬಿಡೇ ಕಾಲ ಹಿಂಗೇ ಇರೋದಿಲ್ಲ. ಯಾವ ಘಳಿಗೇಲಿ ಏನಾಗ್ತದೋ ಬಲ್ಲೋಯಾರು? ನಾವು ಹೇಳಿ
ಕೇಳಿ ಹೆಣ್ಣು ಮೂಳಗಳು, ಮೂರಾಗೋ ಕಡೆ ಆರಾಗಿ ಬಿಟ್ರೆ ಕನ್ನೀರವ್ವನ ಬಾವೀನೆ ಗತಿ. ಅದೂ ಅಲ್ದೆ
ನಿಮ್ಮಪ್ಪನಿಂದ ಪತ್ರ ಇಲ್ಲ ಸುದ್ದಿ ಇಲ್ಲ... ಅವರೆಲ್ಲಿದ್ದಾರೋ? ಏನು ಮಾಡ್ತಿದಾರೋ? ಹಿಡಿದ ಕೆಲಸ
ಮುಗಿಸ್ಕೊಂಡೇ ಬರುವ ಜಾಯಿಮಾನದವರು. ಹೆಂಡ್ತಿ ಮಕ್ಳು ಗ್ಯಾನ ಬ್ಯಾಡ್ವೇ? ಅವಯಾವಾಗಾದ್ರೂ
ಬರ್ಲಿ... ನಿನ್ ತಲೆ ಮೇಲೆ ನಾಲ್ಕು ಅಕ್ಷತೆ ಕಾಳು ಹಾಕಿ ನಾನು ನನ್ ದಾರಿ ನೋಡ್ಕೋತೀನಿ ನನ್ನ
ಮಾತು ನೀನು ಕೇಳಿದ್ರೆ ತಾನೆ, ಆ ಬಾಂಬ್ರು ಹುಡುಗನ ಚಿಂತೆ ಹಚ್ಚಿಕೊಂಡು ದಿನ ನೂಕಬೇಡಾಂತ ಎಷ್ಟು
ಹೇಳಿದೆ. ನೀನು ಕೇಳಿದ್ಯಾ? ಅಗಿದ್ದು ಆಗಿಹೋಯ್ತು. ಈಗಲಾದ್ರು ಪತ್ರ ಬರೆಯೋದು ಬ್ಯಾಡವೇನು ಎಂದು
ರುಕ್ಕಮ್ಮ ಮಗಿ ಮಳೆ ಅಂಟಿಕೊಂಡಂತೆ ಒಂದೇ ಸಮನೆ ಎರಡು ದಿನಮಾನ ಅಂಟಿಕೊಂಡು ಬಿಟ್ಟಿದ್ದಳು. ಆಕೆಯ
ಮಾತುಗಳಿಗೆಲ್ಲ ಅನಸೂಯ ತಲೆಕೆಡಿಸಿಕೊಳ್ಳಲಿಲ್ಲ.
"ಏನವ್ವಾ ಹಿಂಗಾಡ್ತಿಯಲ್ಲ... ಈಗ ನಿನ್ಗೆ ಕಡಿಮೆ ಅಗಿರೋದಾದ್ರು ಏನು? ನಿಮ್ಗೆ ಮಗ ಅಂದ್ರು ನಾನೆ
ಮಗ್ಳು ಅಂದ್ರೂ ನಾನೇ. ನನ್ನನ್ಯಾಗೋ ಮದ್ವೆ ಮಾಡ್ಕೊಟ್ಟು ನೀನೇನು ಮಾಡಬೇಕೆಂಡಿರುವಿ? ಇಷ್ಟೊಂದು
ಓಡ್ಕೊಂಡಿದ್ದೀನಿ. ಪ್ರಪಂಚಾನು ಅರ್ಥ ಮಾಡ್ಕೊಡದೀನಿ. ನಮ್ ಸಂಸಾರಾನೂ ಅರ್ಥ ಮಾಡ್ಕೊಡದೀನಿ...
ಅಪ್ಪ ಅನ್ನಿಸ್ಕೊಂಡೋನು ಹೇಳ್ದೆ ಕೇಳ್ದೆ ಮನೆಬಿಟ್ಟು ಹೋಗಿದ್ದಾನೆ... ಅಪ್ಪ ಬಂದೇ ಬತಾನೆ... ಬಲಿ
ಬಂದ ಮೇಲೆ ಆತನೇ ನಿಂತು ಮದ್ವೆ ಮಾಡ್ತಾನೆ..." ಎಂದು ಶಾಮನ ಪತ್ರಗಳನ್ನು ಅಡುಗೆ ಮನೆಯ ಯಜ್ಞ
ಕುಂಡಕ್ಕೆ ’ಸಮರ್ಪಯಾಮಿ’ ಮಾಡುತ್ತಾ ಹೇಳಿದಳು.
"ಅಲ್ಲಿವಗೂ?" ಸ್ವಾತಿ ಸ್ಟೋರಿಗೆ ಕೊಡಬೇಕಿದ್ದ ವಯರ್ ಬುಟ್ಟಿಗಳ ಪೈಕಿ ಇಪ್ಪತ್ತನೆಯದು ಮತ್ತು
ಕೊನೆಯದು ಹೆಣೆಯುತ್ತ ಪ್ರಶ್ನಾತ್ಮಕ ಚಿನ್ಹೆ ಇಟ್ಟಳು ರುಕ್ಕಮ್ಮ.
"ನನ್ಯಾವುದಾದರೊಂದು ನೌಕರಿ ನೋಡ್ಕೋತೀನಿ" ಎಂದು ಕೊನೆ ಪತ್ರವನ್ನು ಬೆಂಕಿಗೆಸೆದು
ನಿಟ್ಟುಸಿರುಬಿಟ್ಟಳು ಅನಸೂಯಾ. ವರಲಕ್ಶ್ಮಿ ಫೈನಾನ್ಸ್ ಕಾರ್ಪೊರೇಷನ್ನಿನ ವೆಂಕಟರಾಮು ಬರೊ ತಿಂಗಳು
ಒಂದರಿಂದ ಬಂದು ಹಾಜರಾಗಬಹುದೆಂದು ಹೇಳಿದ್ದ"
"ನೀನು ನೌಕರಿ ಸೇರುವುದು ಬ್ಯಾಡ. ನೀನು ದುಡಿದು ತಂದಿದ್ನ ನಾನು ತಿಂದು ಬದ್ಕೋದೂ ಬ್ಯಾಡ. ನಿನ್
ಮದ್ವೆ ಮಾಡಿ ಮುಗಿಸಿ ನಾನು ನನ್ನ ತವರ್ಮನೆಗೆ ಹೋಗ್ತೀನಿ" ಎಂದು ಕಡ್ಡಿ ಮುರಿದಂತೆ ಹೇಳಿದ್ದಳು.
ತವರೂರಿಗೆ ಬರೋದಾದ್ರೆ ಎಂಟೆಕರೆ ಹೊಲ ಮಾಡಿಸಿ ಕೊಡುವುದಾಗಿ ಚಿಕ್ಕಪ್ಪ ಕಳೆದ ತಿಂಗಳು ಬಂದಿದ್ದಾದ
ಹೇಳಿ ಹೊಗಿದ್ದ.
"ಹಾಗಾದ್ರೆ ಅಪ್ಪ ಬರೋವಗೂ ಕಾಯೋದು ಬ್ಯಾಡಾಂತಿ ಏನು?" ಒಂದು ಕೈಲಿ ಪತ್ರ ಮತ್ತೊಂದು ಕೈಲಿ ಪೆನ್ನು
ಹಿಡಿದು ಕೇಳಿದಳು.
"ಅವು ಅಷ್ಟು ಬೇಗ ಬರಬೌದೆಂದ್ಕೊಂಡಿಲ್ಲ. ಬರೋದು ವರ್ಷಗಟ್ಲೆ ಆಗ್ತದಂತ ಹೇಳೇ ಹೋಗ್ಯಾರ... ನಿನ್
ಮದ್ವೆ ಮಾಡಿ ಮುಗಿಸಿದ್ರೆ ಅವ್ರೂ ಸಂತೋಷ ಪಡ್ತಾರೆ."
ತಾಯಿ ಮಗಳಿಬ್ಬರೂ ಒಂದೇ ಸಲಕ್ಕೆ ನಿಟ್ಟುಸಿರುಬಿಟ್ಟರು.
ಅನಸೂಯಾ ತಾಯಿ ಹೆಸರಿನಲ್ಲಿಯೇ ರಾಘುಗೆ ಪತ್ರ ಬರೆದು ಮುಗಿಸಿದಳು. ಅದನ್ನು ದಬ್ಬಿಗೆ ಹಾಕುವಾಗ
ಶಾಮುಗೆ ಚೇಳು ಕುಟುಕಿದ್ದು ಮರುಕಳಿಸಿತು. ಅದು ತನಗಾದರೂ ಕುಟುಕಬಾರದಾಗಿತ್ತ ಅಂದುಕೊಂಡಳು. ಕವಿ
ಹೃದಯದ ಅವನಿಗೆ ಚೇಳು ಹೊಸ ಅನುಭವ ನೀಡಿರಬಹುದು. ಬರೀ ಇರುವೆಯಿಂದ ಕಚ್ಚಿಸಿಕೊಳ್ಳುತ್ತಾ
ಕೂತಿದ್ದರೆ ಕವಿತೆ ಅರ್ಥವಾಗುವುದಾದರೂ ಹೇಗೆ? ಅವನು ಇರುವೆಯಿಂದಲೂ ಕಚ್ಚಿಸಿಕೊಂಡಿರಲಿಕ್ಕಿಲ್ಲ...
ಜಲಜಾಕ್ಷಿ ನೀಡಿರುವಂಥ ಅನುಭವವನ್ನು ತನ್ನಿಂದ ನೀಡಲಾಗಲಿಲ್ಲ... ಆಕೆಯ ಜಾಯಮಾನ ಆಕೆಯದು; ತನ್ನ
ಜಾಯಮಾನ ತನ್ನದು...
ಶತಪದಿಯಂತೆ ನಡೆಯುತ್ತಿದ್ದ ಶಾಮು ಮತ್ತೆ ಮತ್ತೆ ನೆನಪಾದ. ಅವನ ತಾಯಿ ತನ್ನ ಮಗನನ್ನು ಎತ್ತಿಕೊಂಡೇ
ಓಡಾಡುತ್ತಿರಬಹುದು ಮನೆತುಂಬ. ವೃಶ್ಚಿಕ ಕುಟುಕಿದ್ದರಿಂದ ದೊಡ್ಡದೊಂದು ಕಂಟಕವೇ ಪರಿಹಾರವಾಗಿದೆ
ಎಂದು ಶಾಸ್ತ್ರಿಗಾಳು ಭಾಗಿಸಿ ಗುಣಿಸಿ ಅಭಿಪ್ರಾಯಪಟ್ಟಿರಬಹುದು. ಆದರೆ ಶಾಮು ಎಂಬ ಆದಿಮಾನವನಿಗೆ
ಅದಾವುದೂ ಅರ್ಥವಾಗಲಿಕ್ಕಿಲ್ಲ. ಅಲುಮೇಲಮ್ಮ ಮತ್ತು ಶಾಸ್ತ್ರಿಗಳ ಅಭಿಪ್ರಯಗಳ ಉಡಾವಣೆಯ ಸ್ತಳ
ಮಾತ್ರ ಅವನು. ಡೋಲಾಯ ಮನಸ್ಸಿನ ಅವನನ್ನು ತಿದ್ದು ತಿಳುವಳಿಕೆ ತನಗೆ ಮಾತ್ರ ಇತ್ತು. ಕೈ ಹಿಡಿಯುವ
ಯಾವ ವಧುವೂ ಅವನನ್ನು ತಿದ್ದುವುದು ಸಾಧ್ಯವಿಲ್ಲ... ಹೀಗೆ ಏನೇನೋ ಯೋಚಿಸುತ್ತ ಬೀದಿಯ
ಕೊನೆಯಲ್ಲಿ... ಆರು ಬೆರಳು ವಂಶದ ಶೆಟ್ಟಿ ಅಂಗಡಿಯ ಕಂಭಕಿದ್ದ ಅಂಚೆ ಡಬ್ಬಿಯಲ್ಲಿ ಪತ್ರ ಹಾಕಿ
ಬರುವಾಗ ಕೆಲವು ಪಡ್ಡೆಗಳು ತನ್ನ ಕಡೆಗೇ ಪಿಳಿಪಿಳಿ ನೋಡುತ್ತಿರುವುದನ್ನು ಗಮನಿಸಿದಳು.
ಒಂದಿಷ್ಟು ತರಕಾರಿ ಕೊಂಡುಕೊಂಡು ಹೋದರಾಯಿತುಅಂತ ಎಡರಳ್ಳಿ ಸಣ್ಣೀರವ್ವನ ಬಳಿಗೆ ಹೋಗುತ್ತಿರುವಾಗ
ಶಾಮು ತನ್ನ ತಾತನ ಜೊತೆ ಎಲ್ಲಿಗೋ ಹೊರಟಿರುವುದು ಕಂಡಿತು. ಅವರಿಬ್ಬರು ವಿಶೇಷ ಉಡುಪಿನಲ್ಲಿದ್ದರು.
ಬಹುಶಃ ಯಾವುದಾದರೂ ವೈದಿಕಕ್ಕೊ, ಶ್ರಾದ್ಧಕ್ಕೋ ಹೊರಟಂತಿತ್ತು. ವೈದಿಕದ ಉಡುಪಿನಲ್ಲಿ ಶಾಮು
ಶ್ರೀಕೃಷ್ನ ದೇವರಾಯನ ಅಪ್ಪಾಜಿ ತಿಮ್ಮರಸನಂತೆ ಕಾಣುತ್ತಿದ್ದ. ನೋವು ಕಡಿಮೆಯಾದಂತಿಲ್ಲ. ಕಾಲು
ಸ್ವಲ್ಪ ಕಿಸಿದು ಹಾಕುತ್ತಿರುವನು.
ಅನಸೂಯಳನ್ನು ನೋಡಿದ ಕೂಡಲೆ ಮುಂಗುಸಿ ಕಂಡ ಹಾವಿನಂತೆ ತನ್ನ ತಾತನ ನೆರಳಿನಲ್ಲಿ ಅವಿತುಕೊಂಡನು.
ಅವನ ಆ ಅವಸ್ಥೆ ನೋಡಿ ಅನಸೂಯಾಳಿಗೆ ನಗು ಬಂತು.
ಆಕೆ ಕಾಯಿಪಲ್ಯೆ ಖರೀದಿಸಿದ ಸಣ್ಣಿರವ್ವನೂ ಹನ್ನೊಂದಕ್ಕೆ ಮದುವೆಯಾಗಿ ಹನ್ನೆರಡಕ್ಕೆ ಮೈನೆರತು
ಹದಿನಾಲ್ಕನೇ ವಯಸ್ಸಿಗೊಂದು, ಹದಿನೈದನೇ ವಯಸ್ಸಿಗೊಂದರಂತೆ ಮಡಿಲು ತುಂಬಿಕೊಂಡು ಹದಿನಾರಕ್ಕೆ ರಂಡೆ
ಪದವಿ ಪಡೆದಂಥಾಕೆಯೇ. ಸುಮಾರು ಐವತ್ತು ವರ್ಷ ಆಕೆಗೆ. ಅನಸೂಯಳ ಮೇಲೆ ಪ್ರೀತಿ. ಒಳ್ಳೇದು
ಕೆಟ್ಟದ್ದು ವಿಚಾರಿಸಿ ವಿಚಾರಿಸದೆ ಎಂದೂ ಕಳಿಸಿದಾಕೆಯಲ್ಲ.
ಆಗಲೂ ಸಹ ವೀರವನಿತೆಯಂತೆ ಮಾತಾಡಿಸಿದಳು.
ಇಂಥವರಿಂದಲೇ ಜೀವನೋತ್ಸಾಹ ಪಡೆಯುವುದರಲ್ಲಿರುವ ದೈನ್ಯತೆಯನ್ನು ಅರ್ಥ
ಮಾಡಿಕೊಳ್ಳುತ್ತ ಅನಸೂಯ ಮನೆಗೆ ಮರಳಿದಳು.
"ಬಾ ತಾಯೀ... ಬಾರಮ್ಮಾ... ಕಾಯಿಪಲ್ಯೆ ತರಾಕ ಹೋಗಿದ್ದೇನಮ್ಮಾ; ಏನು ಕಾಲ ಬಂದೈತೇನೋ? ಏನು
ತಗೊಂಡ್ರು ದುಬಾರಿ, ಕೊಳ್ಳಂಗಿಲ್ಲ ಬಿಡಂಗಿಲ್ಲ... ಹೇಗೋ ಒಂದ್ರೀತಿ ಬದುಕಬೇಕಲ್ಲ...
ಉಪಾಸಯಿಲಿಕ್ಕಾಗ್ತದೇನು? ನಾನು ನೋಡಮ್ಮಾ ಬೀಡಿ, ಚಾ, ಕಾಫಿ ಎಲ್ಲ ಬಿಟ್ಬಿಟ್ಟೀನಿ. ಮನೇಲಿ
ಯಾರಾದ್ರು ಬಂದ್ರೆ ಅವ್ರಿಗೆ ಮಾತ್ರ ಚಾ ಮಾಡ್ತೀನಿ ಅಷ್ಟೆ. ಹಾಸ್ಗೆ ಇದ್ದಷ್ಟು ಕಾಲು ಚಾಚಬೇಕು
ನೋಡು. ಕಾಲ ಧರ್ಮ" ಮನೆ ಮುಂದುಗಡೆ ವರಾಂಡದಲ್ಲಿ ಹಾಕಿದ್ದ ಕುರ್ಚಿ ಮೇಲೆ ಕೂತು ತಲೆಬಾಗಿಲ ಮೇಲೆ
ಕಣ್ಣು ಕೋರೈಸುತ್ತಿದ್ದ ಬಳ್ಳಾರಿ ಕನಕದುರ್ಗಾ, ಹುಲಿಗೆಮ್ಮ, ಸವದತ್ತಿ ಎಲ್ಲಮ್ಮ, ಮೈಸೂರಿನ
ಚಾಮುಂಡಿ ಇವೇ ಮೊದಲಾದ ಎದ್ದು ಬರುತ್ತಾರೆನ್ನುವಂತಿದ್ದ ಶಕ್ತಿ ದೇವತೆಗಳ ಫೋಟೋಗಳ ಕಡೆಗೊಮ್ಮೆ,
ಆತಂಕವನ್ನು ಮುಖದಲ್ಲಿ ಪ್ರಕಟಿಸುತ್ತಿದ್ದ ರುಕ್ಕಮ್ಮನ ಕಡೆಗೊಮ್ಮೆ ನೋಡುತ್ತ ಮಾತುಮಾತಿಗೊಮ್ಮೆ
ನಿಟ್ಟುಸಿರು ಬಿಡುತ್ತ ತನ್ನ ಪಾಡಿಗೆ ತಾನು ಪ್ರಪಂಚವನ್ನೇ ತಲೆಮೇಲೆ ಹೊತ್ತುಕೊಂಡವನಂತೆ
ಮಾತಾಡುತ್ತಿದ್ದ ಕಸೆಟ್ಟಿ ಚಂದ್ರಪ್ಪನ ಕಡೆಗೊಮ್ಮೆ ತೀಕ್ಷಣವಾಗಿ ನೋಡುತ್ತ ಮನೆ ಒಳಗಡೆ ಹೋದಳು
ಅನಸೂಯಾ.
ಗಂಡ ರುದ್ರನಯಕನಿಂದ ಪತ್ರ ಬಂತೇ ಎನ್ನುವುದರ ಬಗ್ಗೆ; ಮಗಳು ಅನಸುಯಳ ಮದುವೆ ಬಗ್ಗೆ; ಒಂಟಿ ಹೆಂಗಸು
ಹೇಗೆ ಜೀವನ ಸಾಗಿಸುವಿ ಎಂಬುದರ ಬಗ್ಗೆ; ಪುರುಷ ಪ್ರಧಾನ ಸಮಾಜದಲ್ಲಿ ಕಾಲ ಸೂಕ್ಷ್ಮವಾಗಿದೆ
ಎನ್ನುವುದರ ಬಗ್ಗೆ; ತಾನು ದಿನಪತ್ರಿಗೆಗಳಲ್ಲಿ ಓದಿರುವ ಅಹಿತಕರ ಘಟನೆಗಳ ಬಗ್ಗೆ; ಬದಲಾಗುತ್ತಿರುವ
ಹೊಸ ರಾಜಕೀಯ ವಾತಾವರಣದ ಬಗ್ಗೆ; ಋತುಮಾನಗಳು ಅದುಲುಬದಲಾಗಿರುವ ಬಗ್ಗೆ; ಋತುಮಾನಗಳು ಹೊತ್ತು
ಗೊತ್ತಿಲ್ಲದೆ ಒಂದೇ ಸಮನೆ ಬೀಸುತ್ತಿರುವಬಗ್ಗೆ; ಹೊಸದಾಗಿ ರಾಜಕೀಯ ಪ್ರವೇಶ ಮಾಡಿ ಖಾದಿ ಸೀರೆ
ಉಟ್ಟುಕೊಂಡು ಮಿಂಚುತ್ತಿರುವ ಗೊಬ್ಬರದಂಗಡಿ ಗುರುಬಸಪ್ಪನ ಮಗಳು ಜಲಜಾಕ್ಷಿ ಬಗ್ಗೆ; ದೇಶವನ್ನೇ
ಗಡಗಡ ನಡುಗಿಸುತ್ತಿರುವ ಇಂದಿರಾಗಾಂಧಿ ಬಗ್ಗೆ ಚಂದ್ರಪ್ಪ ತನ್ನ ಪಾಡಿಗೆ ತಾನು
ಮಾತಾಡುತ್ತಿದ್ದುದು; ಪ್ರತಿಯೊಂದು ಮಾತಿಗೆ ಅನ್ಯಮನಸ್ಕಳಾಗಿ ತಾಯಿ ರುಕ್ಕಮ್ಮ
ಹೂಂಗುಟ್ಟುತ್ತಿದ್ದುದೆಲ್ಲವನ್ನು ಕೇಳಿಸಿಕೊಳ್ಳುತ್ತ ಅಡುಗೆಮನೆಯೊಳಗೆ ಅಡುಗೆ ಮಾಡತೊಡಗಿದ್ದಳು
ಅನಸೂಯ.
ತಮ್ಮ ಮನೆಯ ಮಾಲಿಕಿನ್ರವರ ಜೀವ ತಿನ್ನುತ್ತಿರುವ ಈ ಖಳನಿಗೆ ತಕ್ಕ ಶಾಸ್ತಿ ಮಾಡಬೇಕೆಂಬ
ಉದ್ದೇಶದಿಂದ ಮೂಷಕ ದಂಪತಿಗಳು ಕಿರ್ಕಿರ್ ಸದ್ದು ಮಾಡುತ್ತ ಅವನ ನೆತ್ತಿ ಮೇಲಿದ್ದ ಜಂತಿ ಮೇಲೆ
ಕೂತು ಆ ಚಕ್ರಬಡ್ಡಿ ಚಂಡಾಲ ಕಿಂಕರನ ಕಡೆ ತೀಕ್ಷ್ಣವಾಗಿ ನೋಡಿದವು. ಅವನು ಆಕಳಿಕೆ ಬಂದು ಮುಖ
ಎತ್ತಿ ಬಾಯಿ ತೆರೆದೊಡನೆ ಅವು ತಮ್ಮ ಎಂಟು ಕಾಲುಗಳಿಂದ ಪುತಪುತನೆ ನುಸಿಮಣ್ಣನ್ನುದುರಿಸಿದವು. ಅದು
ಸೀದ ಅವನ ಕಣ್ಣು, ಬಾಯಿಗೆ ಬಿತ್ತು. ಅವನು ಕಂಗಾಲಾಗಿ ಕಣ್ಣುಜ್ಜಿಕೊಳ್ಳುತ್ತ ಕೊಕ್ಕೊಕ್
ಕೆಮ್ಮುತ್ತ ಇಲಿಗಳನ್ನು ಶಪಿಸುತ್ತ ಎದ್ದು ನಿಂತನು.
"ತಂಗೀ... ರುಕ್ಕಮ್ಮಾ ನಿನ್ ಕಷ್ಟ ನೋಡಿ ಒತ್ತಾಯ ಮಾಡೋಕೆ ಮನ್ಸು ಒಪ್ತಿಲ್ಲಮ್ಮಾ ಬಾಡಿಗೆ ಬಾಕಿ
ಹಾಳೂಮೂಳೂ ವಸೂಲುಮಾಡ್ಕೊಂಡ್ ಹೋದ್ರೇನೇ ಸೊಸಿ ಕೂಳು ಹಾಕೋದಮ್ಮಾ. ಬಂಗಾದಂತ ಮಗ್ನಿಗೆ ಅಂಥೋಳ್ನ
ತಂದಿರೋದು ನನ್ ಕರ್ಮ ಈಗ ಹೋಗಿ ಏನೋ ಒಂದು ಹೇಳಿ ಸರಿ ಮಾಡ್ತೀನಿ. ಮುಂದಿನ್ತಿಂಗ್ಳು ನನ್ಗೊಂದು
ದಾರಿ ತೋಸಿಬಿಡಮ್ಮಾ ಇನ್ನೂ ನಾನು ಚಪ್ರದಳ್ಳೀಗೆ ನಡ್ಕೋತ ಹೋಗಿ ಕುದಿರೆ ಕಾಲಿನ ಕಾಳಿಂಗಾಚಾರಿಯ
ಕಾಲು ಹಿಡಕೋಳ್ಳೋದೈತಿ..." ಎಂದು ಕಸೆಟ್ಟಿ ಚಂದ್ರಪ್ಪ ಸಂಸಾರವೆಂಬ ಗೂಲಿ
ಗುಡ್ಡವನ್ನು ಬೆನ್ನ ಮೇಲಿಟ್ಟುಕೊಂಡಿರುವವನಂತೆ ಭಾರವಾದ ಹೆಜ್ಜೆ ಹಾಕುತ್ತ ಹೋದ ಕೂಡಲೆ ತಾಯಿ
ರುಕ್ಕಮ್ಮ ನಿಡಿದಾದ ಉಸಿರು ಬಿಟ್ಟಿದ್ದು ಹಿತ್ತಲಲ್ಲಿ ರಾಶಿರಾಶಿ ಪಾತ್ರೆಗಳನ್ನು ಹಾಕಿಕೊಂಡು
ಕೂತಿದ್ದ ಅನಸೂಯಳಿಗೆ ಕೇಳಿಸಿತು.
ರಾತ್ರಿ ತಾಯಿ ಮಕ್ಕಳಿಬ್ಬರೂ ನಿದ್ದೆ ಬಾರದೆ ತುಂಬ ಹೊತ್ತಿನವರೆಗೆ ಒದ್ದಾಡಿದರು. ಪರಸ್ಪರ
ಹೇಳಿಕೊಳ್ಳುವಷ್ಟು ಸಾವಿರಾರು ಸಂಗತಿಗಳು ಅವರಿಬ್ಬರ ಹೃದಯಗಳಲ್ಲಿ ಕತಕತನೆ ಕುದಿಯುತ್ತಿದ್ದವು.
ಹೇಳಿಕೊಲ್ಲುವುದಕ್ಕಿಂತ ಮೌನವೇ ಹೆಚ್ಚು ಸೂಕ್ತವೆಂದುಕೊಂಡರು. ಮಾತಾಡಿಕೊಂಡಲ್ಲಿ ಲಘು ಜಗಳವಾಗುವ
ಸಾಧ್ಯತೆ ಇತ್ತು. ತಾಯಿಗೆ ಬೆನ್ನು ಮಾಡಿ ಮಗಳು ಬಲಗಡೆ ಕಿಟಕಿ ಕಡೆ ಮುಖ ಮಾಡಿ ಪಿಳಿಪಿಳಿ ಕಣ್ಣು
ಬಿಡುತ್ತಿದ್ದುದಕ್ಕೆ ಕಾರಣ ಇಲ್ಲದಿಲ್ಲ.
ಆ ಕಿಟಕಿಗೆ ಕೆಲವು ಫೂಟುಗಳ ದೂರದಲ್ಲಿಯೇ ಶಾಸ್ತ್ರಿಗಳ ಮನೆ ಇರುವುದಷ್ಟೆ. ಆ ಕಡೆಯಿಂದ ಹೌದೋ
ಅಲ್ಲವೋ ಅನ್ನುವಂತೆ ಶಾಸ್ತ್ರಿಗಳ ಮನೆ ಕಡೆಯಿಂದ ಮಾತಾಡುತ್ತಿರುವ ಧ್ವನಿಯನ್ನು ಕರಾರುವಾಕ್ಕಾಗಿ
ಊಹಿಸುವುದು ಕಷ್ಟಸಾಧ್ಯವಾಗಿತ್ತು. ಅಲ್ಲಿ ಮಾತಾಡುತ್ತಿರುವವರು ಯಾರು? ಅವರೇನು
ಮಾತಾಡುತ್ತಿರಬಹುದು? ಯಾವುದರ ಬಗ್ಗೆ ಮಾತಾಡುತ್ತಿರಬಹುದು? ಎಂಬಂಥ ಕೆಲವು ಸಂದೇಹಗಳೇ ಆಕೆಯನ್ನು
ನಿದ್ದೆ ಮಾಡಲು ಬಿಡಲಿಲ್ಲ.
ಎಲೈ ಸಂದೇಹಗಳೇ... ಇತ್ತ ಕಡೆ ಗಮನ ಕೊಡಿ. ಇದು ರುದ್ರನಾಯಕನ ಮಗಳು ಅನಸುಯಾ ಎಂಬ ಕನ್ಯಾಮಣಿ
ಮಾಡುತ್ತಿರುವ ಪ್ರಾಚಾರ, ನೀವ್ಯಾಕೆ ಹೀಗೆ ಹೊತ್ತು ಗೊತ್ತಿಲ್ಲದೆ ಬಂದು ಪೀಡಿಸುತ್ತಿರುವಿರಿ.
ಮಾಡಲಿಕ್ಕೆ ಬೇರೆ ಕೆಲಸವಿಲ್ಲವೇನು ನಿಮಗೆ? ಕೆಲವು ತಾಸುಗಳ ಹಿಂದೆಯಷ್ಟೇ ನಮ್ಮ ನಾಯಕಿ ಶಾಮನೆಂಬ
ಲಂಗೋಟಿಯ ಪ್ರತಿಯೊಂದು ಅವಶೇಷಗಳನ್ನು ಅಗ್ನಿಗೆ ತರ್ಪಣ ಕೊಟ್ಟಾಕ್ಷಣವೇ ಕುಂ. ವೀರಭದ್ರಪ್ಪನೆಂಬ
ಲಿಪಿಕಾರ ಬರೆಯುತ್ತಿರುವ "ಶಾಮಣ್ಣ" ಎಂಬ ಕಾದಂಬರಿಯ ಒಂದು ಪ್ರಮುಖ ಭಾಗ ಮುಗಿದಂತೆಯೇ ಲೆಕ್ಕ...
ಆದ್ದರಿಂದ ನೀವು ಸಮಯ ಪ್ರಜ್ಞೆ ಇಲ್ಲದೆ ಟೊಂಗುಟುಸುಕು ಅಂತ ಏನೆಲ್ಲ ನೆನಪು ಮಾಡಿ ನಮ್ಮ ಕಥಾ
ನಾಯಕಿಗೆ ತೊಂದರೆ ಕೊಡೋದ್ಯಾಕೆ?... ನಿಮ್ಮಿಂದಾಗಿಯೇ ಈಕೆ ಸರಿಯಾಗಿ ನಿದ್ದೆ ಮಾಡುತ್ತಿಲ್ಲ,
ಹೊಟ್ಟೆ ತುಂಬ ಊಟ ಮಾಡುತ್ತಿಲ್ಲ. ತನ್ನ ಬಗ್ಗೆಯೇ ತನಗೆ ಖಬರಿಲ್ಲ... ಈ ಯುಕ್ತ ವಯಸ್ಸಿನಲ್ಲಿ
ಹೊತ್ತಿಗೆ ಸರಿಯಾಗಿ ಊಟ ನಿದ್ರೆ ಮಾಡುತ್ತಿದ್ದರೇನೆ ಮೈಕೈ ತುಂಬಿಕೊಂಡು ಚೆನ್ನಾಗಿರ್ತಾರೆ,
ಇಲ್ಲಾಂದ್ರೆ ಇಲ್ಲ... ದಯವಿಟ್ಟು ನೀವೆಲ್ಲ ಹೀಗೆ ತೊಂದರೆ ಕೊಡದೆ ಆಕೆ ಪಾಡಿಗೆ ಆಕೆಯನ್ನು
ಬಿಟ್ಟುಬಿಡಿ...
ತನ್ನನ್ನು ಹಿತವಾಗಿ ನೇವರಿಸುತ್ತಿದ್ದ ಕೈಯನ್ನು ಮೃದವಾಗಿ ನೆಕ್ಕುತ್ತ ಬೆಕ್ಕು ಒಳಗೊಳಗೇ ಗೊರಗೊರ
ಸದ್ದು ಮಾಡುತ್ತ ಸಂದೇಹಗಳಿಗೆ ವಿನಂತಿಸಿಕೊಂಡಿತು. "ಎಲೈ ಮಾರ್ಜಾಲವೇ ಆಕೆ ಅಲ್ಲೇ ಸ್ವಲ್ಪ
ಸ್ಪರ್ಶಿಸಿದಾಕ್ಷಣ ಹಿಂದು ಮುಂದೆ ನೋಡದೆ ಆಕೆ ಪರ ವಕಾಲತ್ತು ವಹಿಸಿ ಮಾತನಾಡುತ್ತಿರುವೆಯಲ್ಲ!...
ಆಕೆ ಸ್ವಲ್ಪ ಮುಟ್ಟಿದ್ರೇನೆ ನೀನು ರೋಮಾಂಚನ ಪಡುತ್ತಿರಬೇಕಾದರೆ ಮುಟ್ಟುತ್ತ
ಮುಟ್ಟಿಸಿಕೊಳ್ಳುತ್ತಲೇ ಬೆಳವಣಿಗೆಯ ಒಂದು ಹಂತ ತಲುಪಿರುವ ಆ ಶಾಮನ ಸ್ಥಿತಿ ಹೇಗಿರಬೇಡ? ಈ ನಿನ್ನ
ಕಥಾ ನಾಯಕಿಯ ಪರಿಸ್ಥಿತಿ ಹೇಗಿರಬೇಡ! ಸ್ತ್ರೀಯ ಸಮಸ್ತ ರೂಪ ವೈವಿಧ್ಯತೆಯನ್ನು ಶಾಮು ತನ್ನ
ತಾಯಿಯಲ್ಲಿ
ಕಂಡುಕೊಳ್ಳುತ್ತಿರುವುದರಿಂದಾಗಿಯೇ ಸಂದರ್ಭ ಬಿಗಡಾಯಿಸಿರುವುದು. ಅವನು ಪರಿಸ್ಥಿತಿಯ ಕೂಸು ಮಾತ್ರ.
ಅವನೂ ಈಗ ತಮ್ಮ ಮನೆಯಲ್ಲಿ ಗಾಢ ನಿದ್ದೆ ಮಾಡುತ್ತಿಲ್ಲ... ಅವನೂ ತನ್ನ ಕಣ್ಣುಗಳನ್ನು ಪಿಳಿಪಿಳಿ
ತೆರೆದು ಈ ಕಡೆ ನೋಡುತ್ತಿದ್ದಾನೆ. ಅಡಿಗಡಿಗೆ ನಿಟ್ಟುಸಿರು ಬಿಡ್ತಿದಾನೆ. ಒಂದು ನಿಮಿಷದಲ್ಲಿ ಐದು
ಸಾರಿ ಮಗ್ಗಲು ಬದಲಾಯಿತ್ತಿದ್ದಾನೆ. ಪರಿಸ್ಥಿತಿ ಬಿಗಡಾಯಿಸಲು ಅವನು ಇಷ್ಟಪಡೊ ವ್ಯಕ್ತಿಯಲ್ಲ.
ಯೋಚಿಸುವುದಷ್ಟೇ ಗೊತ್ತವಗೆ, ನಿರ್ಣಯ ತಗೋಳಿಕ್ಕರಿಯನು. ಅವತ್ತು ಏನೋ ಹೆಳಲಿದ್ದ. ಮೊದಲಿಗೆ
ರಾಜಕಾರಣಿ ವೇಷ ಧರಿಸಿದ್ದ ಜಲಜಾಕ್ಷಿ ಕಂಡು ಧೃತಿಯನ್ನು ಮುಕ್ಕಾಲು ಭಾಗ ಕೆಡೆಸಿದರೆ ಚೇಳು
ಕುಟುಕುವುದರ ಮೂಲಕ ಧೃತಿಯ ಕಾಲು ಭಾಗವನ್ನೂ ಕೆಡೆಸಿಬಿಟ್ಟಿತು. ತಾಯಿಯ ಬಳಿಯಂತೂ ಅವನು ಯಾಕಾದ್ರೂ
ಚೇಳು ಕಡಿಸಿಕೊಂಡು ಬಿಟ್ಟೆನೋ ಎಂದುಕೊಂದುಬಿಟ್ಟ. ಇಷ್ಟದರೂ ಅವನು ಎಚ್ಚರಗೊಂಡಿದ್ದಾನೆ. ದೂರ
ಸಂವೇದಿ ಉಪಗ್ರಹದಂಥ ತನ್ನ ಮನಸ್ಸು ಈ ಕಡೆ ಉಡಾಯಿಸಿದ್ದಾನೆ. ಅಲ್ಲದೆ ಆಪ್ತ ಮಂತ್ರಾಲೋಚನಾ ಗೃಹದ
ಕಡೆಗೆ ಪಂಚೇದ್ರಿಯಗಳನ್ನು ಅಟ್ಟಿರುವ ಶಾಮು ತುಂಬ ಒಳ್ಳೆಯವನು ಕಣಪ್ಪಾ ಮಾರ್ಜಾಲವೇ?" ಎಂದು
ಸಂದೇಹಗಳು ಪಟಪಟ ನುಡಿಯೋದನ್ನು ನುಡಿದು ತಮ್ಮ ಕೆಲಸಕ್ಕೆ ತಾವು ಹೊರಟು ಹೋದವು.
ಅದೆಲ್ಲವನ್ನು ಕೇಳಿಸಿಕೊಂಡು ಮಾರ್ಜಾಲ ಚಿಂತೆಗೀಡಾಯಿತು. ಮುಂಗಾಲುಗಳಿಂದ ಮುಖ ಕೆರೆದುಕೊಂಡಿತು.
ನಾಲಿಗೆಯಿಂದ ಮುಂಗಾಲುಗಲನ್ನು ನೇವರಿಸಿಕೊಂದಿತು. ನಂತರ ತನ್ನ ಮೂತಿಯನ್ನು ಅನಸೂಯಳ ಬಿಸಿಬಿಸಿ
ಮುಖಕ್ಕೆ ಹತ್ತಿರ ಒಯ್ದು ಮೂಸಿತು. ಆಕೆಯ ಫಳಫಳ ಹೊಳೆವ ಕಣ್ಣುಗಳನ್ನು ನೋಡಿತು.
"ಮಲಿಕ್ಕಳ್ಳೇ ನಮ್ಮವ್ವ... ಹಿಂಗ್ಯಾಕೆ ಚಿಂತೆ ಮಾಡಲಾಕತ್ತಿ... ಬಂಗಾರದ ಗೊಂಬೆಯಂತಿರೋ
ನೀನೆಲ್ಲಿ; ಅರಗಿನ ಗೊಂಬೆಯಂಗಿರೋ ಅವನೆಲ್ಲಿ... ಸಂಸ್ಕೃತಕಲ್ತುಕೊಂಡಿರೋರು ರೌಡಿಗಳಷ್ಟು
ಅಪಾಯಕಾರಿಯಲ್ಲ... ಸುಮ್ನೆ ನಿದ್ದೆ ಮಾಡು, ಆಗ್ಲೆ ಶಾನೆ ಹೊಟ್ಟಾಗೈತೆ" ಎಂದು ಅರ್ಥ ಬರುವಂತೆ
ಮಾರ್ಜಾಲ ಮ್ಯಾಂಗುಟ್ಟಿತು. ಅದರ ಅಂತರಂಗವನ್ನು ಅರ್ಥಮಾಡಿಕೊಂಡವಳಂತೆ ಅನಸೂಯ ಅದನ್ನು ಸ್ತನಗಳಿಗೆ
ಅಪ್ಪಿಗೊಂಡಳು. ಮಾರ್ಜಾಲಕ್ಕೆ ’ಭೋ’ ಖುಷಿಯಾಯಿತು. ಅದು ಅದರ ಪ್ರಾಚೀನ ಆಸೆಯಾಗಿತ್ತು ಕೂಡ.
ಆಕೆಯ ಹೃದಯ ಭಾಗಕ್ಕಂಟಿಸಿದ್ದ ತನ್ನ ಮೈಯಿಂದ ಅದೇನನ್ನು ಹೀರಿಕೊಂಡಿತೋ ಏನೋ ಅದನ್ನು ತಾನು ಹೇಗೆ
ಅರ್ಥಮಾಡಿಕೊಂಡಿತೋ ಏನೋ...
"ನೀನೇನೂ ಚಿಂತೆ ಮಾಡಬೇಡ... ಇಷ್ಟೊತ್ತಿನಾಗ ಆ ಶಾಸ್ತ್ರಿಗಳ ಮನ್ಯಾಗ ಏನು ಗುಸುಗುಸು
ನಡೆಯಲಾಕತ್ತೈತಿ, ನೋಡ್ಕೊಂಡು ಬತೀನಿ" ಎಂದು ಮುಂತಾಗಿ ಮ್ಯಾವ್ ಗುಟ್ಟಿ ‘ಬಿಡೇ ಬಿಡೇ’ ಎಂದು
ಬಿಡಿಸಿಕೊಂಡು ‘ಡಣ್’ ಅಂತ ಸೀದ ಕಿಟಿಕಿಗೆ ‘ಹೈಜಂಪ್’ ಮಾಡಿಬಿಟ್ಟಿತು. ಅಲ್ಲಿಂದ ಶಾಸ್ತ್ರಿಗಳ
ಬೃಂದಾವನದ ಕಡೆ ಒಂದು ವಿಹಂಗಮ ನೋಟ ಬೀರಿತು. ಚರಾಚರಕ್ಕೆ ಕೇಳಿಸುವಂತೆ ಅದು
ಮ್ಯಾವ್ಗುಟ್ಟಿದ್ದಕ್ಕೆ ಕಾರಣ ಇಲ್ಲದಿಲ್ಲ. ಅದು ಹೇಳಿ ಕೇಳಿ ಗಂಡು. ಸಸ್ಯಾಹಾರಿ ಎಂಬ
ಶೀತವಲಯವನ್ನೂ; ಮಾಂಸಾಹಾರಿ ಎಂಬ ಉಷ್ಣವಲಯವನ್ನೂ ಒಟ್ಟಿಗೆ ನಿಭಾಯಿಸುತ್ತಲೇ ಸಮಶೀತೋಷ್ಣ
ಜಾಯಮಾನವನ್ನು ಮೈಗುಡಿಸಿಕೊಂಡಿರುವ ಅದು ಆ ಕೇರಿಗೆ ಮೈಗೂಡಿಸಿಕೊಂಡಿರುವ ಜೋಕುಮಾರ ಸ್ವಾಮಿ. ಅದರ
ಸ್ಟೈಲಿಗೆ ಮರುಳಾಗಿ ಕೋಮಟಿಗರ ಮನೆಗಳಿಂದ ಬರುವವೆಷ್ಟೋ ಬಡಾವಣೆ ಏರಿಯಾಗಳಿಂದ ಬರುವವೆಷ್ಟೋ.
ಆಫೀಸರ್ಸ್ ಚಾಯ್ಸ್ಗಳು ಬರುವವೆಷ್ಟೋ.
ಒಂದೊಂದಾಗಿ ಬಂದವುಗಳನ್ನು ಹೇಗೋ ಸರಿ ಮಾಡಿ ಕಳಿಸುತ್ತಿದ್ದುಂಟು. ಆದರೆ ಎಲ್ಲಾ ಕಡೆಯವು ಒಟ್ಟಿಗೆ
ಸೇರಿಬಿಟ್ಟರೇನು ಸಾಧ್ಯ?... ಅವೆಲ್ಲಿ ಕೇವಲ ಹೆಣ್ಣುಗಳಲ್ಲ... ಇತಿಹಾಸ ಪುಟ ಸೇರಿರುವ ವೀರ
ವನಿತೆಯರೆಲ್ಲ ಬೆಕ್ಕಿನ ರೂಪ ತಳೆದಿರುವಂತೆ ಭಾಸವಾಗುವುವು. ಸಾಮೂಹಿಕವಾಗಿ ರೇಪ್ ಮಾಡಲರಿಯದಂಥ
ಹೇಳಿಕೇಳಿ ಚತುಷ್ಪಾದಿಗಳವು. ಪುರುಷ ರತ್ನವಶ ಪಡೆಸಿಕೊಳ್ಳಲು ಪರಸ್ಪರ ಕಚ್ಚಾಡದೆ ವಿಧಿ ಇಲ್ಲ.
ಮ್ಯಾವ್ ಎನ್ನುವುದು ಮ್ರಾಂಬ್ವುಽಽ ಎಂದು ಆಗುತ್ತಿತ್ತು. ಅದರ ಮೇಲಿದು; ಇದರ ಮೇಲದು; ಇವುಗಳ ಮೇಲೆ
ಅವು; ಅವುಗಳ ಮೇಲಿವು; ಗಬಕ್ಕನೆ ಬಿದ್ದು; ಸಮಸ್ತ ಯುದ್ಧಗಳ; ಪ್ರಾಣಿಗಳ ಶಬ್ದಗಳ ಗೊಂಡಾರಣ್ಯವನ್ನು
ಸೃಷ್ಟಿಸಿ ಇಡೀ ಓಣಿಗೆ ಕೇಳರಿಯದ ತಲೆನೋವನ್ನುಂಟು ಮಾಡಿ ಬಿಡುತ್ತಿದ್ದವು. ಕೇರಿಯ ಅಥಿರಥ
ಮಹಾರಥರನ್ನೂ ಅವು ಕೇರು ಮಾಡುತ್ತಿರಲಿಲ್ಲ.
ಇದ್ರಂಗೆ ಮನುಷ್ಯೋರೂ ಲವ್ ಮಾಡಿಬಿಟ್ಟಿದ್ರೆ ಈ ಪ್ರಪಂಚೇನಾಗ್ತಿತ್ತು ಅಂತಲೋ!
ಲವ್ ಮಾಡೋದ್ನ ಬೆಕ್ಕುಗಳಿಂದ ನೋಡಿ ಕಲ್ತುಕೋಬೇಕು ಅಂತಲೋ
ಜನ ಮಾತಾಡುತ್ತಿದ್ದುದನ್ನು ಛಾವಣಿ ಮೇಲೆ ಕೂತು ಕೇಳಿಸಿಕೊಳ್ಳುತ್ತಿದ್ದ ಮಾರ್ಜಾಲ ಮಾತ್ರ ಯಾವ
ತ್ರಿಲೋಕ ಸುಂದರಿಗೂ ಮರುಳಾಗುತ್ತಿರಲಿಲ್ಲ. ಅದು ಆಗಲೇ ಗುಟ್ಟಾಗಿ ಶಾಸ್ತ್ರಿಗಳ ಮನೆಯಲ್ಲಿ
ಯಾವತ್ತೂ ಇರುವ ಕಾಮೋಷಿಯನ್ನು ಪ್ರೀತಿಸಿರುವುದು. ಅವೆರಡನ್ನೂ ಯಾರೊಬ್ಬರೂ ತಂದು
ಸಾಕಿಕೊಂಡಿರಲಿಲ್ಲ. ಮಾರ್ಜಾಲದ ವೃತ್ತಾಂತವೇ ಹೃದಯ ವಿದ್ರಾವಕವಾದುದಾಗಿದೆ. ಅದರ ಅಜ್ಜಿ ಮಾಜಿ
ಸಾರಿಗೆ ಸಚಿವ ರೇಣುಕಯ್ಯನವರ ಮನೆಯಾಕೆ. ಅಂದರೆ ಅವರು ಹಾಲಿ ಇದ್ದಾಗ ರಾಜ್ಯಪಾಲ ಗೋವಿಂದರಾಜರೇ ಬಹು
ಪ್ರೀತಿಯಿಂದ ತಮ್ಮಿಬ್ಬಿರ ವಿಸ್ವಾಸದ ನೆನಪಿಗಾಗಿ ಒಂದು ಕೇಸರಿ ವರ್ಣದ ಹೆಣ್ಣು ಮರಿ
ಕೊಟ್ಟಿದ್ದರು. ರಾಜ್ಯಪಾಲರು ಕೊಟ್ಟಿರುವುದೆಂದಮೇಲೆ ಸಚಿವ ರೇಣುಕಯ್ಯನವರು ಹೇಗೆ ಬಿಟ್ಟಾರು?
ಅವರಿವರ ಮನೆಗೆ ಹೋಗುವುದೊಂದೇ ಅಲ್ಲದೆ ಕ್ಯಾಬಿನೆಟ್ ದರ್ಜೆಯ ಆಪ್ತಾಲೋಚನೆಗೂ ವಿಧಾನಸೌಧಕ್ಕೂ
ಅದನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಸಹಾಯಕ ಸಚಿವೆ ಮಾಲತಿಯವರಂತೂ "ಎಷ್ಟೊಂದು
ಮುದ್ದಾಗಿದೆ ಕಣ್ರಿ" ಎಂದು ಅದಕ್ಕೆ ಮುದ್ದು ಕೊಟ್ಟಿದ್ದೇ ಕೊಟ್ಟಿದ್ದು. ಆಗ ಸಚಿವ ರೇಣುಕಯ್ಯ
ಆಕೆಯ ಮೊಲೆಯನ್ನು ಮಿಂಚಿನ ವೇಗದಲ್ಲಿ ಸವರಿ ಕೃತಾರ್ಥರಾಗಿಬಿಡುತ್ತಿದ್ದರು. ಮಹಿಳೆ ಮತ್ತು ಮಕ್ಕಳ
ಸಂಕ್ಷೇಮಾಭಿವೃದ್ಧಿಯ ರಾಜ್ಯ ಸಚಿವೆ ಬಲ್ಲಾಳ್ರವರಂತೂ ಅಧಿವೇಶನ ಮುಗಿಯುವವರೆಗೆ ರೇಣುಕಯ್ಯನವರ
ಪಕ್ಕದಲ್ಲೇ ಕೂತಿದ್ದು "ರ್ರೀ... ಇದ್ನ ನಮ್ಗೆ ಕೊಟ್ ಬಿಡ್ರಿ" ಎಂದು ಕೇಳಿಯೇಬಿಟ್ಟಿದ್ದರು.
"ಅಲ್ರೀ ಕಾವೇರಿ, ಹೆಂಗ್ರಿ ಕೊಡ್ಲಿ... ಸಾಕ್ಷಾತ್ ರಾಜ್ಯಪಾಲ್ರೇ ತಮ್ಮ ಕೈಯಿಂದ ಕೊಟ್ಟಿರೋದು
ಕಣ್ರಿ... ಅಪರೂಪದ ಪ್ರೆಸೆಂಟೇಷನ್ನಿದು, ಅದೂ ಅಲ್ದೆ ನಮ್ದು ಮೈನಾರಿಟಿ ಗೌರ್ಮೆಂಟು ಕ್ಲಿಷ್ಟ
ಸಮಯದಲ್ಲಿ ನಮ್ಮನ್ನ ಕಾಪಾಡೋ ಶಕ್ತಿ ಇದಕ್ಕೆ ಮಾತ್ರ ಇರೋದು" ಎಂದು ಕೂಲಿಂಗ್ ಚಾಳೀಸೊಳಗಿಂದ ಕಣ್ಣು
ಮಿಟುಕಿಸಿದ್ದ ಬೋಳು ಮುಖದ ರೇಣುಕಯ್ಯ.
ಸಾರಿಗೆ ಕುರಿತ ಚರ್ಚೆ ಸಮಯದಲ್ಲಂತೂ ಆ ಮುದ್ದು ಮುಖದ ಬೆಕ್ಕಿನ ಮರಿ ಒಳ್ಳೆ ಪಾರ್ಲಿಮೆಂಟೇರಿಯನ್
ಥರ ಪ್ರಮುಖ ಪಾತ್ರ ವಹಿಸಿತು. ‘ಸ್ವರ್ಗಾದಪಿ ಗರೀಯಸಿ’ ಎಂಬ ವಿರೋಧಿ ಪಕ್ಷದ ನಾಯಕ ‘ಹಿಂದೂ
ಸುರತ್ರಾಣ’ ಸಾರಿಗೆ ಇಲಾಖೇಲಿ ಕೋಟ್ಯಾಂತರ್ರುಪಾಐ ಅವ್ಯವಹಾರ ಆಗಿದೆ. ಅದರ ದೊಡ್ಡ ರಖಮುನ್ನು
ಸಾರಿಗೆ ಸಚಿವರು ಜೇಬಿಗಿಳಿಸಿದ್ದಾರೆ ಎಂದು
ಪ್ರಮುಖ ವಾರಪತ್ರಿಕೆ ಅಂಕಿ ಅಂಶಗಳ ಸಹಿತ ಪ್ರಕಟಿಸಿದೆ. ಕೂಡಲೆ ಸಚಿವರು ಸ್ಥಾನಕ್ಕೆ ರಾಜೀನಾಮೆ
ನೀಡಬೇಕು. ಆ ಅವ್ಯವಹಾರದ ಬಗ್ಗೆ ತನಿಖೆ ಮಾಡಲು ಒಂದು ಆಯೋಗ ರಚಿಸಬೇಕು, ಅದಕ್ಕೆ ನನ್ನನ್ನೇ
ಅಧ್ಯಕ್ಷನನ್ನಾಗಿ ಮಾಡಬೇಕು’ ಎಂದು ಗರ್ಜಿಸಿದಾಗ ಬೆಕ್ಕು ಮೈಕ್ರೋಫೋನ್ ಫಿಯರಿಲ್ಲದೆ ಮ್ಯಾಂವ್...
ಮ್ಯಾಂವ್ ಎಂದು ಇಡೀ ಅಧಿವೇಶನವನ್ನು ನಗೆಗಡಲಿಗೆ ನೂಕಿತ್ತು.
ಬಡವರ ಬೆನ್ನೆಲುಬು ಪಕ್ಷದ ಏಕಮೇವ ಸದಸ್ಯ ಬೊಚ್ಚಣ್ಣನವರು ಮುಖ್ಯಮಂತ್ರಿಗಳ ಎಂಟನೇ ಮಗಳು ಸುಂದರಿಯರ
ಮದುವೆಗೆ ಸಾರಿಗೆ ಸಂಸ್ಥೆಯ ನೂರು ಬಸ್ಸು ಓಡಿಸಿರುವ ಬಗ್ಗೆ ಸಂಬಂದಪಟ್ಟ ಸಚಿವರು ಕೂಡಲೆ ಹೇಳಿಕೆ
ನೀಡಬೇಕೆಂದು ಹೇಳಿದಾಗಳೂ ಬೆಕ್ಕು ನಿರ್ಭಿಡೆಯಿಂದ ಮ್ಯಾಂವ್ಗುಟ್ಟಿತು. ಹೀಗೆ ಅದು ಪ್ರತಿಯೊಂದು
ಪ್ರಶ್ನೆಗೂ ಮ್ಯಾಂವ್ ಉತ್ತರ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಸಮಾಜವಾದಿ (ಮ್ಯಾಕ್ಡೌಲ್) ಪಕ್ಷದ ಪಟೇಲರು "ಎಂಥ ವಿಚಿತ್ರವಾಗಿದೆಯಲ್ಲ, ಸಾರಿಗೆ ಸಚಿವರು ಮ್ಯಾವ್
ಮ್ಯಾವ್ ಎನ್ನುತ್ತಲೆ ದಾಖಲೆ ನಿರ್ಮಿಸಿದ್ದಾರೆ. ಅವರಿಗೆ ಅಭಿನಂದನಾ ಗೊತ್ತುವಳಿ ಮಂಡಿಸಬೇಕೆ"ಂದಾಗ
ಎಲ್ಲ ಸದಸ್ಯರು ಪಕ್ಷಭೇದ ಮರೆತು ನಗಾಡಿದರು.
ಇದು ಹೇಗೋ ರಾಜ್ಯಪಾಲರಿಗೆ ಸುದ್ದಿ ಮುಟ್ಟಿತು. ಅವರು ಸಚಿವ ರೇಣುಕಯ್ಯನವರನ್ನು ಖಾಸಗಿಯಾಗಿ
ಚಹಕ್ಕೆ ಬರಮಾಡಿಕೊಂಡರು. ‘ವಿಧಾನಸಭೆಗೆ ಬರೀ ಬೆಕ್ಕುಗಳನ್ನೇ ಚುನಾಯಿಸಿಬಿಟ್ಟರೆ ಹೇಗೆ ಎಂದು
ಚರ್ಚಿಸಿದರು. ತಗೊಂಡಿಷ್ಟು ದಿನಗಳಾದ್ವು... ಇನ್ನು ಇದ್ಕೆ ನಾಮಕರಣ ಮಾಡಿಲ್ಲಾಂದ್ರೆ ಹೇಗ್ರಿ?"
ಎಂದು ಶ್ರೀಮತಿ ಗೋವಿಂದರಾಜರು ಪ್ರಶ್ನಿಸಿದರು. ಇದೊಂದು ಅತ್ಯುತ್ತಮ ಸಲಹೆ ಎಂದೂ ಒಂದು ಒಳ್ಳೆ
ಮೂಹೂರ್ತ ನೋಡಿ ‘ನಾಮಕರಣ ಮಹೋತ್ಸವ’ ನಡೆಸುವುದಾಗಿ ಅರಿಕೆ ಮಾಡಿಕೊಂಡು ರೇಣುಕಯ್ಯ ವಾಪಸಾದರು.
ನಾಮಕರಣ ಮಹೋತ್ಸವದ ಆಮಂತ್ರಣ ಪತ್ರಿಕೆಗಳು ದೇಶದ ಪ್ರಮುಖ ಜನನಾಯಕರಿಗೆಲ್ಲ ಹೋದವು.
ಇಂದಿರಾಗಾಂಧಿಯವರು ತಮ್ಮ ಆಪ್ತರಲ್ಲೊಬ್ಬರಾದ ಕಾಂತಿಲಾಲ್ ಬೊರ್ಕಾರವರನ್ನು ಕಳಿಸಿಕೊಟ್ಟರೆಂದಮೇಲೆ
ಕೇಳುವುದೇನಿದೆ? ನಾಮಕರಣ ಮಹೋತ್ಸವದ ನೆಪದಲ್ಲಿ ರಾಜಕೀಯ ವಿದ್ಯಮಾನ ಚರ್ಚಿಸುವ ಸಲುವಾಗಿ ಆಡಳಿತ
ಪಕ್ಷದ ಬಹುತೇಕ ಹಿರಿ ಕಿರಿಯ ಮುಖಂಡರು ಲಿಂಗಬೇಧ ಮರೆತು ಹಾಜರಾದರು. ಎಲ್ಲಾ ವಿರೋಧಪಕ್ಷಗಳು
ಅದನ್ನು ಬಹಿಷ್ಕರಿಸಿ ಕರತಾಳ ಆಚರಿಸಿದವು.
ಬೆಳ್ಳಿಯ ತೊಟ್ಟಿಲಲ್ಲಿ ಕಟ್ಟಿ ಮಲಗಿಸಿದ್ದ ಬೆಕ್ಕು ಹುಲುನರರ ನಡುವಳಿಕೆಗಳನ್ನು ಸೂಕ್ಷ್ಮವಾಗಿ
ಗಮನಿಸುತ್ತ ತೆಪ್ಪಗಿತ್ತು. ಅತಿಥಿ ಅಭಾಗತರು ತಾವು ತಂದಿದ್ದ ಪ್ರೆಸೆಂಟೇಷನ್ನುಗಳನ್ನು
ತೊಟ್ಟಿಲಲ್ಲಿ ಪೇರಿಸತೊಡಗಿದರು. ಆ ದುಬಾರಿ ಸಾಮಾನುಗಳಡಿ ಸಿಲುಕಿ ತಾನು ಅಪ್ಪಚ್ಚಿಯಾಗಿ
ಬಿಡುವನೆಂದೂಹಿಸಿ ಬೆಕ್ಕು ಕಿಟರನೆ ಕಿರುಚಿಕೊಳ್ಳತೊಡಗಿತು. ಖ್ಯಾತ ಸಿನಿಮಾ ನಟ ಅನುನಾಸಿಕ್ರವರ
ಸಂಗೀತ ರಸಮಯ ಕಾರ್ಯಕ್ರಮ ಇದ್ದುದರಿಂದ ಅದರ ಅರಣ್ಯ ರೋಧನ ಯಾರಿಗೂ ಕೇಳಿಸಲಿಲ್ಲ. ನಂತರ ಅದು
ಕಾಣಿಕೆಗಳೆಂಬ ಚಕ್ರವ್ಯೂಹವನ್ನು ಬೇಧಿಸಿಕೊಂಡು ಚಂಗನೆ ಈಚೆ ನೆಗೆದು ಮೀಸೆ ತಿರುವಿ ಎಲ್ಲರ ಗಮನ
ಸೆಳೆಯಿತು. ಈ ಪ್ರಕಾರವಾಗಿ ಇಡೀ ರಾಷ್ಟ್ರನಾಯಕರ ಗಮನ ಸೆಳೆದ ಆ ಬೆಕ್ಕಿಗೆ ಸಂಬಂದಪಟ್ಟ ಸಮಸ್ಯೆ
ಎದುರಾದದ್ದು ಯಾವಾಗಪ್ಪ ಎಂದರೆ ನಾಮಕರಣ ಮಾಡುವಾಗ, ಅದಕ್ಕೆ ನಾಮಕರಣ ಮಾಡಲು ನಿಯುಕ್ತರಾಗಿದ
ರಾಜೇಂದ್ರಾಚಾರ್ರವರು ಸಾಮಾನ್ಯರೇನು? ಅವರ ವಂಶದವರು ಏಕಕಾಲಕ್ಕೆ ತಾಂಜಾವೂರು
ಮತ್ತು ಪೆನುಗೊಂಡೆಯ ರಾಜರುಗಳ ಆಸ್ಥಾನ ಪುರೋಹಿತರಾಗಿದ್ದಂಥವರು. ವರದರಾಘವೇಂದ್ರಚಾರ್ಯರು
ನಗರದಲ್ಲಿ ಖೋಡೆಯವರ ಕಾಯಂ ಪುರೋಹಿತ್ಯ ಮಾಡುತ್ತಿರುವರು. ಬೆಕ್ಕಿಗೆ ಹೆಸರು ಸೂಚಿಸಲು ಸಚಿವ
ರೇಣುಕಯ್ಯನವರಿಗೆ ವಿನಂತಿಸಿಕೊಂಡರು. ಕಾಂತಿಲಾಲ್ ಬೋರ್ಕರವರು ಪ್ರಣಬ್ ಕುಮಾರ್ ಅಂದರೆ, ಒರಿಸ್ಸಾದ
ಸತ್ಪತಿಯವರು ಜಗನ್ನಾಥ್ ಎಂದರು. ಬಿಹಾರದವರು ಮಿಶ್ರಾ ಎಂದರೆ ಮಹಾರಾಷ್ರದವರು ಚವ್ಹಾಣ ಎಂದರು.
ಕರ್ನಾಟಕದವರು ಇಮ್ಮಡಿ ಪುಲಕೇಶಿ ಎಂದರೆ ತಮಿಳ್ನಾಡಿನ ಚೆಂಗಪ್ಪನ್ ಕಲೈಕುಡಚ್ಚಿ ಮಗ್ಗಳ್ ತಿಲಕಂ
ಅಂತ ಏನೇನೋ ಹೇಳಿದರು. ಅವೆಲ್ಲ ಕೇಳುತ್ತ ಪುರೋಹಿತರು ಚಿನ್ನದ ಹಗ್ಗಕ್ಕೆ ಕಟ್ಟಿದ್ದ ಬೆಕ್ಕಿನ
ಲಿಂಗ ಪರಿಶೀಲಿಸಲೋಸುಗ ಅದರ ಬಾಲವನ್ನು ಎತ್ತುವ ಪ್ರಯತ್ನ ಮಾಡಿದರು. ಅದು ಅಷ್ಟು ಸುಲಭವಾಗಿ ತನ್ನ
ಲಿಂಗವನ್ನು ತೋರಿಸುವುದೆಂದರೇನು? ಮುಖ ಸಿಂಡರಿಸಿಕೊಂಡು ಪುರೋಹಿತರ ಕೈಯನ್ನು ಪರಚಿ ಗಾಯಗೊಳಿಸಿತು.
ಅವರು ‘ಶ್ರೀರಾಮಾ’ ಎಂದು ನರಳಿದರು. ಅದರ ಲಿಂಗ ಪತ್ತೆ ಹಚ್ಚಲು ಫೀಲ್ಡ್ ಮಾರ್ಷಲ್
ಸನ್ಯಾಲ್ರವರನ್ನು ಕೇಳಿಕೊಂಡರು. ಅವರು ಎಷ್ಟಿದ್ದರೂ ದ್ವಿತೀಯ ಜಾಗತಿಕ ಭಾಗವಹಿಸಿದ್ದಂಥವರು.
ಅವರು ತಮ್ಮ ಸಾಹಸ ಮನೋಗುಣವನ್ನು ಕ್ರೋಡೀಕರಿಸಿ ಅದರ ಬಾಲವನ್ನೆತ್ತಿ ನೋಡಿ "ಫೀಮೇಲ್" ಎಂದು
ಉದ್ಗರಿಸಿದರು. ಆ ನಂತರ ಎಲ್ಲರೂ ತಲಾ ಒಂದೊಂದು ಹೇಳಿದ್ದು ಸಿನಿಮಾ ನಟಿಯರ ಹೆಸರುಗಳನ್ನು, ದೆಹಲಿ
ಕಡೆಯ ಸಂಪರ್ಕ ಇಟ್ಟಿಕೋಳ್ಳುವ ಇರಾದೆಯಿಂದ ‘ಝಾನ್ಸಿ ಕಿ ರಾಣಿ’ ಎಂಬ ಹೆಸರನ್ನು ರೇಣುಕಯ್ಯ
ಸೂಚಿಸಲು ಎಲ್ಲರೂ ‘ಓಕೇ’ ಮಾಡಿದರು.
‘ಝಾನ್ಸಿ ಕಿ ರಾಣಿ’ಯ ಕಥೆ ದುರಂತಮಯವಾಗಿದ್ದು ರಾಜ್ಯಪಾಲ ಗೋವಿಂದೇರಾಜರು ಮೇಘಾಲಯದ ರಾಜ್ಯಪಾಲರಾಗಿ
ವರ್ಗವಾದಮೇಲೆಯೇ! ರಾಣಿಯ ಬದುಕು ಮತ್ತಷ್ಟು ಯಾತನಾಮಯವಾದದ್ದು ರೇಣುಕಯ್ಯ ಸಚಿವ ಸ್ಥಾನ ಕಳೆದುಕೊಂಡ
ನಂತರ, ನಂತರ ಅದು ಬೀದಿ ಪಾಲಾದದ್ದು ಮಾಜೀ ಸಚಿವರ ಫ್ಯಾಮಿಲಿ ಅಫೈಸ್ಗಳು ಹೆಚ್ಚಾದ ನಂತರ. ಅದು
ಎಲ್ಲೋ ಹೋಯಿತು. ಯಾರೋ ಸಾಕಿದರು. ಯಾರೋ ಹೊರ ತಳ್ಳಿದರು. ಹೀಗೆ ಮುಂದೊಂದಿನ ವಾಸಿಯಾಗದ ಚರ್ಮ
ರೋಗಕ್ಕೆ ತುತ್ತಾದ ಝಾನ್ಸಿ ಕಿ ರಾಣಿಯನ್ನು ಅದರ ಐದಾರುಮಂದಿ ಮಕ್ಕಳೇ ಸೇರಲಿಲ್ಲ.
ಮುನಿಸಿಪಾಲಿಟಿಯವರ ಕೊಚ್ಚೆ ಗುಂಡಿಯಲ್ಲಿ ಸತ್ತ ಝಾನ್ಸಿ ಕಿ ರಾಣಿಯ ಅಸಂಖ್ಯಾತ ಮೊಮ್ಮಕ್ಕಳ ಪೈಕಿ ಈ
ಮಾರ್ಜಾಲವೂ ಒಂದು.
ಇದರ ಕಥೆ ಹೀಗಿದ್ದರೆ ಶಾಸ್ತ್ರಿಗಳ ಮನೆಯ ಕಾಮೋಷಿಯ ಜೀವನ ವೃತ್ತಂತ ವಂಶಾವಳಿ ಇನ್ನೊಂದು
ರೀತಿಯದ್ದು. ಇದರ ವಂಶಜರು ಅಂಥ ಹೇಳಿಕೊಳ್ಳುವಂಥ ಹಿನ್ನೆಲೆಯಿಂದ ಬಂದವರಲ್ಲ. ಆಂಧ್ರ ಪ್ರದೇಶದ
ತೆಲಂಗಾಣ ಬೊಮ್ಮಿರೆಡ್ಡಿಪಲ್ಲೆಯ ರೈತಕೂಲಿ ಸಂಘದ ಅಧ್ಯಕ್ಷ ತಿರುಪಾಲಯ್ಯ ಸಾಕಿಕೊಂಡಿದ್ದ ‘ಮುಕ್ತಿ’
ಬಗ್ಗೆ ಕೆಲವು ವಿವರಗಳು ಸಿಕ್ಕುತ್ತವೆ. ಅದೂ ತಿರುಪಾಲಯ್ಯ ಬರೆದಿರುವ ‘ಗುಡಿಸೆಲು ಕಾಗಡಾಲು’ ಎಂಬ
ಮಹಾಕಾವ್ಯದಲ್ಲಿ ಹೋರಾಟಗಾರ ಕವಿ ತಿರುಪಾಲಯ್ಯ ‘ಪೋರಾಟಾಲು ವರ್ಧಿಲ್ಲಾಲಿ’ ಎಂಬ ನಿನಾದದೊಂದಿಗೆ
ಎನ್ಕೌಂಟರ್ನಲ್ಲಿ ಅಸು ನೀಗಿದಾಗ ಮುಕ್ತಿಯನ್ನು ಶ್ರೀ ಕಾಕುಳಂ ಎಸ್ಪಿ ಜಗಪತಿಬಾಬು ಸಾಕಿಕೊಂಡ.
ಜಗಪತಿಬಾಬು ಬೆಳಗ್ಗೆ ಜಾಗಿಂಗ್ ನಕ್ಸಲೈಟ್ಸು ಗುಂಡಿಟ್ಟು ಕೊಂದರು. ನಂತರ ಅದನ್ನು ಚಪ್ರಾಸಿ
ಚಂಚಯ್ಯ ಸಾಕಿದ... ಹೀಗೆ ಅದರ ಕಥೆ ಕೂಡ ದುರಂತವಾಗಿ ಬೆಳೆಯುತ್ತದೆ. ಕಾಮೋಷಿಯ ತಾಯಿ ಆಂಧ್ರದಿಂದ
ಕರ್ನಾಟಕಕ್ಕೆ ಬಂದು ಪ್ರಸವಿಸಿದಳೋ?
ಸಂಶೋಧನೆ ಮಾಡದ ಹೊರತು ತಿಳಿಯದು. ಹೆತ್ತಾಕೆಯ ಮುಖವನ್ನು ಸಯಾಗಿ ನೋಡಿರದ ಕಾಮೋಷಿಯಲ್ಲಿ ಮಾರ್ಜಾಲ
ಯಾವ ಆರ್ಷಣೆ ಕಂಡುಕೊಂಡಿತೋ ದಯಾಮಯನಾದ ಭಗವಂತನಿಗೇ ಗೊತ್ತು? ಅಂತೂ ದೇವರು ಜೊತೆಗೂಡಿಸಿದ. ಅವೆರಡೂ
ಒಂದಾದವು. ಅನ್ಯೋನ್ಯದಿಂದಿರುವುವು. ಗಂಡಾದ ತಾನು ನಾನ್ವೆಜೆಟೇರಿಯನ್ನು; ಹೆಂಗಸಾದ ನೀನು
ವೆಜೆಟೇರಿಯನ್ನೂ ಅಂಥ ಮಾರ್ಜಾಲವೇ ತೀರ್ಮಾನಿಸಿ ಏಕಪಕ್ಷೀಯವಾಗಿ ಇಲಾಖೆ ಹಂಚಿಕೆ ಮಾಡಿದ್ದು
ವಿಚಾರಿಸಬೇಕಾದ ಸಂಗತಿ. ಇಬ್ಬರೂ ತಂತಮ್ಮ ಇಲಾಖೆ ನೋಡಿಕೊಂಡು ಸುಖವಾಗಿದ್ದಾರೆ. ದಿನಕ್ಕೆರಡು ಮೂರು
ಬಾರಿಯಾದರೂ ಸಂಧಿಸಿ ಕಷ್ಟಸುಖ ಹಂಚಿಕೊಳ್ಳುವರೆಂಬುದೇ ಸಮಾಧಾನಕರ ಸಂಗತಿ.
ಮನೆಯ ಆತಂಕದ ಪರಿಸ್ಥಿತಿಯಿಂದಾಗಿ ಮಾರ್ಜಾಲ ಬೆಳಗಿನಿಂದ ಮನೆಬಿಟ್ಟು ಹೊರಗಡೆ ಬಂದೇ ಇಲ್ಲ. ಮನೆಯ
ಯಜಮಾನರಾದವರು ಸಂತೋಷದಿಂದ ಇದ್ದರೆ ತಾನೆ ಚಿನ್ನಾಟ ರೊಮಾನ್ಸು ಎಲ್ಲ. ಕಾಮೋಷಿದೂ ಶಾಸ್ತ್ರಿಗಳ
ಮನೆಯಲ್ಲಿ ಅದೇ ಕಥೆ.
ಕಿಟಕಿಯಲ್ಲಿಂದ ಹೊರನುಸುಳಿ ಮಾರ್ಜಾಲ ಮ್ಯಾವ್ (ಹಲೋ ಡಾರ್ಲಿಂಗ್) ಗುಟ್ಟಿತು. ಪತ್ತೆ ಇಲ್ಲ
ಪ್ರಿಯತಮೆ? ಇಲ್ಲಿ ಹಾಳಾಗಿ ಹೋದಳಿವಳು? ಲಾಂಗ್ ಜಂಪಿಗೆ; ಹೈಜಂಪಿಗೆ ಹೆಸರಾದ ಅದು ಬೃಂದಾವನ ಕಟ್ಟೆ
ಮೇಲೆ ನಿಂತು ಮತ್ತೊಮ್ಮೆ ಮ್ಯಾವ್ ಅಂತು. ಕೋಡುಬಳೆ ಪ್ರೀತಿಗಾಗಿ ಪುತ್ತಿ ಬಳಿ ಇಲಿಗಾಗಿ ಹೊಂಚಿ
ಕೂತಿದ್ದ ಕಾಮೋಷಿ ತನ್ನ ಪ್ರಿಯತಮನ ಕರೆ ಕೇಳಿಸಿ ರೋಮಾಂಚನಗೊಂಡಿತು. ಹೊರ ಬಂದು ತನ್ನ ಬಾಲವನ್ನು
ಅದರ ‘ಕ್ಳಿಮ್ಮು’ಗೆ ಬಡಿಸಿತು.
ಸಲ್ಪ ಹೊತ್ತು ಅವೆರಡು ಸ್ಪರ್ಶಿಸಿ ಮುದ್ದಿಸಿ ಉಭಯ ಕುಶಲೋಪರಿ ನಡೆಸಿದವು. ನಂತರವೇ ಶಾಮು ಮತ್ತು
ಅನಸೂಯರ ಟಾಪಿಕ್ ಬಂದದ್ದು. ಮನುಷ್ಯರು ಹೀಗ್ಯಾಕಾಗ್ತಾರೆ ಎಂಬುದಕ್ಕೆ ಉತ್ತರವಿಲ್ಲ.
"ಶಾಸ್ತ್ರಿಗಳು ಇಅಮ್ಮ ಸೊಸೆ ಅಲುಮೇಲಮ್ಮನಿಗೆ ಏನೋ ಗುಟ್ಟಾಗಿ ಹೇಳ್ತಿರುವಂತಿದೆಯಲ್ಲ" ಎಂದು
ಮಾರ್ಜಾಲ ಪ್ರಿಯತಮೆಯನ್ನು ಕೇಳಿತು.
ಅದು ಅವರ ಪರ್ಸನಲ್ಲು ಅಂತ ಕಾಮೋಷಿ, ಮತ್ತೆ ಒತ್ತಾಯಿಸಿದಾಗ ಅದು ನೀನೇ ನೋಡ್ಕೋ ಹೋಗು ಅಂತು.
ಮಾರ್ಜಾಲ ಕಾಮೋಷಿಯೊಂದಿಗೆ ಒಳಗಡೆ ಹೋಯಿತು. ಕಿಟಕಿಯ ಸಂದಿಯಲ್ಲಿ ನೋಡಿತು.
ಶಾಸ್ತ್ರಿಗಳ ಸೊಸೆ ಎದುರಿಗೆ ಜಾತಕ ಕುಂಡಲಿಗಳನ್ನು ಹರಡಿಕೊಂಡು ಕೂತಿದ್ದರು. ಗುಣಿಸಿ; ಭಾಗಿಸಿ
ರಾಹುಕೇತು, ಮಂಗಳ, ಪುನರ್ವಸು ಅಂತ ಏನೇನೋ ಹೇಳುತ್ತಿದ್ದರು. ಕಣ್ಣಲ್ಲಿ ನಿದ್ದೆ ತುಂಬಿಕೊಂದಿದ್ದ
ಅಲುಮೇಲಮ್ಮ ಹೂಗುಟ್ಟುತ್ತಿದ್ದಳು.
ನಂತರ ಪ್ರಸನ್ನ ವದನರಾಗಿ ಶಾಸ್ತ್ರಿಗಳು ದಢೀರನೆ ಎದ್ದು ನಿಂತರು.
ಕೈಮುಗಿದು -
ಕಣ್ಣು ಮುಚ್ಚಿ -
- ಆ ಬ್ರಹ್ಮಲೋಕಾದಾಶೇಷಾತ್ ಆಲೋಕಾಲೋಕ ಪರ್ವತಾತ್| ಯೇ ವಸಂತಿ ದ್ವಿಜಾ ದೇವಾಃ ತೇಭ್ಯೋ ನಿತ್ಯ ನಮೋ
ನಮಃ| ಓಂ ಶಾಂತಿ ಶಾಂತಿ ಶಾಂತಿ| ಸರ್ವಾರಿಷ್ಠ ಶಾಂತಿರಸ್ತುಹೂಃ
ಎಂದು ಹೇಳಿ ಕಣ್ಣು ತೆರದು ಇಡಿಯಾಗಿ ಸೊಸೆಯನ್ನು ನೋಡಿದರು.
"ತಾಯಿ ಅಲುಮೇಲಮ್ಮಾ... ಬರೋ ಸೋಮವಾರ ಇಡೀ ದಿನ ಗುರು ವೃಶ್ಚಿಕ
ರಾಶಿಯಲ್ಲಿರುತ್ತಾನಮ್ಮಾ, ನಮ್ಮ ಮಗೂನ ಕುಂಡಲಿಗೆ ಯೊಗ್ಯವಾದ ಸ್ವಾತಿ ನಕ್ಷತ್ರ ಅಂದು
ಸಾಯಂಕಾಲದವರೆಗೂ ಇತದೆ. ಅಂದು ಬ್ರಾಹ್ಮೀ ಮುಹೂರ್ತದಲ್ಲಿ ಹೊಸಪೇಟೆಗೆ ಪ್ರಾಯಾಣ ಬೆಳೆಸಿ ಹುಡುಗಿ
ನೋಡ್ಕೊಂಡು ಬಂದರಾಯ್ತು. ಶಾಮುಗೆ ಹೇಳು. "ಓಂ ಗಾಯತ್ರೀ" ಎಂದು ಪಂಚಾಂಗದ ಗಂಟುಕಟ್ಟಿ ನಗಂದಿ ಮೇಲೆ
ಸರಿಸಿದರು.
ಮಾರ್ಜಾಲ ‘ಶುಭಸ್ಯ ಶೀಘ್ರಂ’ ಎಂದು ಹೇಳಿ ನಿಟ್ಟುಸಿರುಬಿಟ್ಟಿತು.
ಇಡೀ ಆ ಪುಟ್ಟ ನಗರವನ್ನು ಅವತ್ತು ಯಾಕೋ ಒಂದು ನಮೂನೆಯ ಅಲೌಕಿಕ ರೀತಿಯ ವಾತಾವರಣ
ಆವರಿಸಿಬಿಟ್ಟಿತ್ತು. ಸ್ವಾಸ್ತಿಕ್ ರಿಕ್ರಿಯೇಷನ್ ಕ್ಲಬ್ಬಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳ
ಮುಖಂಡರು ಪಕ್ಷಭೇದ ಮರೆತು ಪ್ರತಿ ಎರಡು ನಿಮಿಷಕ್ಕೊಮ್ಮೆ ಒಂದೊಂದು ಗುಟುಕು ಆಸಿ ಸೇವಿಸುತ್ತ
ಇಸ್ಪೀಟು ಆಡುತ್ತಿದ್ದೆಂದರೆ ಲೆಕ್ಕ ಹಾಕುವುದು; ಮನೆಯೊಳಗೆ ತೆರೆದಿದ್ದ ತಂಬಿಟ್ಟಿನ ಡಬ್ಬಿ ಕಡೆ
ಇಣುಕಿ ಹಾಕದೆ ಮೂಷಕ ದಂಪತಿಗಳು ಪರಸ್ಪರ ರೊಮಾನ್ಸಿಗಿಳಿದಿರುವುದನ್ನು ನೋಡುತ್ತ ಮಾರ್ಜಾಲ
ಮಲಗಿತ್ತೆಂದರೆ ಲೆಕ್ಕ ಹಾಕುವುದು; ವ್ಯಾಪರಸ್ಥರು ಉದ್ರಿ ಪಡೆದವರ ಕಡೆ ಮಂದಸ್ಮಿತ ನೋಟ
ಬೀರುತ್ತಿದ್ದರೆಂದರೆ ಲೆಕ್ಕ ಹಾಕುವುದು; ಹೀಗೆ ಎಲ್ಲಿ ನೊಡಿದರೂ ಅರಿಷಡ್ವರ್ಗಗಳನ್ನು ಮೀರಿ ನಿಂತು
ಪಲ್ಲವಿಸುತ್ತಿರುವವರೇ ಎಲ್ಲ ಕಡೆ. ಅದೂ ಅಲ್ಲದೆ ವಾತಾವರನವು ಎಲ್ಲ ಕಡೆ ಉಲ್ಲಸಿತವಾಗಿತ್ತು.
ಪಾಯ್ಖಾನೆ ಕಡೆಯಿಂದ ಬೀಸುತ್ತಿದ್ದ ಗಾಳಿಯಲ್ಲೂ ಸೇವಿಸಲು ಯೋಗ್ಯವಾದ ಪರಿಮಳ ಇರುವುದು ಆಗಸದಲ್ಲಿ
ಸೂರ್ಯನ ಕಡೆ ಯಾರು ಎಷ್ಟೊತ್ತು ಬೇಕಾದರೂ ಬಿಡುಗಣ್ಣಿನಿಂದ ದಿಟ್ಟಿಸಬಹುದಾಗಿತ್ತು. ಹೀಗಾಗಿ
ಬೇಸಿಗೆ ಕಾಲದ ಹಗಲು ಬೆಳದಿಂಗಳೆಂಬ ಭ್ರಮೆ ಹುಟ್ಟಿಸುವಂತಿತ್ತು.
ಇದೆಲ್ಲ ನೋಡಿ ಸೂಕ್ಷ್ಮ ಮನಸ್ತತ್ವದ ಕದನ ಕುತೋಹಲಿಗಳಿಗೆ ಪರಮಾಶ್ಚರ್ಯವೋ ಪರಮಾಶ್ಚರ್ಯ. ಅವರಲ್ಲಿ
ಕೆಲವರು ಪರಿಶೋಧಿಸಿ ಕಾರಣ ಕಂಡುಕೊಳ್ಳದಿರುತ್ತಾರೆಯೇ? ಬ್ರಾಹ್ಮೀ ಮಹೂರ್ತದಲ್ಲಿ ಚುಮು ಚುಮು
ನಸುಕಿನಲ್ಲಿ ವೇದಾಗಮ ಪುರಾಣಗಳನ್ನು ಹೊಟ್ಟೆಯಲ್ಲಿಟ್ಟುಕೊಂಡಿರುವಂಥ ಪರಮೇಶ್ವರ ಶಾಸ್ತ್ರಿಗಳು
ತಮ್ಮ ಮೊಮ್ಮಗ ಶಾಮಾಶಾಸ್ತ್ರಿಯೊಂದಿಗೆ ಬಸ್ ನಿಲ್ದಾಣದಲ್ಲಿ ತಂಗಾಳಿಗೆ ಮೈಯೊಡ್ಡಿ ನಿಂತಿದ್ದನ್ನು
ಕೆಲವರು ನೋಡಿದ್ದುಂಟು. ಆದರೆ ಅವರು ಮಹಾದೇವಿ ಹತ್ತಿ ಮೂಡಣದ ಕಡೆ ಪ್ರಯಾಣ ಬೆಳೆಸಿದರೆಂಬುದು
ತಿಳಿಯದು; ತಿಪ್ಪೇರುದ್ರನನ್ನು ಹತ್ತಿ ಪಡವಣದ ಕಡೆ ಪ್ರಯಾಣ ಬೆಳೆಸಿದರೆಂಬುದು ತಿಳಿಯದು! ಅವರು
ಊರು ಬಿಟ್ಟಿರುವುದರಿಂದಾಗಿ ಇರುವೆ ಎಂಬತ್ನಾಲ್ಕು ಜೀವಿಗಳೆಲ್ಲ ನಿರ್ಭಯದಿಂದ ಕಾಲಕ್ಷೇಪ
ಮಾಡತ್ತಿರಬಹುದೆ ಎಂಬ ಸಂದೇಹ ಮೂಡುವುದು ಸಹಜ. ಯಾಕಂದರೆ ಅವರ ಹಾಜರಿಯಲ್ಲಿ ಗ್ರಾಮ ಒಂಥರಾ ಇದ್ದರೆ;
ಅವರ ಗೈರುಹಾಜರಿಯಲ್ಲಿ ಗ್ರಾಮ ಇನ್ನೊಂಥರಾ ಇರುವುದು. ‘ಅವರಿಲ್ಲದ್ಕೆ ಮನೆ ಒಂಥರಾ ಇದೆ’ ಎಂದು
ಅಲುಮೇಲಮ್ಮ ಅಂದುಕೊಂಡರೆ ಅದೊಂದು ರೀತಿ; ಅವ್ರಿಲ್ಲದ್ಕೆ ಓಣೀಗೆ ಕಳೆ ಇಲ್ಲ ಅಂತ ಓಣಿಯವರೂ ಅಂದ್ರೆ
ಓಕೆ ಮಾಡಬಹುದು. ಆದರೆ ಇಡಿ ಗ್ರಾಮಕ್ಕೆ ಗ್ರಾಮವೇ ಅಂದುಕೊಂಡರೇನು ಮಾಡುವುದು? ದುಃಖದ ಜಾಗದಾಗ
ಸಂತೋಷ ಇರೋದು! ಸಂತೋಷದ ಜಾಗದಾಗ ದುಃಖದ ಇರೋದು ಇಂಥ ವೈಪರೀತ್ಯಗಳಿಗೆಲ್ಲ ಏನನ್ನುವುದು? ಹೀಗಾಗಿ
ಶಾಸ್ತ್ರಿಗಳ ಗೈರುಹಾಜರಿಯಲ್ಲಿ ಸದರೀ ಗ್ರಾಮವನ್ನು ಹೇಗೆ ಅರ್ಥಮಾಡಿಕೊಳ್ಳುವುದೋ! ಒಟ್ಟಿನಲ್ಲಿ
ಸದರಿ ಗ್ರಾಮದ ಜೀವಜಗತ್ತು, ಸಸ್ಯ ಜಗತ್ತು ಮತ್ತು
ಮನುಷ್ಯ ಜಗತ್ತುಗಳ ಮನೋಭೂಮಿಕೆಯಲ್ಲಾಗಿರುವ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆಗಳು ಮಾತ್ರ ಅಂಗೈ
ಅಷ್ಟೇ ಸತ್ಯ.
ಇಡೀ ಗ್ರಾಮದ ಚರಿತ್ರೆಯಲ್ಲಿ ಕಂಡರಿಯದ ಕೇಳರಿಯದ ಘಟನೆಯೊಂದು ಜರುಗಲಿರುವುದರ ಮುನ್ಸೂಚನೆಯಾಗಿ
ರೈಲೊಂದು ವಾಯುವೇಗದಲ್ಲಿ ಬಂದು ಸದರೀ ನಿಲ್ದಾಣದಲ್ಲಿ ನಿಂತುಕೊಂಡಿತು. ಅದು ಬಂದದ್ದಾಗಲಿ ಹತ್ತೋರು
ಹತ್ತಿದ್ದಾಗಲೀ; ಇಳಿಯೋರು ಇಳಿದಿದ್ದಾಗಲೀ ಅದೇನು ಹೊಸ ಸಂಗತಿಯಲ್ಲ. ಹೊಚ್ಚ ಹೊಸ ಸಂಗತಿ
ಯಾವುದಪ್ಪಾ ಅಂದರೆ ಆ೨೫೨ ನೇ ರಿಸರ್ವ್ಡ್ ಕಂಪಾರ್ಟ್ಮೆಂಟಿನಿಂದ ಐದೂ ಮುಕ್ಕಾಲಡಿ ಎತ್ತರ ಫೇರ್
ಕಲ್ಲರಿನ ಗುಂಗುರುಗೂದಲಿನ, ಕಣ್ಣಿಂಗೆ ಕೂಲಿಂಗ್ ಗಿಲಾಸ್ ಧರಿಸಿದ ವ್ಯಕ್ತಿಯೊಬ್ಬ ಇಳಿದಿದ್ದು;
ಅವನು ಭಲೆ ಸ್ಟೈಲಿನಿಂದ ಯಾವತ್ತೂ ಲಗೇಜನ್ನು ಕೂಲಿಯೊಬ್ಬನ ಮೇಲಿರಿಸಿಕೊಂಡು ನಿಲ್ದಾಣದಿಂದ
ಹೊರಬಂದದ್ದು; ಪೋರ್ಟಿಕೋದಲ್ಲಿ ಇಡೀ ಗ್ರಾಮವನ್ನು ಆಪೋಶನ್ ತೆಗೆದುಕೊಳ್ಳುವವನಂತೆ ಸಿಂಹಾವಲೋಕನ
ಮಾಡಿದ್ದು; ಎಡಗೈ ತೋರುಬೆರಳಿನಿಂದ ಕೂಲಿಂಗ್ ಗಿಲಾಸನ್ನು ಹಿಂದಕ್ಕೆ ಸರಿಸಿ ಸರಿಪಡಿಸಿಕೊಂಡದ್ದು;
ಜನರು ತನ್ನನ್ನು ಗಮನಿಸುತ್ತಿರುವರೆಂದು ಭಾವಿಸಿದ್ದು ಮತ್ತು ಗ್ರಾಮದ ಸಮಸ್ತ ಲವಲವಿಕೆಯನ್ನು
ತನ್ನಲ್ಲಿ ಮೇಳಯಿಸಿಕೊಂಡು ನಡೆಯತೊಡಗಿದ್ದು.
ಆತ ಇಟ್ಟ ಹತ್ತು ಹೆಜ್ಜೆಗೆ ಜನರು ಮಂಕಾದರು. ಇನ್ನೊಂದಿಪ್ಪತ್ತು ಹೆಜ್ಜೆಗೆ ಕಟ್ಟಡಗಳು ಮಂಕಾದವು.
ಇನ್ನೊಂದೈವತ್ತು ಹೆಜ್ಜೆಗೆ ತರುಲತೆಗಳು ಮಂಕಾದವು. ಇನ್ನೊಂದು ನೂರು ಹೆಜ್ಜೆಗೆ ಆಗಸದ ಸೂರ್ಯ
ನಿಗಿನಿಗಿ ಉರಿಯತೊಡಗಿದ. ಇನ್ನೊಂದಿನ್ನೂರು ಹೆಜ್ಜೆಗೆ ಸ್ವಸ್ತಿಕ್ ರಿಕ್ರಿಯೇಷನ್ ಕ್ಲಬ್ಬಿನಲ್ಲಿ
ಯಾರೋ ಅತಿರಿಕ್ತವಾಗಿ ರಾಜನನ್ನು ಸೇರಿಸಿದರೆಂಬ ಕಾರಣಕ್ಕೆ ವಿರೋದ ಪಕ್ಷದವರು ವಿರೋದ
ಪಕ್ಷದವರಾದರು- ಆಡಳಿತ ಪಕ್ಷದವರು ಆಡಳಿತ ಪಕ್ಷದವರಾಗಿ ಮೀಸೆ ಮೇಲೆ ಕೈಇಟ್ಟುಕೊಂಡರು...
ಅಲಲಲಾ ಅನ್ನುವಷ್ಟರಲ್ಲಿ ಹರಕು ಜೀನ್ಸು ಚಡ್ಡಿ; ಮುರುಕು ಟೀ ಶರಟು ಧರಿಸಿದ್ದ ಸಿಂಬಳ ಗೊಣ್ಣಿಯ
ಎರಡೂ ಮುಕ್ಕಾಲಡಿಯ ಕೆದರು ಕಿರಾಪಿನ ಹುಡುಗನೊಬ್ಬ ಕಿರ್ಧಬಲ ಓಡಲಾರಂಭಿಸಿದವನು ನಿರ್ದಿಷ್ಟ ಮನೆ
ಮುಟ್ಟುವುದರೊಳಗಾಗಿ ಮೂರಡಿಯಷ್ಟೆತ್ತರದವನಾಗಿ ಟಪ್ ಟಪ್ ಎನೆ ಮುಚ್ಚಿದ್ದ ಬಾಗಿಲು ತಟ್ಟಿದ,
ತಟ್ಟಿದ ಶಬ್ದಕ್ಕಿಂತ ಅವನು ಆಡುತ್ತಿದ್ದ ಉಸಿರು ಅಡಿಗೆಮನೆಯೊಳಗೆ ಕೇಳಿಸಿ ಕೆದರುಗೂದಲನ್ನು
ತುರುಬಾಕಾದರದಲ್ಲಿ ಕಟ್ಟಿಕೊಳ್ಳುತ್ತ ‘ವೆನ್ನೆಲ್ಲೋ ಅಡಪಿಲ್ಲ’ ಲಗುಬಗೆಯಿಂದ ಬಂದು ಬಾಗಿಲು
ತೆರೆದು ಆ ಹುಡುಗನನ್ನು ನೋಡಿ ವಿಸ್ಮಿತಳಾಗಿ ‘ಏನು’ ಎಂದು ಕೇಳಿದಳು. ಆಕೆಗೆ ಸಹಾಯಕವಾಗಿ ಮಾರ್ಜಾಲ
ವಾಟೀಜ್ ಮ್ಯಾಟರ್ ಅಂತ ಮ್ಯಾಂವ್ಗುಟ್ಟುತ್ತ ಬಂತು. ತಾಯಿ ಯಾರೇ ಅದು ಅಂತ ಬಂದು ಇನ್ನೊಂದು
ಮಗ್ಗುಲು ನಿಂತಳು ಬಾಲ ಮುಕುಂದ ನಾಲಿಗೆಯಿಂದ ಸಿಂಬಳ ಆಪೋಶನ ತೆಗೆದುಕೊಂಡು ಬಾಯಿ ಮುಚ್ಚುವ ಮೊದಲೇ
ಇಷ್ಟಿದ್ದ ಅವರು ಅಷ್ಟೊಂದು ಯೋಚಿಸಿದರು.
"ಏನೋ?" ಎಂದು ಕೇಳಿದಳು. ಆಡಪಿಲ್ಲ.
"ಒಕ ಮುದ್ದಿಸ್ತೆ ಚೆಪ್ತಾನು" ಅಂದ ಬಾಲ ಮುಕುಂದ.
"ಥೂ ನಿನ್ನ!" ಎಂದು ನಿರಾಕರಿಸಿದಳು.
"ತರುವಾತ ಮುದ್ದಿಪ್ಪಿಚ್ಚುಕುಂಟಾನು..." ಬಾಲ ಮುಕುಂದ ಜಾರಿದ್ದ ಚಡ್ಡಿ ಮೇಲೆಳದು ಬಲ್ಲಮರಿ ಗೌರವ
ಕಾಪಾಡಿಕೊಂಡ ಹೇಳಿದ "ಮೀ ಇಂಟಿಕೆವರೋ ಒಕರು ವಸ್ತೂ
ಉನ್ನಾರು... ಬಾಗ ಚೂಸುಕೋವಲೆನು ಪೋಗೊಟ್ಟುಕೊಂಟೆ ಮಳ್ಳಿ ದೊರಕರು ಜಾಗ್ರತ" ಎಂದು ಚಿರಂಜೀವಿಯಂತೆ
ಡೈಲಾಗು ಹೊಡೆದು ತಾನೇ ಒಂದು ‘ಸೂಪರ್ ಡಿಲಕ್ಸು’ ಬಸ್ಸು ಎಂಬಂತೆ ಬುರ್ರ್... ಬುರ್ರ್... ಪೊಂಯ್
ಪೊಂಯ್ ಸದ್ದು ಮಾಡುತ್ತ ಅಂತರ್ಧಾನವಾದನು...
ಯಾರೂ ಏನ್ಕಥೆ? ಕೇಳಬೇಕೆಂದರೆ ಅವನು ‘ಲಾ ಪತಾ’
ತಾಯಿ ಮಗಳು ಪರಸ್ಪರ ಮುಖ ನೋಡಿಕೊಂಡರು. ನನ್ ಮುಖಾನೂ ಸ್ವಲ್ಪ ನೋಡ್ರೆ ಭೇ... ಮಾರ್ಜಾಲ ಅರಚಿತು.
ಯಾರು ಬರುತ್ತಿರಬಹುದು. ತೀರ್ಥರೂನೇನಾದರೂ ಬರುತ್ತಿರಬಹುದೇ? ಆತ ಬರೊದೇನಿದ್ದರೂ
ಮಧ್ಯರಾತ್ರಿಯಲ್ಲಿಯೇ! ಕಾಣೆಯಾಗುವುದೂ ಮಧ್ಯರಾತ್ರಿಯಲ್ಲಿಯೇ... ಮಾಟ ಮಂತ್ರಕ್ಕೆಲ್ಲ
ತಿಲಾಂಜಲಿಯನ್ನಿತ್ತು ಮಟ ಮಟ ಮಧ್ಯಾನ್ನ ಬರುತ್ತಿರುವನೇನೋ ಪ್ರಾಣ ಬೇಕಾದರೂ ಬಿಟ್ಟಾನು!
ವಾಮಾಚಾರವನ್ನು ಮಾತ್ರ ಬಿಡುವ ಪೈಕಿಯಲ್ಲ.
ಮತ್ತಾರಿರಬಹುದು? ಮತ್ತೆ ಪರಸ್ಪರ ಮುಖ ನೋಡಿಕೊಂಡರು. ಮಾರ್ಜಾಲ ಮ್ಯಾವ್ ಗುಟ್ಟಿ ಕಾಳಜಿ
ವ್ಯಕ್ತಪಡಿಸಿತು. ಕಾಗೆ ಕಾಕಾ ಅಂತೌ. ಹಲ್ಲಿ ಲೊಚಗುಟ್ತಿತು. ಇಲಿಗಳು ಪರಸ್ಪರ ಅಡ್ಡಾಡಿ ಸದ್ದು
ಮಾಡಿದವು. ಹಿತ್ತಲಲ್ಲಿದ್ದ ಮಲ್ಲಿಗೆ ಬಳ್ಳಿ ಪುತುಪುತು ಹೂವುಗಳನ್ನುದುರಿಸಿತು.
ಶಕುನಗಳಿಗನುಕೂಲಕರವಾಗಿ ವ್ಯಕ್ತಿಯೊಬ್ಬ ಕಾಣಿಸಿಕೊಂಡ. ಅವನೊಂದಿಗೆ ಲಗೇಜಿನೊಂದಿಗೆ ಕೂಲಿ ಬಂದ.
ತಾಯಿ ಅವನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು. ಅವನು ಆಕೆ ಕಡೆಗೊಮ್ಮೆ ಆಕೆಯ ಮಗಳ ಕಡೆಗೊಮ್ಮೆ
ಆಪ್ಯಾಯಮಾನದಿಂದ ನೋಡಿದ.
"ಅಕ್ಕಾ... ನಾನು ರಘು... ನಿನ್ನ ತಮ್ಮ! ಅವನು ಅಷ್ಟು ಹೇಳಿ ಲೈನು ಕ್ಲಿಯರ್ ಮಾಡದಿದ್ದರೆ ಹೇಗೆ?
ಅರ್ಧ ನೋಟದಿಂದ ಅವನನ್ನು ಕಣ್ಣಿನಲ್ಲಿ ತುಂಬಿಕೊಂಡು ಅನಸೂಯಾ ಹಿತ್ತಲ ಕಡೆ ಓಡಿ ಮಲ್ಲಿಗೆ ಬಳ್ಳಿ
ಅರಳಿಸಿದ್ದ ಹೂಗಳನ್ನು ನೋಡುತ್ತ ನಿಂತಳು. ಎಷ್ಟೇ ಓದಿಕೊಂಡಿದ್ದರೂ; ಎಷ್ಟೇ ಫೆಮಿನಿಸ್ಟು
ಐಡಿಯಾಲಜಿ ತುಂಬಿಕೊಂಡಿದ್ದರೂ ಪ್ರಕಟವಾಗುವ ನಾಚಿಕೆಯನ್ನು ಮಾತ್ರ ಯಾವುದೇ ಹೆಣ್ಣಿಗೆ
ತಡೆಯಲಾಗುವುದಿಲ್ಲ!
ಎಷ್ಟು ದಿನಗಳ ನಂತರ ತಾನು ತನ್ನ ತಮ್ಮನನ್ನು ನೋಡುತ್ತಿರುವುದು? ಆವಾಗ ಇಷ್ತಿದ್ದ? ಬಾಯಲ್ಲಿ
ಬೆರಳಿಟ್ಟರೆ ಕಡಿಯಲಿಕ್ಕೆ ಬರುತ್ತಿರಲಿಲ್ಲ. ಈಗೆಂಗಾಗಿ ಬಿಟ್ಟಿರುವನಲ್ಲ ತನ್ನ ಮುದ್ದು ತಮ್ಮ!
ಆಕೆಯ ಮುಖದ ತುಂಬ ವಾತ್ಸಲ್ಯದ ತೊರೆ ಜುಳುಜುಳು ಹರಿಯತೊಡಗಿತು.
"ರಘೂ! ರಘುರಾಮ!! ಉದ್ಗರಿಸಿದಳು.
ಕಾಲಿಗೆ ನೀರು ಕೊಟ್ಟಳು. ಅವನು ಕಾಲು ತೊಳೆದುಕೊಂಡು ಒಳಗಡೆ ಬಂದ. ಅಕ್ಕ ತೋರಿಸಿದ ಕುರ್ಚಿ ಮೇಲೆ
ತಮ್ಮ ಕುಳಿತುಕೊಂಡ. ಒಂದು ನೋಟದಿಂದ ಮನೆ ವಾತಾವರಣ ಅರ್ಥ ಮಾಡಿಕೊಂಡ. ಅನಸೂಯ ಒಳಗಡೆ ಕಾಫಿ
ಮಾಡಿದಳು.
"ಅನಸೂಯಾ... ಕಾಫಿ ತಗೊಂಡ್ಬಾರೆ... ಯಾಕೆ ನಾಚ್ಕೋತಿ... ಬಂದಿರೋದು ಬೇರೆ ಯಾರೂ ಅಲ್ಲ. ನಿನ್ನ
ಸೋದರ ಮಾವ..." ಸಾಂದರ್ಭಿಕವಾಗಿ ರುಕ್ಕಮ್ಮ ಸಂಕ್ಷಿಪ್ತ ರೀತಿಯಲ್ಲಿ ಪರಿಚಯ ಭಾಷಣ ಮಾಡಿದಳು.
ಅನಸೂಯ ಕೈಯಲ್ಲಿ ಕಾಫಿ ಗ್ಲಾಸುಗಳಿದ್ದ ಟ್ರೇ ಹಿಡಿದುಕೊಂಡು ಹೊರಬಂದಳು. ದುಷ್ಯಂತನನ್ನು ಗಾಂಧರ್ವ
ವಿವಾಹವಾಗುವಾಗ ಶಾಕುಂತಳ ತಲೆತಗ್ಗಿಸಿದ್ದಳಲ್ಲ ಹಾಗೆ.
ಬೆಳದಿಂಗಳಂತಿದ್ದ ಅಕ್ಕನ ಮಗಳ ಮುಖ ನೋಡುತ್ತ ರಘು ಕಾಫಿ ಕಪ್ಪು ತೆಗೆದುಕೊಂಡ .
"ನಮ್ ಅನಸೂಯಾ ಏನಕ್ಕಾ? ಎಷ್ಟೊಂದು ಬೆಳೆದು ದೊಡ್ಡವಳಾಗಿದ್ದಾಳಲ್ಲಕ್ಕಾ ನಾನು ಯಾರೋ
ಅಂದ್ಕೊಂಡಿದ್ದೆ ಗುತೇ ಸಿಗ್ಲಿಲ್ಲ!" ನಗರದ ನುಡಿಗಟ್ಟಿನಲ್ಲಿ ಮಾತಾಡಿದ.
ಆಕೆಯ ಮುಖದ ಬಿಗುವು ಸಡಲಿತು.
ಕಾಫಿ ಕುಡಿದಿದ್ದಾಯಿತು. ಸ್ನಾನ, ಊಟದ ಏರ್ಪಾಡು ಮಾಡಲು ಅನಸೂಯ ಒಳಗಡೆ ಹೋದಳು. ಅಕ್ಕ ತಮ್ಮನ
ನಡುವೆ ಮೌನ ಆವರಿಸಿತು. ತಮ್ಮೀರ್ವರಲ್ಲಿ ಮೊದಲು ಯಾರು ಮಾತು ಪ್ರಾರಂಭಿಸುವುದು?
ತವರು ಮನೆಯ ಅಭದ್ರ ಬದುಕು, ಮೊಮ್ಮಕ್ಕಳನ್ನು ಕಾಣುವ ಮೊದಲೆ ತೀರಿಕೊಂಡ ತಂದೆತಾಯಿ; ಇನ್ನೊಬ್ಬ
ತಮ್ಮನನ್ನು ತಾನು ತಂದಿಟ್ಟುಕೊಂಡಿದ್ದು; ಅವನು ಶಾಲೆಗೆ ಹೋಗದೆ ಕದ್ದು ತಿರುಗುತ್ತಿದ್ದುದು. ಗಂಡ
ಏನು ಸಿಕ್ಕರೆ ಅದರಿಂದಲೆ ಹೊಡೆಯುತ್ತಿದ್ದುದು, ಅವನು ಹೇಳದೆ ಕೇಳದೆ ಓಡಿಹೋದದ್ದು. ಎಲ್ಲವು ಒಂದೆ
ಏಟಿಗೆ ನೆನಪಾಗುವುದು.
ರಘು ಮೀಸೆ ಮೂಡುವ ಮೊದಲೊಮ್ಮೆ ಬಂದಿದ್ದ. ಮೀಸೆ ಮೂಡಿದ ಮೇಲೊಮ್ಮೆ ಬಂದಿದ್ದ. ಹೀಗೆ ಬಂದು ಹಾಗೆ
ಹೊರಟುಹೋಗಿದ್ದ. ಹೀಗಾಗಿ ಅವನ ನೆನಪು ಸರಿಯಾಗಿ ಯಾರಿಗೂ ಇಲ್ಲ. ‘ಅಕ್ಕಾ ನಾನು ನಿನ್ನ ತಮ್ಮ’ ಎಂದು
ಹೇಳದಿದ್ದಲ್ಲಿ ಖುದ್ದ ರುಕ್ಕಮ್ಮನೇ ತಾನುಂಡಬಿಟ್ಟ ಮೊಲೆಯನ್ನುಂಡವನನ್ನು ಗುರುತಿಸುತ್ತಿರಲೇ
ಇರಲಿಲ್ಲ.
ಅಕ್ಕ ತಮ್ಮ ಇಬ್ಬರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅವರಿಬ್ಬರಿಗೂ ಪರಸ್ಪರ
ತೋಡಿಕೊಳ್ಳುವುದೇನೋ ಸಾಕಷ್ಟಿತ್ತು. ಒಡ್ಡಿನ ಒಂದು ಕಲ್ಲು ಕಿತ್ತರೆ ಯಾವ ಪ್ರಕಾರವಾಗಿ ಕೆರೆ
ಕಿತ್ತುಕೊಂಡು ನುಗ್ಗುವುದೋ ಹಾಗೆಯೇ ಮನದ ದುಗುಡ ಎಂಬುದು ಕೂಡ. ಯಾರಾದರೊಬ್ಬರು ಸೋ ಎಂದರೆ ತಾನೆ
ಉಳಿದುದೆಲ್ಲ. ಉದ್ವಿಗ್ನತೆಯಿಂದಾಗಿ ಸಾವಿರದೆಂಟು ಮಾತುಗಳ ಪೈಕಿ ಯಾವ ಮಾತನ್ನು ಹೇಗೆ
ಪ್ರಾರಂಭಿಸಬೇಕೆಂದು ಆ ಕ್ಷಣ ಅವರಿಗೆ ಹೊಳೆಯಲಿಲ್ಲ.
"ಭಾವ ಎಲ್ಲಿ ಕಾಣಿಲ್ಲಲ್ಲ!" ಎಂದು ರಘು ಕೇಳಬೇಕೆನ್ನುವಷ್ಟರಲ್ಲಿ ಅಕ್ಕನೇ ಮುಂದೆ ಬಿದ್ದು ‘ಪತ್ರ
ಮುಟ್ತಾ’ ಎಂದು ಕೇಳಿಬಿಡಬೇಕೆ!
"ಯಾವ ಪತ್ರ?" ಆಶ್ಚರ್ಯ ವ್ಯಕ್ತಪಡಿಸಿದ. ಒಂದು ಕ್ಷಣದಲ್ಲಿ ಪರಿಸ್ತಿತಿ ಅರ್ಥೈಸಿಕೊಂಡು "ಓಹೋ!
ಅದು ಬಂತೂ ಬಂತೂ" ಅಂದ.
ವ್ಯವಹಾರದ ನಿಮಿತ್ತ ಆತ ಕಾರ್ಗಲ್ಲಿಗೆ ಕಳೆದ ಎರಡು ತಿಂಗಳ ಹಿಂದೆಯೇ ಬಂದಿದ್ದ. ಅಲ್ಲಿನ
ಹೆಜ್ಜತ್ತಾಡಿ ಶ್ರೀಕೃಷ್ಣಭಟ್ಟರ ಭೂಮಿಯನ್ನು ಅವರಿಗೇ ಕೊಡಸುವ ನಿಮಿತ್ತ ಸೆಂಟರಲ್ ಕಮಿಟಿ
ಕನ್ವೀನಿಯರ್ ಅಕ್ಬರ್ ರಘುವನ್ನು ನೇಮಿಸಿದ್ದ. ಮುಂದಿನ ವರ್ಷದ ಜನರಲ್ ಬಾಡಿ ಮೀಟಿಂಗಿನಲ್ಲಿ
ರಘುವನ್ನೇ ಕಮಿಟಿ ಕನ್ವೀನಿಯರನ್ನಾಗಿ ನೇಮಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಅವನು ಯಾವುದೇ
ಸಮಸ್ಯೆಯನ್ನು ಬಿಗಡಾಯಿಸದ ಹಾಗೆ ನೋಡಿಕೊಳ್ಳುತ್ತಾನೆ. ಯಾರನ್ನೂ ದ್ವೇಷಿಸಲಾರ. ಯಾರಿಂದಲೂ
ದ್ವೇಷಿಸಿಕೊಳ್ಳರಿಯ. ಏನೇ ಪರಪಾಟು, ಲೋಪ ದೋಷಗಳು ವ್ಯವಸ್ಥೆಯಲ್ಲಿ ಮಾತ್ರ ಇರಲು ಸಾಧ್ಯ.
ಖಿhe iಜeಚಿs oಜಿ ಣhe soಛಿieಣಥಿ ಚಿಡಿe ಣhe iಜeಚಿs oಜಿ ಣhe ಡಿuಟiಟಿg ಠಿಚಿಡಿಣಥಿ ಎಂದು
ಮಾರ್ಕ್ಸ್ ಹೇಳಿರುವುದರ ಬಗೆಗೂ ಯೋಚಿಸುತ್ತಿರುವ ರಘು ಎಂದೂ ಉಗರಿನಿಂದ ಆಗುವ ಕೆಲಸಕ್ಕೆ
ಕೊಡಲಿಯನ್ನು ಉಪಯೊಗಿಸುವುದಿಲ್ಲ. ಅಥವಾ ಕೊಡಲಿಯಿಂದಾಗುವ ಕೆಲಸಕ್ಕೂ ಅವನು ಉಗುರನ್ನೇ
ಉಪಯೋಗಿಸುತ್ತಾನೆ. ಅದೇ ಅವನ ಜಾಣ್ತನ. ಇದರಿಂದಾಗಿ ಪಾರ್ಟಿಯ ಬಹುತೇಕ
ಸದಸ್ಯರಿಗೆ ರಘುನ ಮೇಲೆ ಪ್ರೀತಿ.
ಕಾರ್ಗಲ್ಲಿನಿಂದ ಸೀದ ಬೆಂಗಳೂರಿಗೆ ಬರಬೇಡವೆಂದು ಅಕ್ಬರ್ ಹೇಳಿದ್ದ. ಅದು ಅಲ್ಲದೆ ಒಡಹುಟ್ಟಿದ
ಅಕ್ಕನನ್ನು ನೋಡಬೇಕೆನಿಸಿತು. ಅನಸೂಯಳ ನೆನಪು ಇತ್ತೀಚೆಗೆ ಆವರಿಸಿತ್ತು. ಅವಳ ಅಭಿಪ್ರಾಯ
ತಿಳಿದುಕೊಂಡ ನಂತರವೇ ತನ್ನ ಮದುವೆ ಬಗ್ಗೆ ಯೋಚಿಸಬೇಕೆಂದು ನಿರ್ಧರಿಸಿದ್ದ. ಇವಕ್ಕೆಲ್ಲ
ಕಳಸವಿಟ್ಟಂತೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಎಲ್ಲೋ ಭಾವ ರುದ್ರನಾಯಕನನ್ನು ನೋಡಿದಂತೆ
ನೆನಪು. ಆತ ತುಂಬ ದೂರ ಹೋಗುವ ರೈಲಲ್ಲಿ ಕೂತಿದ್ದ ಮತ್ತೊಮ್ಮೆ ನೋಡಬೇಕೆನ್ನುವಷ್ಟರಲ್ಲಿ ಜಿ.ಟಿ
ಬಂದು ಅಡ್ಡನಿಂತು ಬಿಟ್ಟಿತ್ತು. ಈ ಕಡೆಯಿಂದ ಹೋಗಿ ಆ ಕಡೆಗೆ ಬರಬೇನ್ನುವಷ್ಟರಲ್ಲಿ ಆ ಟ್ರೇನ್
ಹೋಗಿಬಿಟ್ಟಿತ್ತು. ತಾನು ನೋಡಿದ್ದು ರುದ್ರನಾಯಕ ಹೌದೋ ಅಲ್ಲವೋ ಅದು ಬೇರೆ ಪ್ರಶ್ನೆ.
ನೀಳಗಡ್ಡಬಿಟ್ಟು ಕಾವಿ ನಿಲುವಂಗಿ ಧರಿಸಿದ್ದ ಆತ ತನ್ನ ಭಾವ ಆಗಿರಲಿಕ್ಕಿಲ್ಲಬಹುದು ಎಂದು ಮರು
ಕ್ಷಣ ಸಮಾಧಾನ ತಂದುಕೊಂಡ ನೋಡಿರದಿದ್ದರೂ ಅಕ್ಬರ್ಗೆ ಪರಿಚಯ ಇಲ್ಲದಿರಲಿಲ್ಲ. ಸಾಂಧರ್ಭಿಕವಾಗಿ
ತನ್ನ ಪರಮಪೂಜ್ಯ ಮಾವನವರಬಗ್ಗೆ ಅಷ್ಟಾದಶ ವರ್ಣನೆ ಮಾಡಿ ಹೇಳಿದ್ದ. ಚಿಕನ್ ಕಬಾಬ್ಗೆ ಬಳಸುವ
ಎಲ್ಲಾ ಮಸಾಲೆ ಬೆರೆಸಿ ಕಮಿಟಿ ಸದಸ್ಯರ ಹೃದಯಗಳಲ್ಲಿ ರುದ್ರ ನಾಯಕನ ಭವ್ಯ ರೂಪವನ್ನು ಕಡೆದು
ನಿಲ್ಲಿಸಿಬಿಟ್ಟಿದ್ದ. ಎಡಪಂಥೀಯ ವಿಚಾರಧಾರೆ ಅನುಷ್ಟನಕ್ಕೆ ಇಂಥವರ ಅಗತ್ಯ ತುಂಬ ಇರುವುದೆಂದೂ;
ವಾಮಾಚಾರ ಎಂಬ ಪದದ ಪೂರ್ವಾಧವೇ ಎಡಪಂಥಕ್ಕೆ ಪುಷ್ಟಿಕೊಡುವುದೆಂದು ಇಡೀ ಕಮಿಟಿ ಅಭಿಪ್ರಾಯ
ಪಟ್ಟಿತ್ತು. ರುದ್ರನಾಯಕನಂಥವರೊಬ್ಬರು ಇದ್ದುಬಿಟ್ಟರೆ ಮಾವೋ, ಲೆನಿನ್ರವರು ಕನಸಿಸಿದ ಸರ್ವೇ ಜನೋ
ಸುಖಿನೋ ಭವಂತು ಸಮಾಜವನ್ನು ಪ್ರತಿಷ್ಟಾಪಿಸಿಬಿಡಬಹುದೆಂದು ಕಾಮ್ರೇಡ್ ಅಕ್ಬರ್ ಹೇಳಿದ್ದ.
ಕಾರ್ಗಲ್ಲಿನಲ್ಲಿ ಹೋಗಿ ಕೋಗಿಲೆ ಮನೆಯ ಗಣಪತಿಯಿಂದ ಶ್ರೀಕೃಷ್ಣ ಭಟ್ಟರಿಗಾಗಿರುವ ತೊಂದರೆ
ನಿವಾರಿಸಿ ಬರುವಾಗ್ಗೆ ಹೇಗಾದರೂ ಮಾಡಿ ರುದ್ರನಾಯಕನನ್ನು ಪುಸಲಾಯಿಸಿ ಕರೆತಂದು ಕಮಿಟಿ ಎದುರು
ಹಾಜರುಪಡಿಸಬೆಕೆಂದು ಅಕ್ಬರು ರಘುವನ್ನು ಬೀಳ್ಕೊಟ್ಟಿದ್ದ.
ಸ್ವಲ್ಪ ಡೌಲಿಗೆ ಹೃದಯ ಕರಗಿ ಬಿಡುವ ರುದ್ರನಾಯಕ ಮನೆಯಲ್ಲಿ ಕಂಡುಬರದಿದ್ದುದರಿಂದ ರಘು ತನಗಾದ
ಬೇಸರವನ್ನು ತೋರಗೊಡಲಿಲ್ಲ. ಅಲ್ಲದೆ ಅಕ್ಕ ಬರೆದಿರಬಹುದಾದ ಪತ್ರವೂ ತನಗೆ ತಲುಪಿಲ್ಲ. ತನ್ನ
ವಿಳಾಸಗಳೋ ದಿನಕ್ಕೊಂದರಂತೆ ಬದಲಾಗುತ್ತಿರುತ್ತವೆ. ಆಕೆ ಬರೆದ ಪತ್ರ ಯಾರ ವಿಳಸಕ್ಕೆ
ಹೋಗಿರುವುದೇನೋ? ತಾನು ವಿಳಾಸ ರಹಿತನೆಂದು ತಿಳಿದರೆ ಅಕ್ಕ ಬೇಸರ ಮಾಡಿಕೊಳ್ಳುತ್ತಾಳೆ!
"ಹ್ಹಾ ಹ್ಹಾ! ಬಂತು; ಬಂತಕ್ಕ" ಎಂದ. ವ್ಯವಸ್ಥೆ ಬದಲಾಯಿಸುವವರು ಸಾಂದರ್ಭಿಕವಾಗಿ
ಸುಳ್ಳುಹೇಳದಿದ್ದರಾಗುವುದೇ?
ಸುಳ್ಳುಹೇಳುತ್ತಿರುವನೋ? ಹೇಗೆ? ರುಕ್ಕಮ್ಮ ತಮ್ಮನ ಕಡೆ ಪ್ರಶ್ನಾರ್ಥಕವಾಗಿ ನೋಡಿದಳು. ರಘುಗೆ
ಅಕ್ಕನ ಮುಖ ನೇರವಾಗಿ ನೋಡುವ ಧೈರ್ಯವಿರಲಿಲ್ಲ. ತಪೋಭಂಗಿಯಲ್ಲಿ ಕೂತಿರುವ ಭಾವನ ಫೋಟೋ ಕಡೆ ನೋಡಿದ.
"ಆಮೇಲೆ ನಿಧಾನವಾಗಿ ಎಲ್ಲ ಮಾತಾಡಿದ್ರಾಯ್ತು. ಮೊದ್ಲು ಸ್ನಾನ ಮಾಡಿ ಊಟ ಮಾಡು ನಡೆ" ರುಕ್ಕಮ್ಮ್
ನಿಟ್ಟುಸಿರು ಬಿಟ್ಟಳು.
ರಘುರಾಮ ಎದ್ದು ಸ್ನಾನ ಮುಗಿಸಿದ. ಎಷ್ಟೊ ದಿನಗಳ ನಂತರ ಒಳ್ಳೆಯ ಸ್ನಾನ ಮಾಡಿದ
ಅನುಭವವಾಯಿತು. ತಾಯಿಯ ಕಟ್ಟಾಜ್ಞೆಯಂತೆ ಅನಸುಯ ಊಟ ಬಡಿಸಿದಳು. ಎಷ್ಟೊ ದಿನಗಳ ಬಳಿಕ ಒಳ್ಳೆಯ ಊಟ
ಮಾಡಿದ ಅನುಭವವಾಯಿತು.
ಬಡಿಸುತ್ತಿದ್ದ ಅನಸೂಯಳನ್ನು ಮಾತಾಡಿಸಿದರೆ ಚೆನ್ನಾಗಿತ್ತೂಂತ ಕೈತೊಳೆದುಕೊಳ್ಳುತಿರುವಾಗ
ಅಂದುಕೊಂಡ. ಆಕೆ ತನ್ನ ಮುಖದಿಂದ, ಮಾತಾಡಲಿಕ್ಕೆ ಅನುಕೂಲವಾದ ವಾತಾವರಣ ನಿರ್ಮಿಸುತ್ತಿಲ್ಲ.
ಎಷ್ಟೇಇದ್ದರೂ ಆಕೆ ಪದವೀಧರೆ ನಡುವಳಿಕೆಗಳ ಸೂಕ್ತ ಬಲ್ಲವಳು.
ತಾಯಿ ಬಣ್ಣದ ತಗಡಿನ ತುತ್ತೂರಿ ಕಂಠಪಾಟ ಮಾಡುತ್ತಿರುವಾಗ ಹುಟ್ಟುತ್ತಲೇ ಕಿಟಾರನೆ
ಕಿರುಚಿಕೊಂಡಂಥವಳು.
ಅಡುಗೆ ಮನೆಯ ಬಾಗಿಲು ದಾಟುವಾಗ ಡರ್ರನೆ ಡೇಗಿದ. "ಸಯಾಗಿ ನೀಡಿದೇ ಇಲ್ವೇ ಮಾತಾಡ್ತಾ
ನೀಡಬೇಕಾಗಿತ್ತು. ನನ್ತಮ್ಮ ಏನಂಕೊಂಡನೋ ಏನೋ" ಎಂದು ಗೊಣಗಿಡುತ್ತ ಅಕ್ಕ ಪಾತ್ರೆ ಪಡಗ
ಮಾಡುತ್ತಿರುವ ಸದ್ದು ಕೇಳಿಸಿತು.
ಏನನ್ನೋ ಧೇನಿಸುತ್ತ ಹಾಗೆ ಒಂದು ಜೊಂಪು ನಿದ್ದೆ ಮಾಡಿದ. ಅವನು ಎಚ್ಚರಾಗುವ ಮೊದಲೆ ಅಕ್ಕ ಮಗಳು ಊಟ
ಮುಗಿಸಿದ್ದರು. ಬಾಗಿಲಲ್ಲಿ ಇಣುಕಿ ಓಡುತ್ತಿರುವ ಮಕ್ಕಳು, ತಂತಮ್ಮ ಮನೆಗಳಿಂದಲೇ ಇಣುಕುತ್ತಿರುವ
ದೊಡ್ಡವರು, ಚಿಕ್ಕವರು, ಅಕ್ಕ ಗದರಿಕೊಳ್ಳುತ್ತಿರುವುದು ಕೇಳಿಸಿಕೊಳ್ಳುತ್ತ ಹಾಗೆ ಅರೆ
ಎಚ್ಚರದಲ್ಲಿ ಮಲಗಿಕೊಂಡಿದ್ದ.
ಏನೋ ಹಾಳಾದೋವೇನು? ಎಂದಾದ್ರೂ ಮಂದೀನ ನೋಡಿದ್ದಾರೋ ಇಲ್ಲೋ? ಗೂಬೆಗಳಂಗೆ ಯಾಕಾಡ್ತಿದ್ದಾವಂತೀನಿ
ನಮ್ಮನ್ಯಾಗೇನು ಗೊಂಬೆ ಕುಣಿಯಾಕತ್ಯಾವೇನು? ರುಕ್ಕಮ್ಮ ಈ ಪ್ರಕಾರವಾಗಿ ಗೊಣಗಿಕೊಳ್ಳುತ್ತಿರುವಾಗಲೇ
ಬಸವನ ಬಾವಿ ಮನೆಯ ಭವಾನಿ ಗಂಗವ್ವ ಕೈಲಿದ್ದ ಚುಟ್ಟಾ ಸೇದುತ್ತ ಹೊಗೆ ಎದೆಗೂಡಿಗಡರಿ ಕೊಕ್ ಕೊಕ್
ಕೆಮ್ಮುತ್ತ ಗತಕಾಲದಲ್ಲಿ ಗಂಡ ಊನ ಮಾಡಿದ್ದ ಬಲಗಾಲನ್ನು ಎಳೆದು ಹಾಕುತ್ತ, ಬಡಗೇರ ಮಾನಪ್ಪಾಚಾರಿ
ಕೊಡಿಸಿದ್ದ ಬೆಂಡೊಲೆಗಳನ್ನು ಬಿಸಿಲಿಗೆ ಥಳಥಳಿಪುಸುತ್ತ "ಏನ್ಮಾಡೀಯಭೇ ರುಕ್ಕಮ್ಮ" ಎಂದು ಗುಬ್ಬಿ
ಬೆದರಿ ಹಾರಿ ಹೋಗುವಂತೆ ಕೂಗುತ್ತ ಒಳಪ್ರವೇಶಿದಳು. ಗಂಡ ಬದುಕಿದ್ದಾಗೆಂದೂ ಆಕೆ ದ್ವನಿ ಎತ್ತರಿಸಿ
ಮಾತಾಡಿದಾಕೆಯಲ್ಲ, ಮುಖ ಎತ್ತಿ ಇನ್ನೊಬ್ಬರನ್ನು ನೋಡಿದಾಕೆಯಲ್ಲ. ಸೂಳೇರ ಸಹವಾಸ ಮಾಡೀ ಮಾಡೀ
ಗುಣವಾಗದ ಖಾಯಿಲೆಗಳನ್ನು ತೊಂಕದ ಕೆಳಗೆಲ್ಲ ಹೊತ್ತಿಸಿಕೊಂಡು ತಿಂಗಳ ದಿನಮಾನ ನರಳೀ ನರಳೀ ಕೊನೆ
ಉಸುರು ಬಿಡುವಾಗ ಗಂಗೀ ನನ್ ಕೈಹಿಡ್ದ ನಿಂಗೆ ಸುಖಕೊಡ್ಲಿಲ್ಲ ಸಾಲ ಸೂಲ ಮಾಡಿ ನಿಂಗೇನು ಉಳುಸ್ದೆ
ಸಾಯ್ತಿದ್ದೀನಿ... ಮುಂದೆ ನೀನೆಂಗ ಬದುಕ್ತೀಯೋ... ಅದು ನಿಂಗೆ ಬಿಟ್ಟಿದ್ದು... ಮತ್ತೆ ಮ...
" ಎಂದು ಏನೋ ಹೇಳಲು ಪ್ರಯತ್ನಿಸಿ ಮನೆಯಲ್ಲಿ ತನ್ನ ಶವ ಸಂಸ್ಕಾರಕ್ಕೂ ದಮ್ಮಡಿ ಬಿಡದೆ ಖಾಲಿ ಮಾಡಿ
ಪ್ರಾಣ ಬಿಟ್ಟಿದ್ದ. ಬಡಗೇರ ಮಾನಪ್ಪ ಆ ಮೂರು ವರ್ಷಗಳ ಕಾಲ ಆಶ್ರಯ ಕೊಡದಿದ್ದಲ್ಲಿ ಈ ಭವಾನಿ
ಗಂಗವ್ವ ಎಂದೋ ಕೊಲ್ಲಾಪುರ ಮಹಾಲಕ್ಷ್ಮಿ ಪಾದ ಸೇರಿಬಿಟ್ಟಿರುತ್ತಿದ್ದಳು. ಚುಟ್ಟ ಸೇದುವುದರ ಮುಲಕ
ಪುರುಷ ಪ್ರಧಾನ ಸಮಾಜದಲ್ಲಿ ಒಂದು ಭದ್ರ ಬುನಾದಿ ಹಾಕಿಕೊಂದಿದ್ದ ಗಂಗವ್ವ ಓಣಿ ಜನ ಸದಾ
ಸಂತೋಷವಾಗಿರಬೇಂದು ಬಯಸುವಾಕಿ. ಇಂಥ ಆಕಿ ಯಾರ ಮನೆಗೆ ಬೇಕಾದರೂ ಧೈರ್ಯವಾಗಿ ಹೋಗುತ್ತಿದ್ದಳು.
ಕಷ್ಟಸುಖ ವಿಚಾರಿಸಿ ಬರುತ್ತಿದ್ದಳು. ದಿವಂಗತ ಮಾನಪ್ಪಾಚಾರಿಯ ಮಮ್ಮಗಳ ಮದುವೆಯ ಉಸ್ತುವಾರಿಗೆಂದು
ಕಳೆದೆರಡು ತಿಂಗಳಿಂದ ಊರು ಬಿಟ್ಟಿದ್ದ ಆಕೆ ಕಳೆದ ವಾರವಷ್ಟೆ ಮರಳಿದ್ದಳು.
"ಗಂಗವ್ವತ್ತೆ... ಬಾ... ಕುಂತ್ಗ... ಊಟ ಆಯ್ತೇನು! ನನ್ನ್ತಮ್ಮ ಬಂದಾನತ್ತೆ..." ರುಕ್ಕಮ್ಮ
ಕೂಡ್ರಲು ಚಾಪೆ ಹಾಕಿದಳು. ನಮಲಲು ಎಲೆ ಅಡಿಕೆ ಚೀಲ ಸರಿಸಿದಳು.
"ಆಹ್... ನನ್ನ ಹಾಟಗಳ್ಳ... ಬಂದಾನೇನು? ಯಾವಾಗ ಬಂದ? ಏನ್ಕಥೆ? ನಾನು ಮಡಿಯುಡಿಯಿಂದ ನೀರು
ತರುವಾಗ ಎಷ್ಟೊಂದು ಗೋಳೊಯ್ಕೊಳ್ತಿದ್ದನೆ? ಎಲ್ಲಿದ್ದಾನೆ ತೋಸು ಮತ್ತೆ" ಎಂದು ಕೂತು ರುಮಿರುಮಿ
ಸುತ್ತ ನೋಡುತ್ತ ಗೋಟಡಿಕೆಯನ್ನು ಕಟುಮ್ಮನೆ ಕಡಿದಳು.
ವಿಶ್ವಕರ್ಮಿಣಿಯಾದ ಗಂಗವ್ವ ಮಾನಪ್ಪಾಚಾರಿ ತೀರೋವರೆಗೂ ಮಹಾ ಕಠೋರ ಸಂಪ್ರದಾಯಸ್ಥೆಯಾಗಿದ್ದಳು.
ಪೂಜೆ ಪುನಸ್ಕಾರ ಮುಗಿಸಿ ಉಂಡು ಬರೋವರೆಗೂ ಆಕೆ ಹತ್ತಿರ ಯಾರೂ ಸುಳಿದಾಡುವಂತಿರಲಿಲ್ಲ. ಆಗಿನ್ನೂ
ರಘುರಾಮ ‘ನಾನು ಪಂಜರದ ಹಕ್ಕಿ ನನಗಾರು ಗತಿ’ ಎಂದು ಓದಿಕೊಳ್ಳುತ್ತಿದ್ದ ವಯಸ್ಸಿನವನು. ಯಾರಾದರೂ
ಮಡಿ ಆಚಾರ ಅಂತ ನಿಗರಾಡುತ್ತಿದ್ದರೆಂದರೆ ಹೋಗಿ ಅವರ ಆಚಾರ ಕುಲಗೆಡಸಿದ ನಂತರವೇ ತಟ್ಟೆಗೆ
ಕೈಹಚ್ಚುತ್ತಿದ್ದನು. ಅವನ ಟೈಮುಪಾಸಿಗೆ ಗಂಗವ್ವ ತಕ್ಕ ಗಿರಾಕಿಯಾಗಿದ್ದಳು. ಆಕೆ ಮಡಿಯಿಂದ ನೀರು
ತರುವಾಗ ಮಿಂಚಿನಿಂದ ಪ್ರತ್ಯಕ್ಷವಾಗಿ ಆಕೆಯ ತುಂಬಿದ ಕೊಡವನ್ನು ಮುಟ್ಟಿ ಓಡಿಬಿಡುತ್ತಿದ್ದನು. ಆಗ
ಗಂಗವ್ವ ಎಲೋ ನನ್ ಹಾಟುಗಳ್ಳನೇ ಎನ್ನದೆ ಬಾಯಿ ಮುಚ್ಚುತ್ತಿರಲಿಲ್ಲ.
"ಅದೇನು, ಅನ್ಕೊಂಡೀಯೋ? ಅದನ್ನು ಮಾಡ್ವಂತೀ ಮೊದ್ಲು ಎಲೆ ಅಡಕೆ ಹಾಕ್ಕೊಂಡು ಆರಾಮು ತಗೋ" ಎಂದು
ವಿಶೇಷ ಕಳೆಯಿಂದ ನುದಿದಳು!
ಅವರಿಬ್ಬರು ಪರಸ್ಪರ ಅದೂ ಇದೂ ಮಾತಾಡಿಕೊಳ್ಳತೊಡಗಿದರು. ತನ್ನ ಗಂಡನ ಸಮಾಚಾರದ ಬಗ್ಗೆ ಮುದುಕಿ
ಅದೆಲ್ಲಿ ಪ್ರಸ್ತಾಪಿಸಿ ಬಿಡುವುದೋ ಎಂಬ ಆತಂಕದ ಬಗ್ಗೆ ರುಕ್ಕಮ್ಮ ಪ್ರತಿ ಮಾತನ್ನು ಜಾಗ್ರತೆಯಿಂದ
ಮಾತಾಡುತ್ತಿದ್ದಳು. ಆದರೆ ಗಂಗವ್ವ ಯಥಾ ರೀತಿಯದು.
"ಅಲ್ಲೇ ನನ್ ಸೊಸೀಯೇ! ನಿನ ಗಂಡ ಹೆಂಡ್ತಿ ಮಗಳ್ನ ಬಿಟ್ಟು ಹೇಳ್ದೆ ಕೇಳ್ದೆ ಹೋಗಿ ಭಾಳ ದಿನ
ಆಯ್ತಂತಲ್ಲೇ? ಅವ ಹೊಟ್ಟೆಗೇನು ತಿಂತಿದ್ದ ಅಂತೀನಿ... ಇಂಥ ಸುಮಾರು ದೂರಾಗ ಹರೇವಿರೋ ನಿನ್ನೂ;
ಕೈಗೆ ಬಂದಿರೋ ಅನಸೂಯಾನ್ನೂ ಬಿಟ್ಟು ತಿಂಗಳಗಟ್ಟಳೆ ಹೋಗೋದೆಂದ್ರೇನು? ಅವನೊದೆ ಬರ್ಲಿ... ಕಿರಾಪು
ಹಿಡ್ದು ಕೇಳ್ಳಿಲ್ಲಾ... ನಾನು ನೀಲ್ಗುಂದದ ನಾಗಪ್ಪಾಚಾರಿ ಮಗಳೇ ಅಲ್ಲ" ಬಾಯಲ್ಲಿ ಕವಳ ಒತ್ತರಿಸಿ
ತುಂಬಿಕೊಳ್ಳದಿದ್ದಲ್ಲಿ ಆಕೆ ಇನ್ನೂ ನಾಲ್ಕು ಮಾತು ಹೆಚ್ಚಿಗೆ ಮಾತಾಡುವಾಕಿ. ಕವಳ ಉಗುಳಿ ಬಂದು
ಮತ್ತೆ ಮಾತಾಡಲೆಂದು ಆಕೆ ತೆರೆದ ಬಾಯಿಯ ಮೇಲೆ ಕೂಡಲೆ ರುಕ್ಕಮ್ಮ ಕೈ ಇಟ್ಟಳು. ಸಮುದ್ರ ಮಂಥನ
ಕಾಲದಲ್ಲಿ ಹುಟ್ಟಿದ ವಿಷವನ್ನು ಗಂಡನ ಕೊರಳ ಮೇಲೆ ಪಾರ್ವತಿ ಕೈ ಇಟ್ಟು ತಡೆದಳಲ್ಲ ಹಾಗೆ.
"ಮೆಲ್ಲಗೆ ಮಾತಾಡತ್ತೆ... ನಿನ್ ಮೊಮ್ಮಗ ಮಲಕ್ಕಂಡಿದಾನೆ ಅವ್ನು ಕೇಳಿಸ್ಕೊಂಡ್ರೆ
ಏನಂದ್ಕೊಂಡಾನು?" ಎಂದು ರುಕ್ಕಮ್ಮ ಪಿಸುಗುಟ್ಟಿದಳು.
"ಆಹ್; ಹೌದು, ಹಂಗಾದ್ರೆ ಅಲ್ಲಿ ಮಲಕ್ಕೊಂಡಿರೋನು ರಘುನೇನು?... ನನ್ ನಾಲ್ಗೆ ಬಿದ್ದು ಹೋಗ್ಲಿ...
ಎಂಥಾ ಮಾತಾಡಿಬಿಟ್ನೆಲ್ಲ..." ತನ್ನ ಪಾಡಿಗೆ ತಾನು ಗೊಣಗಿಕೊಂಡು ಮುಂದುವರಿದು ಹೇಳಿದಳು.
"ಅವನೇ ರಘುರಾಮನೇನು? ಎಷ್ಟುದ್ದ ಎಷ್ಟಗಲ ಬೆಳೆದಿದ್ದಾನಲ್ಲ... ಈಗಿನ ಕಾಲದ ಹುಡುಗ್ರು
ಇವತ್ತಿದ್ದಂಗ ನಾಳಿರೋಲ್ಲ, ನಾಳಿದ್ದಂಗ ನಾಡಿದ್ದಿರಲ್ಲ... ಆ ದೇವ್ರೆ ಇಲ್ಲಿಗೆ ಕಳಿಸಿ
ಕೊಟ್ಟಾನೆ... ಅನಸೂಯಾಗೀವ್ನು ಹೇಳಿ ಮಾಡಿಸಿದ ಜೋಡಿ ನೋಡು... ಮದ್ವಿ ವಿಷ್ಯ ಮಾತಾಡಿಬಿಡು...
ಕೈಗೆ ಬಂದಿರೋ ಮಕ್ಕಳ್ನ ಭಾಳ ದಿನ ಮನೇಲಿಟ್ಕೋಬಾರ್ದು..." ಎಂದು ಒಂದು ಮಾತನ್ನು ಹೆಚ್ಚಿಗೆ
ಪ್ರಯೋಗಿಸಿತು.
ಅಡುಗೆ ಮನೆಯಲ್ಲಿ ಮೊಣಕಾಲ ಚಿಪ್ಪಿನೊಳಗೆ ಮುಖ ಹುದುಗಿಸಿಕೊಂಡುಕೂತಿದ್ದ ಅನಸೂಯ ಅ ಅದನ್ನು
ಕೇಳಿಸಿಕೊಂಡು ನಿಟ್ಟುಸಿರುಬಿಟ್ಟಳು.
ಅದಕ್ಕೆ ಪೂರಕವಾಗಿ ರುಕ್ಕಮ್ಮ ಕೂಡ ನಿಡುಸುಯ್ದಳು.
"ಆಕೀಗೆ ಗಂಡನ್ನ ದೇವ್ರು ಎಲ್ಲಿಟ್ಟಿದ್ದಾನೋ? ಹೇಗೆ ಹೇಳೋದತ್ತೆ.. ಅದ್ರ ಬ್ಯಾರೆ.. "
"ಎಂಥ ಮಾತಾಡ್ತೀಯೆ ನಮ್ಮವ್ವ... ಅಂಗೈಲಿ ತುಪ್ಪ ಇಟ್ಕೊಂಡು ಬೆಣ್ಣೆಗೆ ತಿರುಗಾಡ್ತಾರೇನೇ?
ಒಡಹುಟ್ಟಿದ ತಮ್ಮ ಕಡೇಲಲ್ಲ.."
"ಅದೂ ಅಲ್ದೆ ಅವ್ರೂ.."
"ಯಾರು?"
"ನಿನ್ ಮಗ!" ಮುಂದಿನ ಮಾತು ಗಂಟಲಲ್ಲಿ ಇರುಕಿಕೊಂದಿತು. ಬಹಳ ತ್ರಾಸಿನಿಂದ ಮಾತಾಡಿದಳು. "ಮನೆ
ಯಜಮಾನ್ರು ಮನೇಲಿಲ್ಲಾಂದ್ರೆ ಹೆಂಗತ್ತೆ ಮಗ್ಳು ಮದ್ವೆ ಮಾತಾಡೊದು? ನಾಕು ಮಂದಿಯಾದ್ರೂ
ಏನಂದ್ಕೊಂಡಾರು? ಯವತ್ತೊ ಕನ್ನೀರವ್ವನ ಭಾವಿ ನೋಡ್ಕೊಂತಿದ್ದೆ. ಮಗಳಿರೋದ್ರಿಂದ ಸುಮ್ಕಿದ್ದೀನಿ...
" ಗಂಟಲ ಕಟ್ಟೆಯೊಡೆಯಿತು. ಗಂಗವ್ವನ ಹೆಗಲ ಮೇಲೆ ಮುಖ ಇಟ್ಟು ಗದ್ಗದಿಸಿ ಅಳತೊಡಗಿದಳು.
"ಛೀ ಹುಚ್ಚಿ ಸುಮ್ಕಿರು... ಮನಿ ಮನೆ ಯಜಮಾನಿಯಾಗಿ ಹಿಂಗ ಅಳ್ತಾರೇನು? ಆ ಹುಡ್ಗಿಯಾದ್ರು
ಏನಂದ್ಕೊಂಡಾತು.. " ಎಂದು ಸಮಾಧಾನಪಡಿಸಿದಳು. ತನ್ನ ಸೆರಗಿನಿಂದ ಆಕೆಯ ಮೂಗು ಕನ್ನು ಒರೆಸಿ
"ರುದ್ರ ನಾಯ್ಕಂದು ಎಲ್ಲಾ ಗೊತ್ತಿರೋದೇ. ಅಂಥೊರಿಗ್ರ್ ಬದುಕ್ರೋ ಮಂದಿಗಿಂತ ಸತ್ತು ದೆವ್ವ
ಆಗಿರೋರೆ ಮುಖ್ಯ. ಯಾವ್ಯಾವ ದೆವ್ವ ಹುಡುಕ್ಕೊಂಡು ಯಾವ್ಯಾವ ಸುಡುಗಾಡೀಲಿ ಅಲೀತಿದ್ದಾನೇನೋ..
ಅವತ್ತು ಯಾವತ್ತು ಬರ್ತಾನೇನೋ? ಅವನು ಬರೋಕೆ ವರ್ಷಗಳೇ ಆಗಬೌದು? ಅವನಿಗಾಗಿ ಕಾಯ್ತ ಮಗ್ಳ ಬದುಕು
ಹಾಳು ಮಾಡಬೇಡ.. ಮಾಡೋದ್ನೆಲ್ಲ ಮಾಡಿ ಮುಗಿಸಿಬಿಡು... ಆಮೇಲೆ ಬೇಕಾದ್ರೆ ಅವ್ನು ಬಂದು ನಿನ್ಗೊಂದು
ನಾಲ್ಕೇಟು ಹೊಡೀಲಿ. ಕುತ್ಗಿ ಹಿಚುಕಿ ಹಾಳು ಭಾವೀಗಾಕ್ಲಿ... ಯಾರು ತಡೆಯೋರು? ಗಂಡನ್ನ
ಕಳೆಕೊಂಡಿರೋ ನನ್ನ ಬಾಳ್ವೇನೇ ತಗೋ... ಊರುಗೆದ್ರಿದ್ರೆ ನಾನು ಬದುಕೋಕಾಗ್ತಿತ್ತೇನು? ಮಂದಿ
ಬೇಷಿದ್ರೂ ಸೇರೊಲ್ಲ, ಕೆಟ್ರೂ ಸೇರೊಲ್ಲ... ನಾವು ಧೈರ್ಯದಿಂದ ಬದುಕಬೇಕಷ್ಟೆ? ಪಟಪಟ
ಮಾತಾಡಿಬಿಟ್ಟಿತು. ಯಾರು ಕೇಳಿಸಿಕೊಂಡರೆ ತನಗೇನೆಂಬಂತೆ ಮಲಗಿರುವಂತ ನಾಟಕವಾಡುತ್ತಿರುವ ರಘು ಎಂಬ
ಮಹಾಶಯ ಕೂಡ ಕೇಳಿಸಿಕೊಂಡು ತನ್ನಕ್ಕನ ಬಾಳುವೆಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ‘ವಾಲ್ಯೂಂ’
ಹೆಚ್ಚು ಮಾಡಿತ್ತು.
ಬಲೇನೆ ರುಕ್ಮಿಣಿ... ಎದ್ಕೂಡ್ಲೆ ನಿನ್ತಮ್ಮನ್ನ ಒಂದು ಮಾತು ಕೇಳಿಬಿಡು... ಬಂಗಾರಂಥ ಹುಡುಗಿ. ಕೈ
ಹಿಡಿಯೋಕೆ ಪುಣ್ಯ ಮಾಡಿರ್ಬೇಕು. ಕೇಳೋ ಧೈರ್ಯ ನಿನಗಿರದಿದ್ರೆ ನನ್ ಕರೀ... ಬಂದು ಚಣ್ಣ ಹಿಡ್ದು
ಬುದ್ದಿ ಹೇಳ್ತೀನಿ... ಮದ್ವೆ ಹೆಂಗ ಮಾಡೋದಂತ ಹೆದರ್ಬೇಡ. ನಾನಿನ್ನು ಬದುಕಿದ್ದೀನಿ... ನನ್ಗೇನು
ಮಕ್ಳಿಲ್ಲ ಮರಿಯಿಲ್ಲ... ತಿಳೀತಾ?...? ಎಂದು ಗಂಗವ್ವ ಸರ್ರಂತ ಒಂದು ದಮ್ಮು ಎಳೆಯುತ್ತ ಎದ್ದಳು.
ಮೂಗು ಬಾಯಿಯಿಂದ ಹೊಗೆ ಬಿಡುತ್ತ ನ್ಯಾರೋಗೇಜಿನ ಹಾದಿಗುಂಟ ಉಗಿಗುಂಟ ಹೋಗುತ್ತಿರುವುದೇನೋ ಎಂಬಂತೆ
ತಮ್ಮ ಮನೆ ಕಡೆ ಹಂಗೊಂದು ಹೆಜ್ಜೆ ಹಿಂಗೊಂದು ಹೆಜ್ಜೆ ಹಾಕುತ್ತ ಹತ್ತು ಹೆಜ್ಜೆಗೊಮ್ಮೆ
ಕೆಮ್ಮುವುದರ ಮೂಲಕ ಸಮಸ್ತ ಓಣಿಗೆ ತನ್ನ ಅಸ್ತಿತ್ವವನ್ನು ಜಗಜ್ಜಾಹೀರುಪಡಿಸುತ್ತ... ಊರು
ಹೋಗೆನ್ನುವ ಸುಡುಗಾಡು ಬಾ ಎನ್ನುವಷ್ಟು
ವಯಸ್ಸಿನ ಆಣೆಬಡ್ಡಿ ಭವಾನಿ ಗಂಗವ್ವ ಹೋದಳು.
ಆಕೆ ಬಂದು ಹೋದದ್ದರಿಂದ ರುಕ್ಕಮ್ಮನ ಹೃದಯದ ಭಾರ ಅರ್ಧಕ್ಕರ್ಧ ಕದಿಮೆಯಾಯಿತು. ತಮ್ಮ ನಿದ್ರಾಭಿನಯದ
ನಡುವೆಯೂ ತಮ್ಮ ಮಾತುಗಳನ್ನು ಕೇಳಿಸಿಕೊಂಡಿರುವನೆಂದು ಆಕೆಗೆ ಗೊತ್ತು. ಒಂದೇ ಮಾತಿಗೆ ಅವನು
ಅನಸೂಯಳ ಕೈಹಿಡಿದು ಕರೆದೊಯ್ದು ಸುಖವಾಗಿಟ್ಟುಕೊಂಡರೆ ತನಗದೇ ಸಾಕು! ಪ್ರಶ್ನಾತ್ಮಕವಾಗಿ ಒಳಗೆ
ಕೂತಿದ್ದ ಮಗಳ ಕಡೆಗೊಮ್ಮೆ... ಬೆನ್ನು ಮಾಡಿ ಮಲಗಿದ್ದ ತಮ್ಮನ ಕಡೆಗೊಮ್ಮೆ ನೋಡಿದಳು.
ಅನಸೂಯ ಹತ್ತಿರ ಬರುವಂತೆ ಸಂಜ್ಞೆ ಮಾಡಿದಳು. ರುಕ್ಕಮ್ಮ ಮೆಲ್ಲಗೆ ಹೆಜ್ಜೆ ಇಡುತ್ತ ಹೋಗಿ ‘ಏನೇ’
ಎಂದಳು.
"ಅವ್ವಾ... ನಾನಷ್ಟೊಂದು ಭಾರವಾಗಿದ್ದೀನಾ... ನಿನ್ಗೆ?" ಅನಸೂಯ ತಾಯಿ ಹೆಗಲ ಮೇಲೆ ಮುಖ ಇಟ್ಟು
ಬಿಕ್ಕಿದಳು.
"ಅದೆಂಥ ಮಾತಾಡ್ತೀಯಾ ತಾಯಿ... ಇದೇ ಪ್ರಶ್ನೇನ ನಾನ್ಯಾರ್ರಿಗೆ ಕೇಳ್ಲಿ ಹೇಳು ಮತ್ತೆ" ರುಕ್ಕಮ್ಮ
ಸಂತೈಸಿದಳು. ರಘು ಒಪ್ಪಿದರೆ ತನ್ನ ಅಭ್ಯಂತರವಿಲ್ಲವೆಂದು ಈ ಮೊದಲೇ ಹೇಳಿದ್ದಿರಿಂದ ಮತ್ತೆ ಆ
ಬಗ್ಗೆ ಪ್ರಸ್ತಾಪಿಸುವ ಅಗತ್ಯವಿರಲಿಲ್ಲ.
ಪೂರ್ಣ ಎಚ್ಚರ ಇದ್ದರೂ ಮಲಗಿದ್ದ ರಘು ಎಲ್ಲ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದ. ತನ್ನ
ಅಕ್ಕ ಇಷ್ಟೊಂದು ಸಂಕಟವನ್ನು ಒಡಲಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿರುವುದು ತಿಳಿದು ಖೇದಗೊಂಡ.
ಮತ್ತೆ ಮನೆ ಬಿಟ್ಟು ಹೋಗಿರುವ ಭಾವನ ಬಗ್ಗೆ ಸಿಟ್ಟು ಬಂತು. ರೈಲಿನಲ್ಲಿ ಕೂತಿದ್ದ ವ್ಯಕ್ತಿ ಭಾವನೇ
ಎಂದುಕೊಂಡ. ಅದು ಉತ್ತರ ಭಾರತದ ಕಡೆ ಹೊರಟಿದ್ದ ರೈಲು. ಆತ ಕಾಶಿ ಕಡೆ ಹೋಗಿರಬಹುದೋ? ಹಿಮಾಲಯದ ಕಡೆ
ಹೋಗಿರಬಹುದೋ? ಆತನ ಸಾವು ನೋವು ಸಂಭವಿಸಿರಲಿಕ್ಕಿಲ್ಲ. ಆತ ಪ್ರಚಂಡ ಆತ್ಮವಿಶ್ವಾಸದ ವ್ಯಕ್ತಿ.
ಮುಂದೆಂದಾರರೊಂದು ದಿನ ಮರಳಿಬರದಿರಲಾರ. ಎಂದು ಬರುವನೋ! ಆತ ಬಂದರೆ ತನ್ನ ಮಗಳನ್ನು ತನಗೆ ಮದುವೆ
ಮಾಡಿಕೊಡಲಿಕ್ಕಿಲ್ಲ. ತನ್ನ ಅಕ್ಕನ ಮಗಳನ್ನು ಮದುವೆಯಾಗುವುದು ತನ್ನ ಜನ್ಮಸಿದ್ಧ ಹಕ್ಕು. ಅಕ್ಕಗೆ
ಸಂತೋಷವಾಗುವುದಾದರೆ ತಾನೇನೋ ಮದುವೆಯಾಗಲು ಸಿದ್ಧ... ಆದರೆ ಅನಸೂಯಾ ಒಪ್ಪಬೇಕಲ್ಲ! ಎಷ್ಟಿದ್ದರೂ
ಅವಳು ವಿದ್ಯಾವಂತೆ. ತನ್ನಂಥ ಅರೆಬರೆ ವಿದ್ಯಾವಂತನನ್ನು ಇಷ್ಟಪಡುವಳೋ? ಇಲ್ಲವೋ? ತಾನು
ಪದವೀಧರನಾಗಿರದಿರಬಹುದು. ತನಗಿರುವಷ್ಟು ಪ್ರಪಂಚ ಜ್ಞಾನ ಅವಳಿಗಿರಲಿಕ್ಕಿಲ್ಲ. ತಾನು ಐದಾರು
ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲೆ... ಎರಡು ಮೂರು ಭಾಷೆಗಳಲ್ಲಿ ಸಮರ್ಥವಾಗಿ ಬರೆಯಲೂ
ಬಲ್ಲೆ... ಗಂಟೆಗಟ್ಲೆ ನಿರರ್ಗಳವಾಗಿ ಭಾಷಣ ಮಾಡಬಲ್ಲೆ... ಮೂರು ಆರು ಮಾಡುವ ಆರು ಮೂರು ಮಾಡುವ
ಚಾಕಚಕ್ಯತೆ ತನಗಿದೆ! ತಾನೆಂದೋ ಮದುವೆಯಾಗಿಬಿಡಬಹುದಾಗಿತ್ತು. ಆರ್ಗನೈಜಿಂಗ್ ಸೆಕ್ರೆಟರಿ
ಅಂಜಲಿನಂಬೂದರಿ, ನಗರದ ಪ್ರಾಪರಟೀ ಡೀಲರ್ ಅಗರ್ವಾಲನ ಮಗಳು ನಿಧಿ, ವರಲಕ್ಷ್ಮಿವೆಂಕಟಂ ಸೀತಾರಾವ್
ಹೀಗೆ ಕೆಲವು ಪ್ರತಿಷ್ಟಿತ ತರುಣಿಯರು ತನಗಾಗಿ ಕಾಯುತ್ತಿದ್ದಾರೆ. ಅಕ್ಕನ ಮಗಳು ‘ನೋ’ ಎಂದಾಗ
ಮಾತ್ರ ನಿಮ್ಮೊಬ್ಬರನ್ನು ಮದುವೆಯಾಗುವುದಾಗಿ ತಾನು ಹೇಳಿರುವುದುಂಟು.
ಗಾಡ ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವವನಂತೆ ರಘು ಮೆಲ್ಲಗೆ ಎದ್ದು ಕೂತ. ಗಟ್ಟಿಯಾಗಿ ಒಮ್ಮೆ
ಆಕಳಿಸಿ ತಾನು ಎಚ್ಚರ ಗೊಂಡಿದ್ದನ್ನು ಪ್ರಕಟಿಸಿದ. ಅಕ್ಕ ಸೂಚಿಸಿದಂತೆ ಮುಖ
ತೊಳೆದು ಕೊಂಡು ಚಹ ಕುಡಿದ. ಅಯ್ಯೋ ಮರೆತಿದ್ದೆ ಅಂತ ಸೂಟ್ಕೇಸ್ ತೆರೆದ ಅನಸೂಯಳಿಗೆ ಎರಡೆರಡು
ಸೀರೆ ತಂದಿದ್ದ ಹಾಗೆಯೇ ತನ್ನ ಭಾವನಿಗೆ ಪಾಲಿಸ್ಟರ್ ಪಂಚೆ, ಶರ್ಟಿಗೆ ರೇಷ್ಮೆ ಬಟ್ಟೆ ತಂದಿದ್ದ.
ಇವೆಲ್ಲ ಯಾಕೆ ತಂದೆ ಅಂತ ಅಕ್ಕ ರಾಗ ತೆಗೆಯುತ್ತ ಸ್ವೀಕರಿಸಿದಳು. ಅನಸುಯಾ ಯಾವ
ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. ಸ್ವಲ್ಪ ಹೊತ್ತಿನ ನಂತರ ತನಗೊಂಚೂರು ಕೆಲಸ ಇದೆ ಅಂತ ರುಕ್ಕಮ್ಮ
ಮನೆಯಿಂದ ಹೊರಗೆ ಹೋದಳು. ಮಗಳು ತಮ್ಮ ಪರಸ್ಪರ ಒಂದಿಷ್ಟು ಮಾತಾಡಿಕೊಳ್ಳಲಿ ಎಂಬ ಉದ್ದೇಶದಿಂದ.
ಈಗ ಇಡೀ ಮನೆಯಲ್ಲಿ ಉಳಿದಿರುವುದು ತಾವಿಬ್ಬರೇ! ತನ್ನ ತಾಯಿ ತನ್ನನ್ನು ಎಂಥ ಸಂದಿಗ್ಧತೆಗೆ
ಸಿಲುಕಿಸದಳಲ್ಲ. ಅನಸೂಯಾ ನಾಚಿಕೆ ಮತ್ತು ಭಯದಿಂದ ಕಂಪಿಸುತ್ತಾ ಒಂದು ಮೂಲೆಯಲ್ಲಿ ನಿಂತುಕೊಂಡಳು.
ಆಕೆಯ ಹೃದಯಬಡಿತ ಅಲ್ಲೆಲ್ಲ ವ್ಯಾಪಿಸಿತ್ತು. ಆಕೆಯ ಕಣ್ಣುಗಳು ಭೂವಿಜ್ಞಾನಿಯಂತೆ ನೆಲ
ನೋಡುತ್ತಿದ್ದವು. ತನ್ನೊಂದಿಗೆ ಯಾವುದೇ ರೀತಿಯ ಭಾವನಾತ್ಮಕ ಸಂಭಂದವಿರದ ವ್ಯಕ್ತಿ ಜೊತೆ ಹೇಗೆ
ಮಾತಾಡುವುದು? ರಘು ತಾಯಿಯ ತಮ್ಮನಾಗಿರಬಹುದು! ತನ್ನ ಒಬ್ಬೇ ಒಬ್ಬ ಸೋದರ ಮಾವನಾಗಿರಬಹುದು! ಆದರೆ
ಶಾಮನ ಬಳಿ ಮಾತಾಡಿದಷ್ಟು ಸಲೀಸಾಗಿ ಮಾತಾಡಲಾದೀತೇನು?
ಆಕೆಯ ಮೌನ ಸಮ್ಮತಿಯ ಲಕ್ಷಣವಲ್ಲ. ಸೋದರ ಮಾವನಾದ ತನ್ನನ್ನು ಆಕೆಯ ಮೊದಲುಯಾಕೆ ಮಾತಾಡಿಸಬಾರದು?
ಸ್ವಲ್ಪ ಹೊತ್ತು ಕಾದು ಬಟ್ಟೆ ಬದಲಿಸಿದ. ಅವನಿನ್ನೇನು ಹೊರಗಡೆ ಹೊರಟೇಹೋಗುವನೆಂದು ಭಾವಿಸಿ
ಮಾರ್ಜಾಲ ನಗಂದಿಯಿಂದ ಸೀದ ಕೆಳಗೆ ಧುಮಕಿತು. ಆ ದರಿದ್ರ ಶಾಮುನ ಬಗ್ಗೆ ಯೋಚಿಸೋದು ಬಿಟ್ಟು ರಘುನ
ಮಾತಾಡಿಸೇ... ಏನಾದ್ರು ತಿಳ್ಕೊಂದು ಅವನು ಹೊರಟು ಹೋದಾನು. ಧೈರ್ಯದಿಂದ ಮಾತಾಡ್ಸು...
ವಿದ್ಯಾವಂತರೂ ಹೆದರುವುದೇನು " ಎಂಬರ್ಥ ಬರುವಂತೆ ಅದು ಮ್ಯಾವ್ ಅನ್ನುತ್ತಾ ಮಾಲಿಕಿನ್ ಕಾಲಿಗೆ ಮೈ
ಹೊಸೆಯತೊಡಗಿತು.
"ನಾಚಿಕೆಯ ಪಾರಮಾರ್ಥಿಕತೆ ಹೆಣ್ಣಾಗಿದ್ರೆ ಗೊತ್ತಾಗ್ತಿತ್ತು. ಶಾಮುನ ಮತು ಬಿಡು ಅಂತ ಎಷ್ಟು
ಸುಲಭವಾಗಿ ಹೇಳ್ತಿದ್ದೀಯಲ್ಲಾ... ಪ್ರೇಮದ ಬಗ್ಗೆ ವ್ಯಾಖ್ಯಾನ ಮಾಡುವುದು ಸಮಯ ಸಾಧಕ ಮಾರ್ಜಾಲಕ್ಕೆ
ಹೇಗೆ ಸಾಧ್ಯ? ಅದು ಎಷ್ಟಿದ್ದರೂ ಹಚ್ಚಗಿದ್ದಲ್ಲು ಉಂಡು ಬೆಚ್ಚಗಿದ್ದಲ್ಲಿ ಮಲಗೋ ಜಾಯಮಾನದ್ದು.
ಇನ್ನೂ ಅವನು ಬಂದು ಒಂದು ದಿನ ಕೂಡ ಕಳೆದಿಲ್ಲ. ಸಮೀಪದಿಂದ ಮಾತ್ರ ಸಾಮರಸ್ಯ ಸಾಮರಸ್ಯದಿಂದ ಮಾತ್ರ
ಪರಸ್ಪರ ಹೃದಯ ಬಿಚ್ಚಿಕೊಳ್ಳೋದು ಸಾಧ್ಯ... ಅಲ್ವೇ ಡಾರ್ಲಿಂಗ್" ಹೆಣ್ಣು ಇಲಿ ತನ್ನ ಜೀವನ
ಸಂಗಾತಿಗೆ ಹೇಳಿತು. ಮೂಷಕ ಹೌದೌದಂತ ತಲೆ ಅಲ್ಲಾಡಿತು.
ಇಲಿಗಳು ಮಾತಾಡಿಕೊಂಡಿದ್ದನ್ನು ಅರ್ಥಮಾಡಿಕೊಂಡವನಂತೆ ರಘು ಕುರ್ಚಿ ಮೇಲೆ ಕೂತು ಕಾಲಿಗೆ ಶೂಸ್
ಧರಿಸಿದ.
ಇವಳೆಂಥ ಹುಡುಗಿಯಪ್ಪಾ! ಇನ್ನೂ ತಲೆ ತಗ್ಗಿಸೇ ಇದ್ದಾಳೆ... ಬಿ.ಎ. ಓದಿಕೊಂಡಿರೋರು ಮನಸ್ಸಿನಲ್ಲಿ
ಮಂಡಿಗೆ ತಿನ್ನುತ್ತಿದ್ದರೆ ಹೇಗೆ?
"ಅನಸೂಯಾ... ನಾನು ಹೊರಗಡೆ ಹೋಗಿ ಬಲಾ" ಬಾಗಿಲ ಬಳಿ ಹೋಗಿ ತಿರುಗಿ ನೋಡಿದ. ಅಕಸ್ಮಾತ್ ತನ್ನ
ಕಡೆನೋಡಿ ಮತ್ತೆ ತಲೆ ತಗ್ಗಿಸಿದಳು.
"ರಘೂ... ಬಾ ಕೂತ್ಕೋ... ಅವ್ವ ಬಂದ ಮೇಲೆ ಹೋಗ್ವಂತಿ" ಕೊನೆಗೂ ಧೈರ್ಯ
ತಂದುಕೊಂಡು ಮಾತಾಡಿಸಿಯೇ ಬಿಟ್ಟಳು.
ರಘುಗೆ ಹುರುಪು ಬಂದಿತು. ಮತ್ತೆ ಷೂ ಕಳಚಿ ಆಕೆ ಹತ್ತಿರವಿದ್ದ ಸೋಫಾದ ಮೇಲೆ ಕುಳಿತುಕೊಂಡ. ನೆಲ
ಬಗೆಯುತ್ತಿರುವ ಕಣ್ಣುಗಳ ಮುಖ ನೋಡಿದ. ಅವಳ ಒದ್ದಾಟ ಅರ್ಥವಾಯಿತು. ನಗು ಬಂತು. ಇದ್ದಕ್ಕಿದ್ದಂತೆ
ನಗತೊಡಗಿದ...
"ಯಾಕೆ ನಗ್ತಿ?" ಆಕೆ ಗಾಬರಿಯಾದಳು.
"ನಗದೆ ಏನು ಮಾಡ್ಲಿ" ನಗೆಯನ್ನು ಮೀಸೆ ಕೆಳಗೆ ಬಚ್ಚಿಡುತ್ತ ಹೇಳಿದ, "ಅಲ್ಲ, ಎಂಥ ಹುಡುಗಿ ನೀನು
ನಾವಿಬ್ರೂ ಮಾತಾಡಿಕೊಳ್ಲಿ ಅಂಥಾನೆ ಅಕ್ಕ ಹೊರಗಡೆ ಹೋಗಿದ್ದು. ಇದು ನಿನ್ಗೂ ಗೊತ್ತು. ಆದ್ರೂ ಏನೂ
ಮಾತಾಡ್ದೆ ಸುಮ್ನೆ ನಿಂತಿದ್ದೀಯಲ್ಲ... ಇದ್ಕೆ ಏನು ಹೇಳೋದು?" ಆಕೆಯನ್ನು ನಿಟ್ಟಿಸಿದ. ಕಣ್ಣುಗಳು
ಕವಿಗಳಾದವು. ಅವನ ಮನಸ್ಸಿನ ಪುಟಗಳಲ್ಲಿ ಮಹಾಕಾವ್ಯಕ್ಕೆ ಶ್ರೀಕಾರ ಹಾಕಿದವು.
"ಏನಂತ ಮಾತಾಡೋದು! ಮಾತಾಡ್ಲಿಕ್ಕೆ ಇರೊದಾದ್ರೂ ಏನು?" ಆಕೆ ಸೂಚ್ಯವಾಗಿ ನುಡಿದಳು. ಹಾಗೆಯೇ
ನಲವತ್ತೈದು ಡಿಗ್ರಿ ಕೋನದಿಂದ ನುಡಿದಳು. ನಿಕಾನ್ ಕೆಮೆರಾ ಕ್ಲಿಕ್ ಎಂದಂತೆ. ರೂಪದಲ್ಲಿ
ಮಾತುಗಾರಿಕೆಯಲ್ಲಿ ರಘುನೇ ಶಾಮುನಿಗಿಂತ ಎಷ್ಟೋ ವಾಸಿ. ಎಷ್ಟಿದ್ದರೂ ಪಟ್ಟಣದಲ್ಲಿ
ವಾಸಿಸುತ್ತಿರುವವನು, ಅಲ್ಲಿ ಏನು ಮಾಡ್ಕೊಂಡಿದಾನೋ?
"ಅನಸೂಯಾ..." ಅಂದ.
"ಹ್ಹಾಂ!" ಅಂದಳು
"ಮುದುಕಿ ಜೊತೆ ಮಾತಾಡಿದ್ದೆಲ್ಲ ಕೇಳಿಸಿಕೊಂಡೆ!" ಎಂದ.
"ಹ್ಹಾಂ!" ಆಕೆ ದಿಗ್ಭ್ರಮೆ ವ್ಯಕ್ತಪಡಿಸಿದಳು. ದುಃಖದ ಕಟ್ಟೆ ಒಡೆಯಿತು. ಕಣ್ಣುಗಳಿಂದ ನೀರು
ಹರಿಯತೊಡಗಿತು. "ರಘೂ" ಎಂದುದ್ಗರಿಸಿ.
"ಹಾಗಾದ್ರೆ ನೀನು ನನ್ನ ಮದ್ವೆ ಆಗ್ತೀಯಾ?
"ಆಗ್ತೀನಿ."
"ನಿಮ್ಮಕ್ಕನ ಮೇಲಿರೋಪ್ರೀತಿಗಾಗಿಮದ್ವೆ ಆಗ್ತೀಯಾ... ಅಥವಾ... "
"ಏನು ಮಾತಾಡ್ತೀಯ... ನಿನ್ನೇ ಮದ್ವೆ ಆಗಬೇಕೂಂತ ಯಾವತ್ತೋ ನಿರ್ಧರಿಸಿದ್ದೆ..."
"ಆದ್ರೆ... ನಿನ್ನತ್ರ ಒಂದು ವಿಷಯ ಮುಚ್ಚಿಡೋಕೆ ನಾನು ಸಿದ್ಧಳಿಲ್ಲ. "
"ಮುಚ್ಚಿಡೊ ಅಂಥ ವಿಷಯ ಇರೊದಾದ್ರೂ ಏನು?.
"........ " ಉಗುಳು ನುಂಗಿ ಗಂಟಲು ಸರಿಪಡಿಸಿಕೊಂಡಳು.
"ಎಂಥ ಹುಚ್ಚಿ ಇದ್ದಾಳಿವ್ಳು... ಯಾವ್ದು ಹೇಳಬೇಕು. ಯಾವ್ದು ಹೇಳಬಾರ್ದು ಎಂಬ ಪರಿ ಜ್ಞಾನ
ಇರೋದಾದ್ರೂ ಬೇಡ್ವೆ... ನಾನ್ಸೆನ್ಸ್... ಓದ್ಕೊಂಡಿದ್ದಾಳಂತೆ ಓದ್ಕೊಂಡಿದ್ದಾಳೆ. ಕಲ್ತಿರೋದೆಲ್ಲ
ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯ್ತು ನೋಡು" ಜಂತಿ ಸಂದಿಯಲ್ಲಿ ಗಂಡಿಲಿ ಖೇದ ವ್ಯಕ್ತ
ಪಡಿಸಿತು.
ಅದ್ಯಾಕೆ ನಿಂಗೆ ಹೊಟ್ಟೆ ಕಿಚ್ಚು ಅಂತೀನಿ" ಹೆಣ್ಣಿಲಿ ಬೇಸರದಿಂದ ನುಡಿಯಿತು. "ಪ್ರಪಂಚವೆಲ್ಲ
ನಿನ್ನ ಹಾಗೆ ಇತದಂತ ತಿಳ್ಕೊಂಡಿ ಏನು! ಈಗಿವ್ಳು ಬಾಯಿ ಮುಚ್ಕೊಂಡಿದ್ರೆ ಜನ ಬಾಯಿ
ಮುಚ್ಕೊಂಡಿತಾರೇನು?"
"ಯಾಕೆ ಚಿನ್ನಾ! ನನ್ನೂ ಪ್ರಪಂಚದ ಗಂಡಸರೊಂದಿಗೆ ಹೋಲಿಸ್ತೀಯಾ! ಪ್ರಪಂಚ ಕಟ್ಕೊಂಡು
ಏಗೋದ್ಯಾಕೆ? ಇದ್ರು ಆಡ್ಕೊಳ್ತಾರೆ, ಇಲ್ದಿದ್ರೂ ಆಡ್ಕೊಳ್ತಾರೆ! ಜನರನ್ನು ಮೆಚ್ಚಿಸೋಕಾಗಿ
ಬದುಕಲಿಕ್ಕಾಗ್ತದೇನು?"
ಇದು ಮೊದ್ಲೇ ಮೇಲ್ ಡಾಮಿನೇಷನ್ ಸೊಸೈಟಿ ಕಣಪ್ಪಾ... ಇಡೀ ಸಾಮಾಜ ತನ್ನೆಲ್ಲ ಕಣ್ಣುಗಳ್ನ ಸದಾ
ಹೆಣ್ಣೀನ ಕಡೀಗೆ ಗುರಿ ಇಟ್ಕೊಂಡು ಕೂತಿತದೆ... ಒಂಚೂರು ಅನುಮಾನ ಬಂದ್ರೂನೂವೆ ಸಾವಿರಾರು ಬಾಯಿಗಳು
ಪಟಪಟಾಂತ ಮಾತಾಡೋಕೆ ಶುರುಮಾಡಿಬಿಡ್ತವೆ.
"ನಿನ್ನ ಮಾತೂ ಸರೆ ಬಿಡು... ನಿನ್ನಷ್ಟು ನಾನು ಜಾಣ ಇರಲಿಕ್ಕಿಲ್ಲ. ಇದನ್ನೆಲ್ಲ ಕೇಳಿ
ರಘುರಾಮನೆಂಭೋನು ಈ ನಮ್ಮ ಹುಡುಗೀನ ಮದ್ವೆ ಆಗದಿದ್ರೆ ಎಂಬ ಭಯ ನನ್ನದು."
"ಆದ್ರೆ ಆದಿತ್ಯವಾರ ಆಗದಿದ್ರೆ ಸೋಮವಾರ. ಆಗದಿದ್ರೆ ಆಗಲಿಲ್ಲ. ನಮ್ಮ ಅನಸೂಯ ಏನು
ಅವಿದ್ಯಾವಂತೆಯಲ್ಲ . ಸಾಕಷ್ಟು ಓದ್ಕೊಂಡಿದ್ದಾಳೆ. ಕಾಲೇಜಿಗೇನೆ ಫಸ್ಟ್ಕ್ಲಾಸ್ ಮಾರ್ಕ್ಸ್
ತಗೊಂಡು ಪಾಸಾಗಿದ್ದಾಳೆ... ಯಾವುದಾದ್ರು ನೌಕರಿ ಸಿಕ್ಕೇ ಸಿಗ್ತದೆ... ಗಂಡಸಿನಂತೆ ಜೀವನ
ನಡೆಸ್ತಾಳೆ..."
"ಆದ್ರೆ ಅವಿವಾಹಿತೆಯಾಗಿ..."
"ಹೌದು, ಅದ್ರಲ್ಲೇನು ತಪ್ಪಿದೆ? ಮದುವೆ ಮಾದ್ಕೊಳ್ಳದೇನೆ ಎಷ್ಟು ಜನ ಮಹಿಳೆಯರು ಧೈರ್ಯದಿಂದ ಜೀವನ
ಮಾಡ್ತಿಲ್ಲ? ಅವರೆಲ್ಲರಂತೆಯೇ ಅನಸೂಯ"
"ನೀನು ಏನೇ ಹೇಳು ಬಂಗಾರ... ಒಂಟಿಯಾಗಿ ಹೆಣ್ಣು ಈ ಸಮಾಜದಲ್ಲಿ ಜೀವಿಸೋದು ಕಷ್ಟ. ಹೆಣ್ಣಿಗೊಂದು
ಗಂಡು ಬೇಕೇ ಬೇಕು."
"ಅದೆಲ್ಲ ನಿನ್ನಂಥ ಗಂಡಸರು ಸಹಸ್ರ ಸಹಸ್ರ ವರ್ಷಗಳಿಂದ ಹುಟ್ಟು ಹಾಕಿ ಬೆಳೆಸಿಕೊಂಡು ಬಂದಿರೋ
ಬೆದರುಗೊಂಬೆ" ಗಂಡನ ತರ್ಕಕ್ಕೆ ಹೆಣ್ಣಿಲಿ ರೋಸಿತು. "ಅನಸೂಯಾಳ ಬದುಕಿನಲ್ಲಿ ಅಂಥ ಸಂದರ್ಭ
ಬಲಿಕ್ಕಿಲ್ಲ ಎಂಬುದೇ ನನ್ನ ಭಾವನೆ. "
"ಹಾಗಾದ್ರೆ ಸೋದರ ಮಾವನೇ ಅನಸೂಯಾಳನ್ನು ಮದುವೆಯಾಗ್ತಾನಂತೀಯಾ?"
"ಹೌದು ಖಂಡಿತ ಆಗ್ತಾನೆ."
"ಎಲ್ಲಾ ತಿಳಿದ ನಂತರವೂ... "
"ಹೌದು ಎಲ್ಲಾ ತಿಳಿದ ನಂತರವೂ!"
"ನೀನು ಏನೇ ಹೇಳು... ಮುಂದೆ ಪರಸ್ಪರ ದೈಹಿಕ ಆಕರ್ಷಣೆ ಕಡಿಮೆಯಾದ ಮೇಲೆ ಪರಸ್ಪರ ಅನುಮಾನಗಳು
ತಲೆದೋರದೆ ಇರಲಿಕ್ಕಿಲ್ಲ."
"ಎಲ್ಲ ಅನುಮಾನಗಳು ಎಲ್ರಿಗೂ ಬರೋದಿಲ್ಲ... ರಘೂನ ಮನಸ್ಸು ದೊಡ್ಡದು ಅಂಥ ಅನುಮಾನಕ್ಕೆ ಆಸ್ಪದ
ಕೊಡದೆ ಅನಸೂಯಾಳನ್ನು ಸಯಾಗೆ ನೋಡ್ಕೊಳ್ತಾನೆ."
"ಶಾಮಾಶಾಸ್ತ್ರೀಗೂ, ರಘೂಗೂ ಫರಕಿದೆ."
"ಹೌದು! ಇಲ್ಲವೆಂದೋಯಾರು? ಎರಡು ದಿಕ್ಕುಗಳ ನಡುವೆ ಇರೋ ಅಷ್ಟು ವ್ಯತ್ಯಾಸವಿದೆ!"
"ಶಾಮೂನ ಮನಸ್ನಲ್ಲಿಟ್ಕೊಂಡು ರಘೂನ ಹೆಂಡತಿಯಾಗಿ ಬದುಕಬೇಕಲ್ಲ ನಮ್ಮ ಅನಸೂಯಾ."
"ಸೂರ್ಯೋದಯಕ್ಕೆ ಪಾರ್ವಭಾವಿಯಾಗಿ ಕತ್ತಲೆ ಹೇಗೆ ಹಂತಹಂತವಾಗಿ ಕಡಿಮೆಯಾಗುವುದೋ ಹಾಗೇನೆ ರಘುನ
ಸಾಮೀಪ್ಯದಿಂದ ಅನಸೂಯಾ ತ್ರಿಕರಣ ಪುರ್ವಕವಾಗಿ ದಾಂಪತ್ಯ ಜೀವನ ಸಾಗಿಸುತಾಳೆ... ನೋಡ್ತಿರು."
"ಆಕೆಯ ಗಂಡನ ಮನೆಗೆ ನಾವಿಬ್ರೂ ಹೇಗಾದ್ರು ಮಾಡಿ ಹೊರಟುಹೋಗೋಣ."
"ಹೌದೌದು. ಒಳ್ಳೆಯ ಐಡಿಯಾ."
"ಹೇಗೆ ಅಷ್ಟು ದೂರ ಪ್ರಾಯಾಣ ಮಾಡೋದು.?"
"ಹೊಸದಾಗಿ ಮದುವೆಯಾದವರೆಂದಮೇಲೆ ತಿಂಡಿ ಡಬ್ಬಿಗಳು; ಹಾಸಿಗೆ ಸುರುಳಿ ಹೀಗೆ ಏನಾದರೊಂದು ಸಾಮಾನು
ಇದ್ದೇ ಇತವೆ. ಅವುಗಳಲ್ಲಿ ಹೇಗೋ ಜಾಗ ದೊರಕಿಸಿಕೊಂಡು ನಾವಿಬ್ರು ಹೋದರಾಯಿತು."
"ಹೌದು! ನೀನು ಹೇಳೋದೇನೋ ಸರಿ; ಅಲ್ಲೂ ಇಲ್ಲಿದ್ದಂತೆ ಯಾವುದಾದ್ರು ಬೆಕ್ಕು ಸಾಕ್ಕೊಂಡಿದ್ರೆ
ಏನಪ್ಪ ಮಾಡೋದು?"
’ನಗರದ ಮಂದಿ ನಾಯಿ ಮೇಲೆ ತೋರಿಸಿದಷ್ಟು ಪ್ರೀತಿಯನ್ನು ಬೆಕ್ಕುಗಳ ಮೇಲೆ ತೋರಿಸೋದಿಲ್ಲ. ಬೆಕ್ಕು
ಅವರಿಗೆ ಪೆಟ್ ಅನಿಮಲ್ಲಲ್ಲ. ಜೊತೆಗೆ ನಾನಿತೀನಲ್ಲ! ನೀನ್ಯಾಕೆ ಹೆದತಿ."
"ಅದು ಸರಿ... ನೀನೋ ಮಹಾ ರಸಿಕ. ಮಾಸ್ಟರ್ ಇನ್ ಎರಾಟಿಕ್ ಆರ್ಟ್ಸ್; ನೀನೇನಾದ್ರು ಪಟ್ಟಣದ
ಹುಡ್ಗೀಗೆ ಲೈನ್ ಹೊಡೆಯೋಕೆ ಶುರುಮಾಡಿದ್ರೆ ನಾನೇನು ಮಾಡ್ಲಿ?"
"ಈ ಹೆಂಗಸರಂದ್ರೆ ಇಷ್ಟೆ ನೋಡು. ಏನಾದರೊಂದು ಕ್ಯಾತೆ ತೆಗೀತಾನೆ ಇರ್ತಾರೆ, ನಾವಿಬ್ರೂ ಗಾಂಧರ್ವ
ವಿವಾಹವಾಗಿ ಇಷ್ಟು ದಿನಗಳಾದ್ವು. ಯಾವತ್ತಾದ್ರು ಕಚ್ಚೆ ಹರಕ ಬುದ್ಧಿ ತೋಸಿದಿನೇನು?" ಹೆಂಡತಿ ಕಡೆ
ಬೆನ್ನು ಮಾಡಿ ಮುಖ ಸಿಂಡರಿಸಿಕೊಂಡಿತು ಗಂಡಿಲಿ.
"ಲೋಕಾರೂಢಿ ಮಾತಾಡಿಯಾಕೆ ಸಿಟ್ಟು ಮಾಡ್ಕೊಂತಿ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ
ನೋಡಿಕೊಂಡವರಂತೆ... ಎಲ್ಲಿ... ನನ್ ಜಾಣ... ಮುಖ ತಿರಿಗಿಸು... ಕಿಸ್ ಕೊಡ್ತೀನಿ ಮತ್ತೆ"
ಹೆಣ್ಣಿಲಿ ಗಂಡಿಲಿಯನ್ನು ಪರಿಪರಿಯಾಗಿ ರಮಿಸತೊಡಗಿತು.
ಅನಸೂಯಳ ಕೈಹಿಡಿಯುವ ರಘುರಾಮ ಎಂಬ ತರುಣ ಬೆಂಗಳೂರಿನಿಂದ ಬಂದಿರುವನೆಂಬ ಸತ್ಯಸಂಗತಿ ಓಣಿ ತುಂಬಿ;
ಊರು ತುಂಬಿ ಅಕ್ಕಪಕ್ಕದೂರುಗಳ ಕಡೆಗೂ ಜಿನಗತೊಡಗಿತು. ಯಾಕೆಂದರೆ ಅನಸೂಯಾ
ಗುರುತಿಸಲ್ಪಡುತ್ತಿದ್ದುದೇ ವಾಮಾಚಾರ ರುದ್ರನಾಯಕನ ಮಗಳು ಎಂದೊಂದು ಬಗೆಯದ್ದಾಗಿದ್ದರೆ; ಗ್ರಾಮದ
ಮತ್ತೊಂದು ಮಹಾನ್ ವೈದಿಕ ಕುಳವಾದ ಪರಮೇಶ್ವರ ಶಾಸ್ತಿಗಳ ಮೊಮ್ಮಗ ಶಾಮಾಶಾಸ್ತ್ರಿ ತಲೆಗೆ ಏನೇನೋ
ತಿಕ್ಕಿ ಮೊನ್ನೆ ಮೊನ್ನೆವರೆಗೆ ತನ್ನ ವ್ಯಾನಿಟಿ ಬ್ಯಾಗಿನೊಳಗಿಟ್ಟುಕೊಂಡಿದ್ದಳು ಎಂಬುದಿನ್ನೊಂದು
ರೀತಿಯದ್ದು. ಅನಸೂಯ ಇರದಿದ್ದರೆಲ್ಲಿ ಶಾಮು ಕಾಲೇಜು ಮುಗಿಸುತ್ತಿದ್ದ. ಅನಸೂಯ ಇರದಿದ್ದಲ್ಲಿ
ಗೊಬ್ಬರದಂಗಡಿ ಜಲಜಾಕ್ಷಿ ಕೈಲಿ ಆ ಪುಳಿಯೋಗರೆ ಅಪ್ಪಚ್ಚಿಯಾಗಿ ಅಶ್ವತ್ಥ್ ಕಟ್ಟೆಯ ಮೇಲೆ ಪದ್ಮಾಸನ
ಹಾಕಿಕೊಂಡಿರುತ್ತಿತ್ತು. ಅದೂ ಅಲ್ಲದೆ ಅದಕ್ಕೆ ಸಂಸ್ಕೃತ ಬಿಟ್ಟರೆ ಬೇರೆ ಇನ್ನೇನು ಬರುತ್ತಿತ್ತು?
ಅನಸೂಯಾಳೇ ಅವನನ್ನು ಸಾರ್ವಜನಿಕವಾದ ಮನುಷ್ಯನನ್ನಾಗಿ ಮಾಡಿದಾಕಿ. ಆಕೆ ಶಾಮು ಇಬ್ಬರೂ
ಸತಿಪತಿಗಳಾಗಿ ಬಿಟ್ಟಿದ್ದಲ್ಲಿ ಅದರ ಮಜವೇ ಬೇರಿರುತ್ತಿತ್ತು. ಅವಮಾನ ತಾಳಲಾರದೆ ಶಾಸ್ತ್ರಿಗಳು
ತಾವೂ; ತಮ್ಮ ಸೊಸೆಯೂ ಏಕಕಾಲಕ್ಕೆ ದತ್ತೂರಿ ಕಷಾಯ ಕುಡಿದು ಅತ್ತ ಕೈಲಾಸಕ್ಕೆ ಹೋಗದೆ ಇತ್ತ
ವೈಕುಂಟಕ್ಕೂ ಹೋಗದೆ ಅತಂತ್ರಸ್ಥಿತಿಯಲ್ಲಿ ಪ್ರೇತ ಜೀವನ ನಡೆಸುತ್ತ ಇದ್ದುಬಿಡುತ್ತಿದ್ದರು.
ಇದನ್ನೇ ಗ್ರಾಮದ ಬಹುಪಾಲು ವಖ್ತಾರರು ಯೋಚಿಸಿದ್ದುದು. ಅವರೆಲ್ಲ ಆ ಎರಡು ಧ್ರುವಗಳ ನಡುವಿನ
ಒಡನಾಟಕ್ಕೆ ತಕ್ಕದಾದ ರಂಗಸಜ್ಜಿಕೆ ನಿರ್ಮಿಸಿ ತಾವು ಪ್ರೇಕ್ಷಕರಾಗಿ ನೈಪಥ್ಯದಲ್ಲಿ
ಉಳಿದುಬಿಟ್ಟಿದ್ದರು.
(ಕೆಂಪು)
ಕೆಲವರು ಹಲವಾರು ರೀತಿಯಲ್ಲಿ ಇದರ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುವುದುಂಟು. ಸದಾ
ತನ್ನ ಸೆರಗಿಗೆ ಜೋತು ಬಿಳುವಮಗ ಅದೆಲ್ಲಿ ತಪ್ಫೋಗುವನೋ ಎಂದು ಅಲುಮೇಲಮ್ಮನೇ ಏನೋ ಒಂದು ಕರಾಮತ್ತು
ಮಾಡಿ ಜೋಡಿ ಅಗಲಿಸಿದ್ದಾಳೆ ಎಂಬುದು ಒಂದು ತಂಡದ ತರ್ಕವಾದರೆ ಇನ್ನೊಂದು ತಂಡ ಯೋಚಿಸಿದ್ದೇ ಬೇರೆ,
ಅನಸೂಯಳಂಥ ಅಪ್ಸರೆ ದ್ರಾಬೆಯಂಥ ಶಾಮಾಶಾಸ್ತ್ರಿಯನ್ನು ಪ್ರೀತಿಸುವುದುಂಟೇನು! ಒಂದೇ ಓಣಿಯವರು,
ಒಂದೇ ಕಾಲೇಜಿನಲ್ಲಿ ಓದಿಕೊಂಡೋರು... ಈಗಿನ ಕಾಲದಲ್ಲಿ ಹುಡುಗರು ಹುಡುಗಿಯರು ಲಿಂಗಭೇದವಿಲ್ಲದೆ
ಜೊತೆಜೊತೆಯಾಗಿ ಅಡ್ಡಾಡಿದಾಕ್ಷಣ ಅವರಿಬ್ಬರಲ್ಲಿ ಲೈಂಗಿಕ ಸಂಭಂದ ಕಲ್ಪಿಸಿಕೊಳ್ಳೋದು, ಅವರಿಬ್ಬರು
ಪರಸ್ಪರ ಮದುವೆ ಆಗ್ತಾರೆ ಎಂದು ಊಹಿಸಿಕೊಳ್ಳೋದೇ ಮೂರ್ಖತನವೆಂಬುದು ಹಲವರ ತರ್ಕ. ಇನ್ನು ಕೆಲವರು
ಜಾರ್ಜ್ ಫರ್ನಾಂಡಿಸ್ ಬಂದ ಸಂಜೆ
ಶಾಮಾಶಾಸ್ತ್ರಿ ಆಕೆ ಮೇಲೆ ರೇಪ್ ಮಾಡಲು ಹೋದನೆಂದೂ; ಆಕೆ ತನ್ನ ಮೊಣಕಾಲಿಂದ ಅವನ ಮರ್ಮಾಂಗದ ಮೇಲೆ
ಪ್ರಹಾರ ಮಾಡಿದಳೆಂದೂ; ವಂಶಾಭಿವೃದ್ದಿ ಆಗುವುದೋ ಇಲ್ಲವೋ ಎಂದು ಅಲುಮೇಲಮ್ಮ ಕಂಗಾಲಾಳೆಂದೂ; ವೈದ್ಯ
ಮಾರ್ತಾಂಡ ಕುರುಬರ ಸೋಮಣ್ಣ ರಾತ್ರೋರಾತ್ರಿ ಲೇಹ್ಯ ಲೇಪಿಸಿ ಇಲಾಜು ಮಾಡಿದನೆಂದೂ ಆಡಿಕೊಂಡರು. ಇಂಥ
ವಾದವನ್ನು ಪುಷ್ಟೀಕರಿಸುವ ಅಥವಾ ಅಲ್ಲಗಳೆಯುವ ರೀತಿಯಲ್ಲಿ ಶಾಸ್ತ್ರಿಗಳು ತಮ್ಮ ಮೊಮ್ಮಗನನ್ನು
ಹೊಸಪೇಟೆಗೆ ಕನ್ಯಾನ್ವೇಷಣೆಗೆ ಕರೆದುಕೊಂಡು ಹೋಗದಿದ್ದರ ಬಗ್ಗೆ ಮಾತಾಡಿಕೊಂಡರು. ಇವರೆಲ್ಲರಿಗಿಂತ
ಬಾಯಿ ಜೋರು ಮಾಡಿ ಶಾಸ್ತ್ರಿಗಳೇ ತಮ್ಮ ಮೊಮ್ಮಗ ಶಾಮನಿಗೆ ಹೊಸಪೇಟೆಯ ವೇದಾಂತ ರಾಜಗೋಪಾಲಾಚಾರ್ಯರ
ಮೊಮ್ಮಗಳು ವರಲಕ್ಷ್ಮಿಯನ್ನು ಗೊತ್ತು ಮಾಡಿರುವುದಾಗಿ ಸುದ್ದಿ ಮಾಡಿದರು. ಈಶ್ವರ ದೇವರ ಎದುರು
ಬಸವಣ್ಣನಂತೆ, ಚಾದಂಗಡಿ ಎದುರು ಬೀಡಿ ಅಂಗಡಿಯಂತೆ ಅವರು ಸದಾ ಬೆನ್ನ ಹಿಂದೆ ಕಟ್ಟಿಕೊಂಡು ಗ್ರಾಮದ
ಪ್ರತಿಷ್ಟಿತರ ಮನೆಗಳಿಗೆ ಒಂದಲ್ಲಾ ಒಂದು ನೆವ ಹೂಡುಕಿಕೊಂಡು ಅಲೆದಿದ್ದೇ ಅಲೆದದ್ದು. ತಮ್ಮ
ಮೊಮ್ಮಗನ ಮದುವೆ ಮಾಡುವುದರ ಮೂಲಕ ಗ್ರಾಮಸ್ಥರಲ್ಲಿ ತಮ್ಮ ಬಗ್ಗೆ ಇರುವ ಒಂದು ನಂಬುಗೆಯನ್ನು
ಮೂಲೋತ್ಪಾಟನೆ ಮಾಡಲಿರುವುದನ್ನು ಸೂಚ್ಯವಾಗಿ ವಿಶದಪಡಿಸುವುದೇ ಅವರ ಓಡಾಟದ ಪ್ರಮುಖ
ಕಾರಣವಾಗಿತ್ತು. ರುದ್ರನಾಯಕನ ಮಗಳಿಗೂ ತಮ್ಮ ಮೊಮ್ಮಗನಿಗೂ ಯಾವುದೇ
ಸಂಬಂದವಿಲ್ಲವೆಂಬುದನ್ನು ಅವರ ಪ್ರತಿಯೊಂದು ಮಾತೂ ಸಮರ್ಥಿಸುವಂತಿತ್ತು. ಕಲಿಯುಗದಿಂದಾಗುತ್ತಿರುವ
ಉಪಟಳವನ್ನು ಶಾಮು ಸ್ವಜಾತಿ ಸ್ವಗೋತ್ರದಲ್ಲಿ
ಮದುವೆಯಾಗುವುದರ ಮೂಲಕ ತಡೆಯಲಿರುವುದನೆಂಬುದು. ತಾವು ನೋಡಿರುವ ಹುಡುಗಿ ಸಾಮಾನ್ಯಳೇನು?
ಅವಳುದಿಸಿರುವ ವಂಶ ಸಾಮಾನ್ಯವೇನು? ವೇದಾಂತಿ
ರಾಜಗೋಪಾಲಾಚಾರ್ಯರು ಹೊಸಪೇಟೆ ಅಗ್ರಹಾರದಲ್ಲಿ ಈಗಷ್ಟೊಂದು ಸ್ತಿತಿವಂತರಲ್ಲದಿರಬಹುದು! ಒಂದು
ಕಾಲಕ್ಕೆ ಅವರ ವಂಶದವರು ವಿಜಯನಗರದರಸರ ಬಳಿ ಜ್ಯೋತಿಷ್ಯ ಸಲಹೆದಾರರಾಗಿದ್ದರು. ಆನೆಗೊಂದಿ ಬಳಿ
ಇರುವ ಎರಡು ಹಳ್ಳಿಗಳನ್ನು ಅವರಿಗೆ ಉಂಬಳಿಯಾಗಿ ನೀಡಿದ್ದರೆಂದು ವಿವರಿಸುವ ದತ್ತಿ ಶಾಸನ
ತುಂಗಭದ್ರೆಯೊಳಗೆ ಹೂತುಹೋಗಿರುವುದಂತೆ. ಕಲಿಕಾಲದ ಮಹಿಮೆ. ಆ ಎರಡು ಹಳ್ಳಿಗಳು ಎಲ್ಲಿ ಹೋದವೋ ಏನೋ?
ಟಿಪ್ಪು
ಸುಲ್ತಾನನ ಕಾಲದವರೆಗಿದ್ದ ಅವರು ಸಾವಿರಾರು ಎಕರೆ ಜಮೀನನ್ನು ರೆಟ್ಟೆಯಲ್ಲಿ ಬಲವಿದ್ದ ಶೂದ್ರರು
ತಮ್ಮ ಸುಪರ್ದಿಗೆ ತೆಗೆದುಕೊಂಡರಂತೆ, ಜ್ಯೋತಿಷ್ಯ
ಪಂಚಾಂಗಗಳನ್ನವಲಂಬಿಸಿಯೇ ಬದುಕಿದ ಹಿರಿಯರು ಕಿಲುಬು ಕಾಸಿಗೆ ಎಂದೂ ಕೈಚಾಚಿದವರಲ್ಲವಂತೆ.
ಮನೆಯಲ್ಲಿ ಲಕ್ಷ್ಮಿಯ ವಾಸನೆ ನೆಲಸಿರದಿದ್ದರೂ, ವಾಙ್ ಮೇ ಮನಸಿ ಪ್ರತಿಷ್ಠಿತಾ ಮನೋ ಮೇ ವಾಚೇ
ಪ್ರತಿಷ್ಠಿತಾ ಎಂಬ ಐತರೇಯ ಶ್ರುತಿಯಂತೆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದವರಂತೆ,
ಮನಸ್ಸನ್ನು ಮಾತಿನೊಳಗಿಟ್ಟುಕೊಂಡು, ಶಿವಾಯ ವಿಷ್ಣು ರೂಪಾಯ ಶಿವ ರೂಪಾಯ ವಿಷ್ಣುವೇ ಅಂತ ಹೇಗೋ
ಒಂದು ರೀತಿ ಕಾಲ ಹಾಕುತ್ತಿದ್ದರಂತೆ. ಶಿವ ಮತ್ತು ವಿಷ್ಣು ಅವರ ಅಶನ ವಸನಕ್ಕೆ ಯಾವುದೇ ರೀತಿಯಲ್ಲಿ
ಕಡಿಮೆಯಾಗದಂತೆ ನೋಡಿಕೊಂಡು ಬಂದಿರುವರಂತೆ, ಅಂಥ ವಂಶಸ್ಥರಾದ ವೇದಾಂತಿ
ರಾಜಗೋಪಾಲಾಚಾರ್ಯರು ಸಾಮಾಜಿಕವಾಗಿ ರಾಜಕೀಯವಾಗಿ ಒಳ್ಳೆಯ ಪ್ರಭಾವಶಾಲಿಗಳಾಂತೆ. ಅನೇಕ
ರಾಜಕಾರಣಿಗಳು ಈಗಲೂ ಅವರನ್ನು ಕೇಳದೆ ಏನೂ ಕೆಲಸ ಮಾಡುವುದಿಲ್ಲವಂತೆ, ಅವರ ಧರ್ಮ ಪತ್ನಿಯೂ ಐದಾರು
ಗಂಡುಮಕ್ಕಳನ್ನು ಹೆತ್ತು ಹೊತ್ತು ಅಮೃತ ಘಳಿಗೆಯಲ್ಲಿ ಕಣ್ಣು ಮುಚ್ಚಿದಳಂತೆ... ತಮ್ಮ ಪುತ್ರ
ಸಂತಾನವನ್ನು ಅದ್ವಿತೀಯ ಪಂಡಿತರನ್ನಾಗಿ ಮಾಡುವ ಆಸೆಯೇನೋ ಇತ್ತಂತೆ.
ಆದರೆ ಅವು ಕಾಲ ಬದಲಾಗಿದೇಂತ ಇಂಗ್ಲೀಷು ಓದಿಕೊಂಡು ಐದಾರು ನಮೂನೆಯ ಲಾಭದಾಯಕ ಇಲಾಖೇಲಿ ಕೆಲಸ
ಮಾದುತ್ತಿದ್ದವಂತೆ. ಲಾಂಚಮುಟ್ಟುತ್ತಿರಲ್ಲಿಲ್ಲವಂತೆ. ಕೆಟ್ಟಚಾಳಿಗಳೊಂದೂ ಇರಲಿಲ್ಲವಂತೆ.
(ರಾಣಿಪೇಟೆಯ ಅನೇಕರು ಅಂದುಕೊಳ್ಳುತ್ತಿರುವಂತೆ ಅವರೆಲ್ಲ ಎರಡೂ ಕೈಗಳಿಂದ ಲಂಚ
ಬಾಚಿಕೊಳ್ಳುತ್ತಿದ್ದರು) ಬೆಳ್ಳೊಳ್ಳಿ ಇರುವ ಸಸ್ಯಾಹಾರಿ ಖಾದ್ಯಗಳನ್ನೂ ಮುಟ್ಟುತ್ತಿರಲಿಲ್ಲವಂತೆ
(ಪಟೇಲ್ ನಗರದ ಅನೇಕರು ಅಂದುಕೊಳ್ಳುತ್ತಿರುವಂತೆ
ಅವರಿಗೆ ನಗರದ ಅವರೆಲ್ಲ ಎರಡೂ ಕೈಗಳಿಂದ ಲಂಚ ಬಾಚಿಕೊಳ್ಳುತ್ತಿದ್ದರು) ಬೆಳ್ಳೊಳ್ಳಿ ಇರುವ
ಸಸ್ಯಾಹಾರಿ ಖಾದ್ಯಗಳನ್ನೂ ಮುಟ್ಟುತ್ತಿರಲಿಲ್ಲವಂತೆ (ಪಟೇಲ್ನಗರದ ಹಲವರು ಅಂದುಕೊಳ್ಳುವಂತೆ
ಅವರಿಗೆ ನಗರದ ಎಲ್ಲಾ ಮಿಲಿಟರಿ ಹೋಟೆಲುಗಳು ಸಲದು ಬೀಳುತ್ತಿದ್ದವು) ಅವರು ಮನೆಯಿಂದ
ಒಯ್ಯುತ್ತಿದ್ದ ನೀರನ್ನು ಮಾತ್ರ ಕುಡಿಯುತ್ತಿದ್ದರಂತೆ (ನೆಹರೂ ಕಲೋನಿಯ ನಿವಾಸಿಗಳು
ಅಂದುಕೊಳ್ಳುತ್ತಿರುವಂತೆ ಅವರೆಲ್ಲ ನಗರದ ಎಲ್ಲಾ ಬಾಗಳಲ್ಲಿ ಫೈಟಿಂಗ್
ಮಾಡುತ್ತಿದ್ದರಂತೆ) ಅವರು ಪರನಾರಿ ಸಹೋದರರಾಗಿದ್ದರಂತೆ. (ಗಾಂಧೀ ನಗರದ ವಾಸಿಗಳ ಅಭಿಪ್ರಾಯದಂತೆ
ಅವರೆಲ್ಲ ಇಡೀ ರಾತ್ರಿ ವೇಶ್ಯಾವಾಟಿಕೆಯಲ್ಲಿ ಕಳೆಯುತ್ತಿದ್ದರಂತೆ) ಅವರ ಪೈಕಿ ಒಬ್ಬರು
ಅಪಘಾತದಲ್ಲಿ ಸತ್ತರೆ; ಇನ್ನೊಬ್ಬರು ಅರ್ಥವಾಗದ ಕಾಹಿಲೆಯಿಂದ ಸತ್ತರು. ಮತ್ತೊಬ್ಬ ದೇಶಾಂತರ ಹೋದ.
ಮಗದೊಬ್ಬ ಚಿತ್ತಭ್ರಮಣೆಯಾಗಿ ಕೋದಂಡರಾಮ ದೇವಸ್ಥಾನದ ಬಳಿ ದೇಹಿ ಎಂದು ಬಂದವರಿಗೆಲ್ಲ ವರನೀಡುತ್ತ
ಯೋಗಿಯಾಗಿರುವನು. (ಅವರಿಗೆಲ್ಲ ಯುಕ್ತ ವಯಸ್ಸಿನಲ್ಲಿ ಮದುವೆ ಮಾಡಿಬಿಡಬಹುದಿತ್ತು. ಆದರೆ
ಕೊಡೋಯಾರು? ಮಾಡಿಕೊಳ್ಳೋಯಾರು?) ಉಳಿದವನೊಬ್ಬನಿಂದಲೂ ಅಂತಿಮ ಯಾತ್ರೆ ಮಾಡಿಸಿಕೊಳ್ಳುವ ಪುಣ್ಯ
ಆಚಾರ್ಯರ ಹಣೆಯಲ್ಲಿ ಬರೆದಿರಲಿಲ್ಲ. ಅವನೂ ಎರಡು ವರ್ಶಗಲ ಹಿಂದೆ ವಾತಪಿತ್ತ ಕಫವೇ ಮೊದಲಾದ ರೋಗಗಳ
ಜೊತೆಗೆ ದೇಹದ
ಬಲಪಾರ್ಶ್ವ ಏನಕೇನ ಬಿದ್ದು ಹೋಗಲು ಅವನು ನರ ರೋಗ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದು ಬಿಡಬೇಕೆ?
ಒಟ್ಟಿನಲ್ಲಿ ತಮ್ಮ ಪ್ರಾರಬ್ದ! ಸೊಸೆಯನ್ನೂ ಮೊಮ್ಮಗಳನ್ನೂ ಜ್ಯೋತಿಷ್ಯದ ಸಹಾಯದಿಂದ ಸಾಕಿ
ಸಲಹಬೇಕಾಗಿ ಬಂದಿರೋದು! ಮೊಮ್ಮಗಳು ವರಲಕ್ಶ್ಮಿ ಪರಪುರುಶರ ಕಡೆ ಎಂದೂ ಮುಖ ಎತ್ತಿ ನೋಡಿದಾಕಿಯಲ್ಲ!
ಸದಾ ಅವನತ ಮುಖಿ, ಆಚಾರ ವಿಚಾರದಲ್ಲಿ ತುಂಬ ಕಟ್ಟಿನಿಟ್ಟು, ಪ್ರಾಣ ಬೇಕಾದರೂ ಬಿಟ್ಟಾಳು, ಆದರೆ
ಸಂಪ್ರದಾಯವನ್ನು ಮಾತ್ರ
ಬಿಡಲಾರಳು, ಸ್ವಲ್ಪ ಸ್ಥೂಲದೇಹಿ ಇರಬಹುದು, ಆದರೆ ಆಕೆಯ ಮುಖದಲ್ಲಿ ಎಂಥ ತೇಜಸ್ಸೂ ಏನು ಕಥೆ? ಮೂಗು
ಸ್ವಲ್ಪ ಮೊಂಡಿರಬಹುದು. ಆದರೆ ಕಣ್ಣುಗಳಲ್ಲಿ ಎಂಥ ಬೇಳಕು ಏನು ಕಥೆ? ಮೇಲ್ದವಡೆಯ ಮುಂದಿನೆರಡು
ಹಲ್ಲುಗಳು ಕೆಳದುಟಿಗಳ ಮೇಲೆ ಕೂಡ್ರುತ್ತಿರಬಹುದು. ಆದರೆ ಜಡೆ ಎಷ್ಟುದ್ದಾ
ಏನು ಕಥೆ? ಜನಿಸಿರೋದೂ ಸ್ವಾತಿ ನಕ್ಷತ್ರದಲ್ಲಿ, ರಜಸ್ವಲೆಯಾಗಿರುವುದೂ ಸ್ವಾತಿ ನಕ್ಷತ್ರದಲ್ಲೇ.
ಪಂಚಮಹಾ ಪತಿವ್ರತೆಯರಂತೆ ಈಕೆಯೂ
ಪತಿವ್ರತೆಯಾಗುತ್ತಾಳೆಂಬುದರ ಬಗ್ಗೆ ಶಾಸ್ತ್ರಿಗಳು ಹೇಳಿಕೊಂಡಿದ್ದೇ ಹೇಳಿಕೊಂಡಿದ್ದು.
ಎಲ್ಲಕ್ಕಿಂತ ಮುಖ್ಯವಾಗಿ ತಮಗೂ ರಾಜಗೋಪಾಲಾಚಾರ್ಯರಿಗು ನಡುವೆ ಅಂಥ ವ್ಯತ್ಯಾಸವಿರದಿದ್ದುದು,
ತಮ್ಮದು ಪ್ರಸಿದ್ಧ ವಂಶ, ಅವರದ್ದೂ ಪ್ರಸಿದ್ಧ ವಂಶ, ತಮ್ಮ ಮಗನೂ ದುರ್ಮರಣವನ್ನಪ್ಪಿದ, ಅವರ
ಮಕ್ಕಳೂ ಅಕಾಲ ದುರ್ಮರಣಕ್ಕೆ ತುತ್ತಾಗಿರುವರು. ತಮಗೂ ಒಬ್ಬ ವಿಧವೆ ಸೊಸೆ ಇರುವಳು, ತಮಗೂ ಒಬ್ಬ
ಸಚ್ಚಾರಿತ್ರ್ಯದ ಮೊಮ್ಮಗ ಇರುವನು, ಅವರಿಗೂ ಸುಶೀಲೆಯಾದ ಮೊಮ್ಮಗಳಿರುವಳು. (ಆಕೆ ತಮ್ಮ ಶಾಮನಿಗಿಂತ
ಒಂದೆರಡು ವರ್ಷ ಹಿರಿಯಳಿರಬಹುದು, ಗಂಡನನ್ನು ಸುಪರ್ದಿನಲ್ಲಿಡುವುದಕ್ಕೆ ವಯೋಮಿತಿ
ಹೆಚ್ಚಿದ್ದರಾಗುವುದೇನು!) ಜ್ಯೋತಿಷ್ಯ, ಕರಣ. ಯೋಗ, ತಿಥಿ, ವಾರ, ನಕ್ಷತ್ರಗಳೇ ಮೊದಲಾದ
ಪಂಚಾಗಗಳಲ್ಲಿ ತಾವಿಬ್ಬರೂ ಒಬ್ಬರಿಗಿಂತ ಒಬ್ಬರು ಮಿಗಿಲಾಗಿರುವವರು, ತಮ್ಮದು ಶಾಸ್ತ್ರಿಗಳ ವಂಶ,
ಅವರದು ಆಚಾರ್ಯರ ವಂಶ, ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಆಚಾರ್ಯರು ರಾಜಕಾರಣಿಗಳ ಮೇಲೆ ತಮ್ಮ
ಪ್ರಾಭಾವ ಬೀರಿ ಶಾಮನಿಗೆ ಸರಕಾರಿ ನೌಕರಿ ಸಿಗದಂತೆ ಮಾಡಲೊಪ್ಪಿರುವುದು.
ವಿವಾಹ ಪೂರ್ವ ಅಥವಾ ವಿವಾಹೋತ್ತರವಾಗಿ ಮೊಮ್ಮಗ ಶಾಮ ಪ್ರಸಿದ್ಧ ವೈದಿಕನಾಗಿ ಛಪ್ಪನ್ನಾರು
ಹಳ್ಳಿಗಳಲ್ಲಿ ಹೆಸರುವಾಸಿಯಾದೊಡನೆ ತಾವು ಪರಮಾತ್ಮನ ಪರಮ ಸಾಯುಜ್ಯವನ್ನು ನಿಶ್ಚಿಂತೆಯಿಂದ
ಪಡೆದುಬಿಡುವುದು. ಇದಕ್ಕೆಲ್ಲ ಶುಭಸೂಚಕವಾಗಿ ಮನೆ ಮುಂದಿನ ಕಟ್ಟೆಯೊಳಗಿನ
ತುಳಸಿಗಿಡ ಮೈತುಂಬ ಚಿಗುರು ಮುಡಿದುಕೊಂಡಿರುವುದು, ಕೋಗಿಲೆಯೊಂದು ಶಾಸ್ತ್ರಿಗಳು ಗಾಯತ್ರಿ
ಜಪಿಸುವಾಗ ಮನೆ ಮುಂದಿನ ಕಣಗಿಲೆ ಗಿಡದೊಳಗೆ ಕೂತು ಕುಹೂ ಕುಹೂ ಎಂದು ಕೂಗುತ್ತಿರುವುದು,
ಇದೆಲ್ಲಕ್ಕಿಂತ ಮುಖ್ಯವಾಗಿ ಕಾಮೋಷಿ ಎಂಬ ದರಿದ್ರ ಅಪಶಕುನದ ಬೆಕ್ಕು ಮನೆಯಿಂದ ಮೊನ್ನೆಯಿಂದಲೇ
ತೊಲಗಿರುವುದು. ಮದುವೆಯ ಕಲ್ಪನೆಯಲ್ಲಿ ಗೃಹಕೃತ್ಯಗಳನ್ನು ಹಚ್ಚಿಸಿಕೊಂಡು ಅಲುಮೇಲಮ್ಮ ಸದಾ
ನಿಮಗ್ನಳಾಗಿದ್ದರೆ, ಆಕೆಯ ಸುಪುತ್ರ ರಣಧೀರ ಕಂಠೀರವ
ನೌಕರಿಗಳಿಗೆ ಅರ್ಜಿ ಹಾಕುವ ನೆಪದಲ್ಲಿ ಅನಸೂಯಳ ಕಣ್ಣಿಗೆ ಬೀಳಕೂಡದೆಂದು ನಿರ್ಧರಿಸಿ ಕೋಣೆಯೊಳಗೆ
ಹಗಲೆಲ್ಲ ಅವಿತುಕೊಂಡಿರುವನು. ಇನ್ನೂ ಶಾಸ್ತ್ರಿಗಳು ಮನೆಯಲ್ಲಿ ತುಳಸೀ ರಾಮಾಯಣ, ತೊರವೆ ರಾಮಾಯಣ
ಅಂತ ಮನೇಲಿ ಕೂತುಕೊಂಡರಾಗುತ್ತದೆಯೇ?
ಗ್ರಾಮದ ಬಹುಪಾಲು ಮಂದಿ ಈ ‘ಜನ್ಮ ಜನ್ಮಲ ಅನುಬಂಧಂ’ದ ಬಗ್ಗೆ ಚರ್ಚಿಸಿಕೊಂಡರಾದರೂ ಇದನ್ನೇ ತಮ್ಮ
ಚರ್ಚೆಯ ಮುಖ್ಯ ಭಾಗವನ್ನಗಿ ಸ್ವೀಕರಿಸಲಿಲ್ಲ ಎಂಬುದು ಉಲ್ಲೇಖಾರ್ಹ ಸಂಗತಿ. ತಾವು ಗುರಿ ಇಟ್ಟವರ
ಬದುಕಿನಲ್ಲಿ ಸಂಭವಿಸಬಹುದಾದ ಅವಘಡಗಳ ಬಗ್ಗೆ ಸದಾ ತಲೆಕೆಡೀಸಿಕೊಳ್ಳುವ ಜನ ಶಾಸ್ತ್ರೋಕ್ತವಾಗಿ ಶಾಮ
ಮದುವೆಯಾಗುವುದರ ಬಗ್ಗೆ ತಾವ್ಯಾಕೆ ತಲೆ ಕೆಡಸಿಕೊಂಡಾರು? ಅವನು ಪ್ರೇಮವೆಂಬ ಖೆಡ್ಡಾದಲ್ಲಿ ಬಿದ್ದು
ಲಿಬಿಲಿಬಿ ಒದ್ದಾಡುವುದು, ಅನಸೂಯಳ ಸವಿನೆನಪಿನಲ್ಲಿ ಮೊಳಉದ್ದ ಗಡ್ಡ ಬಿಟ್ಟು, ಮಲಿನ ವಸನಂ
ತೊಟ್ಟು, ಕೃಶಾಂಗನಾಗಿ, ನಿಡುಸುಯ್ಲಿಡುತ್ತ,
ಗೃಹಕೃತ್ಯಗಲಂ ಪರಿತ್ಯಾಜ್ಯಂ ಮಾಡಿ ಅನುಭಾವಿಯಂತೆ ಹಗಲಿರುಳುಗಳ ನಡುವೆ ಅರ್ಥ ಕಳೆದುಕೊಂಡು
ಅಡ್ಡಾಡುತ್ತಿದ್ದಾಗ ಮಾತ್ರ ಅವನು ಮಾತಿನ ಆಟಿಕೆಯಾಗುವುದು ಸಾಧ್ಯ. ಕವಿ ಹೃದಯಿಯಾಗಿರುವ ಅವನ
ಹೆಂಡತಿಯಾಗಲಿರುವ ಕಾವ್ಯ ಕನ್ನಿಕೆ ಹೇಗಿರಬಹುದೆಂಬ ಕುತೂಹಲ ಕೆಲವರಿಗೆ ಮಾತ್ರ ಹುಟ್ಟಿದ್ದು
ಅದೃಶ್ಯ ರೀತಿಯಲ್ಲಿ ಹೆಂಡತಿಯನ್ನು ಪಕ್ಕದಲ್ಲಿಟ್ಟುಕೊಂಡು ಹೋಗುತ್ತಿದ್ದ ಬರುತ್ತಿದ್ದ ಶಾಮ
ಹಲವರಿಗೆ ಸಿಪಾಯಿಯಂತೆ ಗೋಚರಿಸಿದ್ದುಂಟು. ಇನ್ನೂ ಪರಿಶೀಲಾತ್ಮಕತೆಯಿಂದ ನೋಡಿದವರಿಗೆ ಅವನು ಹಲವು
ರೂಪಗಳಲ್ಲಿ ಗೋಚರಿಸಬಹುದಾಗಿದ್ದ. ಜನ ಕೂಡ ಅದಕ್ಕೂ ರೆಡಿ ಇದ್ದರು, ಆದರೆ
ಅವರೆಲ್ಲರ ಗಮನವನ್ನು ಹರಣಮಾಡುತ್ತಿರುವ ರೀತಿಯಲ್ಲಿ ಘಟನೆಯೊಂದು ನಡೆಯಿತು.
ಹೆಚ್ಚು ತುಲನಾತ್ಮಕವಾಗಿ ನೋಡಿದವರಿಗೆ ಶಾಮಾಶಾಸ್ತ್ರಿಗಿಂತ ನೂರುಪಟ್ಟು ಮಿಗಿಲೆಂಬಂತೆ ಗೋಚರಿಸುವ
ರಘುರಾಮ ಬಂದಿರೋದು, ಅನಸುಯಾಳನ್ನು ಅವನು
ಮದುವೆಯಾಗಲಿರುವುದು ಇದೆಲ್ಲ ಈ ಎರಡು ಮೂರು ದಿನಗಳಲ್ಲಿ ಹಳೆಯ ವಿಷಯವಾಗಿ ಬಿಟ್ಟಿತ್ತು. ಅವರಿಬ್ಬರ
ಬಗ್ಗೆ ಜನ ಮಾತಾಡೋದನ್ನೇ ಮಾತಾಡಿ ಮುಗಿಸಿಬಿಟ್ಟಿದ್ದರಷ್ಟೆ, ಆದರೆ ರಘುರಾಮನೆಂಬುವನು ತನ್ನದೇ ಆದ
ರೀತಿಯಲ್ಲಿ, ತನಗೆ ತಿಳಿದೋ; ತಿಳಿಯದೆಯೋ ಜನಸಮೂಹದ ಗಮನವನ್ನು ತನ್ನ ಕಡೆ ಸೆಲೆದುಕೊಂಡಿದ್ದ. ಅವನು
ಬೆಂಗಳೂರಿನಲ್ಲಿ ಏನೆಂಬುದರ ಬಗ್ಗೆ ಜನ ಸಾಕಷ್ಟು ಮಾತಾಡಿಕೊಂಡರು. ಕೆಲವರು ಸಮಯ ಕಲ್ಪಿಸಿಕೊಂಡು
ಅವನನ್ನು ಸಂಧಿಸಿ, ವಿಧಾನಸೌಧ ನೋಡಿದ್ದೀರಾ ಎಂದೋ, ಲಾಲ್ಬಾಗೆಂಬುದು ಈ ಊರಷ್ಟು ಅಗಲ ಐತಂತೆ ಹೌದಾ
ಎಂದೋ; ಅಲ್ಲೆಲ್ಲ ಕಾರ್ ಜೀಪುಗಳು ಇರುವೆ ಅಡ್ಡಾಡಿದಂತೆ ಅಡ್ಡಾಡ್ತವಂತೆ ನಿಜವೇ? ಎಂದೋ ಬಹುವಚನ
ಗುಣವಿಷೇಶಣಗಳನ್ನು ಸೇರಿಸಿ ಕುತೋಹಲ ವ್ಯಕ್ತಪಡಿಸುತ್ತಿದ್ದರೆ ಮತ್ತೆ ಕೆಲವರು ಇನ್ನೊಂದು ಹೆಜ್ಜೆ
ಮುಂದೆ ಹೋಗಿ ಅಲ್ಲಿ ಹುಡುಗಿಯರು ಜೀನ್ಸು ಪ್ಯಾಂಟು ತೊಡುತ್ತಿರುವುದರ ಬಗ್ಗೆ; ಮುದುಕಿಯರು ಪಂಜಾಬಿ
ಡ್ರೆಸ್ ತೊಡುತ್ತಿರುವುದರ
ಬಗ್ಗೆ; ಗಂಡು ಹೆಣ್ಣು ಸಾರ್ವಜನಿಕ ಪರ್ಸ್ಪರ ಮುದ್ದು ಕೊಡುಕೊಳ್ಳುತ್ತಿರುವುದರ ಬಗ್ಗೆ; ಅಲ್ಲಿ
ಐದು ನಿಮಿಷಕ್ಕೊಂದು ಕೊಲೆ ಆತ್ಮಹತ್ಯೆ ಪ್ರಕರಣಗಳು ಪ್ರೇಮಪ್ರಕರಣಗಳಷ್ಟೇ ಸಲೀಸಾಗಿ ನಡೆಯುತ್ತಿವೆ
ಎಂಬುದರ ಬಗ್ಗೆ; ಸಿನಿಮಾ ಯಾಕ್ಟರುಗಳ ಬಗ್ಗೆ, ಅದರಲ್ಲೂ ಮುಖ್ಯವಾಗಿ ರಾಜಕುಮಾರ್ ಬಗ್ಗೆ
ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಡುತ್ತಿದ್ದರು. ರಘುರಾಮ ಮಾತ್ರ ಯಾವ ಪ್ರಶ್ನೆಗೂ
ಬೇಸರಪಟ್ಟುಕೊಳ್ಳದೆ ಮಸಾಲೆ ಬೆರೆಸಿ ಉತ್ತರ ನೀಡಿಅವರನ್ನು
ಸಂತೃಪ್ತಿಗೊಳಿಸಿ ಗ್ರಾಮದಲ್ಲಿ ಪ್ರತಿಷ್ಟೆ ಹೆಚ್ಚಿಸಿಕೊಂಡಿದ್ದ. ಇವೆಲ್ಲಕ್ಕೂ ಕಳಸಪ್ರಾಯವಾಗಿ
ಒಂದು ಘಟನೆ ನಡೆಯಿತು. ನೇರವಾಗಿ ನೋಡುವವರಿಗೆ ಇದೇನು ಗಮನಾರ್ಹ ಘಟನೆ ಎನಿಸದಿರಬಹುದು.
ಸದರೀ ಗ್ರಮದ ಉಡುಪಿ ಶ್ರೀಕೃಷ್ಣ ಭವನವೆಂಬುದು ಇಪ್ಪತ್ತೆರಡು ನಮೂನೆಯ ದೋಸೆಗಳಿಗೆ ಫೇಮಸೆಂದು ಬಂದ
ಮಾರನೆ ದಿನವೇ ಗೊತ್ತಾಯಿತು. ಅವನು ಮೊದಲೇ ದೋಸೆ ಎಂದರೆ ಮೂಗು ಕೊಯ್ಯಿಸಿಕೊಳ್ಳುತ್ತಿದ್ದಂಥವನು.
ಚಿಕ್ಕಂದಿನಿಂದಲೇ ಉಂಡಾಡಿ ಅಮರಪ್ಪ ತೋರಿಸಿದ ಮಸಾಲ ದೋಸೆಗೆ ಆಸೆಪಟ್ಟು ಸೂಲಗಿತ್ತಿ ಲಚ್ಚಮ್ಮನ
ಮಗಳು ರೇಣುಕಾಗೂ ಓಬಳಾಪುರದ ಜಗಳಗಂಟಿ ತಿಂದಪ್ಪನ ಮಗ ಬಸವರಾಜುಗೂ ನಡುವೆ ಗೊಪ್ಯಾತಿಗೋಪ್ಯವಾಗಿ
ನಡೆಯುತ್ತಿದ್ದ ಪ್ರಣಯದಾಟವನ್ನು ಪತ್ತೆ ಹಚ್ಚಿ ಏಕಕಾಲಕ್ಕೆ ದೋಸೆ ಮತ್ತು ಮಾವನ ಕೈಲಿ ಅಭೂತಪೂರ್ವ
ಒದೆ ತಿಂದು ಹೆಸರುವಾಸಿಯಾಗಿದ್ದಂಥವನು. ಸಮಾಜ ಬದಲಾವಣೆಯ ಕ್ರಾಂತಿಕಾರಕ
ಕೆಲಸದ ನಡುವೆಯೂ ಯಾವ್ಯಾವ ಹೋತೆಲಲ್ಲಿ ಯವ್ಯಾವ ನಮೂನೆಯ ದೋಸೆ ಮಾಡುವರು ಎಂದು ಪತ್ತೆ ಹಚ್ಚುವಲ್ಲಿ
ನಿಸ್ಸೀಮನಾಗಿರುವನು. ‘ಏನಯ್ಯಾ ನಿನಗೆ ಕ್ರಾಂತಿಗಿಂತ ದೋಸೇನೆ ಹೆಚ್ಚಾಯ್ತಲ್ಲ’ ಎಂದು ವ್ಯಂಗ
ಆಡಿಸಿಕೊಂಡಿರುವನು, ಯಾವನೋ ಅಸಮಾನತೆಯನ್ನು
ಹೋಗಲಾಡಿಸುವ ಮೊದಲು ಗರಿಗರಿ ಎನ್ನುವ ಮಸಾಲೆ ದೋಸೆಯನ್ನು ತಿನ್ನಲೇಬೇಕು. ಮಸಾಲೆ ತಿನ್ನದ ಹೊರತು
ಅವನಿಗೆ ಮಾರ್ಕ್ಸ್, ಏಂಗೆಲ್ಸ್, ಕ್ಯಾಸ್ಟ್ರೋ; ಚಿಗುವೇಲಾ ಯಾರೂ ಅರ್ಥವಾಗುವುದೇ ಇಲ್ಲ. ಹೋಗಲಿ
ಪೊಂಗಲ್ ತಿಂದ ಮೇಲಾದರು ಗಾಂಧೀಜಿ ಅರ್ಥವಾಗುವುದು ಬೇಡವೆ? ದೋಸೆ ಮಾಡದ ಹೋಟೆಲ್ಗಳು ಅವನ
ದೃಷ್ಟಿಯಲ್ಲಿ ಬಲಪಂಥಕ್ಕೆ ಸೇರಿದವುಗಳು. ಯಾವುದೇ ಹೊಟೆಲ್ಲಿಗೆ ಹೋದರೂ ಅವನ ಕಣ್ಣು ಕೆಂಪಗೆ
ಮಾಡಿಕೊಂಡು ನೋಡುವುದು ತಿಂಡಿ ಹೆಸರುಗಳ ರೇಟಿನ ಬೋರ್ಡನ್ನು.
ದೋಸೆಗೆ ಬೋರ್ಡಿನಲ್ಲಿ ನೀಚಸ್ಥಾನ ದೊರಕಿದ್ದರಂತೂ ಅವನನ್ನು ಸಂತೈಸಲು ಕಾರ್ಮಿಕ ಖಾತೆಯ ಸಚಿವಾಲಯವೇ
ಬರಬೇಕಿತ್ತು. ತಾನು ಕಾರ್ಲ್ಮಾರ್ಕ್ಸ್ ದಯದಿಂದ ಏನಾದರೂ ಮುಖ್ಯಮಂತ್ರಿ ಆದರೆ ಮಾಡುವ
ಮೊಟ್ಟಮೊದಲನೆಯ ಕಾರ್ಯವೆಂದರೆ ಶಾಲಾ ಮಕ್ಕಳ ಮಧ್ಯಾಹ್ನದ ಉಪಹಾರಕ್ಕೆ ಮಸಾಲೆ ದೋಸೆಯನ್ನು
ಒದಗಿಸುವುದಾಗಿ ತಮಾಷೆಗೆ ಹೇಳಿಕೊಳ್ಳುವುದುಂಟು. ಅವರು ಸದರೀ ಗ್ರಾಮಕ್ಕೆ ಬಂದಾಕ್ಷಣ ತನ್ನಕ್ಕ
ದೋಸೆ ಮಾಡುವಳೆಂದು
ಬಗೆದಿದ್ದ. ಈ ದೇಶದ ಶೂದ್ರರಿಗೆ ದೋಸೆ ಬಗ್ಗೆ ಕೊಂಚವಾದರೂ ಪರಿಜ್ಞಾನ ಇರುವುದು ಬೇಡವೇ? ಎಂದು
ಮನಸ್ಸಿನಲ್ಲಿ ನಿರಾಸೆಯಿಂದ ಗೊಣಗಿಕೊಂಡಿದ್ದ. ಅನಸೂಯಾಲನ್ನು ತಾನು ಮದುವೆಯಾಗಲಿರುವುದು ಖಚಿತವಾದ
ತಕ್ಷಣ ಅವನು ಆಕೆಗೆ ಹಾಕಿದ ಮೊದಲನೆ ಪ್ರಶ್ನೆ ಎಂದರೆ ದೋಸೆ ಮಾಡಲು ಬರುವುದೇನು? ಎಂದು. ಮಾಡಲು
ಬಂದರೆ ಎಷ್ಟೆಷ್ಟು ಪ್ರಮಾಣದಾಲ್ಲಿ ಅಕ್ಕಿ; ಉದ್ದಿನಬೇಳೆ ಹಾಕುತ್ತಾರೆ, ರುಬ್ಬಿದ ಹಿಟ್ಟು ಬೆಳಗಿನ
ಹೊತ್ತಿಗೆ ಊದಿಕೊಳ್ಳಲು ಕಾರನವೇನು? ಎಷ್ಟು ನಮೂನೆಯ ದೋದೆಗಳನ್ನು ಮಾಡಲು ಬರುತ್ತದೆ? ಇತ್ಯಾದಿ
ಇಂಥ ಜುಜುಬಿ ಪ್ರಶ್ನೆಗಳಿಂದ ರೋಸಿ ಹೋಗಿ ಅನಸೂಯ"ಕ್ರಾಂತಿಕಾರಕ ಬದಲಾವಣೆ ಬರಬೇಕಿರೋದು
ದೋಸೆಯಲ್ಲೋ! ಸಮಾಜದಲ್ಲೋ" ಎಂದು ಸಿಡಿಮಿಡಿಗೊಂಡಿದ್ದಳು. ದೋಸೆಯ ಮಹತ್ವ ಅರ್ಥವಾಗುವುದು ಮದುವೆಯಾದ
ಮೇಲೆ ಎಂದು ತನಗೆ ತಾನು ಸಮಾಧಾನಪಡಿಸಿಕೊಂಡಿದ್ದ. ಇಂಥ ರಘು ಸದರೀ ಗ್ರಾಮದ ಹೊಟೆಲುಗಳ ತಿಂಡಿ
ಜಾಯಮಾನದ ಬಗ್ಗೆ ಯೋಚಿಸತೊಡಗಿದ್ದು ತುಂಬ ತಡವಾಗಿಯೇ
ಎನ್ನಬೇಕು. ಸದರೀ ಗ್ರಾಮದ ಬಹುತೇಕ ಹೊಟಲುಗಳಲ್ಲೆಲ್ಲ ಬರೀ ಮೊಂಡಾಳು ವಗ್ಗರಣೆ ಮೆನಸಿನಕಾಯಿ
ಪುಗ್ಗಿ ಎಂದರೆ ಹಣೆಹಣೆ ಚಚ್ಚಿಕೊಳ್ಳುವುದೇನು! ಗ್ರಾಮದ ಸರ್ವತೋಮುಖ ಅಭಿವೃದ್ಧಿ
ಕುಂಠಿತವಾಗಿರುವುದು ಸಾರ್ವಜನಿಕವಾಗಿ ದೋಸೆ ಅಪಮೌಲ್ಯಗೊಂಡಿರುವುದು ಎಂದು ಸಾಂದರ್ಭಿಕವಾಗಿ
ಪ್ರಸ್ತಾಪಿಸಿದ್ದು ಮಾಜಿ ಪುರಸಭಾ ಅಧ್ಯಕ್ಷರಾದ ಶಿವಪೂಜೆ ಕೊಟ್ರಗೌಡರ ಎದುರಿಗೆ, ಗೌಡರು ಎಂದರೆ
ಸಾಮಾನ್ಯರಗಿರಲಿಲ್ಲ. ಬೆಂಗಳುರನ್ನು ಸರಕಾರಿ ಖರ್ಚು ವೆಚ್ಚದಲ್ಲಿ ನೋಡಬೇಕೆಂದೇ ಅವರು ಸ್ಥಳೀಯ
ರಾಜಕಾರಣದಲ್ಲಿ ಆಸಕ್ತಿ ವಹಿಸಿದ್ದು. ಸಾವಿರಾರು ರುಪಾಯಿ ಖರ್ಚು ಮಾಡಿ ಎರಡುಸಾರಿ ಪುರಸಭಾ
ಅಧ್ಯಕ್ಷರಾಗಿ
ಆಯ್ಕೆಗೊಂಡರೂ ಆ ಸುವರ್ಣಾವಕಾಶ ಕೂಡಿ ಬಂದಿರಲಿಲ್ಲ. ಒಮ್ಮೆ ಅಂಥ ಅವಕಾಶವೇನೊ ಬಂಥು, ಆದರೆ ತಮ್ಮ
ಕಟ್ಟಾ ಎದುರಾಳಿ ಉಪಾಧ್ಯಕ್ಷ ಸೂರಿಗಾಡು ಇಲ್ಲಸಲ್ಲದ ಮಾತುಗಳಿಂದ ಎಗರಾಡಿ ಬೆಂಗಳೂರಿಗೆ ಹೋಗಿ ಬಂದು
ಬಿಡುವುದೇನು? ಊರಮುಂದಿನ ಹತ್ತೆಕರೆ ಮಸಾರೆ ಹೋದರೂ ಚಿಂತೆ ಇಲ್ಲ ಈ ಸಾರಿ ಎರಡನೇ ವಾರ್ಡಿಗೆ
ನಿಂತುಕೊಂಡು ಬಿಡ್ರಿ ಎಂದು ಅದೇ ಸೂರಿಗಾಡು ಪುಸಲಾಯಿಸಿದ್ದುಂಟು. ಈ ಸಾರಿ ರಾಜ್ಯದ ಪುರಸಭಾ
ಅಧ್ಯಕ್ಷರುಗಳು ರಾಜಧಾನಿ ಬೆಂಗಳೂರಿಗೆ ಹೋಗಿ ಬರುವ ಖರ್ಚು ಭರಿಸಲು ಸರಕಾರ ಸಿದ್ಧವಿದೆ ಎಂದು
ಸತ್ಯಣ್ಣ ಶೆಟ್ಟಿ ಪಂಪು ಹೊಡೆದಿದ್ದುಂಟು. ಆದರೆ ಪ್ಯಾರಲಿಸಿಸ್ ಸ್ಟ್ರೋಕ್
ಹೊಡೆಸಿಕೊಂಡಿರುವ ಗೌಡರು ಎಲೆಕ್ಷನ್ಗೆ ನಿಲ್ಲಬೇಕೆಂದಿದ್ದರು. ಹತ್ತೆಕರೆ ಹೊಲ ಮಾಡುವ ಉಪದ್ವಾನ
ನಡೆಸಿದ್ದರು. ಆದರೆ ಮನೆ ಮಂದಿ ಸುಮ್ಮರಿರಬೇಕಲ್ಲ! ಖಡಾಖಂಡಿತವಾಗಿ ತಡೆದು ಮಂಚದಮೇಲೆ ಕುಕ್ಕರು
ಬಡಿದಿದ್ದರು. ಮಂಚದ ಮೇಲೆ ‘ಉಮಹೇ’ ಮಾಡಿಕೊಳ್ಳುತ್ತಿದ್ದ ಗೌಡರಿಗೆ ಸದಾ ಬೆಂಗಳೂರಿನದೇ ಕನಸು.
"ಇಲಾಜಿಗಾದರೂ ಬೆಂಗಳೂರಿಗೆ ಕರೆದುಕೊಂಡು ಹೋಗ್ರೋ" ಎಂದು ತನ್ನ ಸಂತಾನವಾದ ಪಂಚಪಾಂಡವರನ್ನು
ಪೀಡಿಸುತ್ತಿದ್ದುದುಂಟು, ಮುಂದೊಂದು ದಿನ
ಸಾಯಲಿರುವ ವ್ಯಕ್ತಿಗೆ ಬೆಂಗಳೂರು ಕರೆದೊಯ್ದು ಇಲಾಜು ಮಾಡಿಸಲೇನು ಅವರು ದಡ್ಡರೇ?
ರಘುರಾಮ ಎಂಬುವನು ಬೆಂಗಳೂರಿಂದ ಬಂದಿರುವನೆಂದೂ; ಅವನು ತಮ್ಮ ಖಾಸಾದೋಸ್ತು ರುದ್ರನಾಯಕನ
(ರುದ್ರನಾಯಕನಿದ್ದಿದ್ದರೆ ತಾನೀ ಸ್ಥಿತಿಯಲ್ಲಿ ಬಿದ್ದಿರಬೇಕಿತ್ತೇ?)‘ಸಾಲ’ನೆಂದು ತನ್ನ ರಾಜಕೀಯ
ಗುರು ಕುರಕುಂದಿ ಈರಣ್ಣನಿಂದ ತಿಳಿದುಕೊಂಡು ಮನೆಗೆ ಕರೆ ಕರೆಸಿಕೊಂಡು ಬೆಂಗಳೂರಿನ ವೈವಿಧ್ಯಮಯ
ಬದುಕಿನ ಬಗ್ಗೆ (ಮೌಖಿಕವಾಗಿ+ಲಿಖಿತವಾಗಿ) ವಿಚಾರಿಸಿ ತಮ್ಮ ತಿಳುವಳಿಕೆ ಹೆಚ್ಚಿಸಿಕೊಂಡಿದ್ದರು.
ಪ್ರಾಧಾನ ಮಂತ್ರಿಗಳ ಬಳಿ
ದುಭಾಷಿಗಳಿರುವಂತೆ ಸಹಾಯಕವಾಗಿ ಈರಣ್ಣ ಬೇರೆ ಇದ್ದನಲ್ಲ. ಗೌಡರೂ ಎಳೆ ಬಾಲಕರಂತೆ ರಾಜಕುಮಾನ
ನೋಡಿದ್ದೀಯಾ? ಮುಟ್ಟಿದ್ದಿಯಾ? ಮಾತಾಡಿಸಿದ್ದೀಯಾ? ಎಂದು ಕೇಳಿದರು; ಅದಕ್ಕೆಲ್ಲ ‘ಹ್ಹೂಂ’ ಅಂದು
ರಘು ಸದರಿ ಗ್ರಾಮದ ಜನರ ತಿಂಡಿ ಅಭಿರುಚಿ ಬಗ್ಗೆ ಚರ್ಚೆ ಆರಂಭಿಸಿದ್ದ. ಈ ಹಂತದಲ್ಲಿಯೇ ಗೌಡರು ದೇಶ
ವಿದೇಶಗಳಲ್ಲಿ ದೋಸೆಗೆ ಹೆಸರಾಗಿರುವ ಉಡುಪಿ ಶ್ರೀಕೃಷ್ಣಭವನದ ಸುಳುವು ನೀದಿದ್ದರು. ಉದುಪಿಯ
ಶ್ರೀಕೃಷ್ಣನ
ದರ್ಶನಾಕಾಂಕ್ಷಿಯಾಗಿ ಮಠದ ಬೆನ್ನು ಗೋಡೆಯಲ್ಲಿ ಕನಕದಾಸರು ಕನ್ನ ಕೊರೆದಂತೆ ಗ್ರಾಮದ ಅನೇಕರು ದೋಸೆ
ತಿನ್ನುವ ಹೆಬ್ಬಯಕೆಯಿಂದ ಹೋಟೆಲನ್ನು ಅದರ ನವರಂದ್ರಗಳ ಮೂಲಕ ಪ್ರವೇಶಿಸುತ್ತಿರುವರೆಂದೂ
ವಿವರಿಸಿದರು. ಆಗಲೇ ನಮ್ಮ ‘ಯ್ಯಾಂಟಿ ಹೀರೋ’ ರಘುರಾಮ ಉಡುಪಿ ಶ್ರೀ ಕೃಷ್ಣಭವನದ ದೋಸೆಗಳನ್ನು ಒಂದು
ಕೈನೋಡಿಕೊಳ್ಳಬೇಕೆಂದು ಶಪಥ ಮಾಡಿದ್ದು.
ದೋಸೆ ಸೇವನೆಗೆ ಮಾಮೂಲು ರೀತಿಯಲ್ಲಿ ಹೋಗುವುದುಂಟೇನು? ರಘು ಸಫಾರಿ ಡ್ರೆಸ್ ತೊಟ್ಟುಕೊಂದು,
ಬಗಲಲ್ಲಿ ಕಾರ್ಲ್ಮಾರ್ಕ್ಸ್ನ ದಾಸ್ ಕೆಪಿಟಲ್ ಇಟ್ಟುಕೊಂಡು ಕಾಲಿಗೆ ಪಾಯಿಂಟ್ ಷೂಸ್ ಹಾಕ್ಕೊಂಡು
ಅಶ್ವಮೇಧ ಯಾಗಕ್ಕೆ ಬಿಟ್ಟ ಕುದುರೆಯಂತೆ ಮನೆ ಬಿಟ್ಟ. ಟಾಪ್ನಿಂದ ಬಾಟಮ್ಮೊರೆಗೆ ರೆಡ್ಡಂದ್ರೆ
ರೆಡ್ಡು. ಭಾಷಣ ಮಾಡೊಕೆ ಹೊರಟಿದ್ದೀಯಾ? ಎಂದು ಕೇಳಿದಳು ಅನಸೂಯಾ. (ಎಷ್ಟಿದ್ದರೂ ಸೋದರಮಾವನಲ್ಲವೆ!
ಅದಕ್ಕೆ ಸಲಿಗೆ) "ಕೇಳೊಕೆ ನೀನೂ ಬತೀಯೇನು?" ಎಂದು ಅವನು ತಮಾಷೆ ಮಾಡಿದ. ರಘುರಾಮ ದೋಸೆ ಲಗಾಸಲು
ಹೊರಟಿರುವುದು ನೋಡಿದ ಎಂಥಾವರಿಗೂ ಗೊತ್ತಗಿ ಬಿಡುವಂತಿತ್ತು.
ಅಂಗಳದಲ್ಲಿ ಬಂದ ಕೂಡಲೆ ಓಣಿ ಹೆಂಗಸರೆಲ್ಲ ತಂತಮ್ಮ ಮನೆಯ ಕಿಟಕಿ ಮತ್ತಿತರ ಕಿಂಡಿಗಳಲ್ಲಿ ನಿಂತು
ಪಿಳಿಪಿಳಿ ನೋಡತೊಡಗಿದರು - ಅವರೆಲ್ಲ ಬೆಂಗಳೂರಿನ ವೈಭವವೇ ಮನುಷ್ಯ ರೂಪ ಧರಿಸಿ ಹೊರಟಿದೆ
ಎನ್ನುವಂತೆ, ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ ಅಂತ ರಾಘವಾಂಕ ಹೇಳಿದ್ದಾನಲ್ಲ ಹಾಗೆ.
ಆಚೆಮನೆ ಸಾವಿತ್ರಿ ರಘುವನ್ನು ತೋರಿಸುವ ನಿಮಿತ್ತ ಅಲಮೇಲಮ್ಮನಿಗೆ ಐದಡಿ ಏಳಂಗುಲ ದೂರದಲ್ಲಿ
ಕಿಟಕಿಯ ಜಾಲರಿಯಲ್ಲಿ ನಿಂತಿದ್ದಳು. ಹಲವಾರು ಹಸುಳೆಗಳ ಎಳೆ ನಗೆಯೇ ಆ ಯುಕನ ರೂಪ ಪಡೆದಿದೆ
ಎಂಬುದಾಗಿ (ಆಗಲೆ ಮುಂದೆರಡು ಹಲ್ಲು ಕಳೆದುಕೊಂದಿದ್ದ)ಭಾವಿಸಿದ ಅಲುಮೇಲಮ್ಮಗೆ ಸಾವಿತ್ರಿ "ಆಯಪ್ಗೆ
ದೋಸೆ ಎಂದ್ರೆ ಪಂಚಪಿರಾಣದಂತೆ" ಎಂದು ಪಿಸುಗುಟ್ಟಿದಳು.
ಬೆಂಗಳೂರಿನ ಯುವಕ ತಮ್ಮ ಹೋಟಲ್ಲಿಗೆ ದೋಸೆ ತಿನ್ನಲು ಬರಲಿರುವನೆಂದು ಅದ್ಹೇಗೋ ಅಶರೀರವಾಣಿ ಮೂಲಕ
ತಿಳಿದುಕೊಂಡು ಮಾಲೀಕರಾದ ತಿಮ್ಮಣ್ಣ ಭಟ್ಟರು ಛಾಯಾ ಸ್ಟುಡಿಯೋದ ವೆಂಕಟೇಶಿಯನ್ನು ಕೆಮರಾದೊಂದಿಗೆ
ರೆಡಿಮಾಡಿ ಇಟ್ಟಿದ್ದರು. ಕೂಲಿಂಗ್ ಗಿಲಾಸ್ ಧರಿಸಿದ್ದ ರಘು ಹೋಗುತ್ತಲೆ ಬರ್ರಿ ಬರ್ರಿ ಎಂದು
ಸ್ವಾಗತಿಸುತ್ತ ದೋಸೆ ತಿನ್ನುವಾಗ ಹೊಡಿಯೋ ಎಂದು ಕೆಮೆರಾಮನ್ನಿಗೆ ಪಿಸಿಗುಟ್ಟಿದರು. ಮೂರು ಕಾಲು
ಕುರ್ಚಿಮೇಲೆ ಫ಼್ಯಾನ್ ಸ್ವಿಚ್ ಹಾಕಿದರು. ಅದು
ವಾತಾಪಿ ಗಣಪ ಜಿಂದಹೇ ಎಂದು ಹಂಸದ್ವನಿ ರಾಗದಲ್ಲಿ ಕುಯ್ಯೋ ಮರ್ರೋ ಎಂದು ತಿರುಗತೊಡಗಿತು. ಅವರು
ಹಿಡಿ ಹಿಡಿ ಶಾಪ ಹಾಕುತ್ತಿದ್ದುದುತಮ್ಮ ದೋಸೆಗೋ ಸದರಿ ಗ್ರಾಮದ ಕೆಇಬೀಗೋ ಅರ್ಥವಾಗುತ್ತಿರಲಿಲ್ಲ.
ಮಾಣಿ ಇಷ್ಟುದ್ದ ಅಗಲದ ಭೂಪಟದಂತಿದ್ದ ದೋಸೆಯನ್ನು ತಂದಿಟ್ಟ. ಅದು ಗಮ್ಮನೆ ಪರಿಮಳ ಬೀರಿತು. .
ಕೌಶಿಕಮುನಿ ತನ್ನ ಮೇಲೆ ಇಸಿ ಮಾಡಿದ ಬಲಾಕ ಪಕ್ಷಿ ಕಡೆ ದುರುಗುಟ್ಟಿ ನೋಡಿದಂತೆ ರಘು ಅದರ ಕಡೆ
ನೋಡಿದ. ಕೆಮರಾ ಕ್ಲಿಕ್ ಅಂತು. ಅದಕ್ಕೆ ಕೈ ಹಚ್ಚಿದ. ಕೆಮರಾ ಕ್ಲಿಕ್ ಅಂತು. ಅದನ್ನು
ಬಾಯಲ್ಲಿಟ್ಟುಕೊಂಡ. ಕೆಮರಾ ಕ್ಲಿಕ್ ಅಂತು. ಮಾತಾಡಿದಂತೆ ಮೂರು ಫೋತೋದ ಅಡ್ವಾನ್ಸ್ ಇಸುಕೊಂಡು
ವೆಂಕಟೇಶಿ ಸಿಳ್ಳೆ ಹಾಕುತ್ತ ತ್ರೀ ಹಂಡ್ರಡ್ ಹಾಕಲು ಪ್ರಸಾದನ ಪಾನ್ ಶಾಪಿನ ಬಳಿಗೆ ಹೋಗುತ್ತಲೆ
ಭಟ್ಟರು ದೋಸೆಯ ರುಚಿ ಹಾಗೂ ಹೋಟೆಲ್ ರುಚಿ ಹಾಗೂ ಶುಚಿ ಬಗ್ಗೆ ವಿಚಾರಿಸಿದರು. "ನೀವು ಏನೇ ಹೇಳಿ
ಮಾರಾಯ್ರೆ ಆ ಶಾಮಾಶಾಸ್ತ್ರಿಗೆ ದೋಸೆ ಬಗ್ಗೆ ಆಸಕ್ತಿನೇ ಇಲ್ಲ ನೋಡಿ. ದಿನಕ್ಕೆರ್ಡು ಹೊತ್ತು
ಮಂಡಾಳು ವಗ್ಗರನೆ ಪುಗ್ಗಿ ಇದ್ದುಬಿಟ್ಟರೆ ಮುಗಿಯಿತು ನೋಡಿ" ಎಂದು ಅವನನ್ನು ಪ್ಲೀಜು ಮಾಡಲು
ಶತಪ್ರಯತ್ನ ಮಾಡಿದರು.
ಇಂಥ ದೋಸೆ ತಿಂದು ಬೆಂಗಳೂರಿನವರು ಐವತ್ತು ಪೈಸೆ ಹೆಚ್ಚಿಗೆ ಬಿಲ್ಲು ತೆತ್ತದಿದ್ದರೆ ಹೇಗೆ?
ಮಾಣಿಗೆ ಕಣ್ಣು ಮಿಟುಕಿಸಿದರು. ಅವನು ಅದರಂತೆ ಆ ಪುಟ್ಟ ಕಾಗದದ ಮೇಲೆ ಮಹಾಕಾವ್ಯ
ಬರೆಯುತ್ತಿರುವನೇನೋ ಎಂಬಂತೆ ಸಿಳ್ಳುಹಾಕುತ್ತ ಬಿಲ್ ಬರೆದು ರಘುನ ಕೈಗೆ ಕೊಡುತ್ತ ಮನಸ್ಸಿನಲ್ಲಿ
(ಇಂದು ಸಂಜೆಯಿಂದ ಆರಂಭವಾಗುವ ಭೇದಿ ಮೂರು ದಿನವಾದರೂ ಕಡಿಮೆಯಾಗುವುದಿಲ್ಲ. ನೋಡ್ತಿರು) ಶುಭ
ಕೋರಿದ.
ರಘು ಅದರ ಕಡೆ ನೋದಿದರೆ ತಾನೆ? ನೂರು ರೂಪಾಯಿ ನೋತನ್ನು ಬಿಲ್ಲಿನೊಂದಿಗೆ ಟೇಬಲ್ ಮೇಲೆ ಸರಿಸಿದ.
ಭಟ್ಟರು ನೋಟನ್ನು ಬೆಳಕಿನಲ್ಲಿ ಹಿಂದು ಮುಂದು ನೋಡಿ ಖೋಟ ಅಲ್ಲವೆಂದು ಖಚಿತಪಡಿಸಿಕೊಂಡು ಚಿಲ್ಲರೆ
ಕೊಡುವಾಗ ಅಕಸ್ಮಾತ್ ರಘು ಎಡಗೈಗೆ ಕಟ್ಟಿಕೊಂಡಿದ್ದ ವಾಚಿನ ಕಡೆ ನೋಡಿ ದಾಂತೋತಲೆ ಉಂಗ್ಲಿದಭಾನ
ಮಾಡಿದರು.
"ಇದೇನು ಮಾರಾಯ್ರೆ... ಈ ವಾಚು ಹಿಂಗದೇ... ನಂಬರುಗಳು ಅಟಕ್ ಪಿಟಕ್ ಅಂತ ತಮ್ಮಷ್ಟಕ್ಕೆ ತಾವೆ
ಬದಲಾಗ್ತಿದಾವಲ್ಲ... ಎಂಥ ಸೋಜಿಗ ಕಣ್ರಿ ಇದು...." ಎಂದು ಜೋರಾಗಿ ಉದ್ಗರಿಸಿದೊಡನೆ
ಅಷ್ಟೊತ್ತಿಗಾಗಲೇ ಆ ಹೋಟಲಿನ ನವರಂದ್ರಗಳ ತುಂಬ ಜೀರಾಡುತ್ತಿದ್ದ ಸದರೀ ಗ್ರಾಮದ ಉಂಡಾಡಿ ಗುಂಡರು
‘ಹುರ್ರೇ’ ಎಂದು ಪ್ರತ್ಯಕ್ಷವಾಗಿ ತಮ್ತಮ್ಮ ಕಣ್ಣುಗಳನ್ನು
ಚಕಚಕ ಅಂತ ಕಿತ್ತು ಆ ವಾಚಿನ ಮೇಲಿಟ್ಟರು . ಎಂಥ ವಾಚದು? ನಭೂತೊ ನಭವಿಷ್ಯತಿ. ಅವರೆಲ್ಲರ ಮೇಲೆ
ಮೀರಿದ ಕುತೋಹಲ ಒಂದು ಕ್ಷನ ರಘುಗೆ
ಅರ್ಥವಾಗಲಿಲ್ಲ. ತಾನು ಕಟ್ಟಿರುವ ಎಲೆಕ್ಟ್ರಾನಿಕ್ ವಾಚು ಅವರೆಲ್ಲರನ್ನೂ ಇಷ್ಟೋಂದು
ಮಂತ್ರಮುಗ್ಧರನ್ನಾಗಿ ಮಾಡಬಹುದೆಂದು ಅವನು ಆ ಹಿಂದಿನ ಕ್ಷಣದವರೆಗೆ ಯೋಚಿಸಿರಲಿಲ್ಲ. ಅವನು ಹಾಗೆಯೇ
ಇನ್ನೊಂದು ಕ್ಷಣ ಮೈಮರೆತುಬಿಟ್ಟಿದ್ದರಲ್ಲಿ ಅವರೆಲ್ಲರು ಆ ವಾಚಿನೊಂದಿಗೆ ಅವನ ಎಡಗೈಯನ್ನೂ
ಅಪಹರಿಸದೆ ಇರುತ್ತಿರಲಿಲ್ಲ. ಅಂತೂ ನಸಿಬ ನೆಟ್ಟಗಿತ್ತು ಅದರಿಂದ ಹೇಗೋ ತಪ್ಪಿಸಿಕೊಂಡು ಮನೆ
ಸೇರಿದ...
ತಮ್ಮನ ಅವಸ್ಥೆ ನೋಡಿ ರುಕ್ಕಮ್ಮ ಗಾಬರಿಯಾದಳು. ಬಾಗಿಲಿಗೆ ಕರ್ಟನ್ ಹಾಕುತ್ತಿದ್ದ ಅನಸುಯ ತನ್ನ
ವುಡ್ಬೀಗೆ ಏನಾಯ್ತೂಂತ ಧಾವಿಸಿ ಬಂದಳು. ತಮ್ಮನ ಗತಕಾಲದ ಬಾಲಲೀಲೆಗಳೆಲ್ಲ ಎಲ್ಲಿ
ಪುನರಾವರ್ತನೆಗೊಂಡವೋ ಎಂದು ರುಕ್ಕಮ್ಮ ಭಾವಿಸಿದ್ದು ಸಹಜ. ಕ್ರಾಂತಿಕಾರಿ ಭಾಷಣ ಮಾಡುವಾಗೆಲ್ಲಿ
ತನ್ನ ವುಡ್ಬೀಯನ್ನು ಜನ ಅಟ್ಯಾಕ್ ಮಾಡಿಬಿಟ್ಟರೋ ಎಂದು ಅನಸೂಯಾ ಭಾವಿಸಿದ್ದು ಸಹಜ.
ಕಾರ್ಲ್ಮಾರ್ಕ್ಸ್ನ ಕೆಂಪು ಪಟ್ಟೆಯ ಪುಸ್ತಕವನ್ನು
ಬಗಲಲ್ಲಿಟ್ಟುಕೊಂಡು ಮನೆಬಿಟ್ಟಾಗಲೇ ತಮ್ಮಿಬ್ಬರಿಗೆ ಅನುಮಾನ ಬಂದಿತ್ತು. ಏನಾದರೊಂದು ಅಹಿತಕರ
ಘಟನೆ ಸಂಭವಿಸಬಹುದೆಂದು ಅವರು ಮೊದಲೇ ಊಹಿಸಿದ್ದರು. ಕಾಲ ಮೊದಲಿಗಿಂತ ತುಂಬ ಸುಮಾರಾಗಿರುವುದು.
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಕಡೆ ನೋಡುವುದೇ ಗುಮಾನಿಯಿಂದ.
ತನ್ನ ವಿರುದ್ಧ ಏನಾದರೊಂದು ಸಂಚು ನಡೆಸುತ್ತಿರಬಹುದೆ ಎಂಬ ಆತಮ್ಕ ಸಾರ್ವರ್ತ್ರಿಕ ವಾಗಿತ್ತು.
ಯಾರಾದರೂ ಹೊಸಬರು ಬಂದರೆಂದರೆ ಅವರು ಬುಡಮೇಲು ಕೃತ್ಯ ನಡೆಸಲಿಕ್ಕೆಂದೇ ಬಂದಿರಬಹುದೆಂದು ಸುಲಭವಾಗಿ
ಊಹಿಸಿಬಿಡುತ್ತಿದ್ದರು. ಗ್ರಾಮದ ವಾತಾವರಣ ಹೀಗಿರುವಾಗಲೇ ರಘುರಾಮ ಬಂದಿರುವುದು. ಮೊದಮೊದಲು
ಎಲ್ಲರು ಅವನನ್ನು ಅನುಮಾನದಿಂದಲೇ ನೋಡಿದರು. ಒಲ್ಲದ ಮನಸ್ಸಿನಿಂದ ಸ್ವಾಗತಿಸಿದರು. ರುದ್ರ ನಾಯಕನ
ಭಾವ ಮೈದುನನೆಂದು ಗೊತ್ತಾದ ನಂತರವೇ ಎಲ್ಲರೂ ಸಮಾಧಾನದ ಉಸಿರುಬಿಟ್ಟಿದ್ದು. ಮೊದಲೇ
ತಮ್ಮದು ಗಂಡಸರಿಲ್ಲದ ಮನೆ! ಯಾವ ಕ್ಷಣದಲ್ಲಿ ಎಂಬ ಆತಂಕ ಬೇರೆ; ರಘುರಾಮ ಮನೆ ಬಿಟ್ಟ ಕ್ಷಣದಿಂದ
ಆರಂಭವಾಗುವ ಆತಂಕ ಕಡಿಮೆಯಾಗುತ್ತಿದ್ದುದು ಅವನು ಮನೆಗೆ ಮರಳಿದ ನಂತರವೇ. ತಾಯಿ ಮಗಳಿಬ್ಬರೂ ಸೇರಿ
ಎಡಪಂಥೀಯ ವಿಚಾರಧಾರೆಯ ಗರಂ
ಗರಂ ವಾಸನೆ ಬೀರುತ್ತಿದ್ದ ಪುಸ್ತಕಗಳನ್ನೆಲ್ಲ ಒಯ್ದು ಭತ್ತದ ಹೊಟ್ಟಿನ ಅಡಕಲ ಗಡಿಗೆಯೊಳಗೆ
ಬಚ್ಚಿಟ್ಟರು.
ರಘುರಾಮ ಎದೆಗೆ ಸಾಕಷ್ಟು ಗಾಳ ಬೀಸಿಕೊಂಡು; ಎರಡು ತಂಬಿಗೆ ಬಸವನ ಬಾವಿ ನೀರು ಕುಡಿದು; ತಾನು
ಗುಟ್ಟಗಿ ಪ್ರೀತಿಸುತ್ತಿದ್ದ ಪಾರ್ವತಿ, ಗೌರಿಯರನ್ನು (ಇವರಿಬ್ಬರು ಕಳೆದು ಐದು ವರ್ಷಗಳ ಹಿಂದೆ
ಕೈಯಲ್ಲಿ ಬಂದೂಕು ಹಿಡಿಯದ ಹೊರತು ಸಮಾಜವನ್ನು ಬದಲಿಸುವುದು ಸಾಧ್ಯವಿಲ್ಲವೆಂದು ನಂಬಿ ಫೇಮೋಸ್
ನಕ್ಸಲೈಟು ಚಿರುಕಲ ನರಸಿಂಹುಲು ಸಂಗಡ ಆಂಧ್ರಮಹಾವಿಷ್ಣುವಿನ ನೆಲವೀಡಾದ ಶ್ರೀಕಾಕುಳಂ ದುರ್ಗಮ
ಬೆಟ್ಟಗಳ ಕಡೆ ಹೋಗಿರುವರು) ನೆನೆಯುತ್ತ ಧೈರ್ಯ ತಂದುಕೊಂಡನು. ತಮ್ಮನ್ನು ಅನುಕ್ರಮವಾಗಿ
ಸಂಭೋಗಿಸದಿದ್ದಲ್ಲಿ ನೀನು ಕ್ರಾಂತಿಕಾರಿ ಚಳುವಳಿಗೆ ನಾಲಾಯಕ್ಕು ಅಂತ ಅವರು ಹೇಳಿದ್ದ
ಮಾತ್ನ್ನು ನೆನಪು ಮಾಡಿಕೊಳ್ಳದಿದ್ದುದು ಅವನ ಪುಣ್ಯ ಹೇಗೇನಾದರೂ ನೆನಪಾಗಿ ಬಿಟ್ಟಿದ್ದಲ್ಲಿ
ಅವನಿಂದ ಬೆವರನ್ನು ನಿಯಂತ್ರಿಸುವುದಾಗುತ್ತಿರಲಿಲ್ಲ.
ಈ ಪ್ರಕಾರವಾಗಿ ರಘುರಾಮ ಸಮಾಧಾನದ ಒಂದು ಹಂತ ತಲುಪಿದ ಮೇಲೆ ತನ್ನ ಬಾಳು ಬೆಳಗುವ ಹುಡುಗಿ
ಮಾಡಿಕೊಟ್ಟ ಚಹ ಕುಡಿದು ತಾನು ಭಟ್ಟರ ಹೋಟಲಿಗೆ ಹೋಗಿದ್ದು ದೋಸೆ ತಿನ್ನುವಾಗ ಭಟ್ಟರು ಫೋಟೊ
ತೆಗೆಸಿದ್ದು ಹೇಳುತ್ತಿದ್ದಂತೆಯೇ ಅನಸೂಯ ಫೋಟೊ ತೆಗೆಯಲು ಆಸ್ಪದ ಕೊಡಬಾರದಿತ್ತೆಂಬ
ತಕರಾರೆತ್ತಿದಳು. ದೋಸೆ ತಿನ್ನುವುದೇನೋ ಐತಿಹಾಸಿಕ ಘಟನೆ ಏನು ಅಲ್ಲ. ಹಾಗೆಯೇ ದೋಸೆ
ತಿನ್ನುವುದೇನೋ ಬುಡಮೇಲು ಕೃತ್ಯವೆನಿಸಿಕೊಳ್ಳಲಾರದು. ಆದರೆ
ಫೋಟೊವನ್ನು ತೆಗೆದ ಮತ್ತು ತೆಗೆಯಲು ಪ್ರೇರಣೆ ನೀಡಿದ ವ್ಯಕ್ತಿ ಪೋಲಿಸ್ ಇನ್ಫಾರ್ಮರ್ರಾಗಿದ್ರೆ
ಒದಗಲಿರುವ ಸಂಕಟವನ್ನು ತಡೆಯುವ ಬಗೆ ಹೇಗೆ? ಇದು ಸೂಕ್ಮೂಜ್ಞೆಯಾದ ಅನಸೂಯಳ ಆತಂಕದ ಒಂದು ನಮೂನೆ.
ಎಷ್ಟದರೂ ಅವನು ತನಗೆ ಗೃಹಸ್ಥಾಶ್ರಮ ನೀಡಲಿರುವವನಲ್ಲವೆ?
ರಘು ಅವರ ಅತಂಕಗಳ ಕಾರಣಗಳನ್ನು ಅರ್ಥಮಾಡಿಕೊಂಡು ನಕ್ಕ. ತಾನು ಕಟ್ಟಿಕೊಂಡಿರು ಎಲೆಕ್ಟ್ರಾನಿಕ್
ವಾಚು ಸೃಷ್ಟಿಸಿದ ಅವಾಂತರದ ಬಗ್ಗೆ ಹೇಳುತ್ತ ನಗಾಡಿದ. ಅವನು ಬಂದು ಇಷ್ಟು ದಿನವಾದರೂ ತಾವವನ ವಾಚು
ನೋಡದಿರುವುದರ ಬಗ್ಗೆ ತಾಯಿ ಮಗಳಿಬ್ಬರು ತಮಗೆ ತಾವೆ ಆಶ್ಚರ್ಯಪಟ್ಟುಕೊಂಡರು. ರುಕ್ಕಮ್ಮನಿಗಂತೂ
ಎಲೆಕ್ಟ್ರಾನಿಕ್ ಎಂಬ ಪದ ಉಚ್ಚರಿಸಲು ಕಷ್ಟವಾಗಿ ಅಟಕ್ ಪಿಟಕ್ ಎಂದಳು. ಪದವೀಧರೆಯಾದ ಅನಸೂಯ ಆ
ಕ್ಲಿಷ್ಟ ಪದದ ಅರ್ಥ ವಿವರಿಸಿದಳು. ಅವರಿಬ್ಬರು ಅವನ್ ಮುಂಗೈ ಅಲಂಕರಿಸಿದ್ದ ಅದನ್ನು ಶಾನೆ ಹೊತ್ತು
ನೋಡಿದರು. ಅದು ಗಂಡಸಾದ ಅವನ ಮುಂಗೈಯ ಮೇಲಿರುವುದೇ ಕ್ಷೇಮವೆಂದೇ
ಬಗೆದರು.
ಪಂಕ್ಚುಯಾಲಿಟಿಯ ಪರಿಪಾಲಕನಾದ ಅವನು ಆತ್ಮಲಿಂಗೋಪಾದಿಯಲ್ಲಿ ಅದನ್ನು ಧರಿಸಿಯೇ ಸ್ನಾನ ಊಟ ಇತ್ಯಾದಿ
ಮುಗಿಸಿ ಮಲಗಿಕೊಂಡ. ಅವನಿಗೆ ಡಿಸ್ಟರ್ಬ್ ಆಗುವುದೆಂದು ರುಕ್ಕಮ್ಮ ಮಗಳೊಂದಿಗೆ ಅಡುಗೆ ಮನೆಯಲ್ಲಿ
ನಡೆಯಲಿರುವ ಮದುವೆಬಗ್ಗೆ; ಬಾರದಿರುವ ಮಾಲಿಕನ ಬಗ್ಗೆ; ಆರ್ಥಿಕ ಪರಿಸ್ಥಿತಿಯ ಬಗ್ಗೆ; ಚರಾಸ್ತಿ
ಸ್ಥಿರಾಸ್ತಿ ಬಗ್ಗೆ; ಶಾಮನಿಗೆ ಗೊತ್ತು ಮಾಡಿರುವ ಹೊಸಪೇತೆಯ ಕನ್ಯಾಮಣಿಯ ಬಗ್ಗೆ; ಹೀಗೆ ಹಲವಾರು
ವಿಷಯಗಳ ಬಗ್ಗೆ ಚರ್ಚಿಸಲು ಅಧಿವೇಶನ ನಡೆಸಿದ್ದರು.
ಇತ್ತ ಪಡಸಾಲೆಯಲ್ಲಿ ಹಿರಿಯೂರು ಕಡೆಯ ಚಿತ್ತರದ ಚಾಪೆ ಮೇಲೆ ಸರ್ಪ ಶಯನದ ಮೇಲೆ ಮಹಾವಿಷ್ಣು
ಮಲಗಿರುವ ಶೈಲಿನಲ್ಲಿ ಅರೆ ಎಚ್ಚರ ಅರೆ ನಿದ್ರೆಯಲ್ಲಿ ಮಲಗಿಕೊಂಡಿದ್ದ ರಘುರಾಮ ವರ್ತಮಾನದ ದುರಂತ
ಪರಿಹರಿಸಲು ತಾನು ಬುಡಮೇಲು ಕೃತ್ಯಕ್ಕೆ ತೊಡಗುವುದೋ ಎಂದು ಯೋಚಿಸುತ್ತಲೇ ಹಾಗೆ ನಿದ್ರೆ ಹೋಗಿದ್ದ.
ಹಾಲೀ ಪ್ರಧಾನಿ ಸರ್ವಾಧಿಕಾರಿಣಿ ಥರ ಮಾಡಿಕೊಂಡಿರುವುದು, ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳ
ಮೂಲಕ ಕಡ್ಡಿ ಮುರಿದಂತೆ
ದೇಶವನ್ನು ಆಳುತ್ತಿರುವುದು, ಆಕೆಯ ಮುದ್ದು ಮಗ ಸಂಜಯಗಾಂಧಿ ಬಗ್ಗೆ ಒಂದು ನವರಸಭರಿತ ಕಾದಂಬರಿ
ಬರೆಯಬೇಕು. ಅದು ಮೂರು ಮೊಳ ಗಡ್ಡಾ; ಒಂದು ಮಳ ಮೀಸೆಯೊಡನೆ ಹುಟ್ಟಬೇಕು. ಹುಟ್ಟುತ್ತಲೆ ಭಾರತವನ್ನು
ಆಮೂಲಾಗ್ರ ಬದಲಾವಣೆ ಮಾಡಬೇಕೆಂದುಕೊಂಡು ಎರಡೂ ಕೈಯೊಳಗೆ ಎರಡೂ ನಮೂನೆಯ ಬಂದೂಕುಗಳನ್ನು
ಹಿಡಿದುಕೊಂಡು; ಬಾಯಿಯಿಂದ ಇಂಡಿಯನ್ ಪೀನಲ್ ಕೋಡಿನ ಎಲ್ಲಾ ನಮೂನೆಯ ಕಲಮುಗಳನ್ನು ಪಟಪಟಾಂತ
ಉಚ್ಚರಿಸುತ್ತ ಗಾಳಿಯಲ್ಲಿ
ಗಾಳಿಗಿಂತ ವೇಗವಾಗಿ ಅಡ್ಡಡಿ ಇಡೀ ಜಂಬೂದ್ವೀಪವನ್ನು ಗಡಗಡ ಅಂತ ನಡುಗಿಸಿಬಿಡಬೇಕು... ಅದರ
ವಿರುದ್ಧ ಹೋರಾಡುವ
ಹೀರೋ ನಾನಾಗಬೇಕು... ಇದನ್ನು ಕುರಿತು ಕಾದಂಬರಿ ಬರೆಯಬೇಕೋ? ನಾಟಕ ಬರೆಯಬೇಕೋ? ಕ್ರಾಂತಿಯನ್ನೇ
ಉಸಿರು ಮಾಡಿಕೊಂಡಿರುವ ನನಾಗೆ ಒಂದು
ವಾಕ್ಯ ಬರೆಯಲು ಬರುತ್ತಿಲ್ಲವಲ್ಲ... ಏನು ಮಾಡುವುದು.
ಯೋಚಿಸುದ್ದಿಂತೆ ಭಯಾನಕ ಕೂಸೊಂದು ತಾಯಿಯ ಕಿಬ್ಬೊಟ್ಟೆ ಸೀಳಿಕೊಂಡು ಹೊರಬರುವುದು... ಅದರ
ಉಗುರುಗಳು ಮಾರಕಾಯುಧಗಳು. "ಎಲೆ ನನ್ ಮಗ್ನೆ ನನ್ ವಿರುದ್ಧಾನೇ ಕಿರಾಂತಿ ಮಾಡ್ತೀಯಾ ಈಗ ನಿನ್ನ
ಹುಟ್ಲಿಲ್ಲ ಅನ್ನಿಸಿಬಿಡ್ತೀನಿ" ಎನ್ನುತ್ತ ಅದು ತನ್ನ ಕಡೆಗೇ ಅಂಬೆಗಾಲಿಟ್ಟು ಬರುತ್ತಿರುವುದು.
ಇನ್ನೊಂದು ಕ್ಷಣದಲ್ಲಿ ಆ ಕೂಸು ತನ್ನ ಕಥೆಯನ್ನೇ ಮುಗಿಸಿ ಬಿಡಲಿದೆ. ಚಿಟಾರನೆ ಚೀರಬೇಕು.. ಅಕ್ಕ
ಮತ್ತು ಅಕ್ಕನ ಮಗಳನ್ನು ಸಹಾಯಕ್ಕೆ ಕರೆಯಬೇಕು..
ಅಷ್ಟರಲ್ಲಿ ಬಾಗಿಲು ತಟ್ಟುತ್ತಿರುವ ಸದ್ದು. ಟಕ್... ಟಕ್... ಅಂತ. ಬಾಗಿಲಾಚೆ ಎಂಥದೋ ಪಿಸಿಪಿಸಿ
ಮಾತುಗಳು; ಕೂಸು ತನ್ನೊಂದಿಗೆ ಯಾರನ್ನೋ ಕರೆದುಕೊಂಡು
ಬಂದಿರುವಂತಿದೆಯಲ್ಲ! ಅಕಸ್ಮಾತ್ ತನ್ನಕ್ಕ ಬಾಗಿಲು ತೆಗೆದುಬಿಟ್ಟರೆ!?...
ಅಷ್ಟರಲ್ಲಿ ರುಕ್ಕಮ್ಮ ನಡೆದಂತೆ... ಸರಕ್ ಪರಕ್ ಅಂತ ಬಾಗಿಲು ತೆರೆದಂತೆ...ಬಾಗಿಲಾಚೆ
ಇರುವವರನ್ನು ನೋಡಿ ಅಕ್ಕ ಕಂಗಾಲಾದಂತೆ ಆಕೆಯ ದ್ವನಿ ಗಡಗಡ ನಡುಗುತ್ತಿರುವಂತೆ..
"ಏನ್ರಿ ಯಾರು ಬೇಕಿತ್ರೀ?"
ನಿಮ್ಮನೆಗೆ ಬೆಂಗ್ಳೂರಿಂದ ಯಾರೋ ಬಂದಿದಾರಂತಲ್ಲ?"
"ನನ್ ಸದ್ಯ ತಮ್ಮನೆ! ರಘುರಾಮ ಅಂತ.. ಬೆಂಗ್ಳೂರಲ್ಲಿ ದೊಡ್ ಕೆಲಸದಲ್ಲಿದ್ದಾನೆ!"
"ಹ್ಹಾಂ! ಹ್ಹಾಂ! ಅವ್ನೆ ಅವ್ನೆ ಬೇಕು... ಎಲ್ಲಿ ಅವನು?" ಎಂದು ಕೇಳುತ್ತ ಯಾರೋ ಧಡ್ ಭಡ್ ಅಂತ
ಒಳಗೆ ಬಂದಂತೆ.. ರಘುರಾಮ ಗೋಡೆಗೆ ಮುಖ ಮಾಡಿ ಮೈತುಂಬ ದುಪ್ಪಟ ಹೊದ್ದು; ಮೊಣಕಾಲುಗಳನ್ನು
ಗದ್ದಕ್ಕೆ ಬಡಿಸಿಕೊಂಡು ತಾನು ಗಾಡ ನಿದ್ರೆಯಲ್ಲಿರುವಂತೆ ನಟಿಸತೊಡಗಿದ. "ಇಲ್ಲೆ..
ಮಲೊಕ್ಕೊಂಡಿದ್ದಾನೆ.. ಪಾಪ.. ಆಯಾಸ!" ಅವರನ್ನು ಅಲ್ಲಿಂದ ತೊಲಗಿಸಲು ಪ್ರಯತ್ನಿಸುತ್ತಿರುವ ಅಕ್ಕ.
"ಕೂಡ್ಲೆ ಎಬ್ಬಿಸ್ರಿ... ಹೊತ್ತಲ್ಲದ ಹೊತ್ನಲ್ಲಿ ಮಲಗಿದರೆ ದೇಶ ಉದ್ಧಾರಾಗೊದಾದ್ರು ಹೇಗೆ?"
ಅಬ್ಬಾ! ಇವರಿಗೆ ಎಷ್ಟೊಂದಿದೆಯಲ್ಲ! ದೇಶದ ಬಗ್ಗೆ ಕಾಳಜಿ! ಅಕ್ಕ ಬಂದಳು. ಕೈಯಿಂದ
ಮಿಸುಕಾಡಿಸಿದಳು.
"ತಮ್ಮಾ ರಘು ಎದ್ದೇಳೋ.. ನಿನ್ನ ಹುಡುಕ್ಕೊಂಡು.. " ರಘು ಪ್ರತ್ಯುತ್ತರವಾಗಿ ಗೊರಕೆ ಬಾರಿಸ
ತೊಡಗಿದ. ಕ್ರಾಂತಿಕಾರಿಗಳಾದವರಿಗೆ
ಗೊರಕೆಯ ಹಲವು ಸ್ವರೂಪಗಳು ಗೊತ್ತಿರಬೇಕು..
"ಏನೋ ಸ್ವಾಮಿ.. ಎಷ್ಟು ಎಬ್ಬಿಸಿದ್ರೂ ಏಳ್ತಿಲ್ಲ.. ತುಂಬ ನಿದ್ದೆ ಬಂದಂತಿದೆ" ತನ್ನ ಪ್ರಯತ್ನ
ವಿಫಲವಾದುದರ ಬಗ್ಗೆ ಅಕ್ಕ. ಬಂದಿದ್ದವರು, ಓಹ್ ಹಾಗೋ!" ಎಂದರು ‘ಯಾಕೆ ಎದ್ದೇಳಲ್ಲ ನೋಡೇ
ಬಿಡ್ತೀವಿ’ ಎಂದರು. ಒಬ್ಬ ಕೈಲಿದ್ದ ಕೋಲಿನಿಂದ ತಿವಿದ ಇನ್ನೊಬ್ಬ ರಜಸ್ವಲೆಯಾಗಿ ಬಿಸಿಲಿಗೆ ತಲೆ
ಒಣಗಿಸಿಕೊಳ್ಳುತ್ತ ಕೂತಿದ್ದ ಪಾಂಚಾಲಿಯ ಭವತ್ ಕೇಶಪಾಶ ಪ್ರಪಂಚಕ್ಕೆ ದುಶ್ಶಾಸನ ಕೈಹಚ್ಚಿದಂತೆ
ಮೇಡಿನ್ ಸೋಲಾಪೂರ್ ಬೆಡ್ಶೀಟಿಗೆ ಕೈಹಚ್ಚಿ ಎಳೆದು ಮೂಲೆಗೆಸೆದು ಮಲಗಿದ್ದ ವ್ಯಕ್ತಿಯನ್ನು
ಅನಾವರಣಗೊಳಿಸಿಬಿಟ್ಟ.
ಅನಂತರವೂ ಮಲಗಿದ್ದ ರಘು ಇನ್ನೊಮ್ಮೆ ಝಾಡಿಸಿ ತಿವಿದ ಮೇಲೆಯೇ ಹ್ಹಾಂ... ಹ್ಹೂಂ... ಅಂತ ಮಗ್ಗುಲು
ಬದಲಾಯಿಸಿ; ಕಣ್ಣುಗಲನ್ನು ಉಜ್ಜಿಕೊಂದು ಒಮ್ಮೆ ಗಟ್ಟಿಯಾಗಿ ಆಕಳಿಸಿ ತೆರೆದು ನೋಡುತ್ತಾನೆ
ಎದುರಿಗೆ ಇಬ್ಬರು ಪೋಲಿಸರು ಆಕಾಶಕ್ಕೂ ಭೂಮಿಗೂ ಏಕಾಗಿ ನಿಂತಿರುವಂತೆ ಗೋಚರಿಸಿದರು.
ಅಂದುಕೊಂಡಿದ್ದಂತೆ ಬಂದೇ ಬಿಟ್ಟಿದ್ದಾರವರು. ಸರಕಾರಿ ವಿರೋಧಿ ಚಟುವಟಿಕೆಗಳಿಗಾಗಿ ಬಂಧಿಸಲು
ಸಂಸಿದ್ಧರಾಗಿ.. ತಮ್ಮ ಗುಂಪಿನ ಭೂಗತ
ಚಟುವಟಿಕೆಗಳನ್ನು ಹೇಗೋ ಪತ್ತೆ ಹಚ್ಚಿದ್ದಾರೆ. ಅಕ್ಬರ್ಗೆ ಈಗಾಗಲೆ ಹೈದರಾಬಾದ್ ಗೋಲಿ ರುಚಿ
ತೋರಿಸಿರಬಹುದು. ತನ್ನನ್ನು ಏರೋಪ್ಲೇನ್ ಹತ್ತಿಸಿ ಬಹುದಿನದ ವಿಮಾನ ಪ್ರಯಾಣದ ಕನಸನ್ನು
ಈಡೇರಿಸಲಿಕ್ಕಾಗಿ ಬಂದಿದ್ದಾರೆ. ಎಲಾ ಭಟ್ಟ ಅಂತೂ ಸುಳಿವು ನೀಡಿ ಬಿಟ್ಟಿರುವೆಯಾ.. ಕಟ ಕಟ ಹಲ್ಲು
ಕಡಿದ.
ಧೈರ್ಯಗುಂದಿದರೆ ಕ್ರಾಂತಿಕಾರಿಗಳ ಬೇಳೆ ಬೇಯೋದಿಲ್ಲ. ಯಾವ ಕಾರಣಕ್ಕೂ ಒಳಗಿನ ಅಳುಕನ್ನು
ತೋರಗೊಡಬಾರದು.
"ಓಹ್.. ಹಲೋ ಕಾನ್ಸ್ಟೇಬಲ್ಸ್.. ವಾಟ್ ಡು ಯು ವಾಂಟ್?" ಎಂದು ಭಲೇ ಗತ್ತಿನಿಂದ ಮಾತಾಡುತ್ತ
ಎದ್ದು ಕುಳಿತ. ತಮ್ಮನ ಠಾಕುಠೀಕು ಉತ್ತರದಿಂದ ರುಕ್ಕಮ್ಮ ಹೆಮ್ಮೆಪಟ್ಟರು. ಆದರೆ ಆ ಫೀಸಿಗಳಿಗೆ
ಇಂಗ್ಲೀಷ್ ಅರ್ಥವಾದರೆ ತಾನೆ? "ನಡೆಯಯ್ಯಾ ಸ್ಟೇಷನ್ಗೆ!" ಎಂದೊಮ್ಮೆಗೆ ರೋಫ್ ಹಾಕಿಬಿಡುವುದೇ?
ರಘು ನಿಜಕ್ಕೂ ದಿಗ್ಭ್ರಾಂತನಾದನು. ತಾನು ಕನಸಿನಲ್ಲಿ ಮತ್ತು ಮನಸಿನಲ್ಲಿ ಸರಕಾರದ ವಿರುದ್ಧ
ಯೋಚಿಸಿದ್ದು ಈ ಅರಕ್ಷಕ ಮಹಾಶಯರಿಗೆ ಹೇಗೋ
ಗೊತ್ತಾಗಿರುವುದೆಂದುಕೊಂಡ. ಸರ್ವಾಧಿಕಾರಿಣಿಯ ಬೇಹುಗಾರಿಕೆ ಬಗ್ಗೆ ಅಚ್ಚರಿಪಟ್ಟ. "ಯಾಕ್ರೀ? ವೈ?
ಎಂದು ವಿಹ್ವಲಗೊಂಡು ಕರ್ಟನ್ ಮರೆಯಲ್ಲಿದ್ದ ತನ್ನ ವುಡ್ಬೀ ಕಡೆ ನೋಡಿದ.
"ವೈಯೂ ಇಲ್ಲ ಪೈಯೂ ಇಲ್ಲ. ಸ್ಟೇಷನ್ಗೆ ಬನ್ನಿ. ಎಲ್ಲಾ ತಿಳೀತದೆ!" ಎಂದು ಪೀಸಿ ಹಿಂದಿನ ದಿನ
ಹೊಡೆದುಕೊಂಡಿದ್ದ ಮೀಸೆ ತೀಡಿದ.
"ಯಾಕೆ ಬರ್ಬೇಕ್ರೀ? ಆಮೇಲೆ ಬರ್ತೀನಿ ಹೋಗಿ ನಾನು ನಿದ್ದೆ ಮಾಡಬೇಕಾಗಿದೆ!" ಇವರೇನು ಸಿಓಡಿ
ಕಡೆಯವರಾ? ಸಿಬಿಐ ಕಡೆಯವರಾ? ಎಂದು
ಅನುಮಾನದಿಂದ ಅವರಕಡೆ ನೋಡುತ್ತಾ ನಿರಾಕರಿಸಿದ.
"ಬರ್ಬೇಕಂದ್ರೆ ಬರ್ಬೇಕಷ್ಟೆ" ಎಂದು ಇನ್ನೊಬ್ಬ ಪೀಸಿ ಕಳೆದ ವಾರ ಕಟ್ಟಿಸಿಕೊಂಡಿದ್ದ ಪಲ್ಗಳ
ಸೆಟ್ಟಮ್ ಅನ್ನು ಜಿಹ್ವಾ ಸಂಚಲನದಿಂದ ಸರಿಪಡಿಸಿಕೊಂಡ.
ರುಕ್ಕಮ್ಮ ಕಣ್ಣಲ್ಲಿ ಬಿಸಿಲೇರಿ ವಾಟರನ್ನೇ ತಂದುಕೊಂಡಳು. "ಅಯ್ಯೋ ದೇವರೆ ಕೈಗೆ ಬಂದ ತುತ್ತನ್ನು
ಬಾಯಿಗೆ ಬರುವ ಮೊದಲೇ ಕಿತ್ತುಕೊಳ್ಳುತ್ತಿರುವಿಯಲ್ಲ? ಇದು ನ್ಯಾಯವೇ?"
ಕರ್ಟನ್ನಿನ ಪಾರದರ್ಶಕ ಮರೆಯಲ್ಲಿ ಅನಸೂಯಾ ಸೆರಗನ್ನು ಬಾಯಿತುಂಬ ಇಟ್ಟುಕೊಂಡು ಬಿಕ್ಕಿ ಬಿಕ್ಕಿ
ಉದ್ವಿಗ್ನಗೊಂಡಳು. ಅದು ಹೇಗೋ ರಘುಗೆ ತಿಳಿಯಿತು. ಕಣ್ಣರಿಯದಿರ್ದೊಡೆ ಕರುಳರಿಯದೇನು!
ಬರೋದಿಲ್ಲಂದ್ರೇನು ಮಾಡ್ತೀರಯ್ಯಾ?" ಎಂದು ನುಡಿಯನ್ನು ಝಾಸಿಬಿಟ್ಟ. ಅರೆ! ಈ ಹುಲುನರ ಹೀಗೆ
ನುಡಿಯುತ್ತಿರುವನಲ್ಲ! ತಾವು ಡ್ರೆಸ್ ಮೇಲಿದ್ದರೂ ಅವರು ಪರಸ್ಪರ ನೋಡಿಕೊಂಡರು.
"ಏನಪ್ಪಾ? ನಿದ್ದೆ ಮಬ್ಬಿನಲ್ಲಿ ಬಾಯಿಗ್ ಬಂದಂಗ ಮಾತಾಡ್ತೀಯಲ್ಲಾ ನಾವ್ಯಾರು ಅಂದ್ಕೊಡೀಯಾ?" ಎಂದು
ಮೀಸೆ ಪಲುಕಿದ.
"ನೀವು ಪೋಲಿಸರಂತ ಗೊತ್ತಪ್ಪಾ ಹೆದರೋಕೆ ನಾನೇನು ಹಳ್ಳಿ ಗುಗ್ಗು ಅಲ್ಲ" ಉಗುಳಬಾರದು ನುಂಗಬಾರದು
ಸಂಕಟದ ಪರಿಯಾ! ಗತ್ತು ಹಾಕಿದ. ಇದು
ಹೆಂಡತಿಯಾಗುವವಳ ಎದುರುಗಡೆ ತನ್ನ ಪ್ರೆಸ್ಟೀಜಿನ ಪ್ರಶ್ನೆ
"ನೀನು ಹಳ್ಳಿ ಗುಗ್ಗು ಅಲ್ಲ ಅಂತ ನಮ್ಗೂ ಗೊತ್ತು. ಒಳ್ಳೆ ಮಾತಿಂದ ಹೊರಡು" ಎಂದ ಕ್ಲೋಸ್ಅಪ್ನವ.
"ಬರೋದಿಲ್ಲ ಹೋಗ್ರಿ!"
"ಬರೋದಿಲ್ಲ ಅಂದ್ರೆ ಹೊತ್ಕೊಂಡು ಹೋಗ್ತೀವಿ.. ಏನಂದ್ಕಂಡೀಯಾ?" ಡೈಯವನೂ ಮೀಸೆ ತಿರುವಿದ.
ಒಂದು ಕ್ಷಣ ರಘು ಹೌಹಾರಿಬಿಟ್ಟ. ಪಿಪೀಲಿಕದಾಲಿಗಿರದೇ ಗೋಷ್ಪದದ ಕೀಲಾಲ ವಿಲಯಾಂಬುವಿನವೊಲು ಎಂದು
ತೊರವೆ
ರಾಮಾಯನದಲ್ಲಿ ಹೇಳಿರುವಂತೆ ಇರುವೆಯಂಥ ಅವನಿಗೆ ಎಮ್ಮೆಗಂಜಳವೇ ಜಲಪ್ರಳಯವೆಂಬಂತೆ ಕಂಡಿತು.
ರುಕ್ಕಮ್ಮಗಂತೂ ಕರುಳು ಕಿತ್ತು ಬಾಯಿಗೆ ಬಂದುಬಿಟ್ಟಿತು. ಮಣ್ಣಿನ ಗೋಡೆ ತೊಳೆಯೋಕ್ಯಾಕೆ
ಪ್ರಯತ್ನಿಸುತ್ತಿರುವ ನೀ ತಮ್ಮನು. "ರಘು ನಾಕು ಹೆಜ್ಜೆ ಹೋಗಿ ಬಂದುಬಿಡು ತಂದೆಯೇ. ಕನ್ನಡಿಗಾಗಿ
ಮೂಗುಕಳಕೊಳ್ಳೋದ್ಯಾಕಪ್ಪ" ಎಂದು ಗಗ್ಗರಿಸಿ ಕನಿಷ್ಟ ಬಿಲ್ಲೆಗಳ ಕಡೆ ತಿರುಗಿ "ನನ್ತಮ್ಮ
ಬಂಗಾರದಂಥವ್ನಪ್ಪಾ.. ಯಾರ ಗೊಡವೆಗೆ ಹೋಗೋನಲ್ಲ.. ನಾಕು ಮಾತಾಡಿ ಕಳಿಸಿಕೊಡ್ರಿ" ಎಂದು ಕೈ ಮುಗಿದು
ಕೇಳಿಕೊಂಡಳು.
ಅವರು ಉತ್ತರ ಕೊಡುವ ಮೊದಲೆ ರಘು "ಇವರೇನು ಹುಲಿಯಲ್ಲ ಸಿಂಹ ಅಲ್ಲ.. ನೀನ್ಯಾಕೆ ಹೆದತಿ..
ಸುಮ್ನಿರಕ್ಕ.. ಸೊಳ್ಳೆಗೆ ಹೆದರಿ ಯಾರಾದ್ರು ಇರೋ ಮನಿ
ಬಿಡ್ತಾರೇನು?" ಎಂದು ಸಡನ್ನ ಎದ್ದು ದೋಸೆ ತಿನ್ನಲಿಕ್ಕೆ ಹೋಗುವಾಗ ಯಾವ ರೀತಿ ಡ್ರೆಸ್
ಮಾಡಿಕೊಂಡಿದ್ದನೋ ಹಾಗೆ ಡ್ರೆಸ್ ಮಾಡಿಕೊಂಡನು.
ತಮ್ಮನ್ನು ಸೊಳ್ಳೆಗೆ ಹೋಲಿಸಿದ ಇವನು ನಿಜವಾಗಿಯೂ ಕ್ರಾಂತಿಕಾರಿಯೇ ಇರಬೇಕೆಂದು ಕನಿಷ್ಟ
ಬಿಲ್ಲೆಗಳು ಸಂದೇಹಿಸಿ-ಪರಸ್ಪರ ಮುಖ ನೋಡಿಕೊಂಡು ಬದ್ಧ ಭ್ರುಕುಟಿಯಾದರು. ರಾಯರ ಕುದುರೆಯಿಂದ ಕಾಲು
ತುಳಿಸಿಕೊಂಡಂಥ ಅನುಭವಕ್ಕೆ ಅವರು ಪಕ್ಕಾಗುತ್ತಿರಲು.. ...ಇತ್ತ ಗುದ್ದಿದವನೂ ಅಲ್ಲ ಅತ್ತ
ಗುದ್ದಿಸಿಕೊಡದವನೂ ಅಲ್ಲದ ರಘುರಾಮ ನೀರಡಿಸಿ
ಪಾಕಶಾಲೆಯಂ ಪೊಕ್ಕು ಅರ್ಥನಾಗಿ ಪಂಕಜನೇತ್ರೆಯಂ ನೋಡಲು ಆಕೆಯು ಬರಸೆಳೆದು ಬಿಗಿದಪ್ಪಿ ತನ್ನ ದೇಹದ
ಸಮಸ್ತ ಶಕ್ತಿಯನ್ನು ಅವನ ದೇಹದೊಳಗೆ ತುಂಬಿ, ಕಿವಿಯೊಳಗೆ ಬಾಯಿ ಇಟ್ಟು ‘ಧೈರ್ಯಂ ಸರ್ವತ್ರ ಸಾಧನಂ’
ಎಂದು ಹೇಳಿ ಬೀಳ್ಕೊಡಲು.. ಅವನು ಹೊಚ್ಚ ಹೊಸ ಹುರುಪಿನಿಂದ ಪೋಲಿಸರ ಹಿಂದೆ ನಡೆಯುತ್ತ ಬಾಗಿಲು..
ಅಟುವಾಗ ಅಕ್ಕ ರುಕ್ಕಮ್ಮ, ‘ಜೋಪಾನ ತಮ್ಮಾ, ಸಿಟ್ಟಿನ ಕೈಗೆ ಬುದ್ಧಿ ಕೊಡಬ್ಯಾಡ..
" ನೀನು ಬರೊವರೆಗೆ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಕೂಡ್ರುವೆನು’ ಎಂದು ಹೇಳಿದ್ದು
ಕೇಳಿಸಿಕೊಂಡನು.
ಎರಡು ನಮೂನೆಯ ಆಭರಣಗಳಂಥ ಪೋಲಿಸರ ನಡುವೆ ಸೀಗೆಯೊಳಗಿನ ಬಾಳೆಯಂತೆ ಅವನು ನಡೆಯುತ್ತಿದ್ದುದನ್ನು.
ಓಣಿಯ ಅಬಾಲ ವೃದ್ಧರೆಲ್ಲರು ‘ಅಯ್ಯೋ ದೇವರೆ ಎಂಥವರಿಗೆ ಎಂಥ ಕಾಲ ತಂದೆಯಲ್ಲಾ’ ಎಂದು ನೋಡುತ್ತ
ಮಮ್ಮಲನೆ ಮರುಗಿದರು.
ಕಿಟಕಿಯ ಜಾಲರಿಯಲ್ಲಿ ನೋಡುತ್ತಿದ್ದ ಅಲುಮೆಲಮ್ಮನೂ ‘ಅಯ್ಯೋ ಪಾಪ ಇದೇನಿದು! ಎಂದು ದುಃಖಿತಳಾಗಿ
ಅವನ ಕ್ಷೇಮ ಕೋರಲು ಕ್ಷೋಣಿಯಸ್ಯ ರಥೋಥಾಂಗಯುಗಳು ಚಂದ್ರಾರ್ಕ ಬಿಂಬದ್ವಯಂ ಎಂದು ಪರಮಾತ್ಮನನ್ನು
ಪ್ರಾರ್ಥಿಸಿದಳು.
ರಾಗಕ್ಕೆ ಮೂಡಲು, ರೋಗಕ್ಕೆ ಪದುವಲು, ಭೋಗಕ್ಕೆ ತೆಂಕಲು, ಯೋಗಕ್ಕೆ ಬಡಗಲು ಎಂಬಂತೆ ಸರ್ವ
ಪಾಪಗಳಿಗೆ ಮುಕ್ತಿ ಧಾಮದಂತೆ ಗ್ರಾಮದ ಹೃದಯ ಭಾಗದಲ್ಲಿ ಎಂದರೆ ತಮ್ಮ ಮನೆಗೆ ಈಶಾನ್ಯ ಭಾಗದಲ್ಲಿ;
ಎಂದರೆ ರಕ್ತಪಿಪಾಸಿಣಿಯಾದ ದುರುಗಮ್ಮನ ಗುಡಿ ಪಕ್ಕ ಎಂದರೆ ನಕ್ಷತ್ರಾಕಾರದ ವೇದಿಕೆಯ ಮೇಲೆ ಕಳೆದ
ನಲವತ್ತು ವರ್ಷಗಳಿಂದ ಶೋಭಾಯಮಾನವಾಗಿ ಕಂಗೊಳಿಸುತ್ತಿರುವ ಪೋಲೀಸು ಸ್ಟೇಷನ್ನು ಎಂಬ ನಾಮಾಂಕಿತ
ಕಟ್ಟಡವನ್ನು ತಾನು ನೋಡಿದ್ದು ಚಿಕ್ಕಂದಿನಲ್ಲಿ.
ರಘುರಾಮನ ಬಾಲ್ಯವನ್ನು ಮುದಗೊಳಿಸಿದ್ದಂಥ ಪರಮ ಪವಿತ್ರ ಕಟ್ಟಡ ಅದು. ಇಂದ್ರನ ವಜ್ರಾಯುಧಕ್ಕೂ
ಅದನ್ನು ಜುಮ್ಮೆನಿಸುವುದು ಸಾಧ್ಯವಿರಲಿಲ್ಲ. ತನ್ನ ಕಾನೂನು ಬಾಹಿರ ಪ್ರಣಯದಾಟಗಳನ್ನು ಅದೆಲ್ಲಿ
ಜಗಜ್ಜಾಹಿರು ಮಾಡಿಬಿಡುವನೋ ಎಂದು ಸ್ತ್ರೀವ್ಯಾಮೋಹಿಯೂ; ಸಕಲ ಗುಪ್ತ ರೋಗಗಳ ಆಶ್ರಯದಾತನೂ ಆಗಿದ್ದ
ಅಂದಿನ ಎಸೈ ಬಿಳಿಗಿರಿರಂಗಯ್ಯಸ್ವಾಮಿ ಬಾಲಕನಿದ್ದ ತನ್ನ ಬೆನ್ನು ದಡವಿ ಬಾಯೊಳಗೆ ಸೊಂಟಿ
ಪೆಪ್ಪರುಮೆಂಟಿಟ್ಟು ನೀನು ಮುಂದೆ ದೊಡ್ಡ ಮನುಷ್ಯನಾಗುವಿ ಎಂದು ಆಶೀರ್ವಾದ ಮಾಡಿದ್ದ.
ಆ ಒಂದಾನೊಂದು ನೆನಪುಗಳನ್ನು ಮೆದುರಂತರಾಳದಿಂದ ಕಿತ್ತು ಮೆಲುಕು ಹಾಕುತ್ತ ತನ್ನ ಕುರಿತು
ರಸ್ತೆಯಲ್ಲಿ ಇಕ್ಕೆಲದಲ್ಲಿ ಸತ್ಪ್ರಜೆಗಳು ತಲಾ ಒಂದೊಂದು ಮಾತಾಡುತ್ತಿರುವುದನ್ನು ಲೆಕ್ಕಿಸದೆ
ವೀರಪಾಂಡ್ಯ ಕಟ್ಟಬೊಮ್ಮನನಂತೆ ಧೀರೋದಾತ್ತವಾಗಿ ನಡೆಯುತ್ತ ಠಾಣೆಗೆ ಹತ್ತಿರ ಬಂದೇ ಬಿಟ್ಟ.
ಕಂದ, ಕೊಂದ, ತಂದ ಎಂಬೀ ಮೂರು ಲಿಂಗಾಕಾರದ ಶಬ್ದಗಳೊಳಗೆ ಅಡಕವಾಗಿರುವ ರಾಮಾಯಣದಂತೆ ವೇದಿಕೆ ಮೇಲೆ
ಘನೀಭೂತಗೊಂಡು ಉಲ್ಲಾಸಮಯತೆಯಿಂದ ನಿಂತಿದ್ದ ಠಾಣೆ ಕಡೆ ನೋಡಿ ನಿಟ್ಟುಸಿರುಬಿಟ್ಟ.
ಒಂದೊಂದು ಮೆಟ್ಟಲಿಗೂ ಒಂದೊಂದು ಕಥೆ ಇರುವ ಭೋಜರಾಜನ ಸ್ವರ್ಣ ಸಿಂಹಾಸನದಂಥ ಠಾಣೆಯ ಕಡೆ ಏರೀ ಏರೀ
ತಲುಪಿ ಒಳಗೆ ಪ್ರವೇಶಿಸುವ ಮುನ್ನ ಹಿಂತಿರುಗಿ ನೋಡಿದ ಅವನ ಕಣ್ಣಿಗೆ ದುರುಗಮ್ಮನ ಬೇವಿನ ಮರದ
ಕೊಂಬೆ ರೆಂಬೆಗಳ ಮೇಲೆಲ್ಲ ಕದನ ಕುತೋಹಲಿಗಳು ಗೋಚರಿಸಿದರು.
ತಾನು ಬೇತಾಳ ಪಂಚವಿಂಶತಿ ಕಥೆಗಳ ಹಿರಣ್ಯಾಕ್ಷನಂಥ ಎಸೈ ಇರಬಹುದೆಂದು ಊಹಿಸಿದ್ದಕ್ಕೆ ವಿರುದ್ಧವಾಗಿ
ನರಪೇತಲನೂ; ಪ್ರಾಚೀನ ಆಸ್ತಮಾ ರೋಗಿಯೂ ನೀಳಕಾಯನೂ ಆದಂಥ ವ್ಯಕ್ತಿಯೊಬ್ಬ ಕೊಕ್.... ಒಕ್ ಕೆಮ್ಮು
ಬಂದು ಕಫವನ್ನು ಅಗ್ನಿಶಾಮಕ ಬಕೆಟ್ಟಿಗೆ ಉಗುಳುತ್ತ ಎಸೈ ಕುರ್ಚಿಮೆಲೆ ವಿರಾಜಮಾನನಾಗಿದ್ದ.
"ಹಲೋ ಸಾರ್" ಎಂದು ಕೇಳಿ ಬಂದ ದ್ವನಿ ಕಡೆ ತಲೆಯನ್ನು ಕೂಡಲೆ ಎತ್ತಿದ ತಪ್ಪಿಗೆ ಕೆಮ್ಮು ಒತ್ತರಿಸಿ
ಬಂದುಬಿಟ್ಟು ಕೊಕ್ ಕೊಕ್ ಕೆಮ್ಮಿದ. ಅವನನ್ನು ನೋಡುತ್ತಲೆ ರಘುಗೆ ತೆಲುಗು ಸಿನೆಮಾ ನಟ
ರಮಣಾರೆಡ್ಡಿ ನೆನಪಾದ. ಗ್ರಾಮಸ್ತರು ಪ್ರೀತಿಯಿಂದ ಟೈಗರ್, ಜೂಡೋ ಮಾಸ್ಟರ್, ಕರಾಟೆ ಕಲಿ ಎಂದು
ಬಿರುದುಗಳನ್ನು
ಕೊಟ್ಟಿದ್ದರು. ಟೈಗರ್ ಬಂದ ಮೇಲೆ ಕಳ್ಳತನಗಳಾಗಿಲ್ಲ. ಜೂಡೋಮಾಸ್ಟರ್ ಬಂದ ಮೇಲೆ ಗ್ರಾಮಸ್ಥರು
ಪರನಾರಿ ಸೋದರರಾಗಿರುವರು.
ಕರಾಟೆ ಕಲಿತು ಬಂದ ಮೇಲೆ ಸಾಲ ಕೊಡುವವರು ತಗೊಳ್ಳುವವರು ಸತ್ಯಹರಿಶ್ಚಂದ್ರನ
ನೆಂಟರಿಷ್ಟರಾಗಿರುವರು. ರಘು ಆಶ್ಚರ್ಯದಿಂದ ನೋಡಿದ್ದ. ಎಸೈ ಎಂಬ ಸ್ಕೆಲಿಟನ್ನನ್ನು. ಸ್ಕೆಲಿಟನ್ನು
ಪ್ರಶ್ನಾತ್ಮಕವಾಗಿ ನೋಡುತ್ತಿರುವಾಗಲೇ ಎದುರುಗಿದ್ದ ಲಟಗೂ ಪಟಗೂ ಕುರ್ಚಿಮೇಲೆ
ಕೂತುಕೊಂಡ. ಇನ್ವೆಸ್ಟಿಗೇಷನ್ನೋ; ಇಂಟರಾಗೇಷನ್ನೋ ಇನ್ನು ಶುರುಮಾಡುತ್ತಾನೆ. ತಾನು ಹುತಾತ್ಮನಾಗಿ
ಇತಿಹಾಸದ ಪುಟ ಸೇರುತ್ತೇನೆ ಎಂದು ಕಲ್ಪಿಸಿಕೊಂಡ ತನ್ನ ಕಲ್ಪನೆಗೆ ತಾನೆ ನಕ್ಕ.
"ವಾಟ್ ಡು ಯು ವಾಂಟ್ ಫ್ರಂ ಮೀ" ರಘು ಬಬಲ್ಗಮ್ ಬಾಯಲ್ಲಿ ನಮಲುತ್ತ ಹೇಳಿದ.
"ಇಂಗ್ಲಿಷಿನಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಳ್ಳುತ್ತಲೆ ಟೈಗರ್" ಎಲವೋ ತ್ರೀನಾಟ್