ಕಾದಂಬರಿ
ಶಾಮಣ್ಣ (ಅಂತರ್ಜಾಲ ಭಾಗ -೧ , ಕಾದಂಬರಿಯ ಪುಟ ೧ ರಿಂದ ೧೦೦ ರವರೆಗೆ)
ಕುಂ. ವೀರಭದ್ರಪ್ಪ
‘ಪ್ರಥಮಾಶ್ವಾಸಂ’
ಸಹಸ್ರಪರಮಾಂ ದೇವೀ ಶತ ವಂಧ್ಯಾ ದಶವರಾಂ
ಗಾಯತ್ರೀಂ ಸಂಜಪೇನ್ನಿತ್ಯಂ ಯತವಾಕ್ಕಾಯ ಮಾನಸಃ |
ವೇದ ಮಾತೆಯನ್ನು ವರ್ಣಿಸುವ ಶ್ಲೋಕ ಗಚ್ಚಿನ ಮನೆಯ ನವರಂಧ್ರಗಳಿಂದ ಸೋರಿ ಅಷ್ಟದಿಕ್ಕುಗಳಿಗೆ ಪಯಣಿಸತೊಡಗಿದಾಗ
ಕೇರಿಯ ಅನೇಕರಿನ್ನೂ ಮಲಗಿಕೊಂಡಿದ್ದರು. ಅವರಲ್ಲಿ ಅನೇಕರಿಗೆ ಅನ್ನದ ಕನಸು: ಹಲವರಿಗೆ ಬಾಡುಬುರ್ರದ
ಕನಸು. ಸುತ್ತ ನಾಲ್ಕು ಕಡೆಗಿದ್ದ ತಿಪ್ಪೆಗಳಿಗೆ ಅನಿರೀಕ್ಷೀತ ಬೆಟ್ಟಿ ನೀಡಿ ಇನ್ಸೆಪೆಕ್ಷನ್ ನಡೆಸಿ
ಅದೇ ತಾನೆ ಕೋಳಿಗಳು ಆ ವೇದಾಲಾಪನೆ ಕೇಳಿಸಿಕೊಂಡು ಗಚ್ಚಿನ ಮನೆಕಡೆ ಕುತೋಹಲದಿಂದ ನೋಡತೊಡಗಿದವು.
ಆ ಪೋಹಿಷ್ಠೇತಿ ನವರೃಸ್ಯ ಸೂಕ್ತಸ್ಯ ಅಂಬರೀಷ ಸಿಂದೂದ್ವೀಪ ಋಷಿಃ
ಆಪೋ ದೇವಾತ ಎಂದು ಹೇಳಿ ಬಂದ ದ್ವನಿಯನ್ನು ಅದೇತಾನೆ ಶೌಚೋಪಚಾರ ಮುಗಿಸಿಕೊಂಡು ಬಂದು ಸಂತೃಪ್ತ ಸೂಚಕವಾಗಿ
ನಾಲಿಗೆಯನ್ನು ಝಳಪಿಸುತ್ತ ಬಂದ ಅರ್ಜುನ, ಭೀಮ, ರಾಮ ಜರಾಸಂಧವೇ ಮೊದಲಾದ ಶುನಕಾದಿ ಸಜ್ಜನರು ಕೇಳಿಸಿಕೊಂಡು
ರೋಮಾಂಚನಗೊಂಡವು. ಕಾರಣ ಕೆಲ ದಿನಗಳ ಹಿಂದೆ ಆರತಿಯನ್ನು ಚುಡಾಯಿಸುವ ಅಂಬರೀಸನ ನಾಗರಹಾವು ಚಿತ್ರದ
ಭಿತ್ತಿಚಿತ್ರ ನೋಡಿದ್ದವು.
ಋಗ್ವೇದಿಯ ಪ್ರಾತಃ ಸಂಧ್ಯಾವಂದನದ ಸದ್ದು ಕೇಳಿಸಿಕೊಂಡು ಗಂಡ ಹೆಂಡತಿಯನ್ನು; ಹೆಂಡತಿ ಗಂಡನನ್ನೂ;
ಗಂಡ ಹೆಂಡರಿಬ್ಬರು ತಂತಮ್ಮ ಮಕ್ಕಳನ್ನು ಎಬ್ಬಿಸುತ್ತಿದ್ದರು. ಗಚ್ಚಿನ ಮನೆಯಿಂದ ತ್ರಿಕಾಲ ಅಭಾಧಿತವಾಗಿ
ಹೊರಡುತ್ತಿದ್ದ ಮಂತ್ರೊಚಾರಣೆ ಇಡೀ ಕೇರಿಗೆ ಅಲಾರಂ ರೀತಿಯಲ್ಲಿ ಕೆಲಸ ಮಾಡುತ್ತಿತ್ತು.
ಭರ್ಗೋದೇವಸ್ಯ ರುದ್ರಾತ್ಮನೇ... ಎಂಬುದನ್ನು ಕೇಳಿಸಿಕೊಂಡು ಪಂಚವಿಂಶತಿ ಬೇತಾಳಚಕ್ರವರ್ತಿಯಾದ ರುದ್ರನಾಯಕ
ಮೂರನೇ ಬಾರಿಗೆ ಶೌಚಕ್ಕೆ ಹೊರಟಿರುತ್ತಿದ್ದ. ಮಂತ್ರ ತಾಪತ್ರಯಗಳಿತ್ಯಾದಿಗೆಲ್ಲ ತಾನೇ ಚಕ್ರವರ್ತಿ
ಎಂದು ಎದೆಗಿಂತ ಹೊಟ್ಟೆಯನ್ನೇ ಹೆಚ್ಚು ಉಬ್ಬಿಸಿಕೊಂಡು, ಹೊಟ್ಟೆಗಿಂತ ಮೀಸೆಯನ್ನೇ ಅತಿ ಹೆಚ್ಚು ಉಬ್ಬಿಸಿಕೊಂಡು,
ಮೀಸೆಗಿಂತ ಕಣ್ಣುಹುಬ್ಬುಗಳನ್ನೇ ಅತಿ ಹೆಚ್ಚು ಉಬ್ಬಿಸಿಕೊಂಡು; ಕಣ್ಣ್ಣುಹುಬ್ಬುಗಳಿಗಿಂತ ಕಣ್ರೆಪ್ಪೆಗಳನ್ನೇ
ಅತಿ ಹೆಚ್ಚು ಉಬ್ಬಿಸಿಕೊಂಡು; ಕಣ್ರೆಪ್ಪೆಗಳಿಗಿಂತ ಕಣ್ಣುಗುಡ್ಡೆಯನ್ನು ಉಬ್ಬಿಸಿಕೊಂಡು ಮಾರಗಲದ ಬೀದಿಗೆ
ಇಡಿಯಾಗಿ ನಡೆಯುತ್ತಿದ್ದ ಅವನು ರೋಮಾಂಚನಗೊಳ್ಳುವುದೆಂದರೇನು? ಆತನ ಮನೆಯಲ್ಲಿ ಪ್ರಾತಃಸಂದ್ಯಾಂಗ ಅರ್ಘ್ಯ
ಪ್ರಧಾನಗಳೇ ಮೊದಲಾದುವುಗಳಿಗೆ ಬೆಲೆಕೊಡುತ್ತಿದ್ದವರೆಂದರೆ ಮಂತ್ರವಾದಿಯ ಧರ್ಮಪತ್ನಿ ರುಕ್ಮಣಿ ಮತ್ತು
ತಂತ್ರವಾದಿಯ ಮಗಳು ಅನಸೂಯ ಮಾತ್ರ. ಆಚಮನ; ಚಮನ ಮಂತ್ರಗಳು ಪದೇ ಪದೇ ಕಿವಿಗೆ ಬೀಳುವುದರಿಂದ ತಾವು
ಪವಿತ್ರರಾಗುತ್ತಿದೆವು ಎಂದುಕೊಳ್ಳುತ್ತಿದ್ದರು. ಮುಂದೊಂದಿನ ಸನಾತನ ಧರ್ಮ ತಾಂಡವಾಡುತ್ತಿರುವ ಗಚ್ಚಿನ
ಮನೆಗೆ ಸೊಸೆಯಾಗಿ ಪ್ರವೇಶಿಸುವ ಉದ್ದೇಶದಿಂದ ಅನಸೂಯ ಎಂಬ ಕನ್ಯಾಮಣಿ ಎಷ್ಟೋ ಮಂತ್ರಗಳನ್ನು; ಶ್ಲೊಕಗಳನ್ನು
ಬಾಯಿಪಾಠ ಮಾಡಿಬಿಟ್ಟಿದ್ದಳು. ಶ್ರೀ ಪರಮೇಶರ ಪ್ರೀತ್ಯರ್ಥಂ ಎಂಬಂತೆ ಅವುಗಳನ್ನು ತನ್ನ ತನ್ನ ಪ್ರಾಣಪದವಾದಕ
ಗಚ್ಚಿನ ಮನೆಯಲ್ಲಿ ಮಾಣಿಕ್ಯ ದೀಪ್ತಿಯಂತೆ ಹೋಳೆಯುತ್ತಿದ್ದ ಶಾಮಾಶಾಸ್ತ್ರಿ ಬೆಟ್ಟಿಯಾದಾಗಲೆಲ್ಲ ಹೇಳಿ
ದಿಗ್ಬ್ರಮೆಗೊಳಿಸುತ್ತಿದ್ದಳು. ಅವನ್ನು ಕೇಳಿಸಿಕೊಂಡು ವೇದಮಾತೆಯೂ; ಜ್ಞಾನದಾತೆಯೂ; ಸುರಾಸುರ; ಕಿನ್ನರ
ಕಿಂಪುರುಷ; ಋಷಿ ಗಿಷಿಗಳಿಂದ ವಂದಿತೆಯೂ; ಪೂಜಿತೆಯೂ ಆದ ಗಾಯತ್ರಿಯೇ, ರುದ್ರನಾಯಕ ಮತ್ತು ರುಕ್ಮಿಣಿ
ಎಂಬ ನಾಮಾಂಕಿತ ನಿಮ್ನ ಜಾತಿ ದಂಪತಿಯರ ಉದರದಲ್ಲಿ ಅನಸೂಯಾ ಎಂಬಭಿದಾನದಿಂದ ಜನಿಸಿದವಳೆಂದು ಭಾವಿಸಿ
ಶಾಮಾಶಾಸ್ತ್ರಿಯು ತನ್ನ ಸಹಪಾಟಿ ಅನಸೂಯಳ ಬಗ್ಗೆ ಗೌರವ ಪ್ರೀತಿ ತಳೆಯತೊಡಗಿದ್ದರು. ಗರುಡ ಪುರಾಣ,
ಭಗದ್ಗೀತೆ, ಋಗ್ವೇದ; ನಿತ್ಯಕರ್ಮವೇ ಮೊದಲಾದ ಗ್ರಂಥಗಳಲ್ಲಿ ಅನಸೂಯಳಿಂದ ಆಗಮಿಸಿರುತ್ತಿದ್ದ ಪ್ರೇಮಪತ್ರಗಳನ್ನೊ
ಅಡಗಿಸಿಟ್ಟುರುತ್ತಿದ್ದನು. ಓ ಕೇಶವಾಯ ಸ್ವಾಹಾ ಎಂದವನು ನೆಪಮಾತ್ರಕ್ಕೆ ಅನ್ನುತ್ತಿದ್ದನಾದರೂ ಅವನ
ಹೃದಯದ ಸಾವಿರಕೋಣೆಗಳಿಂದ ’ಓ ಅನಸೂಯಾ ಸ್ವಾಹಾ’ ಎಂಬ ದ್ವನಿ ತರಂಗಗಳು ಹೊರಡುತ್ತಿದ್ದವು.
ಅಂಗೈಯಲ್ಲಿ ಅಭಿಮಂತ್ರಿಸಿದ ನೀರನ್ನು ಮೂಸಿ ನೋಡುವ ಕ್ಷಣದಲ್ಲಿ ವೇದಾಂತ ಶಿಖಾಮಣಿ ಪರಮೇಶ್ವರ ಶಾಸ್ತ್ರಿಗಳು
ತಮ್ಮ ಮೊಮ್ಮಗನ್ನು ನೆನೆಸಿಕೊಂಡುಬಿಟ್ಟರು. ಕ್ರಾಪಿನೊಳಗೆ ಜುಟ್ಟು ಮರೆಮಾಚಿಕೊಂಡಿರುತ್ತಿದ್ದ ಶಾಮು;
ಉತ್ತರೀಯದೊಳಗೆ ಯಜ್ಞೋಪವೀತ ಮರೆಮಾಚಿಕೊಂಡಿರುತ್ತಿದ್ದ ಶಾಮು; ಮೀಸೆಯ ಚಿಗುರು ರೋಮಗಳ ಬುಡದಲ್ಲಿ ಬೆವರನ್ನು
ಮರೆಮಾಚಿಕೊಂಡಿರುತ್ತಿದ್ದ ಶಾಮು ಸದ್ಯೋಜಾತ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ ಎಂಬ ಪುರುಷಸೂಕ್ತದ
ಜೊತೆಗೇನೆ ತರ್ಕ ಶಾಸ್ತ್ರದ ಭಾವಾತ್ಮಕ; ನಿಷೇದಾತ್ಮಕ ಸೂತ್ರಗಳನ್ನೋ; ಬೀಜಗಣಿತದ ಪ್ರಮೇಯಗಳನ್ನೋ ಉಚ್ಚರಿಸಿಬಿಡುತ್ತಿದ್ದನು.
’ಮಗು ಶಾಮೂ... ಪುರುಷ ಸೂಕ್ತಕ್ಕೆ ಅಪಚಾರಮಾಡ್ತಿರುವೆಯಲ್ಲೋ....’ ಎಂದು ವಯೋವೃದ್ಧರೂ ಆದ ಪರಮೇಶ್ವರ
ಶಾಸ್ತ್ರಿಗಳು ಎಚ್ಚರಿಸದೆ ಇರುತ್ತಿರಲಿಲ್ಲ. ಇನ್ನೂ ತಮ್ಮ ಮೊಮ್ಮಗ ಅಥಾಂಗ ಪೂಜಾಂಕರಿಷ್ಯೆಯನ್ನೂ ಸ್ಪಷ್ಟವಾಗಿ
ಉಚ್ಚರಿಸುತ್ತಿಲ್ಲವಲ್ಲ. ವೈದಿಕಕ್ಕೆ ಪುರೋಹಿತರ ರೀತಿಯಲ್ಲಿ ಹೆಜ್ಜೆ ಇಡದೆ ವಿಟ ಪುರುಷರಂತೆ ಹೆಜ್ಜೆ
ಇರಿಸುವನಲ್ಲ ಇಷ್ಟು ವಯಸ್ಸಾದರೂ ತಮ್ಮ ಮೊಮ್ಮಗ ಸ್ವತಂತ್ರವಾಗಿ ಸತ್ಯನಾರಾಯಣ ವ್ರತ ಮಾಡಿಸಲಿಕ್ಕಾಗುತ್ತಿಲ್ಲವಲ್ಲ...
ಕ್ರಾಪಿನೊಳಗೆ ಪುರೋಹಿತ್ವದ ಪವಿತ್ರ ಲಾಂಛನವಾದ ಜುಟ್ಟನ್ನು ಗಿಡ್ಡದಾಗಿರಿಸಿ ಮರೆಮಾಚಿಕೊಂಡು ಬಿಡುತ್ತಿರುವನಲ್ಲ
ಗಾಂಧಾರ ದೇಶದ ಶಲಾತುರ ಗ್ರಾಮದ ಪಾಣಿನಿಯ ಅಷ್ಟಾಧಾಯಿನಿಯ ಪ್ರಥಮಾಧ್ಯಾಯಕ್ಕೆ ಆತ್ಮನೇ ಕ್ರಿಯೆ ಬರೆಯಬೇಕಾಗಿದ್ದ
ತಮ್ಮ ಮೊಮ್ಮಗ ಹುಡುಗಿಯರಿಗೆ ಪ್ರೇಮಪತ್ರ ಬರೆಯುವ ಅಭ್ಯಾಸ ಮಾಡುತ್ತಿರುವನಲ್ಲಾ ರಾಮ ರಾಮಾ ಧೋತರ ನಾರುಮಡಿ
ಮೇಲೊಂದು ಉತ್ತರೀಯ ಧರಿಸಿ, ಸನಾತನ ಧರ್ಮ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆದು ನಾಲ್ಕು ಕಾಸು
ಸಂಪಾದಿಸಬೇಕಾಗಿದ್ದ ತಮ್ಮ ಮೊಮ್ಮಗ ಟೌಜರು ಮೇಲೊಂದು ಬುಷ್ ಶರಟು ಧರಿಸಿ ಆಧುನಿಕಂಕ್ಷಿಗಳ ಗಮನ ಸೆಳೆಯುತ್ತಿರುವನಲ್ಲಾ
ಶಿವ ಶಿವಾ
ಪರಮೇಶ್ವರ ಶಾಸ್ತ್ರಿಗಳು ತಮ್ಮ ಮೊಮ್ಮಗನ ನಡವಳಿಕೆ ಗಮನಿಸುತ್ತಿದ್ದರು. ಈ ಇಳಿವಯಸ್ಸಿನಲ್ಲಿ ನಿಟ್ಟುಸಿರು
ಬಿಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಮಾಮನವರೇ’ ಎಂದು ವಿಧವಾ ಸೊಸೆ ಅಲುಮೇಲಮ್ಮ ತೋರುತ್ತಿದ್ದ ಕಾಳಜಿ
ಅಲಕ್ಷಿಸಿ ಕೂತರೊಂದು ಬಿಸಿಯುಸಿರು; ನಿಂತರೊಂದು ಬಿಸಿಯುಸಿರು ಬಿಡುತ್ತಿದ್ದರು. ತಮ್ಮ ವಂಶ ಎಂಥಾದ್ದು?
ಏನ್ಕಥೆ? ರಾಜಮಹಾರಜನ್ನು ಏಕವಚನದಿಂದ ಸಂಭೋಧಿಸುತ್ತಿದ್ದಂಥವರು ತಮ್ಮ ಹಿರಿಯರು..... ಪಾಣಿನಿ; ಪತಂಜಲಿ,
ಪರಾಶರ, ನಾಗೋಜಿ ಭಟ್ಟ, ಜಮೂರ ನಂದಿ ಮೊದಲಾದ ಶಾಸ್ತ್ರಕೋವಿದರ ಸಾಲಿನಲ್ಲಿ ನಿಲ್ಲುವಂಥವರು ತಮ್ಮ ಹಿರಿಯರು,
ದತ್ತಕ ಮೀಮಾಂಸಾ; ಚಿತ್ತಸೂತ್ರ, ಚಿಕಿತ್ಸಾಸಾರ ಸಂಗ್ರಹ, ಗೋಲ ದೀಪಿಕಾ ಚತುರ್ವರ್ಗ ಚಿಂತಾಮಣಿ, ಜೋತಿಷ
ವೇದಾಂಗವೇ ಮೊದಲಾದ ಶಾಸ್ತ್ರಾಗಮಗಳನ್ನು ಅರಗಿಸಿಕೊಂಡಂತವರು ತಮ್ಮ ಹಿರಿಯರು. ಜೋತಿಷ ಸಾರೋದ್ಧಾರ,
ಸಂಗೀತೋಪನಿಷತ್ಸಾರೋದ್ಧಾರ, ಸಾಂಖ್ಯಪ್ರವಚನೋದಯ, ಸಾರಸ್ವತ ವ್ಯಾಕರಣ ತೀರ್ಥ, ವೀರ ಮಿತ್ರೋದಯ, ಲಘು
ಶಬ್ದೇಂದು, ಶೇಖರ, ಸಂಸ್ಕೃತ ಭಾಷಾ ವಾರಿಧಿಯೇ ಮೊದಲಾದ ಬಿರುದು ಬಾವಲಿ ಧರಿಸಿದ್ದವರು ತಮ್ಮ ಹಿರಿಯರು,
ಅವರು ಇಟ್ಟರೆ ಶಾಪ; ಕೊಟ್ಟರೆ ವರ ಅಂಥವರ ವಂಶದ ಕುಡಿಯಾದ ಶಾಮ ಆಧುನಿಕತೆಯ, ನಾಗರೀಕತೆಯ ಮೋಹ ಪಾಶಕ್ಕೆ
ತುಡಿಯುತ್ತಿರುವುದೆಂದರೇನು?
ತಮ್ಮ ಮಗ ಅಶ್ವಥ್ ನಾರಾಯಣ ಶಾಸ್ತ್ರ ಕೋವಿದನಾಗುವ ಬದಲು ಕೋವಿ ಹಿಡಿದಿದ್ದರಿಂದಲ್ಲವೇ ಅವನ ಮಗ ಹೀಗೆ
ವರ್ತಿಸುತ್ತಿರುವುದು! ಅವನು ಮ್ಲೇಚ್ಛರ ಸಹವಾಸ ಮಾಡದಿದ್ದರೆಲ್ಲಿ ಇವನು ಹೀಗೆ ವರ್ತಿಸುತ್ತಿದ್ದ;
ಸರಸ್ವತ ವ್ಯಾಕರಣ ತೀರ್ಥ ಶಾಮಾ ಶಾಸ್ತ್ರಿಗಳ ಮಗಂದಿರಾದ ತಾವು ಸಕಾಲದಲ್ಲಿ ಮಗ ಅಶ್ವತ್ಥನಿಗೆ ಉಪನಯನ
ಮಾಡಿ ಗಾಯತ್ರಿ ಪ್ರಾಣಾಯಾಮಗಳನ್ನು ಶಾಸ್ತ್ರೊಕ್ತವಾಗಿ ಕಲಿಸಿ; ಕಂದ ಮೂಲ ತೀರ್ಥಗಳಿಗೆ ಅವನ ಜೀರ್ಣವ್ಯವಸ್ಥೆಯನ್ನು
ಒಗ್ಗಿಸಿ, "ಜುಟ್ಟಿಗಿರೋ ಸ್ಥಾನಮಾನವನ್ನು ಕ್ರಾಪಿಗೆ ಕೊಟ್ಟೆಯಾದರೆ ಹೆಳವನ್ನಾಗಿ ಮಾಡುತ್ತೇನೆ" ಎಂಬುದಾಗಿ
ಎಚ್ಚರಿಸಿದ್ದರೆ ಅವನು ಸಂಪ್ರದಾಯಕ್ಕೆ ತಿಲಾಂಜಲಿ ನೀಡುತ್ತಿರಲಿಲ್ಲ... ಆ ಮುದುಕಿಂದಲೇ ಇವನು ಕೆಟ್ಟಿದ್ದು....
ಸನಾತನ ಧರ್ಮದ ಸ್ಥಾನದಲ್ಲಿ ಕರುಳನ್ನು ಪ್ರತಿಷ್ಟಾಪಿಸಿ ಮಗನನ್ನು ಬಲಿಕೊಡಬೇಡವೆಂದು ತಾವು ಕೇಳಿದ್ದುಂಟು;
ಪೀಡಿಸಿದ್ದುಂಟು. ಆದರೆ ಕೇಳಬೇಕಲ್ಲ ಹೆತ್ತ ಕರುಳು? ತಮ್ಮ ಸೊಸೆಗೆ ಸನಾತನ ಧರ್ಮಕ್ಕಿರುವ ನಿಯತ್ತಿನ
ಪೈಕಿ ಕಾಲುಭಾಗವಾದರೂ ಈ ಮುದುಕಿಗಿತ್ತೇನು?
ಅವನೂ ಕೆಟ್ಟ, ತನ್ನ ಮಗನನ್ನೂ ಕೆಡೆಸಿದ. ಯಥಾ ಪಿತ ತಥಾ ಸುತಾ, ಮಗನಿಗೆ ಮ್ಲೇಚ್ಚ ಸಂಸೃತಿಯ ಬುನಾದಿ
ಹಾಕಿಕೊಟ್ಟು ಸತ್ತುಹೋದ. ಸಾವು ಎಂದರೆ ಎಂಥಾದ್ದು? ಶಿವ... ಶಿವಾ...ಯಾವ ಶತ್ರುವಿಗೂ ಅಂಥಾ ಸಾವು
ಬರಬಾರದು. ತಮ್ಮ ವಂಶದ ಹಿರಿಯರು ಯಾರೊಬ್ಬರೂ ಅಂಥ ಕೆಟ್ಟ ಸಾವನ್ನು ಕನಸುಮಸಿನಲ್ಲೂ ಊಹಿಸಿದುದುಂಟೇನು?
ಗಿರಿಮುತ್ತಾತ ವಿದ್ಯಾವಾಚಸ್ಪತಿ ಶಿವರಾಮಮೋಹನ ಶರ್ಮರಾದರು ಎಂಥವರು? ಸತ್ತವರನ್ನು ಬದುಕಿಸಿದಂತವರು,
ಹಸುವಿನ ಕಳೇಬರದ ಕೆಚ್ಚಲಿನಿಂದ ಹಾಲು ಕರೆದಂತವರು, ತಲಕಾಡಿನ ಶ್ರೀರಂಗ ರಾಜರಿಗೆ ದೃಷ್ಟಿದಾನ ಮಾಡಿದಂತವರು.
ನೂರೈದು ವರ್ಷ ದೀರ್ಘಕಾಲ ಬದುಕು ಬದುಕಿ, ಸಾಕಪ್ಪ ಈ ಇಹಲೋಕ ವ್ಯಾಪಾರ, ಸ್ವರ್ಗ ಲೋಕಕ್ಕೆ ಹೋಗಿ ಶಿವನ
ಸಾನ್ನಿಧ್ಯದಲ್ಲಿ ಶಾಶ್ವತ ಸಂತೋಷದಿಂದ ಇದ್ದು ಬಿಡುವುದಾಗಿ ಜೀವ ಸಮಾಧಿಯಾದಂಥವರು. ತಮ್ಮ ಮುತ್ತಜ್ಜ
ರಸರತ್ನಾಕರ ರಾಧಾರಮಣ ಶಾಸ್ತ್ರಿಗಳಾದರೂ ಎಂಥವರು? ಶಂಕರಾಚಾರ್ಯ ಭಗವತ್ಪಾದರಆತ್ಮದೊಡನೆ ಷಡ್ದರ್ಶನ
ಸಮುಚ್ಚಯದ ಬಗ್ಗೆ ಸಾರ್ವಜನಿಕವಾಗಿ ಸಂಭಾಷಿದಂಥವರು, ತಮ್ಮ ನಾಲಿಗೆಯನ್ನೇ ಸರಸ್ವತಿಗೆ ಪಲ್ಲಂಗ
ಮಾಡಿಸಿಕೊಟ್ಟಂಥವರು. ಯಜ್ಞ ಯಾಗಾದಿಗಳಿಂದ ಪೆನುಗೊಂಡೆಯ ರಾಮರಾಜರಿಗೆ ಪುರುಷ ಶಕ್ತಿ ದಯಪಾಲಿಸಿದಂಥವರು,
ಚಿನ್ನದ ಪಲ್ಲಕ್ಕಿಯಲ್ಲಿ ಒಂದುಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಿದ್ದ ಅವರು ಬದುಕಿದ್ದು ನೂರರ
ಮೇಲೆ ಮೂರು ತುಂಬುವವರೆಗೆ. ಸಾಕಪ್ಪಾ ಸಾಕು ಈ ಕಲಿಯುಗದ ಸಹವಾಸ... "ವೈಕುಂಟಕ್ಕೆ ಹೋಗಿ ಮಹಾವಿಷ್ಣು
ದಂಪತಿಗಳ ಶಯನ ಗೃಹ ಗುಡಿಸುವ ಸೇವೆ ಮಾಡಿ ಪಾವನರಾಗುತ್ತೇವೆಂಬುದಾಗಿ" ನುಡಿದು ಕಣ್ಣು ಮುಚ್ಚಿಕೊಂಡಂಥವರು.
ತಮ್ಮ ತಾತನವರಾದ ಸರ್ವದರ್ಶನತೀರ್ಥ ಸಕಲೇಶ್ವರ ಶಾಸ್ತ್ರಿಗಳಾದರೋ ಎಂಥವರು? ಅವರಿಗೆ ಸಾಹಿತಿ ಸಮರಾಂಗಣ
ಎಂಬ ಬಿರಿದಿತ್ತು. ಅಷ್ತದಿಗ್ಗಜಗಳಿದ್ದ ಶಕ್ತಿ ಅವರೊಬ್ಬರಿಗೇ ಇತ್ತು. ಸಕಲ ಶಾಸ್ತ್ರಗಳನ್ನು ಅರಗಿಸಿಕೊಂಡಿದ್ದಂಥವರು.
ಶತಾಯುಷ್ಯದ ನಂತರ ಕದಳೀವನ ಹೊಕ್ಕವರು ವಪಸು ಬರಲೇ ಇಲ್ಲ... ಇಂಥವರ ವಂಶದವರಾದ ಪಮೇಶ್ವರ ಶಾಸ್ತ್ರಿಗಳೆಂಬಭಿದಾನ,
ಧರಿಸಿರುವರು ತಾವಾದರು ಎಂಥವರು? ಆಚಾರ ವಿಚಾರದಲ್ಲಿ ಅದೆಷ್ಟು ಕಟ್ಟುನಿಟ್ಟು?
ಸುಮಾರು ಎಂಬತ್ತು ವರ್ಷದ ಅವರಿಗೆ ಹಲ್ಲು ಉಚ್ಚಿರಲಿಲ್ಲ. ಸೊಂಟ ಬಾಗಿರಲಿಲ್ಲ. ಎಂದೂ ಒಂದು ಮಾತ್ರೆ
ನುಂಗಿರಲಿಲ್ಲ. ಸೂಜಿ ಮಾಡಿಸಿಕೊಂಡು ದೇಹ ಅಪವಿತ್ರ ಮಾಡಿಸಿಕೊಂಡವರಲ್ಲ. ತಮ್ಮ ತಂದೆ ದಿವಾನರ ಬಳಿ
ಆಸ್ಥಾನ ಪುರೋಹಿತರಾಗಿದ್ದರು, ತಮ್ಮ ತಾತ ಮಹಾರಾಜರ ಕುಟುಂಬದ ಮುಖ್ಯ ಅರ್ಚಕರಾಗಿದ್ದರು. ತಮ್ಮ ತಾತ
ಕುಂಡಲಿ, ಜಾತಕ ಪರಿಶೀಲಿಸಿದ ನಂತರವೇ ಗುಡೀಕೋಟೆ ರಾಜ ಯುದ್ಧಕ್ಕೆ ಹೊರಡುತ್ತಿದ್ದ. ಎಂದೆಲ್ಲ ತಮ್ಮ
ವಂಶಾವಳಿ ಬಗ್ಗೆ ಬೀಗುತ್ತಿದ್ದ ಅವರು ತಮ್ಮ ಏಕಮಾತ್ರ ಪುತ್ರನಾದರೂ ಸಂಸೃತದಲ್ಲಿ ಮಹಾಪಂಡಿತನಾಗಿ ವಂಶದ
ಕೀರ್ತಿ ಉಳಿಸಲಿ ಎಂದು ಬೆಂಗಳೂರಿನ ಸಂಸೃತ ಪಾಠಶಾಲೆಯೊಂದಕ್ಕೆ ಸೇರಿಸಿದ್ದರು. ಆದರೆ ಆತ ಜುಟ್ಟು ಬೋಳಿಸಿಕೊಂಡು
ಮತಭ್ರಷ್ಠನಾದ, ನಗರದ ಬೀದಿಗಳಲ್ಲಿ ಪೋಲಿ ಪೋಲಿಯಾಗಿ ಅಲೆದಾಡಿದ; ತನ್ನ ಹದಿನೆಂಟನೇ ವಯಸ್ಸಿಗೆ ಎರಡು
ಮೂರು ಗುಹ್ಯ ರೋಗಗಳಿಗೆ ಬಲಿಯಾಗಿ ಅಡ್ಡಾಡಲಸಾಧ್ಯವಾದ ವೇದನೆಯಿಂದ ನರಳತೊಡಗಿದ. ಪಾಠಶಾಲೆಯ ಪ್ರಾಚಾರ್ಯರಿಂದ
ಹೀಗೆ ಅಂತ ಪತ್ರ ಹೋಯಿತು. ಶಾಸ್ತ್ರಿಗಳು ಬಂದರು. ಮಗನ ದೇಹ ಸ್ಪರ್ಶಿಸಲು ಹಿಂಜರಿದರು. ಮುಮ್ಮುಡಿ
ಕೃಷ್ಣರಾಜರಿಂದ ಬಳುವಳಿಯಾಗಿ ಬಂದಿದ್ದ ಬೆತ್ತ ಎತ್ತಿ ಬಾರಿಸಿದರು. "ಕೊಂದು ಹಾಕಿಬಿಡ್ತೀನಿ ಮುಂಡೇ
ಗಂಡ" ಎಂದು ಬೆದರಿಸಿ ಗುಹ್ಯರೋಗ ತಜ್ಞರಿಂದ ಇಲಾಜು ಮಾಡಿಸಿದರು. ಮಗನ ಭವಿಷ್ಯ ಹೇಗೆ ರೂಪಿಸಬೇಕು ಎಂಬ
ಚಿಂತೆಯಲ್ಲಿ ಅವರಿದ್ದಾಗ ಮಗ ಅಶ್ವಥ್ ನಾರಾಯಣ ತಾನು ಮಲಗಿದ್ದ ಶಯನ ಗೃಹದಿಂದ ಪರಾರಿಯಾದ. ಶಾಸ್ತ್ರಿಗಳು
ತಮಗೆ ಬಹುಮಾನವಾಗಿ ಬಂದಿದ್ದಂಥ ತೋಳು ಬಂದಿ, ಕಡಗ, ಪದಕಗಳನ್ನು ಮಾರಿ ಐದು ವರ್ಷ ದಿನಮಾನ ಹುಡುಕಿಸಿದರು.
ಧರ್ಮಪತ್ನಿ "ಅಶ್ವತ್ಥಾಽ ಅಶ್ವತ್ಥಾಽ" ಅಂತ ಕೊನೆಯುಸಿರೆಳೆದಳು. ಶಾಸ್ತ್ರಿಗಳು ಅಲ್ಲಲ್ಲಿ ವೈದಿಕ
ಮಾಡಿಕೊಂಡು ಮಗನನ್ನು ಮರೆತರು. ಆದರೆ ಒಂದು ದಿನ ಅವರು ಸಂಧ್ಯಾವಂದನೆಮಾಡುತ್ತಿದ್ದಾಗ ಯುವಕನೋರ್ವ
ಮನೆಬಾಗಿಲು ತಟ್ಟಿದ. ಹುಲಿಯೇ ಮನುಷ್ಯರೂಪ ಧರಿಸಿದಂತಿದ್ದ. ಆಧುನಿಕ ವೇಶಭೂಷಣದವನಾಗಿದ್ದ. ದೇಹದ ಎಲ್ಲ
ಕಡೆ ಊದಿಕೊಂಡಿತ್ತು. ಆ ವ್ಯಕ್ತಿ ಶಾಸ್ತ್ರಿಗಳ ಏಕಮಾತ್ರ ಪುತ್ರ ಅಶ್ವಥ್ ನಾರಾಯಣನಾಗಿದ್ದ. ಭಾರತೀಯ
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಆತ ಸೇವೆ ಸಲ್ಲಿಸಿದ್ದುದು ಉತ್ತರ ಭಾರತದ ಪೂಂಚ್ ಗಡಿಯಲ್ಲಿ.
ನೂರಾರು ಮಂದಿ ಶತ್ರು ಸೈನಿಕರನ್ನು ಕೊಂದಿದ್ದ. ಕೋಳಿ ಕುರಿ ತಿಂದರೆ ಅದೊಂದು ಥರ, ಆದರೆ ಆತ ಗೋಮಾಂಸ,
ದನದ ಮಾಂಸ ತಿನ್ನುತ್ತಿದ್ದ. ಎಳನೀರು, ಕಾಫಿ ಟೀ ಕುಡಿದರೆ ಅದೊಂದು ಥರ. ಆತ
ಮಿಲಿಟರಿ ರಮ್ ಕುಡಿಯದೆ ನಿದ್ದೆ ಮಾಡುತ್ತಿರಲ್ಲಿಲ್ಲ. ಇದನ್ನೆಲ್ಲ ಕೇಳಿ ಶಾಸ್ತ್ರಿಗಳು ಅರ್ಧ ಇಳಿದುಹೋದರು.
ಆತ ತಮ್ಮ ವಂಶದ ಮಡಿವಂತಿಕೆಯನ್ನು ತೂರಿರಬಹುದು. ಆತ ಎಷ್ಟಿದ್ದರೂ ಎರಡು ಪತ್ತ ಮೀರಿದ ನಂತರ ಹುಟ್ಟಿದ
ಮಗ. ಹೆಂಡತಿ ಪ್ರಾಣಾಂತಿಕ ಪ್ರಸವ ವೇದನೆಯನ್ನು ಅನುಭವಿಸಿ ಅಂತೂ ಕೊನೆಗೆ ಹೆತ್ತು ತಾನೂ ಬದುಕಿ ಉಳಿದಿದ್ದಳು.
"ದಿನಕ್ಕೊಂದು ಸಾರಿಯಾದರೂ ಗಾಯತ್ರಿ ಜಪಿಸುತ್ತೀದೀಯಾ" ಎಂದಿ ಶಾಸ್ತ್ರಿಗಳು ಪ್ರಶ್ನಿಸುತ್ತಿದ್ದರು.
’ಭೂರ್ಬವಸ್ವಃ ಎನ್ನುವುದನ್ನೇ ಮರೆತುಬಿಟ್ಟಿದ್ದ. ಗಾಯತ್ರಿ ಮೈಖೇಲ್ ಎಂಬ ಹುಡುಗಿಜತೆಗೆ ನಿರಂತರವಾಗಿ
ದೈಹಿಕ ಸಂಭಂದ ಇಟ್ಟುಕೊಂಡಿರುವುದಾಗಿ ಹೇಳಿ ಹೆತ್ತ ತಂದೆ ಮುಖಕ್ಕೆ ಬೆರಣಿ ತಟ್ಟಿದ. ಶಾಸ್ತ್ರಿಗಳಿಗೆ
ಇದನ್ನೆಲ್ಲಾ ಕೇಳಿ ಗಂಗೆಯಲ್ಲಿ ದೇಹ ತ್ಯಾಗ ಮಾಡಿಕೊಳ್ಳಬೇಕೆನಿಸಿತು. ಅಗ್ರಹಾರದ ಸಹಜೀವಿಗಳು ಬುದ್ಧಿ
ಹೇಳಿದರು. ಒಂದು ಹಂತಕ್ಕೆ ತಂದರು. ’ಮಗ ಮ್ಲೇಚ್ಚ ಜಾತಿಯವಳನ್ನು ಮದುವೆಯಾಗಿ ವಂಶವನ್ನು ಮೈಲಿಗೆ ಮಾಡುವ
ಮೊದಲೇ ಶಾಸ್ತ್ರೋಕ್ತವಾಗಿ ಸ್ವಜಾತಿ ಸ್ವಗೋತ್ರದ ಹುಡುಗಿಯೋರ್ವಳನ್ನು ಕಟ್ಟಿಹಾಕಿ ಬಿಡುವಂತೆ ಶಾಸ್ತ್ರಿಗಳಿಗೆ
ಸೂಚಿಸಿದರು. ಮೊದಮೊದಲು ಅಶ್ವಥ್ ಇದಕ್ಕೆ ಒಪ್ಪಲ್ಲಿಲ್ಲ. ಕಣ್ಣೆದುರಿಗೇ ಆತ್ಮಹತ್ಯೆಯ ಬೆದರಿಕೆ ಹಾಕಿದಾಗಲೂ
ಜಗ್ಗಲಿಲ್ಲ.
ಕೊನೆಗೆ ಅಗ್ರಹಾರಕ್ಕೆ ಅಗ್ರಹಾರವೇ ಸಂಪು ಮಾಡಿದಾಗ ಸ್ವಜಾತಿ ಕನ್ಯೆ ನೋಡಲು ಒಪ್ಪಿದ. ಏನು ಬಿಟ್ಟರೂ
ಜಾತಿ ಬಿಡಬಾರದು ಎಂದು ತಂದೆಯ ಸಹಪಾಠಿ ಹೇಳಿದ್ದಕ್ಕೆ ತಲೆ ಅಲ್ಲಾಡಿಸಿದ. ಮಗನನ್ನು ತಮ್ಮ ಜುಟ್ಟಿಗೆ
ಕಟ್ಟಿಕೊಂಡು ಶಾಸ್ತ್ರಿಗಳು ಛಪ್ಪನ್ನಾರು ದೇಶಗಳನ್ನು ಅಲೆದರು. ತಾನು ಸಂಭೋಗಿಸಿದ ಹುಡುಗಿಯರಂತೆ ಇವರಾರು
ಇಲ್ಲವೆಂದು ಅಶ್ವಥ್ ತಿರಸ್ಕರಿಸಿದ. ನೂರಾರು ಮಂದಿಯನ್ನು ಕೊಂದವನಿಗೆ ಮಗಳನ್ನು ಹೇಗೆ ಕೊಡುವುದು ಎಂದು
ಶಾಸ್ತ್ರಿಗಳಿಗೆ ಹೇಳಿದರು. ಮತ್ತೆ ಕೆಲವರು "ಮಿಲಿಟರಿ ಸೇವೆ ಅಂದ ಮೇಲೆ ಅಮೇಧ್ಯ ಮದ್ಯ ಸೇವನೆ ಮಾಡದೆ
ಇರುವುದುಂಟೆ" ಎಂಬ ಅನುಮಾನ ವ್ಯಕ್ತಪಡಿಸಿದರು. ಕೊನೆಗೆ ಗುಣ ಸಾಗರದ ಅದ್ವಿತೀಯ ಪಂಡಿತೋತ್ತಮರಾದ ಶ್ರೀನಿವಾಸರಾಯರು
ತಮ್ಮ ಮಗಳನ್ನು ಕೊಡಲು ಒಪ್ಪಿದರು. ಆ ಹುಡುಗಿ ಹೆಸರು ಅಲಮೇಲು, ಶ್ರೀಮದ್ ವೆಂಕಟೇಶನ ಧರ್ಮಪತ್ನಿಯ
ಹೆಸರು. ಆಕೆ ಆಚಾರವಂತೆ, ವಿಚಾರವಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ತನಗೆ ವಾರದೊಳಗೆ ಮದುವೆ ಮಾಡದಿದ್ದರೆ ಕನ್ನೀರವ್ವನ ಭಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ
ತಂದೆಯನ್ನು ಹೆದರಿಸಿದ ಧೀಮಂತೆ, ಯೌವನ ಕಾಲಿರಿಸಿದಾಗ ನಿದ್ರಾ ನಡಿಗೆಯ ಚಾಳಿ ಇತ್ತಂತೆ, ಆಕೆ ರೂಪವತಿ
ಮತ್ತು ಬಲಶಾಲಿಯಾಗಿದ್ದುದರಿಂದಲೇ ಮಿಲಿಟರಿ ಅಶ್ವತ್ಥ್ ಒಪ್ಪಿಕೊಂಡದ್ದು. ಆಕೆಯ ದೇಹದಲ್ಲಿ ಸ್ಪಂದಿಸುವ
ಗುಣ ಕಂಡುಕೊಂಡ ನಂತರವೇ ಕಾಯಾವಾಚಾಮನಸಾ ಮಾಂಗಲ್ಯಧಾರಣೆ ಮಾಡಿದ, ಒಂದು ತಿಂಗಳ ಪರ್ಯಂತರ ಹಾಸಿಗೆ ಪ್ರಸ್ಥ
ನಿರ್ವಿಘ್ನವಾಗಿ ನೆರವೇರಿತು. ಮದುವೆಯಾದ ಮೂವತ್ತೈದನೆ ದಿನ ಮಿಲಿಟರಿ ಹೆಡ್ ಕ್ವಾರ್ಟಸ್ಸಿನಿಂದ ಬುಲಾವ್
ಬಂತು. ಮಿಲಿಟರಿ ಉಡುಪು ಧರಿಸಿ ಹೊರಟು ನಿಂತ. ಪತಿಭಕ್ತೆಯಾದ ಅಲಮೇಲು ಕಣ್ಣುಗಳಿಂದ ಅಶ್ರುಧಾರೆ ಹರಿಯಿತು.
"ವಾಪಸು ಬರುವುದರೊಳಗೆ ನಮ್ಮಿಬ್ಬರ ಹಾಗೆಯೇ ಗಂಡುಮಗುವನ್ನು ಹೆತ್ತು, ಮೈಗೆ ಎಣ್ಣೆ ನೀರು ಹಾಕ್ಕೊಂಡು
ರೆಡಿಯಾಗಿರು" ಎಂದು ಹೇಳಿ ಹೊರಟುಹೋದ.
ಪತಿವಾಕ್ಯ ಪರಿಪಾಲನಾರ್ಥವಾಗಿ ಅಲುಮೇಲು ಮದುವೆಯಾದ ಇನ್ನೂರ ಎಂಬತ್ತೆಂಟನೆ ದಿನದಂದು ಗಂಡುಮಗುವಿಗೆ
ಜನ್ಮ ನೀಡಿದಳು. ಆಮಗು ನೋಡಲು ಮುದ್ದಾಗಿತ್ತು. ಸ್ವತಃ
ಜ್ಯೋತಿಷ್ಯ ಮಾರ್ತಾಂಡರಾದ ಶಾಸ್ರಿಗಳು ಗುಣಿಸಿ ಭಾಗಿಸಿ ನಕ್ಶತ್ರ ನೋಡಿದರು. ಸ್ವಾತಿ ನಕ್ಷತ್ರ, ರಾಜಯೋಗ,
ನೂರು ವರ್ಷ ತುಂಬಿದ ಬದುಕು ಅನುಭವಿಸುತ್ತನೆ; ಶಾಸ್ತ್ರ ಕೋವಿದನಾಗುತ್ತಾನೆ, ಜ್ಯೊತಿಷ್ಯದಲ್ಲೂ ಕೈಯಾಡಿಸಿ
ಭವಿಷ್ಯ ಹೇಳಿ ನಾಲ್ಕಾರು ಮಂದಿ ಶ್ರೀಮಂತರ ಸಖ್ಯ ಸಂಪಾದಿಸುತ್ತಾನೆ, ಸತ್ಯನಾರಾಯಣ ವ್ರತವೇ ಮೊದಲಾದ
ವ್ರತಗಳನ್ನು ಆಚರಿಸಿ ಹಣ ಸಂಪಾದಿಸಿ ಹೆಂಡತಿ ಮಕ್ಕಳನ್ನು ಸುಖವಾಗಿಡುತ್ತಾನೆ, ಪತಿಯೇ ದೇವರೆಂದು ಭಾವಿಸುವ
ಹೆಂಡತಿ ದೊರಕುತ್ತಾಳೆ, ಹೀಗೆ ಏನೇನೋ ವಿವರಗಳುಳ್ಳ ಜಾತಕ ಬರೆದು ಮುಗಿಸಿದರು ಶಾಸ್ತ್ರಿಗಳು.
ಅಂಗಾತ ಮಲಗಿ ಆಡುವ ಮೊಮ್ಮಗನ ಕಿವಿಯಲ್ಲಿ ಆರು ಮಂತ್ರ ಗೊಣಗಿದರು. ಬೋರಲು ಮಲಗಿ ಇಸ್ಸಿ ಮಾಡುವ ಮೊಮ್ಮಗನ
ಕಿವಿಯಲ್ಲಿ ಏಳು ಮಂತ್ರ ಬೋದಿಸಿದರು. ಹೀಗೆ ಕುಂತರೊಂದು ಮಂತ್ರ, ನಿಂತರೊಂದು ಮಂತ್ರ. ತಮ್ಮ ಯಂದೆಯ
ಹೆಸರನ್ನು ಇಟ್ಟರೆಂದರೆ ಸಾಮಾನ್ಯವೇನು? ವಾಗ್ವಾದ ತೀರ್ಥ ನವರಸ ನಿಷ್ಣಾತ, ಮುಂತಾದ ಬಿರುದಾಂಕಿತ ಶಾಮಾ
ಶಾಸ್ತ್ರಿಗಳು ಬಂದರೆಂದರೆ ಸಾಕ್ಷಾತ್ ಮಹಾರಾಜರೇ ಎದ್ದು ನಿಂದು ಸೂಚಿಸುತ್ತಿದ್ದರು. ಹಿಂದೂ ಮತದ ಎದುರು
ಯಾವ ಧರ್ಮಗಳು ಏನೂ ಅಲ್ಲ ಎಂದು ಎಲ್ಲಾ ಧರ್ಮದ ಪಂಡಿತರನ್ನು ಸೋಲಿಸಿ. ಮಹಾರಾಜರಿಂದ ಚಿನ್ನದ ಮುಂಗೈ
ಕಡ್ಗ ಪಡೆದಿದ್ದಂಥವರು. ಆ ಕಡಗಕ್ಕೆ ಒಂದು ಪುಟ್ಟ ಘಂಟೆ ಇತ್ತು. ಅವರನ್ನು ಎಲ್ಲರೂ ಘಂಟಾ ಶಾಮಾ ಶಾಸ್ತ್ರಿಗಳೆಂದೇ
ಕರೆಯುತ್ತಿದ್ದರು. ಹೊತ್ತೆ ಕಿಚ್ಚಿನಿಂದ ಕುದಿಯುತ್ತಿದ್ದ ಅಗ್ರಹಾರದ ಪಡಪೋಸಿ ಪಂಡಿತರುಶಾಸ್ತ್ರಿಗಳ
ಮುಂಗೈಯಿಂದ ಕದಿಯಲು ಪ್ರಯತ್ನಿಸಿದ್ದೂ ಉಂಟು; ಸಿಕ್ಕಿ ಬಿದ್ದಿದ್ದೂ ಉಂಟು. ಶಾಸ್ತ್ರಿಗಳು ಕ್ಷಮಿಸಿದ್ದೂ
ಉಂಟು. ಕ್ಷಮಿಸದಿದ್ದರೆ ಅವರು ಅಗ್ರಹಾರದಲ್ಲಿ ಕುಟುಂಬ ಸಹಿತ ವಾಸಿಸುವುದೇ ಕಷ್ಟವಿತ್ತು. ಅದೂ ಅಲ್ಲದೆ
ಈ ದೇಶಕ್ಕೆ ದರಿದ್ರ ಸ್ವತಂತ್ರ ಬಂದು ರಾಜರುಗಳೆಲ್ಲಾ ಬೀದಿ ಪಾಲಾಗಿದ್ದರು. ರಾಜರೇ ಬೀದಿ ಪಲಾದರೆಂದ
ಮೇಲೆ ಪಂಡಿತರು, ವಿದ್ವಾಂಸರು ತಂತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ತಂತಮ್ಮ ಪವಿತ್ರ ಜುಟ್ಟುಗಳ ಕಡೆಗೆ
ವಿಶೇಷ ಗಮನ ಹರಿಸಿದರು. ಜುಟ್ಟು ಎಮ್ದರೆ ಸಾಮಾನ್ಯ ಸಂಗತಿ ಏನು? ಅದು ಸ್ವರ್ಗದಿಂದ ಮಾಹಿತಿ ಸಂಗ್ರಹಿಸಿ
ಮೆದುಳಿಗೆ ವರ್ಗಾಯಿಸುವ ಪರಿಣಮಕಾರಿ ರಿಸೀವರ್, ~ಆಂಟೆನ ಇದ್ದಂತೆ. ಶಾಸ್ತ್ರಿಗಳು ತಮ್ಮ ದೇಹಕ್ಕೆ
ಎಷ್ಟು ಬೆಲೆ ಕೊಡುತ್ತಿದ್ದರೋ; ಅಷ್ಟೇ ಬೆಲೆಯನ್ನು ತಮ್ಮ ಜುಟ್ಟಿಗೂ ಕೊಡುತ್ತಿದ್ದರು. ಆ ಜುಟ್ಟಿಗಿದ್ದ
ಒಂದೊಂದು ಗಂಟುಗಳಲ್ಲಿ ಅವರು ಒಂದೊಂದು ಲೋಕದ ಗುಟ್ಟನ್ನು ಅಡಗಿಸಿಟ್ಟಿದ್ದರು. ಕ್ರಮೇಣ ಅವರ ದೇಹ ಹಣ್ಣಾಯಿತೇ
ಹೊರತು ಅವರ ಜುಟ್ಟಿಗೆ ವೃದ್ದಾಪ್ಯ ಬರಲಿಲ್ಲ. ಪ್ರಜಾಪ್ರಭುತ್ವದ ಬಗ್ಗೆ; ಸಾಮಾಜಿಕ ಸಮಾನತೆ ಬಗ್ಗೆ
ಅವರಿಗೆ ಕೆಟ್ಟ ಅಸಮಾಧಾನವಿತ್ತು. ಸನಾತನ ನಂಬಿಕೆಗಳನ್ನು ಮೂಡನಂಬಿಕೆಗಳೆಂದು ಕರೆದು ಅವುಗಳ ವಿರುದ್ದ
ಎತ್ತರಿಸಿ ಮಾತಾಡುತ್ತಿದ್ದ ಜವಹರಲಾಲ ನೆಹುರೂರವರೆಂದರೆ ಅವರಿಗೆ ಭಯಂಕರ ಕೋಪವಿತ್ತು. ಶೂದ್ರರು; ದಲಿತರಿಗೆ
ಸಮಾಜದಲ್ಲಿ ವಿಶೇಷ ಸವಲತ್ತುಗಳನ್ನು ಕಲ್ಪಿಸಲು ಪ್ರಯತ್ನಿಸುತ್ತಿರುವ ಸರಕಾರಗಳ ವಿರುದ್ಧ ಅವರು ಹಿಡಿ
ಶಾಪ ಹಾಕುತ್ತಿದ್ದರು. ಆದ್ದರಿಂದ ಅವರು ಎಂದೂ ಮತಗಟ್ಟೆಗಳಿಗೆ ಹೋಗಿರಲಿಲ್ಲ. ಮತ ಚಲಾಯಿಸಲೂ ಇಲ್ಲ.
ಸನಾತನ ಧರ್ಮದ ಪುನರುತ್ಠಾನ ಮಾಡಲು ಕಂಕಣ ಬದ್ಧನಾಗುವಂತೆ ಮಗ ಪರಮೇಶ್ವರ ಶಾಸ್ತ್ರಿಗಳಿಂದ ವಚನ ಪಡೆದರು.
ತಮ್ಮ ಪವಿತ್ರ ಕಳೇಬರದೊಂದಿಗೆ ಮಹಾರಾಜರ ಪ್ರಸಾದವಾದ ಮುಂಗೈ ಕಡಗವನ್ನೂ ಇರಿಸಿ ಸಂಸ್ಕಾರ ಮಾಡುವಂತೆ
ಮಗನಿಗೆ ಹೇಳಿ ಪ್ರಾಣ ತ್ಯಜಿಸಿದರು.
ಅವರ ಶವವನ್ನು ಕಡಗದೊಂದಿಗೆ ಸಿಂಗರಿಸಿ ಭಕ್ತಾದಿಗಳ ದರ್ಶನಕ್ಕಾಗಿಒಂದು ದಿನದ ಮಟ್ಟಿಗೆ ಇಡಲಾಯಿತು.
ಹೆಣ ನೋಡುವುದಕ್ಕಿಂತ ಕಡಗ ನೋಡಲು ಬಂದವರೇ ಅಧಿಕ. ಕಣ್ಣೀರು ಸುರಿಸಿದ್ದಕ್ಕಿಂತ ಹೆಚ್ಚಾಗಿ ಬಾಯಿಯಿಂದ
ಜೊಲ್ಲು ಸುರಿಸಿದುದೇ ಹೆಚ್ಚು. ಅತ್ತು ಕರೆದೂ ಸುಸ್ತಾಗಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಶಾಸ್ತಿಗಳ
ಶವ ಕಾಣೆಯಾಯಿತು. ಶಾಸ್ತ್ರಿಗಳ ಆತ್ಮವೇ ತಮ್ಮ ಪವಿತ್ರ ಕಳೆಬರವನ್ನು ಕಾಶಿಯ ಪವಿತ್ರ ಮಣಿಕರ್ಣಿಕಾ
ಘಾಟಿಗೆ ಸಾಗಿಸಿರಬಹುದೆಂದು ಅನೇಕರು ಸಂದೇಹಿಸಿದರು. ಕಾಶಿ ವಿಶ್ವನಾಥನ ಸನ್ನಿಧಿಯಲ್ಲೇ ಅಸು ನೀಗುವ
ಆಸೆಯನ್ನು ಅವರು ಬದುಕಿದ್ದಾಗ ಹಲವುಕಡೆ ಪ್ರಸ್ತಾಪಿಸಿದ್ದುಂಟು. ಸಾಕ್ಷಾತ್ ಆದಿಶಕ್ತಿಯ ರೂಪವಾದ ದಾಕ್ಷಾಣಿಯ
ಶವವನ್ನು ಆಕೆಯ ಪತಿ ಪರಮೇಶ್ವರ ಅಗ್ನಿಗಾಹುತಿ ಮಾಡಿದಂಥಾ ಪರಮಪವಿತ್ರ ಸ್ಥಳವದು. ಅಲ್ಲಿ ದೇಹ ತ್ಯಾಗ
ಮಾಡುವುದೆಂದರೇನು? ಅದಕ್ಕೆ ಸಾವಿರಾರು ರುಪಾಯಿಗಳನ್ನು ಜೋಡಿಸುವುದು ಹೇಗೆ? ಅಂಥ ಅಂತ್ಯ ಸಂಸ್ಕಾರಗಳಿಗೆ
ಬೇಕಾದ ಎಲ್ಲಾ ಖರ್ಚುಗಳನ್ನು ಧರಿಸಲು ಸ್ವತಂತ್ರೋತ್ತರ ಪ್ರಜಾಪ್ರಭುತ್ವ ಸರಕಾರಗಳು ಸರ್ವಥಾ ಹಿಂದೇಟು
ಹಾಕುವವು. ಅಲ್ಲದೆ, ಈ ಸರಕಾರಗಳಿಗೆ ಸನಾತನ ಧರ್ಮಾವಲಂಬೀ ಮೇಲ್ಜಾತಿ ಸಂಜಾತರ ಬಗ್ಗೆ ಲವಲೇಶ ಗೌರವವಿಲ್ಲ.
ಕಾಶ್ಮೀರಿ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿರುವ ನೆಹರೂರವರು ಪ್ರಧಾನಿಗಳಾಗಿದ್ದಾಗ ಅವರಿಂದ ಬ್ರಾಹ್ಮಣ
ಪರ ನಿಲುವನ್ನು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ತಲೆಕೆಳಗಾಯಿತು. ಬ್ರಾಹ್ಮಣ ವಿರೋಧಿ ಸರಕಾರಗಳು
ಇದ್ದರೆಷ್ಟು? ಬಿದ್ದರೆಷ್ಟು? ಆದರೆ ಅದೇ ರಾಜ ಮಹಾರಾಜರಿದ್ದಿದ್ದರೆ ಹೀಗಾಗುತ್ತಿತ್ತೇನು? ಪಂಡಿತೋತ್ತಮರ
ಕಳೆಬರವನ್ನು ನವರತ್ನ ಖಚಿತ ಡೋಲಿಯಲ್ಲಿ ಅಲಂಕರಿಸಿ ಕಾಶಿಗೋ ಕೇದಾರಕ್ಕೋ, ಹೃಷೀಕೇಶಕ್ಕೋ ಸಾಗಿಸುತ್ತಿದ್ದರು.
ಅಂತ್ಯ ಸಂಸ್ಕಾರದ ಸಕಲ ಖರ್ಚುಗಳನ್ನೂ ಖಂಡಿತ ಭರಿಸುತ್ತಿದ್ದರು. ಇದನ್ನು ಮನಗಂಡೇ ಶಾಮಾ ಶಾಸ್ತ್ರಿಗಳು
ತಮ್ಮ ಆತ್ಮಬಲದಿಂದ ಇಚ್ಛಾಶಕ್ತಿಯಿಂದ ತಮ್ಮ ಶವವನ್ನು ಕಾಶಿಯ ಮಣಿಕರ್ಣಿಕಾ ಘಾಟ್ ಅಂತರಿಕ್ಷ ಮಾರ್ಗವಾಗಿ
ಸಾಗಿಸಿರಬಹುದೆಂದು ಸಂದೇಹಿಸಲಾಯಿತು. ಅದನ್ನು ಪುಷ್ಟೀಕರಿಸುವಂತೆ ಕೆಲವರು ತಾವು ಮಟಮ ಟ ಮಧ್ಯ ರಾತ್ರಿ
ಸಮಯಯಲ್ಲಿ ಉದ್ದನೆ ವಸ್ತುವೊಂದು ಆಕಾಶ ಮಾರ್ಗವಾಗಿ ಉತ್ತರಾಭಿಮುಖವಾಗಿ ಹೋದದ್ದನ್ನು ಕಂಡೆವೆಂದು ಹೇಳಿದರು.
ಅವರ ಆ ವಾದವನ್ನು ಸತ್ಯವೆಂದು ನಿರೂಪಿಸಲು ಗಣಪಥಿ ಭಟ್ಟರು ಆ ವಸ್ತುವಿಂದ ಉದುರಿತ್ತೆಂದು ಹೇಳುತ್ತ,
ಸೀದ ತಮ್ಮ ತಲೆಗೇ ಸುರಿದ ಕೆಲವು ಹೂವುಗಳನ್ನು ತೋರಿಸಿದರು. ಅಂದರೆ ಶವ ಈಗಾಗಲೇ ಮಣಿಕರ್ಣಿಕ ಘಾಟ್
ತಲುಪಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಅಗ್ನಿ ಸಂಸ್ಕಾರಕ್ಕೆ ಹೆತ್ತ ಮಗನಿಲ್ಲದಿದ್ದರಾಯಿತೇನು?
ಶಾಸ್ತ್ರೀಯ ಸಂಸ್ಕಾರವಾಗದಿದ್ದಲ್ಲಿ ಆತ್ಮ ಮೋಕ್ಷ ದೊರಕದೆ ಅತಂತ್ರ ಸ್ಥಿತಿಯಲ್ಲಿ ತಿರುಗಾಡೀತು. ಆ
ಪಟ್ಟಣದ ಶ್ರಿಮಂತ ವಣಿಕರಾದ ವೆಂಕಟರಮಣಶ್ರೇಷ್ಠಿಗಳು ಕಾಶಿಗೆ ಹೋಗಿಬರುವ ವೆಚ್ಚವನ್ನು ತಾವು ಧರಿಸುವುದಾಗಿ
ಹೇಳಿದರು. ಕೆಲವರು ಟೆಲಿಫೊನ್ ಆಫೀಸಿಗೆ ಹೋಗಿ ಕಾಶಿಯ ಸಂಸೃತ ಪಾಠಶಾಲೆಯ ಉದ್ದಾಮ ಪಂಡಿತರಿಗೆ ಕಾಲ್
ಬುಕ್ ಮಾಡಿದರು. ಇಂಥ ಪವಿತ್ರ ಲಕ್ಷಣಗಳ ಕಳೇಬರ ಮಣಿಕರ್ಣಿಕ್ ಅ ಘಾಟ್ ತಲುಪಿರುವುದರ ಬಗ್ಗೆ ಮಾಹಿತಿ
ದಯಪಾಲಿಸಬೇಕೆಂದು ವಿನಂತಿಸಿಕೊಂಡರು. ಅಂಥ ಲಕ್ಶಣಗಳ ನೂರಾರು ಹೆಣಗಳು ಮಣಿಕರ್ಣಿಕಾ ಘಾಟ್ನಲ್ಲಿ ಅನಾಥವಾಗಿ
ಬಿದ್ದಿರುವವೆಂದು, ಬಂದು ಹುಡುಕಿಕೊಳ್ಳಿ ಎಂಬ ಸಂದೇಶ ಕಾಶಿಯಿಂದ ಬಂತು. ಅಗ್ರಹಾರಕ್ಕೆಲ್ಲಾ ಅಹಾರಧಾನ್ಯ
ಸಪಲ್ಯಾ ಮಾಡುವ ಶ್ರೇಷ್ಠಿಗಳು ಹೋಗಿಯೇ ಬಂದು ಬಿಡಿ ಎಂದು ಹೇಳಿದರು. ಪರಮೇಶ್ವರ ಶಾಸ್ತ್ರಿಗಳನ್ನು
ಬಸ್ ನಿಲ್ದಾನದಲ್ಲಿರಿಸಿ
ದುಡ್ಡು ತರಲೆಂದು ಮನೆಗೆ ಹೋಗಿದ್ದೇನೋ ನಿಜ. ತಮ್ಮ ಬೊಜ್ಜಿನ ಕಣಿವೆಯಲ್ಲಿದ್ದ ಬೆಳ್ಳಿ ಉಡುದಾರಕ್ಕಿಂತ
ಕರ್ರಗೆ ತೂಗಾಡುತ್ತಿದ್ದ ಬೀಗದ ಕೈಯನ್ನು ಕೈಯಲ್ಲಿ ಹಿಡಿದುಕೊಂಡಿದ್ದೂ ನಿಜ. ಅಷ್ಠೇ ಕರ್ರಗಿದ್ದ ತಿಜೋರಿಯ
ತೂತಿನಲ್ಲಿ ತುರುಕಿದ್ದೂ ನಿಜ. ಅವಸರದಲ್ಲಿ ತುರುಕುವವರಿಗೆ ತೂರುವುದಾದರೂ ಹೇಗೆ? ಅದು ಎಷ್ಟಿದ್ದರೂ
ಬೀಗರು ಕೊಟ್ಟಿದ್ದು. ಎಲ್ಲ ಮಾಹಿತಿ ಸಂಗ್ರಹಿಸಿದ್ದ ಶ್ರೀಮತಿ ರಿಂದಮ್ಮ ಕುಪ್ಪಳಿಸಿ ಗಂಡನೆದುರು ನಿಂತು
ತನ್ನ ಸುಗಾತ್ರದ ಎದೆ ಝಳಪಿದಳು. ಯವನೋ ಬ್ರಾಹ್ಮಣ ಸತ್ತರೆ ತನ್ನ ಗಂಡ ತಿಜೋರಿ ಹಣ ಕೊಡುವುದೆಂದರೇನು?
ತರಾತೆಗೆ ತೆಗೆದುಕೊಂಡಳು. ಆಕೆಯ ಪವಿತ್ರ ಭಗವತಿ ಕಣಿವೆಯಿಂದ ಹುಟ್ಟಿ ಸಹ್ಯಾದ್ರಿ ಶ್ರೇಣಿಗಳನ್ನು
ಈಡಾಡಿ ದಷ್ಟಪುಷ್ಟವಾಗಿ ಬೆಳೆದು ನಿಂತಿದ್ದ ಎಂಟು ಮಂದಿ ಮಕ್ಕಳು ತಮ್ಮ ತಾಯಿಗೆ ಬೇಷರತ್ತಿನ ಬೆಂಬಲ
ಸೂಚಿಸಲು ಬೆಕ್ಕು ಮ್ಯಾಂವ್ಗುಟ್ಟಿ ಹರ್ಷ ಪ್ರಕಟಿಸಿತು. ಬೊಜ್ಜಿನ ಷ್ಯಾಮಲ ವರ್ಣದ ಸಂದಿಯಲ್ಲಿ ಕಪ್ಪುಕೀ
ತೆಪ್ಪನೆ ಉಡುಗಿ ಅಡಗಿ ಕೊಂಡಿತು. ಷವ ಸಂಸ್ಕಾರ ಮುಗಿಯುವವರೆಗೆ ಮುಖಕಮಲವನ್ನು ಸಾರ್ವಜನಿಕವಾಗಿ ತೋರಕೂಡದೆಂದು
ಕಟ್ಟಪ್ಪಣೆ ಮಾದಿ, ಅವರೆಲ್ಲ ಸೇರಿ ಶ್ರೆಷ್ಠಿಯನ್ನು ಉಗ್ರಣದ ಕೋಣೆಯಲ್ಲಿ ಬಚ್ಚಿಟ್ಟುಬಿಟ್ಟರು. ಅಷ್ಟೇ
ಅಲ್ಲ್ದೆ ಚಿಲಕ ಸರಿಸಿ ಬೀಗ ಕೂಡ ಜಡಿದರು. ಸರ್ವ ಪಾಪ ಪರಿಹಾರ್ಥವಾಗಿ ಬ್ರಾಹ್ಮಣರಿಗೆ ಸಹಾಯಮಾಡಬೇಕೆಂಬ
ಸದುದ್ದೇಶದಿಂದ ಉಗ್ರಾಣದ ಪಾಲಾಗಿದ್ದ ಶ್ರೇಷ್ಥಿಯನ್ನು ನೋಡುತ್ತಲೇ ಉಗ್ರಣವನ್ನು ತಮ್ಮ ಕರ್ಯಕ್ಷೇತ್ರ
ಮಾಡಿಕೊಂಡಿದ್ದ ಹೆಗ್ಗಣ ಇಲಿಗಳಿಗೆಲ್ಲ ಹೊಸ ಹುಮ್ಮನಸ್ಸು ಬಂತು. ತಮಗೆ ಬಗೆ ಬಗೆಯಾದ ಹಿಂಸೆ ಕೊಟ್ಟಿರುವ
ಮತ್ತು ಕೊಡುತ್ತಿರುವ ಶೆಟ್ಟಿ ಒಂತಿಯಾಗಿ ಸಿಕ್ಕರೆತಾವು ಏನೆಂಬುದನ್ನು ತೋರಿಸಬೇಕೆಂದು ಅವೂ ಬಹಳ ದಿನಗಳಿಂದ
ಕಾಯುತ್ತಿದ್ದವು. ಹೇಷಾರವದ ಮಾಡುತ್ತಿದ್ದ ಶೆಟ್ಟಿಯ ಸುತ್ತ ಅವೆಲ್ಲ ವರ್ತುಲಾಕಾರವಾಗಿ ನೆರೆತವು.
ತಮ್ಮದೇ ಆದ ಭಾಷೆಯಲ್ಲಿ ಹಿಡಿ ಹಿಡಿ ಶಾಪ ಹಾಕತೊಡಗಿದವು. ಬಗೆಬಗೆಯಾದ ಬಲೆಗಳನ್ನು ಪ್ರಯೋಗಿಸಿ ತಮ್ಮನ್ನು
ಹಿಡಿಸಿ ಸಾಯಿಸುತ್ತಿದ್ದವನು ಇದೇ ಶೆಟ್ಟಿ, ಎಂಥ ಮನುಷ್ಯರಿವರು, ಮೂಷಕ ವಾಹನ್ವನ್ನು ಪೂಜಿಸುತ್ತಾರೆ,
ಅದರೆ ಲಂಬೋದರನಿಗೆ ವಾಹನಗಳದ ತಮ್ಮನ್ನು ಚಿತ್ರಹಿಂಸೆ ಕೊಟ್ಟು ಕೊಲೆಮಾಡಿಸುತ್ತರೆ, ಎಷೊಂದು ಅನಾಗರೀಕರಿ
ನರಹುಳುಗಳು!.... ನಮಗೂ ಅದು ಇದು ತಿಂದು ಬದುಕುವ ಹಕ್ಕಿಲ್ಲವೇನು?
ಹೆಗ್ಗಣಗಳು, ಇಲಿಗಳು ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನುಡಿಯನ್ನು ಪುಷ್ಠೀಕರಿಸುವಂತೆ ಶ್ರೇಷ್ಠಿಯ ಸುತ್ತ
ವರ್ತುಲಾಕಾರದಲ್ಲಿ ನೆರೆದು ಗುರುಗುಟ್ಟಿದವು. ದುರುಗುತ್ತಿದವು. ಕೆಲವು ಘರ್ಜಿಸಿದರೆ, ಇನ್ನು ಕೆಲವು
ಘೀಳಿಟ್ಟವು. ಮತ್ತೆ ಕೆಲವು ಗಹಗಹಿಸಿ ನಕ್ಕವು.
ಶ್ರೇಷ್ಥಿ ಉಸ್ಸೆಂದು ಗದರಿದರೂ ಅವು ಕೇರು ಮಾಡಲಿಲ್ಲ. ತಮ್ಮ ಮೂಷಿಕ ಭಾಷೆಯಲ್ಲಿ ಅವಾಚ್ಯ-ಶಬ್ದ ಪ್ರಯೊಗ
ಮಾಡಿದವು ಮನದಣಿಯೇ. ಆ ದಡ್ಡಗೆ ಅವುಗಳ ಗೀರ್ವಾಣಿ ಅರ್ಥವಾಗಿದ್ದಲ್ಲಿ ಅವಸಾನವನ್ನುಆ ಕೂಡಲೆ ಆಹ್ವಾನಿಸಿಬಿಡುತ್ತಿದ್ದನು.
ಗದಗದ ನಡುಗಲಾರಂಭಿಸಿದನು. ಮಲ ಮೂತ್ರಗಳು ಅಂತಿಮ ಸ್ಥಾನದಲ್ಲಿ ಗುರಿ ಇಟ್ಟು ನಿಂತವು. ಹೆಗ್ಗಣ ಇಲಿಗಳು
ಆತನ ಮೇಲೆ ಠಣ್ಣ ಟಣ್ ಎಗರಡಲಾಂಭಿಸಿದ್ದೇ ಮೊದಲಿಗೆ ಮೂತ್ರ ಮೂತ್ರ ವಿಸರ್ಜನೆಮಾಡಿಕೊಂಡನು. ಇಲಿಯೊಂದು
ಆತನ ಕಿವಿಕಚ್ಚಿತು. ಸೊಂಡಿಲಿಯೊಂದು ಕೆಳದುಟಿಗೆ ಕಾಲೂರಿನಿಂತು ಆತನ ನಾಲಿಗೆಗಾಗಿ ತಡಕಾಡತೊಡಗಿತು.
"ಏಡುಕೊಂಡಲವಾಡ ಚಚ್ಚಿಪೋತಾನು" ಕಿತಾರನೆ ಕಿರಿಚಿದ. ಮಲ ಗುದದ್ವಾರದಿಂದ ಕಿತ್ತು ಬಂತು.
ಆವನು ಹೀಗೆ ಉಗ್ರಣದಲ್ಲಿ ವಿಲವಿಲ ಒದ್ದಾಡುತ್ತಿರಲು ಇತ್ತ ಬುಸ್ ನಿಲ್ದಾಣದಲ್ಲಿ ಪರಮೇಶ್ವರ ಶಾಸ್ತ್ರಿಗಳು
"ಶ್ರೇಷ್ಠಿಗಳ ಆಗಮನದಲ್ಲಿ ವಿಳಂಬವಾಗುತ್ತಿದೆಯಲ್ಲಾ.... ರಾಮಾ ರಾಮಾ" ಎಂದು ಪರಿತಪಿಸಿತ್ತಿದ್ದರು.
ಅಷ್ತರಲ್ಲಿ ಅಮರ ಕೋಶದಲ್ಲಿ ನಿಷ್ಣಾತರಾದ, ಸಿದ್ಧಾಂತ ಶಿಖಾಮಣಿ ಎಂಬ ಬಿರುದನ್ನು ತಮ್ಮ ಹೆಂಡತಿಯಿಂದ
ಪದೆದುಕೊಂಡಂಥವರಾದ, ಗುಂಡಾಭಟ್ಟರು ಏಳುತ್ತಾ ಬೀಳುತ್ತ ಸಡಲಿದ್ದ ಧೋತರವನ್ನು ಲೆಕ್ಕಿಸದೆ ಓಡಿಬಂದರು.
ಅವರನ್ನು ಬೆನ್ನಟ್ಟಿ ಬಂದ ಎರಡು ನಾಯಿಗಳು ಅಷ್ಟು ದೂರ ಹೇಷಾರವ ಮಾಡುತ್ತ ನಿಂತುಕೊಂಡವು.
"ಶಾಸ್ತ್ರಿಗಳೇ... ಅಪಚಾರವಾಯಿತು... ಅಪಚಾರವಾಯಿತು" ಭಟ್ಟರು ಧೋತರದ ನಿರಿಗೆ ಸರಿಪಡಿಸಿಕೊಂಡು ಕಚ್ಚೆ
ಸರಿಯಾಗಿ ಕಟ್ಟಿಕೊಂಡರು. ಅವರ ಗ್ಲೋಬಾಕಾರದ ಹೊಟ್ಟೆಯ ಮೇಲೆ ಬೆವರು ಮೆತ್ತಿಕೊಂದಿತ್ತು.
ಶಾಸ್ತ್ರಿಗಳು ಜೀವಮಾನದಲ್ಲಿ ಪ್ರಥಮಬಾರಿಗೆ ದಿಗ್ಭ್ರಮೆಗೊಂಡರು.
ಪ್ರಶ್ನಾರ್ಥಕವಾಗಿ ನೋಡಿದರು. ಮಾತುಗಳು ಗಂಟಲಲ್ಲಿ ಪದ್ಮಾಸನ ಹಾಕಿದವು. ಮಾತಿಗಿಂತ ಮೌನವನ್ನೇ ಹೆಚ್ಚು
ಪ್ರೀತಿಸುತ್ತಿದ್ದ ಶಾಸ್ತ್ರಿಗಳಿಗೆ ಹೇಗೆ ಹೇಳುವುದು? ಹೇಳದೆ ಇರಲಿಕ್ಕಾದೀತೆ? ಉತ್ತರೀಯ ಬಾಯಿಗೆ
ಅಡ್ಡ ಇಟ್ಟುಕೊಂಡು ಬಿಕ್ಕಿದರು ಭಟ್ಟರು.
"ನೋಡಿ ಶಾಸ್ತ್ರಿಗಳೇ, ಪ್ರಪಂಚ ತುಂಬಾನೇ ಕೆಟ್ಟು ಹೋಗಿದೆ. ಧನ ಇಶಾಚಿಯ ಮೋಹ ಪಾಶಕ್ಕೆ ಸಿಲುಕಿ ಜನಗಳು
ಮಾಡಬಾರದ ನೀಚ ಕೆಲಸ ಮಾಡಿದ್ದಾರೆ. ಮಾನವರು ಸನಾತನ ಧರ್ಮ ಮರೆತು ನರಕಕ್ಕೆ ಹೊಗ್ತಿದಾರಲ್ಲ?" ಗುಂಡಾಭಟ್ಟರು
ಬಿಕ್ಕಿ ಬಿಕ್ಕಿ ಅಳತೊಡಗಿದರು.
ಎರಡು ದಿನಗಳಿಂದ ಅನ್ನ ನೀರು ಬಿತ್ತ ಸಲ್ಲೇಖನ ವ್ರತ ಸ್ವೀಕರಿಸಿದವರಂತಿದ್ದ ಶಾಸ್ತ್ರಿಗಳಿಗೆ ಕೋಪ
ನೆತ್ತಿಗೇರಿಬಿಟ್ಟಿತು. ಎರಡನೆ ಊಟಕ್ಕೆ ಎಂದೂ ಶ್ರೀಕಾರ ಹೇಳಿದವರಲ್ಲ. ತಂದೆ ವೈಕುಂಟವಾಸಿಗಳಾಗಿರುವುದೊಂದು
ಸಿಟ್ಟು, ಪಿತಾಶ್ರೀ ತಮ್ಮ ಕಳೆಬರವನ್ನು ಆಕಾಶಮಾರ್ಗವಾಗಿ ಕಾಶಿಗೆ ಒಯ್ದಿರುವುದೊಂದು ಸಿಟ್ಟು, ಶ್ರೇಷ್ಟಿಗಳು
ಹಣದ ಹಸ್ತ ಚಾಚದೆ ನಾಪತ್ತೆಯಾಗಿರುವುದೊಂದು ಸಿಟ್ಟು, ಏ ಎಲ್ಲಾ ಸಿಟ್ಟುಗಳಿಗೆ ಕಿರೀಟಪ್ರಾಯವಾಗಿ ಈ
ಸಿದ್ದಾಂತ ಶಿಖಾಮಣಿ ಗುಂಡಾಭಟ್ಟರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿರುವುದು. ಭಟ್ಟ ನೋಡಲಿಕ್ಕೆ
ಕುಳ್ಳಕಿದ್ದರೂ ಸದ್ವಿನಯಶಾಲಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹೇಳೋದು ಹೇಳಿಬಿಡಬಾರದೆ? ಅಪ್ರಿಯ
ಸಂಗತಿ ಕೇಳಿ ಶಾಪ ಕೊಡಲು ತಾನೇನು ಅಗಸ್ಥ್ಯ ಮಹರ್ಷಿಯೇ?
"ಲಕ್ವ ಬಡಿಡವರ ಹಾಗೆ ಮಾತಾಡ್ತೀಯಲ್ಲ ಭಟ್ಟ, ಅದೇನು ಒಡೆದು ಹೇಳಬಾರದೆ?" ಶಾಸ್ತ್ರಿಗಳ ಜಠರ ಲೋಕ ತಳಮಳಿಸಿತು.
ಯಾವ ನಾಲಿಗೆಯಲ್ಲಿ ಹೇಳಲಿ ಶಾಸ್ತ್ರಿಗಳೇ, ನಿಮ್ಮಿಂದ ರುದ್ರ ಚಮಕ ಕಲಿತೋನು ನಾನು" ಭಟ್ಟ ಉಗುಳು ನುಂಗಿ
ಮುಂದುವರೆದು ಹೇಳಿದ. "ನಿಮ್ಮ ಪರಮಪೂಜ್ಯ ತಂದೆಯವರ ದೇಹ ಬಸವನ ಬಾವಿ ತೆಗ್ಗಿನಲ್ಲಿ ಅನಾಥವಾಗಿ ಬಿದ್ದಿದೆ.
ಅಯ್ಯೋ... ಯಾವುದನ್ನು ಹೇಳಬಾರದೆಂದು ನಿರ್ಧರಿಸಿದ್ದೇನೋ ಅದೇ ಹೇಳಿಬಿಟ್ಟೆನಲ್ಲಾ? ನಾಲಿಗೆ ಮೈಲಿಗೆಯಾಗಿ
ಬಿಟ್ಟಿತಲ್ಲಾ... ಅಯ್ಯೋ.... ನನ್ನಂಥ ಪಾಪಿ ಇದ್ದರೆಷ್ಟು, ಬಿದ್ದು ಹೋದರೆಷ್ಟು" ವಾಯು
ಪ್ರಕೋಪಪಿತ್ತ ಇತ್ಯಾದಿ ಕೆರಳಿ ಜೋರಾಗಿ ಅಳತೊಡಗಿದರು.
ಬಸ್ಸಿಗಾಗಿ ಕಾದಿದ್ದ ಜನ ಅವರ ಸುತ್ತ ನೆರೆದು ಏನು ಎಂಥ ವಿಚಾರಿಸತೊಡಗಿದರು. ಅವರೆಲ್ಲರಿಗು ಸಹಾಯಮಾಡಬೇಕೆಂಬಾಸೆ!
ಶಾಸ್ತ್ರಿಗಳು ಅದನ್ನು ಕೇಳಿ ’ಅಯ್ಯೋ’ ಎಂದು ಮೂರ್ಛೆ ಹೋದರು. ಅವರು ಮೂರ್ಛೆ ಹೋದದ್ದು ಅದೇ ಪ್ರಥಮ.
ಸಾವಿರದೊಂದು ಗಾಯತಿ ಜಪಿಸಿ ಅರಿಷಡ್ವರ್ಗಗಳ ಮೂಗಿಗೆ ಇಚ್ಛಾಶಕ್ತಿಯ ಮೂಗುದಾರ ಹಾಕಿದಂತವರು, ಪ್ರಾತಃ
ಪೂರ್ವದಲ್ಲಿ ಅರ್ಧ ತಾಸು ಶಾಸ್ತ್ರೊಕ್ತ ಪ್ರಾಣಾಯಾಮ ಮಾಡಿ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂದಿದ್ದಂಥವರು.
ತಾವು ನುಡಿದಂತೆಯೇ ನಡೆಯುತ್ತೇವೆ ಎಂದು ಅವರು ಆಗಾಗ್ಗೆ ಹೇಳುತ್ತಿದ್ದವರು, ಅಂಥವರೇ ಮೂರ್ಛೆ ಹೋದರೆಂದರೇನು?
ಕಾಲಮಹಿಮೆ ವರ್ಣಿಸದಳ.
ನೂರಾರು ಜನ ನೂರಾರು ದಿಕ್ಕಿಗೆ ಚದುರಿದರು. ಚರಕ ಸುಶ್ರುತರನ್ನು ಹುಡುಕಿ ಕರೆ ತರಲು ಆ ಗ್ರಾಮದ ಅಸ್ವಿನಿ
ಕುಮಾರರು, ಚರಕರು, ಸುಶ್ರುತರು ಅನೇಕ ವಿಧವಾದ ಮನರಂಜನೆಯಲ್ಲಿ ಮಗ್ನರಾಗಿದ್ದರು. ಆ ಗ್ರಮಕ್ಕೆ ಹೊಸದಾಗಿ
ವೈನ್ ಶಾಪು ಬಂದಿದ್ದೂ ಒಂದು ಕಾರಣ.
ಕೊನೆಗೆ ಕುರುಬರ ಸೋಮಣ್ಣ ಎಂಬ ಏಳೆಂಪಿ ಸಿಕ್ಕ. ದಿಬ್ಬನ ಸುಪುತ್ರ ಕೊತ್ರಗೆ ಇಲಾಜು ಮಾಡಿ ’ಕೊತ್ರ
ಹೈಸ್ಕೂಲಿಗೆ ಸೇರಿದ್ದು’ ಎಂಬ ಕದಂಬರಿಯಲ್ಲಿ ಸೇರ್ಪಡೆಯಾಗಿ ಹೆಸರಾಗಿದ್ದಂಥವನು. ಸದಾ ಕುಡಿದವರಂತಿರುತ್ತಿದ್ದ
ಅವನು ಕುಡುಕನಾಗಿರಲ್ಲಿಲ್ಲ.
ಹತ್ತಾರು ಮರಣಾಂತಿಕ ಜಾಡ್ಯಗಳಿಗೆ ಆತ ತನ್ನ ದೇಹವನ್ನು ಲೀಜ್ ಕೊಟ್ಟಿದ್ದಾನೆ ಎಂಬಂತೆ ಹೊರನೋಟಕ್ಕೆ
ಗೋಚರವಾಗುತ್ತಿದ್ದರೂ ಆತ ಹಂಡ್ರೆಡ್ ಪರ್ಸೆಂಟ್ ಆರೋಗ್ಯವಂತನಾಗಿಯೇ ಇದ್ದ.
ಡಾ|ಸೋಮಣ್ಣ ತಾನು ಶೂದ್ರಾದಿ ಶೂದ್ರ ಎಂಬ ಕಾರಣಕ್ಕೆ ಶಾಸ್ತ್ರಿಗಳ ಪವಿತ್ರ ಬಾಡಿ ಮುಟ್ಟಲು ಹೆದರಿದ.
ಎಲ್ಲಿ ಸುಟ್ಟು ಭಸ್ಮವಾಗಿ ಬಿಡುವೆನೋ ಎಂಬ ಕಾರಣದಿಂದ ಮುಟ್ಟಿ ಮುಟ್ಟಿ ನೋಡದೆ ಕೊನೆಗೂ ಮುತ್ತಿದನು.
ಇದಕ್ಕೆ ಮಾತ್ರೆಗಳಗಾಲೀ ಸೂಜಿಗಳಗಲೀ ಬೇಡವೆಂದು ಕೊಂಡನು. ಅಳೋಪಥಿಯನು ಅವರ ದೇಹದೊಳಗಡೆ ಅಲೋ ಮಾಡಿ
ನರಕಪ್ರಾಪ್ತಿ ಮಾಡಿಕೊಳ್ಳುವುದಾದರೂ ಯಾಕೆ?
ತನ್ನ ಸೊಂಟದ ಗಂತಿನಿಂದ ನಶ್ಶೆ ದಬ್ಬಿ ತೆಗೆದನು. ಒಂದು ಚಿಟಿಕೆ ನಶ್ಶೆಯನ್ನು ಆ ಶಾಸ್ತ್ರಿಗಳ ದವಳಕಾಂತಿ
ಮೂಗಿನ ಹೊಳ್ಳೆಗಳೊಳಭಿತ್ತಿಗೆ ನಯವಾಗಿ ಲೇಪಿಸಿದನು.
ಅದರ ಘಾಟು ಕುಂದಲಿನೀ ಕೇಂದ್ರ ತಲುಪಿದೊಡನೆ ಶಾಸ್ತ್ರಿಗಳು ದಿಗ್ಗನೆ ಎದ್ದು ಕೂತು ’ತಂದೆಯೇ’ ಎಂದು
ಹಲುಬಿದರು.
ಪಂಚಭೂತಗಳನ್ನು ಕಾಲುಗಳಿಗೆ ತಂದುಕೊಂಡು ಬಸವನ ಬಾವಿ ತಗ್ಗಿನ ಕಡೆ ಓಡತೊಡಗಿದರು. ಶಾಸ್ತ್ರಿಗಳಿಗೂ
ಓಡಲು ಬರುತ್ತದೆ ಎನ್ನುವುದು ಜನರು ಕಂಡುಕೊಂಡ ವಿಶೇಷ ಅವರೂ ಅವರ ಹಿಂದೆ ಓಡತೊಡಗಿದರು.
ಕ್ಷಣಾರ್ಧದಲ್ಲಿ ಇತಿಹಾಸ ಪ್ರಸಿದ್ದ ಬಸವನ ಬಾವಿ ತಲುಪಿದರು. ಅಷ್ಟು ಹೊತ್ತಿಗಾಗಲೇ ಜನರ ಪ್ರವಾಹ ಅಲ್ಲಿ
ನೆರೆದಿತ್ತು. ಅವರಲ್ಲಿ ಹಲವರು ವಿವಿದ ದರ್ಜೆಯ ಸರಕಾರಿ ಅಧಿಕಾರಿಗಳಿದ್ದರು. ಅವರೆಲ್ಲ ಲಂಚ ಹೊಡೆಯುವುದರಲ್ಲಿ,
ಭ್ರಷ್ಠಾಚಾರ ಮಾಡುವುದರಲ್ಲಿ ಪ್ರಖ್ಯಾತರಾಗಿದ್ದರು. ಚರಾಸ್ತಿ, ಸ್ಥಿರಾಸ್ರಿ ಸಾಕಷ್ಟಿದ್ದರೂ ಪಾಪ
ಪ್ರಜ್ಞೆಯಿಂದ ನರಳುತ್ತಿದ್ದರು. ಗತಿಸಿದ ಶಾಸ್ತ್ರಿಗಳನ್ನು ಮನೆಗೆ ಕರೆಸಿಕೋ\ಒಂಡು ವಾರಕ್ಕೊಂದೆರಡದರೂ
ವ್ರತೋಪಾಸನೆಗಳನ್ನು ಮಾಡಿ ರಿಯಾಯಿತಿ
ಪಡೆದುಕೊಳ್ಳುತ್ತಿದ್ದರು.
ಅವರೆಲ್ಲರಿಗೆ ಶಾಸ್ತ್ರಿಗಳ ದೇಹ ತಿಪ್ಪೆಯ ಮೇಲೆ ಬಿದ್ದಿರುವುದು ದುಃಖದಾಯಕವಾಗಿತ್ತು/ ಅದೆಲ್ಲಕ್ಕಿಂತ
ದುಃಖದ ಸಂಗತಿ ಎಂದರೆ ಶಾಸ್ತ್ರಿಗಳ ತಲೆಯಮೇಲೆ ಕಾಗೆಯೊಂದು ಕೂತು ಅವರ ಜುಟ್ಟನ್ನು ಮೂಸಿ ನೋಡುತ್ತಿದ್ದುದು.
ಅದೆಲ್ಲಕ್ಕಿಂತ ಮತ್ತಷ್ಟು ದುಃಖಕರ ಸಂಗತಿ ಎಂದರೆ ಯಾರೋ ದುರುಳರು ಶಾಸ್ತ್ರಿಗಳ ಮುಂಗೈಯನ್ನೇ ತುಂಡರಿಸಿ
ಗಂಟ್ವುಳ್ಳ ಚಿನ್ನದ ಕಡಗವನ್ನು ಅಪರರಿಸಿದ್ದರು.
ಇದು ಕುಟುಂಬದ ದೊಡ್ಡ ದುರಂತವೇ ಸರಿ. ಚಿನ್ನದ ಆಸೆಗೆ ದುರುಳರು ಪವಿತ್ರ ದೇಹವನ್ನೇ ಅಪಹರಿಸಿದರಲ್ಲ?
ಸಮಾಜಕ್ಕೆ ಕಾದಿರುವ ದುರಂತಗಳಿಗೆ ಇದು ಪಾರ್ವಭಾವಿ ಮುನ್ಸೂಚನೆ ಮಾತ್ರ.
ಈ ಭೀಕರ ದೃಷ್ಯ ನೋಡಿ ಕಣ್ಣಲ್ಲಿ ನೀರು ಹಾಕಿಕೊಳ್ಳದವರೇ ಇಲ್ಲ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತಿದ್ದ
ಶಾಸ್ತ್ರಿಗಳು ಸಾವಿನ ನಂತರ ಇಂತಹ ದುರಂತಕ್ಕೆ ತುತ್ತಾಗುವುದೆಂದರೇನು?
ಎಲ್ಲರೂ ಮಮ್ಮಲನೆ ಮರುಗಿದರು. ಪರಮೇಶ್ವರ ಶಾಸ್ತ್ರಿಗಳನ್ನು ದುಃಖದ ಕಡಲಿನಿಂದ ಹೊರ ತೆಗೆದರು. ಮುಂದಿನ
ಕಾರ್ಯಕ್ರಮ ಸುಗಮವಾಗಿ ಜರುಗಿಸುವಂತೆ ಸಲಹೆ ಸೂಚನೆ ನೀಡಿದರು.
ಅಂಗೈ ವಿಹೀನ ಕಳೆಬರಕ್ಕೆ ಅಗ್ನಿ ಸಂಸ್ಕಾರ ಮಾಡುವುದಾದರೂ ಹೇಗೆ?
ತಮ್ಮ ತಂದೆಯ ಯಜ್ಞದಲ್ಲಿ ದೇಹತ್ಯಾಗ ಮಾಡಿದ ದಾಕ್ಷಾಯಣಿಗೂ ಇಂಥದೇ ಗತಿಯಾಯಿತು. ಬೆಂಕಿಯಲ್ಲಿ ಬೆಂದ
ಪತ್ನಿಯ ಕಳೇಬರವನ್ನು ಹೊತ್ತುಕೊಂಡು ಸಾಕ್ಷಾತ್ ಪರಮೇಶ್ವರನೇ ಹುಚ್ಚನಂತೆ ಅಲೆದ. ದಾಕ್ಷಾಯಣಿಯ
ಆಂಗೋಪಾಂಗಗಳೆಲ್ಲ ಎಲ್ಲೆಲ್ಲೋ ಉದುರಿ ಹೋಗಿಬಿಟ್ಟವು. ಅಗ್ನಿ ಸಂಸ್ಕಾರ ಮಾಡಬೇಕೆಂದರೆ ಆಕೆತ ಕೆಲವು
ಉಪಾಂಗಗಳು ದೊರಕಲಿಲ್ಲ. ಆದ್ದರಿಂದ ಆಕೆಗೆ ಪುನರ್ಜನ್ಮ ಪ್ರಾಪ್ತವಾಯಿತು.
ಈ ಕಾರಣಕ್ಕಾಗಿ ಬಹಳ ಜನ ಬಹಳ ಹೊತ್ತಿಗೆ ತುಂಡರಿಸಿದ್ದ ಮುಂಗೈಗಾಗಿ ಹುಡುಕೀ ಹುಡುಕೀ ಸುಸ್ತಾದರು.
ಮುಂಗೈ ಸಿಕ್ಕದಿದ್ದರೆ ಕುರುಬರ ಸೋಮಣ್ಣನ ಕೂಡ ಬಂದೋಬಸ್ತು ಹೋಲಿಸಿ ಅಗ್ನಿಗಾಹುತಿ ಕೊಡುವುದಿತ್ತು.
ತಮ್ಮ ಪೂಜ್ಯ ಪಿತಾಶ್ರೀ ಪುನರ್ಜನ್ಮ ಪಡೆದರೆ ಖಂಡಿತ ಕಲಿಕಾಲ ಸಹಿಸಲಾರರು. ಅಹರ್ನಿಶಿ ಸನಾತನ ಧರ್ಮ
ಪ್ರತಿಷ್ಠಾಪನೆಗೆ ಹೋರಾಡದೆ ಇರಲಾರರು? ಎಂದೆಲ್ಲ ಯೊಚಿಸಿದರು ಜೂ. ಶಾಸ್ತ್ರಿಗಳು.
ಮುಂದೊದು ದಿನ ತಮ್ಮ ಧರ್ಮಪತ್ನಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡುವಳೆಂದು ತಿಳಿದರು. ಆದರೆ ಅವರ
ನಿರೀಕ್ಷೆಯಂತೆ ಆಕೆ ಗರ್ಭ ದರಿಸಿದ್ದೇನೋ ನಿಜ. ಆಗರ್ಭಕ್ಕೆ ಒಂಬತ್ತು ತಿಂಗಳು ತುಂಬಿದ್ದೇನೋ ನಿಜ.
ಆದರೆ ಆ ಮಗು ಯೋನಿ ಮಾರ್ಗಕ್ಕೆ ಕಾಲು ತೂರಿಸಿ ಹೆರಿಗೆಗೆ ತುಂಬ ತೊಂದರೆ ಕೊಟ್ಟಿತು. ತಾನೂ ಸತ್ತುದಲ್ಲದೆ
ತನ್ನ ತಾಯಿಯನ್ನೂ ಬಲಿ ತೆಗೆದುಕೊಂಡಿತು. ಅಲ್ಲಿಯವರೆ ತಾವು ಅಕಾಲ ಮರಣಕ್ಕೆ ತುತ್ತಾಗದ್ದಿದ್ದಲ್ಲಿ
ತಮ್ಮ ಜೇಷ್ಠ ಪುತ್ರ ಸಕಲ ಕಲಾಪಾರಂಗತನಾಗಿ ದೊಡ್ಡವನಾದಲ್ಲಿ ಅವನಿಗೆ ಯುಕ್ತ ವಯಸ್ಸಿನಲ್ಲಿ ಕಂಕಣ ಬಲ
ಕೂಡಿ ಬಂದಲ್ಲಿ, ಆತನ ಧರ್ಮ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಲ್ಲಿ, ತಮ್ಮ ತಂದೆಯವರ ಹೆಸರು ಇಡಬೇಕು
ಎಂದು ನಿಶ್ಚಯಿಸಿದರು.
ಮಗ ಎಂದರೆ ಮಗನೇ ಸರಿ. ಎಂಥ ಕತೃತ್ವಶಾಲಿ ಅವನು. ಸಂಸಾರ ಮಾಡಿದ ತಿಂಗಳೋಪ್ಪತ್ತಿನಲ್ಲಿ ಗಂಡು ಮಗುವಿಗೆ
ಬೀಜ ಬಿತ್ತಿಬಿತ್ತಿದ್ದನಲ್ಲ? ಪ್ರಸ್ಥದ ಮೊದಲನೆ ದಿನ ಆತನ
ಹೆಂಡತಿ ತುಂಬಾ ರಂಪಾಟ ಮಾಡಬಹುದೆಂದು ಎಲ್ಲರು ಭಾವಿಸಿದ್ದರು. ಚಿಲಕ ಹಾಕಿಕೊಳ್ಳುತ್ತಲೇ ಆಕೆ ಲಬೋ
ಲಬೋ ಬಾಯಿ ಬಡಿದುಕೊಂಡಿದ್ದೇನೋ ನಿಜ. ನೋವು ನೋವು ಎಮ್ದು ಕಿರುಚಾಡಿದ್ದೂ ನಿಜ. ಆದರೆ ಮಿಲಿಟರಿ ಹ್ಯಾಂಡು
ಅಶ್ವಥ್ ನಾರಾಯಣ ಅದಕ್ಕೆ ಸೊಪ್ಪು ಹಾಕಿದ್ದಲ್ಲಿ ಇಂಥದ್ದೊಂದು ಹೊಟ್ಟೆಯ ಮಾಣಿಕ್ಯದ ಹರಳು ಉದುರಿ ಬೀಳುತ್ತಿತ್ತೇನು
ಈ ಧರೆಗೆ.
ಸುತ್ತು ನಾಲ್ಕು ಕಡೆಯ ಬೀಗರು ಬಿಜ್ಜರನ್ನು ಕರೆಯಿಸಿ, ಜೊತೆಗೆ ವೇದಪಾರಾಯಣ ಮಾಡಿದವರನ್ನು, ಗಂಗಾದಿ
ನದಿ ತೀರ್ಥಗಳಲ್ಲಿ ಸ್ನಾನ ಮಾಡಿ ಫಲ ಪಡೆದವರನ್ನು; ಕೃಚ್ಛಾದಿ ತಪಸ್ಸಿನ ಫಲ ಪದೆದವರನ್ನು ಕರೆಸಿದರು.
ನೂರಾರು ತಾಮ್ರದ ತಂಬಿಕೆಗಳು ಕಡಿಮೆ ಬೆಳಕನ್ನು ಹೆಚ್ಚಿಗೆ ಪ್ರತಿಫಲಿಸಿದವು. ಮನೆ ತುಂಬ ಬಾಲಂಗೋಚಿಗಳು
ವಿಶೇಷ ಶೋಭೆ ನೀಡಿದವು. ಆ ಶೋಭೆ ಪರಮಾರ್ಥಕ್ಕೆ ಸಮಾನನಾಗಿದ್ದಿತು.
ತಾವು ಸತ್ಯನಾರಾಯಣ ವ್ರತ ಮಾಡಿಸಿದಂಥ ಎಲ್ಲ ಶ್ರೀಮಂತರ ಸಹಾಯ ಪಡೆದು ಚಿರೋಟಿ, ಪಾಯಸ, ಬಾಳೆಕಾಯಿ ಬಾಳಕ,
ಕೋಸುಂಬರಿ, ಪುಳಿಯೋಗರೆ, ಘಮಘಮ ಆಂಧ್ರ ಶೈಲಿಯ ’ರಸಂ’ ತನ್ನ ಪರಿಮಳವನ್ನು ಇಡೀ ಓಣಿಗೆ ಬೀರಿತ್ತು.
ವೇದಪುರಾಣ ಅರಗಿಸಿಕೊಂಡವರೆಲ್ಲ ಭಕ್ಷ್ಯ ಭೋಜ್ಯಗಳನ್ನು ಲಗಾಯಿಸುತ್ತ ಕಂಠಪೂರ್ತಿ ಹೊಗಳಿದ್ದೇ ಹೊಗಳಿದ್ದು.
ತಾಂಬೂಲ ಮೆಲ್ಲುವಾಗ್ಗೆ ಶಾಸ್ರಿಗಳ ಮೊಮ್ಮಗನ ಜನ್ಮ ನಕ್ಷತ್ರವನ್ನು ಹೊಗಳಿದ್ದೇ ಹೊಗಳಿದ್ದು. ಪ್ರಧಾನ
ಮಂತ್ರಿಗಳಂಥವರಿಗೆ ಕುಟುಂಬದ ಪುರೋಹಿತನಾಗುವನೆಂದು ಒಬ್ಬರು ಹೇಳಿದರು ಮತ್ತೊಬ್ಬರು ವ್ಯಾಕರಣದ ವಿಷಯದಲ್ಲಿ
ಪಾಣಿನಿಯನ್ನೇ ಮೀರಿಸುವನೆಂದು ಹೇಳಿದರು. ಮಗದೊಬ್ಬರು ಅಮೇರಿಕದ ಅಧ್ಯಕ್ಷರಂಥವರಿಗೆ ಅಷ್ಟಾಂಗಯೋಗ,
ಪ್ರಾಣಾಯಾಮ ಮುಂತಾದಯೋಗಗಳನ್ನು ಅಭ್ಯಾಸ ಮಾಡಿಸಿ ದೇಶಕ್ಕೆ ಕೀರ್ತಿ ತರುವನೆಂದು ಹೇಳಿದರು. ಹೀಗೆ ಒಬ್ಬೊಬ್ಬ
ಮಾರ್ತಾಂಡರು ಒಂದೊಂದು ನುಡಿದು ಪರಮೇಶ್ವರ ಶಾಸ್ತ್ರಿಗಳನ್ನು ಸಂತೃಪ್ತಿಗೋಳಿಸಿದರು.
ಎಲ್ಲರನ್ನು ಕಾಡಿದ್ದು ಒಂದೇ ಒಂದು ಪ್ರಶ್ನೆ. ದೇಶ ಸೇವೆಯೇ ಈಶನ ಸೇವೆ ಎಂದು ಭಾವಿಸಿರುವ ಶಾಸ್ತ್ರಿಗಳ
ಮಗ ಅಶ್ವಥ್ ನಾರಾಯಣ ತನ್ನ ಮಗನ ನಾಮಕರಣಕ್ಕಾಗಿ ಬರಬಹುದಿತ್ತಲ್ಲ?
ಎಲ್ಲ ಸನಾತನಿಗಳನ್ನು ಕಾಡಿದ ಮತ್ತೊಂದು ಪ್ರಶ್ನೆ ಎಂದರೆ, ಸೇನೆಯಲ್ಲಿರುವ ಮಗ ಸರಿಯಾಗಿ ಸಂಧ್ಯಾವಂದನೆ
ಮಾಡಿಕೊಳ್ಳುತ್ತಿರುವನೆ? ಮದ್ಯ ಅಮೇಧ್ಯದಿಂದ ದೂರ ಇರುವನೆ? ದೂರವಿದ್ದರೆ ಎಷ್ಟು ದೂರ ಇರುತ್ತಾನೆ,
ಪರಸ್ತ್ರೀಯರನ್ನು ಅಕ್ಕ ತಂಗಿಯರಂತೆ ಭಾವಿಸುವಷ್ಟು ಮನೋದಾರ್ಡ್ಯ ಪಡೆದಿರುವನೇ?
ಪರಮೇಶ್ವರ ಶಾಸ್ತ್ರಿಗಳಿಗೆ ಸಾಕು ಸಾಕಾಗಿ ಹೋಯಿತು ಉತ್ತರ ಕೊಟ್ಟು ಕೊಟ್ಟು.
ಅವರವರ ಘನತೆ ಗಾಂಭೀರ್ಯಕ್ಕೆ ತಕ್ಕಂತೆ ಮಾನ ಮರ್ಯಾದೆ ಮಾಡಿ ಅವರನ್ನು ಅವರವರ ಅಗ್ರಹಾರಗಳಿಗೆ ಸಾಗುಹಾಕಿದರು.
ಮೊಮ್ಮಗನ ಕಿವಿಗೆ ಸದಾ ಸಂಸ್ಕೃತ ಶ್ಲೋಕಗಳೇ ಬೀಳುತ್ತಿರಬೇಕೆಂದು ಮನೆಯಲ್ಲಿ ಎಲ್ಲರಿಗೆ ಹೇಳಿದರು.
ವಿಷ್ಣು ಸಹಸ್ರನಾಮ ಹೇಳುವಾಗಲಂತೂ ಮಗು ಇಷ್ಟಗಲ ಬಾಯಿ ತೆರೆಯುತ್ತಿತ್ತು. ರಾಮನಾಮ ಸ್ಮರಣೆ ಕಿವಿಗೆ
ಬಿದ್ದಾಗಂತೂ ಅದರ ಮುಖ ಗಾಂಭೀರ್ಯದಿಂದ ಹೊಳೆಯುತ್ತಿತ್ತು.
ತಮ್ಮ ಮೊಮ್ಮಗ ಯುಕ್ತ ವಯಸ್ಸು ತಲುಪುವ ಹೊತ್ತಿಗೆ ನಾಲ್ಕು ವೇದಗಳ ಪೈಕಿ ಮೂರು ವೇದಗಳನ್ನಾದರೂ ಕರತಲಾಮಲಕ
ಮಾಡಿಕೊಳ್ಳುತ್ತಾನೆಂದು ಬಗೆದರು. ತಮ್ಮ ಪ್ರತಿಯೊಂದು
ವೈದಿಕ ವಿಧಿಗಳೊಂದಿಗೆ ಮೊಮ್ಮಗನನ್ನು ಕುಳ್ಳರಿಸಿಕೊಳ್ಳುತ್ತಿದ್ದರು.
ಮೊಮ್ಮಗನ ಕಾಳಜಿಯೊಂದಿಗೆ ಸೊಸೆಯ ಪಾವಿತ್ರ್ಯದ ಬಗೆಗೂ ಹೆಚ್ಚು ಗಮನ ಹರಿಸಬೇಕಾಯಿತು ಶಾಸ್ತ್ರಿಗಳಿಗೆ.
ಆಕೆ ಯಾಕೆ ಹಗಲೆಲ್ಲ ತೂಕಡಿಸುತ್ತಿದ್ದಳೆಂದರೆ ಆಕೆ ಇಡೀ ರಾತ್ರಿ ನಿದ್ರಾ ನಡಿಗೆ ಮಾಡುತ್ತಿದ್ದಳು.
ಅಡಿಗೆ ಮನೆಯನ್ನು ಬಾತ್ರೂಮ್ ಎಂದು ತಿಳಿದುಕೊಳ್ಳುತ್ತಿದ್ದಳು. ಬೆಡ್ರೂಮನ್ನು ಕಿಚನ್ ರೂಮೆಂದು ತಿಳಿದುಕೊಳ್ಳುತ್ತಿದ್ದಳು.
ಅಡಿಗೆ ಮಾಡುವಾಗಲೂ ಅಷ್ಟೇ ಸಕ್ಕರೆಯನ್ನು ಉಪ್ಪೆಂದು ಭಾವಿಸುತ್ತಿದ್ದಳು. ಉಪ್ಪನ್ನು ಸಕ್ಕರೆ ಎಂದು
ಭಾವಿಸುತ್ತಿದ್ದಳು.
ಸೊಸೆಯ ಈ ವರ್ತನೆ ಶಾಸ್ತ್ರಿಗಳಿಗೆ ವಿಚಿತ್ರವೆನ್ನಿಸಿತು. ಇನ್ನೊಂದು ಅವರಿಗೆ ಅಘಾತಕಾರಿ ಎಂದು ಕಂಡ
ಬಂದ ಸಂಗತಿ ಎಂದರೆ, ಒಂದೊಂದು ರಾತ್ರಿ ಆಕೆ ಅವರ ಮಗ್ಗುಲು ಬಂದು ಮಲಗಿಕೊಳ್ಳುತ್ತಿದ್ದುದು. ತಮ್ಮ
ಪೃಷ್ಠಭಾಗದ ಮೇಲೆ ಆಕೆ ದಪ್ಪನೆಯ ಕಾಲು ಹೇರಿದಾಗಲೇ ಅವರಿಗೆ ಗೊತ್ತಾಗುತ್ತಿದ್ದುದು.ಈ ಸೊಸೆಯ ಈ ತೆರನ
ವಿಚಿತ್ರ ನದವಳಿಕೆಯನ್ನು ಹೇಗೆ ರಿಪೇರಿ ಮಾಡೋದು ಎಂಬ ಚಿಂತೆ ಕಾಡತೊಡಗಿತ್ತು. ಬೇಕಾಗಿಯೇ ಈ ರೀತಿ
ಆಕೆ ವರ್ತಿಸುತ್ತಿರಲಿಲ್ಲ. ಆಕೆಯೊಳಗಿನ ಅದು ಹೀಗೆ ಮಾಡಿಸುತ್ತಿತ್ತು.
ಆಕೆ ಸರಿಯಾಗಿ ಗಂಡನ ಮುಖ ನೋಡಿರಲಿಲ್ಲ. ಮದುವೆಯ ಆ ಮೊದಲ ದಿನಗಳಲ್ಲಿ ಎಲ್ಲಾ ನೋಡೊದು ಎಲ್ಲಿ ಸಾಧ್ಯ?
ನೋಡೊದು ಎಲ್ಲಿ ಸಾಧ್ಯ? ನೋಡೋದು ನೋಡಿಕೊಂಡರೆ ಸಾಕಾಗಿರುತ್ತದೆ. ಗಂಡನ ಮುಖವನ್ನು ಆಕೆ ನೋಡಲು ಪ್ರಯತ್ನಿಸಿದ್ದುಂಟು.
ಅದಕ್ಕೆ ಆ ಮಿಲಿಟರಿ ಹ್ಯಾಟ್ ಆಸ್ಪದ ಕೊಟ್ಟಿರಲ್ಲಿಲ್ಲ.
ಎಂಟೊಂಬತ್ತು ಮಕ್ಕಳಗುವವರೆಗೆ ಗಂಡನ ನೆರಳಿನಂತೆ ಇರಬೇಕೆಂದು ಆಕೆ ವಿವಾಹ ಪೂರ್ವದಲ್ಲಿ ಅಂದರೆ ಕನ್ಯೆಯಾಗಿದ್ದಾಗ
ಅಂದುಕೊಂಡಿದ್ದುಂಟು. ಮದುವೆನೋ ಆಯಿತು. ಮೈಕೈತುಂಬಿಕೊಂಡು ಬಲಿಷ್ಠವಾಗಿದ್ದ. ನಿರೀಕ್ಷೆ ಮೀರಿ ಹಿಂಡಿ
ಹಿಪ್ಪಿ ಮಾಡಿದ್ದ. ಹಿಡಿದು ಅಮುಕಿ ಬಿಟ್ಟನೆಂದರೆ ಮೈ ಲಟಲಟ ಎಂದು ಬಿಡಬೇಕು. ದಿನದ ಇಪ್ಪತ್ನಾಕು ತಾಸೂ
ಅನೇಕ ಆಟಆಡಿಸಿ ಬಿಟ್ಟ. ರೋಮಾಂಚನದ ತರಂಗಗಳನ್ನೆಬ್ಬಿಸಿ ಬಿಟ್ಟ. ಅಂಗೋಪಾಂಗಗಳನ್ನು ಪುಳಕಗೊಳಿಸಿಬಿಟ್ಟ.
ಇದು ಹೀಗೆ ಮುಂದುವರಿಯುತ್ತದೆ ಎಂದು ಆಕೆ ಭಾವಿಸಿದ್ದಳು. ಆದರೆ ಯಾವುದೋ ತಂತಿ ಬಂತೂಂತ ಇದ್ದಕಿದ್ದಂತೆ
ಹೊರಟು ಹೋಗಿ ಬಿಡುವುದೇನು? ಜುಟ್ಟು ಇಲ್ಲದೆ ನೀಟಾದ ಕ್ರಾಪು ಬಿಟ್ಟಿದ್ದ ಅವನು ತನ್ನಿಂದ ಶಿರಸಾಷ್ಠಾಂಗ
ಪ್ರಣಾಮವನ್ನಾದರೂ ಮಾಡಿಸಿಕೊಳ್ಳಲ್ಲಿಲ್ಲವಲ್ಲ? ಬಸ್ ನಿಲ್ದಾಣದವರೆಗೆ ತನಗೆ ಬಂದು ಕಳಿಸಿಕೊಡಲು ಹೇಳಿದ.
ಆದರೆ ಲಜ್ಜೆ ಬಿಟ್ಟು ಹೇಗೆ ಹೋಗುವುದು? ಜನ ಏನೆಂದುಕೊಂಡರು? ಶ್ರಾದ್ಧಕ್ಕೋ, ತಿಥಿಗೋ, ಮದುವೆಗೋ ಆದರೆ
ಹೋಗಬಹುದು? ಅದೂ ಪ್ಯಾಂಟು ಹಾಕಿಕೊಂಡು ಟ್ರಿಮ್ ಆಗಿರೋ ಗಂಡನ ಜೊತೆ, ಓಣಿ ಗಂಡಸರು ತನ್ನ ಕಡೆ ಆಸೆಯಿಂದ
ನೋಡದೆ ಇದ್ದಾರೇನು? ಆಕೆ ಸುತರಾಂ ಹೋಗಲ್ಲಿಲ್ಲ. ಬಿಲ್ಕುಲ್ ನಿರಾಕರಿಸಿಬಿಟ್ಟಳು. ದುರ್ದಾನ ತೆಗೆದುಕೊಂಡವನಂತೆ
ಗಂಡ ಹೋಗಿಬಿಟ್ಟ. ಮಹಾಭಾರತ, ರಾಮಾಯಣ ನಡೆದ ನಾಡಿನ ಆಚೆಕಡೆ.
ಹೋಗಿ ತಿಂಗಳಾದವು. ಗಂಡನಿಂದ ಉಭಂ ಇಲ್ಲ, ದಿಡೀರನೆ ಒಂದು ಗಂಡು ಮಗು ಹೆತ್ತು ಕೊಟ್ತಿದ್ದಕ್ಕೂ ಸಂತೋಷ
ಪಡೋದು ಬೇಡವೇನು.... ಬಂದು ನೋಡೋದು ಬೇಡವೇನು? ಒಂದೇ ಒಂದು ಪತ್ರ ಬರೆಯೋದು ಬೇಡವೇನು?
ವೈಕುಂಠ ಏಕಾದಶಿಗೆ ಕರೆಯಲು ಬಂದಿದ್ದ ತಂದೆಗು ದುಃಖ ಹೇಳಿಕೋಂಡಳು. ಅದಕ್ಕೆ ಆತ ನಿನ್ನ ಗಂಡ ಸಾಮಾನ್ಯ
ಕೆಲದಲ್ಲಿಮ್ಮಾ, ಈಶನ ಸೇವೆ ಎಂದು ಬಗೆದು ದೇಶ ಸೇವೆ ಮಾದ್ತಿದಾನೆ. ಪುಳಿಚಾರಿಗೆ ಹೆಸರಾಗಿರೋ ನಮ್ಮ
ಜನಾಂಗದಲ್ಲೂ ದೇಶ ಸೇವೆ ಮಾಡೋರು ಇನ್ನೂ ಇದ್ದಾರಮ್ಮಾ ಇದ್ದಾರಮ್ಮಾ ಎಂದು ಆತ ತೇಪೆ ಹಚ್ಚಿದ.
"ಶೂಲದೇವರಹಳ್ಳಿ ಶಾನಭೋಗರ ಮಗ್ನೀಗೆ ಕೊಡೋಣ ಎಂದು ಬಡ್ಕೊಂಡೆ ನೀವು ಕೆಳಿದಿರಾ ನನ್ ಮಾತ್ನಾ" ಸಂಗಡ
ಬಂದಿದ್ದ ತಾಯಿ ಹೇಳಿದಳು. "ಹುಡುಗ್ನೀಗೆ ಆಸ್ತಮ ಇದ್ದರೇನಾಯಿತು. ಆ ಕಡೇಲೆಲ್ಲಾ ವೈದಿಕದಲ್ಲಿ ಹೆಸರು
ಮಾಡಿಲ್ವೇ?"
ಹೌದು. ಶಾನುಭೋಗರು ಪಾದುಕೆ ಸವೆಯುವಂತೆ ಅಡ್ಡಾಡಿದ್ದು ನಿಜ. "ನಿಮ್ ಮಗಳ್ನ ನನ್ ಮಗ ಪ್ರೀತಿಸ್ತಾನೆ.
ಕೊಟ್ಟು ಮದುವೆ ಮಾಡಿ" ಎಂದು ಪೀಡಿಸುತ್ತಿದ್ದುದ್ದೂ ನಿಜ.
ರಾಮನವಮಿಗೆ ತಂದೆತಾಯಿಯರೊಂದಿಗೆ ಅಲಮೇಲು ಕೂಡ ಸೂಲದೇವರ ಹಳ್ಳಿಗೆ ಹೋಗಿದ್ದಳು. "ಲೋ ಶೀನಾ, ಹುಡುಗೀ
ಬಂದಿದ್ದಾಳೆ ಒಂಟಿಯಾಗಿದ್ದಾಗ ಒಂದು ಕೈ ನೋಡ್ಕೋ" ಎಂದು ಶಾನುಭೋಗರೇ ಮಗನಿಗೆ ಪರವಾನಿಗೆ ನೀಡಿದ್ದರು.
ಶೀನಪ್ಪ ಏದುಸಿರು ಬಿಡುತ್ತ ಹಿಂದೆ ಮುಂದೆ ಅಡ್ಡಾಡಿದ್ದುಂಟು. ಕಣ್ಣು ಹೊಡೆಯಲು ಪ್ರಯತ್ನಿಸಿದ್ದುಂಟು.
ಮುಟ್ಟಾಗಿ ಮೂರು ವರ್ಷವಾಗಿದ್ದರೂ ಯಾವುದೇ ಗಂಡಸರಿಂದ ಯಾವ ಕಾರಣಕ್ಕೂ ಸ್ಪರ್ಶಿಸಿಕೊಂಡವಳಲ್ಲ. ಈ ವಿಶಯದಲ್ಲಿ
ಆಕೆ ಸ್ವಲ್ಪ ಕಟ್ಟುನಿಟ್ಟು. ಹೆತ್ತವರು ಹಾಗೆ ಬೆಳೆಸಿದ್ದರು. ಆದ್ದರಿಂದ ಆಕೆ ಆತ ಕೆಮ್ಮಿದರೂ ಕೆರ್
ಮಾಡಿರಲಿಲ್ಲ, ದಮ್ಮಿದರೂ ಕೆರ್ ಮಾಡಿರಲಿಲ್ಲ.
ಶೀನಪ್ಪ ಸುಮ್ಮನೆ ಬಿದುವ ಪೈಕಿ ಆಗಿರಲಿಲ್ಲ. ಆಕೆ ಮಲಗಿದ್ದ ಕೋಣೆಗೆ ಕಳ್ಳತನದಿಂದ ಪ್ರವೇಶಿಸಿದ. ಸೊಳ್ಳೆ
ಪರದೆಯೊಳಗೆ ತೂರಿ ಅವಕೊಂದು ಬಿತ್ತ. ಆಗ ಅಲುಮೇಲು ಅಂಬರೀಷನ ಮಗಳು ಶ್ರೀಮತಿ ತಾನೆಂದೂ, ತನ್ನನ್ನು
ವಿಷ್ಣುಪರಮಾತ್ಮ ಹಾರಿಸಿಕೊಂಡು ಹೋದಂಥ ಕನಸು ಕಾಣುತ್ತಿದ್ದಳು. ಆದರೆ ಸ್ವಲ್ಪ ಹೊತ್ತಿಗೆ ಗೊತ್ತಾಯ್ತು
ತನ್ನನ್ನು ಅವುಚಿಕೊಂಡು ಮೊಲೆ ಹಿಚುಕುತ್ತಿವುದು ವಿಷ್ಣು ಪರಮಾತ್ಮನಲ್ಲ ಎಂಬ ಸಂಗತಿ. ಸಾಕಷ್ಟು ಗಟ್ಟಿಮುಟ್ಟಾಗಿದ್ದ
ಆಕೆ, ಅವನಿಗಿಂತಲೂ ಬಲಿಷ್ಟವಾಗಿದ್ದ ಜುಟ್ಟನ್ನು ಗಟ್ಟಿಯಾಗಿ ಹಿಡಿದುಕೊಂಡು ಲಬೋಲಬೋ ಬಾಯಿ ಬಡಿದುಕೊಂಡು
ಬಿಟ್ಟಳು.
ಅವತ್ತಿಗೇ ಮುಗಿದುಹೋಯಿತು ಸೂಲ ದೇವರ ಹಳ್ಳಿ ಕಡೆ ಮುಖ ಮಾಡಿ ಮಲಗುವುದು.
’ಆ ಮಗುವಿನ್ನೂ ನಿನ್ನ ಚಿಂತೆಯಲ್ಲಿಯೇ ಇರುವುದು ಮಗಳೇ. ಅನ್ನ ನೀರು ಬಿಟ್ಟು ತುಂಬ ಕೃಶವಾಗಿರುವುದಂತೆ!’
ತಾಯಿ ಸ್ವಲ್ಪ ನಾಚಿಕೆ ಬಿಟ್ಟು ಮಾತನಾಡಿದರೆಂದರೂ ಸರಿಯೇ.
ತಮ್ಮ ಮಗಳನ್ನು ತವರಿಗೆ ಕರೆದುಕೊಂಡು ಹೋಗಲೆಂದೇನೋ ಅವರು ಬಂದಿದ್ದರು. "ಹೋಗಿ ಬಾರಮ್ಮಾ" ಎಂದು ಶಾಸ್ತ್ರಿಗಳೂ
ದೊಡ್ಡತನ ತೋರಿಸಿದರು. ಆದರೆ ಹೋದರೆ ಇವರನ್ನು ಮನೆಯಲ್ಲಿ ನೋಡಿಕೊಳ್ಳುವವರು ಯಾರು ಎಂಬ ಕಾರಣಕ್ಕೆ
ಮಹಾಸಾಧ್ವಿ ಅಲಮೇಲಮ್ಮ ಹೋಗಲಿಲ್ಲ, ಉಣ್ಣಲಿ, ಉಪವಾಸವಿರಲಿ ಗಂಡನ ಮನೆಯೇ ಸರ್ವಸ್ವ ಎಂದು ತಿಳಿದುಕೊಂಡಳು.
ಗಂಡ ದೂರವಿದ್ದರೂ ಮಗ ಹತ್ತಿರದಲ್ಲಿದ್ದಾನೆ ಎಂದುಕೊಳ್ಳುವಂತಿಲ್ಲ. ಅದರ ತಾತ ಅದನ್ನು ತಾಯಿಯಾದ ತನ್ನ
ಬಳಿ ಬಿಟ್ಟರೆ ತಾನೆ. ಮೊಮ್ಮಗ ಸಂಸ್ಕೃತದಲ್ಲಿ ಮಹಾಪಂಡಿತನಾಗಬೇಕು. ಹಾಗಾಗಬೇಕು, ಹೀಗಾಗಬೇಕು ಎಂದು
ಕನಸು ಕಾಣುತ್ತಿರುವ ಮಾಮಾಶ್ರಿ, ಕ್ರಮೇಣ ಈ
ವಿಷಯದಲ್ಲೂ ತರ್ಕ ಶಾಸ್ತ್ರ ಪಾರಂಗತರಾದ ಶಾಸ್ತ್ರಿಗಳಿಗೂ ಅತುಲಮಾತೃವಾತ್ಸಲ್ಯಮಯಿಯಾದ ಅಲುಮೇಲಮ್ಮಗೂ
ನಡುವೆ ಮಾತಿನ ಚಕಮಕಿ ನಡೆಯಿತು. ಇಬ್ಬರೂ
ಮಗನನ್ನು ಬಿಟ್ಟಿರಲಾರರು. ಶಾಸ್ತ್ರಿಗಳು ಮೊಮ್ಮಗನಲ್ಲಿ ಮಗನನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಅಲುಮೇಲಮ್ಮ
ಮಗನಲ್ಲಿ ಗಂಡನನ್ನು ಗುರುತಿಸುವ ಸನ್ನಾಹದಲ್ಲಿದ್ದರು.
ಅದು ಅಳುತ್ತಿತ್ತು. ತೊಟ್ಟಿಲಲ್ಲಿ ಮಲಗಿಸಿದ ಅಲಮೇಲು ಆಡಿಬಾ ಎನಕಂದ ಅಂಗಾಲ ತೊಳೆದೇನ್ಯಾಽ ಎಂದು ಪದ
ಹಾಡತೊಡಗಿದಳು. ಸಿದ್ಧಾಂತ ಶಿಖಾಮಣಿ ಗುಂಡಾಭಟ್ಟರ ಏಳು ದಿನದ ಕಾರ್ಯಕ್ಕೆ ಹೋಗಿದ್ದ ಶಾಸ್ತ್ರಿಗಳು
ಅದೇ ತಾನೆ ಬಂದರು. ಸೊಸೆ ಹಾಡುತ್ತಿದ್ದ ಜೋಗುಳದ ಹಾಡು ಕೇಳಿ ಕಿಡಿಕಿಡಿಯಾದರು. ಸೈರಣೆ ಕಳೆದುಕೊಂಡರು.
"ಛೇ... ಛೇ... ರಾಮಾ ರಾಮಾ... ಕೇಳಲಾರೆ. ಅದ್ವಿತೀ ಪಂಡಿತರ ಸೊಸೆಯಾದವಳು ಹಾಡುವ ಹಾಡೇ ಇದು" ಕಿವಿ
ಮುಚ್ಚಿಕೊಂಡರು.
ಅದನ್ನು ಕೇಳಿ ಆಕಾಶವೇ ಕಳಚಿ ಬಿದ್ದಂಥ ಅನುಭವವಾಯಿತು ಅಲುಮೇಲಮ್ಮನಿಗೆ. ಹಾಡಿದ ಹಾಡಿನಲ್ಲಿ ಇರುವ
ಅಶ್ಲೀಲವಾದರೂ ಏನು?
ಉತ್ತರ ಕೊಡದೆ ಬಾಯಿ ತೆರದಳು.
"ಅಲ್ಲ ತಾಯಿ, ಹೋಗಿ ಹೋಗಿ ಆ ಜಾನಪದ ಗೀತೆಯನ್ನು ಹಾಡುವುದೇನು? ಅಡೂ ಮಗುವಿನ ಕಿವಿಗೆ ಬೀಳುವಂತೆ,
ಸಂಸ್ಕೃತದ ಅಸತೋಮ ಹೇಳಬಹುದಾಗಿತ್ತು. ಹೋಗಲಿ ಪೂರ್ಣಮದಂ ಪೂರ್ಣಮಿದಂ ಹೇಳಬಹುದಾಗಿತ್ತು." ಶಾಸ್ತ್ರಿಗಳು
ಮಗುವಿನ ಎರಡು ಕಿವಿಗಳಲ್ಲಿ ಮಂತ್ರ ಶಕ್ತಿಯಿಂದ ಊದಿದರು.
ಮಗು ಕಿಟಾರನೆ ಕಿರುಚಿತು.
"ಅಲ್ಲ ಮಾವನವರೆ, ಸಂಸ್ಕೃತ ಸಂಸ್ಕೃತ ಅಂತ ಹೇಳ್ತೀರಲ್ಲ.ಮಗು ಬೇರೆ ಭಾಷೆ ಕಲಿಯೋದು ಬೇಡವೇನು?"
"ಖಂಡಿತ ಸಲ್ಲದು. ಜಗತ್ತಿನ ಎಲ್ಲಾ ಭಾಷೆಗಳಿಗೆ ಸಂಸ್ಕೃತವೇ ಮಾತೃಸ್ಥಾನದಲ್ಲಿದೆ. ಅದನ್ನು ಕಲಿತರೆ
ಎಲ್ಲ ಬಂದಂತೆಯೇ."
"ಕನ್ನಡ ಕೂಡ ಸಂಸ್ಕೃತ ಮಾತೆಯ ಮಗಳಲ್ಲವೇ?"
"ಹೌದು ಇಲ್ಲವೆಂದವರಾರು?"
"ಹಾಗಿದ್ದರೆ ನಾನು ಹಾಡಿದ ಹಾಡಿನಲ್ಲಿ ತಪ್ಪೇನಿದೆ?"
"ಪುರಂದರ ದಾಸರಂಥವರ ಕೀರ್ತನೆಗಳದರೆ ಸರಿ. ಆದರೆ ನೀನು ಹಾಡುವ ಹಾಡು ಶ್ರೇಷ್ಠ ಕುಲ ಸಂಜಾತರು ಹಾಡುವಂಥದ್ದಲ್ಲ.
ಅದು ಹುಟ್ಟಿದ್ದೇ ಕೀಳುಜಾತಿಯವರಿಂದ, ಅಂಥವರು ಮಾತ್ರ ಹಾಡಲಿಕ್ಕೆ ಯೋಗ್ಯವು" ಶಾಸ್ತ್ರಿಗಳು ಕಡ್ಡಿಮುರಿದಂತೆ
ನುಡಿದರು.
ಅಡುಗೆ ಮನೆಯ ನಗಂದಿ ಮೇಲಿದ್ದ ಬೆಕ್ಕು ಮ್ಯಾಂವ್ ಮ್ಯಾಂವ್ ಅಂತ ಕೆಟ್ಟದಾಗಿ ಅರಚತೋಡಗಿತು. ಶಾಸ್ತ್ರಿಗಳು
ಕಿವಿ ಮುಚ್ಚಿಕೊಂಡರು. ಅಯ್ಯೋ ಮಾರ್ಜಾಲವೇ ಶಾಪ ಹಾಕಿದರು. ಶೂದ್ರರು ಮಾತ್ರ ಮಾರ್ಜಾಲ ಜನ್ಮ ಪಡೆದಿರುತ್ತಾರೆ
ಎಂಬುದಕ್ಕೆ ಶಾಸ್ತ್ರಗಳಲ್ಲಿ ಪುರಾವೆಗಳಿವೆ. ಆದ್ದರಿಂದ ಬೆಕ್ಕುಗಳನ್ನು ಕಂಡರೆ ಅವರಿಗಾಗದು.
ಈ ಪ್ರಕಾರವಾಗಿ ಮಾವ ಸೊಸೆಯರ ನಡುವೆ ಹಸುಳೆಯ ಜ್ಞಾನಾರ್ಜನೆಗೆ ಸಂಭಂದಿಸಿದಂಥ ಭಿನ್ನಾಭಿಪ್ರಯಗಳು ಆಗೊಮ್ಮೆ
ಈಗೊಮ್ಮೆ ಏಳುತ್ತಿದ್ದವು. ಮಾತು ಮಾತು
ಮಥನದಿಂದ ಕಿಡಿ ಪಕ್ಕದಲ್ಲಿ ಗಂಡ ಇದ್ದಿದ್ದರೆ ಇನ್ನೊಬ್ಬರು ಹೀಗೆ ಟೀಕಿಸುತ್ತಿರಲ್ಲಿಲ್ಲ. ಸಂಸ್ಕೃತ
ಕಲಿಸುವ ಒತ್ತಡದಿಂದಾಗಿಯೇ ಇದ್ದೊಬ್ಬ ಮಗನನ್ನು ಮಿಲಿಟರಿ ಪಾಲು ಮಾಡಿದ ಮಹಾನುಭಾವರಿವರು. ಆತ ಒಮ್ಮೆ
ಬಂದು ಹೋದರೆ ಒಳ್ಳೆಯದು.
ಆತನಿಗೆ ಪತ್ರ ಬರೆಯಬೇಕೆಂದರೆ ಹತ್ತಾರು ಸಮಸ್ಯೆಗಳು. ಮೊದಲನೆಯದಾಗಿ ಮ್ಲೇಚ್ಚ ಭಾಷೆಯಲ್ಲಿ ವಿಳಸ ಬರೆಯಬೇಕು.
ವಿವರವಾಗಿ ಬರೆಯಬೇಕೆಂದರೆ ತಾನು ಕಲಿತಿರುವುದೆಲ್ಲಾ ಸಂಸ್ಕೃತ. ತಮ್ಮ ತಂದೆ ತಮ್ಮ ಮಗಳು ಹೆಳವನಕಟ್ಟೆ
ಗಿರಿಯಮ್ಮಳಂತಾಗಬೇಕೆಂದು ಬಯ್ಸಿದ್ದರು. ಮನೆಯ ಮಾಮಾಶ್ರೀಯವರಿಗೂ ಕನ್ನಡ ಬರುವುದಿಲ್ಲ. ಬಂದರೂ ಬರೆಯುವ
ಪೈಕಿ ಅಲ್ಲ. ತಮ್ಮಂಥ ಪ್ರಕಾಂಡ ಪಂಡಿತರು ಶೂದ್ರರ ಭಾಷೆಯಲ್ಲಿ ಬರೆಯುವುದೇ? ಎಂದು ಮೂಗು ಮುರಿಯುತ್ತಿದ್ದರು.
ಪರಿಸ್ಥಿತಿ ಹೀಗಂತ ಕೈಕತ್ತಿ ಕೂಡುವಂತಿಲ್ಲ. ಬತ್ತಿ ಹೊಸೆಯುವುದರ ಜೊತೆಗೆ ಗುಟ್ಟಗಿ ಒಂದು ವರ್ಣಮಾಲೆ
ಪುಸ್ತಕ ತರಿಸಿಕೋಂಡಳು. ಅಕ್ಕಿಯಲ್ಲಿ ಅರಲು ಆರಿಸುವಾಗ ಅದರೊಳಗೆ ಅಕ್ಷರ ತಿದ್ದತೊಡಗಿದಳು. ಆಕೆ ತುಂಬ
ಜಾಣೆಯಾದ್ದರಿಂದ ಐವತ್ತಾರು ಅಕ್ಷರಗಳನ್ನು ಇಪ್ಪತ್ಮೂರು ದಿನಗಳಲ್ಲಿ ಕಲಿತುಕೊಂಡು ಬಿಟ್ಟಳು. ಹಾಗೆಯೇ
ಯಾವುದಕ್ಕೆ ಏನನ್ನು ಜೋಡಿಸಿದರೆ ಏನಾಗುತ್ತದೆ ಎನ್ನುವುದೂ ಸಹ! ಕರ್ತೃ ಕರ್ಮದ ಮಿಲನಕ್ಕೆ ಕ್ರಿಯೆ
ಎಂಬುದನ್ನೂ ಸಹ ಈ ಪ್ರಕಾರವಾಗಿ ಅಕ್ಷರ ಸಂಪನ್ನೆಯಾದ ಆಕೆ ಕೆಲವು ಹಗಲು ಕೆಲವು ರಾತ್ರಿ ಪರಿಶ್ರಮ ಪಟ್ಟು
ಗಂಡನಿಗೆ ಇನ್ಲೆಂಡ್ ಲೆಟರು ಬರೆದು ಒಂದು ಹುಡುಗಿಯ ಕೈಯಿಂದ ಕೆಂಪು ಡಬ್ಬಿಗೆ ಹಾಕಿಸಿದಳು.
ಅಂದಿನಿಂದ ಶುರುವಾಯಿತು ಆಕೆ ಗಂಡನ ಪತ್ರಕ್ಕೆ ಕಾಯುವುದು. ತಾನು ತೋಡಿಕೊಂದಿದ್ದ ನೋವು ನಲಿವುಗಳಿಗೆ
ಗಂಡ ಪ್ರತಿಯಿಸುತ್ತಾನೆಂದು ಬಗೆದಳು. ಕೆಲಸ ಬೊಗಸೆ ಮುಗಿಸಿಕೊಂಡು ಬಾಗಿಲ ಬಳಿ ನಿಲ್ಲುವುದು : ಟ್ರಿಣ್
ಟ್ರಿಣ್ ಬೆಲ್ ಬಾರಿಸುತ್ತ ಅಂಚೆಯಣ್ಣ ಬಂದೊದನೆ ಅವನತಮುಖಿಯಾಗಿಯೇ "ಅಣ್ಣಾ ಯಾವುದಾದರೂ ಪತ್ರ ಉಂಟಾ"
ಎಂದು ಕೇಳುವುದು, ಆತ "ಇಲ್ಲಮ್ಮ ತಾಯಿ" ಎನ್ನುವುದು ಹೀಗೆ ನಡೆಯಿತು.
ಆಕೆಯ ಬಾಯಿಂದ, ’ಅಣ್ಣಾ’ ಎಂದು ಕರೆಸಿಕೊಳ್ಳುವುದು ಪೋಸ್ಟ್ಮ್ಯಾನ್ಗೆ ಆಪ್ಯಾಯಮಾನವೆನ್ನಿಸಿತು.
ಹಾಗೆ ಕರೆಸಿಕೊಳ್ಳಲಿಕ್ಕೆಂದೇ ಆತ ಅಗ್ರಹಾರಕ್ಕೆ ಬರುತ್ತಿದ್ದ. ಆಕೆಯ ದುಃಖ ಅರ್ಥಮಾಡಿಕೊಳ್ಳಬಲ್ಲ
ಬಲ್ಲಿದನಾಗಿದ್ದ. ಅನಧಿಕೃತ ತಂಗಿಯ ದುಃಖ ಪರಿಹರಿಸುವ ಬಗೆ ತನಗೆ ನಿಲುಕದ ಸಂಗತಿಯಾಗಿತ್ತು.
ತಮ್ಮ ಸೊಸೆ ದಿನಂಪ್ರತಿ ಹೊತ್ತಿಗೆ ಸರಿಯಾಗಿ ಬಾಗಿಲ ಬಳಿ ನಿಲ್ಲುವುದು ಶಾಸ್ತ್ರಿಗಳು ದೂರದಿಂದಲೇ
ಗಮನಿಸಿದರು. ಸ್ತ್ರೀ ಸ್ವಭಾವತಃ ಚಂಚಲೆ ಎಂದು ಶಾಸ್ತ್ರಗಳೇ ಹೇಳಿದೆ. ಸ್ತ್ರೀ ಬುದ್ದಿ ಪ್ರಳಯಾತಕವೆಂಬುದನ್ನೂ
ಸಹ, ಸ್ವಾತಂತ್ರಕ್ಕೆ ಅರ್ಹಳಲ್ಲದ ತಮ್ಮ ಸೊಸೆ ಬಾಗಿಲ ಬಳಿ ನಾಚಿಕೆ ಬಿಟ್ಟು ನಿಲ್ಲುವುದೆಂದರೇನು?
ಪೋಸ್ಟ್ಮ್ಯಾನ್ನಂಥ ಪರಪುರುಷನೊಂದಿಗೆ ಮಾತಾಡುವುದೆಂದರೇನು?
ತಮ್ಮ ಚಿತ್ತಕ್ಕೆ ಹೊಳೆದ ಸಂಗತಿಯನ್ನು ಮುಖಕ್ಕೆ ರಾಚುವಂತೆ ಹೇಳುವ ಧೈರ್ಯ ಅವರಿಗೆಲ್ಲಿಯದು.
ಆ ಹೊತ್ತಿಗೆ ಸರಿಯಾಗಿ ಎದುರು ಕುಂಡ್ರಿಸಿಕೊಳ್ಳತೊಡಗಿದರು. ಆಕೆಯ ಎದುರಿಗೆ
ವ್ಯಾಸಪೀಠವಿತ್ತು. ಅದರ ನಡುವೆ ಪಾರಮಾರ್ಥದ ಗ್ರಂಥ ತೆರೆದಿಟ್ಟು ಇದನ್ನು ನೂರು ಸಾರಿ ಓದು, ಅದನ್ನು
ಸಾವಿರ ಸಾರಿ ಓದು ಎಂದು ಪರೋಕ್ಷವಾಗಿ ಒತ್ತಾಯಿಸತೊಡಗಿದರು.
ಆಕೆ ಈ ಪ್ರಕಾರವಾಗಿ ಓದುತ್ತಿರುವಾಗ ಹೊರಗಡೆ ಟ್ರಿಣ್ ಟ್ರಿಣ್ ಬೆಲ್ಲಿನ ಸದ್ದಾಗುತ್ತಿತ್ತು. ಮತ್ತೊಂದು
ಘಳಿಗೆ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸಾಗುತ್ತಿತ್ತು.
ಒಂದು ದಿನ ಅಂಚೆಯಣ್ಣ ಬೆಲ್ ಮಾಡಿದ. ಯಾರೂ ಹೊರಬಾರದಿದ್ದಾಗ ತಾನೇ ಬಾಗಿಲು ಬಳಿಗೆ ಬಂದು ಬಿಟ್ಟ. ಬಾಗಿಲ
ತೋಳಿಗೆ ಕೈಹಚ್ಚಿ ಬಾಗಿ ಒಳಗಡೆ ಇದೀಯಾ ತಾಯಿ ಅಂದ. ಇದರಿಂದ ಶಾಸ್ತ್ರಿಗಳಿಗೆ ಕೋಪ ಬಂತು. ಬ್ರಾಹ್ಮಣನಾದವನು
ಕೋಪವನ್ನು ಸೂಚ್ಯವಾಗಿ ಪ್ರಕಟಿಸಬೇಕೆಂದು ಶಾಸ್ತ್ರಗಳೇ ಹೇಳಿದೆ.
"ಏನಪ್ಪಾ... ಅಲ್ಲೇ ನಿಂತ್ಕೋ ಪೂಜೆ ಮಾಡ್ತಿರೋ ಹೊಸ್ತಿಲು ದಾಟಬೇಡ... ಬಂದೆ"" ಶಾಸ್ತ್ರಿಗಳೇ ಎದ್ದುಹೋದರು’
"ಇದಾರೆ. ಕೆಲಸ ಕಾರ್ಯಗಳಲ್ಲಿ ಮುಳುಗಿದ್ದಾರೆ ನಾವಿದ್ದೇವಲ್ಲ!" ಎಂದರು.
ಅಂಚೆಯಣ್ಣ ನಿಟ್ತುಸಿರು ಬಿಡುತ್ತ ಬಂದಿದ್ದ ಪತ್ರ ಕೊಟ್ಟು ವಾಪಸಾದ.
ಶಾಸ್ತ್ರಿಗಳು ಓಡೆದರು. ಅದು ತಮ್ಮ ಸುಪುತ್ರನ ಪತ್ರ. ಆದರೆ ಆ ದರಿದ್ರದವನು ಆ ಮೇಚ್ಚರಾಡುವ ಭಾಷೆಯಲ್ಲಿ
ಬರೆದಿರುವನಲ್ಲ! ಕುದಿದರು. ಸೊಸೆಗೆ ಹೇಳಿದರು. ಆಕೆ ಸಂತೋಷದಿಂದ ಕಂಪಿಸಿತ್ತಿರುವುದನ್ನು ಕಂಡು ತಾವೂ
ಸಂತೋಷಪಟ್ಟರು.
ಹೆಗಲ ಮೇಲೆ ಉತ್ತರೀಯ ಹೊದ್ದು ಹೊರಗಡೆ ಹೋಗಿ ಮ್ಲೇಚ್ಚ ಭಾಷೆ ಬಲ್ಲ ಸುಸಂಸ್ಕೃತರನ್ನು ಹುಡುಕಿ ಪತ್ರ
ಓದಿಸಿಕೊಂಡು ಬಂದರು.
"ತಾಯಿ ನಿನ್ನ ಗಂಡ ಇಂಥ ದಿನ ಬರ್ತಿದ್ದೀನಂತ ಬರೆಸಿದ್ದಾನೆ ಕಣಮ್ಮಾ" ವಿವರಿಸಿ ಹೇಳಿದರು.
ಅಲಮೇಲಮ್ಮನ ಸಂತೋಷಕ್ಕೆ ಪಾರವೇ ಇಲ್ಲ. ಆಕೆಗೆ ಸ್ವರ್ಗ ಮೂರೇ ಗೇಣು. ಇನ್ನು ಒಂದು ಪಕ್ಷ ದಿನಮಾನ ಕಾಯಬೇಕಲ್ಲ.
ಇದಿನ್ನು ಶುಕ್ಲಪಕ್ಷ. ಆತ ಬರುವುದೆ ಕೃಷ್ಣ ಪಕ್ಷ ಸಮೀಪಿಸಿದಾಗ...
ಒಂದೊಂದು ಲೀಲೆ ನೆನಪಾಗಿ ಆಕೆಯ ಮೈ ರೋಮಾಂಚನಗೊಂಡಿತು. ಗಂಡನಿಗೆ ಪ್ರಿಯವಾದ ತಿಂಡಿಗಳನ್ನು ಲೆಕ್ಕ
ಹಾಕಿದಳು. ನಾಗಂದುಗೆಯಲ್ಲಿದ್ದ ಹಣ ಕೊಟ್ಟು ಸಾಮಾನು ತರಿಸಿಕೊಂಡಳು. ದಿನಕ್ಕೊಂದು ತಿಂಡಿ ಮಾಡಿದಳು.
ಇವತ್ತು ರವೆ ಉಂಡೆ ಮಾದಿದರೆ ಮರುದಿನ ಕೋಡುಬಳೆ, ಮತ್ತೊಂದು ದಿನ ಮತ್ತೊಂದು.
ಮಗುವನ್ನು ಮಾವನವರಿಂದ ಕಿತ್ತುಕೊಂಡಳು. "ಶಾಮೂ ನಿಮ್ಮಪ್ಪಾಜಿ ಬರ್ತಾರೆ" ಎಂದು ಆಕೆ ಹೇಳುವುದು, ಆಕೆಯಿಂದ
ಮಗುವನ್ನೆತ್ತಿಕೊಂಡು, "ಮೊಮ್ಮಗನೇ ನನ್ ಮಗ ಬರ್ತಿದ್ದಾನೆ" ಎಂದು ಶಾಸ್ತ್ರಿಗಳು ಹೇಳುವುದು.
ಹೆಂಡತಿ ಗಂಡನಿಗಾಗ ಹಲುಬುವುದು.
ತಂದೆ ಮಗನಿಗಾಗಿ ಹಲುಬುವುದು.
ಇವೆರಡು ಸಂಬಂಧದ ಎರಡು ಮುಖ್ಯ ನಮೂನೆಗಳು.
ಬರೆದಿದ್ದಕ್ಕಿಂತ ಒಂದೆರಡು ದಿನ ಮುಂಚಿತವಾಗಿ ಅಶ್ವಥ್ ನಾರಾಯಣ ಮನೆ ಬಾಗಿಲು ತಟ್ಟಿಬಿಟ್ಟ. ಬಾಗಿಲು
ತೆರೆಯುವ ಮೊದಲು "ಸ್ನಾನಮಾಡಿ ಶುಚಿರ್ಭೂತನಾಗಿ ಒಳಗದೆ ಬರುವಂತಿ" ಎಂದು ಹೇಳಿದಳು. ಆತ ಪ್ರಯಾಣ ಹೊರಡುವ
ಮೊದಲು ಅಂದರೆ ವಾರದ ಹಿಂದೆ
ಸ್ನಾನ ಮಾಡಿದ್ದ. ಬಾಗಿಲು ತೆರೆದೊಡನೆ ಬೂಟುಗಾಲಿನೊಂದಿಗೆ ಒಳಗೆ ಪ್ರವೇಶಿಸಿದ.
"ಶೂದ್ರರ ಎಲ್ಲ ಅವಗುಣಗಳನ್ನು ಕಲಿತು ಬಿಟ್ಟಿರುವಿಯಲ್ಲೊ." ಶಾಸ್ತ್ರಿಗಳು ಮತ್ತೇನನ್ನೋ ನುಡಿವಷ್ತರಲ್ಲಿ
ಒಳಗಡೆ ನುಗ್ಗಿಯೇಬಿಟ್ಟ. ಇನ್ನೇನು ತನ್ನನ್ನು ಅವುಚಿಕೊಂಡು ಬೆಡ್ರೂಮಿಗೆ ಒಯ್ದೇ ಬಿಡುತ್ತಾರೆಂದು
ಹೆದರಿದ ಅಲುಮೇಲಮ್ಮ ಹಂಡೆ ಮರೆಯಲ್ಲಿ ಅವಿತು ಕೂತಂತೆ ನಟಿಸಿದಳು. ಆದರೆ ಆಕೆಯ ಶರೀರದ ಮುಕ್ಕಾಲು ಭಾಗ
ಗೋಚರಿಸದೆ ಇರಲಿಲ್ಲ.
ಆದರೆ ಆ ಪತಿ ಪರಮೆಶ್ವನಿಗೆ ಅದೆಲ್ಲ ನೆನಪಿದ್ದರೆ ತಾನೆ? ಸೀದ ತೊಟ್ಟಲಿಗೆ ನುಗ್ಗಿ "ಓ ಮೈ ದಿಯರ್
ಲಿಟ್ಲ್ ಯಾಸ್ಕಲ್" ಎಂದು ಎತ್ತಿ ಹಿಡಿದನೋ ಇಲ್ಲವೋ ಶಾಮು ಡಾರ್ಲಿಂಗ್ ತನ್ನ ಪುಟ್ಟ ಶಿಶ್ನವನ್ನು ಆತನ
ಗಲ್ಲ ಮೀಸೆಯ ಬಾಯಿಗೆ ಗುರಿಯಿಟ್ಟು ’ಮಗ್ನೇ ಮಾಡ್ತೀನಿರು. ನಾನು ಭೂಮಿಗೆ ಉದುರಿ ಒಂಭತ್ತು ತಿಂಗಳು
ತುಂಬಿದ ಮೇಲೆ ಬಂದಿರುವೆಯಾ’ ಎಂಬರ್ಥ ಬರುವಂತೆ ಅದೇ ತಾನೇ ಮೂಡಿದ್ದ ಎರಡು ಹಲ್ಲು ಪ್ರದರ್ಶಿಸುತ್ತಾ
ಕಿಲಕಿಲ ನಗಾಡಿತು.
"ಬಹುತ್ ಸುಂದರ್ ಲಗ್ತಾ ಹೈ ಮೇರಾ ಬೇಟಾ" ಎಂದ. "ಎಲವೋ ಹಿಂದಿಯಲ್ಲಿ ಮಾತಾಡ್ತಿದಿಯಾ" ಎಂದು ಅವುಡುಗಚ್ಚಿ
ಪರಿಶುದ್ದ ಗಂಗಾಜಲವನ್ನು ಹೆತ್ತ ತಂದೆಯ ಬಾಯಿಗೆ ಸುರಿದೇ ಬಿಟ್ಟಿತು.
ಅದನ್ನು ನೋಡಿದ ಶಾಸ್ತ್ರಿಗಳ ಸಿಟ್ಟು ಇಳಿದೇ ಹೋಯಿತು. ಮ್ಲೇಚ್ಚರ ಸಹವಾಸದಿಂದ ಕೆಟ್ಟು ಹೋಗಿರುವ ತನ್ನ
ತಂದೆಗೆ ಮಗು ಸರಿಯಾದ ಶಾಸ್ತಿ ಮಾಡಿತೆಂದು ಹರ್ಷಚಿತ್ತರಾದರು.
ತನ್ನ ಬಳಿಗೆ ಬರಲೇ ಇಲ್ಲವಲ್ಲ! ಅವಿತಿದ್ದ ಅಲುಮೇಲು ಎದ್ದು ಮೆಲ್ಲಗೆ ಬಂದಳು. ಡಾರ್ಲಿಂಗ್ ಡಾರ್ಲಿಂಗ್
ಅಂತ ಸ್ವಲ್ಪ ಮಾತನಾಡಿದ. ಡ್ಯಾಡಿ ಗೀಡಿ ಅಂತ ಸ್ವಲ್ಪ ತಂದೆಯನ್ನು ಮಾತಾಡಿಸಿದ. ಸಂಸ್ಕೃತ ಸಂಸ್ಕೃತ
ಕಲಿಸಿ ನನ್ ಮಗನ್ನ ಎಷ್ಟು ಹಾಳು ಮಾಡಿದ್ದೀರೆಂದು ಲಘು ಪ್ರಶ್ನೆ ಹಾಕಿದ.
ತಮ್ಮ ಪ್ರಕಾಂಡ ಪಂಡಿತರ ವಂಶಸ್ಥನಾಗಿ ಮಗ ಹೀಗೆ ವರ್ತಿಸುತ್ತಿರುವನಲ್ಲಾ! ಶಾಸ್ತ್ರಿಗಳು ಒಂಥರಾ ಮುಖ
ಮಾಡಿದರು.
ಅಲುಮೇಲು ಮುತುವರ್ಜಿಯಿಂದ ಗಂಡನಿಗೆ ಅಭ್ಯಂಜನ ಸ್ನಾನ ಮಾಡಿಸಿದಳು. ಬಂಗಾರ ಮುಡಿ ಅಕ್ಕಿ ಅನ್ನ, ಈರುಳ್ಳಿ
ಗಾತ್ರದ ತುಪ್ಪ, ಈರುಳ್ಳಿ ಸಾಂಬಾರು ಮಾಡಿ ಬಡಿಸಿದಳು.
ಒಂದೆರಡು ಆಮ್ಲೆಟ್ ಇಲ್ಲದ ಊಟ ಹೇಗೆ ಮಾಡೋದು? ಗೊಣಗುತ್ತ ಊಟ ಮುಗಿಸಿ ಎದ್ದ. ಸ್ವಲ್ಪ ಹೊತ್ತು ಶಾಸ್ತ್ರಿಗಳು
ಮಗನೊಂದಿಗೆ ಮನೆ ಮುಂದುಗಡೆ ಕಟ್ಟೆ ಮೇಲೆ ಕೂತು, ಅಗ್ರಹಾರದ ನಾಲ್ಕು ಮಂದಿ ಗಮನಿಸುವಂತೆ ಉಭಯಕುಶಲೋಪರಿ
ಮಾತಾಡಿದರು. ಕ್ರಾಪಿನೊಂದಿಗೆ ಜುಟ್ಟನ್ನು ಒಂಚೂರಾದರೂ ಉಳಿಸಿಕೊಳ್ಳಬೇಕಿತ್ತೆಂದು ಬುದ್ಧಿ ಹೇಳಿದರು.
ಅಶ್ವಥ್ ಹೆಂಡತಿಗೆ ನೀಟಾಗಿ ಡ್ರೆಸ್ ಮಾಡಿಕೊಳ್ಳುವಂತೆ ಹೇಳಿದ. ಆಕೆಗೆಂದೇ ತಂದಿದ್ದ ಪಂಜಾಬಿ ಡ್ರೆಸ್
ತೆಗೆದು ಕೊಟ್ಟ.
"ಇದ್ನೆಲ್ಲಾ ಉಟ್ಟುಕೊಳ್ಳೋಕೆ ನಾನೇನು ಕಿರಸ್ತಾನಳೇ?" ಅಲುಮೇಲು ನಿರಾಕರಿಸಿದಳು. ಅದಕ್ಕೆ ಅಶ್ವಥ್
ಕೇರ್ ಮಾಡಲಿಲ್ಲ.? ಅವನೆಷ್ಟಿದ್ದರೂ ನೂರಾರು ಮಂದಿ ಶತ್ರುಗಳನ್ನು ಕೊಂದಂತವನು
ಮಾತೂಂದ್ರೆ ಮಾತು! ಏಕ್ಮಾರ್ ದೋ ತುಕುಡಾ!
ವರಾಂಡದಲ್ಲಿ ಶಾಸ್ತ್ರಿಗಳು ಚಿಂತಾಕ್ರಾಂತರಾಗಿ ಕುಳಿತಿದ್ದರು.
ಗಂಡನ ಒತ್ತಾಯಕ್ಕೆ ಮಣಿದು ಅಲುಮೇಲು ಅವನು ಸೂಚಿಸಿದ ಉಡುಪು ತೊಟ್ಟುಕೊಂಡಳು.
ಉಳಿದ ಪ್ರಸಾಧನಗಳನ್ನು ತಾನೇ ಲೇಪಿಸಿದ. ನಖಶಿಖಾಂತ ನೋಡಿ ಮಧುಬಾಲ ಕಂಡಂತೆ ಕಾಣಿಸ್ತಿದೀ ಅಂತ ಮೆಚ್ಚುಗೆ
ಸೂಚಿಸಿದ.
"ಹಾಗೇ ವಾಕಿಂಗ್ ಹೋಗಿ ಪಿಕ್ಚರ್ ನೋಡಿಕೊಂಡು ಬರೋಣ" ಎಂದ.
ಅದನ್ನು ಕೇಳಿ ಆಕೆ ಹೌಹಾರಿದಳು.
ತನ್ನ ಪಾತಿವ್ರತ್ಯಕ್ಕೆ ಚ್ಯುತಿ ಬಂದೆಂತುಕೊಂಡಳು.
ಪತಿ ವಾಕ್ಯ ಪರಿಪಲನೆಗೆ ಹೋದರೆ ತಪ್ಪೇನು?
ಹೊರಟಳು. ಇದನ್ನು ನೋಡಿ ಶಾಸ್ತ್ರಿಗಳು ವ್ಯಗ್ರಗೊಂಡರು.
ಅವರ ಕೋಪ ಸಂಸ್ಕೃತ ಮೂಲವಾದದ್ದು, ಬಡವನ ದವಡೆಗೆ ಮೂಲವೆಂಬಂಥಾದ್ದು. ಹೊರಟಿದ್ದನ್ನು ಅಗ್ರಹಾರದ ಆದಿ
ದಂಪತಿಗಳೆಲ್ಲ ನೋಡಿ ಬೆಕ್ಕಸ ಬೆರಗಾದರು.
ಈ ವರ್ಷ ಮಳೆ ಬರೋದಿಲ್ಲ.
ಭೂಕಂಪವಾಗದೆ ಇರದು.
ಬಾಯಿಗೆ ಬಂದಂತೆ ಮಾತನಾಡಿಕೊಂಡರು.
ತಮ್ಮ ಗಂಡಂದಿರೂ ತಮ್ಮನ್ನು ಹೀಗೆ ಡ್ರೆಸ್ ಮಾಡಿಸಿ ಹೊರಗೆ ಅಡ್ಡಾಡಿಸಿ ಕೊಂಡು ಬರಬಾರದೆ, ಹದಿನಾರು
ಮೊಳದ ಸೀರೆಯ ಪತ್ನಿಯರು ಅಂದುಕೊಂಡರು.
ಪಾರ್ವತಿ ಕುಂಡದ ಪವಿತ್ರ ತೀರ್ಥದಲ್ಲಿ ಮುಳುಗಿದವರಿಗೆ ಗಾಳಿಯ ಭಯವೇನು? ಚಳಿಯ ಭಯವೇನು?
ಸ್ವಲ್ಪ ಹೊತ್ತು ಅಲುಮೇಲುವಿಗೆ ನಡೆಯುವುದಕ್ಕೂ ಕಷ್ಟವಾಯಿತು.
ಪ್ರತಿಯೊಂದು ಹೆಜ್ಜೆ ಇಡುವುದನ್ನು ಅಶ್ವಥ್ ಹೇಳಿಕೊಟ್ಟ. ಗಂದಸರೆಲ್ಲ ತನ್ನ ಕಡೆಗೇ ನೋಡುವುತ್ತಿರುವಂದು
ಊಹಿಸಿ ಅಲುಮೇಲು ಖಚಿತಪಡಿಸಿಕೊಂಡಳು.
ಊರ ಹೊರಗಡೆ ಕೈಯಾಡಿಸಿ ಅಶ್ವಥ್ ಖಚಿತಪಡಿಸಿಕೊಂಡ.
ಅದೊಂದು ಬಾದರಾಯಣ ಪಾರ್ಕು. ಅಲ್ಲಿ ಎಷ್ಟೋ ಜೋಡಿಗಳು ರೊಮ್ಯಾಂಟಿಕ್ ಮೂಡಿನಲ್ಲಿದ್ದವು. ಅಶ್ವಥ್ನೂ
ತನ್ನ ಹೆಂಡತಿಯನ್ನು ಅಪ್ಪಿಕೊಂಡ, ಮುದ್ದಿಸಿದ. ಕ್ರಮೇಣ ಆಕೆ ಮೈ ಚಳಿಬಿಟ್ಟಳು.
ತನ್ನ ಕಷ್ಟ ತೋಡಿಕೊಂಡಳು. ಕರಕೊಂಡು ಹೋಗಿರಿ ಎಂದಳು. ಎಲ್ಲಿಡ್ತೀರೋ ಹೆಂಗಿಡ್ತೀರೋ ಹಂಗಿತೀನಿ ಎಂದಳು.
ಅಶ್ವಥ್ ತಲೆ ಅಲ್ಲಾಡಿಸಿದ
ರೇಣುಕಾ ಟಾಕೀಸಿನಲ್ಲಿ ’ಅನ್ಪಡ್’ ಸಿನಿಮಾ ನೋಡಲೆಂದು ಹೋದರು. ಅದೊಂದು ಆಕೆಗೆ ಹೊಸ ಅನುಭವ. ಅದುವರೆಗೆ
ಆಕೆ ನೋಡಿದ್ದುದು ಕೇವಲ ಒಂದೆರಡು ಮಹಾಪತಿವ್ರತೆಯ ಕಥೆಗಳನ್ನು ಮಾತ್ರ. ಅನ್ಪಡ್ ಆಕೆಗೆ ಹೊಸ ಅನುಭವ
ನೀಡಿತು. ಪ್ರತಿಯೊಂದು ಡೈಲಾಗನ್ನು ಗಂಡ ಹೆಂಡತಿಗೆ ಬಿಡಿಸಿ ಬಿಡಿಸಿ ಹೇಳಿದ.
ಓದು ಎಂದರೆ ಕೇವಲ ಸಂಸ್ಕೃತ ತಿಳಿದುಕೊಂಡಿರೋದಲ್ಲ. ಸಾಮಾನ್ಯ ಜನರಾಡುವ ಭಾಷೆಯಲ್ಲಿ ವ್ಯವಹರಿಸೋದು
ಮುಖ್ಯ. ಶಿಕ್ಷಣ ಪಡೆದಾಗ ಮಾತ್ರ ಹೆಣ್ಣಿಗೆ ಸುಖ-ಸೌಖ್ಯ ಸಿಗುತ್ತದೆ ಎಂದು ಅರ್ಥಮಾಡಿಕೊಂಡಳು.
ಹೀಗೆ ತಾನಿರುವಷ್ಟು ಕಾಲ ಅಶ್ವಥ್ ಹೆಂಡತಿ ಮಗುವನ್ನು ಹೊರಗಡೆ ಕರೆದೊಯ್ದು ಅಡ್ಡಡಿಸಿಕೊಂಡು ಬರುತ್ತಿದ್ದ.
ರಜೆ ಮುಗಿಯುತ್ತಾ ಬಂತು. ತನ್ನ ಮಗುವಿಗೆ ಇಂಗ್ಲಿಷ್ ಕಲಿಸಿ ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕೆಂಬುದರ
ಬಗ್ಗೆ ತಂದೆಯೊಡನೆ ಚರ್ಚಿಸಿದ.
"ಎಲವೊ ದುರುಳಾತ್ಮ" ಕೆರಳಿದರು ಶಾಸ್ತ್ರಿಗಳು. "ಈ ದೇಹದಲ್ಲಿ ಜೀವ ಇರುವವರೆಗೆ ಅದು ಮಾತ್ರ ಸಾಧ್ಯವಿಲ್ಲ,
ಮಗುವಿಗೆ ಶಾಮಾಶಾಸ್ತ್ರಿ ಎಂದು ಹೆಸರಿಟ್ಟಿದ್ದೇನೆ. ಏನೆಂದು ತಿಳಿದಿರುವಿ" ಆ ಕ್ಷಣ ಅವರಿಗೆ ಮಗನ
ಬಾಯಿ ಮುಚ್ಚಿಸುವುದು ಸಾಧ್ಯವಾಯಿತು.
ಮುಠ್ಠಾಳ ಮಗನನ್ನು ಸಾಗು ಹಾಕಿ ಮೊಮ್ಮಗನನ್ನು ಒಂದು ಕೈ ನೋಡಿಕೊಂಡು ಬಿಡಬೇಕೆನ್ನಿಸಿತು. ಹಾಗೆ ಆಧುನಿಕ
ಉಡುಪು ಧರಿಸಿ ಊರು ತುಂಬ ಗಂಡನೊಂದಿಗೆ ಮೆರೆದಾಡುವ ಸೊಸೆಯನ್ನೂ ಸಹ.
ದವಡೆ ದವಡೆ ಮಸೆಯುವಷ್ಟು ಶಾಸ್ತ್ರಿಗಳ ಹಲ್ಲು ಭದ್ರವಾದವು.
ಅವರು ಅಂದುಕೊಂಡಂತೆ ಅಶ್ವತ್ಥ ಉತ್ತರಾದಿಗೆ ಹೊರಡುವ ಮೊದಲು ತಂದೆಯ ಪಾದಕ್ಕೆರಗಿದ.
"ಅಪ್ಪಾಜಿ ಕಾಲಬದಲಾಗಿದೆ ಎನೊದು ಮರೀಬೇಡಿ. ಆಧುನಿಕ ಮನೋಭಾವ ಬೆಳೆಸಿಕೊಳ್ಳಿ. ಹಾಗೆ ಬೇರೆಯವರಲ್ಲೂ
ಬೆಳೆಸಿ. ಸಾವಿರಾರು ವರ್ಷಗಳ ಹಿಂದೆಯೇ ಸತ್ತುಹೋಗಿರುವ ಸಂಸ್ಕೃತಕ್ಕೆ ಜೋತು ಬೀಳಬೇಡಿ. ನನ್ಮಗ ದೊಡ್ಡವನಾಗಿ
ಡಾಕ್ಟರೋ ಇಂಜಿನಿಯರೋ ಆಗಬೇಕು ಎನ್ನುವುದೇ ನನ್ನ ಆಸೆ" ಎಂದು ತಾನು ಉತ್ತಮ ವಾಗ್ಮಿ ಎಂದು ಸಾಬೀತುಪಡಿಸಿದ.
ತಂದೆ ಎದುರಾಗಿ ಹೆಂಡತಿ ಗಲ್ಲಕ್ಕೆ ಮುದ್ದು ಕೊಟ್ಟ!
"ಮಗೂನ್ನ ಚೆನ್ನಾಗಿ ನೋಡ್ಕೋ ನಮ್ಮಪ್ಪಾಜಿನೂ ಒಂದು ಮಗೂಂತ ತಿಳ್ಕೋ" ಬರಸೆಳೆದು ಅಪ್ಪಿಕೊಂಡ. ಗಂಡಾ
ಗಂಡಾ ಅಂತ ತೀರ ಪತಿಭಕ್ತಿ ತೋರಿಸಬೇಡ. ವಾಕಿಂಗೂಂತ ಪಿಚ್ಚರ್ರೂಂತ ಹೋಗ್ತಿರು..." ಮತ್ತೆ ಕಿವಿಯಲ್ಲಿ
ಎನೋ ಪಿಸುಗುಟ್ಟಿದ.
ಆಕೆ ಗೋಳೊ ಅಂತ ಅಳ ತೊಡಗಿದಳು. ಕೆನ್ನೆ ಕೆನ್ನೆ ಬಡಿದುಕೊಂಡಳು. ನನ್ನ ಏನೂಂತ ತಿಳ್ಕೊಂಡೀರಿ ಅಂದಳು.
"ಛೀ ಹುಚ್ಚಿ... ನಾನು ಹಾಗೆ ಅಲ್ಲ. ನ್ನ್ಗಲ್ಲಿ ವಾರಕ್ಕೋದು ಹೊಸ ಹುಡುಗಿ ಬೇಕು. ಅದ್ಕೆ ನೀನೆಂತಿಯಾ"
ಸಮಾಧಾನ ಪಡಿಸಿದ.
"ವಿಚಿತ್ರ ಮಗ ಹುಟ್ಟಿಬಿತ್ತಿದ್ದನಲ್ಲಾ" ಶಾಸ್ತ್ರಿಗಳು ಕೈ ಕೈ ಹಿಚುಕಿಕೊಂಡರು.
"ಇವ್ನಿಗೆ ಹುಚ್ಚು ಹಿಡಿದಿದೆಯೋ ಹೇಗೆ?"
ಮತ್ತೇನನ್ನೋ ಹೇಳಲು ಪ್ರಯತ್ನಿಸಿದ ಅಶ್ವಥ್
"ನೀನು ಎಷ್ಟು ಬೇಗ ಮನೆ ಬಿಡ್ತೀಯೊ ಅಷ್ಟು ಒಳ್ಳೆಯದು. ಇನ್ನೈದು ಸ್ಥಾನಕ್ಕೆ ಗುರು ಬತಾನೆ. ನೀನು
ಮೊದಲೇ ಕುಜನ ಬಲ ಇಲ್ಲದವನು" ಶಾಸ್ತ್ರಿಗಳು ಬಲವಂತದಿಂದ ಹೊರಡಿಸಿದರು.
ಅವರೆಲ್ಲ ಅಂಗಳಕ್ಕೆ ಬಂದಾಗ ಅಮೃತ ವೇಳೆ ಅಂತಿಮ ಸ್ಥಿತಿಯಲ್ಲಿತ್ತು.
ಮಗ ಹೋದ ಮೇಲೆ ಶಾಸ್ತ್ರಿಗಳು ಕೆಲವು ದಿನ ಅನ್ನ ನೀರು ಸರಿಯಾಗಿ ಮುಟ್ಟಲಿಲ್ಲ.
ಪ್ರಾತಃವಿಧಿ. ಸಂಧ್ಯಾವಂದನೆಗಳನ್ನು ಶಾಸ್ತ್ರೋಕ್ತವಾಗಿ ಮಾಡಲಿಲ್ಲ. ಏನು ಮಾಡಿದರೆ ಏನಿದೆ? ಮ್ಲೇಚ್ಚರ
ನಾಡಿನಿಂದುದಿಸಿದವಂತೆ ತಾನೊಬ್ಬನೆ ಮೆರೆದಾಡಿದರೆ ಸಾಕಿತ್ತಲ್ಲವೆ? ಸೊಸೆಯನ್ನು ಹಾಗೆ...
"ಶಿವ ಶಿವಾ ರಾಮ ರಾಮಾ"
ಶಾಸ್ತ್ರಿಗಳು ಸೊಸೆ ಕಡೆ ಪ್ರಶ್ನಾರ್ಥಕವ್
ಅಗಿ ನೋಡಿದರು.
ಆಲುಮೇಲು ಮುಖದಲ್ಲಿ ಪ್ರಾಯಶ್ಚಿತ್ತದ ಬೆಂಕಿ ಉರಿಯುತ್ತಿತ್ತು.
ಪಂಜಾಬಿ ದಿರಿಸು ಧರಿಸಿ ಮೆರೆಯಲು ಆಕೆ ಆಶಿಸಿದ್ದಳೇನು?
ಶಾಸ್ತ್ರಿಗಳು ಪೂಜಾ ಮಂದಿರ ಸೇರಿಕೊಂಡರು. ತಾಸುಗಟ್ಟಲೆ, ತಮ್ಮ ಇಚ್ಛಾ ದೈವವನ್ನು ಅರ್ಚಿಸಿದರು, ಪೂಜಿಸಿದರು.
ತಮ್ಮ ವಂಶ್ದ ಗೌರವ ಕಾಪಾಡುವ ಬುದ್ದಿಯನ್ನು ತಮ್ಮ ಸುಪುತ್ರನಿಗೆ ದಯಪಾಲಿಸುವಂತೆ ಮೊರೆ ಇಟ್ಟರು.
ಶೃಂಗೇರಿ ಶಾರದಾ ಮಾತೆಯ ಫೋಟೊದ ಎಡಭಾಗದದಿಂದ ಪಾರಿಜಾತ ಪುಷ್ಪ ಉದುರಿತು. ಶಾಸ್ತ್ರಿಗಳು ಸಂತುಷ್ಟಗೊಂಡರು.
ಅವನಿಗೆ ಶಾಸ್ತ್ರೊಕ್ತವಾದ ವಿದ್ಯೆ ಕೊಡಲು, ಮಹಾನ್ ಸಂಸ್ಕೃತನ್ನಾಗಿ ಮಾಡಲೆಂದೇ ಅಲ್ಲವೆ ತಾವು ಅವನನ್ನು
ಸಂಸ್ಕೃತ ಪಾಠಶಾಲೆಗೆ ಸೇರಿಸಿದ್ದು. ಅವನು ದಾರಿ ತಪ್ಪಿದ್ದಕ್ಕೆ ತಾವು ಭಾಧ್ಯಸ್ಥರೇನು? ತಾವು ಅವನು
ಮಿಲಿಟರಿ ನೌಕರಿ ಸೇರಿದ್ದಕ್ಕೆ ಭಾಧ್ಯಸ್ಥರೇನು?
ತಮ್ಮ ವಂಶದ ವೃಕ್ಷ ಪುಣ್ಯಶೇಷದಿಂದಲ್ಲವೇ ಶಾರದಾ ಮಾತೆ ಪ್ರಸಾದ ದಯಪಾಲಿಸಿದ್ದು. ಶಾಸ್ತ್ರಿಗಳು ಹರ್ಷಚಿತ್ತರಾದರು.
ಮೋದಲಿನಂತೆ ಹೆಚ್ಚು ಚಟುವಟಿಕೆಯಿಂದ ದಿನಚರಿ ಮುಗಿಸತೊಡಗಿದರು.
ಅಶ್ವಥ್ ವರ್ಷಕ್ಕೊಂಡೆರಡು ಬಾರಿ ಬಂದು ಹೋಗುತ್ತಿದ್ದ. ದಿನಗಳೆಂದಂತೆ ಆತ ಹೆಚ್ಚು ಆಧುನಿಕವಾಗುತ್ತಿದ್ದ.
ಇದ್ದ ಕೆಲವು ದಿನಗಳಲ್ಲಿ ಮನೆಯಲ್ಲು ಆಧುನಿಕತೆಯನ್ನು... ಸನತನತೆಯ ಕತ್ತು ಕಿವಿಚುವಂಥ ಗಾಳಿಯನ್ನು
ಬೀಸಿ ಹೋಗುತ್ತಿದ್ದ.
ತನ್ನ ಮಗ ಮುಂದೇನಬೇಕೆಂದು ನಿರ್ಧರಿಸುವುದು ತಂದೆಯಾದ ತನ್ನ ಹಕ್ಕು ಎಂದು ವಾದ ಮಾಡುತ್ತಿದ್ದ. ಎಂದೊ
ಸತ್ತು ಹೋಗಿರುವ ಸಂಸ್ಕೃತ ಎಂಬ ಶವದೊಂದಿಗೆ ತನ್ನ ಮಗನನ್ನು ಗಂಟು ಹಾಕಿ ಅವನ ಜೀವನವನ್ನು ಹಾಳು ಮಾಡಬೇಡಿರೆಂದು
ಪರಿಪರಿಯಾಗಿ ಹೇಳಿದ. ಕನ್ನಡ ಇಂಗ್ಲಿಷ್ ಕಲಿಸಿ ಅವನ ಬಾಳಿಗೆ ಬೆಳಕು ಕೊಡಿರೆಂದು ಅಶ್ವಥ್ ಬಂದಾಗಲೆಲ್ಲ
ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದನು.
ಮಾವನವರ ಹೃದಯಕ್ಕೆ ನೋವಾಗುವಂತೆ ಮಾಡದಿರುವಂತೆ ಮಾತಾಡದಿರಲು ಅಲುಮೇಲು ಗಂಡನಿಗೆ ತಿಳಿಹೇಳುತ್ತಿದ್ದಳು.
ಅಶ್ವಥ್ ನಾಗರೀಕತೆಯ ಹಲವು ರೂಪಗಳನ್ನು; ತಾಂತ್ರಿಕ ಜ್ಞಾನ ಪಡೆದು ಅಬಿವೃದ್ದಿ ಹೊಂದಿರುವ ನಗರಗಳ ಬಗ್ಗೆ
ವಿವರಿಸುತ್ತಿದ್ದ. ಈ ಆಧುನಿಕ ಯುಗದಲ್ಲಿ ವೈದಿಕ ಅವಲಂಬಿಸಿ ಬದುಕುವುದು ಎಷ್ಟು ಕಷ್ಟಸಾಧ್ಯವೆಂಬ ಬಗ್ಗೆ
ಹೇಳುತ್ತಿದ್ದ.
ಕ್ರಮೇಣ ಅಲುಮೆಲುಗೆ ಅರ್ಥವಾಯಿತಾದರೂ ಶಾಸ್ತ್ರಿಗಳ ಇಚ್ಛಾಶಕ್ತಿಯ ವಿರುದ್ಧ ಈಜುವ ಶಕ್ತಿ ಆಕೆಗಿರಲಿಲ್ಲ.
ಶಾಸ್ತ್ರಿಗಳ ಸನಾತನ ಮನಸ್ಸು ಕರುಳುಬಳ್ಳಿಯ ಯಾವ ನುಡಿಗೂ ಕರಗುವ ಪೈಕಿಯಾಗಿರಲಿಲ್ಲ. ಅದು ಕಡಿದಾದ
ಕೊಡಚಾದ್ರಿ ಬೆಟ್ಟಕ್ಕಿಂತಲೂ ಗಟ್ಟಿಯಾಗಿತ್ತು ದುರ್ಗಮವಾಗಿತ್ತು.
ಶ್ರಾವಣಕ್ಕೆ ಶಾಮಾಶಾಸ್ತ್ರಿಗಳಿಗೆ ನಾಲ್ಕು ತುಂಬಿ ಐದರಲ್ಲಿ ಬಿತ್ತು. ಅಕ್ಷರಾಭ್ಯಾಸಕ್ಕೆ ಮತ್ತು
ಉಪನಯನಕ್ಕೆ ಸೂಕ್ತ ಸಮಯ ಬಂತು. ಅಗ್ರಹಾರದ ಹಿರಿಯರೊಂದಿಗೆ ಈ ಬಗ್ಗೆ ಸಮಾಲೋಚಿಸಿದರು. ಕಂಚಿಯ ಜಗದ್ಗುರು
ಚಂದ್ರಶೇಖರ ಸ್ವಾಮಿಗಳ ಅಮೃತ ಹಸ್ತದಿಂದ ’ಓಂ’ ಎಂದು ದೇವನಾಗರಿ ಲಿಪಿ ತಿದ್ದಿಸಿ ಮೊಮ್ಮಗನ ಭವಿಷ್ಯ
ಬಂಗಾರವಾಗುವುದೆಂದು ಸೂಚಿಸಿದರು. ಪುಜ್ಯರಿಂದ ಅಕ್ಷರಾಭ್ಯಾಸ ಮಾಡಿಸಿಕೊಂಡ ಅನೇಕರು ದೇಶ ವಿದೇಶಗಳಲ್ಲಿ
ತುಂಬ ಹೆಸರು ಮಾಡಿರುವರೆಂದು ವಿವರಿಸಿದರು. ಅದು ಶಾಸ್ತ್ರಿಗಳಿಗೆ ಗೊತ್ತಿರದ ಸಂಗತಿ ಏನಲ್ಲ! ತಮ್ಮ
ವಂಶದ ಹಿರಿಯರೆಲ್ಲ ಕಂಚಿಪೀಠದೊಂದಿಗೆ ಒಂದಿಲ್ಲೊಂದು ಅನುಭಾವದ ಸಂಬಂದ ಇತ್ತುಕೊಂಡಂಥವರೇ. ಮಗ ಅಶ್ವಥ್ನಿಗೆ
ಇಂಥ ಎಚ್ಚರಿಕೆ ತೆಗೆದುಕೊಂಡಿದ್ದರೆ ಅವನು ಹೀಗೆ ಮಿಲಿಟರಿ ಸೆರುತ್ತಿರಲಿಲ್ಲ.
ಸೊಸೆಗೆ ವಿವರಿಸಿದರು. ಅಕೆಗೂ ಅರ್ಥವಾಗಲಿಲ್ಲ. ಪ್ರತಿಯೊಂದಕ್ಕು ಕವಲೆತ್ತಿನಂತೆ ತಲೆ ಅಡ್ಡಾಡಿಸುವುದನ್ನು
ರೂಢಿಸಿಕೊಂಡಿದ್ದಳು.
ದೂರದ ಕಂಚಿಗೆಹೊರಡುವ ದಿನ ನಿಗದಿಪಡಿದಿದರು. ಮನೆ ಮುರುಕಟ್ಟಿನಲ್ಲಿದ್ದ ಚೂರು ಪಾರು ಬಂಗಾರ ಮಾರಿ
ಹಣ ಜೋಡಿಸಿದರು. ಅದರೊಂದಿಗೆ ಮಗ ಕಳಿಸಿದ್ದ ಹಣವೂ ಇತ್ತು.
ಅವರು ಕಂಚಿಗೆ ಹೊರಟು ನಿಂತದ್ದನ್ನು ಅಗ್ರಹಾರದವರು ಬೆಂಬಲಿಸಿದರು. ರೈಲ್ವೇ ನಿಲ್ದಾಣಕ್ಕೆ ಕೆಲವು
ಹಿರಿಯರು ತಮ್ಮ ಬಲಂಗೋಚಿಗಳೊಂದಿಗೆ ಹೋಗಿ ಶಾಆಸ್ತ್ರಿಗಳನ್ನು, ಅವರ ಕುಟುಂಬದ ಸದಸ್ಯರನ್ನೂ ಬೀಳುಕೊಟ್ಟು
ವಾಪಸಾದರು.
ಪ್ರಯಾಣದಲ್ಲಿ ಅಹಿತಕರ ಸಂಘಟನೆಗಳು ಸಂಭವಿಸಲಿಲ್ಲ. ಹೊರಟ ಘಳಿಗೆ ಚೆನ್ನಾಗಿತ್ತು. ಶ್ರೀಗಳು ಅವರ ಪುಣ್ಯಕ್ಕೆ
ಶ್ರೀಕ್ಷೇತ್ರದಲ್ಲಿದ್ದರು. ಸೂಕ್ತ ಫ಼ೀಜು ತೆತ್ತು ಮಗನಿಗೆ ಉಪನಯನ ಮಾಡಿಸಿದರು.
ಮಹಾರಝರ ಆಸ್ಥಾನ ವಿದ್ವಾನ್ ಶಾಮಾಶಾಸ್ತ್ರಿಗಳ ಮರಿಮೊಮ್ಮಗನನ್ನು ನೋಡಿ ಶ್ರೀಗಳು ಮೌನದಲ್ಲೂ ಸಂತೊಷ
ವ್ಯಕ್ತ ಪಡಿಸಿದರು. ಶ್ರೀಕ್ಷೇತ್ರದಲ್ಲಿ ಎಲ್ಲಾ ಘಳಿಗೆಗಳೂ ಅಮೃತಮಯವೇ. ಮಂಗಲಮಯವೇ. ಶ್ರೀಗಳಿಂದ ಶಿಕ್ಷಣ
ಶ್ರೀಕಾರ ಹಾಕಿಸಿಕೊಂಡವರು ಏನು ಆಗಿದ್ದಾರೆ? ಏನು ಕಥೆ?
"ನಿಮಗೆ ಗೊತ್ತಿದೆಯೋ ಇಲ್ಲವೋ, ಜವಹರಲಾಲ ನೆಹರೂ ಸ್ವತಂತ್ರ ಹೋರಾತಕ್ಕೆ ಅಂತ ಮದ್ರಾಸಿಗೆ ಬಂದಿದ್ದಾಗ,
ತಮ್ಮ ಏಕಮಾತ್ರ ಪುತ್ರಿ ಇಂದಿರಾ ಪ್ರಿಯದರ್ಶಿನಿಗೆ ಇಲ್ಲಿಯೇ ಅಕ್ಷರಾಭ್ಯಾಸ ಮಾಡಿಸಿದ್ದು" ಜ್ಞಾನ
ವೃದ್ಧರೋರ್ವರು ನುಡಿದರು.
ಹುಟ್ಟಿದಾರಭ್ಯ ಕೇವಲ ಪ್ರಾಣಾಯಾಮ, ಗಾಯತ್ರಿ ಮಂತ್ರಗಳಿಮ್ದಲೇ ಪಾರಮಾರ್ಥದ ಬದುಕು ಬದುಕುತ್ತಿರುವ
ಶ್ರೀಗಳ ಸನ್ನಿದಿಯಲ್ಲಿ ಮಗುವನ್ನು ಕೂದ್ರಿಸಿದರು,
ದೈವದತ್ತ ಸಾಕಾರಮೂರ್ತಿಯಂಥ ಶ್ರೀಗಳು ಬಂದು ಪವಿತ್ರ್ ಆಸನದಲ್ಲಿ ಸುಖಾಸೀನರಾದರು. ಮಗುವಿನ ಪುತ್ತ
ತಲೆಯನ್ನು ಸ್ಪರ್ಶಿಸಿದರು. ಹಾಗೆಯೇ ಶಿಖಿರಪ್ರಾಯವಾಗಿ ಕಂಗೊಳಿಸುತ್ತಿದ್ದ ಅದರ ಜುಟ್ಟನ್ನೂ ಸಹ.
ಕಾಮಾಕ್ಷಿ ದೇವಾಲಯದ ಘಂಟಾನಾದವಾಗುತ್ತಿರುವಾಗಲೇ ಮಗುವಿನ ಕೈಯಿಂದ ’ಓಂ’ ಒಂಬೊಂದು ದೆವನಾಗರಿ ಲಿಪಿಯ
ಪವಿತ್ರ ಅಕ್ಷರವನ್ನು ತಿದ್ದಿಸಿದರು.
ಆ ಸನ್ನಿವೇಶದಿಂದ ಶಾಸ್ತ್ರಿಗಳು ಪುಳಕಿತಗೊಂಡರು. ಇನ್ನು ತಮ್ಮ ಮೊಮ್ಮಗನ ಬದುಕಿನ ಭಾಗ್ಯದ ಬಾಗಿಲು
ತೆರಿಯಿತೆಂದೇ ಭಾವಿಸಿದರು.
ಕಂಚಿಯಲ್ಲಿ ಎರಡು ದಿನ, ತಿರುಪತಿಯಲ್ಲಿ ವೆಂಕಟೇಶ್ವರ ಸನ್ನಿಧಿಯಲ್ಲಿ ಎರಡು ದಿನ ಹಾಗೆಯೇ ಶ್ರೀಕೃಷ್ಣದೇವರಾಯರ
ಪೂರ್ವಾಶ್ರಮವಾದ ಚಂದ್ರಗಿರಿಯಲ್ಲೊಂದು ದಿನವಿದ್ದು ಊರಿಗೆ ವಾಪಸ್ಸಾದರು.
ಆಗ್ರಹಾರದ ಎಲ್ಲರೂ ಬಂದು ಮಗುವಿನ ತಲೆಯ ಜುಟ್ಟನ್ನು ನೋಡಿದ್ದೇ ನೋಡಿದ್ದು. ಸ್ಪಶಿಸಿದ್ದೇ ಸ್ಪರ್ಶಿಸಿದ್ದು.
ಹೊಗಳಿದ್ದೇ ಹೊಗಳಿದ್ದು. ತೀರ್ಥ ಪಡೆದದ್ದೇ ಪಡೆದದ್ದು.; ಪ್ರಸಾದ ಸ್ವೀಕರಿಸಿದ್ದೇ ಸ್ವೀಕರಿಸಿದ್ದು.
ಅಗ್ರಹಾರದ ಸಹ ನಿವಾಸಿಗಳು ಕೆಟ್ಟ ಕೈಯಿಂದ ಮುಟ್ಟಿದ್ದಕ್ಕೋ, ಕೆಟ್ಟ ಕಣ್ಣಿಂದ ನೋಡಿದ್ದಕ್ಕೋ ಏನೋ
ಮಗು ಶಾಮು ಸಂಜೆ ಜ್ವರದಿಂದ ಹ್ಹಾಂ! ಹ್ಹೂಂ ಅನ್ನ ತೊಡಗಿತು. ಶಾಸ್ತ್ರಿಗಳು ಜ್ವರ ಸ್ಥಂಬನ ಮಂತ್ರ
ಹಾಕಿದರು. ಮಗು ಮೆಟ್ತಿ ಬೀಳತೊಡಗಿತು. ತಾಮ್ರದ ತಗಡಿನ ಯಂತ್ರ ಮಂತ್ರಿಸಿ ಅದರ ಉಡಿದಾರಕ್ಕೆ ಕಟ್ಟಿದರು.
ಅರುಣೋದಯ ಸಮಯದಲ್ಲಿ ಮಗನ ಹಣೆಗೆ ನೀಲಗಿರಿ ಎಣ್ಣೆ ಲೇಪಿಸುತ್ತಿದ್ದುದನ್ನು ಅದೇ ತಾನೆ ಅರ್ಚನಾ ಕೋಣೆಯಿಂದ
ಶಾಸ್ತ್ರಿಗಳು ಕಂಡರು.
"ಮಗುವಿಗೆ ಜ್ವರ ಇಳಿದಿಲ್ಲವೇನಮ್ಮಾ?" ಎಂದು ಉಚ್ಚರಿಸಿದರೋ ಇಲ್ಲವೋ ಅಷ್ಟರಲ್ಲಿ ಈ ಮಗು ಮಾರುದ್ದ
ದ ಭೇದಿ ಮಾಡಿಕೊಂಡಿತು. ಹಾಗೆ ಒನ್ನಿಷ್ಟು ಫೈವ್ನಂತೆ ವಂತಿಯನ್ನು ಸಹ.
ಮಧ್ಯನ್ನದ ಹೊತ್ತಿಗೆ ಅಲುಮೇಲು ಕಂಗಾಲಾಗಿ ಅಳತೊಡಗಿದಳು.
"ಮಾವನವರೇ ಮಗೂನ ಇಳಿಸಿಕೊಡ್ರಿ" ಎಂದು ಸೆರಗೊಡ್ಡಿದಳು.
"ಅದಕ್ಯಗಿಷ್ಟು ಕಂಗಲಾಗಿರುವಿ ತಾಯಿ. ಯಂತ್ರ ಮಂತ್ರಕ್ಕೂ ಇದು ಜಗ್ಗಲಿಲ್ಲವೆಂದ ಮೇಲೆ ಗ್ರಹದೋಷವಿರಬೇಕು
ತಡೆ ನೋಡೋಣ" ಎಂದವರು ಪಂಚಾಂಗದ ಗಂಟು ಬಿಚ್ಚಿದರು.
ಸ್ವತಿ ನಕ್ಶತ್ರಕ್ಕೆ ಸವಾಲೆಸೆದಿರುವ ಗ್ರಹಗಳನ್ನು ತರಾಟೆಗೆ ತೆಗೆದುಕೊಂಡರು. ’ಇದೆಲ್ಲಾ ಮಂಗಳನ ಕೀಟಲೆ’
ಉದ್ಗರಿಸಿದರು.
ಅಗ್ರಹಾರದಲ್ಲಿದ್ದ ತಿರುಚೈಂದೂರು ತುರುಮಲಯಿಂಗಾರರ ಮನೆಗೆ ಹೋದರು. ಅವರು ಹತ್ತಾರು ಮಂದಿ ಬ್ರಿಟಿಷ್
ಉನ್ನತಾಧಿಕಾರಿಗಳಿಗೆ ಅವರವರ ಜಾತಕ ಬರೆದುಕೊಟ್ಟು ವಿಶ್ವವಿಖ್ಯಾತರಾಗಿದ್ದಂಥವರು. ಪಾಪ! ಗ್ರಹ ನಿಹಾರಿಕೆಗೆಗಳ
ಮೇಲೆ ಸವಾರಿ ಮಾಡಿದ್ದಂಥ ಆ ಮಹಾನುಭಾವರು ವಾತಪಿತ್ತಕಫಗಳಂಥ ರೋಗ ರುಜಿನಗಳಿಂದ ನರಳುತ್ತಿದ್ದರು. ಕಳೆದ
ಅಮಾವಾಸೆ ಸಂಧರ್ಭದಲ್ಲಿ ಊರ ಗೌಡನಿಂದ ಗೋದಾನ ಪಡೆಯುತ್ತಿರುವಾಗ ಜ್ಯೋತಿಷ್ಯ ಮಾರ್ತಾಂಡರ ದೇಹದ ವಾಮಭಾಗಕ್ಕೆ
ಪಾರ್ಶ್ವವಾಯು ಬಡಿದುಬಿಡಬೇಕೆ?
ಶಾಸ್ತ್ರಿಗಳು ಹೋಗಿ ಅವರ ಬಲಭಾಗದಲ್ಲಿ ಕೂತು ಪಾನಕ ಸ್ವೀಕರಿಸಿ ಆರೋಗ್ಯ ಭಾಗ್ಯ ವಿಚಾರಿಸಿದರು. ನಂತರ
ತಮ್ಮ ಮೊಮ್ಮಗನ ಬಗ್ಗೆ ಮತೆತ್ತಿದರು. ಅದನ್ನೆಲ್ಲ ತಿರುಮಲೈಮ್ಗಾರರ ಬಲಕಿವಿಯಲ್ಲಿ ಗಟ್ಟಿಯಾಗಿ ಹೇಳಬೇಕಾಗಿತ್ತು.
ಅವರ ನಾಲಿಗೆಯ ಅರ್ಧ ಭಾಗದಿಂದ ಏನನ್ನೋ ಹೇಳಲು ಪ್ರಯತ್ನಿಸಿದರು. ದೇವನಾಗರಿ ಭಾಷೆ ಕೀರಕ್ ಕೀರಕ್ ಅಂತ
ಹೋರಟಿತು. ಹಾಗೆ ಅರ್ಥ ಮಾಡಿಕೊಂಡು ಹೀಗೆ ಹೊರಟುಬಂದರು.
ಕ್ಷುದ್ರ ದೇವತೆಯೊಂದು ಮೊಮ್ಮಗನಿಗೆ ಬಡಿದುಕೊಂಡಿದೆ ಎಂದುಕೊಂಡು ಹೋಮ ಹವನ ಮಾಡಿದರು. ಎಳ್ಳು ಔಡಲ
ಶೇಂಗಾ ಇವೇ ಮೊದಲಾದ ಪಂಚ ತೈಲದಲ್ಲಿ ಮಗನ ಪ್ರತಿಬಿಂಬ
ಮಾಡಿಸಿದರು. ಅದು ಮಾಡಿಸಿದ್ದೇ ತಡ ಶಮಣ್ಣ ಮತ್ತೊಮ್ಮೆ ನೀರು ನೀರಾದ ಭೇದಿ ಮಾಡಿಕೊಂಡಿತು. ಜೊತೆಗೆ
ಒಂದು ಅದ್ಭುತವಾದ ವಾಂತಿಯನ್ನೂ ಸಹ.
ತನ್ನ ಮಗ ತನ್ನ ಕೈ ಬಿಡುತ್ತಿದ್ದಾನೆಂದು ಅಲುಮೆಲು ಆಕಾಶ ಕಳಚಿ ಬೀಳುವಂತೆ ಅಳತೊಡಗಿದಳು.
"ಮಾವನವರೇ, ಡಕ್ತ ಬಳಿಗೆ ಹೋಗೋಣ" ಅಕೆ ಒಂದೇ ಸಮನೆ ಪೀಡಿಸತೊಡಗಿದಳು.
ಕಾಯಿಲೆ ಕಸಾಲೆಗಳಿಗೆ ಇಂಗ್ಲಿಷ್ ಕಲಿತ ಡಾಕ್ತರ್ ಬಳಿಗೆ ಹೋಗುವುದೆಂದರೇನು? ರಾಮಾ! ರಾಮಾ! ಕಿವಿ ಮುಚ್ಚಿಕೊಂಡರು.
ತಮ್ಮ ವಂಶದವಯಾರೂ ಇಂಗ್ಲಿಷ್ ಮಾತ್ರೆ ನೊಂಗಿರುವುದುಂಟೆ, ಸುಜಿ ಮಾಡಿಸಿಕೊಂಡಿರುವುದುಂಟೆ?
ಬೆಳೆಗ್ಗೆ ಬಂದ ಬೀಗರೂ ಸಹ ತಮ್ಮ ಮಗಳ ವಾದವನ್ನು ಸಮರ್ಥಿಸಿದರು. ಕೊನೆಗೂ ಒಪ್ಪಿಕೊಂಡರು ಶಾಸ್ತ್ರಿಗಳು.
ಆಚಾರ ವಿಚಾರದಲ್ಲಿ ಪರಿನಿತಿ ಇರುವ ತಮ್ಮ ಗೋತ್ರದವರೇ ಆದ ಡಾಕ್ಟರ್ ಬಳಿಗೆ ಹೋದರು.
ಮಗುವಿನ ದೇಹ ತಪಾಸಣೆ ಮಾಡಿದ ಡಾಕ್ಟಗೆ ಶಾಸ್ತ್ರಿಗಳ ಮೆಲೆ ಸಿಟ್ಟು ಬಂತು. "ಇಷ್ಟೊಂದು ದಿಹೈಡ್ರೇಟಾಗಿ
ಮಗು ಫ್ಯಾಟಲ್ ಕಂಡೀಷನ್ ತಲುಪಿದೆ, ಡಾಕ್ಟರ್ ಬಳಿಗೆ ಕರೆದುಕೊಂದು ಬರುವುದು ಬಿಟ್ಟು ಕುಂಡಲಿ ನೋಡ್ಕೊಂಡು
ಕೂತಿದ್ದೀರಲ್ಲ ನೀವೇನು ಮನುಷ್ಯರೋ ರಾಕ್ಷಸರೋ" ಹೀಗೆ ಡಾಕ್ಟರ್ ಬಾಯಿಗೆ ತೋಚಿದಂಎ ಮಾತನಾಡಿದರು.
ಆ ಡಾಕ್ಟರ್ ಬೇರೆಆರೂ ಅಲ್ಲ. ದೂರದವಂತವರೂ ಅಲ್ಲ. ಅವರ ತಂದೆ ನಾಗಭೂಷಣ ಶರ್ಮ ಪಂದಿತರೂ ತಾವೂ ಗಳಸ್ಯ
ಕಂಠಸ್ಯ. ಅಲ್ಲದೇ ಈ ಡಾಕ್ಟರನ ಜನ್ಮಕುಂಡಲಿಯನ್ನು ಬರೆದದ್ದು ತಾವೆ? ಇಂಗ್ಲಿಷ್ ಕಲಿತ ಇವರಿಗೆ ಆಧುನಿಕತೆಯ
ಗರ ಬಡಿದಿದೆ. ಶಾಸ್ತ್ರಿಗಳು ಮೌನವಹಿಸಿದರು.
ಮಗು ಶಾಮಣ್ಣನ ಚಿಕಿತ್ಸೆ ಆಸ್ಪತ್ರೆಯಲ್ಲಿ ಇಡಿ ವಾರ ನಡೆಯಿತು. ಕ್ರಮೇಣ ವಾಂತಿ ಭೇದಿ ನಿಂತು ಮಗು
ಚೇತರಿಸಿಕೊಂಡು ಮುಗುಳ್ನಗತೊಡಗಿತು. ಒಂದು ಒಳ್ಳೆ ಮಹೂರ್ತ ನೋಡಿ ಮಗುವನ್ನು ಮನೆ ತುಂಬಿಸಿಕೊಂಡರು.
ಮಗ ಅಶ್ವಥ್ಗೆ ತಂತಿ ಕಳಿಸಿದ್ದೇನೋ ನಿಜ. ಚೀನದವರು ಭಾರತದ ಗಡಿಯನ್ನು ಪ್ರವೇಶಿಸುವುದನ್ನು ತದೆಯಲು
ತುಕುಡಿಯ ನೇತೃತ್ವ ವಹಿಸಿದ್ದಾನಾತ. ಶತೃಗಳು ಸಾಕಷ್ಟು ದೂರ ಹಿಮ್ಮೆಟ್ಟಲು ತಿಂಗಳುಗಳೇ ಹಿಡಿದವು.
ಚಿಯಾಂಗ್ ಕುಂಯ್ ಎಂಬ ಶತ್ರು ಸೈನಿಕನೋರ್ವ ಗುಟ್ಟಾಗಿ ಗಡಿ ಪ್ರವೇಶಿಸಿ ಬಂದುಬಿಟ್ಟಿದ್ದ. ಆ ಎಕಾಂಗ
ವೀರ ಅಶ್ವಥ್ ತುಕುದಿಯ ಮೇಲೆ ಇದ್ದಕ್ಕಿದ್ದಂತೆ ಗ್ರೆನೇಡ್ ಧಾಳಿ ಆರಂಭಿಸಿಬಿಟ್ಟ. ಮಧ್ಯರಾತ್ರಿಯಲ್ಲಿ
ಅವನು ಸಾಕಷ್ಟು ಹೋರಾಡಿದ. ಇನ್ನೇನು ತಾನು ಸಾಯುತ್ತಿರುವೆನೆಂದಾಗ ಕೈ ಬಾಬನ್ನು ಬೀಸಿ ಅಶ್ವಥ್ ಕಡೆ
ಎಸೆದ. ಅದು ಸೀದ ಬಂದದ್ದೆ ಅಶ್ವಥ್ ತೊಡೆ ಭಾಗಕ್ಕೆ ಬಡಿಯಿತು. ’ಜೈಹಿಂದ್" ಎಂದು ಜೋರ್ಗಿ ಕೂಗಿ ಅಶ್ವಥ್
ಮಾತೃಭೂಮಿಗೆರಗಿದ. ಕೂಡಲೆ ಮೂರ್ಛೆ ಹೋದ ಅವನನ್ನು ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯಿತು.
ಅವನ ಇಚ್ಛೆಯಂತೆ ಅವನ ತಂದೆಯವರಾದ ಶಾಸ್ತ್ರಿಗಳಿಗೆ ತಿಳಿಸಲಿಲ್ಲ. ಅವನ ಎಡಗಾಲನ್ನು ವೈದ್ಯರು ಪೂರ್ತಿ
ಕೊಯ್ದು ತೆಗೆದುಬಿಟ್ಟಿದ್ದರು. ಪೂರ್ಣ ಗುಣಮುಖನಾಗಲು ಕೆಲವು ತಿಂಗಳುಗಳೇ ಹಿಡಿದವು. ಕೊನೆಗೊಂದು ದಿನ
ಅವನಿಗೆ ಕೊಡುವುದೆಲ್ಲವನ್ನು ಕೊಟ್ಟು,
ನಿವೃತ್ತಿ ಮುಂಜೂರು ಮಾಡಿದರು. ದೇಶ ರಕ್ಷಣೆಗಾಗಿ ತನ್ನ ಕಾಲನ್ನೇ ಬಲಿ ಕೊಟ್ಟ ಅಶ್ವಥ್ನನ್ನು ಸೇನಾ
ಮುಖ್ಯಸ್ಥರೆಲ್ಲಾ ಕೊಂಡಾಡಿದರು. ಎಲ್ಲರ ಕಣ್ಣುಗಳು ನೀರಿನಿಂದ ತುಂಬಿದವು. ಆತ ವೇದಿಕೆಗೆ ಊರುಗೊಲು
ಸಹಾಯದಿಂದ ಬಂದ. ಫೀಲ್ಡ್ ಮಾರ್ಷಲ್ ಎಕ್ಸ್ವೈಜೆಡ್ರವರು ತಮ್ಮ ಕೈಯಾರೆ ಅವನಿಗೆ ಶಾಲು ಹೊದಿಸಿದರಲ್ಲದೆ,
ಪುಷ್ಪ ಕರಂಡಕ ನೀಡಿದರು. ಅಶೋಕ ಚಕ್ರ ದಯಪಾಲಿಸುವಂತೆ ರಾಷ್ತ್ರಪತಿಗಳಿಗೆ ಶಿಫಾರಸು ಮಾಡುವುದಾಗಿ ಘೋಷಿಸಿದರು.
ಸೇನೆಯ ಹಲವು ಪ್ರಮುಖರು ಅಶ್ವಥ್ನನ್ನು ರೇಲ್ವೆ ನಿಲ್ದಾಣದವರೆಗೆ ಹೋಗಿ ಬೀಳ್ಕೊಟ್ಟು ವಾಪಾಸಾದರು.
ಇತ್ತ ಮನೆಯಲ್ಲಿ ಶಾಸ್ತ್ರಿಗಳು ತಮ್ಮ ಮಗನಿಗಾಗಿ ಅಲುಮೇಲು ತನ್ನ ಗಂಡನಿಗಾಗಿ; ಆಗಲೆ ಪುಟ್ಟ ಪುಟ್ಟ
ಹೆಜ್ಜೆ ಇಟ್ಟು ಅಡ್ಡಾಡುತ್ತಿದ್ದ; ಹಾಗೂ ಶುಕ್ಲಾಂಬರದರಂ... ಯಾರೇಂದು ತುಷಾರ ಹಾರದವಳ ತೊದಲು ತೊದಲಾಗಿ
ಹೇಳುತ್ತಿದ್ದ ಮಗು ಶಾಮು ತನ್ನ ತಂದೆಗಾಗಿ, ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು.
ರೋಮಾಂಚನ ಅಲೆಗಳನ್ನು ಹರಡಿಸುವಂಥ ಅಶ್ವಥ್ ನಾರಾಯಣ ಬರುವನೆಂಬ ಸುದ್ದಿ ಕೇಳಿ ಅಗ್ರಹಾರಕ್ಕೆ ಅಗ್ರಹಾರವೇ
ಸ್ವಾಗತಕ್ಕೆ ಸಿದ್ಧವಾಗಿತ್ತು. ಅಗ್ರಹಾರದವರು ತಮ್ಮ ಸಂತೋಷವನ್ನು ದೈರೆಕ್ಟಾಗಿ ಪ್ರಶಂಸಿಸುವಂಥ ಪರಿಸ್ಥಿತಿ
ಇರಲಿಲ್ಲ. ಅದೇ ಕೆಲವು ದಿನಗಳ ಹಿಂದೆ ಜ್ಯೋತಿಷ್ಯ ಮಾರ್ತಾಂಡ ತಿರುಚೈಂದೂರು ತಿರುಮಲೈಂಗಾರರು ಇಹಲೋಕ
ತ್ಯಜಿಸಿದ್ದರು. ಇನ್ನೂ ಸುತಕದ ಛಾಯೆ ಮಸುಕು ಮಸುಕಾಗಿರುವಾಗಲೇ ಮಿಲಿಟರಿ ಸೇವೆಯಿಂದ ನಿವೃತ್ತಿ ಪಡೆದು
ಅಗ್ರಹಾರಕ್ಕೆ ಆಗಮಿಸುತ್ತಿದ್ದಾನೆ.
ಶಾಸ್ತ್ರಿಗಳು ಮಗನನ್ನು ಸ್ವಾಗತಿಸಲು ಹೊರಟರು. ಸೊಸೆಯನ್ನು ಕರೆದರು. ಅಷ್ಟು ಸುಲಭವಾಗಿ ಆಕೆ ಬೀದಿಗೆ
ಹೊರಡುವ ಸ್ಥಿತಿಯಲ್ಲಿರಲಿಲ್ಲ. ಆಕೆ ಮುಟ್ಟಾಗಿ ಮೂರು ದಿನ ಹೊರಗೆ ಕುಂಡ್ರಬೇಕಾಗಿತ್ತು. ಅದೂ ಅಲ್ಲದೇ
ಅಮರಕೋಶದ ಮೊದಲ ಶ್ಲೋಕ ಬಾಯಿಪಾಠ ಮಾಡದ ಹೊರತು ಅನ್ನ ಹುಳಿ ಕೆನೆ ಮೊಸರು ಉಣ್ಣಕೂಡದೆಂದು ಮೊಮ್ಮಗನಿಗೆ
ಕಟ್ಟಪ್ಪಣೆ ವಿಧಿಸಿದ್ದರು.
ಅದರಿಮ್ದ ತಾವೊಬ್ಬರೇ ಹೊರಟರು. ಕಾಲಮೀನ ಖಂಡಗಳು ಯಾಕೋ ನಿನ್ನೆಯಿಂದ ಸೇದುತ್ತಿದ್ದವು. ಆದರೂ ಪಾಣಿನಿಯ
ಗತ್ತಿನಿಂದ ಒಮ್ದೊಂದೆ ಹೆಜ್ಜೆ ಹಾಕುತ್ತ ರೇಲ್ವೆ ನಿಲ್ದಾಣ ತಲುಪಿದರು. ಮಗ ಅಶ್ವಥ್ ಅಂತರಾಳದಿಂದ
ಕಿತ್ತು ಬರುತ್ತಿದ್ದ. ಅವನನ್ನು ಯಾವಾಗ ನೋಡುವೆವೋ ಎಂಬ ಕಾತರ. ಹಾಳದ ರೈಲು ಬೇರೆ ನಲವತ್ತೈದು ಘಳಿಗೆ
ತಡವಾಗಿ ಬರಲಿದೆ.
ಹೇಗೋ ಮಗ ಮಿಲಿಟರಿ ಸೇವೆಯಿಂದ ನಿವೃತ್ತಿ ಪಡೆದಿದ್ದಾನೆ. ದೈವಂಶ ಸಂಭೂತವಾದ ಬ್ರಾಹ್ಮಣ ಕುಲದಲ್ಲಿ
ಹುಟ್ಟಿ ಮ್ಲೇಚ್ಛರಂತೆ ವರ್ತಿಸುತ್ತಿದ್ದಾನೆ. ಎಲ್ಲ ಮದ್ಯ ಅಮೇಧ್ಯದ ಫಲ., ಜೊತೆಗೆ ಸಹವಾಸ ದೋಷ. ತಮ್ಮ
ಸಾನ್ನಿಧ್ಯದ ಪರಿಣಾಮದಿಂದ ಅವನನ್ನು ಬದಲಿಸಬೇಕು. ಸನಾತನ ಧರ್ಮ ಪರಿಪಾಲಿಸುವಂತೆ ಆಜ್ಞಾಪಿಸಬೇಕು.
ನನ್ನ ಮೇಲೆ ಅವನಿಗೆ ಅತುಲ ಗೌರವ ಇಲ್ಲದಿಲ್ಲ.ತಮ್ಮಂತೆ ಅವನೂ ಕೂಡ ವೈದಿಕ ಕಲಿತು ಗುರು ಹಿರಿಯರ ವಿಶ್ವಾಸಕ್ಕೆ
ಪಾತ್ರನಾಗಬೇಕು, ತಮ್ಮ ಕೈ ಅಡುಗೆಯನ್ನು ಮಗ ಊಟ ಮಾಡಲಿರುವನೆಂಬುದು ಅವರಿಗೆ ಹೆಮ್ಮೆ ತಂದಿತ್ತು. ಬಲಗೈ
ಮೂಸಿಕೊಂಡರು. ಹುಳಿವಾಸನೆ ಹೊಡೆಯಿತು. ಕಾಯಿತುರಿ, ಶುದ್ಧ ಇಂಗು ಹಾಕಿ ಮಾಡಿದ್ದರು.
ಕಲ್ಲು ಬೆಂಚಿನ ಮೇಲೆ ಹಾಗೆ ಸ್ವಲ್ಪ ಹೊತ್ತು ತುಕಡಿಸಿದರು. ಘಂಟೆ ಮಾಡಿದ ಸದ್ದಿಗೆ ದಿಗ್ಗನೆ ಎಚ್ಚರಗೊಂಡರು.
ಅವರಂತೆ ಇತರ ಮಂದಿಯೂ ಸಹ ಪ್ರಯಾಣಕ್ಕೆ ಹೊರಟಿರುವರೆಷ್ಟೋ
ಪಯಣಿಸಿ ಬಂದವರನ್ನು ಇದಿರುಗೊಳ್ಳಲು ಬಂದವರೆಷ್ಟೋ. ಪ್ರತಿಯೊಬ್ಬರ ಮನದಲ್ಲೂ ಹೊಯ್ದಾಟಗಳು. ಆತುರ,
ಕಾತರಗಳೆಲ್ಲ ಮುಖದಲ್ಲಿ ಪ್ರತಿಬಿಂಬಿತಗೊಂಡಿದ್ದವು. ಎಲ್ಲರ ಗಮನವೂ ಮೂಡಣ ದಿಕ್ಕಿಗೇ.
ಅಂದುಕೊಂಡಿದ್ದಕ್ಕಿಂತ ಐದು ಘಲಿಗೆ ಮೊದಲೇ ಬಂತು ರೈಲು. ಹೆತ್ತ ತಾಯಿಯಂತೆ, ಅದು ಬಂದೊಡನೆ ಗಡಿಬಿಡಿ
ಹೆಚ್ಚಿತು. ಏರುವವರೆಷ್ಟೋ? ಇಳಿಯುವವರೆಷ್ಟೋ? ಚಿಕ್ಕ ಪುಟ್ಟ ವ್ಯಾಪಾರಿಗಳ ಕೂಗು ನಿಲ್ದಾಣಕ್ಕೆ ಜೋಗುಳಪ್ರಾಯವಾಯಿತು.
ಶಾಸ್ತ್ರಿಗಳು ತಮ್ಮ ಮಗನಿರುವ ಬೋಗಿಗಾಗಿ ಹುಡುಕಾಟ. ನಡೆಸಿದರು. ಆರ್ಯ ವ್ಯಕ್ತಿತ್ವದ ಎತ್ತರದ ಆಳು
ಅವನು. ದೂರದಿಂದಲೇ ತಮ್ಮನ್ನು ಗುರುತಿಸಿ ಅಪ್ಪಾಜಿ ಎಂದು ಕೂಗಬೇಕಾಗಿದ್ದವನು, ಎಲ್ಲರಿಗಿಂತ ಭಿನ್ನವಾಗಿ
ಗೋಚರಿಸಬೇಕಾಗಿದ್ದವನು ಪುರುಷಸಿಂಹದಂತೆ ಕಣ್ಣೋಟ ಹರಿಸಬೇಕಾಗಿದ್ದವನು.
ರೈಲು ಎಂದಿಗಿಂತ ಹೆಚ್ಚು ಉದ್ದವಾಗಿತ್ತು. ಎಂದಿಗಿಂತ ಹೆಚ್ಚು ಪ್ರಯಾಣಿಕರನ್ನು ಹೊತ್ತು ತಂದಿತ್ತು.
ಬೋಗಿಯಿಂದ ಬೋಗಿಗೆ ಆರ್ತರಾಗಿ ತಿರುಗಿದರು. ಪ್ರತಿಯೊಂದು ಕಿಟಕಿಯಲ್ಲಿ ಮುಖ ತೂರಿಸಿ "ಮಗನೇ ಅಶ್ವತ್ಥಾ
ಎಲ್ಲಿದ್ದೀಯಪ್ಪಾ ನಾನು ಕಣೋ ನಿನ್ನ ತಂದೆ ನಿನಗಾಗಿ ಕಾಯುತ್ತಿರುವ ನಿನ್ನ ತಂದೆ " ಕೂಗಿ ಹೇಳಿದರು.
ಆದರೆ ಅವರಿಗೆ ತಮ್ಮ ಮಗ ದೊರಕಲಿಲ್ಲ. "ಪ್ರಯಶಃ ಈ ರೈಲಿಗೆ ಅವನು ಬಂದಿರಲಿಕ್ಕಿಲ್ಲ" ಇನ್ನೊಂದು ಬರಬಹುದೇನೋ!
ಅದು ಬರುವುದು ಇನ್ನು ಸಂಜೆಗೇನೇ?
ಇಡೀ ಗ್ರಾಮದ ವಾತಾವರಣವನು ಒಂದು ಕ್ಷಣ ಬದಲಿಸಿದ ರೈಲು ತಾನಿನ್ನೇನು ಹೊರಡಲಿರುವುದಾಗಿ ಸಿಳ್ಳೆ ಹಾಕಿತು.
ಹಳೆ ಪ್ರಯಾಣಿಕರೊಂದಿಗೆ ಹೊಸ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿತು. ಇದ್ದ ಒಂಭತ್ತು ಭೋಗಿಗಳನ್ನು
ತಬ್ಬಿಕೊಂಡು ಹೊರಟ ತಾಯಿಯ್ಂತೆ.
ರೈಲು ಹೊರತು ಹೋದ ಮೇಲೆ ನಿಲ್ದಾಣ ಬಿಕೋ ಎನ್ನತೊಡಗಿತು. ನಿಲ್ದಾಣ ಬಿಕೋ ಎನ್ನ ತೊಡಗಿತು. ನಿಲ್ದಾಣದ
ಪ್ರತಿಯೊಂದು ಮೂಲೆ ನಿಟ್ಟುಸಿರಿಡುತ್ತಿರುವಂತೆ ಭಾಸವಾಯಿತು. ಆಗಲೇ ಜನ ಒಬ್ಬೊಬ್ಬರಾಗಿ ಕರಗಿದರು.
ಮಗ ಬರಲಿಲ್ಲ.
ಬರಲೇಬೇಕಾಗಿದ್ದವನು ಬರಲಿಲ್ಲ.
ಶಾಸ್ರಿಗಳು ಭಾರವಾದ ಹೃದಯದಿಂದ ಗೇಟ್ ಕಡೆ ಹೆಜ್ಜೆಗಳನ್ನು ಎಣಿಸತೊಡಗಿದರು.
ಆಷ್ಟರಲ್ಲಿ ಅಪ್ಪಾಜಿ ಎಂಬೊಂದು ಕೂಗು ಕೇಳಿಸಿತು.
ಧ್ವನಿ ಬಂದ ದಿಕ್ಕಿನತ್ತ ತಿರುಗಿ ನೋಡಿದರು.
ಸ್ವಲ್ಪ ದೂರದಲ್ಲಿ ಒಬ್ಬ ವ್ಯಕ್ತಿ ಇದ್ದ. ಮುಖದ ಮೇಲೆ ಸಾಕಷ್ಟು ಗಡ್ಡ ಬೆಳೆದಿತ್ತು. ಮೈತುಂಬ ಶಾಲು
ಹೊದ್ದಿದ್ದ.ಕಣ್ಣುಗಳು ಫಳಫಳ ಹೊಳೆಯುತ್ತಿದ್ದುವು. ಐದಾರು ಲಗೇಜುಗಳ ನಡುವೆ ನಿಂತಿದ್ದ. ಎರಡು ನಾಯಿಗಳು
ಅವನ ಎರಡೂ ಪಕ್ಕ ನಿಂತು ತಮ್ಮಿಂದ ಏನಾದರೂ ಸಹಾಯ ಬೇಕೆ? ಎಂಬರ್ಥದ ನೋಟ ಬೀರುತ್ತಿದ್ದವು.
ಒಮ್ದು ಘಳಿಗೆ ದಿಟ್ಟಿಸಿ ನೋಡಿದ ನಂತರ ಶಾಸ್ತ್ರಿಗಳಿಗೆ ಅರ್ಥವಾಯಿತು. ಅವನು ತಮ್ಮ ಅಶ್ವಥ್ ನಾರಾಯಣ
ಅಂತ. ಓಡಿಬಂದು ಅವನು ತಮ್ಮನ್ನು ತಬ್ಬಿಕೊಳ್ಳಲು ಪ್ರಯಿತ್ನಿಸಬೇಕಾಗಿತ್ತು. ಮ್ಲೇಚ್ಛರ ಸಹವಾಸದಿಂದ
ಮೈಲಿಗೆಯಾಗಿತೀಯಾ ಮಗ್ನೆ. ಸ್ನಾನ ಮಾಡಿ ಶುಚಿರ್ಭೂತನಾಗಿ ಹತ್ತಿರ
ಬರುವಿಯಂತೆ ಎಂದು ತಾವು ಹೇಳಬೇಕಿತ್ತು.
ಅವನತ್ತ ಅವರು ಇಡತೊಡಗಿದ. ಒಂದೊಂದು ಹೆಜ್ಜೆ ಕಂಪಿಸತೊಡಗಿದವು. ತಾವು ವೇಗವಾಗಿ ಓಡುತ್ತಿರುವೆನೆಂದುಕೊಂಡರು.
ಆದರೆ, ಅವನು ತಮ್ಮ ಕಡೆಗೆ, ತನ್ನ ತಂದೆಗೆ ಕಡೆಗೆ ಓಡಿಬರುತ್ತಿಲ್ಲ! ನಿಂತಲ್ಲಿಯೇ ನಿಂತಿದ್ದಾನೆ.
ಷಾಸ್ತ್ರಿಗಳು ಮಗನ ಸನಿಹದಲ್ಲಿ ನಿಂತರು. ನಖಶಿಖಾಂತ ನೋಡಿದರು.
ಆಪರಿಚರಂತೆ.
ಮುಲ ಸ್ವರೂಪ ಕಳೆದು ಕೊಓಂಡಿರುವ ಕರುಳನ್ನು ಗುರಿತಿಸುವವರಂತೆ.
"ಅಪ್ಪಾ ಯಾಕೆ ಹಾಗೆ ನೋಡ್ತಿದೀರಿ! ನಾನು ಕಣಪ್ಪಾ ನಿಮ್ಮ ಮಗ ಅಶ್ವತ್ಥ..." ಅಶ್ವತ್ಥ್ ಮೈ ಕವುಚಿದ
ಶಾಲು ತೆಗೆದ.
ಒಂದು ಕಾಲಿಲ್ಲ... ಊರುಗೊಲಿದೆ
ಯಾಕೆ! ಹೀಗೆ! ಶಾಸ್ತ್ರಿಗಳಿಗೆ ತಲೆ ಸುತ್ತು ಬಂತು. ಅಶ್ವಥ್ ತಂದೆ ಬೀಳದ ಹಾಗೆ ಹಿಡಿದುಕೊಂಡ. ಅವರ
ಕಣ್ಣುಗಳಿಂದ ನೀರು ದುಮ್ಮಿಕ್ಕಿತು. ಯಾರೊಬ್ಬರೂ ಮಾತಾಡಲಿಲ್ಲ. ಮೌನ ಆ ಕೆಲಸ ಮಾಡಿತು. ಗುರುತಿನ ಕೆಲವರು
ಸಾಮಾನುಗಳನ್ನು ಟಾಂಗದಲ್ಲಿರಿಸಿ ಸಹಾಯ ಮಾಡಿದರು. ತಂದೆ ತಮ್ಮ ಪಕ್ಕ ಮಗನನ್ನು ಕುಳ್ಳಿರಿಸಿಕೊಂಡರು.
ಬಲಗೈಯಿಂದ ಅವನು ಬೀಳದ ಹಾಗೆ ತಬ್ಬಿಕೊಂಡಿದ್ದರು.
ದೇಶಕ್ಕಾಗಿ ಒಂದು ಕಾಲು ಕೊಟ್ಟು ಬಂದಿರುವ ಗಂಡ; ಹೇಗೆ ಪ್ರತಿಕ್ರಿಯೆಸಿಬೇಕೋ ಅಲುಮೇಲಮ್ಮಗೆ ಅರ್ಥವಾಗಲಿಲ್ಲ.
ಆಕೆಯ ಹೃದಯ ಕಟ್ಟೆಯೊಡೆಯಿತ್ತು. ಶ್ಲೋಕದ ಎರಡನೆ ಸಾಲನ್ನು ಬಾಯಿಪಾಠ ಮಾಡುತ್ತಿದ್ದ ಮಗನನ್ನು ಅಶ್ವಥ್
ಬರಸೆಳೆದು ಅಪ್ಪಿಕೊಂಡ, ಎತ್ತಿಕೊಂಡ. ಮುದ್ದಿಸಿದ. " ಟ್ವಿಂಕಲ್ ಲಿಟ್ಲ್ ಸ್ಟಾರ್ ಓದೋದು ಬಿಟ್ಟು
, ಹಾಳಾದ ಅಮರಕೋಶ ಓದ್ತಾ ಇದ್ದೀಯಲ್ಲ, ಶಾಮು ಡಾರ್ಲಿಂಗ್" ಎಮ್ದ. ಮಗು ತಾತನ ಕಡೆ ನೋಡಿತು. ದುಃಖದಲ್ಲಿ
ಹೃದಯ ಬೇಯುತ್ತಿದ್ದ ಶಾಸ್ತ್ರಿಗಳು ಪ್ರತಿಕ್ರಿಯಿಸಲಿಲ್ಲ.
ಮಿಲಿಟರಿ ಸೇವೆಗೆ ಸೇರಿ ಸನಾತನ ಧರ್ಮಕ್ಕೆ ಅಪಚಾರ ಮಾಡಿ ಕಾಲು ಕಳ್ಕೊಂಡಿದ್ದರೂ ಠೇಂಕಾರದ ಮಾತುಗಳಿಗೇನು
ಕಡಿಮೆ ಇಲ್ಲ - ಶಾಸ್ತ್ರಿಗಳು ಮನಸ್ಸಿನಲ್ಲಿ ಸಿಡುಕಿದರು.
ಒಂದು ಕಾಲು ಕಳೆದುಕೊಂಡಿದ್ದರೂ ಅಶ್ವಥ್ ಹೆಚ್ಚಿನ ಲವಲವಿಕೆಯಿಂದಿದ್ದ. ಗೃಹಕೃತ್ಯದ ಬಹುಪಾಲು ಆಗುಹೋಗುಗಳನ್ನು
ತಾನೇ ಗಮನಿಸುತ್ತಿದ್ದ. ಹೆಂಡತಿ ಬೇಕು ಬೇಡಗಳನ್ನು ವಿಚಾರಿಸುತ್ತಿದ್ದ.
ತಂದೆಯವರು ತಮ್ಮ ಅರ್ಚನಾ ಸ್ಥಾನದಲ್ಲಿ ಕುಳ್ಳರಿಸಲು ಪ್ರಯತ್ನಿಸಿದ್ದುಂಟು. ವೈದಿಕ ಮಂತ್ರಗಳನ್ನು
ಬಾಯಿಪಾಠ ಮಾಡು, ಸತ್ಯನಾರಾಯಣ ವ್ರತ ಮಾಡಿಸುವನ್ನು ಕಲಿತುಕೊಂಡರೆ ಶ್ರೀಮಂತರ ಪರಿಚಯವಾಗುತ್ತದೆ, ನಾಲ್ಕು
ಕಾಸು ಸಂಪಾದಿಸಬಹುದು. ಹೆಂಡತಿ ಮಕ್ಕಳನ್ನು ಸುಖವಾಗಿಡಬಹುದೆಂದು ಹೇಳಿದ್ದುಂಟು. ಪವಿತ್ರ ಬ್ರಾಹ್ಮಣ
ಕುಲದಲ್ಲಿ ಹುಟ್ಟಿ ಪ್ರಾತಃವಿಧಿ ಸಂಧ್ಯಾವಂದನೆಗಳನ್ನು ಮಾಡದಿದ್ದರೆ ಹೇಗೆ ಎಂದು ಸಿಡುಕಿದ್ದುಂಟು.
ಆದರೆ ಅವನು ತಂದೆಯ ಮಾತಿಗೆ ಮನ್ನಣೆ ಕೊಡಬೇಕಲ್ಲ? ಎಲ್ಲ ಮಾತುಗಳನ್ನು ಎಡಗಿವಿಯಿಂದ ಕೇಳಿ ಬಲಗಿವಿಯಿಂದ
ಬಿಟ್ಟ.
ಆವನು ಪ್ರತಿಭಟಿಸುತ್ತಿದ್ದುದು ತನ್ನ ಮಗ ಶಾಮನನ್ನು ತಮ್ಮ ಸಂಸ್ಕೃತೀಕರಣಗೊಂಡ ದಾರಿಗೆ ಎಳೆಯಲು ಅವರು
ಪ್ರಯತ್ನಿಸಿದಾಗ,
ಅಪ್ಪಾಜಿ, ಸಂಸ್ಕೃತ ವೈದಿಕ ಇವಲ್ಲ ನಿಮ್ ಕಾಲಕ್ಕೇನೆ ಮುಗಿದು ಹೋಗಲಿ. ಆದರೆ ನನ್ ಮಗನಿಗೆ ವೈದಿಕ
ಗೈದಿಕ ಅಂತ ಕಲಿಸಿ ನಿಷ್ಪ್ರಯೋಜಕನನ್ನಾಗಿ ಮಾಡಬೇಕೆ? ಅವನ ಹೆತ್ತ ತಂದೆ ನಾನಿನ್ನೂ ಬದುಕಿದ್ದೀನಿ
ಅವನ ಭವಿಷ್ಯ ರೂಪಿಸೋ ಜವಾಬ್ದಾರಿ ನನಗೆ ಬಿಟ್ಟುಬಿಡಿ" ಅಶ್ವಥ್ ಮುಲಾಜಿಲ್ಲದೆ ಮಾತಾಡಿಬಿಡುತ್ತಿದ್ದ.
ಅದನ್ನು ಕೇಳಿ ಶಾಸ್ತ್ರಿಗಳು ಕೆನೆಯುತ್ತಿದ್ದರು.
"ಖಬರ್ದಾರ್... ನನ್ ಮೊಗ್ಗಗ ಏನು ಆಗಬೇಕು? ಏನು ಬಿಡಬೇಕು ಎಂಬುದರ ಬಗ್ಗೆ ಯೋಚಿಸೋ ಅಧಿಕಾರ ನನಗೇ
ಸೇರಿದ್ದು. ಶಾಮು ಹುಟ್ಟುವುದಕ್ಕಿಂತ ಮೊದಲೇ ಯೊಚಿಸಿ ನನ್ನ ತಂದೆಯವರ ಹೆಸರಿಟ್ಟಿದ್ದೀನಿ... ಕಂಚಿ
ಪೂಜ್ಯರಿಂದ ಅಕ್ಷರಾಭ್ಯಾಸ ಮಾಡಿಸಿದ್ದು ಯಾಕೆ ಗೊತ್ತೇನೋ?"
"ಇದ್ನೆಲ್ಲ ನೀವು ನನ್ ಕೇಳಿ ಮಾಡಲಿಲ್ಲ ನಾನಿಷ್ಟೇ ಹೇಳೋದು, ನೀವು ನಿಮ್ ಪಾಡಿಗೆ ಇರ್ರಿ ಅಷ್ಟೆ"
ಮಾವನವರಿಗೆ ಸಿಟ್ಟು ಬರಿಸಬೇಡಿ. ಆದ್ರಿಂದ ಅವ್ರ ಆರೋಗ್ಯ್ ಕೆಟ್ಟು ಹೋಗುತ್ತೆ. ಅವರಿರೋವಗೂ ಅವರಿಚ್ಛೆಯಂತೆ
ನಡೆದ್ರೆ ತಪ್ಪೇನೀಗ? - ಅಲುಮೇಲು ಗಂಡನಿಗೆ ಸಮಾಧಾನ ಹೇಳಲು ಪ್ರಯತ್ನಿಸಿದಳು.
"ಈ ವಿಷಯದಲ್ಲಿ ನೀನು ಮೂಗು ತೂರಿಸಬೇಡ. ನಾನಿಂಥೋರ ಹೊಟ್ಟೆಯಲ್ಲಿ ದೊಡ್ಡ ತಪ್ಪು ಮಾಡಿದ್ದೇನಿ. ಉಪನಯನದ
ನೆಪದಿಂದ ನನ್ನನ್ನು ಕುರೂಪಿಯನ್ನಾಗಿ ಮಾಡಲು ನೋಡಿದರು. ಸಂಸ್ಕೃತ ಶಾಲೆಗೆ ಸೇರಿಸಿ ನಿಷ್ಪ್ರಯೋಜಕನನ್ನಾಗಿಸಲು
ಪ್ರಯತ್ನಿಸಿದರು. ಇದನ್ನೆಲ್ಲ ಪ್ರತಿಭಟಿಸಬೇಕೆಂದೇ ನಾನು ಡಿಫೆನ್ಸ್ಸರ್ವೀಸ್ ಸೇರಿದ್ದು. ಏನೆಲ್ಲ
ಕುಡಿದೆ, ಏನೆಲ್ಲ ತಿಂದೆ. ಎಲ್ಲಾ ಜಾತಿ ಹೆಂಗಸರ ಸಹವಾಸ ಮಾಡಿದೆ"
"ನೀವೆಂಥ ಮನುಷ್ಯರು ಕಣ್ರೀ. ಕುಡಿದದ್ದು ಹೇಳ್ತೀರಿ. ತಿಂದದ್ದು ಹೇಳ್ತೀರಿ. ಅದೂ ಅಲ್ಲದೆ ಹೆಂಗಸರ
ಸಹವಾಸ ಮಾಡಿದ್ದು ಹೇಳ್ತಿದ್ದೀರ. ನನ್ನಿಂದ ಇದೆಲ್ಲ ಕೇಳೋಕಾಗಲ್ಲ" ಅಲುಮೆಲು ಬಿಕ್ಕಿ ಬಿಕ್ಕಿ ಅಳತೋಡಗಿದಳು.
"ನಿನ್ನ ಹತ್ತಿರ ಅಲ್ಲದೆ ಮತ್ತಾರ ಹತ್ತಿರ ಹೇಳಿಕೊಳ್ಳಲಿ ಅಲು. ದೇಹದ ಮನಸ್ಸಿನ ಅಗತ್ಯ ತೀರಿಸಿಕೊಳ್ಳೋಕೆ
ದಾರಿ ಹುಡುಕಿಕೊಳ್ಳದೊದ್ದರೆ ಆಗ್ತದೆಯೇ?" ಹೆಂಡತಿಯ ತಲೆ ನೇವರಿಸಿದ.
"ನೀವೇಳ್ತಿರೋದ್ನೆಲ್ಲ ಮಾವನವರು ಕೇಳ್ಸಿಕೊಂಡಾರು. ಪಕ್ಕದ ಕೋಣೆಯಲ್ಲಿದ್ದಾರೆ. ಮೆಲ್ಲಗೆ ಮಾತಾಡಿ...
ಮಾತಾಡದಿದ್ದರೂ ಸರಿಯೇ?"
"ಕೇಳಿಸಿಕೊಳ್ಳಲಿ ಬಿಡು... ಅವರು ಕೇಳಿಸಿಕೊಳ್ಳಲಿ ಅಂತಾನೆ ನಾನು ಗಟ್ಟಿಯಾಗಿ ಮಾತಾಡ್ತಿರೋದು. ಈ
ಇಪ್ಪತ್ತನೇ ಶತಮಾನದಲ್ಲೂ ನನ್ನ ಮಗನಿಗೆ ಸಂಸ್ಕೃತ, ವೈದಿಕ ಕಲಿಸಿ ನಿಷ್ಪ್ರಯೋಜಕನನ್ನಾಗಿ ಮಾಡಲು ಹೊರಟಿದ್ದಾರಲ್ಲ...
ಇದನ್ನು ಹೇಗೆ ಸಹಿಸಲಿ?"
ಏಹ್ಯಗ್ನೇತಸ್ಯ ಮಂತ್ರಸ್ಯ | ರಹೋ ಗಣ ಪುತ್ರೋ ಗೌತಮ ಋಷಿಃ | ಅಗ್ನಿರ್ದೆವತಾಃ ತ್ರಿಷ್ಟುಪ್
ಛಂದಃ | ಅಗ್ನಿರಾಹ್ವನೇ ವಿನಿಯೋಗಹ|| ... ಪಕ್ಕದ ಕೋಣೆಯಲ್ಲಿ ಅಗ್ನಿ ಕಾರ್ಯದ ಮುಂದಿನ ಶಬ್ದ ಹೇಳದೆ
ಶಾಸ್ತ್ರಿಗಳು ಒದ್ದಾಡಿದರು.
ಚಂಡಾಲ ಮಗ ಹುಟ್ಟಿ ಬಿಟ್ಟಿರುವನಲ್ಲ... ಹಣೆ ಹಣೆ ಚಚ್ಚಿಕೊಂದರು.
ತಮ್ಮನ್ನು ಬೈದರೆ ಬೈದುಕೊಳ್ಳಲಿ. ಆದರೆ ಸಂಸ್ಕೃತ ಸನಾತನ ಧರ್ಮವನ್ನು ಜರಿಯುವುದೇ... ಅದೂ ತಮ್ಮಂಥ
ಪ್ರಕಾಂಡ ಪಂಡಿತರ ವಂಶದಲ್ಲಿ ಹುಟ್ಟಿ....
ತಂಗಾಳಿಯಂಥ ಅವರು ಬಿರುಗಾಳಿಯ ವೇಷ ತೊಟ್ಟರು.
ದಡೀರನೆ ಬಾಗಿಲು ತೆರೆದು ಹೊರಗಡೆ ಬಂದರು. ಪಲ್ಲವರ ವಿರುದ್ಧ ಕೆರಳಿದ ಕದಂಬರ ಮಯೂರ ಶರ್ಮನಂತಾದರು.
"ಏನೋ ಚಂಡಾಲ ಪುತ್ರನೇ... ನೀನು ಮ್ಲೇಚ್ಛರ ಸಹವಾಸ ಮಾಡಿ ಬಾಯಿಗೆ ಬಂದಂತೆ ಆಡುತ್ತಿರುವಿ. ಶೂದ್ರ
ನಡುವಳಿಕೆಯಿಂದ ಕಾಲು ಕಳೆದುಕೊಂಡಿರುವುದು ಸಾಲದೇನು? ಹಿರಿಯರ ಪುಣ್ಯ ವಿಶೇಷವಿರದಿದ್ದಲ್ಲಿ ಮತ್ತೇನು
ಕಳೆದುಕೊಳ್ಳುತ್ತಿದ್ದೆಯೋ ಏನೋ?" ಬಿಚ್ಚಿದ ಜುಟ್ಟನ್ನು ಕಟ್ಟಿಕೊಳ್ಳುತ್ತ ನುಡಿದರು.
" ನಾನೂ ಅದೇ ಅಂದುಕೊಳ್ತಿದೀನಿ. ಪ್ರಾಣ ಕಳೆದುಕೊಂಡು ನಿಮಗೆ ನೆಮ್ಮದಿ ತರಲಿಲ್ಲಾಂತ" ಊರುಗೋಲಿಗಾಗಿ
ತಡಕಾಡಿದ ಗಂಡನ ಬಾಯಿ ಮುಚ್ಚಿದಳು. ಅಲುಮೇಲು. ಇಂಥ ಮಾತು ಕೇಳಬೇಕಾಗಿ ಬಂದಿರೋ ತನಗೆ ಮುತ್ತೈದೆ ಸಾವು
ಬರಬಾರದೆ ಎಂದು ಮರುಗಿದಳು.
ಹೆಂಡತಿಯನ್ನೇ ಊರುಗೋಲು ಮಾಡಿಕೊಂಡು ಕೋಣೆಯಿಂದ ಹೊರಗಡೆ ಬಂದ ಅಶ್ವತ್ಥ್. "ಅದೆಷ್ಟು ಕೋಪ ಬಂದುಬಿಟ್ಟಿದೆಯಲ್ಲಪ್ಪಾ
ನಿಮ್ಗೆ .. ನಾನು ಹೇಳಿದ್ದರಲ್ಲಿ ತಪ್ಪೇನಿದೇಂತ... ದೇಶದ ರಕ್ಷಣೆ ಮಾಡೋರನ್ನ ಮ್ಲೇಚ್ಛರು ಅಂತ ಅವಹೇಳನ
ಮಾಡಿದ್ದೀರಲ್ಲ ...ಜನನೀ ಜನ್ಮಭೂಮಿಶ್ಚ ಅಂತ ಹೇಳೋರು ನೀವೇ. ಸ್ವರ್ಗಾದಪಿ ಗರೀಯಸಿ ಅಂತ ಹೇಳೋರು ನೀವೇ?"
"ಅದನ್ನೆಲ್ಲ ಹೇಳಿರೋದು ಶೂದ್ರರಿಗೆ ಕ್ಷತ್ರಿಯರಿಗೆ... ನಮ್ಮಂಥ ಬ್ರಾಹ್ಮಣರಿಗಲ್ಲ"
ಬ್ರಾಹ್ಮಣನಾದವನು ದೇಶವನ್ನು ರಕ್ಷಿಸಬಾರದೆಂತೀರೇನು?"
ಅವನು ರಕ್ಷಿಸದಿದ್ದರೆ ದೇಶಗಳೆಲ್ಲ ಎಲ್ಲಿತಿದ್ದವು. ರಾಜರುಗಳೆಲ್ಲ ಎಲ್ಲಿತಿದ್ದರು? ಬ್ರಾಹ್ಮಣನಾದವನು
ಯಜ್ಞ ಯಾಗಾದಿ ನಿತ್ಯ ಕರ್ಮಗಳನ್ನು ಮಾಡುತ್ತ; ದೇವತೆಗಳನ್ನು ಸಂತೃಪ್ತಿ ಪಡಿಸುತ್ತ ದೇಶವನ್ನು ಸುಭಿಕ್ಷವಾಗಿಡಬೇಕು"
ತಂದೆಯಾಡಿದ ಮಾತು ಕೇಳಿ ಅಶ್ವತ್ಥ್ಗೆ ನಗುಬಂತು. ನಕ್ಕ.
"ಇಪ್ಪತ್ತನೇ ಶತಮಾನದಲ್ಲೂ ಈ ರೀತಿ ಯೊಚಿಸ್ತಿದ್ದೀರಲ್ಲ... ಇದಕ್ಕೇ ನಗಬೇಕೋ ಅಳಬೇಕೋ... ಆಧುನಿಕತೆಯ,
ನಾಗರೀಕತೆಯ ಸಂಶೋಧನೆಯ ಫಲಗಳು, ಸವಲತ್ತುಗಳನ್ನೆಲ್ಲ ಬೇಕಂತೀರ... ಮೇಲೆ ಈ ಮಾತಾಡ್ತೀರಲ್ಲ... ಛೇ....
ಛೇ..."
"ಅದ್ಯಾವ ಸವಲತ್ತುಗಳೋ ನಾವು ಅನುಭವಿಸ್ತಿರೋದು?"
"ಮ್ಲೇಚ್ಛರು ಅಂತ ನಿಮ್ಮಿಂದ ಕರೆಸಿಕೊಳ್ತಿರೋ ಜನ ಕಂಡುಹಿಡಿರೋ ವಿದ್ಯುತ್ ನಿಮ್ಗೆ ಬೇಕು. ಅವರು ನಡೆಸ್ತಿರೋ
ಬಸ್ಸು ತುಂಬೆಲ್ಲ ನೀವು ಪ್ರಯಾಣ ಮಾಡಬೇಕು... ಅವರು ಕಟ್ಟಿರೋ ವಾಟರ್ ಟ್ಯಾಂಕುಗಳ ನೀರು ಬೇಕು. ಅವರು
ಬೆಳೆಸ್ತಿರೋ ದವಸ ಧಾನ್ಯ ನಿಮ್ಗೆ ಬೇಕು. ತಂದೆಯ ಮುಖ ನೋಡಿದ. ಅದು ಅಗ್ಗಿಷ್ಟಿಕೆಯಂತಾಗಿತ್ತು. ಮತ್ತೆ
ಮುಂದುವರೆದು ಹೇಳಿದ. "ಇಪ್ಪತ್ತನೇ ಶತಮಾನದಲ್ಲಿ ಬದುಕುತ್ತಾ ಹತ್ತನೆ ಶತಮಾನದ ಬಗ್ಗೆ ಯೋಚಿಸ್ತಿರಲ್ಲ...
ನಿಮ್ಮಥೋರು ಆಗಿನ ಶೈಲಿಯಲ್ಲೇ ಯಾಕೆ ಬದುಕಬಾರದೂಂತ... ವಿದ್ಯುತ್ ಉಪಯೋಗಿಸಬೇಡಿ. ಅದೂ ಶೂದ್ರರು ಕಂಡು
ಹಿಡಿದಿರೋದು. ಓಡಲೆಣ್ಣೆ ದೀಪ ಹಚ್ಚಿಕೊಳ್ಳ್ರಿ... ಶೂದ್ರರು ನಡೆಸೋ ಬಸ್ಸು ರೈಲು ಬಸ್ಸುಗಳಲ್ಲಿ ಪ್ರಯಾಣ
ಮಾಡಬೇಡಿ. ಚಕ್ಕಡಿಗಳಲ್ಲಿ ಪಲ್ಲಕ್ಕಿಗಳಲ್ಲಿ ಪ್ರಯಾಣ ಮಾಡಿ..." ಇನ್ನೂ ಏನೇನೋ ಹೇಳಲಿದ್ದ.
"ಬಾಯಿಗೆ ಬಂದಂತೆ ಮಾತಾಡಿದ್ರೆ ರೌರವ ನರಕ ಪ್ರಾಪ್ತವಾದೀತು... ಹುಷಾರ್" ಶಾಸ್ತ್ರಿಗಳು ಕೃದ್ಧರಾಗಿ
ಬೆತ್ತ ಝಳಪಿಸಿದರು." ನೀನು ನಾನು ಎಲ್ಲರೂ ಅಗ್ರಹಾರದಲ್ಲಿ ವಾಸ ಮಾಡ್ತಿದ್ದೀವಿ ಎಂಬುದನ್ನು ಮರೀಮೇಡ.
ಅಗ್ರಹಾರದ ರೀತಿ ನೀತಿಗಳನ್ನು ಉಲ್ಲಂಘಿಸಿದರೆ ಪರಿಣಮ ನೆಟ್ಟಗಾಗೋದಿಲ್ಲ..."
"ಕೇಳಿಸಿಕೊಳ್ಳಲಿ ಬಿಡಿ... ಅವರಿಂದ ಆಗೋದೇನಿದೆ?"
"ಎಲ್ಲಾ ತೊರೆದಿರುವ ನಿನಗೆ ಅಗ್ರಹಾರದ ಗೌರವ ಯಾವ ಲೆಕ್ಕ. ...ಇದು ನಮ್ಮ ಮನೆ... ಹಿರಿಯರು ಹವನ ಹೋಮ
ಯಜ್ಞ ಯಾಗ ಮಾಡಿದಂಥ ಮನೆ. ಈ ಮನೇಲಿ ಇರಬೇಕಾದೋರು ಸನಾತನ ಧರ್ಮ ಪಾಲಿಸಬೇಕು ಎಂಬುದನ್ನು ಮರೆಯಬೇಡ"
ಶಾಸ್ತ್ರಿಗಳು ಕಡ್ಡಿ ಮುರಿದಂತೆ ಹೇಳಿದರು.
ಬೆಳಗಾಯಿತು.
ಅರ್ಚನಾ ಕೋಣೆಯಲ್ಲಿ ಎಂದಿನಂತೆ ವಿದ್ಯುದ್ದೀಪದ ಬದಲು ಹರಳೆಣ್ಣೆ ದೀಪ ಉರಿಯುತ್ತಿತ್ತು. ಅದರ ಬೆಳೆಕಿನಲ್ಲಿ
ಶಾಸ್ತ್ರಿಗಳು... ಧಿಯೋಯೋನಃ ಪ್ರಚೋದಯಾತ್... ಹೇಳುತ್ತ ಪ್ರಾಣಾಯಾಮ ಮಾಡುವುದರಲ್ಲಿ ಮಗ್ನರಾಗಿದ್ದರು.
ಪ್ರಾಯಶ್ಚಿತ್ತಕ್ಕಾಗಿಯೋ ಏನೋ ಶುಕ್ರ ಉದಯಿಸುವಕ್ಕೆ ಪೂರ್ವ ಸಮಯದಿಂದಲೇ ಗಾಯತ್ರಿ ಮಂತ್ರೋಚ್ಚಾರಣೆ
ಆರಂಭಿಸಿದ್ದರು. ಅವರ ಕಂಚಿನ ಕಂಠ ಅಲೆಅಲೆಯಾಗಿ ಅಗ್ರಹಾರದ ನಿರ್ಮಲ ವಾತಾವರಣಕ್ಕೆ ವಿಶೇಷ ಮೆರುಗು
ನೀಡಿತು.
ಆಶ್ವತ್ ಕೂಡ ಬೇಗ ಎದ್ದಿದ್ದ. ಸ್ನಾನ ಮಾಡಿ ಹೊರಬಿದ್ದ. ಊರೊಳಗಡೆ ಮಧ್ಯಾನ್ನದವರೆಗೆ ತಿರುಗಾಡಿದ.
ಅವರನ್ನು ಕಂಡ, ಇವರನ್ನು ಕಂಡ, ಡಾಬಾದಲ್ಲಿ ಊಟ ಮುಗಿಸಿ ಮನೆಗೆ ಮರಳುವ ಹೊತ್ತಿಗೆ ಸಾಯಂಕಾಲ ಸಮೀಪಿಸಿತು.
ಅಷ್ಟೊತ್ತಿಗಾಗಲೆ ವಂಕದಾರಿ ವೆಂಕಪ್ಪಶೆಟ್ಟರ ಮನೆಯಲ್ಲಿ ಸತ್ಯನಾರಾಯಣ ವ್ರತವನ್ನು ಸಾಂಗೋಪಾಂಗವಾಗಿ
ನೆರವೇರಿಸಿ ಪರಮೇಶ್ವರ ಶಾಸ್ತ್ರಿಗಳು ಮನೆಗೆ ಮರಳಿದ್ದರು. "ಏನು ಶಾಸ್ತ್ರಿಗಳೇ, ವೈದಿಕ ನಿಮ್ಮ ತಲೆಗೇ
ಮುಗಿದು ಹೋಗುವುದೇನೋ" ಎಂಬ ಶಂಕೆ ಶೆಟ್ಟಿ ವ್ಯಕ್ತ ಪಡಿಸಿದ್ದರು. "ಮೊಮ್ಮಗನಿಗಾದ್ರೂ ನಿಮ್ಮ ದಾರಿಯಲ್ಲಿ
ನಡೆಯೋದನ್ನು ಕಲಿಸಿಕೊಡಿ" ಎಂದರು ಶೆಟ್ಟರ ಧರ್ಮಪತ್ನಿ ಲಕ್ಷಮ್ಮ. ಮಗು ಶಾಮನ ತಲೆ ನೇವರಿಸಿ ದರ್ಭೆ
ಕೌಪೀನಕ್ಕೆಂದು ಐವತ್ತು ರೂಪಾಯಿ ಬಕ್ಷೀಸು ಕೊಟ್ಟು ಕಳುಹಿದ್ದಳು. ಆ ಶೆಟ್ಟಿ ದಂಪತಿಗಳು ಸಂತಾನ ಪ್ರಾಪ್ತಿಗಾಗಿ
ಶೋಬನ ಮುಗಿದ ಎರಡು ವರ್ಷದಿಂದ ಸತ್ಯನಾರಾಯಣ ವ್ರತವೇ ಮೊದಲಾದ ವ್ರತ ನಿಯಮಗಳನ್ನು ಮಾಡುತ್ತಲೇ ಬಂದಿದ್ದರು.
ಮುಂದಿನ ವರ್ಷ ವಿದ್ಯಾರಣ್ಯರ ಕಾರ್ಯಕ್ಷೇತ್ರದಲ್ಲಿ ನಡೆಯಲಿರುವ ಪುತ್ರ ಕಾಮೇಷ್ಥಿಯಾಗದಲ್ಲಿ ಫಲಪ್ರಾಪ್ತಿಗಾಗಿ
ಭಾಗವಹಿಸುವಂತೆ ಶಾಸ್ತ್ರಿಗಳು ಹಿಂದಿರುಗುವ ಮೊದಲು ಸೂಚಿಸಿದ್ದರು.
ಹಾದಿಯುದ್ದಕ್ಕೂ ಅವರು ಸ್ವೀಕರಿಸುತ್ತಿದ್ದ ನಮಸ್ಕಾರಗಳು ಎಷ್ಟೋ? ಮಾಡುತ್ತಿದ್ದ ಆಶೀರ್ವಾದಗಳು ಎಷ್ಟೋ?
ಆಶೀರ್ವಾದಗಳಲ್ಲಿ ಎಷ್ಟೋ ಪರಪಾಟುಗಳಾಗಿ ಬಿಡುತ್ತಿದ್ದವು.
ವಿವಾಹಿತರೊಟ್ಟಿಗಿರಲಿ, ವಯಸ್ಕ ವಿಧವೆಯರಿಗೂ ’ಶೀಘ್ರ ಕಲ್ಯಾಣ ಪ್ರಾಪ್ತಿರಸ್ತು’ ಎಂದು ಆಶಿರ್ವದಿಸಿಬಿಡುತ್ತಿದ್ದರು.
ತಪಸ್ಸಿನ ಶಕ್ತಿವುಳ್ಳವರಾದ ತಾವು ತುಟಿ ಜಾರಿ ಆಶಿರ್ವದಿಸಿಬಿಟ್ಟೆವಲ್ಲಾ... ಎಂದವರು ಪೇಚಾಡಿಕೊಳ್ಳುತ್ತಿದ್ದರು.
ಅವರು ಮಾಡುತ್ತಿದ್ದ ಆಶಿರ್ವಾದ ಫಲವೋ ಎಂಬಂತೆ ಅವರಿಂದ ಆಶೀರ್ವಾದ ಪೈಕಿ ’ಟ್ವೆಂಟಿಫೈವ್" ಪರ್ಸೆಂಟ್
ವಿಧವೆಯರು ಯಾರನ್ನಾದರೂ ಜೊತೆ ಮಾಡಿಕೊಂಡು ಓಡಿಹೋಗುತ್ತಿದ್ದರು ಮತ್ತು ಕೆಲವರು ನಿತ್ಯ ಸುಮಂಗಲಿಯರಂತೆ
ಬಾಳುವೆ ಮಾಡುತ್ತಿದ್ದರು. ಅವರು ಒಂದು ವಯಸ್ಸಿನಲ್ಲಿದ್ದಾಗ ಕೆಲವರು ಅವರ ಮುಂದೆ ಬಿದ್ದು ಹೊರಳಾಡಿದ್ದುಂಟು.
ಜಿತೇಂದ್ರಿಯರೆಂದು ಹೆಸರು ಪಡೆದಿದ್ದ ಅವರು ಯಾವಾಗಲೂ ತಮ್ಮ ಪವಿತ್ರ ಮರ್ಮಾಂಗೋಪಾಸನೆಯನ್ನು ತಂಗಲು
ಬಟ್ಟೆಯಿಂದ ಮರೆಮಾಚಿಬಿಡುತ್ತಿದ್ದರು. ಅಂದು ಹಾಗಿದ್ದುದರಿಂದಲೇ ಅವರ ಮುಖದಲ್ಲಿ ತೇಜಸ್ಸಿಗೆ ಬರವಿಲ್ಲ.
ಕಣ್ಣುಗಳಲ್ಲಿ ಕಾಂತಿಗೆ ಬರವಿಲ್ಲ. ಎಲ್ಲಾ ಬೆಳ್ಳಗಾಗಿದ್ದರೂ ಅವರ ಶಿಖಾಗ್ರದ ಜುಟ್ಟಿ ಮಾತ್ರ ಬೆಳ್ಳಗಾಗಿಲ್ಲ.
ಹರವಾದ ವಕ್ಷಸ್ಥಳದ, ಎತ್ತರದ ಆಳು ಅವರು. ಎತ್ತರವಾದ ಅಳಾದ ಅವರು ಕೋಮಟಿಗಳ ಓಣಿಯಿಂದ ಅಗ್ರಹಾರದ ಕಡೆಗೆ
ನಡೆಯುತ್ತಿದ್ದರೆ ನೋಡಲಿಕ್ಕೂ ಒಂದು ಚಂದ. ಅದೂ ಅಲ್ಲದೆ ಆ ಗಾಂಭೀರ್ಯಕ್ಕೆ ವಿಶೇಷ ಮೆರುಗು ನೀಡಿದಂತೆ
ಅವರ ಪಕ್ಕದಲ್ಲಿ ಮೊಮ್ಮಗ ಶಾಮಾಶಾಸ್ತ್ರಿಯೂ; ಅವನ ತಲೆಯಲ್ಲಿ ವಿರಾಜಮಾನವಾಗಿರುವ ಜುಟ್ಟೇನು? ಭ್ರೂಮಧ್ಯೆ
ಕುಂಕುಮಾಂಕಿತ ನಾಮವೇನು? ಹೆಗಲ ಮೇಲೆ ಉತ್ತರೀಯವೇನು? ಹೆಜ್ಜೆ-ಹೆಜ್ಜೆಗೊಂದಾದರೂ ಉಚ್ಚರಿಸುತ್ತಿರುವ
ವಿಷ್ಣುನಾಮಾವಳಿ ಏನು?
ಮೊಮ್ಮಗ ತಾತನನ್ನು ನಡೆಸುತ್ತಿದ್ದನೋ?
ತಾತನೇ ಮೊಮ್ಮಗನನ್ನು ನಡೆಸುತ್ತಿದ್ದನೋ?
ಒಟ್ಟಿನಲ್ಲಿಆ ಹಳೇಬೇರು-ಹೊಸಚಿಗುರು ಬೀದಿಗೊಂದು ಆಭರಣವಿಟ್ಟಂತೆ ನಡೆಡೂ ನಡೆದೂ ಮನೆ ತಲುಪಿದರು.
ಅಷ್ಟು ಹೊತ್ತಿಗಾಗಲೇ ಅಶ್ವತ್ಥ್ ತನ್ನ ಕರುಳಿನ ಕುಡಿಯು ಗೈರು ಹಾಜರಿಯಿಂದ ಕೃದ್ಧನಾಗಿದ್ದ. ಅವನದು
ಈಗ ಬೀದಿಮಕ್ಕಳೊಂದಿಗೆ ಬೆರೆತು ಮಣ್ಣಿನಲ್ಲಿ ಆಡುವ ವಯಸ್ಸು. ಆದರೆ ಅವನನ್ನು ವ್ರತ ಗಿತಗಳಿಗೆ ತನ್ನ
ತಂದೆ ಕರೆದೊಯ್ದಿರುವುದನ್ನು ಕೇಳಿ ಕೆರಳಿದ್ದ. ತನ್ನ ಹೆಂಡತಿಯ ಮೇಲೂ ಹಾರಾಡಿದ್ದ. ಅದೇ ಹೊತ್ತಿಗೆ
ಸರಿಯಾಗಿ ’ತಾತ ಮೊಮ್ಮಗ’ ಬಾಗಿಲ ಬಳಿ ಕಾಣಿಸಿಕೊಂಡರು.
ಬಾಗಿಲು ದಾಟುವ ಮಂತ್ರ ಶಾಸ್ತ್ರಿಗಳು ಬಾಲಕ ಶಾಮುವಿಗೆ ಇನ್ನೇನು ಹೇಳಿ ಕೊಡಬೇಕು. ಅಶ್ವತ್ಥ್ಗೆ ಏನು
ತಿಳಿಯಿತೋ ಏನೋ ಮಗನ ಜುಟ್ಟಿಗೆ ಕೈಹಚ್ಚಿ ಊರುಗೋಲಿನಿಂದ ನಾಲ್ಕು ಬಾರಿಸಿದ.
ಅಷ್ಟು ಏಟುಗಳನ್ನು ಶಾಮು ಎಂದೂ ತಿಂದಿರಲಿಲ್ಲ. ಮೈಗೆ ಏಟಾಗಿರುವುದರಿಂದ ಅಳಬೇಕಾಗಿರುವುದು ಅನಿವಾರ್ಯ.
ಅದರೆ ಸಂಸ್ಕೃತದಲ್ಲಿ ಅಳಬೇಕೋ ಇಂಗ್ಲಿಷಿನಲ್ಲಿ ಅಳಬೇಕೋ? ಸನಾತನತೆಯಲ್ಲಿ ಆಕ್ರಂದಿಸಬೇಕೋ? ಆಧುನಿಕ
ಶೈಲಿಯಲ್ಲಿ ಆಲಾಪಿಸಬೇಕೊ? ಒಂದೂ ತಿಳಿಯದೆ ದುಃಖವನ್ನೆಲ್ಲ ಗಂಟಲಿಂದ ಜಠರಕ್ಕೆ ತಳ್ಳಿ ಮೌನವಾಗಿ ಉಳಿದುಬಿಟ್ಟ.
"ಇನ್ನೊಂದು ಸಾರಿ ಏನಾದರೂ ಈ ಬಫೂನ್ ವೇಷ ತೊಟ್ಟು ಕದೋರ ಹಿಂದೆ ಹೋದೀ ಅಂದ್ರೆ ಹುಟ್ಟ್ಲಿಲ್ಲಾ ಅನ್ನಿಸಿಬಿಡ್ತೀನಿ"
ಎಂದು ಗುಡುಗುತ್ತಿರುವಾಗಲೇ ಶಾಸ್ತ್ರಿಗಳು ಬಂದು ಮಗನ ಕೆನ್ನೆಗೆ ಛಟಾರನೆ ಒಂದು ಏಟು ಬಿಟ್ಟರು.
"ಅವ್ನು ನನ್ನ ಮೊಮ್ಮಗ. ಅವ್ನು ನನ್ನ ನಿರ್ದೇಶನದಲ್ಲಿಯೇ ಬೆಳೀಬೇಕು" ಎಂದು ಶಾಸ್ತ್ರಿಗಳು.
"ಅವ್ನು ನನ್ನ ಮಗ. ಅವ್ನು ಏನಾಗಬೇಕೆಂದು ನಿರ್ಧರಿಸೋನು ನಾನು" ಎಂದು ಅಶ್ವತ್ಥ್ ನಾರಾಯಣನೂ.
ಅವರಿಬ್ಬರೂ ಸೇರಿಕೊಂದು ಮಗ ಶಾಮುವನ್ನು ಕೊಂದುಹಾಕಿಬಿಡುವರೆಂದೆನ್ನಿಸಿತು ಅಲುಮೇಲಮ್ಮನಿಗೆ. ಒಳಗೆ
ಕರೆದೊಯ್ದು ಬಾಸುಂಡೆಗಳಿಗೆ ಲೇಹ್ಯ ಲೇಪಿಸಿದಳು.
ಆಷ್ಟು ಹೊತ್ತಿಗಾಗಲೇ ಬಾಲಕ ಶಾಮುನ ವಿಷಯದಲ್ಲಿ ತಂದೆ ಮಗನ ನಡುವೆ ಜಗಳ ಬೀದಿಪಾಲಾಗಿತ್ತು. ಈಸ್ಟ್
ಮನ್ ಕಲರ್ ಪಡೆದಿತ್ತು.
ಅಗ್ರಹಾರದಲ್ಲಿ ಆಗಲೇ ಎರಡು ಬಣಗಳು ಏರ್ಪಟ್ಟಿದ್ದವು.
ಬಾಲಕ ಶಾಮುವಿನ ಜವಾಬ್ದಾರಿ ತೀರ್ಥರೂಪವಾದ ಶಾಸ್ತ್ರಿಗಳಿಗೆ ಸೇರಿದ್ದು ಎಂಬುದು ಒಂದು ಪಂಗಡದ ವಾದವಾಗಿದ್ದರೆ,
ಇನ್ನೊಂದು ಪಂಗಡ ತಂದೆಯಾದವನೇ ಮಗನಾದವನ ಬದುಕಿನ ರೂವಾರಿ ಎಂದು ವಾದ ಮಂಡಿಸತೊಡಗಿತು.
ಶಾಸ್ತ್ರಿಗಳ ಗುಂಪು ಬಲಿಷ್ಠವಾಯಿತು.
ಆಶ್ವತ್ಥ್ ಕಾಲು ಕಳೆದುಕೊಂಡು ವಾಪಸು ಬರದಿದ್ದಲ್ಲಿ ಶಾಸ್ತ್ರಿಗಳೇ ತಮ್ಮ ಇಚ್ಛೆಗನುಸಾರವಾಗಿ ಸಂಸ್ಕೃತ
ವೈದಿಕ ಎರಡೂ ಕಲಿಸುತ್ತಿರಲಿಲ್ಲವೇ?
ಬ್ರಾಹ್ಮ ಕುಲಸಂಜಾತರಿಗೆ ಬಾಲ್ಯದಲ್ಲಿ ಗುರುಕುಲ ಸಂಸ್ಕಾರ ದೊರೆಯಬೇಕೆಂದಲ್ಲವೆ ಶಾಸ್ತ್ರಿಗಳು ಒದ್ದಾಡುತ್ತಿರುವುದು.
ಕಂಚಿ ಕಾಮಕೋಟಿ ಶ್ರೀಗಳಿಂದ ಅಕ್ಷರಾಭ್ಯಾಸಕ್ಕೆ ಶ್ರೀಕಾರ ಹಾಕಿಸಬೇಕಾಗಿತ್ತಾದರೂ ಯಾಕೆ?
ಎಂಬಿತ್ಯಾದಿಯಾಗಿ ವಾದ ಮಂಡಿಸಿದವರೆಲ್ಲ ವಯೋವೃದ್ಧರೂ; ಜ್ಞಾನ ವೃದ್ಧರೂ ಆಗಿದ್ದರು ಎಂಬುದು ವಿಶೇಷ.
ಅಶ್ವತ್ಥ್ ಪರ ಗುಂಪಿನ ಬಹುಪಾಲು ಸದಸ್ಯರೆಲ್ಲ ವಯಸ್ಸಿನಿಂದ ನೋಡಿದರೆ ಕಿರಿಯರೇ? ಆಧುನಿಕತೆ ಎಂಬ ದ್ವೀಪಕ್ಕೆ
ಸಿಂಹಲಂಘನ ಮಾಡಬೇಕೆಂಬ ಕನಸು ಕಾಣುತ್ತಿದ್ದವರೇ ಅವರೆಲ್ಲ. ಅವರಲ್ಲಿ ಬಹಳಷ್ಟು ಜನ ಜುಟ್ಟು ಮರೆಮಾಚುವಂತೆ
ಕ್ರಾಪು ಬಿಡತೊಡಗಿದ್ದರು. ಶೂದ್ರ ಸ್ತ್ರೀಗಳ ಸಹವಾಸ ಮಾಡಲಿಕ್ಕೆಂದೇ ನಿರೋಧ್ ಬಳಕೆಯ ಬಗ್ಗೆ ಗುಟ್ಟಗಿ
ತಾಲೀಮು ನಡೆಸಿದ್ದರು. ಗುಟ್ಟಾಗಿ ತಂಬಾಕು ಸೇವನೆ ಮಾಡುತ್ತಿದ್ದರು. ಮಂತ್ರಗಳನ್ನು ಅರ್ಧಕ್ಕೆ ಬಿಟ್ಟು
ಮುಷ್ಟಿ ಮೈಥುನದ ಬಗ್ಗೆ , ಕಾಮದ ಹಲವು ರೂಪಗಳ ಬಗ್ಗೆ ಮೆತ್ತಗೆ ವಿಚಾರ ವಿನಿಮಯ ನಡೆಸುತ್ತಿದ್ದಂಥವರು.
ಆದರೆ ಅವರ ಬಂಡಾಯ ಪ್ರತಿಭಟನೆ ಧಿಡೀರನೆ ಪ್ರಕಟಗೊಳ್ಳುವಂತಿರಲಿಲ್ಲ. ಅವರು ಎಷ್ಟಿದ್ದರೂ ಅವಲಂಬಿತರು.
"ರೆಕ್ಕೆ ಬಲಿಯದ ಮುನ್ನ
ಹಕ್ಕಿ ಹಾರಲು ಹೋಗಿ
ಕಕ್ಕುತಲಿ ನೆತ್ತರನ್ನು
ಮುಕ್ಕದಿರುವುದೇ ಮಣ್ಣು..."
ಇಂಥವರು ಬಾಲಕ ಶಾಮುವಿನ ಸರ್ವ ಜವಾಬ್ದಾರಿ ಅವನ ತಂದೆ ಅಶ್ವತ್ಥ್ಗೆ ಸೇರಿದ್ದು ಎಂದು ಸಶಕ್ತವಾಗಿ
ಮಾತಾಡಲು ಹೇಗೆ ಸಾಧ್ಯ?
ಶಾಸ್ತ್ರಿಗಳಿರೋವರೆಗೂ ಬಾಲಕ ಶಾಮುವಿನ ಜವಾಬ್ದಾರಿ ಅವರಿಗೇ ಸೇರಿದ್ದು; ಅಂಗವಿಹೀನ ಮಗನಾದವನೂ ಪರಾವಲಂಬಿಯೇ...
? ಅಗ್ರಹಾರದ ಪೂರ್ವಾಪರ ನಿಯಮಾವಳಿಗೆ ಪೂರಕವಾಗಿಯೇ ನಡೆದುಕೊಳ್ಳಬೇಕು ಇತ್ಯಾದಿ ಇತ್ಯಾದಿ ನಿರ್ಣಯಗಳು
ಸ್ವೀಕಾರಗೊಂಡವು.
ಶಾಸ್ತ್ರಿಗಳು ಗಂಭೀರ ವದನರಾಗಿ ಜುಟ್ಟು ನೇವರಿಸಿಕೊಂಡರು. ತಮ್ಮ ಉತ್ತರೋತ್ತರ ಗಣ್ಯ ಅಧಿಕಾರಿಯಾದ
ಮೊಮ್ಮಗನನ್ನು ಎತ್ತಿ ಮುದ್ದುಕೊಟ್ಟರು.
ರಾತ್ರಿ ಒಂದು ಹೊತ್ತಿನಲ್ಲಿ ಗಂಡನ ಆಜ್ಞೆ ಮೇಲೆ ಅಲುಮೆಲು ಮಗನನ್ನು ಶಾಸ್ತ್ರಿಗಳ ಕೋಣೆಯಿಂದ ಎತ್ತಿತಂದು
ಮಗ್ಗುಲಲ್ಲಿ ಮಲಗಿಸಿಕೊಂದರೆ, ಇನ್ನೊಂದು ಹೊತ್ತಿನಲ್ಲಿ ಶಾಸ್ತ್ರಿಗಳೇ ಎದ್ದು ಹೋಗಿ ಮೊಮ್ಮಗನನ್ನು
ಹೊತ್ತು ತಂದು ಮಲಗಿಸಿಕೊಂಡರು.
ಮಧ್ಯರಾತ್ರಿಯ ನಂತರ ಅಶ್ವತ್ಥ್ ಮಗನಿಗಾಗಿ ಹಾಸಿಗೆಯಲ್ಲಿ ತಡಕಾಡಿದ. ಹೆಂಡತಿಯ ತೊಡೆಯೇ ತಮ್ಮ ಶಾಮು
ಎಂದು ಕ್ಷಣ ಹೊತ್ತು ಭಾವಿಸಿದ್ದುಂಟು. ಅದು ಮಗುವೆಂಬ ಭ್ರಮೆ ಹುಟ್ಟಿಸಿತೆಂದು ಗೊತ್ತಾದಾಗ ನಿದ್ರೆಯೇ
ಬಾರದೆ ಒದ್ದಾಡಿದ. ಸಿಗರೇಟು ಮೇಲೆ ಸಿಗರೇಟು ಸುಟ್ಟ.
ಜಮೀನ್ದಾರೀ ವ್ಯವಸ್ಥೆಯ ಇನ್ನೊಂದು ಮಗ್ಗುಲೇ ಪುರೋಹಿತಶಾಹಿ ಎಂದುಕೊಂಡ. ತಾನು ದೈಹಿಕವಾಗಿ ಹೆಳವಗೊಂಡಿರುವುದರಿಂದ
ಪಿತೃತ್ವ ನಿರಂಕುಶತ್ವದ ಮೊಟ್ಟೆ ಇಡುತ್ತದೆ ಎಂದುಕೊಂಡ.
ಇಂಥವರಿಂದ ಸಮಾಜದ ಏಳಿಗೆ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಂಥವರ ಜೊತೆಗಿದ್ದರೆ ತಮ್ಮ ಕುಟುಂಬದ ಏಳಿಗೆಯೂ
ಸಾಧ್ಯವಿಲ್ಲವೆಂದು ಆಲೋಚಿಸಿದ.
ಯಾರೊ ಪಂಚಾಯ್ತಿ ಹೇಳಿಬಿಟ್ಟರೂಂತ ಇದನ್ನೆಲ್ಲ ಒಪ್ಪಿಕೊಂಡು ಕೂತರೆ ಆಗದೆಂದೂ; ಈ ವ್ಯವಸ್ಥೆಯ ಪ್ರತಿನಿಧಿಗಳಿಗೆ
ಶಾಕ್ ಕೊಡದಿದ್ದರೆ ಅಗ್ರಹಾರವೆಂಬ ಜೀವಂತ ಸಮಾಧಿಯೊಳಗೆ ಬದುಕಬೇಕಾಗುತ್ತದೆ ಎಂದೂ ಯೊಚಿಸಿ ಒಂದು ನಿರ್ಣಯಕ್ಕೆ
ಬಂದ.
ಅಪ್ಪಟ ಶೂದ್ರ ಓಣಿಯಲ್ಲಿ ಒಂದು ಮನೆ ಬಾಡಿಗೆ ಹಿಡಿದ. ತಂದೆಯಾದ ಶಾಸ್ತ್ರಿಗಳಿಗೆ ತಿಳಿಸಿದ. ಶಾಸ್ತ್ರಿಗಳಿಗೆ
ಏನು ಹೇಳಬೇಕೋ ತಿಳಿಯಲಿಲ್ಲ. ಒಂದು ಕ್ಷಣ ಮೌನವಾದರು. ಕಣ್ಣುಗಳಲ್ಲಿ ನೀರು ತುಂಬಿದವು. ಕಂಠ ಕಟ್ಟಿತು.
ನುಡಿಯಲಾಗಲಿಲ್ಲ. ‘ಮೌನಂ ಸಮ್ಮತಿ ಲಕ್ಷಣಮ್’
ಹೊಸ ಮನೆಯ ಮಾಲಿಕ ಶಿರಸ್ತೇದಾರ ದುರುಗಪ್ಪ. ಸಂಬಳದ ಹತ್ತರಷ್ಟು ಗಿಂಬಳ. ಹುಟ್ಟಿದ ಮನೆಯ ಪ್ರೀತಿಯಿಂದ
ಹೊಸದಾಗಿ ಕಟ್ಟಿಸಿದ. ಅಡುಗೆ ಕೋಣೆ ಚಿಕ್ಕದುನ್ನುವುದು ಬಿಟ್ಟರೆ ಉಳಿದಂತೆ ಮನೆ ದೊಡ್ಡದಾಗಿತ್ತು.
ಮನೆ ಮುಂದುಗಡೆ ಹತ್ತಾರು ಗಿಡಮರಗಳಿದ್ದವು.
ಬಾಡಿಗೆ ಹೆಚ್ಚೇನಿರಲಿಲ್ಲ. ಶೂದ್ರರೊಂದಿಗೆ ವಾಸಿಸಲು ಆತನ ಸುಶಿಕ್ಷಿತ ಮನಸ್ಸು ಒಪ್ಪಿರಲಿಲ್ಲ. ಆದ್ದರಿಂದ
ಮೇಲ್ಜಾತಿಯವರು ವಾಸಿಸುವ ಕಡೆ ಹೊಸದೊಂದು ಮನೆ ಕಟ್ಟಿಸಿಕೊಂಡಿದ್ದ. ಆ ಮನೆಗೆ ಹೋಗಿದ್ದ ದುರ್ಗಪ್ಪ
ತನ್ನ ಹೆಸರನ್ನು ನೋಟರಿ ಮೂಲಕ ದುರ್ಗಾಪ್ರಸಾದ್ ಎಂದು ಬದಲಾಯಿಸಿಕೊಂಡಿದ್ದ. ಆತನ ಹೆಂಡತಿ ಲಚ್ಚುಮಿ
ಅದೇ ನೋಟರಿ ಮೂಲಕ ಝಾನ್ಸಿರಾಣಿ ಲಕ್ಶ್ಮೀಬಾಯಿ ಎಂದು ಬದಲಾಯಿಸಿಕೊಂಡಿದ್ದಳು. ಆರತಿಗಾರು ಕೀರುತಿಗೊಂದು
ಪಡೆದುಕೊಂಡಿದ್ದರು. ಅವುಗಳೆಲ್ಲ ಕಾನ್ವ್ಂಟಿನಲ್ಲಿ ಓದುತ್ತಿದ್ದವು. ಝಾನ್ಸಿ ರಾಣಿಗೆ ತುಳಸಿ ಗಿಡದ
ಮೇಲೆ ತುಂಬ ಭಕ್ತಿ. ಬಾಗಿಲ ಮುಂದೊಂದು ಬೃಂದಾವನ ಕಟ್ಟೆ. ಅದನ್ನು ಗಂಡನಿಗಿಂತ ಹೆಚ್ಚು
ಪ್ರೀತಿಸುತ್ತಿದ್ದಳು. ಅವರು ವಾರಕ್ಕೊಮ್ಮೆ ಗುಟ್ಟಾಗಿ ಕುರಿ ಕೋಳಿ ಬೇಯಿಸುತ್ತಿದ್ದರು. ಮೇಲೆ ತಾವು
ಶುದ್ದ ಸಸ್ಯಾಹಾರಿಗಳೆಂದು ನಟಿಸುತ್ತಿದ್ದರು.
ಪಿ.ಡಿ.ಪ್ರಸಾದ್ ಉರುಫ್ ಪಾತ್ರೊಟ ದುರ್ಗಪ್ಪ ತಾನು ಹುಟ್ಟಿಬೆಳೆದಿರೋ ಮನೆಯನ್ನು ಶೂದ್ರರಿಗೆ ಬಾಡಿಗೆ
ಕೊಡುತ್ತಿರಲ್ಲಿಲ್ಲ. ಮೇಲ್ಜಾತಿಯವರಿಗೆ ಬಾಡಿಗೆ ಕಡಿಮೆಯಾದರೂ ಕೊಡಲು ನಿಶ್ಚಯಿಸಿದ. ಆದ್ದರಿಂದ ಪರಮೇಶ್ವರ
ಶಾಸ್ತ್ರಿಗಳ ಮಗ ಅಶ್ವತ್ಥ್ ನಾರಾಯಣಗೆ ಬಾಡಿಗೆ ನೀಡಿದ್ದ.
ಅಶ್ವತ್ಥ್ ಮತ್ತು ಅವನ ಹೆಂಡತಿಗೆ ಮನೆ ಇಷ್ಟವಾಯಿತಾದರೂ ಓಣಿ ಇಷ್ಟವಾಗಲಿಲ್ಲ. ಎಡ ಕಿಟಕಿಯಿಂದ ಮೀನು
ಬೇಯಿಸುವ ವಾಸನೆ, ಬಲ ಕಿಟಕಿಯಿಂದ ಮಟನ್ ಬೇಯುತ್ತಿರುವ ವಾಸನೆ, ಕೇರಿಯಲ್ಲಿ ದಿನಂಪ್ರತಿ ಕುಡುಕರ ಗಲಾಟೆ.
ಪ್ರತೀ ಮನೆಯಲ್ಲೂ ಒಂದಿಲ್ಲ ಒಂದು ಜಾನಪದ ಹಾಡುಗಳು.
ಇದಕ್ಕಿಂತ ಹೆಚ್ಚಾಗಿ ಮಾವನವರ ನೆನಪು ಕಾಡತೊಡಗಿತು. ವೃದ್ದಾಪ್ಯ ಬೇರೆ. ಒಂಟಿ ಬದುಕು. ಏನು ತಿಂದರೋ
ಏನು ಬಿಟ್ಟರೋ? ಮೊಮ್ಮಗನನ್ನು ಎಂದೂ ಯಾವ ಕಾರಣಕ್ಕೂ ಬಿಟ್ಟಿದ್ದವರಲ್ಲ.
"ನೋಡಿ... ವೃದ್ಧ ತಂದೆಯ ಯೋಗಕ್ಷೇಮ ನೋಡ್ಕೋಳ್ಳೋದು ಮಕ್ಕಳದವರ ಧರ್ಮ, ಹೊಗಿ ಒಂದು ಮಾತು ಕರೆಯಬಾರದೆ?"
ಗಂಡನನ್ನು ಕೇಳಿದಳು.
"ತಂದೆಮೇಲೆ ನನ್ಗೂ ಪ್ರೀತಿ ಇಲ್ಲಾಂತ ತಿಳ್ಕೋಬೇಡ. ಆದರೆ ಅದು ಮೊಂಡು ಹಠದ ಮುದುಕ. ಇಲ್ಲಿಗೆಲ್ಲಾ
ಬಂದು ಇರೋ ಪೈಕಿಯಲ್ಲ" ಎಂದು ನಿಟ್ಟುಸಿರು ಬಿಟ್ಟ ಅಶ್ವತ್ಥ್.
ವೃದ್ಧ ತಂದೆಯನ್ನು ಕರೆಯುವುದು ತನ್ನ ಧರ್ಮ. ಬರುವುದು ಬಿಡುವುದು ಅವರಿಗೆ ಸೇರಿದ್ದು. ...ಯೋಚಿಸಿ
ಒಂದು ನಿರ್ಧಾರಕ್ಕೆ ಬಂದ . ಹೋದ ಕರೆದ. ಬರಲು ನಿರಾಕರಿಸಿದರು ಶಾಸ್ತ್ರಿಗಳು.
"ಮಗನೇ ಅಶ್ವತ್ಥೂ... ನಾನು ನಿನ್ನ ಹತ್ತಿರ ಒಂದು ಬೇಡಿಕೊಳ್ತಿದೀನಿ... ಅದನ್ನು ನಡ್ಸಿಕೊಡ್ತೀಯಾ"
ಶಾಸ್ತ್ರಿಗಳು ಮುಖ ಸಪ್ಪಗೆ ಮಾಡಿಕೊಂಡೇ ಕೇಳಿದರು.
"ಅದೇನು ಕೇಳಪ್ಪಾ?" ಎಂದ ಅಶ್ವತ್ಥ್.
"ಅಕಸ್ಮಾತ್ನಾನು ಸತ್ತರೆ ದಯವಿಟ್ಟು ನೀನು ನನ್ನ ಶವಕ್ಕೆ ಅಗ್ನಿ ಸ್ಪರ್ಶ ಮಾಡಬೇಡ."
"ಮತ್ತಾರು ಮಾಡಬೇಕು?" ಇಂಥ ಮಾತನ್ನು ನಿರೀಕ್ಷಿಸಿದ್ದ.
"ನನ್ ಮೊಮ್ಮಗ ಮಾಡಲಿ"
"ಯಾಕೆ?"
"ಅವನು ನನ್ನ ತಂದೆಯ ಹೆಸರು ಇಟ್ಟುಕೊಂಡಿದ್ದಾನೆ!" ಶಾಸ್ತ್ರಿಗಳು ಅಕ್ಕಿಯಲ್ಲು ಕಲ್ಲು ಆಯತೊಡಗಿದರು.
ತನಗೆ ತಾನೆ ಎಕ್ಕಡದಲ್ಲಿ ಹೊಡೆದುಕೊಂಡು ಪಶ್ಚಾತ್ತಾಪ ಮಾಡಿಕೊಳ್ಳಬೇಕೆನ್ನಿಸಿತು ಅಶ್ವತ್ಥ್ಗೆ. ಮನೆಗೆ
ಬಂದು ಹೆಂಡತಿಗೆ ನಾಲ್ಕು ಮಾತು ಅಂದ.
ಮನೆ ಮುಂದೆ ತುಳಸಿಕಟ್ಟೆ ಕಟ್ಟಿಸಿಕೊಡಲು ಅಲುಮೇಲು ಗಂಡನನ್ನು ಕೇಳಿಕೊಂಡಳು. ಬಿಲ್ಕುಲ್ ನಿರಾಕರಿಸಿದ.
ಶೂದ್ರ ಜೀವನ ಶೈಲಿ ರೂಢಿಸಿಕೊಳ್ಳ ಸೂಚಿಸಿದ.
ಮಗ ಶಾಮುವಿನ ಜುಟ್ಟು ಕಟ್ ಮಾಡಿದ. ಸಮವಸ್ತ್ರ ತೊಡೆಸಿದ. ಎಬಿಸಿಡಿ ಪುಸ್ತಕಗಳನ್ನು ತಂದು ಚೀಲ ತುಂಬಿದ.
ಸ್ವಲ್ಪ ದೂರದ ಕಾನ್ವೆಂಟ್ ಸ್ಕೂಲಿಗೆ ಹೋಗಿ ಸೇರಿಸಿದ. ಅದು ಪ್ರತಿದಿನ
ಒಂದೊಂದು ಪಾಠ ಒಪ್ಪಿಸಿ ಹೆತ್ತವರ ಮನಕ್ಕೆ ಮುದ ತಂದಿತು.
ಒಂದು ರಾತ್ರಿ ಶಾಸ್ತ್ರಿಗಳಿಗೆ ಬಿದ್ದ ಕನಸಿನಲ್ಲಿ ಸೀನಿಯರ್ ಶಾಮಾ ಶಾಸ್ತ್ರಿಗಳು ಕಾಣಿಸಿಕೊಂಡರು.
ಮುಠ್ಠಾಳ ಎಂದರು. ಬುದ್ಧಿ ಇದೆ ಏನೊ? ಎಂದರು. ಮೊಗಲರ ಹೆಣ್ಣು ಮಕ್ಕಳಿಗೆ ಹೇಗೆ ಮದುವೆ ಯೋಗವಿಲ್ಲವೋ
ಹಾಗೆ ಚತುರ್ವೇದಿಗಳಾದ ನಮ್ಮ ವಂಶದಲ್ಲಿ ಹುಟ್ಟಿದವರಿಗೆ ಇಂಗ್ಲಿಷ್ ಕಲಿಸಕೂಡದು. ನಾನೇ ಅಶ್ವತ್ಥ್ನ
ಹೊಟ್ಟೆಯಲ್ಲಿ ಹುಟ್ಟಿ ಬಂದಿರೋದು ಎಂಬುದನ್ನು ಮರೆಯಬೇಡ" ಎಂದು ಮುಖಕ್ಕೆ ರಾಚಿದಂತೆ ಆಡಿಬಿಟ್ಟರು.
ಶಾಸ್ತ್ರಿಗಳು ದಿಗ್ಗನೆ ಎದ್ದು ಕುಳಿತರು.
ಆಪಃ ಪುನ್ಂಶ್ಚಿತ್ಯಸ್ಯ ಮಂತ್ರಸ್ಯ ಪೂತ ಋಷಿಃ
ಆಪೋ ದೇವತಾ ಅಸ್ವೀಚ್ಛಂದಃ | ಅಪಾಂಪ್ರಾಶನೇ ವಿನಿಯೋಗಃ
ಗೊಣಗಿದರು.
ಘಂಟಾ ಕಡಗವಿಲ್ಲದೆ ಅಂಗ ವಿಹೀನರಾಗಿರುವ ಅವರ ಪವಿತ್ರ ಆತ್ಮ ಅಲೆದಾಡುತ್ತಿರುವುದು. ಅವರ ಇಚ್ಛೆಗೆ
ವಿರುದ್ಧ ನಡೆದುಕೊಳ್ಳುವುದು ಪಿತೃದ್ರೋಹವಾದೀತು.
ಓಂ ಕೇಶವಾಯ ಸ್ವಾಹಃ | ನಾರಾಯಣಾ ಸ್ವಾಹಾ |
ಲಗುಬಗೆಯಿಂದ ಪ್ರಾತಃ ವಿಧಿಗಳನ್ನು ಮುಗಿಸಿಕೊಂಡವರೇ ಉತ್ತರೀಯ ಹೆಗಲ ಮೇಲೆ ಹಾಕಿಕೊಂಡು ಹೊರಟರು. ತಮ್ಮ
ತಪೋ ಶಕ್ತಿಯಿಂದ ಬಾಲಕ ಶಾಮು ಓದುವ ಕಾನ್ವೆಂಟ್ ಶಾಲೆ ಸಮೀಪಿಸಿದರು. ಪ್ರಣವಸ್ಯ ಪರ ಬ್ರಹ್ಮ ಋಷಿಃ
| ಪರಮಾತ್ಮಾ ದೇವತಾ | ಎಂದು ಬಾಗಿಲು ದಾಟಿದರು.
ಸರ್ವ ವರ್ಣೇ ಮಹಾದೇವಿ ಸಂಧ್ಯಾವಿದ್ಯೇ ಸರಸ್ವತೀ ಅಂತ. ಅಚ್ಛಧವಳ ವರ್ಣೇ ಉಡುಪು ಧರಿಸಿದ್ದ ಹೆಡ್ಮಿಸ್ಸೆಸ್ಳನ್ನು
ನೋಡಿದರು.
"ಹೆಲೋ ವೆಲ್ಕಂ ಸಾರ್.ವಾಟ್ ಕೆನ್ ಐ ಡು ಫಾರ್ ಯು" ಅಂತ ಆಕೆ ಸ್ವಾಗತಿಸಿ ಮುಕ್ತಾ ವಿದ್ರುಮ ಹೇಮ
ನೀಲ ಧವಳ ಎಂದು ಶಕ್ತಿ ಸಂಚಯಮಾಡಿಕೊಂಡರು. ಆ ಮ್ಲೇಚ್ಛೆಗೆ ಇಷ್ಟವಾಗುವಂತೆ ಮಾತನಾಡಿದರು. ಅದೇ ಹೊತ್ತಿಗೆ
ಬಾಲಕ ಶಾಮು ತನ್ನ ತಾತನನ್ನು ನೋಡಿತು. ಧಿಯೋಯೋನ ಜ್ಞಾನಾತ್ಮನೇ ಅಂತ ತಾತನ ಬಳಿಗೆ ಓಡಿಬಂತು. ತನ್ನ
ಬಾಹುಗಳೆಂಬ ಹಾರವನ್ನು ತಾತನ ಕೊರಳಿಗೆ ಹಾಕಿತು. ತಮ್ಮ ಗಾಳಕ್ಕೆ ಮೊಮ್ಮಗನೆಂಬ ಮೀನು ಬಿತ್ತೆಂದು ಶಾಸ್ತ್ರಿಗಳು
ಭಾವಿಸಿದರು. ಬಗೆಬಗೆಯ ಸಂಸ್ಕೃತದ ಟೆಕ್ನಿಕ್ ಉಪಯೋಗಿಸಿ ಅವನನ್ನು ಅಲ್ಲಿಂದ ಬಿಡುಗಡೆ ಮಾಡಿಸಿಕೊಂಡರು.
ಪೃಥ್ವಿರಾಜ ಜಯಚಂದ್ರನ ಪುತ್ರಿ ಸ್ವಯಂವರೆಯನ್ನು ಅಪಹರಿಸಿಕೊಂಡೊಯ್ದ ರೀತಿಯಲ್ಲಿ ಮೊಮ್ಮಗನನ್ನು ತಮ್ಮ
ಇಚ್ಛಾಶಕ್ತಿಯೆಂಬ ಚಿಮುಟಿಗೆಯಲ್ಲಿ ಹಿಡಿದು ಸೀದಾ ಸಂಸ್ಕೃತ ಪಾಠ ಶಾಲೆಗೆ ಸೇರಿಸಿಬಿಟ್ಟರು.
ಪ್ರೀತಿಯ ಮೊಮ್ಮಗನೇ ಯಾವ ಕಾರಣಕ್ಕೂ ಈ ವಿಷಯವನ್ನು ಆ ನಿನ್ನ ಕಂತುಪಿತನಿಗೆ ಹೇಳಕೂಡದೆಂದು ಕಟ್ಟಪ್ಪಣೆ
ವಿಧಿಸಿದರು.
ಬ್ಯಾ ಬ್ಯಾ ಬ್ಲಾಕ್ ಷೀಪ್ ಎಂದು ಬಾಯಿಪಾಟ ಮಾಡಿದ್ದ ಆದು ಜಯ ನಿಖಿಲ ನಿಲಿಂಪಕೋಟೀರ ಕೋಟಿಪ್ರಭಾ ಪುಂಜ
ಎಂದು ಓದತೊಡಗಿತು.
ಮನೆಯಲ್ಲಿ ಅದು ತಲೆ ಓಡಿಸಿತು. ಇಂಗ್ಲಿಷ್ ಪುಸ್ತಕದೊಳಗೆ ಸಂಸ್ಕೃತ ಶ್ಲೋಕಗಳಿದ್ದ ಪುಸ್ತಕ
ಅಡಗಿಸಿಟ್ಟು ಓದುವ ನಾಟಕವಾಡತೊಡಗಿತು. ಅದರ ಆ ತೆರನ ಆಟಕ್ಕೆ ಗೌರವಾನ್ವಿತ ಕಳ್ಳಾಟಕ್ಕೆ ಅನುಕೂಲ ವಾಗುವಂತೆ
ಅದರ ಕಂತುಪಿತ ದಾರದ ಮಿಲ್ಲಿನಲ್ಲಿ ಕಾರಖೂನ ಕೆಲಸಕ್ಕೆ ಸೇರಿಕೋಡಿದ್ದ. ಬೆಳೆಗ್ಗೆಯಿಂದ ರಾತ್ರಿವರೆಗೆ
ಒಂದೇ ಸಮನೆ ದುಡಿದೂ ದುಡಿದೂ ಸುಸ್ತಾಗಿ ಬಂದು ಸೇರಿದಷ್ಟು ಉಂಡು "ಓದ್ಕೊಂಡೇನೇ ಬರ್ಕೊಂಡೇನೋ" ಎಂದು
ವಿಚಾರಿಸುತ್ತಾ ಆಕಳಿಸುತ್ತಿದ್ದ. ಮಗನನ್ನು ಸರ್ಕಲ್ ಇನ್ಸ್ಪೆಕ್ಟರನ್ನಾಗಿ ಮಾಡಬೇಕೆಂಬ ಕನಸು ಕಾಣುತ್ತ
ಮಲಗಿ ಬಿಡುತ್ತಿದ್ದ.
ಅವನು ಕೆಲಸಕ್ಕೆ ಹೋಗಿದ್ದನ್ನು ಹೊಂಚು ನೋಡಿ ಶಾಸ್ತ್ರಿಗಳು ಮನೆಗೆ ಬಂದರು. ಬಾಗಿಲ ಮುಂದೆ ತುಳಸಿಕಟ್ಟೆ
ಇಲ್ಲದಿರುವುದನ್ನು ನೋಡಿ ಖತಿಗೊಂಡರು. ಸೊಸೆ ಎಷ್ಟು ಕೇಳಿಕೊಂಡರೂ ಅವರು ಒಂದು ಹನಿ ನೀರು ಸಹ ಮುಟ್ಟಲಿಲ್ಲ.
ಕಿಟಕಿ, ಗವಾಕ್ಷಿ ಮತ್ತಿತರ ನವರಂದ್ರಗಳಿಂದ ನುಸುಳುತ್ತಿರುವ ಅಮೇಧ್ಯದ ವಾಸನೆ ಬಗ್ಗೆ ತಕರಾರೆತ್ತಿದರು.
ನವರಂದ್ರಗಳನ್ನು ತಾವೇ ಮುಚ್ಚಿಬಿಟ್ಟರು. ಸೊಸೆಗೆ ಸನಾತನ ಧರ್ಮ ಪಾಲಿಸುವಂತೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮೊಮ್ಮಗ ಗುಟ್ಟಾಗಿ ಶ್ರದ್ಧೆಯಿಂದ ಸಂಸ್ಕೃತ ಅಭ್ಯಾಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಸೀದ
ಊರಹೊರಗಿದ್ದ ಇಂದ್ರ ಧಾರಾ ತೊರೆಗೆ ಹೋದರು. ಹುಲುಲಿ ಹಳ್ಳಕ್ಕೆ ಅವರು ಇಟ್ಟ ಹೆಸರು.
ಇಂದ್ರಾಣಿ ಇಂದ್ರ ರೂಪಾ ಚ ಇಂದ್ರಶಕ್ತಿಃ ಪರಾಯಿಣೀ... ಎಂದು ಮೂಗು ಮುಚ್ಚಿಕೊಂಡು ಮುಳುಗೆದ್ದರು.
ಯಾವುದಾದರು ಶವಸಂಸ್ಕಾರಕ್ಕೆಂದು ಬಂದವರೆಲ್ಲ ಅವರು ಆ ಇಂದ್ರಧಾರ ಉರುಫ್ ಹಾಲುಲಿಹಳ್ಳದಲ್ಲಿ ಮುಳುಗು
ಹಾಕದೆ ಊರು ಪ್ರವೇಶಿಸುತ್ತಿರಲ್ಲಿಲ್ಲ. ಅಂದು ಅವರ ಇಚ್ಛಾ ಶಕ್ತಿಗೆ ವಿರುದ್ಧವಾಗಿ ಅನಾಮಧೇಯ ಕಳೇಬರವೊಂದು
ಅವರ ಮನಸ್ಸನ್ನು ಆವರಿಸಿ ಮಲಿನ ಮಾಡಿತು.
ಆರು ಮೂರಾಗಲೀ ಮೂರು ಆರಾಗಲೀ... ಮೊಮ್ಮಗ ಶಾಮುವನ್ನು ಅವರ ಮುತ್ತಾತನ ಹಾಗೆ ಪ್ರಕಾಂಡ ಪಂಡಿತನನ್ನಾಗಿ
ಮಾಡಬೇಕೆಂದು ಪದೇಪದೆ ಅಂದುಕೊಳ್ಳುತ್ತ ಅಗ್ರಹಾರದ ತಮ್ಮ ಮನೆಗೆ ವಾಪಸಾದರು.
ಅತ್ತ ಬಾಲಕ ಶಾಮು ಕಾನ್ವೆಂಟ್ ದ್ರೆಸ್ಸ್ ಹಾಕಿಕೊಂಡು ಸಂಸ್ಕೃತ ಪಾಠ ಶಾಲೆಯಲ್ಲಿ ಅಮರ ಕೋಶ ಕಲಿಯುತ್ತಿದ್ದಾಗ
ಇತ್ತ ಪೋಸ್ಟ್ಮ್ಯಾನ್ ಅಶ್ವತ್ಥ್ ನಾರಾಯಣ ಕೈಗೆ ಕಾರ್ಡೊಂದನ್ನು ಕೊಟ್ಟು ತ್ರಿಣ್ ತ್ರಿಣ್ ಅಂತ ವಾಪಸಾದ.
ಅದು ಕಾನ್ವೆಂಟ್ ಸ್ಕೂಲಿನಿಂದ ಬಂದಿತ್ತು. ಓದಿದ ರಕ್ತ ಕುದಿಯಿತು. "ಎಲವೋ ಮಗನೇ" ಎಂದು ಸಿಂಹನಾದ
ಮಾಡಿದ. ಮೊಲದಂಥ ಅಲುಮೇಲು ಓಡಿಬಂದಳು.
"ಕೋಪಾವೇಶದಿಂದ ಮಗನಿಗೇನಾದರೂ ಮಾಡೀರಿ?" ಎಂದಳು.
ಅವನು ಸೀದ ಸಂಸ್ಕೃತ ಶಾಲೆಗೆ ಹೋದ. ಕ್ರಾಪಿನ ನಡುವೆ ಹಲೋ ಹಲೋ ಎನ್ನುತ್ತಿದ್ದ ಜುಟ್ಟು ಹಿಡಿದು ಮೇಲೆತ್ತಿದ.
ಛಟಾರನೆ ಕೆನ್ನೆಗೆರಡು ಬಿಟ್ಟ.
ಅಲ್ಲಿ ಅದನ್ನು ನೋಡಿದ ಸಂಸ್ಕೃತ ಪಂಡಿತರು ’ಓಂ ನಮೋ ಭಗವತೇ ಜ್ವಲ ಜ್ವಲ ಮಹಾರುದ್ರಾಯ’ ಎಂದು ಕೆನ್ನೆಕೆನ್ನೆ
ಬಡಿದುಕೊಂಡರು. ಅವರ ಮೃದು ಪ್ರತಿಭಟಣೆ ಲೆಕ್ಕಿಸದೆ ಕುಯ್ಯೋ ಮರ್ರೋ ಅನ್ನುತಿದ್ದ ಮಗನನ್ನು ಕಂಕುಳಲ್ಲಿ
ಅವುಂಚಿಕೊಂಡು ಕಾನ್ವೆಂಟ್ ಸ್ಕೂಲಿಗೆ ಬಿಸಾಕಿದನು.
ಕೆಲವು ದಿನಗಳಲ್ಲಿ ಇದು ಹೇಗೋ ಶಾಸ್ತ್ರಿಗಳಿಗೆ ತಿಳಿಯಿತು. ಜಾರು ಬಂಡೆ ಆಟ ಆಡುತ್ತಿದ್ದ ಮೊಮ್ಮಗನನ್ನು
ಅಪಹರಿಸಿ ಒಯ್ದು ಸಂಸ್ಕೃತ ಪಾಠಶಾಲೆಗೆ ಸೇರಿಸಲು ಪ್ರಯತ್ನಿಸಿದರು. ಆದರೆ ಅಲ್ಲಿನ
-----------------
ಪಂಡಿತರು ಊರುಭಂಗ ನಾಟಕ ನೆನಪಿಸಿಕೊಂಡು ಗಡಗಡ ನಡುಗುತ್ತ ಧೂಮಕೇತುವಿನಂತೆ ಮೂಡಿ ಬಿಡುವ ಅವರ ಮಗ ಅಶ್ವತ್ಥ್
ಬಗೆಗೆ ಹೇಳಿದರು. ಯಾಕಿದ್ದೀತು ಅಂತ ಶಾಸ್ತ್ರಿಗಳು ಮೊಮ್ಮನನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡರು.
ಕಾನ್ವೆಂಟ್ ಸ್ಕೂಲಿನ ಮ್ಲೇಚ್ಛ ಭಾಷೆಯಲ್ಲಿದ್ದ ಪುಸ್ತಕಗಳಿಗೆ ತಾವೇ ಅಗ್ನಿಸ್ಪರ್ಶ ಮಾಡಿದರು. ತಾವೇ
ಸಂಸ್ಕೃತಾಭ್ಯಾಸ ಮಾಡಿಸಲು ನಿಶ್ಚಯಿಸಿದರು.
ಅಗ್ರಹಾರದ ಕೆಲ ಹಿರಿಯರು ಬಂದು ತಾತ ಮೊಮ್ಮಗನ ಸಾಮರಸ್ಯ ಕಂಡು ಸಂತಸ ಪಟ್ಟು ಶುಭ ಹಾರೈಸಿ ಹೋದರು.
ಶಾಸ್ತ್ರಿಗಳೂ ಮೊಮ್ಮಗನ ಆಸರೆ ಆಪ್ಯಾಯಮಾನವಾಗಿತ್ತು. ಪ್ರತಿಯೊಂದು ಕ್ಷಣವನ್ನು ಅವನೊಂದಿಗೇ ಕಳೆಯಲು
ಪ್ರಯತ್ನಿಸುತ್ತಿದ್ದರು. ಅವನ ಎದೆಯ ಮೇಲಿನ ಎಲುಬುಗಳ ದರ್ಶನದಿಂದ ಮಮ್ಮಲನೆ ಮರುಗಿದರು. ಅವುಗಳನ್ನು
ಮುಚ್ಚಲೆಂದೇ ರಾತ್ರಿ ತುಪ್ಪದಲ್ಲಿ ನೆನೆದ ಉತ್ತತ್ತಿಗಳನ್ನು ಮೊಮ್ಮಗನಿಗೆ ತಿನ್ನಿಸತೊಡಗಿದರು. ರುಚಿರುಚಿಯಾದ
ತಿಂಡಿ ತೀರ್ಥ ದೊರಕಿತೆಂದ ಮೇಲೆ ಆ ಬಾಲಚಂದ್ರನು ಕೆಲವೇ ದಿನಗಳಲ್ಲಿ ತಂದೆತಾಯಿಯರನ್ನು ತಾತ್ಕಾಲಿಕವಾಗಿ
ಮರೆತೇಬಿಟ್ಟನು.
ಆದರೆ ಮಿಲಿಟರಿ ರಿಟರ್ನ್ಡ್ ಅಶ್ವತ್ಥ್ ಮಗನನ್ನು ಮರೆಯಬೇಕಲ್ಲ! ಯುದ್ಧ ಘೋಷಿಸಿ ಕರೆದೊಯ್ಯಬೇಕೆಂದು
ದಿನಕ್ಕೊಮ್ಮೆ ಹೊತ್ತಿಲ್ಲದ ಹೊತ್ತಿನಲ್ಲಿ ಅಗ್ರಹಾರಕ್ಕೆ ಬರುತ್ತಿದ್ದನು. ಮನೆ ಬಾಗಿಲಿಗೆ ಬೀಗ ರಾರಾಜಿಸುತ್ತಿತ್ತು.
ಸುಮ್ಮನೆ ಕೂತು ಮನೆಯಲ್ಲಿದ್ದರೆ ಹೊಟ್ಟೆಗಾಗಲೀ; ಜುಟ್ಟಿಗಾಗಲಿ ಸುಮ್ಮನೆ ಬರುತ್ತದೆಯೇ?
ಮೊಮ್ಮಗನ ಕಾಲುಗುಣವೇನೋ? ಶಾಸ್ತ್ರಿಗಳಿಗೆ ದಿನಂಪ್ರತಿ ಕನಿಷ್ಠ ಐದಾದರೂ ಎಂಗೇಜ್ಮೆಂಟ್ಗಳಿರುತ್ತಿದ್ದವು.
ಎಲ್ಲವೂ ಪ್ರತಿಷ್ಥರ, ಶ್ರೀಮಂತರ ಮನೆಯ ಆಫರುಗಳು, ಮಗುವಿನ ನಾಮಕರಣದಿಂದ ಹಿಡಿದು ಶವಸಂಸ್ಕಾರವರೆಗೆ.
ಯಾವುದೇ ಆತಿಥ್ಯವನ್ನು ಮೊಮ್ಮಗನ ಕಾರಣಕ್ಕಾಗಿ ಶಾಸ್ತ್ರಿಗಳು ನಿರಾಕರಿಸುತ್ತಿರಲಿಲ್ಲ. ದಿನಕ್ಕೆ ಮೂರು
ಹೊತ್ತು ಪುಷ್ಕಳವಾದ ಊಟ, ಕೈತುಂಬ ದಕ್ಷಿಣೆ ಜೊತೆಗೆ ಬಟ್ಟೆ ಬರೆ ಅದೂ ಇದೂ... ಹೆಚ್ಚಿಗೆ ಮಿಗಿಲುತ್ತಿದ್ದುದನ್ನು
ತಾವೇ ಗುಟ್ಟಾಗಿ ಒಯ್ದು ಸೊಸೆಗೆ ಕೊಟ್ಟು ಬರುತ್ತಿದ್ದರು. ನಿನ್ನ ಗಂಡನಿಗೆ ಅದು ಇಷ್ಟ ಇದು ಇಷ್ಟ
ಮಾಡಿಡು ಎಂದೂ; ಅವನ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕೆಂದೂ ಪಿಸಿಪಿಸಿ ಹೇಳಿ ಬರುತ್ತಿದ್ದರು. ಈ
ನಶ್ವರದೇಹ ಹೊತ್ತು ತಾವು ದುಡಿಯುವುದಾದರೂ ಯಾರಿಗಾಗಿ... ಮಗ ಸೊಸೆ ಮೊಮ್ಮಗ ಎಲ್ಲರೂ ಸುಖವಾಗಿರಬೇಕು
ತಾನೆ?
ಧರ್ಮಾತ್ಮ ರಾವ್ ಬಹದ್ದೂರ್ ಗೋವಿಂದೇಗೌಡರು ತಮಗೆ ಇಳಿವಯಸ್ಸಿನಲ್ಲಿ ಹುಟ್ಟಿರುವ ಮಗನ ನಾಮಕರಣ ಮಾಡಲು
ಬರಬೇಕೆಂದು ಶಾಸ್ತ್ರಿಗಳಿಗೆ ಆಮಂತ್ರಣ ನೀಡಿದರು. ನಾಮಕರಣದ ಜೊತೆ ಕುಂಡಲಿ ಜಾತಕ ಇತ್ಯಾದಿ. ಜೊತೆ
ಗ್ರಾಮದ ಗಣ್ಯರಿಗೆ ಭಾರಿ ಭೋಜನ, ಶಾಸ್ತ್ರಿಗಳಿಗೂ ಸಂತೋಷವಾಯಿತು. ಕಾರಣ ಮೊಮ್ಮಗನಿಗೆ ವೈದಿಕದ ಎಲ್ಲಾ
ವರಸೆ ತೊರಿಸಿದ್ದರು. ಆದರೆ ಮದುವೆಯಾದ ಮೂವತ್ತು ವರ್ಷಗಳ ನಂತರ ಹುಟ್ಟುವ ಮಗುವಿಗೆ ನಾಮಕರಣ ಮಾಡುವ
ಬಗ್ಗೆ ತೋರಿಸಿರಲಿಲ್ಲ.
ನಿಗದಿತ ವೇಳಿಗೆ ಮುಂಚಿತವಾಗಿ ಅವರು ಮೊಮ್ಮಗನೊಂದಿಗೆ ಹೊರಟರು. ಗೌಡರ ಹೊಸಮನೆ ಊರ ಹೊರಗಡೆ ಇತ್ತು.
ಹತ್ತು ವರ್ಷಗಳಷ್ಟು ಹಳೆಯದಾದ ತೆಂಗಿನ ಮರಗಳು ನೀರಿನ
ಅಭಾವದಿಂದ ಒಣಗಿ ಬೋಳಾಗಿ ಎಲ್ಲಿ ನಿಂತಿದ್ದವೋ, ಅವುಗಳ ನಡುವೆ ಗೌಡರ ಭಾರಿ ಮನೆ ಇತ್ತು.
ಗೌಡರು ಸಾಮಾನ್ಯದವರಲ್ಲ ಗ್ರಾಮದ ಅನೇಕರಿಗೆ ಗೊತ್ತಿರುವಂತೆ ಅವರು ಕೂಲಿ ಮಾಡುತ್ತಿದ್ದರು. ಒಂದು ರೊಟ್ಟಿಯಲ್ಲಿ
ಒನ್ ಬೈಟು ಮಾಡಿ ಹೆಂಡತಿಯೊಂದಿಗೆ ಊಟ ಮಾಡುತ್ತಿದ್ದರು. ಶಾಸ್ತ್ರಿಗಳು ಎಂದೋ ಹೇಳಿದ್ದರಂತೆ "ನೀನು
ಕೋಟ್ಯಾಧಿಪತಿ ಆಗುವಿ" ಎಂದು ತೆಂಗಿನಕಾಯಿ ಮಂತ್ರಿಸಿಕೊಟ್ಟಿದ್ದರಂತೆ ಅದನ್ನು ಮೂರು ಸಾರಿ ಪೂಜಿಸಲು
ಹೇಳಿದ್ದರಂತೆ. ಅವರು ಹೇಳಿದ್ದರಿಂದಲೋ ಏನೋ ಗೌಡರು ಹತ್ತಿಪ್ಪತ್ತು ವರ್ಷಗಳಲ್ಲಿ ಕೋಟ್ಯಾಧೀಶ್ವರ ಆಗಿಯೇ
ಬಿಟ್ಟರು. ಯಾವಯಾವುದೇ ಕಾರಣಕ್ಕೆ ಅವರು ಒಂದೊಂದು ಬಾರಿ ಜೈಲಿಗೆ ಹೋಗಬೇಕಾಗಿ ಬಂತು. ಆಗ ಶಾಸ್ತ್ರಿಗಳು
"ನಮ್ಮ ಆರಾಧ್ಯದೈವವಾದ ಶ್ರೀಕೃಷ್ಣ ಪರಮಾತ್ಮ ಹುಟ್ಟಿದ್ದು ತುರಂಗದಲ್ಲಲ್ಲವೆ? ಅಲ್ಲಿಗೆ ಹೋಗಿ ಬಂದರೆ
ಪರಿಶುದ್ದ ಚಿನ್ನವಾಗುವಿ" ಎಂದು ಹೇಳಿದ್ದಂತೆ ಗೌಡರು ಸವರನ್ನೇ ಸರಿ. ಮನೆ ಮರ್ಯಾದೆನೆಲ್ಲ ಪಣಕ್ಕಿಟ್ಟು
ಲಕ್ಷಗಟ್ಟ್ಲೆ ಸಂಪಾದಿಸಿದ್ದಕ್ಕೆ ಉತ್ತರಾಧಿಕಾರಿ ಇಲ್ಲವೆಂದು ಮರುಗುತ್ತಿದ್ದ ಗೌಡರು ಇತ್ತಿಚಿಗೆ
ಗಂಡುಮಗುವಿಗೆ ತಂದೆಯೇನೋ ಆದರು. ಆದರೆ ಹುಟ್ತಿರುವ ಮಗುವಿಗೆ ಬಾಯಿ ಇಲ್ಲ, ಎಡಗಣ್ಣೂ ಕುರುಡು... ಬಲಗಾಲುಗಿಡ್ಡು...
ಎಂಥದೋ ಒಂದು ಹುಟ್ಟಿತಲ್ಲಾ ಎಂಬುದೇ ಸಂತೋಷ. ಇದಕ್ಕೆಲ್ಲ ಕಾರಣರಾದ ಶಾಸ್ತ್ರಿಗಳನ್ನು ಆಮಂತ್ರಿಸದೇ
ಇದ್ದರೆಯೇ ಗೌಡರು?
"ನೋಡು ಮೊಮ್ಮಗನೇ ಶೂದ್ರರು ಹಣ ಸಂಪಾದಿಸಬಹುದು. ಆದರೆ ಜ್ಞಾನ ಸಂಪಾದಿಕೊಳ್ಳಲಾರರು. ಪ್ರತಿಯೊಂದಕ್ಕೂ
ಪಂಡಿತರಾದ ನಮ್ಮಂಥ ಜ್ಞಾನಿಗಳನ್ನೇ ಅಶ್ರಯಿಸದೆ ಅವರಿಗೆ ಬೇರೆ ದಾರೀನೆ ಇಲ್ಲ" ಎಂದು ಶಾಸ್ತ್ರಿಘಳು
ಶಾಮುಗೆ ದಾರಿಯುದ್ದಕ್ಕೆ ಹೇಳಿದರು.
ಬಾಲಕನಿಗೆ ಅದರ ಮೇಲೆ ಗಮನವಿದ್ದರೆ ತಾನೆ? ಅದರ ಗಮನವೆಲ್ಲ ಗೌಡರು ಉತ್ತಮ ಬ್ರಾಹ್ಮಣ ಬಾಣಸಿಗರಿಂದ
ಮಾಡಿಸಿರಬಹುದಾದ ಬಗೆಬಗೆ ಖಾದ್ಯಗಳ ಕಡೆಗೆ ಇತ್ತು. ಮನೆಯ ಹೊರಗಡೆ ಅಡುಗೆಯ ಪರಿಮಳ ನಿರ್ಮಿಸಿದ್ದ ಪರಿಧಿ
ಪ್ರವೇಶಿಸಿದರು.
ಗೋವಿಂದೇಗೌಡರು ತಾವು ನಿಜಕ್ಕೂ ಧರ್ಮಾತ್ಮರೇ ಎಂಬುದನ್ನು ಸಾಬೀತುಪಡಿಸಿಲಿಕ್ಕಾಗಿಯೋ ಎಂಬಂತೆ ಬರುತ್ತಿದ್ದ
ಶಾಸ್ತ್ರಿಗಳನ್ನು ದಾರಿಯಲ್ಲಿಯೇ ಅಡ್ಡ ತರುಬಿ ಶಿರಸಾಷ್ಟಾಂಗ ಪ್ರಣಾಮ ಸಲ್ಲಿಸಿದರು.
"ಗೌಡರೇ... ಈ ಬಾಲಕ ನಮ್ಗೆ ಮೊಮ್ಮಗರಾಗಬೇಕು. ನಮ್ಮ ತ್ತೀರ್ಥರೂಪರ ಪಡಿಅಚ್ಚು. ಪೂಜ್ಯ ಕಂಚೀ ಜಗದ್ಗುರುಗಳ
ಅಮೃತ ಹಸ್ತದಿಂದ ಇವರ ಅಕ್ಷರಾಭ್ಯಾಸಕ್ಕೆ ಶ್ರೀಕಾರ ಹಾಕಿದ್ದಾರೆ" ಶಾಸ್ತ್ರಿಗಳು ಶಾಮು ಡಾರ್ಲಿಂಗನನ್ನು
ಗೌಡರಿಗೆ ಪರಿಚಯಿಸಿದರು. ತಮ್ಮ ಮೊಮ್ಮಗನಿಗೂ ಪಾಪದ ಮೊಟ್ಟೆ ಗೌಡ ಸಾಷ್ಟಾಂಗ ಹಾಕಲೆಂಬ ಉದ್ದೇಶದಿಂದಲೇ
ಶಾಸ್ತ್ರಿಗಳು ಹಾಗೆ ನುಡಿದದ್ದು. ಆದರೆ ಗೌಡರು "ಓಹೋ... ಓಹೋ" ಎಂದು ತಲೆ ಅಲ್ಲಾಡಿಸಿ ಬಿಡುವುದೇ?
ಶುದ್ದ ಶುದ್ರ ಮುಂಡೆಗಂಡ.. ಸ್ವಲ್ಪವೂ ಸಂಸ್ಕಾರವಿಲ್ಲ.
ನಾಮಕರಣ ಮಹೋತ್ಸವಕ್ಕೆ ಆ ಭಾಗದ ಎಮ್ಮೆಲ್ಲೇ ಮೊದಲಾದ ಗಣ್ಯರು ಬಂದಿದ್ದರು. ಶಾಸ್ತ್ರಿಗಳ ಮಂತ್ರೊಚ್ಚಾರಣೆ
ಎಂದಿಗಿಂತ ಸ್ಪುಟವೂ ಸ್ಪಷ್ಟವೂ ಆಗಿತ್ತು. ಅವರ ಆ ಶಾರೀರವನ್ನು ಎಲ್ಲರೂ ಮುಕ್ತ ಕಂಠದಿಂದ ಹೋಗಳಿದರು.
ತಮ್ಮ ಮನೆಯಲ್ಲಿ ನಡೆಯುವ ವೈದಿಕ ಕಾರ್ಯಕ್ರಮಗಳಿಗೆ ಆಹ್ವಾನಿಸುವುದಾಗಿ ಶಾಸ್ತ್ರಿಗಳಿಗೆ ಪ್ರತಿಷ್ಥಿತರು
ಭರವಸೆ ನೀಡಿದರು.
ಆ ಆನಂದದ ಸಾಗರದಲ್ಲಿ ಓಲಾಡುತ್ತಿದ್ದ ಶಾಸ್ತ್ರಿಗಳಿಗೆ ತಮ್ಮ ಬಿದಿಗೆ ಚಂದ್ರಮನಂಥ ಮೊಮ್ಮಗನನ್ನು ಗಣ್ಯರಿಗೆ
ಪರಿಚಯಿಸಬೇಕೆಂಬ ಆಸೆಯಾಯಿತು. ನೊಡಿಕೊಳ್ಳುತ್ತಾರೆ ಪಕ್ಕದಲ್ಲಿರಬೇಕಾದ್ದ ಮೊಮ್ಮಗ ’ಲಾ ಪತಾ’.
" ಓ ಶಾಮಾ ಶಾಸ್ತ್ರಿಗಳೇ " ಎಂದು ಗಂಭೀರ ಧ್ವನಿ ತೆಗೆದರು.
"ಗ್ರಾಂಡ್ ಪಾ ಐ ಯಾಮ್ ಇಯರ್" ಎಂಬ ಧ್ವನಿ ಕೇಳಿ ಬಂತು.
ತಿರುಗಿ ನೋಡಿದರು. ಮುಖದ ತುಂಬ ರಕ್ತ ನಿಂತಿತು.
ಅವರು ಏನು ನಡೆಯಬಾರದೆಂದು ಎಚ್ಚರವಹಿಸಿದ್ದರೋ? ಅದೇ ನಡೆದು ಹೋಗಿತ್ತು. ಅಶ್ವತ್ಥ್ ಮಗನನ್ನು ಎತ್ತಿಕೊಂಡಿದ್ದ.
ತಾನೇ ಅದರ ಬಾಯಿಂದ ಇಂಗ್ಲಿಷ್ ನುಡಿಸಿದ್ದ.
ಅಶ್ವತ್ಥ್ ಇಲ್ಲಿರುವುದೆಂದರೇನು? ಶಾಸ್ತ್ರಿಗಳಿಗೆ ಆಶ್ಚರ್ಯ.
ಗೋವಿಂದೇಗೌಡರ ಸ್ಪಿನ್ನಿಂಗ್ ಮಿಲ್ಲಿನಲ್ಲಿ ಆತ ಅಸಿಸ್ಟೆಂಟ್ ಮೇನೇಜರಾಗಿ ಕೆಲಸ ಮಾಡುತ್ತಿದ್ದ. ಶಾಸ್ತ್ರಿಗಳ
ಮೇಲಿನ ಗೌರವಕ್ಕೆ ಕಡಿಮೆ ಸಂಬಳದ ಅಸಿಸ್ಟೆಂಟ್ ಮೇನೇಜರು ಹುದ್ದೆಯನ್ನು ಧರ್ಮಾತ್ಮರು ದಯಪಾಲಿಸಿದ್ದರು.
ಅವರಿಬ್ಬರ ಜಗಳ ಲೋಕವಿಖ್ಯಾತ.
ಇವರಿಗೆ ಅವರೇ ಮಗ ನೋಡು.
ಅವರಿಗೆ ಇವರೇ ತಂದೆ ನೋಡು.
ಅವರಿಬ್ಬರ ಜಗಳದ ಕೇಂದ್ರ ಇದೇ ಹುಡುಗ ನೋಡು...
ಗಣ್ಯರು ತಲಾ ಒಂದೊಂದು ಗೊಣಗಿಕೊಂಡರು.
ಎಲ್ಲರೂ ನೋಡುನೋಡುತ್ತಿರಲು ಬಾಲಕ ಶಾಮು ಕುರಿತು ತಂದೆ ಮಗಗೂ ಕೋಳಿ ಜಗಳ ಆರಂಭವಾಯಿತು. ಅವರಿಬ್ಬರ
ಜಗಳ ನಾಮಕರಣಕ್ಕೆ ಬಂದವರಿಗೆ ವಿಶೇಷ ಮನರಂಜನೆ ಒದಗಿಸಿತು.
ಸಂಸ್ಕೃತ ಗಿ/s ಇಂಗ್ಲಿಷೂ
ಇಂಗ್ಲಿಷ್ ಗಿ/s ಸಂಸ್ಕೃತವೂ
ಐದನೇ ಶತಮಾನ ಗಿ/s ಇಪ್ಪತ್ತನೇ ಶತಮಾನವೂ... ಹೀಗೆ...
ಹೇಗೋ ಗಣ್ಯರು ಬಂದಿದ್ದರಲ್ಲವೆ? ಅವರ ಮಾತು ಕೇಳುವುದು ಉಭಯರಿಗೂ ಕ್ಷೇಮವೇ. ಕೇಳದಿದ್ದರೆ ಉಭಯರೀರ್ವರ
ಉಂಬಳಕ್ಕೆ ಖೋತಾ ಆಗುವ ಲಕ್ಷಣ ಗೋಚರಿಸಿತು.
ಗಣ್ಯರು ಹೇಳಿದ ರಾಜಿ ಸೂತ್ರದ ಪ್ರಕಾರ
ಬಾಲಕ ಶಾಮಾಶಾಸ್ತ್ರಿಗಳು ಸಂಸ್ಕೃತ ಇಂಗ್ಲಿಷು ಎರಡೂ ಕಲಿಯುವುದು?
ಬಾಲಕ ಶಾಮಾಶಾಸ್ತ್ರಿ ಕ್ರಾಪೂ ಜುಟ್ಟು ಎರಡೂ ಬಿಡುವುದು.
ಬಾಲಕ ಶಾಮಾಶಾಸ್ತ್ರಿ ವಾರದಲ್ಲಿ ಮೊದಲ ಮೂರುವರೆ ದಿನ ತಂದೆ ಮನೆಯಲ್ಲಿರುವುದು ಕೊನೆಯ ಮೂರುವರೆ ದಿನ
ತಾತನ ಮನೆಯಲ್ಲಿರುವುದು.
ಬಾಲಕ ಶಾಮಾಶಾಸ್ತ್ರಿ ಶೂದ್ರರೋಣಿಗೂ ಅಗ್ರಹಾರಕ್ಕೂ ನಡುವೆ ಸೇತುವೆಯಾಗುವುದು.
ಅವರಿಬ್ಬರೂ ಒಪ್ಪಿಕೊಂಡರು. ಬೇರೆ ದಾರಿ ಇರಲ್ಲಿಲ್ಲ. ಅವು ವಾರದ ಮೊದಲ ದಿನಗಳಾದ್ದರಿಂದ ಅಶ್ವತ್ಥ
ತನ್ನ ಮಗನನ್ನು ಎತ್ತಿಕೊಂಡು ಹೋದನು.
ಬುಧವಾರ ಮಧ್ಯಾಹ್ನ ಶಾಸ್ತ್ರಿಗಳು ತಮ್ಮ ಮೊಮ್ಮಗನನ್ನು ತಮ್ಮ ಜೊತೆ ಕಳುಹಿಸಿ ಕೊಡುವಂತೆ ಹಾಜರಿದ್ದು
ಬಿಡುತ್ತಿದ್ದರು.
ಹೀಗೆ ಆ ಬಾಲಕನು ಉಭಯಚರವಾಗಿ ಬೆಳೆಯತೊಡಗಿತು. ಜುಟ್ಟು ಮತ್ತು ಕ್ರಾಪಿನ ವಿಷಯ ಉಭಯ ಬಣಗಳಲ್ಲಿ ಭಿನ್ನಾಭಿಪ್ರಯಗಳು
ತಲೆದೋರದೆ ಇರಲ್ಲಿಲ್ಲ. ಒಂದು ವಾರದೊಳಗೆ ಜುಟ್ಟು ಮತ್ತು ಕ್ರಾಪು ಅವೆರಡು ತಮ್ಮ ಗಾತ್ರ ಕಳೆದುಕೊಂಡುಬುಬಿಡುತ್ತಿದ್ದವು.
ಬಾಲಕನಿಗೆ ತುಂಬ ಫಜೀತಿಯಾಗತೊಡಗಿತು.
ಹೀಗೆ ದಿನಗಳು ಓಡುತ್ತಿರಲಾಗಿ...
ಪಿ.ಡಿ. ಪ್ರಸಾದ್ ಅಶ್ವತ್ಥ್ನನ್ನು ಮನೆಗೆ ಕರೆತಿಸುಕೊಂಡು ಆಹಾರ ಪಾನೀಯ ನೀಡಿ ಪ್ರೀತಿ ಪ್ರಕಟಿಸಿದ.
ಉಭಯ ಕುಶಲೋಪರಿ ಕುರಿತಂತೆ ವಿಚಾರ ವಿನಿಮಯವಾಯಿತು.
"ಅಶ್ವತ್ಥ್ ನಾರಾಯಣರವರೇ... ಈಗಿರೋ ಮನೆ ಮಾರಬೇಕೂಂತ ಮಾಡೀವಿ... ನಿಮ್ಗೇನಾದ್ರೂ ತಗೊಳ್ಳೋ ಇಚ್ಛೆ
ಐತೆ ಏನು?" ಪಿ.ಡಿ. ಪ್ರಸಾದ್ ಪ್ರಸ್ತಾಪಿಸಿದ.
ಮನೆ ಇಲ್ಲದವರಿಗೆಲ್ಲಿಯದು ಮಾನ!
ಅಶ್ವತ್ಥ್ ಇರೋ ವಿಷಯ ಹೆಂಡತಿ ಅಲುಮೇಲು ಬಳಿ ಪ್ರಸ್ತಾಪಿಸಿದ. ತಮ್ಮದೆನ್ನೋ ಮನೆಗೆ ಒಡೆಯರಾಗಬೇಕೆಂಬುದರ
ಆಕೆಗೆ ಭಿನ್ನಾಭಿಪ್ರಾಯವಿರಲ್ಲಿಲ್ಲ. ಆದರೆ ಬ್ರಾಹ್ಮಣರಾದ ತಾವು ಶೂದ್ರಾದಿ ಶೂದ್ರರ ಕೇರಿಯೊಳಗೆ ವಾಸಿಸುವುದು
ಎಷ್ಟು ಸಾಧು! ಇದಕ್ಕೆ ಪುಜ್ಯರಾದ ಮಾವನವರು ಒಪ್ಪುವರೇ? ಎಂಬ ಸಮಸ್ಯೆಗಳ ಬಗ್ಗೆ ಅಲುಮೆಲು ಮಾತ್ರ ತಲೆ
ಕೆದೆಸಿಕೊಂಡಳು.
ಒಂದು ದಿನ ಅಶ್ವತ್ಥ್ ಹೆಂಡತಿಯನ್ನು ತಾಲ್ಲೂಕು ಕೇಂದ್ರವಾದ ಕೂಡ್ಲಿಗೆ ಕರೆದುಕೊಂಡು ಹೋದ. ಅಲ್ಲಿ
ಪಿ.ಡಿ. ಪ್ರಸಾದ್ ಮುಂತಾದವರಿದ್ದರು. ಅವರು ಹೇಳಿದ ಕಡೆ ಸಂಸ್ಕೃತದಲ್ಲಿ ಸಹಿ ಮಾಡಿದಳು. ಗಂಡನ ಸಹಾಯದಿಂದ
ಹೆಬ್ಬೆಟ್ಟು ಒತ್ತುವ ಕಡೆ ಒತ್ತಿದಳು.
ಆಕೆಗೆ ಗೊತ್ತದದ್ದು ಊರಿಗೆ ಮರಳಿದ ಮೇಲೆ!
"ನೀವೆಂಥ ಕೆಲಸ ಮಾಡಿ ಬಿಟ್ಟಿರಲ್ಲ... ಹೋಗಿ ಹೋಗಿ ಮನೆಯನ್ನು ನನ್ನ ಹೆಸರಿಗೆ ಮಾಡಿಸುವುದೇನು?" ಗಂಡನ
ಎದೆಯಲ್ಲಿ ಮುಖ ಹುದುಗಿಸಿ ಅತ್ತಳು.
ವಾರದ ಎರಡನೆಯ ಪಾಳೆಯಕ್ಕೆ ಬಂದ ಮೊಮ್ಮಗನಿಂದ ಈ ವಿಷಯ ಶಾಸ್ತ್ರಿಗಳು ತಿಳಿದು ಮುಖವನ್ನು ಯಜ್ಞಕುಂಡ
ಮಾಡಿಕೊಂಡರು.
"ಅಗ್ರಹಾರದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಒಳ್ಳೆಯ ಮನೆ ಸಿಗುತ್ತಿತ್ತಲ್ಲ. ಅಂತೂ ಶೂದ್ರರನಡುವೆ
ಶಾಶ್ವತವಾಗಿ ಬದುಕಲು ನಿಶ್ಚಯಿಸಿದಿ ಎಂದಂತಾಯಿತು" ಎಂದು ಮಗನ ಮನೆ ಮುಂದೆಯೂ;
"ಎಲವೋ ದುರುಗಪ್ಪನೆಂಬ ಮಾನವನೇ... ನಮ್ಮ ಮಗನಿಗೆ ಆ ಮನೆ ಮಾರಿರೋ ನಿನಗೆ ರೌರವ ನರಕ ಕಾದಿದೆ ನೆನಪಿಟ್ಟುಕೋ"
ಎಂದು ಪಿ.ಡಿ. ಪ್ರಸಾದನ ಮನೆ ಮುಂದೆಯೂ ಆರ್ಭಟಿಸಿದರು.
ಅಗ್ರಹಾರದ ತಮ್ಮ ಮನೆಗೆ ಬಂದವರೆ ಹೊಸಮನೆ ತಮ್ಮ ಮಗನಿಗೂ ಅವನ ಕುಟುಂಬದ ಸರ್ವರಿಗೂ ಸರ್ವ ಮಂಗಳ ಉಂಟಾಗಲಿ
ಎಂಬ ಉದ್ದೇಶದಿಂದ ಒಂದು ಹೋಮ ಮಾಡಿದರು.
ಹೀಗೆಯೇ ದಿನಗಳು ಓಡುತ್ತಿರಲಾಗಿ...
ಅಶ್ವತ್ಥ್ನ ಕಾಲು ಮುರಿದ ಭಾಗದಲ್ಲಿ ಯಮ ಯತನೆ ಕಾಣಿಸಿಕೊಂಡಿತು. ಅದು ಕ್ರಮೇಣ ಯಾವುದೇ ಇಲಾಜಿಗೆ
ಬಗ್ಗದೆ ಇಡೀ ದೇಹಕ್ಕೆ ವ್ಯಾಪಿಸಿತು.
ಈ ಡಾಕ್ಟರಿಂದ ಆ ಡಾಕ್ಟರ ಕಡೆ ಅಲೆದಾಡಿದ. ಹತ್ತಾರು ಡಾಕ್ಟರುಗಳು ಬರೆದುಕೊಟ್ಟ ಮಾತ್ರೆ ನುಂಗಿದ್ದಾಯಿತು.
ಔಷದ ಕುಡಿದಿದ್ದಾಯಿತು. ಹತ್ತಾರು ವಿವಿಧ ಸೂಜಿಗಳನ್ನು ಮಾಡಿಸಿಕೊಂಡಿದ್ದಾಯಿತು.
ಆಶ್ವತ್ಥ ಹಾಸಿಗೆಯಲ್ಲಿ ನೋವಿನಿಂದ ಹೊರಳಾಡತೊಡಗಿದ. ಅಲುಮೇಲು ಅನ್ನನೀರು ಬಿಟ್ಟು ಗಂಡನ ಶುಶ್ರೂಷೆಗೆಗೆ
ತೊಡಗಿದಳು. ’ದೇವರೇ ಗಂಡನ ನೋವನ್ನು ನನಗೆ ವರ್ಗಾಯಿಸು’ ಎಂದು ಬೇಡಿಕೊಂಡಳು ಸ್ವಲ್ಪವೂ ಬೇಸರ ಮಾಡಿಕೊಳ್ಳದೆ
ಗಂಡನ ಮಲಮೂತ್ರ ಬಳಿದು ಹೊರಚಲ್ಲತೊಡಗಿದಳು. ಆಕೆಗೆ ಓಣಿಯ ಜನರೂ ಸಹಕರಿಸತೊಡಗಿದರು. ಅವರ ನೋವು ತಮ್ಮ
ನೋವು ಎಂದು ಭಾವಿಸಿದರು.
"ಅಮ್ಮಾ ತಾಯಿ... ಯಜಮ್ನ್ರೀಗೆ ಯ್ಯೋಳಿ ಕಳಿಸ್ರಿ... ಇಂಥ ವತ್ತಿನಾಗ ಯಜಮಾನ್ರಾದೋರು ಮನ್ಯಾಗಿರಬೇಕು"
ಎಂದು ಕೇರಿಯ ಯಜಮಾನ ಚವುಡಪ್ಪ ಪರಿಪರಿಯಾಗಿ ಕೇಳಿಕೊಂಡ.
"ಬೇಡ ಕಣೇ ಅವರ್ನ ಕರೆಸೋದು ಬೇಡ ಅವರು ಮನಸ್ಸಿಗೆ ತುಂಬ ನೋವು ಮಾಡಿಕೊಳ್ತಾರೆ.." ಎಂದು ಹೆಂಡತಿಯ
ಬೇಡಿಕೆಯನ್ನು ರುಗ್ಣಶಯ್ಯೆಯಲ್ಲಿದ್ದ ಅಶ್ವತ್ಥ್ ನಿರಾಕರಿಸಿದ.
ಅದೇ ಹೊತ್ತಿಗೆ ಹೊರಗಡೆ ಗಲಾಟೆಯಾಯಿತು.
ಶಾಸ್ತ್ರಿಗಳು ಹೌಹಾರಿ ಬಂದುಬಿಟ್ಟಿದ್ದರು.
"ಅಶ್ವತ್ಥಾ... ನಮ್ಮ ಮಗ ಅಶ್ವತ್ಥ್ ನಾರಾಯಣನೇ... ನಾನು ನಿನ್ನ ಪಾಲಿಗೆ ಇಲ್ಲಾಂತ ತಿಳ್ಕೊಂಡಿ ಎನೋ?"
ಎಂದು ಒಳಗಡೆ ಬಂದರು.
ಮೂಳೆ ತೇಲಿರುವ ಮಗನನ್ನು ಉತ್ಕಂಠಯಿಂದ ತಬ್ಬಿಕೊಂಡರು.
ಅವರು ಆ ಕ್ಷಣದಿಂದ ಅವರು ಅಲ್ಲಿಯೇ ಉಳಿದುಬಿಟ್ಟರು.
ಡಾಕ್ಟರ್ ರೋಗಿಯನ್ನು ಬೆಂಗಳೂರಿನ ದೊಡ್ಡ ಆಸ್ಪತ್ರೆಗೆ ಕೂಡಲೆ ಕರೆದೊಯ್ಯುವಂತೆ ಖಡಾಖಂಡಿತವಾಗಿ ಸೂಚಿಸಿದರು.
ತಮ್ಮ ಮಗನನ್ನು ಉಳಿಸಿಕೊಳ್ಳುವುದು ತಂದೆಯಾದ ತಮ್ಮ ಕರ್ತವ್ಯವೆಂದು ಬಗೆದರು. ಅಂದು ರಾತ್ರಿಯೇ ಅಗ್ರಹಾರದ
ತಮ್ಮ ಪಿತ್ರಾರ್ಜಿತ ಮನೆಯನ್ನು ಕೊಳ್ಳುವಂತೆ ಅಷ್ಟಾವಧಾನಿ ಶ್ರೀನಿವಾಸ ರಾಮಾನುಜರನ್ನು ಕೇಳಿಕೊಂಡರು.
ಕಾರಣ ಅವರ ಮಗ ಸರ್ಕಾರದ ದೊಡ್ಡ ಹುದ್ದೆಯಲ್ಲಿದ್ದ. ಸಾಕಷ್ಟು ಸಂಪಾದಿಸಿದ್ದ. ಇಂಥದೊಂದು ಮನೆಯನ್ನು
ತಮ್ಮದಾಗಿಸಿಕೊಳ್ಳಲು ಅಷ್ಟಾವಧಾನಿಗಳು ಅನೇಕ ರೀತಿ ತಂತ್ರಗಳನ್ನು ಪ್ರಯೋಗ ಮಾಡಿ ವಿಫಲರಾಗಿದ್ದರು.
ತಮ್ಮಷ್ಟೇ ವಯಸ್ಸಿನವರಾದ ಪಂಡಿತ ಪರಮೇಶ್ವರ ಶಾಸ್ತ್ರಿಗಳು ಮಾಡಿಕೊಂಡ ಮನವಿಯನ್ನು ಸಹಾನುಭೂತಿಯಿಂದ
ಕೇಳಿದರು. ಅಶ್ವತ್ಥ್ನ ಆರೋಗ್ಯ ಪರಿಸ್ಥಿತಿಯ ಬಗ್ಗೆ ಅವರೂ ಕಳವಳಗೊಂಡರು.
"ಮನೆ ವಿಷಯ ನಂತರ ಯೋಚಿಸೋಣ.. ಈಗ ಹಣ ಎಷ್ಟು ಬೇಕಾಗಿದೆ ಹೇಳಿ" ಸೊಂಟದಿಂದ ಬೀಗದ ಕೀ ಗೊಂಚಲು ತೆಗೆಯುತ್ತ
ಕೇಳಿದರು.
ಶಾಸ್ತ್ರಿಗಳು ಎಷ್ಟು ಒತ್ತಾಯಿಸಿದರೂ ಅವರು ಮನೆ ಬರೆಸಿಕೊಳ್ಳಲಿಲ್ಲ. ಹಣಕ್ಕೆ ಸಂಬಂಧಿಸಿದಂತೆ ರಸೀತಿಯನ್ನೂ
ಪಡೆಯಲಿಲ್ಲ. ನೋಟಿನ ಎರಡು ಕಂತೆಗಳನ್ನು ನೀಡಿದರು.
"ಅಶ್ವತ್ಥ್ ಕೇವಲ ನಿಮ್ಮೊಬ್ಬರ ಮಗ ಅಲ್ಲ... ಅವನು ನಮ್ಮೆಲ್ಲರ ಹುಡುಗ ಅವನು ಪೂರ್ಣ ಗುಣಮುಖನಾಗೋದು
ನಮಗೆಲ್ಲ ಮುಖ್ಯ... ಹಣ ಮುಖ್ಯವಲ್ಲ... ಸಂಕೋಚ ಪಡದೆ ನಮ್ಮಿಂದ ಎಷ್ಟು ಹಣ ಬೇಕಾದರೂ ತಾವು ಒಯ್ಯಬಹುದು
ಶಾಸ್ತ್ರಿಗಳೇ?" ಎಂದು ಅವರ ಎರಡೂ ಕೈಗಳನ್ನು ಹಿಡಿದು ಕೇಳಿಕೊಂಡರು.
ಸನಾತನತೆಯ ವಿಷಯದಲ್ಲಿ ಶಾಸ್ತ್ರಿಗಳು ಸಡಿಲಗೊಂಡಿರಿವುದರಿಂದ ಅಗ್ರಹಾರದ ಬಹುತೇಕ ಸದಸ್ಯರು ಸಂತಸಗೊಂಡರು.
ಅಶ್ವತ್ಥನನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗುವಂತಿರಲಿಲ್ಲ. ಅದೇ ಹೊತ್ತಿಗೆ ಗೋವಿಂದೇಗೌಡರು ಅಶ್ವತ್ಥ್ನನ್ನು
ನೋಡಿಕೊಂದು ಹೋಗಲೆಂದು ಕಾರಿನಲ್ಲಿ ಬಂದರು. ತಮ್ಮಿಂದೇನಾಗಬೇಕು ಹೇಳಿ ಎಂದು ಕೇಳಿಕೊಂಡರು. ಹಣದ ಹೊಂದಾಣಿಕೆ
ಮಾಡಿಕೊಂಡಿರುವುದು ತಿಳಿದು ಬೇಸರ ವ್ಯಕ್ತಪಡಿಸಿದರು.
"ಅಶ್ವತ್ಥನನ್ನು ಕಾರಿನಲ್ಲಿ ಕರೆದೊಯ್ಯಿರಿ" ಎಂದು ಹೇಳಿ ತಮ್ಮ ಅಂಬಾಸಿಡರ್ ಕಾರನ್ನು ಬಿಟ್ಟು ಹೋದರು.
ಆ ಕಾರಿನಲ್ಲಿ ಹೊರಟರು. ಬೆಂಗಳೂರು ತಲುಪಿದಾಗ ಬೆಳಗಾಗಿತ್ತು. ದೊಡ್ಡಾಸ್ಪತ್ರೆಗೆ ದಾಖಲು ಮಾಡಲಾಯಿತು.
ದೊಡ್ಡ ಡಾಕ್ಟರ್ ಪ್ರಭಾಕರ್ ಅಶ್ವತ್ಥ್ನನ್ನು ಹುಡುಕಿಕೊಂಡು ಬಂದರು. ಆ ಒಳಗಾಗಿ ಅಷ್ಠಾವಧಾನಿಗಳು
ತಮ್ಮ ಮಗ ವೇದವ್ಯಾಸನಿಗೆ ಈ ವಿಷಯ ತಿಳಿಸಿದ್ದರು. ಕೂಡಲೆ ವೇದವ್ಯಾಸ ತನ್ನ ಮಿತ್ರ ಪ್ರಭಾಕರನ್ನು ಸಂಪರ್ಕಿಸಿದ್ದ.
ಅಶ್ವತ್ಥನನ್ನು ಆಸ್ಪತ್ರೆಯ ಸ್ಪೆಷಲ್ ವಾರ್ಡ್ಗೆ ಸೇರಿಸಿಕೊಳ್ಳಲಾಯಿತು. ಪರಿಣಿತ ವೈದ್ಯರೆಲ್ಲ ರೊಗಿಯ
ತಪಾಸಣೆ ಮಾಡಿದರು. ನಂಜು ದೇಹದಾದ್ಯಂತ ವ್ಯಾಪಿಸಿರುವುದನ್ನು ತಿಳಿದು ಖೇದಗೊಂಡರು. ಕೂಡಲೆ ಆಸ್ಪತ್ರೆಗೆ
ಸೇರಿಸಿದ್ದಲ್ಲಿ ಇಷ್ಟೊಂದು ವಿಷಮಾವಸ್ಥೆ ತಲುಪುತ್ತಿರಲಿಲ್ಲವೆಂದರು. ಆಶ್ವತ್ಥ್ ಬದುಕುವ ಭರವಸೆ ನೀಡಲಿಲ್ಲ.
ಶಾಸ್ತ್ರಿಗಳನ್ನು, ಅಲುಮೇಲಮ್ಮನನ್ನು ವೈದ್ಯರು ಪರಿಪರಿಯಾಗಿ ಸಂತೈಸಿದರು. ಅವರು ಯಾವುದೇ ಶುಲ್ಕ ಪಡೆಯಲಿಲ್ಲ.
ವೇದವ್ಯಾಸನ ಕಡೆಯವರೆಂದರೆ ಮುಗಿಯಿತು. ’ದೇವರ ಮೇಲೆ ಭಾರ ಹಾಕಿ ಬಿಡಿ’ ಎಂದು ಹೇಳಿ ಕಳುಹಿಸಿದರು.
ಊರಿಗೆ ಮರಳುವಾಗ ಅಶ್ವಥ್ ಕಾರು ನಿಲ್ಲುವಂತೆ ಸಂಜ್ಞೆ ಮಾಡಿದ. ಹೆಂಡತಿಯ ತೊಡೆ ಮೇಲೆ ತಲೆ ಇಟ್ಟ. ತಂದೆಯನ್ನು
ದೂರ ಹೋಗಲು ಹೇಳಿದ. ಅವರು ಅಲ್ಲಿ ಬಿಕ್ಕುತ್ತ ನಿಂತರು.
ಅಶ್ವತ್ಥ್ ಹೆಂಡತಿಯ ತೊಡೆ ಮೇಲೆ ತಲೆ ಇಟ್ಟ, ಇನ್ನೆರಡು ಬೊಗಸೆಯಲ್ಲಿ ಆಕೆಯ ಮುಖ ಹಿಡಿದುಕೊಂಡ. ದಿಟ್ಟಿಸಿದ.
ಆಳಕ್ಕಿಳಿದಿದ್ದ ಆಕೆಯ ಕಣ್ಣುಗಳಿಂದ ಬುಳುಬುಳನೆ ಹನಿ ಉದುರಿತು. ಅವನ ಮುಖ ತೊಯ್ದಿತು. ಮುದ್ದು ಕೊಡಲು
ಹೇಳಿದ, ಕೊಟ್ಟಳು, ತಾನೂ ಕೊಟ್ಟ.
"ಅಲೂ... ನಂದೊಂದು ಮಾತು ನಡೆಸಿಕೊಡ್ತೀಯಾ? ಆಕೆಯ ತಲೆ ನೇವರಿಸಿದ.
"ಅದೇನು ಕೇಳಿ ಮೊದ್ಲು"
"ನನಗಿನ್ನೂ ಮೂವತ್ತು ದಾಟಿಲ್ಲ..."
"ಏನೀಗ?"
"ನಾನು ಸಾಯೋದಂತು ಖಚಿತ. ನೀನು ಬ್ರಹ್ಮಣ ವಿಧವೆ ಥರ ಬದುಕಬೇಕು. ನಿನ್ನ ತುಂಬ ಪ್ರೀತಿಸೋರನ್ನಾರನ್ನಾರನ್ನಾದ್ರು
..." ಮುಂದಿನ ಮಾತು ಹೊರಬರದಂತೆ ಗಂಡನ ಬಾಯಿ ಮುಚ್ಚಿದಳು.
"ನೀವು ಹೀಗೆ ಮಾತಾಡೋದಾ?... ನಿಮ್ಮ ಮುಂದೆ ಕಣ್ಣು ಮುಚ್ಚೋ ಆಸೆ ನನ್ನದು. ಜ್ವರದ ತಾಪದಲ್ಲಿ ತೋಚಿದಂತೆ
ಮತಾಡಬೇಡಿ ...ಮಾತಾಡಿದ್ರೆ ನನ್ನಾಣೆ!" ಗಟ್ಟಿಯಾಗಿ ಗಂಡನನ್ನು ತಬ್ಬಿಕೊಂಡಳು.
ಕಕ್ಕಸ್ಸಿಗೆ ಹೋಗಿದ್ದ ಚಾಲಕ ಬಂದ. ಹೆಜ್ಜೆಗೊಂದು ನಿಟ್ಟುಸಿರು ಇಡುತ್ತ ಶಾಸ್ತ್ರಿಗಳು ಬಂದರು.
"’ದೇವರೇ’ ತಂದೆಯಾದ ನನ್ನ ಕಣ್ಣ ಮುಂದೆ ನನ್ನ ಮಗ ಸಾವಿನೊಂದಿಗೆ ಹೋರಾಡುತ್ತಿರುವುದನ್ನು ಹೇಗೆ ನೋಡಲಿ...
ನಿನ್ನ ಸೇವೆ ಮಾಡಿದ ನಮಗೇ ಇಂಥ ಶಿಕ್ಷೆ ನೀಡಿದ್ದೀಯ... ಸಾವು ಕೊಡೋದಿದ್ದ್ರೆ ಮೊದಲು ಈ ವೃದ್ಧನಿಗೆ
ಕೊಡು" ಕಣ್ಣು ಮುಚ್ಚಿದ ಅವರ ಮನಸ್ಸು ಒಂದೇಸಮನೆ ಚೀರುತ್ತಿತ್ತು.
ಊರು ಮುಟ್ಟಿದ ದಿನವೆಲ್ಲ ಅಶ್ವತ್ಥ್ ತುಂಬ ಲವಲವಿಕೆಯಿಂದ ಇದ್ದ. ಮಗನೊಂದಿಗೆ ಏನೆಲ್ಲ ಮಾತಾಡಿದ. ಹೆಂಡತಿಯ
ಮುಡಿಯನ್ನು ಪ್ರೀತಿಯಿಂದ ಸವರಿದ. "ಅಪ್ಪಾಜಿ... ನಿನ್ ಜೊತೆ ಮಾತಾಡುವುದಿದೆ" ಎಂದ. ಶಾಸ್ತ್ರಿಗಳು
ಹತ್ತಿರ ಕೂತುಕೊಂಡರು. "ಹೀಗೆಲ್ಲ ಮಾತಾಡಿ ಹೊಟ್ಟೆ ಉರಿಸಬೇಡವೋ" ಅಂದರು.
"ಚತುರ್ವೇದಗಳನ್ನು ಅರಗಿಸಿಕೊಂಡಿರೋರ ಹೊಟ್ಟೆ ಉರಿಯೋದೆಂದ್ರೇನು? ನಗಾಡಿದ.
"ಅಪ್ಪಾಜಿ.. ಶಾಮುನ ಬಗ್ಗೆ ನಾವಿಬ್ರು ಎಷ್ಟು ಜಗಳಾಡಿದ್ವಿ ಅಲ್ವಾ?"
"ಹೌದಪ್ಪಾ"
"ಅವನು ಮಾಮೂಲು ಜನರಂತೆ ಬದುಕಬೇಕು. ಅವನು ಸರ್ಕಾರಿ ನೌಕರನಾಗಬೇಕು. ಪ್ರಾಮಾಣಿಕರೆಯಿಂದ, ದಕ್ಷತೆಯಿಂದ
ದುಡಿಬೇಕು"
"ಹಾಗೇ ಆಗಲೋ!"
"ಅಪ್ಪಾಜಿ... ನಂಗೆ ಅಂಟಿ ಕೂತ್ಕೊಳ್ಳಿ" ಎಂದ. ತಾನೇ ತಂದೆಯ ತೊಡೆಮೇಲೆ ತಲೆ ಇಟ್ಟು ಮಲಗಿದ.
"ನೀನೊಂದು ಮಾತು ಹೇಳಿದ್ದಿ. ನೆನಪಿದೆಯಾ?
"ಇಲ್ಲ ಕಣಪ್ಪಾ!"
"ನೀವು ಸತ್ರೆ ನಿಮ್ ಕಳೇಬರಕ್ಕೆ ಅಗ್ನಿ ಸಂಸ್ಕಾರ ಮಾಡೋದು ಶಾಮನೆ! ಅಲ್ವೆ!" ಅಶ್ವತ್ಥ್ಗೆ ನಗು ಬಂತು.
ಜೋರಾಗಿ ನಗತೊಡಗಿದ.
ಶಾಸ್ತ್ರಿಗಳ ಕಣ್ಣಲ್ಲಿ ನೀರು ತುಂಬಿಕೊಂಡರು. ಅಡುಗೆ ಮನೆಯಿಂದ ಮಗನೊಂದಿಗೆ ಅಲುಮೇಲು ಓಡಿಬಂದಳು.
ತನ್ನ ಗಂಡ ಎಷ್ಟೊಂದು ಸಂತೋಷವಾಗಿದ್ದಾರಲ್ಲ... ದೇವರೇ ಇವರು ಹೀಗೇ ನಗುತ್ತಿರಲಿ!
ನಗೆ ಆರೋಹಣ ಹಂತದಲ್ಲಿಯೇ ಅಂತರ್ಧಾನವಾಯಿತು.
ಅದುವರೆಗೆ ಎಲ್ಲರ ಕರುಳುಗಳಲ್ಲಿ ದುಖಃ ಇಟ್ಟಿದ್ದ ಮೊಟ್ಟೆಗಳೆಲ್ಲ ಮರಿಮಾಡಿದವು... ಅವು ಹೊರಬಂದದ್ದಾಗಲೀ;
ರೆಕ್ಕೆ ಮೂಡಿದ್ದಾಗಲೀ; ಕೊಕ್ಕೆ ಮಸೆದದ್ದಾಗಲೀ’ ಬಿಸಿಬಿಸಿ ಕಣ್ಣೀರಿನಲ್ಲಿ ಈಜಾಡಿದ್ದಾಗಲೀ; ತಡವಾಗಲಿಲ್ಲ.
ಗಂಡ ತೀರಿಕೊಂಡಂದಿನಿಂದ ಕೇಶ ಮುಂಡನ ಮಾಡಿಸಿಕೊಂಡು ನಾರುಮಡಿಯನುಟ್ಟು ಜಪಮಾಲೆ ಹಿಡಿದು ಅಲುಮೇಲು ಕೋಣೆಯಲ್ಲಿ
ಕುಳಿತುಬಿಟ್ಟರೆಂದರೆ ಮುಗಿಯಿತು. ಹೊರಬರುತ್ತಿದ್ದುದೇ ಕಡಿಮೆ. ಹೊರಬಂದರೂ ಮುಗುಳ್ನಗೆ ದೂರದ ಮಾತು.
ಆದ್ದರಿಂದ ಪರಮೇಶ್ವರ ಶಾಸ್ತ್ರಿಗಳೇ ಮೊಮ್ಮಗನ ಯವತ್ತೂ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದರು.
ಆವರ ಜವಾಬ್ದಾರಿಗಳು ಒಂದೇ ಎರಡೇ.
ಮೊಮ್ಮಗ ಶಾಮುವನ್ನು ಭ್ರಷ್ಟಾಚಾರದ ವಾಸನೆ ಇಲ್ಲದ ಪ್ರಾಮಾಣಿಕ ಸರ್ಕಾರಿ ನೌಕರನನ್ನಾಗಿ ಮಾಡಬೇಕಿತ್ತು.
ಇದು ತಮ್ಮಿಂದ ಸಾಧ್ಯವಿಲ್ಲದ ಮಾತು.
ಮೊಮ್ಮಗ ಶಾಮು ಎಂದರೆ ಸಾಮಾನ್ಯವೇನು? ಸಾಕ್ಷಾತ್ ತಮ್ಮ ತಂದೆಯವರ ಅಪರಾವತಾರ. ಸಂಸ್ಕೃತ ಕಲಿಸಿ ವೇದೋಪನಿಷತ್ತು;
ದ್ವಾದಶ ಪುರಾಣಗಳ ಪರಿಚಯವನ್ನೆಲ್ಲ ಮಾಡಿಕೊಡಬೇಕು.
ಆದ್ದರಿಂದ ತಮ್ಮ ಮೊಮ್ಮಗನ ಕುರಿತಂತೆ ಶಾಸ್ತ್ರಿಗಳಾಗಿದ್ದ ಮಮಕಾರವಾಗಲೀ ಜವಾಬ್ದಾರಿಯಾಗಲೀ ಬಹಳ. ಕ್ರಾಪಿನೊಳಗೆ
ಗಂಟಿನ ಮೆಲೆ ಗಂಟು ಹಾಕಿಕೊಂಡು ಜುಟ್ಟು ಯಾವ ಪ್ರಕಾರವಾಗಿ ಕ್ರಾಪಿನಲ್ಲಿ ಅವಿತುಕೊಳ್ಳಲು ಪ್ರಯತ್ನಿಸುತ್ತಿದೆಯೋ
ಹಾಗೆ ಶಾಮು ಶಾಸ್ತ್ರಿಗಳ ಕಣ್ಣಿಗೆ ಸಾಧ್ಯವಾದಷ್ಟು ಬೀಳದ ಹಾಗೆ ನೋಡಿಕೊಳ್ಳುತ್ತಿದ್ದನು. ಹೆಜ್ಜೆಯ
ಕುಲುಕಿಗೆ ಲಟಕ್ಕನೆ ಕ್ರಾಪಿನಿಂದ ಹೊರಗಡೆ ಜುಟ್ಟು ಕಾಣಿಸಿಕೊಳ್ಳುವ ರೀತಿಯಲ್ಲಿ ಶಾಸ್ತ್ರಿಗಳು ದುತ್ತನೆ
ಕಾಣಿಸಿಕೊಂದು ಬಿಡುತ್ತಿದ್ದರು. ಶುಕ್ರೋದಯಕ್ಕೂ ಪೂರ್ವದಲ್ಲಿ ಏಳಿಸುತ್ತಿದ್ದರು. ತಣ್ಣಿರಿನ ಸ್ನಾನ
ಮಾಡಿಸುತ್ತಿದ್ದರು. ತಮ್ಮ ಜೊತೆ ಗಾಯತ್ರಿ, ಪ್ರಾಣಾಯಮಕ್ಕೆ ಕೂಡ್ರಿಸಿಕೊಳ್ಳುತ್ತಿದ್ದರು. ಉತ್ತಮಾ
ತಾರಕೋಪೇತಾ ಮಧ್ಯಮಾಲುಪ್ತಕಾರಕಾಃ ಎಂದು ಗಟ್ಟಿಯಾಗಿ ಹೇಳಿಸುತ್ತಿದ್ದರು. ತದನಂತರ ಪುರುಷ ಸೂಕ್ತ ಅನಂತರ
ಅಮರ ಸಿಂಹ , ಪಾಣಿನಿ, ನಾರದಸ್ಮೃತಿ ಮುಂತಾದುವುಗಳನ್ನು ಒಂದು ರೌಂಡು ಮುಗಿಸಲೇಬೇಕಿತ್ತು. ಅನಂತರ
ಇಂಗ್ಲಿಷು ಹಾಳುಮೂಳು ಇತ್ಯಾದಿ. ಅನಂತರ ಅವನು ಸೇವಿಸಲೆಂದೇ ಶಾಸ್ತ್ರಿಗಳು ತಂದು ಕಟ್ಟಿದ್ದ ಗೋಮಾತೆಯ
ಉಪಚಾರ, ನಂತರ ಜುಟ್ಟು ಮರೆಮಾಚದಂತೆ ತೋಪಿ ಧರಿಸಬೇಕು. ತದನಂತರ ಮೋಕ್ಷ ಪ್ರಾಪ್ತಿಗೆ ಸಾದಕ ಭಾದಕ ತತ್ವ
ವಿಚಾರಗಳನ್ನು ಯೋಚಿಸುತ್ತ ಓಣಿಯ ಹಿಂದಿನಿಂದ ಊರ ಹೊರವಲಯದ ಮೂಲಕ ಗ್ರವಂಡು ಪ್ರವೇಶಿಸಿ ಸ್ಕೂಲು ತಲುಪಬೇಕು.
ತರಗತಿಯಲ್ಲಿ ದುಷ್ಟರ ಸಂಗ ಮಾಡಬಾರದು. ಹೆಣ್ಣು ಮಕ್ಕಳ ಕಡೆ ಕಣ್ಣೆತ್ತಿ ನೋಡಬಾರದು, ಪರ ಧನ ಪರ ವಸ್ತುಗಳನ್ನು
ಆಸೆ ಪಡಬಾರದು ಇತ್ಯಾದಿ ಇತ್ಯಾದಿ ನೀತಿ ನಿಯಮಗಳನ್ನು ಮೊಮ್ಮಗ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯತ್ನಿಸುತ್ತಿದ್ದರು.
ಪ್ರೌಢ ಶಾಲೆಗೆ ಸೇರಿದ ಪ್ರಥಮದಲ್ಲಿ ಅವನು ತಾತನವರು ರೂಪಿಸಿದ್ದ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ
ಪಾಲಿಸುತ್ತಿದ್ದ ಎಂಬುದರಲ್ಲಿ ಅನುಮಾನವೇ ಇಲ್ಲ. ವಿದ್ಯಾ ವಿನಯ ಹೇತುಂ ಎಂಬಂತಿದ್ದ ಇಂದ್ರಿಯ ಜಯಃ
ಕಾಮಕ್ರೊಧ ಲೋಭ ಮಾನ ಮದಹರ್ಷತ್ಯಾಗಾತ್ ಕಾರ್ಯಹ ಮಾಡಿದವನಂತಿದ್ದ. ತಲೆ ತಗ್ಗಿಸಿಕೊಂಡು ಕೂಡ್ರುತ್ತಿದ್ದ.
ಮೇಷ್ಟ್ರು ಕೇಳುವ ಪ್ರಶ್ನೆಗೆ ಗಿಳಿಯಂತೆ ಉತ್ತರ ಕೊಡುತ್ತಿದ್ದ. ಆತನಿದ್ದ ತರಗತಿ ಒಣ ಒಣ ಭಣ ಭಣವಿರಲಿಲ್ಲ.
ತರಗತಿ ಶಿಖಿರ ಪ್ರಾಯದಂತೆ ಹುಡುಗಿಯರುದ್ದರು. ಹುಡುಗಿಯರಿಗೆ ಕಳಸಪ್ರಾಯವಾದಂಥ ಚಿಗುರುಮೊಲೆ
ಗಳಿದ್ದವು. ತಮ್ಮ ಮೊಲೆಗಳಿಗೆ ಗೌರವ ಕೊಡುವ ನಿಮಿತ್ತ ಅವರಾರೂ ನೆಲ ನೋಡುತ್ತಿರಲಿಲ್ಲ. ಹುಡುಗಿಯರ
ಕಡೆ ಹುಡುಗರು ನೋಡುತ್ತಿದ್ದರು. ಕೀಟಲೆ ಮಾಡುತ್ತಿದ್ದರು. ಆದ್ದರಿಂದ ಹುಡುಗಿಯರಿಗೆ ಖುಷಿಯಾಗುತ್ತಿತ್ತು.
ಪ್ರತಿಯೊಬ್ಬರೂ ತಾವೇ ತ್ರಿಲೋಕ ಸುಂದರಿಯರೆಂದು ಬೀಗುತ್ತಿದ್ದರು. ಪಿಳ್ಳಂಗೋವಿ ಜುಟ್ಟಿನ ಶಾಮಾಶಾಸ್ತ್ರಿಯ
ಗಮನವನ್ನು ಅವರು ತಮ್ಮ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದರು. ಆದರೆ ಅವರು ಕಣ್ಣೆತ್ತಿ ನೋಡುತ್ತಿಲ್ಲ.
ನೋಟು ಪುಸ್ತಕ ಮುಖಕ್ಕೆ ಅಡ್ಡ ಇರಿಸಿಕೊಂಡು ಅವರ ಕಾಲುಗಳ ಮೀನ ಖಂಡ ನೋಡುತ್ತಿದ್ದ. ಆಗ ಅವನ ಮೈ ಬಿಸಿಯಾಗುತ್ತಿತ್ತು.
ಬಾಯಿ ಒಣಗಿಬಿಡುತ್ತಿತ್ತು. ಮತ್ತೆ ಮತ್ತೆ ನೋಡಬೇಕೆಂಬಾಸೆಯಾಗುತ್ತಿತು. ಹುಡುಗಿಯರ ಕಡೆ ನೋಡುವವರ
ಬಗ್ಗೆ; ಅವರ ಕುರಿತು ಮಾತನಾಡುವವರ ಬಗ್ಗೆ ಅವನಿಗೆ ಭಾರಿ ಸಿಟ್ಟು ಬರುತ್ತಿತ್ತು. ಯಾಕೆಂದರೆ ಅವನು
ಆ ಸ್ಕೂಲಲ್ಲಿದ್ದ ಎಲ್ಲಾ ತರಗತಿಯ ಹುಡುಗಿಯರನ್ನು ಪ್ರೀತಿಸುತ್ತಿದ್ದ.
ಇಂಥ ಸಭ್ಯಸ್ಥನಾದ ಅವನು ತನಗೆ ಗೊತ್ತಿಲ್ಲದಂತೆ ಒಂದು ಘಟನೆಗೆ ಸಿಲುಕಿಕೊಂಡ. ಒಂದು ಮಟ ಮಟ ಮಧ್ಯಾನ್ಹ
ಗಣಿತದ ಮೇಸ್ಟ್ರು ವೆಂಕಣ್ಣಾಚಾರ್ರವರ ಮನೆಗೆ ಹೋದ. ಗಣಿತದ ಸಮೀಕರಣ ಅವನ ತಲೆ ತಿನ್ನುತ್ತಿತ್ತು.
ಮನೆ ಏನೋ ತಲುಪಿದ. ಬಾಗಿಲು ಮುಚ್ಚಿತ್ತು. ಹಿತ್ತಲ ಬಾಗಿಲಿಗೆ ಹೋದ. ಅದೂ ಮುಚ್ಚಿತ್ತು. ಕದನ ಕುತೋಹಲಿಯಾದ
ಅವನು ಕಿಂಡಿಯಲ್ಲಿ ಇಣಿಕಿ ನೋಡಿದ. ವೆಂಕಣ್ಣ ಮಾಸ್ತರು ಜಲಜಾಕ್ಷಿಯದೇ ಆದ ಸಮೀಕರಣ ಬಿಡಿಸುತ್ತಿದ್ದರು.
ಅಂಥ ಸಮೀಕರಣವನ್ನು ತನಗೂ ಬಿಡಿಸಬೇಕೆಂಬಾಸೆ. ಒಂದು ಕ್ಷಣದಲ್ಲಿ ನೀರುನೀರಾಗಿ ಬಿಟ್ಟ. ಮರಳಿದ ನಂತರ
ಅವನು ಮಾಡಿದ ಘನ ಕಾರ್ಯವೆಂದರೆ -
ಹಾಸ್ಟೆಲ್ಗೆ ಹೋದವನೆ ಇದ್ದಿಲು ಚೂರನ್ನು ತೆಗೆದುಕೊಂಡ ಬಂದ. ಶಾಲೆಯ ಟೀನೋಪಾಲ್ನಲ್ಲಿ ಅದ್ದಿದಂಥ
ಗೋಡೆಗಳು "ನನ್ನ ಮೇಲೆ ಬರೆ ಬಾ ನನ್ನ ಮೇಲೆ ಬರೆ ಬಾರೋ ಗಂಡಸೇ" ಎಂದು ಆಹ್ವಾನಿಸಿದಂತೆ ಭಾಸವಾಯಿತು.
ಅರೆ ಇವರು ಪುರುಷತ್ವಕ್ಕೆ ಸವಾಲು ಎಸೆಯುತ್ತಿರುವವರಲ್ಲ. ಎಂದು ಸವಾಲು ಸ್ವೀಕರಿಸಿದ. ತಾನು ಗುಟ್ಟಗಿ
ಪ್ರೀತಿಸುತ್ತಿದ್ದ ಜಲಜಾಕ್ಷಿಯ ಸಮೀಕರಣಕ್ಕೆ ಮೇಸ್ಟ್ರಾದ ವೆಂಕಣ್ಣಾಚಾರ್ ಕೈ ಹಾಕುವುದೆಂದರೇನು? ಮೇಸ್ಟ್ರು
ತಂದೆಗೆ ಸಮಾನ; ಹೀಗೆ ಅವನಲ್ಲಿ ವಿದುರ ನೀತಿಗೆ ಬರವಿರಲ್ಲ.
ವೆಂಕಣ್ಣಾಚಾರ್ ಮತ್ತು ಜಲಜಾಕ್ಷಿ ಬಗ್ಗೆ ಗೋಡೆಗಳ ಮೇಲೆಲ್ಲ ಬರೆದುಬಿಟ್ಟ. ಅದು ಮರು ದಿನ ದೊಡ್ಡ ಸುದ್ದಿಯಾಗಿ
ಬಿಟ್ಟಿತು. ಎಲ್ಲರ ಬಾಯಲ್ಲೂ ಆ ಪ್ರೇಮ ಪ್ರಕರಣದ ಸುದ್ದಿಯೇ. ವೆಂಕಣ್ಣಾಚಾರ್ ಸಹೋದ್ಯೋಗಿಗಳಂತೂ ಈ
ಪ್ರೇಮ ಪ್ರಕರಣದ ದುರ್ಲಾಭ ಪಡೆಯ ತೊಡಗಿದರು.
ಜಲಜಾಕ್ಷಿಯನ್ನು ಸ್ಟಾಫ್ ರೂಮಿಗೆ ಕರೆಸುವುದು, ಕೈಯಿಂದ ಸವರುತ್ತ ಸಮಾಧಾನ ಪಡಿಸುವ ನಾಟಕ ಆಡುವುದು.
ಆ ದುರುಳ ವೆಂಕಣ್ಣನ ಭಾರವನ್ನು ಹೂವು ಗಾತ್ರದ ನೀನು ತಡೆದುಕೊಂಡಿದ್ದೇ ಹೆಚ್ಚು ಎಂದು ಲೊಚಗುಟ್ಟುವುದು...
ಇತ್ಯಾದಿ... ಇತ್ಯಾದಿ.
ಎಲ್ಲರೂ ವೆಂಕಣ್ಣ ಮೆಡಿಕಲ್ ಲೀವ್ ಗುಜರಾಯಿಸಿ ತಲೆ ಮರೆಸಿಕೊಳ್ಳಬಹುದೆಂದು ಬಗೆದಿದ್ದರು. ಆದರೆ ಅಂದು
ಅರ್ಧ ಗಂಟೆ ಮುಂಚಿತವಾಗಿ ಹಾಜರಿ ಪುಸ್ತಕದಲ್ಲಿ ಸಹಿ ಗೀಚಿ ಮೇಸೆ ತಿರುವಿದ.
ನನ್ನ ಶಾಟಕ್ಕೆ ಸಮ... ಬೋಳಿ ಮಕ್ಳು... ಡಾಣಿ ಮಕ್ಳು ಅಂತ ಇಡಿ ಸ್ಟಾಫ್ ಮೇಲೆ ವಾಗ್ ಯುದ್ಧ ಘೋಷಿಸಿಬಿಟ್ಟ...
ಪ್ರತಿ ತರಗತಿಗೆ ಹೋಗಿ ’ಯಾವ ಸೂಳ್ಯಾ ಮಕ್ಳು ಬರೆದದ್ದು ಅವರಿಗೇನು ಅಕ್ಕ ತಂಗೇರು ಇಲ್ವೇನು ಹಂಗೆ
ಹಿಂಗೆ ಅಂತ ಉಚಿತೋಪನ್ಯಾಸ ನೀಡಿದ.
ಶಾಮ ಎಷ್ಟು ಬುದ್ದಿವಂತನೆಂದರೆ ಸಹಪಾಠಿಗಳು ಉಬ್ಬಿಸಿದ್ದಕ್ಕೆ ಉಬ್ಬಿ ತಾನೇ ಬರೆದದ್ದು ಅಂತ ಹೇಳಿಬಿಡಬೇಕೆ?
ಅದೂ ಒಂದು ಸುದ್ದಿಯಾಯಿತು. ಸಂಸ್ಕೃತ ವಿದ್ವಾಂಸರಾದ ಪರಮೇಶ್ವರ ಶಾಸ್ತ್ರಿಗಳ ಏಕಮಾತ್ರ ಮೊಮ್ಮಗ ಇಂಥ
ಕೆಲಸ ಮಾಡುತ್ತಾನೆಂದರೆ ನಂಬಲಿಕ್ಕೆ ಹೇಗೆ ಸಾಧ್ಯ! ಮಾಡಿದ್ದರೆ ಗ್ರಹಗತಿಗಳ ಪ್ರಭಾವವಿರಬಹುದು.
ಮರುಳಸಿದ್ದಪ್ಪ ಹುಲಿಕುಂಟಾಚಾರ್ರಂಥ ಸಜ್ಜನಿಕೆ ಹೆಸರಾದವರು ಅಲೋನಾಗಿ ಶಾಮನನ್ನು ಕರೆಸಿಕೊಂಡು, ಯಾರು
ಮೇಲಿದ್ದರು! ಯಾರು ಕೆಳಗಿದ್ದರು ಎಂದು ಪೂಸಿ ಹೊಡೆದು ಕೇಳಿದರು. ವರ್ಣಿಸಬೇಕೆಂದು ಅವನ ನಾಲಿಗೆಯೂ
ಚುಟಗುಡುತ್ತಿತ್ತು. ನೋಡಿದ ಸಂಗತಿ ಬಗ್ಗೆ ಗುಟ್ಟಾಗಿ ಕವಿತೆ ಕೂಡ ಬರೆದಿದ್ದ. ನೋಡಿದ ಸಂಗತಿಗೆ ಗರಮ್
ಮಸಾಲೆ ಹಚ್ಚಿ ಹೇಳಿಬಿಟ್ಟ. ಕೇಳಿ ಮೇಷ್ಟ್ರುಗಳಿಗೆ ’ವಯಸ್ಕರಿಗೆ ಮಾತ್ರ’ ಸಿನೆಮಾ ನೋಡಿದಷ್ಟು ಸಂತೋಷವಾಯಿತು.
ತರಗತಿಗೆ ಬಿರುಗಾಳಿಯಂತೆ ನುಗ್ಗಿದ ವೆಂಕಣ್ಣ ಶಾಮನ ಕ್ರಾಪಿನಲ್ಲಿ ಜುಟ್ಟು ಹುಡುಕಿ ತೆಗೆದು ಉಡದಂತೆ
ಹಿಡಿದು ಅಲ್ಲಾಡಿಸಿಬಿಟ್ಟರು. ನೀನೇನು ಸ್ಕೂಲಿಗೆ ಬರೋದು ಓದೋಕೋ? ಅಥ್ವಾ ಇಂಥ ಹಲ್ಕಾ ಕೆಲಸ ಮಾಡ್ಲಿಕ್ಕೋ"
ಎಂದು ಅವನ ಕೆನ್ನೆಗೆ ಪಟಪಟಾಂತ ಎರಡು ಬಾರಿಸಿ ಬಿಟ್ಟರು. ಆ ಏಟಿಗೆ ಅವನ ಮುಖ ಬೋಂಡಾದಂತೆ ಬುರಬುರನೇ
ಊದಿಬಿಟ್ಟಿತು. ದುಃಖ, ಸಿಟ್ಟು ಎರಡೂ ಬಂದವು. ತಾತನಿಗೆ ಹೇಳಿ ಶಾಪಕೊಡಿಸಬೇಕೆಂದು ನಿರ್ಧರಿಸಿ ಮನೆಗೆ
ಬಂದ, ಅಲ್ಲಿ ನೋಡುತ್ತಾನೆ ಜಲಜಾಕ್ಷಿ ಫಾದರ್ ’ಎನ್ರಿ ಶಾಸ್ತ್ರಿಗಳೇ ನಿಮ್ಮ ಹುಡುಗ ಇಂಥ ಕೆಲಸ ಮಾಡಬಹ್ದಾ’
ಎಂದು ಬಂದು ಬಿಟ್ಟಿರುವನು, ಶಾಸ್ತ್ರಿಗಳಿಗೆ ವಿವರಿಸಿ ಮನದಟ್ಟು ಮಾಡಿಕೊಟ್ಟ. ಕೃದ್ದರಾದ ಶಾಸ್ತ್ರಿಗಳು
ತಮ್ಮ ನಾಗ ಬೆತ್ತದಿಂದ ಶಾಮುನ ಮೈಮೇಲೆ ದೇವನಾಗರಿಲಿಪಿ ಬರೆಯಬೇಕೆನ್ನುವಷ್ಟರಲ್ಲಿ ಸಂಸ್ಕೃತ ವಿದ್ವಾನ್
ನಾಗಭೂಷಣ ಶರ್ಮರು ಆಪದ್ಭಾಂದವರಂತೆ ಬಂದವರೆ ಬೆತ್ತ ಕಸಿದುಕೊಂಡರು. ಅವರು ಕಸಿದುಕೊಳ್ಳದಿದ್ದಲ್ಲಿ
ಹೀರೋ ಶಾಮನ ಟೊಂಕ ಮುರಿದು ಹೋಗುತ್ತಿತ್ತು.
"ನಮ್ಮ ಸಂಸ್ಕೃತ ಪ್ರತಿಭಾವಂತ ವಿದ್ಯಾರ್ಥಿ ಶಾಮ ಈ ಕೆಲಸ ಮಾಡಿರುವನೆಂಬುವುದಕ್ಕೆ ನಿಮ್ಮ ಬಳಿ ಆಧಾರವಾದರೂ
ಏನಿದೆ?" ಎಂದವರಸೆದ ವಾಗ್ಬಾಣಕ್ಕೆ ಹೆದರಿ ಎಲ್ಲರೂ ತಂತಮ್ಮ ಅಸ್ತ್ರಗಳನ್ನು ಉಪಸಂಹರಿಸಿಕೊಂಡರು.
ಅವತ್ತಿನಿಂದ ಶಾಮನ ಸ್ಟಾರ್ ವ್ಯಾಲ್ಯೂ ಜಾಸ್ತಿಯಾಯತು.
ಸಂಸ್ಕೃತ ಭಾಷೆಯ ಯಾವುದಾದರೂ ಗ್ರಂಥ ತೆರೆದೊಡನೆ ಸಮೀಕರಣ ಬೇಧಿಸುವ ಕ್ರಿಯೆಯ ದೃಶ್ಯ ಬಿಚ್ಚಿಕೊಳ್ಳಲಾರಂಭಿಸಿತು.
ತಾನೂ ಅಂಥದೊಂದು ಕ್ರಿಯೆಯಲ್ಲಿ ಸಕ್ರಿಯಾತ್ಮಕವಾಗಿ ಭಾಗವಹಿಸಬೇಕೆಂಬ ಆಸೆ ಟ್ರವುಜರ್ರು ಧರಿಸಿಕೊಂಡಿತು.
ಜಲಜಾಕ್ಷಿಯ ಕಣ್ಣಿಗೆ ಬೀಳಬಾರದೆಂದು ಅವನು ನಡೆದಾಡಲು ಕೆಲವು ಕಳ್ಳ ಹಾದಿಗಳನ್ನು ಹುಡುಕಿಕೊಂಡಿದ್ದುಂಟು.
ವ್ಹಿಸ್ಕಿಕುಡಿಯುವವನು ಚಿಕನ್ ತಿನ್ನದಿರುತ್ತಾನೆಯೇ, ಚಿಕನ್ ತಿಂದವರು ಸಿಗರೇಟು ಸೇದದಿರುತ್ತಾರೆಯೇ,
ಸಿಗರೇಟು ಸೇದಿದವರು ತೊಡೆಸಂಧಿ ತುರಿಸಿಕೋಳ್ಳದಿರುತ್ತಾರೆಯೇ?
ಗ್ರವಂಡಿನ ಆಚೆ ತುದಿಯ ಅಶ್ವತ್ಥ್ ಮರದ ಬುಡದಲ್ಲಿ ಕಾವ್ಯಾಲಂಕಾರದ ಮರ್ಮ ಬಿಡಿಸುತ್ತ ಕೂತಿದ್ದ ಶಾಮು.
ಕಾವ್ಯವೆಂದರೆ ಕಾಮ, ಕಾಮವೆಂದರೆ ಕಾವ್ಯ. ಒಂದು ಅರ್ಥವಾದರೆ ಇನ್ನೊಂದು ಅರ್ಥವಾದಂತೆಯೇ ಎಂಬ ತರ್ಕಕ್ಕೆ
ಬಂದಿದ್ದ. ಎಲ್ಲಿದ್ದಳೋ ಏನೋ? ಜಲಜಾಕ್ಷಿ ದುತ್ತನೆ ಅವನ ಮೇಲೆ ಎರಗಿಬಿಟ್ಟಳು.
"ನನ್ ಮರ್ಯಾದೆ ಕಳೆದೆಯಲ್ಲಾ ನಾನು ನಿನಗೆ ಮಾಡಿದ್ದ ಅನ್ಯಾಯವಾದ್ರೂ ಏನು?" ಎನ್ನುತ್ತ ಅವನೊಂದಿಗೆ
ಫೈಟಿಂಗಿಗೆ ಬಿದ್ದಳು. ಅವಳ ಬಲಿಷ್ಟ ಹಿಡಿತಕ್ಕೆ ಸಿಲುಕಿ "ಯಾರಾದರೂ ತನ್ನನ್ನು ರಕ್ಷಿಸಬಾರದೇ?" ಎಂದು
ಕೂಗಿಕೊಂಡ. ಜೇನುಪಾತ್ರೆಯೊಳಗೆ ಕಳೆದ ನಾಲಿಗೆಯಂತಾಯಿತು ಅವನ ಪರಿಸ್ಥಿತಿ.
ಅವನದು ಅರಣ್ಯ ರೋದನವಾಗಿತ್ತು.
ಸುತ್ತ ಎರಡು ಫರ್ಲಾಂಗು ಅಂತರದೊಳಗೆ ಯಾರೂ ಇರಲಿಲ್ಲ .
ಘಳಿಗೆಗಳು ಕಳೆದಂತೆ ಆಕೆಯ ಉಡ ಹಿಡಿತ ದ್ವಿಗುಣಗೊಂಡಿತ್ತು. ಮರದ ಮೇಲೆ ರೆಸ್ಟ್ ತೆಗೆದುಕೊಳ್ಳ ತೊಡಗಿದ್ದ
ಪಕ್ಷಿಗಳು ಕೀರ್ ಕೀರ್ ಶಬ್ದ ಮಾಡುತ್ತ ಆ ಫೈಟಿಂಗಿಗೆ ಶುಭ ಹಾರೈಸುತ್ತಿದ್ದವು.
"ಏನೋ... ನಿನ್ ಕೈಲೂ ಮಾಡ್ಲಿಕ್ಕಾಗಲ್ಲ, ಮಾಡೋನ ಕಂಡರೆ ಹೊಟ್ಟೆ ಉಸಿಕೊಳ್ತೀಯ... ಇವತ್ತು ಎರಡ್ರಲ್ಲೊಂದು
ಫೈಸಲಾಗಬೇಕು... ಇಲ್ಲಾಂದ್ರೆ ನಿನ್ನ ಜುಟ್ಟು ಕಿತ್ತು ಬಾಯಲ್ಲಿಟ್ಟು ಬಿಡ್ತೀನಿ..." ಎಂದು ಅವನ ಚಲ್ಲಿಕಾದೊಳಗೆ
ಕೈ ತುರುಕಿ ಮರ್ಮಾಂಗವನ್ನು ಗಟ್ಟಿಯಾಗಿ ಹಿಡಿದುಕೊಂಡಳು.
ಅವನ ಮೂಗಿಗೆ ಬಾಯಿಹಾಕಿ ಜೋರಾಗಿ ಹೊಸಕ ತೊಡಗಿದಳು.
ನೆಲದಂತರಾಳದಿಂದ ಜ್ವಾಲಾಮುಖಿ ನಿಮಿಷಾರ್ಧದಲ್ಲಿ ಡಮಾರೆಂದು ಸ್ಪೋಟಿಸಿಬಿಟ್ಟಿತು. ಅಂತರಂಗ ಬಹಿರಂಗವೆಲ್ಲಾ
ಗಲೀಜಾಗಿಬಿಟ್ಟಿತು
"ಥೂ ನಿನ್ನ ಮುಖಕ್ಕೆ" ತೆಕ್ಕೆ ಸಡಲಿಸಿ ಮುಖಕ್ಕೆ ಕ್ಯಾಕರಿಸಿ ಉಗುಳಿದಳು. " ಈಗ ಸಧ್ಯಕ್ಕೆ ಬಿಡ್ತಿದ್ದೀನಿ...
ಕ್ಲಾಸಿನಲ್ಲಿ ನಿನ್ನ ಒಂದು ಕೈ ನೊಡ್ಕೊಳ್ಲಿಲ್ಲ... ನಾನು ಗೊಬ್ಬರದಂಗಡಿ ಗುರುಬಸಪ್ಪನ ಮಗಳು ಬೇಬಿನೇ
ಅಲ್ಲ" ಎಂದು ಭಲೆ ಶಪಥ ಮಾಡಿದಳು. ಅವಳು ಕಣ್ಣುಗಳೆಂಬ ವ್ಯಾನಿಟ್ ಬ್ಯಾಗಿನೊಳಗೆ ತನ್ನ ಮರ್ಮಾಂಗವನ್ನು
ಅಪಹರಿಸಿ ಒಯ್ದು ಬಿಡುವಳೋ ಎಂದು ಹೆದರಿದ. ಚಡ್ಡಿಯೊಳಗೆ ಮುಖ ಕುಯ್ದು ಬಚ್ಚಿಟ್ಟುಕೊಂಡು ಬಿಟ್ಟ. ಗದಗಡ
ನಡುಗುತ್ತ ಬಿರುಗಾಳಿಯಂತೆ ತರಗತಿ ಕಡೆಗೆ ಓಡಿದ ಅವಳ ಕಡೆಗೇ ನೋಡಿದ.
ಜಲಜ ಕೇವಲ ಗಣಿತದಲ್ಲಷ್ಟೇ ಹೆಚ್ಚಿಗೆ ಮಾರ್ಕ್ಸ್ ಪಡೆಯುತ್ತಿರಲಿಲ್ಲ. ತಾಲ್ಲೂಕು ಜಿಲ್ಲಾ ಮಟ್ಟದ ಒಲಂಪಿಕ್
ಕ್ರೀಡೆಗಳಲ್ಲಿ ಹತ್ತಾರು ಪದಕಗಳನ್ನು ದೋಚಿಕೊಂಡಿದ್ದಳು. ಅವಳು ಹೆಜ್ಜೆ ಹಾಕಿದಳೆಂದರೆ ಅವಳ ಬಟಕ್ಸುಗಳು
ಆದಿತಾಳ ನುಡಿಸುತ್ತಿದ್ದವು. ಅವನ ಸುಸಂಸ್ಕೃತ ಪಂಚೇಂದ್ರಿಯಗಳೆಲ್ಲ ಅವಳ ಹಿಂದೆ ಅಷ್ಟು ದೂರ ನಡೆದು
ವಾಪಸು ಬಂದವು.
ಹೀರೋ ಶಾಮಣ್ಣ ಮನೆಗೆ ಹೊರಟ. ಕುಡಿದಿರುವನೋ ಎಂಬಂತೆ, ಮನೆಗೆ ಹೋದೊಡನೆ ಗಪ್ಪನೆ ಮಲಗಿಬಿಟ್ಟ. ಕುಂತರೂ
ನಿಂತರೂ ಗಂಡನು ಆಡುತ್ತಿದ್ದ ಆಟಗಳನ್ನು ನೆನೆಸಿಕೊಂಡು ದುಃಖವನ್ನು ಗಂಟಲಿಗೆ ತಂದುಕೊಂಡು ಮೌನವಾಗಿ
ಉಳಿದುಬಿಡುತ್ತಿದ್ದ ಅಲುಮೇಲಮ್ಮನಿಗೆ ದಿಡೀರನೆ ಏಕ ಮಾತ್ರ ಪುತ್ರ ನೆನಪಾದ. ಹೋಗಿ ನೋಡುತ್ತಾಳೆ. ಮೈ
ಸುಡುತ್ತಿದೆ. ಮೈ ಮೇಲೆ ಪ್ರಜ್ಞೆ
ಒಂಚೂರೂ ಇಲ್ಲ. ಜಲ... ಜಲ... ಜ್ವಾಲಮಾಲಿನೇ ಅಂತ ಏನೇನೋ ಬಡಬಡಿಸುತ್ತಿದ್ದನು. ಕಣ್ಣಾಲಿಗಳು ಮೇಲೆ
ಕೆಳಗೆ ಇಳಿಯುತ್ತಿವೆ. ವಂಶೊದ್ದಾರಕ ಪ್ರೀತಿಯ ಪುತ್ರನ ಸ್ಥಿತಿನೋಡಿ ಆ ಮಹಾಸಾಧ್ವಿ ಹೌಹಾರಿದಳು. "ಮಾವನವರೇ...
ಮಾವನವರೇ..." ಎಂದು ಕೂಗಿದಳು... ಗಂಡ ಇಹಲೋಕ ತ್ಯಜಿಸಿದಮೇಲೆ ಆಕೆ ಎಂದೂ ಅಷ್ಟು ಜೋರಾಗಿ ಕೂಗಿರಲಿಲ್ಲ...
ಒಳಗಡೆ ನೋಡಿದಳು... ಅಂಗಳಕ್ಕೆ ಹೋಗಿ ಇಣುಕಿದಳು. ಆಕೆ ಅಂದಿನಿಂದೂ ಹಾಗೆ ಹೋಗಿ ಇಣುಕಿ ನೋಡಿರಲಿಲ್ಲ...
ಪಾಪ! ಆಕೆಗೇನು ಗೊತ್ತು! ಪರಮೇಶ್ವರ ಶಾಸ್ತ್ರಿಗಳು ಅದ್ಭುತವಾಗಿ ಡ್ರೆಸ್ ಮಾಡಿಕೊಂಡು ವಿಜಯನಗರ ಮೈದಾನಕ್ಕೆ
ಹೋಗಿ ಜನಜಂಗುಳಿಯ ನಡುವೆ ಸಿಕ್ಕಿ ಹಾಕಿಕೊಂಡಿರುವುದು?
ಎಲ್ಲಿ ನೋಡಿದರೂ ಜನವೋ ಜನ... ಒಬ್ಬರನ್ನು ಇನ್ನೊಬ್ಬರು ತುಳಿಯುತ್ತಿದ್ದಾರೆ. ಪೋಲೀಸಿನವರು ಸಮವಸ್ತ್ರಧರಿಸಿ
ಹಾವುನುಂಗಿದರಂತೆ ಆಡುತ್ತಿದ್ದಾರೆ. ಎತ್ತರವಾದ ವೇದಿಕೆಯನ್ನು ಅದ್ಭುತವಾಗಿ ಸಿಂಗರಿಸಲಾಗಿದೆ. ಲೌಡು
ಸ್ಪೀಕರಿನಲ್ಲಿ ಸಣ್ಣ ಪುಟ್ಟ ನಾಯಕ ಮಣಿಗಳು "ಹಲೋ ಹಲೋ" ಎಂದು ಅರಚುತ್ತಿದ್ದಾರೆ. ಇಡೀ ಬಯಲನ್ನು ಆವರಿಸಿರುವ
ಕೆಂಧೂಳಿಯಲ್ಲಿ ಮುಳುಗಿರುವ ಜನರು ಬೆಳಗಿನಿಂದ ಏನೂ ತಿಂದಂತಿಲ್ಲ, ಏನೂ ಕುಡಿದಂತಿಲ್ಲ ಒಂದು ರೀತಿಯ
ಮಂಕು, ಆತುರ, ಭಯ, ಚಿದ್ವಿಲಾಸಗಳ ಕಲಸು ಏಲೋಗರವದು. ರಸಂ ಒಳಗದೆ ಕರಿಬೇವಿನ ಎಲೆಯಂಥ ಪರಿಸ್ತಿತಿ ಶಾಸ್ತ್ರಿಗಳದ್ದು.
ಈ ಕಡೆ ಇದ್ದವರು ಆ ಕಡೆ ತಳ್ಳುವುದು! ಆ ಕಡೆ ಇದ್ದವರು ಈ ಕಡೆ ತಳ್ಳುವುದು, ಮೇಲೆ ಸೂರ್ಯ ಕೋಪದಿಂದ
ಒಬ್ಬೊಬ್ಬರ ತಲೆ ಮೇಲೆ ಹಂಡೆ ಹಂಡೆ ಬಿಸಿಲು ಸುರಿಯುತ್ತಿರುವನು. ಶಾಸ್ತ್ರಿಗಳ ಬೋಳು ನೆತ್ತಿಯ ಮೇಲೆ
ಎರಡು ಹಂಡೆಯಷ್ಟು, ಉಷ್ಣದ ಆ ಪ್ರಮಾಣದಿಂದ ಇಡೀ ತಲೆಯನ್ನು ರಕ್ಷಿಸುವುದು ಎಂಟು ದಶಕಗಳ ಹಳೆಯದಾದ ಜುಟ್ಟಿನ
ಕೈಲಾದೀತೆ?
ಬರುವಾಗ ಸ್ರಕ್ಚಂದನಿತ್ಯಾದಿಗಳಿಂದ ಅಲಂಕರಿಸಿಕೊಂಡು ಮೇಲೆ ಗರಿಗರಿಯಾದ ಉತ್ತರೀಯ ಇಳಿ ಬಿಟ್ಟುಕೊಂಡು
ಹೂವಿನ ತೇರಿನಂತೆ ನಡೆಯುತ್ತ ವಿಜಯನಗರ ಮೈದಾನ ಸೇರಿಕೊಂಡಿದ್ದರು. ಹಾಲಿನಲ್ಲಿ ಸಕ್ಕರೆ ಕರಗಿದಂತೆ
ತಾವು ಹೀಗೆ ಕರಗಲಾರರೆಂದೇ ಭಾವಿಸಿದ್ದರು. ಗೋವಿಂದೇಗೌಡರು ಕಣ್ಣುಮುಚ್ಚಾಲೆ ಆಟ ಆಡಿಸುತ್ತಿದ್ದರು.
ಅವಸರದಿಂದ ಮಾಡಲ್ಪಟ್ಟವರಂತೆ ಅಡ್ಡಾಡುತ್ತಿದ್ದ ಅವರು ಶಾಸ್ತ್ರಿಗಳು ಕಂಡರೂ ಅಂತ ಅಷ್ಟಾಂಗ ಪ್ರಣಾಮ
ಸಲ್ಲಿಸಲು ಅದೇನು ಮನೆಯ ಪಡಸಾಲೆಯೇ? ನಿಜ ಹೆಳಬೇಕೆಂದರೆ ಇದನ್ನೆಲ್ಲ ಆ ಕೃಶಾಂಗರಿಗೆ ಹಚ್ಚಿಕೊಟ್ಟಿದ್ದೂ
ಅವರೆ, ಇಷ್ಟು ಮಾಡಿಬಿಡಿ ನಿಮ್ಮ ಕೀರ್ತಿ ಪತಾಕೆ ದೇಶ ವಿದೇಶಗಲಲ್ಲಿ ಹರಡುವುದೆಂದು ಹವಾ ತುಂಬಿದ್ದೂ
ಅವರೇ, ವಿಜಯನಗರ ಮೈದಾನದಲ್ಲಿ ತಮ್ಮ ಅದೃಷ್ಟವು ಖುಲಾಯಿಸಿ ಎಮ್ಮೆಲ್ಲೆ ಆಗಿಬಿಡಬಹುದು; ಮಂತ್ರಿ ಆಗಿ
ಬಿಡಬಹುದು. ಈಗ ಸರಕಾರಕ್ಕೆ ತಾವು ಕಟ್ಟಲೇಬೇಕಾಗಿರುವ ಲಕ್ಷಾಂತರ ರೂಪಾಯಿ ತೆರಿಗೆ ಬಾಕಿಯನ್ನು ಮಾಫಿ
ಮಾಡಿಸಿಬಿಡಬಹುದು. ವಂಶದ ನೂರಾರು ಕುಡಿಗಳಿಗೆಲ್ಲ ಬಂಗಾರದ ತಟ್ಟೆಯಲ್ಲಿ ಗೋಡಂಬಿ, ಬಾದಾಮಿ ದ್ರಾಕ್ಷಿಯನ್ನು
ಚಿನ್ನ ಚಮಚದಿಂದ ಬಾಯೊಳಗಿಟ್ಟುಕೊಳ್ಳುವ ವ್ಯವಸ್ಥೆಯನ್ನು ಚಿಟಿಕೆ ಹೊಡೆವುದರೊಳಗೆ ಮಾಡಿಬಿಡಬಹುದು
ಎಂದೆಲ್ಲ ಲೆಕ್ಕ ಹಕಿ ಮೈದಾನದ ಇಡೀ ಉಸ್ತುವಾರಿಯನ್ನು ತಾವೇ ವಹಿಸಿಕೊಂಡು ಹಣವನ್ನು ನೀರಿನಂತೆ ಖರ್ಚು
ಮಾಡುತ್ತಿದ್ದರು. ಅದ್ದರಿಂದ ಅವರ್ ಕಣ್ಣು ಒಂದೇ ಒಂದು ನೋಟ ಹರಿಸುವುದು ಸಾಧ್ಯವಿರಲಿಲ್ಲ. ಎಲ್ಲಾ
ಹೇಳಿಬಿಟ್ಟಿದ್ದೀನಿ ಶಾಸ್ತ್ರಿಗಳೇ... ನೀವು ನಿಮ್ ಹೆಸರೊಂದೆ ಹೇಳಿಬಿಟ್ರೆ ಸಾಕು. ನಿಮ್ಮನ್ನು
ಹೆಲಿಕಾಪ್ಟ್ರಿನಲ್ಲಿ ಹತ್ತಿಸಿಕೊಂಡು ಸೀದಾ ಡೆಲ್ಲಿಗೆ ಕರಕ್ಕೊಂಡ್ಹೋಗ್ತಾರೆ. ಎಂದು ಹೇಳಿದ್ದ ಅದೂ
ಅರ್ಧ ನಿಮಿಷದಲ್ಲಿ.
ಕಂಕುಳದಲ್ಲಿದ್ದ ಪಂಚಂಗದ ಗಂಟು ತಮ್ಮ ಶತಮಾನದ ದಾಹ ತೀರಿಸಿಕೊಳ್ಳಲು ಅದೇ ದೇಹದಿಂದ ಪುಷ್ಕಳವಾಗಿ ಒಸರುತ್ತಿದ್ದ
ಬೆವರನ್ನು ಕುಡಿಯ ತೊಡಗಿದ್ದಿತು. ದೋತರ ಕೂಡ ಬೆವರಿನಿಂದ ನೆನೆದು ಚಪ್ಪೆಗಂಟಿ ಕಾಣಿಸುತ್ತಿತ್ತು.
’ಥೂ ಈ ಪ್ರಧಾನ ಮಂತ್ರಿ ಹಾಳಾಗ’ ಎಂದು ಕೋಪದ ಭರದಲ್ಲಿ ತಾವು ನುಡಿದು ಬಿಡಬಹುದು. ಅಲ್ಲದೆ ತಾವು ನುಡಿದಿದ್ದೇ
ವೇದವಾಕ್ಯ. ತಮ್ಮ ನುಡಿದಿದ್ದನ್ನು ಬದಲಿಸುವ ಶಕ್ತಿ ಆ ತ್ರಿಮೂರ್ತಿಗಳಿಗೂ ಮೀರಿದ್ದು. ತಾವು ಯಾರಿಗೆ
ಜ್ಯೋತಿಷ್ಯ ಹೇಳಬೇಕೆಂದು ಕಾಯುತ್ತಿರುವೆವೋ ಅವರಿಗೇ ತಾವು ಶಾಪ ಕೊಡುವುದುಂಟೆ?
ಅಷ್ಟರಲ್ಲಿ ಜನರ ದೊಡ್ಡದೊಂದು ಗುಂಪು ಪ್ರಧಾನ ಮಂತ್ರಿಗೆ ಧಿಕ್ಕಾರ. ಇಂಡಿಕೇಟ್ ಕಾಂಗ್ರೆಸ್ನ ಇಂದಿರಾಗಾಂಧಿಗೆ
ಧಿಕ್ಕಾರ ನಿಜಲಿಂಗಪ್ಪನವರಿಗೆ ಜಯವಾಗಲೀ, ಸಂಜೀವರೆಡ್ಡಿಗೆ ಜಯವಾಗಲೀ ಎಂದು ಜೋರಾಗಿ ಕೂಗತೊಡಗಿತು.
ಇದ್ದಕ್ಕಿಂತೆ ಪೋಲಿಸರು ಅವರ ಮೇಲೆರಗಿ ಲಾಠಿಯಿಂದ ಚಚ್ಚತೊಡಗಿದರು. ಮತ್ತೆ ಕೂಗತೊಡಗಿದ ಆ ಸಿಂಡಿಕೇಟ್
ಕಾಂಗ್ರೆಸ್ನ ಕಾರ್ಯಕರ್ತರನ್ನು ದನಗಳನ್ನು ತುಂಬಿದಂತೆ ವ್ಯಾನಲ್ಲಿ ತುಂಬಿ ಕರೆದೊಯ್ದರು.
ನಿಜವಾಗಿಯೂ ಶಾಸ್ತ್ರಿಗಳಿಗೆ ಭಯವಾಯಿತು.
ಕಾಂಗ್ರೆಸ್ ಇಬ್ಭಾಗವಾದ ಬಗ್ಗೆ ತಿಳಿದುಕೊಂಡಿದ್ದರು. ಕಂಚಿ ಕಾಮಕೋಟಿ ಶ್ರೀಗಳು, ಶ್ರಿಂಗೇರಿ, ಉಡುಪಿ
ಮೊದಲಾದ ಸ್ವಾಮಿಗಳ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತಾಳೀ ಜವಹರನ ಪುತ್ರಿ ಎಂದೇ ಅಕೆಯನ್ನು ಬೆಂಬಲಿಸಿದ್ದರು.
ತಿರುಪತಿ ವೆಂಕಟರಮಣನಿಗೆ ಇಂದಿರಾಗಾಂಧಿ ತಲೆಗೂದಲು ಕೊಡುವುದನ್ನು ನೋಡಬೇಕೆಂಬ ಅವರ ಹಳೆಯ ಆಸೆ.
ಆಕೆಯ ಮೇಲೆ ಅವರಿಗಿದ್ದ ಒಂದೇ ಒಂದು ಸಿಟ್ಟು ಎಂದರೆ ಆಕೆ ಪಾರ್ಸಿಯವನನ್ನು ಮದುವೆಯಾದದ್ದುದರ ಬಗ್ಗೆ.
ಹೀಗೆ ಪ್ರೀತಿ ಜೊತೆ ಸಿಟ್ಟು ಸೆಡವು ಎಲ್ಲಾ ಇಟ್ಟುಕೊಂಡು ಆಕೆಯ ಹಸ್ತ ಸಾಮುದ್ರಿಕ ನೋಡಿ ತಾವು ಪ್ರಸಿದ್ದರಾಗಬೇಕೆಂದು
ಜನ ಜಂಗುಳಿಯಲ್ಲಿ ಸಿಲುಕಿಕೊಂಡಿದ್ದರು. ತುಂಬ ಹಸಿದಿದ್ದರು, ಬಾಯಾರಿದ್ದರು. ಆದರೆ ಸಿಕ್ಕ ಕಡೇಲೆಲ್ಲ
ತಿನ್ನಲಿಕ್ಕೆ ಕುದಿಯಲಿಕ್ಕೆ ಅವರೇನು ಮಾಮೂಲು ನರರೇ!
ವೇದನೆಯೊಂದು ಅಂತರಾಳದಿಂದ ಕಿತ್ತು ಬಂತು.
ಅವರ ದೇಹದ ಕರುಳುಗಳಲ್ಲಿ ಸಂಕುಚಿತಗೊಂಡಿರುವ ಮಲವನ್ನು ದೂರದಿಂದಲೇ ಗ್ರಹಿಸಿಕೊಂಡಂತೆ ನಾಯಿಯೊಂದು
ಜೋರಾಗಿ ಬೊಗಳತೊಡಗಿತು. ನಾಯಿ ಅಂದರೆ ನಾರಾಯಣ, ನಾರಾಯಣನೆಂದರೆ ನಾಯಿ. ಶ್ರೀಮನ್ನಾರಾಯಣನೇ ನಾಯಿ ಭಾಷೆ
ಮೂಲಕ ನೀಡುವ ಸಂದೇಶವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಯಾಕೋ ಅವರಿಗೆ ಅವರ ಮೊಮ್ಮಗ ನೆನಪಾಗಿ
ಇದ್ದಕ್ಕಿದ್ದಂತೆ...
"ತಾತಾ... ತಾತಾ" ಹಾಸಿಗೆ ಮೇಲಿದ್ದ ಶಾಮು ಕಿಟಾರನೆ ಕಿರುಚಿತು. ಅದು ಆ ಐದು ನಿಮಿಷಗಳಲ್ಲಿ ಎಚ್ಚರಗೊಂಡಿದ್ದೆಷ್ಟೋ
ಸಾರಿ! ಪ್ರಜ್ಞೆ ಕಳೆದುಕೊಂಡಿದ್ದು ಎಷ್ಟೋ ಸಾರಿ, ಎಚ್ಚರ
ತಪ್ಪಿದಾಗ ಜಲ... ಜಲ... ಜ್ವಾಲಮಾಲಿನಿ... ಬಿಡು... ಬಿಡು... ಕೈ ಹಾಕಬೇಡ... ಮುಟ್ಟಬೇಡ... ಹೀಗೆ
ಎನೇನೋ ಕನವರಿಸುತ್ತಿದ್ದನು. ಎಚ್ಚರ ಬಂದಾಗ ಎದುರಿಗಿದ್ದ ಎಲ್ಲರೂ ಜಲಜಾಕ್ಷಿಯರೇ ಎಂದು ಭಾವಿಸಿ, ಅವಾರೆಲ್ಲಾತನ್ನ
ಮೇಲೆ ಆಕ್ರಮಣ ನಡೆಸುತ್ತಾರೆ ಎಂದು ಬಗೆದು ತನ್ನ ಸಹಯಕ್ಕಾಗಿ ಸಾಕ್ಷಾತ್ ಚಾಮುಂಡೇಶ್ವರಿಯನ್ನು ಆಮಂತ್ರಿಸಲೋಸುಗ
ಅಹಿಗಿರಿ ನಂದಿನಿ ನಂದಿತ ಮೋದಿನಿ ವಿಶ್ವವಿನೋದಿನಿ ನಂದನುತೆ ಎಂಬ ಶಂಕರ ವಿರಚಿತ ಸ್ತೋತ್ರ ಹೇಳುತ್ತಿದ್ದನು.
ಮತ್ತೊಮ್ಮೆ ಎಚ್ಚರವಾದಾಗ ಶಂಕ ಚಕ್ರ ಗಧಾನ್ವಿತೆ ಎಂದು ಹೇಳುತ್ತಿದ್ದನು.
ಅಲುಮೇಲಮ್ಮನ ಹೆತ್ತ ಕರುಳು ಹೊತ್ತಿ ಉರಿಯ ತೊಡಗುವುದು... ನನ್ನ ಕಂದನಿಗೇನಾಯಿತೋ... ಯಾರಾದ್ರು ಉಳಿಸಿ
ಪುಣ್ಯ ಕಟ್ಟಿಕೊಳ್ಳಬಾರದೇ ಎಂದು ಕಂದನನ್ನು ಅವುಚಿಕೊಂಡು ಚೀರುತ್ತಿದ್ದಳು.
ಆ ಸಾಧ್ವಿಯ ಮನವಿಗೆ ಓಗೊಟ್ಟು ಹತ್ತಾರು ಕಾಗೆಗಳು ಅಷ್ಟಲೋಕದಿಂದ ಆಗಮಿನಿಸಿ ಮನೆಯ ಮಾಳಿಗೆ ಮೇಲೆ ಕೂತು
"ತಾಯಿ, ಆದಿಶಕ್ತಿ ಪರಬ್ರಹ್ಮ ಸ್ವರೂಪಿಣಿ ಹೆದರಬೇಡ... ನಾವಿದ್ದೇವೆ" ಎಂಬ ಅರ್ಥ ಬರುವಂತೆ ಕಾಽ ಕಾಽ
ಎಂದ ಸಹಾಯ ಹಸ್ತ ಚಾಚತೊಡಗಿದವು.
ನಾವೂ ಪರೊಪಕಾರಾರ್ಥವಾಗಿ ಸದಾ ಸಿದ್ದವೆಂಬಂತೆ ಓಣಿಯ ಒಂದೆರಡು ಶ್ವಾನಕುಲ ಲಲನಾಮಣಿಗಳು ಅಂಗಳಕ್ಕೆ
ಆಗಮಿಸಿ ವಿಶಿಷ್ಟವಾದ ಸ್ವರ ತೆಗೆಯಲಾರಂಭಿಸಿದವು.
ಸೊಳ್ಳೆಗಳು; ನೊಣಗಳು ಮುಗಿಬಿದ್ದು ಅಪರೂಪದ ಸೇವೆ ಮಾಡಲಾರಂಭಿಸಿದ್ದವು.
ಯಾರು ಕರೆದರೋ ಎನೋ, ಇಂಗ್ಲಿಷ್ ವರ್ಣಮಲೆಯ ಝಡ್ ಅಕ್ಷರವನ್ನು ಅಕ್ಷರಶಃಹೋಲುವ ಚಿರಂಜೀವಿಯೂ; ಇಚ್ಚಾಮರಣಿಯೂ
ಆದ ಸದಾರೆವ್ವ ಬಾಯಲ್ಲಿದ್ದ ತೊಂಬುಲವನ್ನು ಹೆಜ್ಜೆ ಹೆಜ್ಜೆಗೆ ಒಂದೊಂದು ಬಂಡಿ ಉಗುಳುತ್ತ ಯವ್ವೋ...
ಆಲವ್ವೋ... ಮೇಲವ್ವೋ... ನಮ್ ವುಡಗ್ನೀಗೆ ಅದ್ಯಾವ ಗಾಳಿ ಬಡಕೊಂಡೈತಿ... ವಂದ್ ಕೈಯಿ ನೋಡ್ಕಂಬ್ತೀನಿ...
ಎಂದು ಬಂದಳು.
ಶಾಮು ಕಣ್ ತೆರುದು ನೊಡಿದ,
ಆಕೆ ಚಾಮುಂಡೇಶ್ವರಿಯೊ... ಜಲಜಾಕ್ಷಿಯೋ... ಒಂದು ಕ್ಷಣ ಅನುಮಾನಪಟ್ಟ. ಬಿಟ್ಟ ಕಣ್ ಬಿಟ್ಟಂತೆನೋಡ
ತೊಡಗಿದ, ಕಿರಿಚಲಿಕ್ಕೆ ಪ್ರಯತ್ನಿಸುರುವವನಂತೆ ಮುಖ ಮಾಡಿದ.
ಆಕೆ ಲಟ್ಟಿಗೆ ತೆಗೆದಳು. ಒಣಮೆಣಸಿನಕಾಯಿ; ಉಪ್ಪು; ಕಸಬರಿಕೆಯ ಚೂರು ನೀವಾಳಿಸಿ ತೆಗೆದಳು.
ಘಾಟಿಗೆ ಶಾಮು ಕೆಮ್ಮು ತೊಡಗಿದ.
ಕಣ್ಣು ಮೂಗಿನಿಂದ ಹಳ್ಳ ಹರಿಯತೊಡಗಿತು...
’ಯಾರು ಕೊಣ್ಣು ಬುಟ್ಟಿದ್ರೋ ಅವ್ರ ಕೋಣ್ ಸೇದಿವೋಗ’ ಎಂದು ಹಿಡಿಹಿಡಿ ಶಾಪ ಹಾಕಿದಳು. "ತಾಯಿ ಇನ್ನೊಂದು
ಜಾವತ್ಗೆ ನಿನ್ ಮೊಗ ಚಂಡು ಪುಟದಂತೆ ಪುಟೀತಾವೋಗ್ಲಿಲ್ಲಾ ನಾನು ಸಾವ್ಕಾರು ಉರುಕುಂದೆಪ್ಪನ ಸೂಳೆನೇ
ಅಲ್ಲ" ಎಂದು ಹೇಷಾರವ ಮಾಡಿ ತನ್ನ ಗಿರಿ ಮೊಮ್ಮಗ ಒಬ್ನೇ ಐತೇಮ್ತ ಹೋಗಿ ಬಿಟ್ಟಳು.
ಯಾರೋ ಹೋಗಿ ಸೌಂದರ್ಯಾತಿಶಯಕ್ಕೆ ಹೆಸರಾದ ಉರುಕುಂದೆಪ್ಪನನ್ನ ಕರೆ ತಂದರು. ಅವನು ಇಂಗ್ಲಿಷ್ ವರ್ಣಮಾಲೆಯ
’ಎಸ್’ ಅಕ್ಷರವನ್ನು ಅಕ್ಷರಶಃ ಹೋಲುತ್ತಿದ್ದವನು. ತೊಂಬತ್ತು ವಸಂತಗಳನ್ನು ಎಣಿಸಿ ಜೇಬಿನಲ್ಲಿಟ್ಟುಕೊಂಡಿರುವ
ಆತ ಆ ಕೇರಿಗೆಲ್ಲ ವೈದ್ಯಮಾರ್ತಾಂಡನೆಂದೇ ಹೆಸರಾಗಿದ್ದ. ಆತ ಮಾಡುತ್ತಿದ್ದ ವೈದ್ಯ ಎಂದರೆ ಬಳೆ ತುಂಡನ್ನು
ದೀಪದ ಕುದಿಗೆ ಹಿಡಿದು ಕಾಯಿಸಿ ರೋಗಿಯ ದೇಹದ ಅನುಕಟ್ಟಾದ ಭಾಗಕ್ಕೆ ಚುಟುಗಿ ಹಾಕುವುದು...
"ಅದೀ ಏನವ್ವಾ... ತಾಯಿ... ಅಲವ್ವಾ ಮೇಲವ್ವಾ... ನಮ್ ಕೇರಿಗೇ ಬೆಳ್ಳಿ ಚುಕ್ಕೆಯಂಗಿದ್ದ ಚಾಮಣ್ಗೆ
ಗಾಳಿ ಸವುಡು ಬಡಕಂಡೈತಂತೆ... ನೋಡೇ ಬುಡ್ತೀನಿ ತಡಿ ಅದ್ನ ಒಂದ್ ಕೈಯಿ..." ಎಮ್ದು ಚಾಮಾಶಾಸ್ತ್ರಿಯ
ಪಕ್ಕ ಕುಂತನು.
ಕಣ್ಣುಗಳನ್ನು ಹಾಗೇ ಮೇಲಿಂದ ಕೆಳಗಡೆ ಎರಡು ಸುತ್ತು ಹಾಯಿಸಿ ಮನಸ್ಸನ್ನು ಒಂದು ಹದಕ್ಕೆ ತಂದುಕೊಂಡನು.
ಮನದಲ್ಲಿ ಸುಂಕಲಮ್ಮ, ದುರುಗಮ್ಮ, ಚವುಡಮ್ಮ, ದ್ಯಾಮಮ್ಮ ಮೊದಲಾದ ಏಳುನೂರು ಎಂಬತ್ತೆರಡು ಇಚ್ಛಾನು
ದೇವತೆಗಳನ್ನು ನೆನೆದನು.
ಹಂಗೇ ಬಕ್ಕನಕ್ಕೆ ಕೈ ಇಟ್ಟನು. ಬಳೆ ಚೂರುಗಳು ಯಾವಾಗಲೂ ಬಕ್ಕಣದಲ್ಲಿ ಸ್ಟಾಕು. ಮುತ್ತೈದುಸಾವುಂಡವರ
ಬಳೆ ಚೂರುಗಳವು. ಅವುಗಳ ಪೈಕಿ ಒಂದು ಚೂರು ತೆಗೆದು ದೀಪದ ಬೆಳಕಿಗೆ ಹಿಡಿದು ನೋಡಲಾಗಿ ಅದು ಮದುವೆಯಾದ
ಎರಡನೇ ವರ್ಷದಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ಶಿವಪೂಜೆ ಕೊಟ್ರಗೌಡರ ಸೊಸೆ ಸುನಂದಮ್ಮಳ ಎಡಗೈಯ ಮೊದಲನೆಯ
ಬಳೆಯ ಚೂರದು.
ದೀಪದ ಕುಡಿಗಿಡಿದು ಅದರ ಮೊನೆ ಕಾಯಿಸಿದನು.
ಕಂದನು ಆಲಮ್ಮನ ತೊಡೆ ಮೇಲೆ ಜಲ... ಜಲ... ಮಲಿಕ್ಕಂಡಿತ್ತು. ಹಂಗೇ ಮಲಿಕ್ಕೊಂಡು ಈಸ್ಟ್ಮನ್ ಕಲರ್
ಕನಸು ಕಾಣುತ್ತಿದ್ದ ಚಾಮಣ್ಣನ ಕುತ್ತಿಗೆಯ ಹಿಂಭಾಗಕ್ಕೆ ಮೂರು ಸಾರಿ ಚುಟಿಕಿ ಹಾಕುತ್ತಲೇ... ಅದು
ದಿಗ್ಗನೆ ಎದ್ದು ಕೂತುಅಯ್ಯೋ ಅಯ್ಯೋ ಅಂತ ರುದ್ರ ಚಮಕ ಹೇಳತೊಡಗಿತು.
ಆ ಕಡೆಯಿಂದ ಈ ಕಡೆಗೆ ಓಡಿತು.
ಈ ಕಡೆಯಿಂದ ಆ ಕಡೆಗೆ ಓಡಿತು.
ಇಂಗ್ಲೀಷು ಸಂಸ್ಕೃತವೆಂಬೆರಡು ಕಾದ ಕೂರ್ದಸಿಗಳಿಂದಲೇ ಬರೆ ಎಳೆಯಲಾಯಿತೆಂದು ಬಗೆದು ಉರುಕುಂದೆಪ್ಪನ
ಕಡೆ ದುರುಗುಟ್ಟಿದನು... ಅಪರೂಪಕ್ಕೆ ದುರುಗುಟ್ಟಿ ನೋಡುವವರು ಮೂರ್ಛೆ ಬಂದು ಒರಗದೆ ಇರುವರೇನು?
ಜ್ಞಾನತಪ್ಪಿದ ತನ್ನ ಕರುಳಿನ ಕುಡಿಯನ್ನು ತನ್ನ ವಿಶಾಲವಾದ ತೊಡೆ ಮೇಲೆ ಹಾಕಿಕೊಂಡು ’ಅಯ್ಯೋ ಇನ್ನಾದರೂ
ಕಂದಯ್ಯ ಸರಿ ಹೋಗಲಿಲ್ಲವಲ್ಲಾ... ಯಾರಾದರೂ ಹೋಗಿ ನಮ್ಮ ಮಾವನವರಾದ ಇದರ ತಾತನವರನ್ನು ಕರೆತರಬಾರದೆ’
ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿರುವಾಗ...
...ಶಾಸ್ತ್ರಿಗಳಿಗೆ ನಿಲ್ಲಲು ಶಕ್ತಿ ಉಳಿದಿಲ್ಲ. ತಲೆಸುತ್ತು ಬಂದಂತಾಗುತ್ತಿದೆ. ತನ್ನ ಯೌವನದಲ್ಲಿ
ಗಂಡನನ್ನು ಕಳೆದುಕೊಂಡಾಕಿ; ಕಳೆದುಕೋಡು ಬಾಬ್ ಕಟ್ ಬಿಟ್ಟಾಕಿ; ಬಾಬ್ ಕಟ್ ಬಿಟ್ಟು ಅದರ ಮೇಲೊಂದು
ಮುಸುಕು ಎಳೆದುಕೊಂಡಾಕಿ ಪ್ರಧಾನಿ ಶ್ರೀಮತಿ ಇಮ್ದಿರಾ ಗಾಂಧಿ ಈಗ ಆ ಊರಲ್ಲಿ ಇಳಿದು ಭಾಷಣ ಮಾಡಿದಳು.
ಆಗ ಆ ಊರಲ್ಲಿಳಿದು ಮಾಡಿದಳು ಭಾಷಣ.
"ಭವ್ಯ ಭಾರತದ ಪ್ರಜೆಗಳೇ, ಈ ದೇಶವನ್ನು ಅಪತ್ತಿನಿಂದ ರಕ್ಷಿಸಲೆಂದೇ ಆ ಭಗವಂತನು ಕಳಿಸಿಕೊಟ್ಟಿರುವ
ಪ್ರಿಯದರ್ಶಿನಿಯವರು ಇನ್ನು ಕೆಲವೇ ನಿಮಿಷಗಳಲ್ಲಿ ಆಗಮಿಸಲಿದ್ದಾರೆ. ನಿಮ್ಮ ದುಃಖ ಪರಿಹರಿಸಲಿದ್ದಾರೆ.
ಬಡತನವನ್ನು ಓಡಿಸಲಿದ್ದಾರೆ. ಶಾಂತಚಿತ್ತರಾಗಿ ಸಹಕರಿಸಿ...
ಬೋಲೋ ಭಾರತ್..."ಒಂದೆರಡು ನೀಲಿ ಬಣ್ಣದ ವ್ಯಾನುಗಳು ಸುಂಯ್ ಅಂತ ಬಂದವು. ಎಲ್ಲರೂ ಗಬ್ಚಿಪ್... ವ್ಯಾನೊಂದು
ಶಾಸ್ತ್ರಿಗಳ ಎದುರಿಗೆ ಢರ್ಡಸಕ್ಕೆಂದು ಡೇಗಿ ನಿಂತುಕೊಂಡಿತು.ಅದರಿಂದ ಮಿಂಚಿನಂತೆ ಒಬ್ಬ ನೆಗದ; ಶಾಸ್ತ್ರಿಗಳು
ನಖಶಿಖಾಂತ ದಿಟ್ಟಿಸಿದ. ಅವರ ದೇಹದ ಮಾಂಸ ಖಂಡಗಳ ಆಕುಂಚನ, ಏಕಸನ ಅಳೆದ. ಹಲ್ಲು ಕಡಿದ.
"ಬುಡ್ಡಾ... ಕ್ಯಾ ಹೈ ನಾಮ್ ತೇರಾ? ಇನ್ ಮೆ ಕ್ಯಾ ಹೈ..."ಢಾಂ ಢೂಂ ಅಂತ ಪ್ರಶ್ನೆ ಕೇಳಿದ.
ಶಾಸ್ತ್ರಿಗಳಿಗೆ ಏನು ಹೇಳಬೇಕೋ ತೋಚಲಿಲ್ಲ ಬ್ಯಾ... ಬ್ಯಾ ಅಂದರು. ಛಡೋ ವ್ಯಾನ್ ಛಡೊ ಛಡೋರೇ ಬುಡ್ಡಾ...
" ಎಂದದ್ದೇ ಒಂದಿಬ್ಬರು ಶಾಸ್ತ್ರಿಗಳ ರೆಟ್ಟೆಗೆ ಕೈ ಹಚ್ಚಿ ವ್ಯಾನಿಗೆ ತಳ್ಳಿಬಿಟ್ಟರು.
ವ್ಯಾನ್ ಬುಸ್ ಅಂಥ ಓಡಿತು. ಠಾಣೆ ಮುಂದೆ ನಿಂತು ಕೊಂಡಿತು. ಅದರಿಂದ ಶಾಸ್ತ್ರಿಗಳನ್ನು ಇಳಿಸಿ ಠಾಣೆಗೆ
ಕರೆದೊಯ್ದರು. ನಿನ್ನೆಯಿಂದ ಅವರಿಗೊಂದು ಸುಳುವು ಸಿಕ್ಕಿತ್ತು. ಇಷ್ಟು ವಯಸ್ಸಾಗಿರೋ; ಹೀಗಿರೋ ಇಂಥ
ವ್ಯಕ್ತಿಯಿಂದ ಪ್ರಧಾನಿಗಳ ಪ್ರಾಣಕ್ಕೆ ಅಪಾಯ ಇದೇ ಅಂಥ.
ಶಾಸ್ತ್ರಿಗಳು ಅದೇ ರೀತಿ ಹೋಲುತ್ತಿದ್ದರು. ಅವರ ಕಂಕುಳಲ್ಲಿ ಕಿಮುಟು ಬಟ್ಟೆಯೊಳಗಿದ್ದ ಪಂಚಾಂಗದ ಗಂಟು
ಆ ಮಹಾನ್ ಅಂಗರಕ್ಷಕರ ಅನುಮಾನವನ್ನು ಮತ್ತಷ್ಟು ದೃಢಗೊಳಿಸಿತ್ತು.
"ಅರೆ ಭಾಂಛೋದ್" ಒಬ್ಬ ಲಾಠಿಯಿಂದ ಶಾಸ್ತ್ರಿಗಳ ಜಘನಕ್ಕೊಂದು ಏಟು ಬಿಟ್ಟ.
ಅವರು ಅಂಥದೊಂದು ಏಟನ್ನು ಎಂದೂ ನಿರೀಕ್ಷಿಸಿದವರಲ್ಲ.
ಅಸು ನೀಗುವುದೇ ಮೇಲೆಂದೆನಿಸಿತು.
ದುಃಖ ಮತ್ತು ಕೋಪ ಒನ್ ಇಷ್ಟು ಟೆನ್ ಪ್ರಮಾಣದಲ್ಲಿ ವ್ಯಕ್ತಗೊಂಡವು.
" ನಮ್ಮನ್ನು ಯಾರೂಂತ ತಿಳಿಕೊಂಡಿದ್ದೀರಿ, ನಾವು ಪ್ರಕಾಂಡ ವಿದ್ವಾಂಸ... " ಇನ್ನು ಅವರ ಬಾಯಿಂದ ಮಾತು
ಪೂರ್ಣ ಹೊರ ಬಿದ್ದಿರಲಿಲ್ಲ.
ಅಷ್ಟರಲ್ಲಿ ಮತ್ತೊಂದು ಏಟು ಬಿತ್ತು.
"ವಿಧ್ವಂಸ್ ಕಾರ್ಯ ಕರ್ತಾಕ್ಯಾ... "
ಮಗದೊಂದು ಏಟು ಬಿತ್ತು.
ಶಾಸ್ತ್ರಿಗಳಿಗೆ ಭೂಮಿ ಬಾಯಿ ಬಾಯ್ತೆರೆದು ತಮ್ಮನ್ನು ನುಂಗಿಬಿಡಬಾರದೆ ಎಂದೆನಿಸಿತು.
" ರೇ ಬುಡ್ಡಾ ಆದ್ಮಿಽಽ... ಇಸ್ಮೇ ಆರ್ ಡಿ ಎಕ್ಸ್... ಏಕೆ ಫಾರ್ಟಿಸೆವೆನ್... ಬಾಂಬ್ವಗೈರಾ...ಕ್ಯಾ
ಕ್ಯಾ ಛುಪಾಹೈ" ಒಬ್ಬ ಲಾಠಿಯಿಂದ ಶಾಸ್ತ್ರಿಗಳ ಕಂಕುಳನ್ನು ಜೋರಾಗಿ ತಿವಿದ.
ಕುಂಡಲಿನೀ ಶಕ್ತಿ ಆಪೋಶನ ತೆಗೆದುಕೊಳ್ಳೂವಂಥ ನೋವಾಯಿತು.
"ಏನ್ರಪಾ... ನೀವು ಏನು ಹೇಳ್ತಿದೀರೋ... ಏನು ಮಾಡ್ತಿದೀರೋ; ನಮ್ಗೆ ಏಕೆ ಚಿತ್ರ ಹಿಂಸೆ ನೀಡುತ್ತಿರುವಿರೋ...
ನಮಗೋಂದು ಅರ್ಥ ಆಗ್ತಾಇಲ್ಲ...ನಮ್ಮಂಥ ಜ್ಞಾನಿಗಲು ಕೈ ಮುಗಿದು ಕೇಳಿಕೊಂಡರೆ ನಿಮಗೆ ಶೇಯಸ್ ಅಲ್ಲ..."
ಅಂಥ ಅವರು ಹೇಳಿಕೊಳ್ಳುತ್ತಿದ್ದುದನ್ನು ಆ ಅಂಗರಕ್ಷಕರು ಅರ್ಥ ಮಾಡಿಕೊಂಡಿದ್ದೇ ಬೇರೆ ರೀತಿಯಲ್ಲಿ...
ಪ್ರಧಾನಿ ಪದವಿಯಿಂದ ಇಂದಿರಾಜಿಯವರನ್ನು ಉರುಳಿಸಲು ಸಿಂಡಿಕೇಟ್ನವರು ಈ ಮುದುಕನ ಮೂಲಕ ಸಂಚು ಮಾಡಿವರೆಂದೂ;
ಅದರ ಬಗ್ಗೆ ವಿವರ ನೀಡುತ್ತಿರುವನೆಂದೂ ಬಗೆದರು...
ಅದರಲ್ಲೊಬ್ಬ " ಹ್ಹಾ... ಐಸಾ... ನಿಜಲಿಂಗಪ್ಪಾಜಿ ಕೇ ಬಾರೆ... ಮೆ ಔರ್ ಕುಚ್... ಸಂಜೀವರೆಡ್ಡಿ
ಕೇ ಬಾರೆ ಮೆ ಔರ್ ಥೋಡಾ... ಎಂದು ಶಾಸ್ತ್ರಿಗಳನ್ನು ಮಾತಿನಿಂದ ಚಿಂದಿ ಮಾಡತೊಡಗಿದ.
ಮತ್ತೊಬ್ಬ ಅವರ ಕುಂಕುಳಕ್ಕೆ ಕೈ ಹಚ್ಚಿ ಜಗ್ಗಿದ.
ಗಂಟು ಕಿತ್ತು ಹೊರ ಬಂದು ಬಿತ್ತು. ಅದು ನೆಲಕ್ಕೆ ಬಿದ್ದದ್ದರಲ್ಲಿ ಜಗ್ಗಿದವರ ತಲೆ ಸಹಸ್ರ ಹೋಳಾಗುದೆಂದು
ಎಚ್ಚರಗೊಂಡ ಒಂಬ್ಬ ಗಬಕ್ಕನೆ ಕೈಗೆ ಎತ್ತಿಕೊಂಡ... ಅದರೊಳಗಿನ ಒಂದೊಂದು ವಸ್ತು ಎಲ್ಲಿ ಸ್ಪೋಟಿಸಿ
ಬಿಡುವವೋ ಎಂಬ ಆತಂಕದಿಂದ ಬಿಚ್ಚಿದ.
ಆಶ್ಚರ್ಯ!
ಅತ್ಯಾಶ್ಚರ್ಯ!
ಪರಮಾಶ್ಚರ್ಯ!
ಒಂದೂ ಮಾರಕಾಯುಧಗಳಿಲ್ಲವಲ್ಲ.!!
ಅವುಗಳ ಬದಲಾಗಿ ನುಜ್ಜು ಗುಜ್ಜಾಗಿರುವ ಪುಸ್ತಕಗಳು...
ಇವುಗಳಲ್ಲಿ ಎಂಥದೋ ನಿಗೂಢ ಸಂಚು ಅಡಗಿಸಿಟ್ಟಿರುವಂತಿದೆ ಈ ಬುಡ್ಡ ಎಂದು ಊಹಿಸಿದವರಾದ ಆ ದೈತ್ಯರು
ಶಾಸ್ತ್ರಿಗಳ ದೇಹದ ಹಸಿ ಮಾಂಸ ಭಕ್ಷಿಸಿ ಮುಕ್ತಿಗೆ ಪಾತ್ರರಾಗಬೇಕೆಂದು ಒಂದೊಂದೆ ಹೆಜ್ಜೆ ಮುಂದಿಡಿತ್ತ
ಬಂದರು.
"ಸಚ್ ಭೋಲೋ, ಸಚ್ ಭೋಲೋ," ಎನ್ನ ತೊಡಗಿದರು.
ಇನ್ನೇನು ಇವರು ನನ್ನನ್ನು ಅಕಾಲ ದುರ್ಮರಣಕ್ಕೆ ತುತ್ತು ಮಾಡುತ್ತಾರೆಂದು ಹೌಹಾರಿ ಶಾಸ್ತ್ರಿಗಳು...
ಅಪ್ಪಾಜಿ......... ಶಾಮಾಶಾಸ್ತ್ರೀಽಽಽ... ಎಂದು ಜೋರಾಗಿ ಕೂಗಿ ಬಿಡಲು...
ಶಾಮಾಶಾಸ್ತ್ರಿ ಈಗೀಗ ಪ್ರಜ್ಞೆ ಕಳೆದುಕೊಳ್ಳುವುದಾಗಲೀ; ಜಾಗ್ರತಾವಸ್ಥೆಯಲ್ಲಿ ಎಲ್ಲರನ್ನು ಆಕೆಯೇ
ಎಂದು ಪರಪಾಟು ಬೀಳುವುದಾಗಲಿ ಇಲ್ಲ.
ಅದೇ ತಾನೆ ಎದ್ದು ಹಾಸಿಗೆಯಲ್ಲಿ ಕೂತಿದ್ದಾನೆ.
ತಾನು ಕವಿಯಾಗುವುದೋ? ಕಥೆಗಾರನಾಗುವುದೋ? ಕಾದಂಬರಿಕಾರನಾಗುವುದೋ? ಎಂಬಂಥ ಕನಸು ಕಾಣುತ್ತಿದ್ದಾನೆ.
ಮಹಾನ್ ಸಾಹಿತಿ ಥರ ಮುಖ ಮಾಡಿಕೊಂಡಿದ್ದಾನೆ. ವಸ್ತುಗಳೊಳಗೆ ಜೀವ ಹುಡುಕುತ್ತಾನೆ. ಜೀವಿಗಳೊಳಗೆ ವಸ್ತು
ಹುಡುಕುತ್ತಾನೆ, ಜೀವಿ ಮತ್ತು ವಸ್ತು ಬೇರಲ್ಲ ಕಾಣಿಭೋ? ಜೀವಿ ಎಂದರೆ ವಸ್ತು. ವಸ್ತುವೆಂದರೆ ಜೀವ...
ಜೀವವೆಂದರೆ ಸ್ವರ್ಗ, ವಸ್ತು ಎಂದರೆ ನರಕಽಽಽ...
ಹೀಗೆ ಅವನಿಗೆ ಹೊಳೆದದ್ದು ಒಂದೇ ಎರಡೇ,
ತಾನುಕಂಡ ಅನುಭವದಲ್ಲಿ ಏನೋ ಇದೆ ಎಂದುಕೊಂಡ.
ತನ್ನನ್ನು ಮುಗಿಸಲು ಬಂದಿದ್ದ ಜಲಜಾಕ್ಷಿ ತನ್ನ ಕುತ್ತಿಗೆಗೆ ಕೈ ಹಚ್ಚುವ ಬದಲು ಟೊಂಕದ ಕೆಳಗಡೆ ಕೈ
ಹಚ್ಚಿದ್ದಾದರೂ ಯಾಕೆ? ಎದೆಗೆ ಮೊಲೆ ಹಚ್ಚಿದಳು, ತಿಕ್ಕಿದಳು. ಬಲವಾಗಿ ಅಪ್ಪಿದಳು, ಆ ಘರ್ಷಣೆಗೆ ಎದೆ
ಮೇಲಿದ್ದ ರಾಮಮುದ್ರೆ ಬೆವರಿನ ಸೆಳೆವಿಗೆ ಸಿಕ್ಕು ಹರಿದು ಹೋಯಿತು. ಕಣ್ಣುಗಳಿಂದ ಬೆಂಕಿ ಉಂಡೆ ಉಗುಳುತ್ತ
ಬಾಯಿಯನ್ನು ಮೂಗೆಗೆ ಹಾಕಿ ಬಿಟ್ಟಳು. ತಪ್ಪಿಸಿಕೊಂಡ ಸರಿ, ಇಲ್ಲೆಂದರೆ ಶಾಸ್ತ್ರಿಯ ಮೂಗು ಜಲಜಳ ದವಡೆಯಲ್ಲಿರುತ್ತಿತ್ತು.
ಜಜಳ ಆಕ್ರಮಣಕ್ಕೆ ಮತ್ತೊಮ್ಮೆ ತುತ್ತಾಗಬೇಕು
ಸೌಂದರ್ಯ ಲಹರಿ ಹೇಳಿಕೊಡೂಂತ ತಾತನವರನ್ನು ಕೇಳಿಕೊಳ್ಳಬೇಕು!
ತಾನಿಲ್ಲಿ ಇಷ್ಟು ಸಂಕಟಪಡುತ್ತ ನರಳಾಡುತ್ತಿದ್ದರೂ ಮುಖ ತೋರಿಸದೆ ಎಲ್ಲಿ ಮುಖ
ಮರೆಸಿಕೊಂದಿರಬಹುದೀ ತಾತ?
’ತಾತಾಽಽ’ ದುಃಖ ಒತ್ತರಿಸಿ ಬಂದು ಕೂಗಿದ...
ಈ ಮರಣಾಂತಕ ಸನ್ನಿವೇಶದಿಂದ ರಕ್ಷಿಸಲು ಅವತರಿಸಬಾರದೇ ವಿಷ್ಣು ಪರಮಾತ್ಮ ದ್ರೌಪದಿಯ ಮಾನರಕ್ಷಣೆ ಮಾಡಿದ
ಪರಮಾತ್ಮನೇ ನನ್ನ ಪ್ರಾಣ ಕಾಪಾಡುವುದು ಕಷ್ಟವೇನು?... "ಭಕ್ತಿಪೂರ್ವಕವಾಗಿ ನಿವೇದಿಸಕೊಳ್ಳತೊಗಿದರು
ಶಾಸ್ತ್ರಿಗಳು.
ಅವರಾಡುತ್ತಿದ್ದ ಮಾತುಗಳು ಅಂಗರಕ್ಷಕರಿಗೆ ಬೇರೆ ಬೇರೆ ಅರ್ಥ ಸ್ಪುರಿಸ ತೊಡಗಿದವು. ಪ್ರಧಾನಿ ವಿರುದ್ದ
ನಡೆಯಬಹುದಾದ ಸಂಚಿನೊಳಗೆ ಮೂಸಾಳ್, ಗಜೇಂದ್ರ, ವಿಷ್ಣು ಅಗರ್ವಾಲ್ ಮುಂತಾದವರ ಬಗ್ಗೆ ಗೂಡಚಾರಿಗಳು
ವಿವರ ಸಂಗ್ರಹಿಸಿ ಕಳಿಸಿದ್ದರು.
"ಬತಾವ್ರೇ ಬುಡ್ಡಾ... ಮುಸಾಳ್, ಗಜೇಂದ್ರ. ವಿಷ್ಣು... ಕಹಾ ಕಹಾ ಹೈ... ಬತಾವ್?" ಬತ್ತಳಿಕೆಯಿಂದ
ಲಾಠಿ ಹಿರಿದು ಧಾಳಿ ನಡೆಸಲು ನಿರ್ಧರಿಸಿದರು.
ಆದೌ ಪಿತೌ ಮಾತಾ ಸಾಪತ್ನೀ ಜನನೀ ತಥಾ...
ಕೋಡ್ ಲಾಂಗ್ವೇಜ್ನಲ್ಲಿ ಎನೇನೋ ಮೆಸ್ಸೇಜ್ ಕೊಡ್ತಿದ್ದಾನೀ ಮುದುಕ ಎಂದುಕೊಂಡರು.
ಈ ಓಲ್ಡ್ ಈಜ್ ಗೋಲ್ದ್ ನಮಗೆಲ್ಲಾ ಹೆದರೋದಿಲ್ಲ. ಇದನ್ನು ಕೂಡಲೆ ದಿಲ್ಲಿಯ ಬ್ಲಾಕ್ ಕ್ಯಾಟ್ ಕಮ್ಯಾಂಡೋಸ್
ಹೆಡ್ ಕ್ವಾಟ್ರೆರ್ಸ್ಗೆ ಕಳುಹಿಸಬೇಕೆಂದು ನಿಶ್ಚಯಿಸಿದರು. ಪ್ರಧಾನ ಮಂತ್ರಿಗಳು ಬಂದು ಹೋಗುವವರೆಗೆ
ತೆಪ್ಪಗೆ ಬಿದ್ದರಬೇಕಾದರೆ ಕ್ಲೋರೋಫಾರಂ ಕೊಡುವುದು ಒಳ್ಳೆಯದೆಂದು ನಿರ್ಧರಿಸಿಕೊಂಡರು.
ಅವರು ಇನ್ನೇನು ಶಾಸ್ತ್ರಿಗಳ ನೀಳ ನಾಸಿಕಕ್ಕೆ ಕ್ಲೋರೋಫಾರಂ ಇಡಬೇಕು ಅಷ್ಟರಲ್ಲಿ ಆ ನರಕದ ಬಾಗಿಲು
ತೆರೆಯಿತು.
ಯಾರೋ ಸಿಂಡಿಕೇಟ್ನ ಭಯೋತ್ಪಾದಕ ದೊರಕಿರುವನಂತೆ, ಈಗ್ಲೇ ಹೈದರಾಬಾದ್ ಗೋಲಿಯ ರುಚಿ ತೋರಿಸ್ತೀನಿ ಎಂದು
ಆರ್ಭಟಿಸುತ್ತಾ ಆ ಠಾಣೆಯ ಮುಖ್ಯಸ್ಥ ಕರುಣಕರ ಒಳ ನುಗ್ಗಿದ.
ಒಂದೊಂದು ಹೆಜ್ಜೆಗೆ ಒಂದೊಂದು ಆಯುಧ ಬಿಚ್ಚಿಕೊಳ್ಳುತ್ತ ನಡೆದ ಅವನಿನ್ನೇನು ಬೆಲ್ಟ್ನಿಂದ ಏಟು ಕೊಡಬೇಕು.
ಅಷ್ಟರಲ್ಲಿ -
"ಕರುಣಾಕರ ನಾವು ಕಣೋ ಪರಮೇಶ್ವರ ಶಾಸ್ತ್ರಿಗಳು, ನಿನ್ನನ್ನು ನಿನ್ನ ತಾಯಿ ಗರ್ಭದಿಂದ ಬದುಕಿಸಿಕೊಟ್ಟವರು..."
ಎಂದು ಪ್ರಾಣವನ್ನು ಗಂಟಲಿಗೆ ತಂದುಕೊಂಡು ನುಡಿದರು.
ಕರುಣಾಕರನಿಗೆ ದಿಗ್ಭ್ರಮೆ, ದೂರಕ್ಕೆ ಬೆಲ್ಟ್ ಎಸೆಯುತ್ತಾನೆ. ಮುಖ ಜಲಜಲ ಬೆವರುತ್ತಿದೆ ಬೇರ್ಗೊಯ್ದು
ಬಿಸುಟ ಎಳೆಯ ಬಳ್ಳಿಯಂತೆ ಶಾಸ್ತ್ರಿಗಳ ಪಾದದ ಮೇಲೆ ಬೀಳುತ್ತಾನೆ.
ಶಾಸ್ತ್ರಿಗಳು ಅನಾಥ ರಕ್ಷಕ ಎಂದು ಅವನನ್ನು ಅಪ್ಪಿಕೊಳ್ಳುತ್ತಾರೆ.
ಅಂಗರಕ್ಷಕರಿಗೆ ಅವರ ತಪ್ಪಿನ ಅರಿವಾಗುತ್ತದೆ. ಅವರೂ ಕ್ಷಮೆ ಕೇಳಿಕೊಳ್ಳುತ್ತಾರೆ. ಪೋಲೀಸ್ ವ್ಯಾನಿನಲ್ಲಿ
ಮನೆಗೆ ಮರುಳಲು ಹಿರಿಯರು ಹಿಂಜರಿಯುತ್ತಾರೆ. ಅಷ್ಟರಲ್ಲಿ ಅಂಗಳದಲ್ಲಿ ರಿಕ್ಷಾ ಬಂದು ನಿಲ್ಲುತ್ತದೆ.
"ಹರಳೆಣ್ಣೆ ಹಚ್ಚಿಕೊಂಡು ಮೈಗೆ ಬಿಸಿನೀರು ಹಾಕಿಕೊಂಡು, ಹೊಟ್ಟೆ ತುಂಬ ಪ್ರಸಾದ ಸ್ವೀಕರಿಸಿ, ಮಲಗಿ
ಬಿಡಿ ಒಳ್ಳೆಯ ನಿದ್ದೆ ಬರುತ್ತದೆ" ಎಂದು ಕರುಣಾಕರ ಸಲಹೆ ನೀಡುತ್ತ ಶಾಸ್ತ್ರಿಗಳನ್ನು ರಿಕ್ಷಾದಲ್ಲಿ
ಕೂಳ್ಳರಿಸುತ್ತಾನೆ.
ರಿಕ್ಷಾ ಚಲಿಸುತ್ತದೆ.
"ಅಪ್ಪಾ ಶಾಮಾ..." ಚಲಿಸುತ್ತಿರುವ ರಿಕ್ಷಾದಲ್ಲಿ ಶಾಸ್ತ್ರಿಗಳು ಮುಲುಕುತ್ತಿರುವಾಗ...
ಶಾಮಾ ಶಾಸ್ತ್ರಿ ಅದೇ ತಾನೆ ಸ್ನಾನ ಮುಗಿಸಿದ.
ಅದೇ ಕೆಲವು ಕ್ಷಣಗಳ ಹಿಂದೆ ಅಲುಮೇಲಮ್ಮ ರಜಸ್ವಲೆಯಾಗಿ ಮುಂಬಾಗಿಲಿಗೆ ಮೂರು ಮಾರು ದೂರದಲ್ಲಿ ಕೂತಿದಾಳೆ.
ಕೂತಲ್ಲಿಂದಲ್ಲಿಂದಲೇ ಮಗನ ನಿತ್ಯಕರ್ಮಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಿದ್ದಾಳೆ.
ಅದು ಅಲ್ಲಿದೆ ನೋಡು ಇದು ಇಲ್ಲಿದೆ ನೋಡು
ಇದನ್ನು ಅಷ್ಟು ಹಾಕು, ಅದನ್ನು ಇಷ್ಟು ಹಾಕು
ವೇದ ಪ್ರಮಾಣ ಪಡೆದಿರುವ ತಾಯಿ ಎಂದರೆ ಅವನಿಗೆ ಅತುಲ ಭಕ್ತಿ. ತಾಯಿಯ ನೆರಳೇ ಅವನು. ಅವನೇ ಆಕೆಯ ಹೃದಯಮಿಡಿತ.
ಸ್ನಾನ ಮಾಡುವಾಗ ಅವನು ಆಕೆಯ ಬೆನ್ನು ಉಜ್ಜಬೇಕು, ಆಕೆ ಊಟ ಮಾಡುವಾಗ ತಟ್ಟೆಯಲ್ಲಿ ಜೊತೆಗೆ ಉಟ ಮಾಡಬೆಕು,
ಆಕೆಯ ಜೊತೆಗೇ ಮಲಗಬೇಕು, ತನ್ನ ಒಂದು ಕಾಲನ್ನು ತಾಯಿಯ ಮೆಲೆ ಹಾಕಿರಬೇಕು. ಇವಿಷ್ಟರಲ್ಲಿ ಒಂದು ಹೆಚ್ಚು
ಕಡಿಮೆಯಾದರೂ ಆಕೆ ಸಹಿಸಲಾರಳು. ಯಾಕೋ ಶಾಮೂ ನನ್ನ ಮೆಲೆ ಪ್ರೀತಿ ಕಡಿಮೆ ಮಾಡಿದೆಯಲ್ಲೋ ಎಂದು ಕಣ್ಣಲ್ಲಿ
ನೀರು ತಂದುಕೊಂಡು ಬಿಡುವಳು.
ತಾಯಿಯ ಕಣ್ಣಿಂದ ಒಂದು ಹನಿ ನೆಲಕ್ಕುರುಳುವುದನ್ನು ಅವನು ಸಹಿಸುವುದಿಲ್ಲ. ಹಾಗೇನಾದರೂ ಉರುಳಿದರೆ
ನೆಲ ಬರಡಾದೀತು. ಆ ಮನೆ ಮಠವಾದೀತು.. ಆದ್ದರಿಂದ ಆ ಸುಪುತ್ರ ತನ್ನ ತಾಯಿಯ ಇಚ್ಛೆಗೆ ಎಂದೂ ವಿರುದ್ಧ
ನಡೆಯಲಾರ. ಆಕೆಯನ್ನು ಸದಾ ಸಂತೋಷದಿಂದ ಇಡಲು ಪ್ರಯತ್ನಿಸುತ್ತಾನೆ.
ದೂರದಿಂದ ಆಕೆ ನೀಡಿದ ಮಾರ್ಗದರ್ಶನದಲ್ಲಿ ಅಡುಗೆ ಮನೆಯನ್ನು ಶುಚಿಗೊಳಿಸಿದ. ಮುಸುರೆ ಪಾತ್ರೆಯನ್ನು
ತಿಕ್ಕಿ ತೊಳೆದ, ಆಯಾ ಪ್ರಮಾಣದಲ್ಲಿ ದವಸ ಧಾನ್ಯ ಉಪಯೋಗಿಸಿ ಅಡುಗೆ ಮಾಡಿದ.
ಹುಳಿಯ ಪರಿಮಳ ನಾಲ್ದೆಸೆಗೆ ಹಬ್ಬಿತು. ಕೇರಿಯ ಜನರೆಲ್ಲ ಪರಿಮಳ ಆಸ್ವಾದಿಸಿದರು. ಅದೇ ತಾನೆ ನಿಂಬೆ
ಹಣ್ಣು ಗಾತ್ರದಷ್ಟು ಮೊಲೆ ಮೂಡಿದ್ದ ಅನಸೂಯ ಹಿತ್ತಲಿಗೆ ಬಂದಳು. ಕಿಟಕಿಯಲ್ಲಿ ಶಾಮನ ಕಡೆ ನೋಡಿದಳು.
ಶಾಮೂನ ಕಡೆ ಕಣ್ಣಗಲಿಸಿ ನೋಡುತ್ತಿದ್ದಾನೆ. ಆಕೆ ಅವನ ಸಹಪಾಠಿ. ಅವನ ಕಡೆ ಊಟಾ ಆಯ್ತಾ ಎಂಬಂತೆ ಸಂಜ್ಞೆ
ಮಾಡಿದಳು. ಸ್ನಾನ ಆಯ್ತಾ ಎಂಬಂತೆ ಅರ್ಥ ಮಾಡಿಕೊಂಡ ತಲೆ ಅಲ್ಲಾಡಿಸಿದ, ಆಕೆಯ ಎದೆ ಮೇಲಿಂದ ಸೆರಗು
ಜಾರಿತು. ಕಣ್ಣು ಕೋರೈಸಿದವು. ಎರಡು ಪುಟ್ಟ ಮೊಲೆಗಳು, ಅವುಗಳ ದರುಶನ ಮಾಡಿಸಲಿರುವೆನೆಂಬಂತೆ ನೋಡಿದಳು.
ಕುಬುಸದ ಗುಂಡಿಗೆ ಕೈ ಹಚ್ಚಿದಳು. ಒಂದು ಬಂತು, ಎರಡು ಬಂತು, ಮೂರನೆಯದು ಎಷ್ಟು ಪ್ರಯತ್ನಿಸಿದರೂ ಬರಲಿಲ್ಲ.
ಬಿಚ್ಚು ಬಾ ಎಂಬಂತೆ ಸಂಜ್ಞೆ ಮಾಡಿದಳು ಅರ್ಧ ಬೆತ್ತಲೆ ಗೊಂಡಿರುವ ಚಿನ್ನದ ಮೊಲೆಗಳ ಅರ್ಧ ಭಾಗ ಸೂರ್ಯನ
ಬೆಳ್ಳಿ ಬೆಳಕಿನಲ್ಲಿ ಥಳಥಳ ಹೊಳೆದವು.
ಪಂಚೇಂದ್ರಿಯಗಳು ಬಚ್ಚಲ ಮೋರಿಗೆ ಪುತಪುತನೆ ಉದುರಿದವು. ಅವುಗಳನ್ನು ಬಗೆಯಿಂದ ಆಯ್ದುಕೊಂಡ. ಆಯಾ ಜಾಗದಲ್ಲಿ
ಅವುಗಳನ್ನು ಅಂಟಿಸಿಕೊಂಡ, ತಾಯಿ ಕೂಗಿದಳು. ಹೊರಗೆ ಓಡಿದ.
ತಾಯಿಯ ಬೋಳು ತಲೆ ತುರಿಸಿದ. ಆಕೆಯ ಅಪೇಕ್ಷೆಯಂತೆ ತೊಡೆಮೇಲೆ ತಲೆ ಇಟ್ಟು ಮಲಗಿದ, ಆಕೆಯ ಮುದ್ದು ಕೊಟ್ಟ,
ಕಷಾಯ ಕೇಳಿದಳು. ಅಡುಗೆ ಮನೆಗೆ ಹೋಗಿ ಮಾಡಿ ತಂದ. ಆಕೆ ಕುಡಿಯುತ್ತಿರುವ...
"ರ್ರೀ ಯಾರಿದ್ದೀರಿ ಒಳಗಡೆ..." ಧ್ವನಿ ಕೇಳಿಸಿತು ಹೊರಗಡೆ. ಕೋಗಿಲೆಯಂಥ ದ್ವನಿ ಹೋಗಿ ನೋಡಿದ.
ಅರೆ : ಪಕ್ಕದ ಮನೆಯ ಅನಸೂಯ, ನಾಗರಹಾವುಗಳಂತೆ ಎರಡು ಜಡೆಗಳು... ಫುಳಫಳ ಹೊಳೆಯುತ್ತಿರುವ ಕಣ್ಣುಗಳು...
ಒದ್ದೆಗೊಂಡಿರುವ ದುಪ್ಪನೆ ತಿಟಿಗಳು.
ಆಕೆಯೇ ತಲಬಾಗಿಲು ಪ್ರವೇಶಿಸಿದಳು. ತೂಗು ಮಂಚದ ಮೇಲೆ ಕುಳಿತು ಕೊಂಡಳು. ಗ್ರಾಮರ್ ಪುಸ್ತಕ ತಂದೀನಿ...
ಎಂದು ಕೊಟ್ಟಳು... ತನಗೂ ಯಾವುದೋ ಒಂದು ಪುಸ್ತಕ ಪಡೆದುಕೊಂಡಳು. ಹೋಗುವಾಗ ಜಡೆಯ ಚುಂಗಿನಿಂದ ಅವನ
ಮುಖಕ್ಕೆ ಸ್ಪರ್ಶಿಸಿದಳು... ಅವನು ನೀರುನೀರಾಗಿಬಿಟ್ಟ.
ಅವನ ತಾಯಿಯ ಜೊತೆ ಸ್ವಲ್ಪ ಮಾತಾಡಿ ಹೊರಡುವಾಗ ಶಾಮನ ಕಡೆ ನೋಡಿ ಕಣ್ಣು ಮಿಟಿಕಿಸುವುದನ್ನು ಮರೆಯಲಿಲ್ಲ...
ಕೋಣೆಯಲ್ಲಿ ಆಕೆ ಕೊಟ್ಟಿದ್ದ ಗ್ರಾಮರ್ ಎನ್ನಲಾದ ಪುಸ್ತಕ ತೆರೆದ. ಒಳಗಡೆ ಒಂದು ಸುಧೀರ್ಘ ಪ್ರಣಯಪತ್ರ...
ಅಕ್ಕರೆಯ ಶಾಮುಗೆ
ಸಕ್ಕರೆಯ ಸಿಹಿ ಮಾತು
ಹೀಗೆ ಆರಂಭಗೊಂದಿತ್ತು. ಜಲಜಾಕ್ಷಿ ಎಂಬ ಶೂರ್ಪನಖಿ ಗ್ರವ್ಂಡಿನಲ್ಲಿ ತನ್ನನ್ನು ರೇಪ್ ಮಾಡಲು ಪ್ರಯಿತ್ನಿಸಿದ್ದರ
ಬಗ್ಗೆ; ಅವಳು ಜಾರಿರುವ ಅನೇಕ ಸಂಬಂದಗಳ ಬಗ್ಗೆ; ನಿಷ್ಕಲ್ಮಷವಾಗಿ ಪ್ರೀತಿಸುತ್ತಿರುವ ತನ್ನ ಬಗ್ಗೆ;
ಜೊತೆಗೆ ಪ್ರೇಮ ಉಂಟುಮಾಡಿರುವ ಭಾವನೆಗಳು; ಅದರಿಂದ ಊಟ, ನಿದ್ರೆ ದೂರವಾಗಿರುವ ಬಗ್ಗೆ ಮತ್ತು ದೇಹದ
ಯಾವ್ಯಾವ ಅಂಗಗಳು ತನಗೆ ಇಷ್ಟವಾಗಿವೆ ಎಂಬ ಬಗ್ಗೆ; ಹಾಗೆಯೇ ಮನಸ್ಸಿನ ಮತ್ತು ವ್ಯಕ್ತಿತ್ವದ ಯಾವ್ಯಾವ
ಅಂಶಗಳು ತನಗೆ ಇಷ್ಟವಾಗಿವೆ ಎಂಬ ಬಗ್ಗೆ ವಿವರವಾಗಿ ಬರೆದಿದ್ದಳು ಆ ಭಾವೀ ಮಹಾಸತಿ!
ತನ್ನೇನಾದರೂ ಪ್ರೀತಿಸದಿದ್ದಲ್ಲಿ ತಾನು ಆತ್ಮಹತ್ಯೆಗೆ ಪ್ರಶಸ್ತ ಸ್ಥಳವಾದ ಕನ್ನೀರವ್ವನ ಬಾವಿಗೆ ಹುಣ್ಣಿಮೆಯ
ರಾತ್ರಿ ಬೀಳುವುದಾಗಿ ಮತ್ತು ದೆವ್ವವಾಗಿಬಂದು ಹಿಡಿದುಕೊಳ್ಳುವುದಾಗಿಯೂ ಬರೆದು ಪತ್ರದ ಉಪಸಂಹಾರ ಮಾಡಿದ್ದಳು
ಅದನ್ನು ಓದಿದೊಡನೆ ಭಯವಾಯಿತು. ಯಾರ ಕೈಗೇನಾದರೂ ಸಿಕ್ಕಿದರೆ? ಪತ್ರವನ್ನು ಚೂರು ಚೂರು ಮಾಡಿದ. ಬಾಯಲ್ಲಿ
ಇಟ್ಟು ಜಮಡಿ ನುಂಗಿ ಬಿಟ್ಟ, ತಾಮ್ರದ ತಂಬಿಗೆ ಎತ್ತಿ ಗಟಗಟ ನೀರು ಕುಡಿದ
ಅದು ಗ್ರಾಮರ್ ಪುಸ್ತಕವಾಗಿರಲಿಲ್ಲ... ಕಾದಂಬರಿಯಾಗಿತ್ತು. ಲಗು ಬಗೆಯಿಂದ ಒಂದೆರಡು ಪುಟ ಓದಿದ...
ಪತ್ರದಲ್ಲಿ ಆಕೆ ಸೂಚಿಸಿದ ಭಾಗದ ಮೇಲೆ ಕಣ್ಣಾಡಿಸಿದ.
ಇಡೀ ದೆಹ ಧಗಧಗ ಹೊತ್ತಿಉರಿಯತೊಡಗಿತು.
ಲೈಟುಕಂಭದ ತುದಿಗೆ ಸಾವಿರ ಕ್ಯಾಂಡಲ್ ದೀಪ ದಗ್ಗನೆ ಹೊತ್ತಿಕೊಂಡಿತು
ಗಿಬಕ್ಕನೆ ಕಾದಂಬರಿ ಮುಚ್ಚಿ ಹಾಸಿಗೆ ಕೆಳಗಡೆ ಬಚ್ಚಿಟ್ಟ
ದಾಸವಾಳ ಗಿಡದ ಬುಡಕ್ಕೆ ಮೂತ್ರ ವಿಸರ್ಗಿಸಿ ಬಂದ
ಮತ್ತೆ ಒಂದು ಚೂರು ಓದಿ ದೇಹಕ್ಕೆ ಉತ್ತೇಜನ ಪಡೆಯಬೇಕೆನ್ನಿಸಿತು.
ಹಾಸಿಗೆ ಕೆಳಗೆ ಕೈ ತೂರಿಸಿದ, ಪುಸ್ತಕಕ್ಕೆ ಕೈ ಹಚ್ಚಿದ, ಯಾರೋ ಕೆಮ್ಮಿದಂತೆ ಸದ್ದಾಯಿತು. ತಿರುಗಿ
ನೋಡಿದ. ಯಾರೂ ಇಲ್ಲ... ಚಿಲಕ ಹಾಕಿರುವ ಬಾಗಿಲು... ಹಲ್ಲಿಗಳಂಥ ಸರೀಸೃಪಗಳು ಶಾಸ್ತ್ರಿಗಳ ಧ್ವನಿಯನ್ನು
ನಕಲು ಮಾಡುವುದುಂಟೇನು?
’ಎಚ್ಚರಿಕೆ ಕಾದಂಬರಿ ಪುಸ್ತಕಗಳನ್ನು ಓದಿ ವಂಶಕ್ಕೆ ಕಳಂಕ ತರದಿರು ಮಗುವೆ?’
ಗತಿಸಿದ ಆಸ್ಥಾನ ವಿದ್ವಾನ್, ಕಾವ್ಯಾಲಂಕಾರ ಭೂಷಣ, ಪಾಣಿನಿಯ ಅಪರಾವತಾರ ಮುಂತಾದ ಬಿರುದಾಂಕಿತ ಶಾಮಾ
ಶಾಸ್ತ್ರಿಗಳ ಭಾವ ಚಿತ್ರ ಮಾತಾಡುವುದೆಂದರೇನು?
ಭಯ ಸಂತೋಷ ಏಕಕಾಲಕ್ಕೆ ಉಂಟದವು.
ತುಲಸೀರಾಮಾಯಣ ಓದಲು ಪ್ರಯತ್ನದಲ್ಲಿರುವ ಅಮ್ಮನಿಗೆ ಹೇಳುವುದು ಸರಿಯಲ್ಲ.
ತಾತಗೆ ಹೇಳಿದರೆ ಅವರು ಖಂಡಿತ ಸಂತಸ ಪಡದೆ ಇರಲಾರರು!
ತಾತಾ... ಎಂದು ಕೂಗಿದ...
... ರಿಕ್ಷಾ ದಡಕೂ ದಡಕೂ ಓಡುತ್ತಿದೆ. ಅದರಲ್ಲಿ ಕೂತಿದ್ದ ಪಂಡಿತಪರಮೇಶ್ವರ ಶಾಸ್ತ್ರಿಗಳನ್ನು ದೇವರೇ
ಕಾಪಾಡಬೇಕು.
ಅವರ ದೇಹದ ಎಲುಬುಗಳು ಒಂದೊಂದಾಗಿ ಸಡಿಲಗೊಳ್ಳುತ್ತಿವೆ. ಮೈ ಮೇಲಿನ ಬಟ್ಟೆ ಬಹು ಪಾಲು ಹರಿದಿರುವುದು.
ಜುಟ್ಟು ಕೆದರಿ ಲೂಜುಲೂಜಾಗಿ ಕುತ್ತಿಗೆಯ ಹಿಂಭಾಗದ ಮೇಲೆ ಇಳಿ ಬಿದ್ದಿದೆ. ಕಿವಿಯಲ್ಲಿನ ಕರ್ಣಕುಂಡಲಗಳು
ಬೆವರಿನಲ್ಲಿ ಹದವಾಗಿ ನೆನೆದು ಥಳಥಳ ಹೊಳೆಯುತ್ತಿವೆ. ಚಪ್ಪೆ, ಮೊಣಕಾಲು, ಬೆನ್ನಿನ ಮೇಲೆ ಬಾಸುಂಡೆಗಳು
ಬೆಂಕಿಯಾಗಿ ಉರಿಯುತ್ತಿವೆ. ಮಾನಸ ಹಂಸದ ರೆಕ್ಕೆಗಳುದುರಿ ಅಸ್ತವ್ಯಸ್ತಗೊಂದಿರುವುದು.
ಇಷ್ಟೊಂದು ದುರವಸ್ಥೆಯಲ್ಲಿ ಶಾಸ್ತ್ರಿಗಳಿದ್ದುದನ್ನು ಆ ಗ್ರಾಮದ ಯಾರೂ ನೋಡಿರಲಾರರು! ಯಾರನ್ನಾದರೂ
ರೇಪ್ ಮಾಡಲು ಸಿಕ್ಕಿ ಹಾಕಿಕೊಂದು ಕಡುಬು ತಿಂದಿರಬಹುದೀ ಶಾಸ್ತ್ರಿಗಳು ಎಂದು ಸುಲಭವಾಗಿ ಯಾರಾದರೂ
ಊಹಿಸಿ ಬಿಡಬಹುದಿತ್ತು.
ನಾಗರ ಬೆತ್ತ ಕಾಲ ನಡುವೆ ಆಸರೆಯಾಗಿ ಊರಿ ಅದರ ನೆತ್ತಿಗೆ ಊರಿ ಮ್ಲಾನವಾಗಿರುವ ಅವರ ಮುಖ ಅರಳಿಸಲೆಂದೇ
ರಿಕ್ಷ ತುಳಿಯುತ್ತಿರುವ ಈರನ್ನ ಹತ್ತಾರು ಪದಗಳ ಪಲ್ಲವಿ ಭಾಗಗಳನ್ನು ಮಾತ್ರ ಹಾಡಿದ ಅದೂ ಇದೂ ಜೋಕು
ಹಾರಿಸಿದ. ಮೇಯರ್ ಮುತ್ತಣ್ಣ ನೋಡ್ದೆ ಸ್ವಾಮಿ ಭಲೇ ಭೇಷೈತೆ ಸ್ವಾಮೀ; ರಾಜ್ಕುಮಾರ್ನ ಜುಟ್ನ ದ್ವಾರಕೀಶು
ಕತ್ರಿಸಿ ಮಾರಿ ಬಿಡ್ತಾನೆ ಸ್ವಾಮಿ... ಎಂದೆಂದೇನೋ ಹೇಳತೊಡಗಿದ.
ತಾನು ಆಡಿದ ಮಾತಿಗೆ ಶಾಸ್ತ್ರಿಗಳಿಂದ ಒಂದೂ ಪ್ರತಿಕ್ರಿಯೆ ಇಲ್ಲವಲ್ಲ?
ಈ ಪಂಡಿತಪ್ಪನೋರು ಪೋಲೀಸ್ ಠೇಷಣ್ಗೆ ಹೊಗಿದ್ದಾದ್ರೂ ಯಾಕೆ?
ಇದರಾಗೆಂಥದೋ ಗುಟ್ಟುಂತೆಂದು ಅಂದುಕೊಡ ಈರಣ್ಣ.
ಸತ್ಯವಂತರಿಗಿದು ಕಾಲವಲ್ಲ... ಗೊಣಗಿದ...
ಅವನಿಗೂ ದುಃಖ ಆವರಿಸಿತು. ಗಂಟಲಲ್ಲಿ ಶಬ್ದಗಳು ಶಾಬ್ದಿಕ ರೂಪ ಪಡೆಯಲಿಲ್ಲ, ನಿಟ್ಟುಸಿರು ಬಿಟ್ಟ.
ಸತ್ವ ಅಡಗಿದ ಕಾಲುಗಳಿಂದ ರಿಕ್ಷ ತುಳಿದೂ ತುಳಿದೂ ಮನೆಯಮುಂದೆ ನಿಲ್ಲಿಸಲು ಒಳಗಿಂದ ಶಾಮಣ್ಣ ಓಡಿ ಬಂದ
ತಾತಾ ಅಂದ. ಪ್ರತಿಕ್ರಿಯೆ ಇಲ್ಲ.
ಎಲ್ಲರೂ ಶಾಸ್ತ್ರಿಗಳನ್ನು ರಿಕ್ಷಾದಿಂದ ಕೆಳಕ್ಕಿಳಿಸಿದರು.
ಶಾಸ್ತ್ರಿಗಳು ಕೊಡಲು ಬಂದ ಹಣವನ್ನು ಸ್ವೀಕರಿಸಲು ರಿಕ್ಷಾದ ಈರಣ್ಣ ನಿರಾಕರಿಸಿದ.
ಈ ಘಟನೆ ನಡೆದ ಮೇಲೆ ಶಾಸ್ತ್ರಿಗಳು ದಿನದ ಬಹುಪಾಲನ್ನು ಮನೆಯಲ್ಲಿಯೇ ಕಳೆಯತೊಡಗಿದರು. ಅವರಿಗಾಗದವರು
(ತುಂಬ ಕಡಿಮೆ) ಅವರನ್ನು ತಮಾಷೆ ಮಾಡುತ್ತಿದ್ದರು.
ಸಾಮುದ್ರಿಕ ಹೇಳೋ ನೆಪದಲ್ಲಿ ಪ್ರಧಾನಿ ಇಂದಿರಾ ಗಾಂಧಿಯ ಹಸ್ತ ಮುಟ್ಟಲು ಪ್ರಯತ್ನಿಸಿದ್ದು ಸಾಮಾನ್ಯ
ಅಪರಾಧವೇನು?
ಗಂಡನ ಕಳಕೊಂದು ಮನೆಯಲ್ಲಿ ಮೂಲೆಹಿಡಿದಿರೋ ಸೊಸೆಯ ಹಸ್ತ ಪರಾಂಬರಿಸಬಹುದಾಗಿತ್ತಲ್ಲ!
ಹುಣುಸೆ ಮರಕ್ಕೂ ವಯಸ್ಸಾಗದೇನು!
ವಯಸ್ಸಾಗೋದಂದ್ರೆ ಹಣ್ಣಿನ ಥರ ಮಾಗೋದು ಕಣಪ್ಪಾ!...
ಇಷ್ಟೊಂದು ಅವಮಾನವಾದ ಮೇಲೂ ಬದುಕೋದೆಂದರೆ ಇವರೊಬ್ಬರೇ!
ಇಂಥ ಮಾತುಗಳನ್ನು ಕೇಳುವುದಾದರೂ ಯಾಕೆ ಅಂಥ ಶಾಸ್ತ್ರಿಗಳು ಸಾಮಾನ್ಯವಾಗಿ ಹೊರಗಡೆ ಹೋಗುತ್ತಿರಲ್ಲಿಲ್ಲ.
ತಾವಾಯಿತು ತಮ್ಮ ಕುಟುಂಬದ ಸಮಸ್ಯೆಗಳಾಯಿತು. ತಮ್ಮ ಮೊಮ್ಮಗ ಶಾಮನ ಸಂಸೃತಾಭ್ಯಾಸ ಅಲ್ಲದೆ ಸಂಸೃತದಲ್ಲಿ
ಒಂದು ಕಾವ್ಯ ಬರೆಯತೊಡಗಿದರು.
ಸೂರ್ಯ ಎಲ್ಲೂ ಹೊಗದಿರಬಹುದು.
ಆದರೆ ಗ್ರಹಗಳು ಅವನ ಸುತ್ತದೆ ಇರುತ್ತದೆಯೇ?
ಅವರು ಮನೆಯಲ್ಲಿರುತ್ತಿದುದೇ ತಮ್ಮ ಪುಣ್ಯ ವಿಶೇಷವೆಂದು ಕೆಲವರು ಭಾವಿಸದೆ ಇರಲ್ಲಿಲ್ಲ. ಪಶು ಸಮಸ್ಯೆ,
ಮನೆ ಮಂದಿಯ ಸಮಸ್ಯೆ, ವ್ಯವಹಾರ ಸಮಸ್ಯೆ, ದಾಯಾದಿ ಸಮಸ್ಯೆ ಇಂಥ ಛಪ್ಪನ್ನಾರು ಸಮಸ್ಯೆಗಳಿಗೆ ಜನ ಶಾಸ್ತ್ರಿಗಳಿಂದ
ಪರಿಹಾರ ಕಂಡುಕೊಳ್ಳತೊಡಗಿದರು. ಅವರಾಡುತ್ತಿದ್ದ ಮಾತನ್ನು ಗೌರವಿಸುತ್ತಿದ್ದರು. ಶ್ರದ್ದೆಯಿಂದ ನಡೆಯುತ್ತಿದ್ದರು.
ಪಕ್ಕದ ಮನೆಯ ಅನಸೂಯ ಅಂತ ಹೆಳಿದೆನಲ್ಲ ಅಕೆಯ ಅಪ್ಪ ಪುಟ್ಟ ಬೆಟ್ಟದಂತೆ ಇದ್ದ. ಈ ದೇಶದಲ್ಲಿ ಪ್ರಜಾಪ್ರಭುತ್ವ
ಅವತರಿಸಿ ಮೊದಲನೆ ಚುನಾವಣೆಯಲ್ಲಿ ಮತ ಚಲಾಯಿಸಿದೊಡನೆ ನಾಪತ್ತೆಯಾಗಿ ಬಿಟ್ಟ, ಮೊದಲು ಆತನಿಗೆ ಕೆಲವು
ಸಾಧುಗಳ ನಿಕಟ ಪರಿಚಯವಿತ್ತು. ದಿನಾ ರಾತ್ರಿ ಗಾಢವಾಗಿ ಚರ್ಚಿಸುತ್ತಿದ್ದ. ಅಮಾವಾಸ್ಯೆ ದಿನ ಬೆತ್ತಲಾಗಿ
ಸುಡುಗಾಡಿನಲ್ಲಿ ಇಡೀ ರಾತ್ರಿ ಕಳೆಯುತ್ತಿದ್ದ. ಇಂಥಾತ ದೇಶಕ್ಕೆ ಸ್ವಾತಂತ್ರ ಬರುವುದನ್ನೇ ಕಾಯುತ್ತಿದ್ದ.
ಮೊದಲ ಚುನಾವಣೆ ನಡೆಯುವುದನ್ನೇ ಕಾಯುತ್ತಿದ್ದ. ಮತ ಚಲಾಯಿಸಿದೊಡನೆ ಕೆಲವು ಸಾಧುಗಳನ್ನು ಬೆಟ್ಟಿ ಮಾಡಿದ್ದನ್ನು
ಕೆಲವರು ನೋಡಿದರು. ನೋಡಿದವರೆಲ್ಲಾ ಮನೆಗೆ ಬಂದು ಹೇಳಿದರು. ಆತನ ಹೆಂಡತಿ ರುಕ್ಮಿಣಿ
ಮೊದಲೇ ತುಂಬು ಗರ್ಭಿಣಿ. ಹೊಟ್ಟೆ ಮತ್ತು ಎದೆಯ ಭಾಗವನ್ನು ಕೈಯಿಂದ ಬಡಿದುಕೊಳ್ಳುತ್ತ ವಾರ ದಿನಮಾನ
ಅತ್ತಳು, ಕೂಲಿ ನಾಲಿ ಮಾಡಿ ಬದುಕನ್ನು ದೂಡಿದಳು. ಕೊನೆಗೊಂದು ದಿನ... ಅಂದರೆ ಹುಣ್ಣಿಮೆ ರಾತ್ರಿ
ಎಣ್ಣೆಗೆಂಪು ಬಣ್ಣದ ಹೆಣ್ಣು ಕೂಸಿಗೆ ಜನ್ಮ ನೀಡಿದಳು. ಆಕೆ ತಾನು ತುಂಬ ಪ್ರೀತಿಸುತ್ತಿದ್ದ ಆತ್ರೇಯ
ಮಹರ್ಷಿಯ ಪತ್ನಿ ಅನಸೂಯಳ ಹೆಸರಿಟ್ಟಳು. ಆ ಮಗು ದಿನಕ್ಕೊಂದು ಚಂದದಲ್ಲಿ ಬೆಳೆಯತೊಡಗಿತು. ಬೆಳೆದೂ
ಬೆಳೆದೂ ಹತ್ತು ತುಂಬಿ ಹನ್ನೊಂದಕ್ಕೆ ಬಿದ್ದಾಗ ಋತುಮತಿಯಾಯಿತು. ಋತುಮತಿಯಾದ ವರ್ಷವೇ ಆಕೆ ಅಪ್ಪ ರುದ್ರಪ್ಪ
ರುದ್ರನಾಯಕ ಎಂಬ ಹೆಸರು ಧರಿಸಿ ಪ್ರತ್ಯಕ್ಷನಾದ. ಗೇಣುವರೆ ಗಡ್ಡ, ಭೂಮಧ್ಯೆ ಕುಂಕುಮ ರೇಖೆ, ಎದೆ ತುಂಬ
ಐವತ್ತಾರು ನಮೂನೆಯ ಸರಗಳಿತ್ಯಾದಿ... ಬೆರಳಿಗೊಂದೊಂದು ತರನ ಉಂಗುರಗಳು... ನೋಡಲಿಕ್ಕೆ ಭಯಾನಕವಿದ್ದ.
ಈತನೇ ಗಂಡ ಎಂದು ಗುರುತಿಸಿದಳು. ಮನೆ ತುಂಬಿಸಿಕೊಂಡಳು. ಬಾಳುವೆ ಶುರುವಾಯಿತು. ಆತನ ಮನೆಗೆ ಎಲ್ಲಿಂದಲೋ
ಯಾರ್ಯಾರೋ ಬರುತ್ತಿದ್ದರು, ಹೋಗುತ್ತಿದ್ದರು. ಅವರೆಲ್ಲರಿಗೂ ರುದ್ರನಾಯಕನೆಂದರೆ ಭಯ ಮಿಶ್ರಿತ ಗೌರವ...
ಓಣಿಯಲ್ಲೊಂದೇ ಅಲ್ಲ... ಇಡೀ ಊರು ತುಂಬ ಆತನ ಬಗ್ಗೆ ನೂರಿಪ್ಪತ್ತಾರು ಕಥೆಗಳು... ಭೂತ ಪ್ರೇತಗಳೆಲ್ಲ
ಅವರ ಗುಲಾಮರಂತೆ, ಮಾಟದಿಂದ ಮಾತು ಕಳೆವನಂತೆ, ಮಂತ್ರದಿಂದ ಸೊಂಟ ಮುರಿವನಂತೆ, ಸ್ತ್ರೀವಶೀಕರಣ ಮಾಡುವನಂತೆ,
ಕೂತಲ್ಲಿಂದ ಗಾವುದ ದೂರದಲ್ಲಿರುವನ ಪ್ರಾಣ ಕಳೆವನಂತೆ, ಹೆಣಗಳೊಂದಿಗೆ ಮಾತಾಡುವನಂತೆ. ಹೀಗೆ ಯಾವ ಯಾವ
ಸುದ್ದಿಗಳೋ ಹಬ್ಬಿದವು. ಎಲ್ಲರೂ ತಿಳಿದಿರುವಂತೆ ರುದ್ರನಾಯಕ ತಾನೂ ಸುಖವಾಗಿದ್ದಾನೆ; ಹೆಂಡತಿ ರುಕ್ಮಿಣಿಯನ್ನು
ಮತ್ತು ಪ್ರೀತಿಯ ಏಕಮಾತ್ರ ಪುತ್ರಿ ಅನಸೂಯಳನ್ನು ಸುಖವಾಗಿಟ್ಟಿದ್ದಾನೆ.
ಬಂಗಾರ ತಯಾರು ಮಾಡಬಲ್ಲವರು ಸುಖವಾಗಿರದೇನು ಮಾಡುತ್ತಾರೆ.
ಬಂಗಾರ ತಯಾರಿಸುವುದು ನಿಜವೋ ಸುಳ್ಳೋ! ಆದರೆ ಆತ ಕೆಲವರೊಂದಿಗೆ ದೂರದ ನಗರಕ್ಹೋಗಿ ನಾಲ್ಕರಿಂದ ಏಳು
ದಿನಗಳವರೆಗೆ ಅಲ್ಲಿದ್ದು ಬರುತ್ತಾನೆ.
ಯಂತ್ರ; ಜೋತಿಷ್ಯ ವಿಷಯದಲ್ಲಿ ತನ್ನ ಪಕ್ಕದ ಮನೆ ಯ ಯಕಶ್ಚಿತ್ ಬ್ರಾಹ್ಮನನೋರ್ವ ಜನಪ್ರಿಯನಾಗುವುದೆಂದರೇನು?
ರುದ್ರನಾಯಕ ಕೆಲವರ ಬಳಿ ತನ್ನ ಅಸಮಾಧಾನ ಪ್ರಕಟಿಸಿದ್ದುಂಟು.
"ಕ್ಷುದ್ರ ವಿದ್ಯೆ ಯಾಕೆ ಬೇಕು ಈ ಬ್ರಹ್ಮಣರಿಗೇಂತ?" ಎಂದು ಹಲವರ ಬಳಿ ಆತ ಗೊಣಗಾದಿದ್ದೂ ಉಂಟು.
ಗೊಣಗಿಸಿಕೊಂಡವರು ಶಾಸ್ತ್ರಿಗಳಿಗೆ ಸುದ್ದಿ ಮುಟ್ಟಿಸಿದರು.
ಅವರಿಗೆ ನಗು ಬಂತು.
ರುದ್ರನಾಯಕನ ಹೆಸರು ಕೇಳಿದ್ದುಂಟು, ಎಂದೂ ನೋಡುವ ಅವಕಾಶ ಸಿಕ್ಕಿರಲಿಲ್ಲ. ಕ್ಷುದ್ರ ಶಕ್ತಿಗಳನ್ನು
ಉಪಾಸನೆಯಿಂದ ಎಷ್ಟು ದಿನ ಅಧೀನದಲ್ಲಿಟ್ಟುಕೊಂಡಿರಲು ಸಾಧ್ಯ? ಅದರಿಂದ ಇನ್ನೊಬ್ಬರಿಗೆ ಹಾನಿ ಉಂಟು
ಮಾಡಬಹುದೇ ಹೊರತು ಒಳ್ಳೆಯದು ಮಾಡಲಾದೀತೆ? ವೇದೊಪನಿಷತ್ತುಗಳನ್ನೆಲ್ಲ ಅರಗಿಸಿಕೊಂಡಿರೋ ತಮ್ಮನ್ನು;
ಗಾಯತ್ರಿಯನ್ನು ನಾಲಿಗೆಯ ಮೇಲೆ ಪ್ರತಿಷಾಪಿಸಿಕೊಂಡಿರುವ ತಮ್ಮನ್ನು; ಪ್ರಾಣಾಯಾಮದಿಂದ ದೇಹದ ಸಮಸ್ತ
ಶಕ್ತಿಯನ್ನು ಸಂವರ್ಧಿಸಿಕೊಂಡಿರುವ ತಮ್ಮನ್ನು ರುದ್ರನಾಯಕನಂಥ ಸಂಸ್ಕಾರ ಹೀನ ಏನು ಮಾಡಲು ಸಾಧ್ಯ?
ಅಲ್ಲಿ ಅವನೂ ಅವರಿವರ ಬಳಿ ಅದೇ ಅಂದು ಕೊಳ್ಳುತ್ತಿದ್ದ...
ಒಂದು ದಿನ ಎರಡು ಘಟಾನುಘಟಗಳು ಇಕ್ಕಟ್ಟಾದ ಓಣಿಯಲ್ಲಿ ಪರಸ್ಪರ ಎದುರಾದರು. ಒಂದೆರಡು ಕ್ಷಣ ದೃಷ್ಟಿ
ಯುದ್ದ ಮಾಡಿದರು ಮತ್ತೊಂದೆರಡು ಕ್ಷಣ ತುಟಿಚಲನೆಯ; ಬೆನ್ನು ಸಂಚಲದ ಯುದ್ಧ ಮಾಡಿದರು.
ಆತಗೆ ಈತ ದಾರಿ ಬಿಡಲು ತಯಾರಿರಲಿಲ್ಲ.
ಈತಗೆ ಆತ ದಾರಿ ಬಿಡಲು ಸಿದ್ಧನಿರಲಿಲ್ಲ.
ಕೊನೆಗೆ ಆಕಡೆ ಓಣಿಯವರು ಆಕಡೆ ನಿಂತು, ಈಕಡೆ ಓಣಿಯವರು ಈಕಡೆ ನಿಂತು ಆತನನ್ನು ಈಕಡೆ ಕಳುಹಿಸಿದರು,
ಈತನನ್ನು ಆಕಡೆ ಕಳುಹಿಸಿದರು. ದುರ್ದಾನ ತೆಗೆದುಕೊಂಡವರಂತೆ ಅವರವರ ಮನೆ ಸೇರಿಕೊಂದನಂತರವೂ ಅವರು ತೆಪ್ಪಗಿದ್ದಲ್ಲಿ
ಶಾಮಾಶಾಸ್ತ್ರಿ ಮತ್ತು ಅನಸುಯರ ನಡುವಿನ ಸೇತುವೆ ತುಕ್ಕು ಹಿಡಿದು ಕುಸಿಯುತ್ತಿರಲಿಲ್ಲ.
ಶಾಸ್ತ್ರಿಗಳು ಮೊಮ್ಮಗನ ಜೊತೆಯಲ್ಲಿ ಸೊಸೆಯನ್ನು ಬೃಂದಾವನಕ್ಕೆ ಕಳಿಸಿಕೊಟ್ಟರು. ರಾಘವೇಂದ್ರಸ್ವಾಮಿಗಳು
ಕನಸಿನಲ್ಲಿ ಬಂದು ಏನು ಅಪ್ಪಣೆ ಕೊಡಿಸುವರೋ ತಿಳಿದುಕೊಂಡು ಬನ್ನಿರೆಂದು ಹೇಳುವುದು ಮರೆಯಲಿಲ್ಲ, ಅವರು
ಅತ್ತ ಹೋಗುತ್ತಲೇ ಇತ್ತ ಮನೆಯಲ್ಲಿ ಶತ್ರು ನಿರ್ಮೂಲನೆಗೆ ಸಂಬಂಧಿಸಿದಂಥ ಒಂದು ಹೋಮ ಮಾಡಿದರು.
ಮಾರನೆಯ ದಿನ ಮೊಮ್ಮಗ ಸೊಸೆ ತಂತಮ್ಮ ಮುಖಗಳನ್ನು ಸಪ್ಪಗೆ ಮಾಡಿಕೊಂಡು ಬಂದರು. ತಮ್ಮ ಹೋಮದ ಪ್ರಭಾವ
ಅವರ ಮೇಲಾಗಿದೆ ಎಂದು ಖಿನ್ನರಾದರು. ಆದರೆ ವಸ್ತುಸ್ಥಿತಿ ಏನೆಂದರೆ ಶ್ರೀಕ್ಷೇತ್ರದಲ್ಲಿ ಮಠದ ಒಂದು
ಮೂಲೆಯಲ್ಲಿ ರಾಘವೇಂದ್ರ ಸ್ಮರಣೆ ಮಾಡುತ್ತ ಅಲುಮೇಲು ಮಲಗಿದ್ದು ನಿಜ, ಕತ್ತಲಲ್ಲಿ ಯಾರೋ ಕಾಣಿಸಿಕೊಂಡರು,
ನಾವೇ ಸ್ವಾಮಿಗಳು ಎಂದು ಹತ್ತಿರ ಬಂದರು, "ಓ ಪ್ರಭು ದರ್ಶನ ನೀಡಿ ಕೃತಾರ್ಥಳನ್ನಾಗಿ ಮಾಡಿದೆಯಾ" ಎಂದು
ಭಕ್ತಿಪರವಶಳಾಗಿ ಕಣ್ಮುಚ್ಚಿಕೊಂದು ಮೈಮರೆತದ್ದು ನಿಜ, ಸ್ವಾಮಿಗಳು ಒಮ್ಮೆಗೆ ಕುಪ್ಪಳಿಸಿ ಆಕೆಯ ಮೈಮೇಲೆರಗಿ
ಮೊಲೆ ಹಿಚುಕಿದ್ದೂ ನಿಜ, ಓಹ್ ದೇವರ ಚಿತ್ತ ಅಂತ ಆಕೆ ಕೆಲವು ಕ್ಷಣ ಹಿಚುಗಾಟವನ್ನು ಸಹಿಸಿಕೊಂಡದ್ದು
ನಿಜ, ಸೆರೆ ವಾಸನೆ ಮೂಗಿಗಡರಿ ಸ್ವಾಮಿಗಳು ಸೆರೆ ಕುಡಿಯುವುದುಂಟೆ ಎಂದು ತನಗೆ ಪ್ರಶ್ನಿಸಿಕೊಂಡದ್ದು
ನಿಜ, ಅರೆ ಅವನ್ಯಾರೋ ಪೊಕರಿ ಇರಬೇಕೆಂದು ಎದೆಗೆ ಕಾಲು ಕೊಟ್ಟು ಒದ್ದು ಲಬೋ ಲಬೋ ಬಾಯಿಬಡಿದುಕೊಂಡಿದ್ದು
ನಿಜ, ಅಷ್ಟು ದೂರ ಮಲಗಿದ್ದ ಮಗ ಓಡಿ ಬಂದು ಅವನನ್ನು ಹಿಡಿದದ್ದು ನಿಜ, ಜನರೆಲ್ಲ ಸೇರಿ, ಏನೋ ಬುದ್ಧಿ
ಇಲ್ದೆ ಇಂಥ ಕೆಲಸ ಮಾಡಿದ್ದಾನೆ ಕ್ಷಮಿಸಿ... ರಾಯರೇ ನೋಡಿಕೊಳ್ತಾರೆ... ಎಂದು ಬಿಡಿಸಿದ್ದು ನಿಜ,
ಅವರು ಲಿಂಬರಾಮ್ ಬಿಟ್ಟ ಬಾಣದಂತೆ ಓಡೀ ಓಡಿ ಕತ್ತಲೆಯಲ್ಲಿ ಮರೆಯಾದದ್ದು ನಿಜ.
ಇಷ್ಟೆಲ್ಲ ನಿಜ ಸಂಗತಿಗಳನ್ನು ಹೋಗಿ ಶಾಸ್ತ್ರಿಗಳಿಗೆ ಹೇಳಲಾದೀತೇನು?...
ಅದೇ ಸೂರ್ಯೋದಯಕ್ಕೆ ರುದ್ರನಾಯಕನಿಗೆ ಮೂತ್ರ ಶಂಕೆಯಾಯಿತು. ಎಲ್ಲಾ ವಾಮಾಚಾರಿಗಳಂತೆ ಆತನೂ ಸಹ ಎಲ್ಲಿ
ಬೇಕೆಂದರಲ್ಲಿ ಹೇಗೆ ಬೇಕೆಂದರೆ ಹಾಗೆ ಬೇಕಾಬಿಟ್ಟಿ ಮೂತ್ರವನ್ನಾಗಲೀ; ಮಲವನ್ನಾಗಲೀ ವಿಸರ್ಜಿಸುವುದಿಲ್ಲ,
ತಮ್ಮ ದೇಹದ ಯಾವುದೇ ಕೂದಲು ಬೋಳಿಸುವಾಗಲೂ ಅಷ್ಟೇ ಮುತುವರ್ಜಿ, ರು.ನಾಯಕ, ಪ್ರತಿಸಾರಿ ಮೂತ್ರವಿಸರ್ಜಿಸುವ
ಮೊದಲು ಎರಡುಗೇಣು ಆಳದ ಕುಣಿ ತೋಡಿ ಅದರಲ್ಲಿ ಮೂತ್ರ ವಿಸರ್ಜಿಸಿ, ತದನಂತರ ಅದನ್ನು ಮುಚ್ಚಿ ಬಿಡುವುದು
ವಾಡಿಕೆ. ಮಲ ವಿಸರ್ಗಿಸುವಾಗಲೂ ಅಷ್ಟೆ.
ಅದಕ್ಕೆ ಬೇಕಾಗುವ ಹತಾರಗಳನ್ನು ತೆಗೆದುಕೊಂಡು ಅಗಸರ ಭಾವಿ ಹಿಂದಕ್ಕೆ ಹೋದ.
ಹಾರೆಯಿಂದ ತನ್ನ ಕಾಲನ್ನು ತಾನೆ ಜಜ್ಜಿಕೊಂಡ. ರಕ್ತ ಚಿಲ್ಲೆಂದಿತು. ಛುಪ್ ಅಂತ ಮಂತ್ರಿಸಿ ಬಟ್ಟೆ
ಕಟ್ಟಿಕೊಂಡ, ಅದೊಂದು ಓಣಿಯಲಿ ದೊಡ್ಡ ಸುದ್ದಿಯಾಗಿಬಿಟ್ಟಿತು.
ಶಾಸ್ತ್ರಿಗಳು ಕಿಂಡಿಯಲ್ಲಿ ಅವಿತು ಕೂತು ರು.ನಾಯಕ ಕುಂಟುತ್ತ ತಿರುಗಾಡುತಿರುವುದನ್ನು ನೋಡಿ ಸಂತಸಪಟ್ಟರು.
ಇದಕ್ಕಾಗಿ ಶಾಸ್ತ್ರಿಗಳು ಹೋಮ ಮಾಡಿದರೆಂಬ ಸಂಗತಿ ರುದ್ರನಾಯಕನಿಗೆ ಹೇಗೋ ತಿಳಿದುಬಿಟ್ಟಿತು. ಶಾಸ್ತ್ರಿಗಳಿಗೆ
ಸರಿಯಾದ ಪಾಠ ಕಲಿಸಬೇಕೆಂದು ನಿರ್ಧರಿಸಿದ. ಹೆಂಡತಿ ರುಕ್ಮಿಣಿಯನ್ನು ಮತ್ತು ಅನಸೂಯಳನ್ನು ಬಿಕ್ಕಿಮರಡಿ
ಜಾತ್ರೆಗೆ ಕಳಿಸುವ ಏರ್ಪಾಡು ಮಾಡಿದ, ಬಿಕ್ಕಿಮರಡಿ ದುರುಗಮ್ಮ ಆತನ ಮನೆದೇವರು. ಆಕೆಯ ಹಾಳುಗುಡಿಯೊಳಗೇ
ತಾನು ಹೆಚ್ಚಿನ ಉಪಾಸನೆ ಮಾಡಿರಿವುದು. ಆಕೆಯ ಪಾಳು ಗುಡಿ ಪಕ್ಕ ಎಂದೋ ಒಂದು ಕಾಡು ಇತ್ತು; ಆಕೆಯ ಗುಡಿ
ಆಜುಬಾಜು ಒಂದೋ ಒಂದು ಊರು ಇತ್ತು, ಆಕೆಯ ಗುಡಿ ಮಗ್ಗುಲಲ್ಲಿ ಎಂದೋ ಹರಿದಿದ್ದ ಒಂದು ನದಿಯ ಗುರುತಿರುವುದು,
ಇಂಥಾ ಅವಶೇಷಗಳ ನಡುವೆ ಗುಡಿ ಮಾತ್ರ ಉಳಿದುಕೊಂಡು ಬಂದಿದೆ. ಅವಶೇಷಗಳು ಪ್ರಣಯಿಗಳಿಗೆ ಆಶ್ರಯ ನೀಡುತ್ತವೆ.
ಜಾತ್ರೆ ಇರುವುದು ಬರುವ ಶುಕ್ರವಾರ,
ಕುಮಾರಿ ಅನಸೂಯಳಿಗೆ ಹೆಚ್ಚು ಸಂತೋಷವಾಯಿತು,
ಕುಪ್ಪಸದೊಳಗೆ ಪ್ರಣಯ ಪತ್ರ ಬರೆದಿಟ್ಟುಕೊಂಡು ’ರೀ ಅದೀರೆನ್ರೀ’ ಅಂತ ಬಾಗಿಲ ಬಳಿ ನಿಂತಳು. ಮನೆಯೊಳಗೆ
ಅಲುಮೇಲಮ್ಮ ದೇವರ ಕೋಣೆಯೊಳಗೆ ತುಲಸಿ ರಾಮಾಯಣದ ಎಂಟನೆ ಅಧ್ಯಾಯದಲ್ಲಿ ಮಗ್ನರಾಗಿದ್ದರು, ಶಾಸ್ತ್ರಿಗಳು
ಸಬ್ಇನ್ಸ್ಪೆಕ್ತರ್ ಕರುಣಾಕರನ ಮಗಳ ಕುಂಡಲಿ ಪರಿಶೀಲನೆಗೆಂದು ದಪ್ಪ ಕನ್ನಡಕದೊಳಗೆ ಹೋಗಿದ್ದರು.
ಶಾಮನ ಎದೆ ಡವದವ ಬಡಿದುಕೊಳ್ಳತೊಡಗಿತು. ಬಾಯಿ ಒಣಗಿತು, ತನ್ನ ಕನಸಿನ ಭಾಗ್ಯ ಬಯ್ಸದೆ ಬಂದು ಬಾಗಿಲಲ್ಲಿ
ನಿಂತು ಪಿಳಿಪಿಳಿ ಕಣ್ಣು ಬಿಡುತ್ತಿರುವುದು, ಈ ಪುಳಿಚಾರೇಕೆ ಹಿಂಗ್ಮಾಡುತಿದೆ? ಆಕೆಯೇ ಒಳಗಡೆ ಹೋದಳು.
ಶಾಸ್ತ್ರಿಯನ್ನು ಮೂಲೆಯ ಕತ್ತಲಿಗೆ ಗಬಕ್ಕನೆ ಎಳೆದುಕೊಂಡಳು.
ಕುಪ್ಪಸದೊಳಗಿದ್ದ ಪ್ರೇಮಕಾವ್ಯವನ್ನು ಅವನ ಕೈಯೊಳಗೆ ತೂರಿಸಿದಳು. ಹರಿಣಿಯಂತೆ ಹೊರ ಓಡಿದಳು.
ಒದ್ದೆಗೊಂಡ, ಕೋಣೆಗೆ ಹೋಗಿ ಕಾವ್ಯ ಓದಿದ, ತಾನೂ ಒಂದು ದಿಕ್ಕಿನಿಂದ ಚಿಕ್ಕಮರಡಿ ಜಾತ್ರೆ ತಲುಪಬೇಕೆಂದು
ನಿರ್ಧರಿಸಿದ, ಅದೇನು ತಾನು ನೋದಿರದ ಜಾತ್ರೆ ಏನಲ್ಲ!.
ಆ ದಿನ ಚತುರ್ಯುಗ ದಾಟಿದ ಮೇಲೆ ಬಂತು. ಅದರೊಂದಿಗೆ ನಾಯಿಯೂ ಬಂತು, "ಏನಯ್ಯಾ ಶಾಸ್ತ್ರಿ ಹೊರಟೆಯಾ
ಗುಡಲಕ್" ಎಂಬರ್ಥ ಬರುವಂತೆ ಬಾಲ ಅಲ್ಲಾಡಿಸಿ ಕುಂಯ್ ಕುಂಯ್ ಅಂತು.
ಹಚಾ ಹಚಾ ಅಂತ ಎಷ್ಟು ಗದರಿಸಿದರೂ ಅದು ಕೇರ್ ಮಾಡಲಿಲ್ಲ. ಬಾಡಿಗಾರ್ಡು ಕೆಲಸ ಮಾಡ್ತೀನಿ ಕಣಯ್ಯ ಅಂಥ
ಹಿಂಬಾಲಿಸಿತು. ಅವನಿಗೋ ನಾಚಿಕೆ; ಜನಜಂಗುಳಿ ನಡುವೆ ಹೋಗಬೇಕೆಂದರೆ. ಜನರು ಬೇವಿನ ಮರದ ಮಗ್ಗಲು ನಡೆಯುತ್ತಿದ್ದರೆ
ಇವನಾದರೋ ಹುಣಸೆ ಮರದ ಮಗ್ಗುಲು ನಡೆಯುತ್ತಿದ್ದನು. ಜೊತೆಯಲ್ಲಿ ಬಾಡಿಗಾರ್ಡಿಂಗ್ ಉಂಟು. ಇನ್ಯಾಕೆ
ಭಯ?
ಹಾಗು ಹೀಗೂ ಎರಡು ಕಿಲೋಮೀಟರು ನಡೆದು ಬಿಕ್ಕಿಮರಡಿ ತಲುಪಿದ. ಅಲ್ಲಿ ಇಲ್ಲಿ ಹುಡುಕುವ ಕಣ್ಣುಗಳೊಡನೆ
ಅಡ್ಡಾಡಿದ, ಮಿಠಾಯಿ ಗುಡಾರದ ಹಿಂದೆ ಯಾರೋ ಕುಂಡಿ ಚಿವುಟಿದಂತಾಯಿತು. ತಿರುಗಿ ನೋಡಿದ, ಅನಸೂಯಾ.
ಅಗೋ ಅಲ್ಲಿಗೆ ಬಾ ಕಾಯ್ತಿತೀನಿ ಎಂದು ಪಿಸಿ ಪಿಸಿ ನುಡಿದಳು. ಚಂಗ್ ಅಂತ ಮರು ಕ್ಷಣದಲ್ಲಿ ಮಾಯವಾಗಿ
ಬಿಟ್ಟಳು.
ಅದನ್ನು ಯಾರು ನೋಡಿದರೋ! ಯಾರು ಬಿಟ್ಟರೋ!
ಶಾಮು ಲಗುಬಗೆಯಿಂದ ಹೆಜ್ಜೆ ಹಾಕತೊಡಗಿದ. ಕ್ರಾಪಿನೊಳಗೆ ಎರಡು ಗಂಟುಗಳಿದ್ದ ಜುಟ್ಟು ತಪ್ತಪ್ ಅಂತ
ತಬಲದ ಶ್ರುತಿ ಸರಿಪಡಿಸುತ್ತಿತ್ತು.
ಜನರಿಂದ ದೂರವಿದ್ದ ಪಾಳು ಮಂಟಪ ಅದು. ಹಿಂದಿನ ದಿನ ಅಲ್ಲಿ ಕೋಳಿ ಕುರಿ ಬಲಿ ಕೊಟ್ಟು ಅಮ್ಮಗೆ ನೇವೇದ್ಯ
ಮಾಡಿರುತ್ತಾರೆ.
ಇನ್ನು ಕೆಲವೇ ಕ್ಷಣಗಲ್ಲಿ ತಮ್ಮ ಪ್ರಣಯದ ಕ್ಲೈಮಾಕ್ಸ್ ಆರಂಭವಾಗಲಿದೆ. ಎಲ್ಲಾರೀತಿಯ ಪಟ್ಟುಗಳನ್ನು
ಪ್ರತಿ ಹೆಜ್ಜೆಗೆ ಕಲಿಯ ತೊಡಗಿದ. ಬೆಚ್ಚಗಾಗುವುದು ತಣ್ಣಗಾಗುವುದು ನಡೆದೇ ಇತ್ತು. ನಾಯಿ ವೆಟೆನರಿ
ದಾಕ್ಟರ್ ಶೈಲಿಯಲ್ಲಿ ಹಿಂಬಾಲಿಸಿತ್ತು.
ಆತ ಕಣ್ಣು ತೆರೆದಿದ್ದರೂ ಮುಚ್ಚಿದಂತೆ ಇದ್ದ... ಕನಸುಗಳುಬೆಚ್ಚಗೆ ಬಿಚ್ಚಿಕೊಳ್ಳ ತೊಡಗಿದ್ದವು. ಯಾರನ್ನೂ
ಗುರುತಿಸುವ ಪೈಕಿ ಅವನಿರಲಿಲ್ಲ. ನೂರೆಂಟು ನಮೂನೆಯ ಭಯಗಳು ಹೃದಯ ಸಿಂಹಾಸನವನ್ನಾಲಂಕರಿಸಲು ಧರ್ಮ ಯುದ್ದ
ಮಾಡತೊಡಗಿದ್ದವು.
ವಿ.ಡಿ.(ವೆಟರ್ನರಿಡಾಗ್) ಬೊವ್ ಅಂತು. ಹೆಣ್ಣು ಹುಲಿಯೊಂದು ಒಂದೇ ಏಟಿಗೆ ಕುಪ್ಪಳಿಸಿ ಎದುರಿಗೆ ನಿಂತು
’ಹೆಲೋ’ ಅಂತು, ಕಣ್ಣು ಬಿಟ್ಟು ನೋಡುತ್ತಾನೆ. ಕ್ಳೆದ ತಿಂಗಳು ಬಳ್ಳಾರಿಯಲ್ಲಿ ನಡೆದ ಮ್ಯಾರಥಾನ್ನಲ್ಲಿ
ಚಿನ್ನದ ಪದಕ ಪಡೆದ ಜಲಜಾಕ್ಷಿ
ಆಕೆ ದರುಶನ ಮಾತ್ರದಿಂದ ಶಾಮನ ಹೊಟ್ಟೆ ರುಮ್ ಅಂತು. ಅರೆನುರಿದ ಗೊಬ್ಬರ ಕರುಳುಗಳಲ್ಲಿ ಮ್ಯಾರಥಾನ್
ಶುರು ಮಾಡಿತು.
ಏನೋ ಮಾತಾಡಲು ಹೋದ... ಬ್ಬೆ ಬ್ಬೆ ಅಂದ.
"ಮರ್ಯಾದೆಯಿಂದ... ನಾನು ಹೇಳಿದ ಕಡೆ ಬರ್ತೀಯೋ ಇಲ್ಲಾ ಹೊತ್ಕೊಂಡು ಹೋಯ್ದು ಬಿಡಲೋ... " ಎಂದು ಆ
ಗೊಬ್ಬರದಂಗಡಿ ಹುಡುಗಿ ತೊಡೆಯ ಮಾಂಸಖಂಡಗಳನ್ನು ಹುರಿ ಮಾಡಿದಳು. ಕಣ್ಣುಗಳಿಮ್ದ ಲೇಸರ್ ಕಿರನಗಳನ್ನು
ಬಿಟ್ಟಳು.
ಕೈಗೆ ಸಿಕ್ಕರೆ ನಾಶವಾಗುವುದು ಖಚಿತವೆಮ್ದುಕೊಂಡ, ಹೆತ್ತ ಮಾತೃ ದೇವತೆಗಿಂತಲೂ ತನ್ನನ್ನು ತಾನು ಹೆಚ್ಚು
ಪ್ರೀತಿಸುವವನಾದ ಅವನು ’ಸ್ಟಾರ್ಟ್’ ಎಂದು ಹೇಳಿದ. ಹುಲಿ ಲದ್ದಿ ವಾಸನೆಗೆ ಹೆದರಿ ಹರಿಣಿ ಓಡುವುದಲ್ಲಾ
ಹಾಗೆ ಓಡಲಾರಂಸಿದ. ತಾನು ಅತ್ಯುತ್ತಮ ಓಟಗಾರನೆಂದು ಸಾಬೀತು ಪಡಿಸಲಿಕ್ಕಾಗಿ ಎಂಬಂತೆ ಓಡತೊಡಗಿದ, ಜಾತ್ರೆಯ
ಒಂದು ಭಾಗದ ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡಿತು.
"ಒಬ್ಬ ಬ್ರಾಹ್ಮಣರ ಹುಡುಗ ಇಷ್ಟು ವೇಗವಾಗಿ ಓಡಬಲ್ಲನೆಂದರೆ ಈ ದೇಶ ಸರ್ವತೋಮುಖ ಅಭಿವೃದ್ದಿ ಸಾಧಿಸಿದಂತೆಯೇ
ಸರಿ" ಸುಸಂಸ್ಕೃತನೊಬ್ಬ ಗೊಣಗಿದ, ಅವನು ತಾನು ಓಡುವ ರೀತಿಗೆ ತಾನೇ ಮೆಚ್ಚಿಕೊಂಡ, ತಾನು ಓಡಿದಮ್ತೆ
ಅನಸೂಯಳ ತಂದೆ ಓಡಬಲ್ಲನೇನು? ತಾನು ಆತನ ಮಗಳನ್ನು ಪ್ರೀತಿಸುವುದು, ಹಾಳೂ ಮೂಳೂ ಎಲ್ಲಾ ಅವನಿಗೆ ಗೊತ್ತಾಗಿಬಿಟ್ಟರೆ?
ಅವನು
ತನ್ನ ಮೇಲೆ ಮಾಟ ಮಂತ್ರ ಮಾಡಿ ಪುರುಷತ್ವ ನಾಶಪಡಿಸಿಬಿಟ್ಟರೆ? ಅಯ್ಯೋ ರುದ್ರನಾಯಕನೇ...
... ಹ್ರಾಂ ಹ್ರೀಂ... ಹ್ರೂಂ... ರುದ್ರನಾಯಕ ಚಕ್ರಬಂಧದ ನಡುವೆ, ತಲೆ ಬುರುಡೆಯ ಮುಂದಿರುವ ಮಣ್ಣಿನಗೊಂಬೆಯ
ಕಡೆ ಒದೊಂದು ಜಾತಿಯ ಮುಳ್ಳನ್ನು ಮಂತ್ರಿಸಿ ಒಂದೊಂದು ರೀತಿಯಲ್ಲಿ ಅರ್ಚಿಸುತ್ತಿದ್ದಾನೆ... ತಲೆ ಬುರುಡೆಯ
ಸುತ್ತ ಅದನ್ನು ತಿರಿಗುಸುತ್ತಾನೆ, ಎನೇನೋ ಮಂತ್ರಗಳು... ಎನೇನೋ ತಂತ್ರಗಳು...
ಪೂಜೆ ಮುಕ್ತಾಯವಾಯಿತು. ಎರಡು ಹನಿ ರಕ್ತವನ್ನು ಬೊಂಬೆಯ ಮೇಲೆ ಹನಿಸಿದ. "ಎಲವೋ ಕಾಳಿ" ಎಂದು ಘರ್ಜಿಸಿದ.
ಅವನು ಆತನ ಶಿಷ್ಯ, ಹೊಸದಾಗಿ ಕೆಲಸ ಕಲಿಯಲು ಸೇರಿಕೊಂಡಿದ್ದಾನೆ. ಗಿರಿಜಾ ಮೀಸೆ ಬಿಟ್ಟು ಜೊರಾಗಿದ್ದಾನೆ.]
ರು.ನಾಯಕ ಶಿಷ್ಯನ ಕೈಗೆ ಗೊಂಬೆ ಕೊಟ್ಟ
ಈ ಶಾಸ್ಟ್ರಿಗಳನ್ನು ಸುಡುಗಾಡಿನಾಗೆ ತಲೆ ಕೆಳಗೆ ಮಾಡಿ ಹೂಳಿ ಬಾ"
ಕಾಳ ಗೊಂಬೆಯೊಡನೆ ಹೊರಟ. ಶಾಸ್ತ್ರಿಗಳ ಪ್ರಾಣ ಪಕ್ಷಿಯೇ ತನ್ನ ಕೈಲಿದೆ ಎಂಬ ಗತ್ತಿನಿಂದ.
ಶಾಸ್ತ್ರಿಗಳು ಅಮ್ದು ರಾತ್ರಿ ಹತ್ತೂವರೆ ಗಂಟೆ ಸುಮಾರಿಗೆ ಅಂಗಳದ ಲಿಂಗಮುದ್ರೆ ಕಲ್ಲಿಗೆ ಎರಡು ಕೈಊರಿ
ಅಂತರಂಗ ವ್ಯಾಪಿಸಿದ್ದ ವಾಯುದೇವರನ್ನು ಹೊರದುಡಲು ಗಟ್ಟಿಯಾಗಿ ತಿಣುಕಿದರು. ಡರ್ರರ್ರರ್ಽಽ ಎಮ್ಬೊಂದು
ಭಯಂಕರ ಸವಂಡು ಇಡೀ ಕೇರಿ ಆದ್ಯಂತ ಮಾರ್ಮಲೆಯಿತು.
ಕೇರಿಯ ನಾಗರೀಕರು ಟೇಮಾತು... ಟೇಮಾತು... ಎಂದು... ಮೈಮೆಲೆ ಕವದಿ ಎಳೆದುಕೊಂಡರು.
ಆದರೆ ಪಂಚತೈಲದ ಬೆಳಕಿನಲ್ಲಿ; ಪಂಚಲೋಹದ ದರ್ಪಣದಲ್ಲಿ ತನ್ನ ಮುಖ ನೊಡುತ್ತಿದ್ದ ರುದ್ರನಾಯಕ ಅಮ್ಥೊಂದು
ಸವುಂಡಿಗಾಗಿ ಆ ರಾತ್ರೆಯನ್ನು ಮೀಸಲಿಟ್ಟು ಕೂತಿದ್ದ.
ಇನ್ನೊಂದು ಸ್ವಲ್ಪ ಹೊತ್ತಿಗೆ ನೀರಿನ ವಾಂತಿ, ಅದಾದ ಸ್ವಲ್ಪ ಹೊತ್ತಿಗೆ ರಕ್ತ ಮಿಶ್ರಿತ ಗಂಜಿ ವಾಂತಿ...
ಅದಾದ ಸ್ವಲ್ಪ ಹೊತ್ತಿಗೆ ರಕ್ತ ಮತ್ತು ಕಣ್ಣಿ ಕಣ್ಣಿ ಮಾಂಸದ ವಾಂತಿ.
ಸೂರ್ಯೊದಯದ ಹೊತ್ತಿಗೆ ಶಾಸ್ತ್ರಿಗಳ ಶವ ಸಂಸ್ಕಾರದ ಪೂರ್ವ ಸಿದ್ಧತೆ.
"ಲೋ ಕಾಳ ಕಟ್ಟಿಗೆ ಎಣ್ಣೆ ಎಲ್ಲಾ ಜೋಡಿಸಿಕೊಳ್ಳೋಕೆ ಹೇಳಿ ಬಾರ್ಲೇ" ಎಂದು ಗಲ್ಲಿ ಮೀಸೆಯ ಮೇಲೆ ಮೂಸೂಂಬೆ
ಹಣ್ಣನ್ನು ಕೂಡ್ರಿಸಿಕೊಂದು ಗಹಗಹಿಸಿ ನಗಾಡಿದ.
ಶುಕ್ರೋದಯಕ್ಕೂ ಮುಂಚೆ ಎದ್ದ... ಶಾಸ್ತ್ರಿಗಳು ಮೃತರಾಗಿರಬಹುದೆಂದು ಭಾವಿಸಿದ. ಅವರು ಎಂದಿಗಿಂತ ಆರೋಗ್ಯದಿಂದಿರುವ
ಸಂಗತಿ ಸೂರ್ಯೋದಯದ ನಂತರ ತಿಳಿಯಿತು.
ಏಚಲು ಬರಲಿನಿಂತ ಸುಲಭವಾಗಿ ಕೈಗೆ ಸಿಕ್ಕ ಕಾಳನನ್ನು ಥಳಿಸಲಾರಮ್ಸಿದ. ಅವನೂ ಮನುಷ್ಯ. ಅವನಿಗು ಸಿಟ್ಟು
ಬಂತು.
"ನೀನಿ ಗುರೂ ಅಲ್ಲ... ನಾನು ಶಿಷ್ಯನು ಅಲ್ಲ..." ಎಂದು ಸೋಡಾ ಚೀಟಿಕೊಟ್ಟು ಕಾಳ ಸೀದ ಶಾಸ್ತ್ರಿಗಳ
ಬಳಿಬಂದ, ಶಾಸ್ತ್ರಿಗಳಿಗೆ ಎಲ್ಲ ವಿವರಿಸಿ ಹೇಳಿ ಹೋಗಿಬಿಟ್ಟ.
ಈ ಘಟನೆಯಿಂದ ಅವರಿಬ್ಬರ ನಡುವೆ ಜಿದ್ದು ಬಲಗೊಂಡಿತು.
ಶಾಸ್ತ್ರಿಗಳು ತಮ್ಮ ಸಾತ್ವಿಕ ಸಿಟ್ಟಿನೆದುರು ಅವನ ತಾಮಸ ಸಿಟ್ಟಿನ ಆಟ ನಡೆಯೋದಿಲ್ಲ ಎಂದು ಗುಡುಗುಡಿಸಿದರೆ
ರುದ್ರನಾಯಕನು ತನ್ನ ತಾಮಸ ಸಿಟ್ಟಿನೆದುರು ಶಾಸ್ತ್ರಿಯ ಸಾತ್ವಿಕ ಸಿಟ್ಟು ಇಂಗು ತಿಂದ ಮಂಗ ಎಂದು ಅಪಹಾಸ್ಯ
ಮಾಡಿದನು.
ಶಾಸ್ತ್ರಿಗಳ ಗಿರಾಕಿಗಳು ಶಾಸ್ತ್ರಿಗಳವೆ, ರುದ್ರನಾಯಕನ ಗಿರಾಕಿಗಳು ರುದ್ರನಾಯಕನವೆ, ಯಾಕೆ ಈ ಇಬ್ಬರು
ಘಟನುಘಟಿಗಳ ನಡುವೆ ತಿಕ್ಕಾಟ - ಬೆಲ್ಲದ ಶೀನಪ್ಪನಂಥವರು ಅವರ ನಡುವೆ ಬಿಗುವನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದುಂಟು.
ಆದರೆ ಆ ಟೈಟಾನ್ಗಳು ಅಷ್ಟಕ್ಕೆ ತೆಪ್ಪಗಾಗಬೇಕಲ್ಲ, ಒಂದು ದಿನ ರುಕ್ಮಿಣಿ ಮಾಳಿಗೆ ಮೇಲಿಂದ ಒಂದು
ಮೆಣಸಿನಕಾಯಿ ತುಂಡು ತಂದು ಗಂಡನಿಗೆ ಕೊಟ್ಟಳು. ಅದನ್ನು ಶಾಸ್ತ್ರಿಯೇ ಮಂತ್ರಿಸಿ ಎಸೆದಿರಬೇಕೆಂದೂಹಿಸಿದ
ಆತನು ನಿಂಬೆಹಣ್ಣನ್ನು ಮಂತ್ರಿಸಿ ಶಾಸ್ತ್ರಿಗಳ ಮಾಳಿಗೆ ಮೇಲೆ ಎಸೆದನು. ಹೀಗೆ ಆತ ಒಂದು ಎಸೆಯುವುದು,
ಈತ ಒಂದು ಎಸೆಯುವುದು.
ಕ್ರಮೇಣ ಸಣ್ಣ ಸಣ್ಣ ಜಗಳ ಆಡತೊಡಗಿದರು. ರಾಜಕೀಯವಾಗಿಯೂ ಅವರ ಜಗಳ ಮಹತ್ವ ಪಡೆದುಕೊಂಡಿತು. ಇಂಡಿಕೇಟ್
ಕಾಂಗ್ರೆಸ್ನ ಇಂದಿರಾ ಗಾಂಧಿಗೆ ಹಸ್ತ ಹಸ್ತ ಸಾಮುದ್ರಿಕ ಹೇಳಲೆಂದು ಹೋಗಿಯಲ್ಲವೇ ತಾವು ಹೀನಾಯವಾಗಿ
ಅವಮಾನಗೊಂಡಿದ್ದು, ಎಂಬ ಕಾರಣಕ್ಕಾಗಿ ಶಾಸ್ತ್ರಿಗಳು ಸಿಂಡಿಕೇಟ್ ಕಾಂಗ್ರೆಸ್ ಪರವಾಗಿ ಗ್ರಹತಾರೆ ಎಣಿಸುತ್ತಿದ್ದರು.
ನಿಜಲಿಂಗಪ್ಪನವರನ್ನು ಬೆಟ್ಟಿಯಾಗಿ ಬಂದಿದ್ದರು ಕೂಡ.
ಶಾಸ್ತ್ರಿಗಳ ಕಾರಣಕ್ಕಾಗಿ ರುದ್ರನಾಯಕ ಇಂಡಿಕೇಟ್ ಕಾಂಗ್ರೆಸ್ ಪರ ನಿಲುವು ತಳೆದಿರಲಿಲ್ಲ. ಕೆಲವು
ವರ್ಷ ಅವನು ’ಲಾ ಪತಾ’ ಆಗಿದ್ದನಲ್ಲ... ಆಗ ಅವನು ಹೃಷೀಕೇಶದಲ್ಲಿ ’ಭಂ ಭೂಂ’ ಎಂಬ ಶಾಕ್ತೇಯರ ಬಳಿ
ಶಿಷ್ಯವೃತ್ತಿ ಮಾಡಿಕೊಂಡಿದ್ದನು. ಅವರು ಭೇತಾಳವನ್ನು ನಿಲುವಂಗಿ ಜೋಬಿನೊಳಗೆ ಇಟ್ಟುಕೊಂಡಿದ್ದಂಥವರು.
ರುದ್ರನು ಮಾಡುತ್ತಿದ್ದ ಸೇವೆಯಿಂದ ಅವರು ಸಂಪ್ರೀತರಾದರು. ಶಿಷ್ಯನಿಗೆ ಏನಾದರೂ ಕೊಡದೆ ಇರಲಾದೀತೆ?
ಅದೇ ಕೆಲವು ದಿನಗಳ ಹಿಂದೆ ದೆಹಲಿ ಮತ್ತು ಕುರುಕ್ಷೇತ್ರದ ನಡುವೆ ಪ್ರಯಾಣಿಕರಿದ್ದ ಒಂದು ರೈಲು ಒಂದು
ಘೋರ ಅಪಘಾತಕ್ಕೀಡಾಯಿತು. ಅದರಲ್ಲಿ ಅಸುನೀಗಿದ ಅರವತ್ತು ಮಂದಿ ಪೈಕಿ ಅರವತ್ತು ಮಂದಿಯೂ ಅಸು ನೀಗಿದರು.
ಆ ದೆವ್ವಗಳ ಪೈಕಿ ಕೆಲವು ಸತ್ತುದರಿಂದ ಹೇಗೋ ಖರ್ಚುಳಿಯಿತೆಂದುಕೊಂಡು ಹರಿದ್ವಾರ ನೋಡಿಕೊಂಡು ಹೃಷೀಕೇಶಕ್ಕೆ
ಬಂದವು. ಅವುಗಳ ಪೈಕಿ ಎರಡು ದೆವ್ವಗಳು ಸಾಮಾನ್ಯದವಲ್ಲ. ಇಂದರಾಗಾಂಧಿಯ ಆಪ್ತೇಷ್ಟರಾದ ಛೋಪ್ರಾರ ಮಗ
ಮತ್ತು ಮೆಹರಾರ ಮಗಳು, ಕಳೆದ ತಿಂಗಳಷ್ಟೇ ಹಂದರಕ್ಕೆ ಹತ್ತು ಲಕ್ಷ ಖರ್ಚುಮಾಡಿ ಮಾಡಿದ್ದ ಮದುವೆಗೆ
ಇಂದಿರಾಗಾಂಧಿಯ ಸಂಪುಟಕ್ಕೆ ಸಂಪುಟವೇ ಹಾಜರಿತ್ತು. ಕೈಲಾಷ್ ಛೋಪ್ರಾ ಅಲ್ಕಾ ಮೆಹ್ರಾ ಹನಿಮೂನಿಗೆ ಹೊರಟು
ಪ್ರಾಣ ಕಳೆದುಕೊಂಡಿದ್ದರು. ಅಪಘಾತದ ನಂತರವೂ ಛೋಪ್ರಾದಂಪತಿಗಳು ತೀರ್ಥಯಾತ್ರೆ ಮುಂದುವರಿಸಿ ಛೋಪ್ರಾವಂಶದವರ
ದೈವಭಕ್ತಿಯನ್ನು ಎತ್ತಿಹಿಡಿದವು. ಅವೆರಡು ಸ್ವಾಮಿ ರಾಮರ ವೀರಭದ್ರಾಶ್ರಮ ನೋಡಿಕೊಂಡು ಭಂ ಭೂಂ ಆಶ್ರಮ
ಪ್ರವೇಶಿಸಿ ಕಷ್ಟಕ್ಕೆ ಸಿಲುಕೊಂಡು ಬಿಟ್ಟಿದ್ದವು.
ಭಂ ಭೂಂ ಸ್ವಾಮಿಗಳು ತಮ್ಮ ಕ್ಷುದ್ರ ದೃಷ್ಟಿಯಿಂದ ನೋಡಿಬಿಟ್ಟರು. ಅವೆರಡನ್ನು ಬಂಧಿಸಿ ಬಾಟಲಿಯೊಳಗೆ
ಹಾಕಿ ಬಿರುಡೆ ಹಾಕಿಬಿಟ್ಟಿದ್ದರು.
ಶಿಷ್ಯನ ಶಿಷ್ಯವೃತ್ತಿಯಿಂದ ಸಂಪ್ರೀತಗೊಂಡ ಅವರು ಆ ಬಾಟಲಿಯನ್ನು ರುದ್ರನ ಕೈಗೆ ಕೊಡುತ್ತ "ಇದು ಪರಮಾತ್ಮನ
ಆತ್ಮಲಿಂಗವಿದ್ದಂತೆ. ಇದರೊಳಗೆ ಹೊಸದಾಗಿ ಮದುವೆಯಾಗಿರುವ ಪ್ರತಿಷ್ಟಿತ
ದಂಪತಿಗಳ ಆತ್ಮಗಳಿವೆ. ಉಪಯೋಗಿಸಿಕೋ" ಎಂದು ಹೇಳಿದರು.
ಯಾವ ಕಾರಣಕ್ಕೂ ನೆಲದ ಮೇಲೆ ಇಡಕೂಡದೆಂದು ಎಚ್ಚರಿಕೆ ನೀಡಿದರು. ವಾಪಸು ಮರಳುವಾಗ ರುದ್ರಗೆ ನಿದ್ದೆ
ಬಂದು ಬಿಟ್ಟಿತು. ಅವನ ಕಂಕುಳಲ್ಲಿದ್ದ ಬಾಟಳಿ ಉರುಳಿ ಒಬ್ಬ ಮುದುಕನ ಬಳಿ ಹೋಯಿತು. ಆತ ಇದೇನು ಅಂತ
ಬಿರುಡೆ ತೆಗೆದು ಬಿಟ್ಟ. ಅದರೊಳಗಿದ್ದ ಅಲ್ಕಾಮೆಹ್ರಾ ಮುದುಕನನ್ನು ಹಿಡಿದುಕೊಂಡು ಬಿಟ್ಟರೆ, ಕೈಲಾಷ್
ಛೋಪ್ರಾ ಮುದುಕಿಯನ್ನು ಹಿಡಿದುಕೊಂಡು ಬಿಟ್ಟಿತು. ಇದ್ದಕ್ಕಿಂತೆ ಮುದುಕ ತರುಣಿಥರ ಮಾತಾಡಲಾರಂಬಿಸಿದರೆ
ಮುದುಕಿ ತರುಣನ ಥರ ’ಅರೆ ಮೇರ ಜಾನ್, ಮೇರ ದಿಲ್ರುಬಾ’ ಎಂದು ಮಾತಾಡ ತೊಡಗಿತು. ಆ ಮುದುಕಿ ಡಾರ್ಲಿಂಗ್
ಡಾರ್ಲಿಂಗ್ ಅಂತ ಮುದುಕನನ್ನೂ, ಮುದುಕನು ’ಕೈಲೂ ಐ ಲವ್ ಯೂ’ ಎಂದು ಸ್ತ್ರೀಕಂಠದಿಂದ ಮುದುಕಿಯನ್ನೂ
ಆಲಿಂಗಿಸಿಕೊಂಡನು.
ಆ ಕಂಪಾಟ್ಮೆಂಟೊಳಗೇ ಅವೆರಡು ರೊಮಾನ್ಸಿಗಿಳಿದುಬಿಟ್ಟವು. ಪ್ರಯಾಣಿಕರೆಲ್ಲ ಮನರಂಜನೆಯೋ ಮನರಂಜನೆ,
ಚಪ್ಪಾಳೆ ತಟ್ಟಿ, ಸೀಟಿ ಬಜಾಯಿಸಿ ಆ ಜೋಡಿಯನ್ನು ಉತ್ತೇಜಿಸಿದರು. ಆ ಗಲಾಟೆಗೆ ರುದ್ರನಾಯಕ ಎದ್ದ.
ಗಾಬರಿಗೊಂಡ, ಕಂಕುಳಲ್ಲಿ ಬಾಟಲಿ ಇಲ್ಲ.ಅದು ಅಷ್ಟು ದೂರ ಉರುಳಿರುವುದೂ, ಅದಕ್ಕೆ ಬಿರಡೆ ಇಲ್ಲದಿರುವುದೂ
ಆವೊಳಗಿನ ದೆವ್ವಗಳು ಮುದುಕ ಮುದುಕಿಯರನ್ನು ಹಿಡಿದಿರುವುದೂ ಎಲ್ಲ ಅರ್ಥವಾಯಿತು. ಅವುಗಳನ್ನು ಬಾಟಲಿಯೊಳಗೆ
ಬಂಧಿಸುವುದು ಹೇಗೆ?
ರೋಮಾನ್ಸಿನಲ್ಲಿ ಮೈಮರೆತಿದ್ದ ಅವು ಹೇಗೋ ರುದ್ರನಕಡೆ ನೋಡಿ ಬಿಟ್ಟವು. ಅವು ಮೊದಲೆ ಬಾಲ್ಡ್ವಿನ್
ಕಾನ್ವೋಟ್ ಸ್ಕೂಲಿನಿಂದ ಬಂದಂಥವುಗಳು, ಅದರೊಂದಿಗೆ ಜಲಂದರ್ನ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ನಲ್ಲಿ
ತಲಾ ಮೂರು ಮೂರು ವರ್ಷ ಇದ್ದು ಬಂದಂಥವುಗಳು, ತಮ್ಮ ತೀರ್ಥ ಯಾತ್ರೆಯನ್ನು ಹಾಳು ಮಾಡಿದ ರುದ್ರನೆಂಬ
ಹುಲುನರನನ್ನು ನೋಡಿ ಅವಕ್ಕೆ ಸಿಟ್ಟು ಬಂತು. ಅವೆರಡು ಇದ್ದಕ್ಕಿಂತೆ ಅವನ ಮೇಲೆ ಆಕ್ರಮಣ ಮಾಡಿದವು.
ಅವನ ಅಂಗಿ ಹರಿದುಹಾಕಿಬಿಟ್ಟವು. ಅವನ ಮುಖ, ಮೈ ಪರಚಿಬಿಟ್ಟವು. ಕೈಲಾಷ್ ಎಂಬ ಮುದುಕಿ ಅವನ ಮೂಗಿಗೆ
ಬಾಯಿ ಹಾಕಿದರೆ ಅಲ್ಕಾ ಎಂಬ ಮುದುಕ ಅವನ ಪೈಜಾಮದ ಲಾಡಿ ಉಚ್ಚಿ ಬಿಟ್ಟ, ಅಷ್ಟರಲ್ಲಿ ನಾಗಪೂರ್ ಬಂತು.
ನಿಲ್ದಾಣದಲ್ಲಿ ರೈಲು ನಿಲ್ಲುತ್ತಲೇ ರುದ್ರ ಅಯ್ಯೋ ಅಯ್ಯೋ ಎಂದರಚುತ್ತ ಓಡತೊಡಗಿದನು.
ಪಾಸ್ಟ್ ಟೆನ್ಸ್ ಈಜ್ ಪಾಸ್ಟ್ ಟೆನ್ಸ್ ಅಲ್ಲವೆ? ಇದರಲ್ಲಿ ಎಷ್ಟು ನಿಜವೋ?
ಭಂ ಭೂಂ ಸಾಧುವಿನ ಪರಿಚಯವನ್ನು ಕಮಲಾಪತಿ ತ್ರಿಪಾಠಿ ತಮ್ಮ ಮುಂದೆ ಬೆಳೆದ ಹುಡುಗಿ ಇಂದಿರಾಗೆ ಮಾಡಿಸಿಕೊಟ್ಟರು.
ಆಕೆಗೆ ಗ್ರಹಬಲಗಳ ಆಸರೆ ಪಡೆದು ಇಂದಿರಾ ಎಂದರೆ ಕಾಂಗ್ರೆಸ್, ಕಾಂಗೆಸ್ ಅಂದರೆ ಇಂದಿರಾ ಎಂದು ಹೊಗಳಿಸಿಕೊಳ್ಳುವುದು
ಬೇಕಾಗಿತ್ತು. ಭಂ ಭೂಂ ಸಾಧುವನ್ನು ಆಕೆಯೇ ಖುದ್ದು ಸಂದರ್ಶಿಸಿ ಕೆಲ ಪ್ರಶ್ನೆ ಕೇಳಿದಳು. ಉತ್ತರಿಸಿದ.
ಪವಾಡ ಮಾಡಿ ತೋರಿಸುವಂತೆ ಕೇಳಿದಳು. ತನ್ನ ಗಡ್ಡದೊಳಗಿಂದ ಉಂಗುರ ಸೃಷ್ಟಿಸಿಕೊಟ್ಟ ತಲೆಗೂದಲೊಳಗಿಂದ
ಭಗವದ್ಗೀತೆ ಕಿತ್ತುಕೊಟ್ಟ. ಬರಿಗೈಯಿಂದ ಬೂದಿ ಸುರಿದ
’ತಾಯಿ ತಮಗೆ ತಿರುಪತಿ ವೆಂಕಟೇಶ್ವರನ ಲಡ್ಡಿನ ಮೇಲೆ ತುಂಬ ಭಕ್ತಿ ಎಂದು ಕೇಳಿದ್ದೇವೆ?" ಎಂದು ಗಡ್ಡ
ನೀವಿದ.
"ಹೌದು... ಆ ವೆಂಕಟೇಶ್ವರನ ಆಶೀರ್ವಾದದಿಂದಾಗಿಯೇ ನಿಜಲಿಂಗಪ್ಪ, ಸಂಜೀವರೆಡ್ಡಿ
ಮುಂತಾದ ಓಲ್ಡ್ ಈಜ್ ಗೋಲ್ಡ್ಗಳೆಲ್ಲ ಅಪ್ಪಟ ಬ್ರಾಸ್ಗಳಾಗಿ ಮಾರ್ಪಟ್ಟರು" ಎಂದರು. ಅಲ್ಲೆಯೇ ಇದ್ದ
ಆಕೆಯ ಸಹೋದ್ಯೋಗಿಗಳು "ಎಸ್ ... ಕರೆಕ್ಟ್ ಮೇಡಂ" ಎಂದು ತಲೆ ಅಲ್ಲಾಡಿಸಿದರು.
ಭಂ ಭೂಂ ಸಾಧು ಎಲ್ಲರ ಕಡೆಗೊಮ್ಮೆ ನೊಡಿ ಮುಗುಳ್ನಕ್ಕ, ನಂತರ ಹ್ರಾಂ ಹ್ರೂಂ ಅಂತ ಮೇಲೆ ನೋಡಿದ, ಬಯಲಲ್ಲಿ
ಕೈ ಆಡಿಸಿದ. ಆ ಕ್ಷಣದಲ್ಲಿ ಆತನ ಕೈಯಲ್ಲಿ ಥಳ ಥಳ ಹೊಳೆಯುತ್ತಿದ್ದ ಲಡ್ಡು, ಅಪ್ಪಟ ತುಪ್ಪದಲ್ಲಿ ಮಾಡಿರುವಂಥಾದ್ದು.
ಅದರ ಮೇಲೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರುಗಳು ಲಕ ಲಕ ಅಂತಿದ್ದವು.
ಪ್ರಧಾನಿ ಇಂದಿರಾ ತಿನ್ನುವರೆಂದು ವೆಂಕಟೇಶ್ವರ ಸ್ಪೆಷಲ್ ಲಡ್ಡು ಕಳುಹಿಸಿದ್ದ. ಬಾಬ್ ಕಟ್ ಪ್ರಿಯದರ್ಶಿನಿ
ಭಕ್ತ ಪರವಶಳಾಗಿ ಎದ್ದುನಿಂತುಬಿಟ್ಟರು. ತಾವೇ ಖುದ್ದ ಭಕ್ತಿ ಪೂರ್ವಕವಾಗಿಪ್ರಸಾದ ಸ್ವೀಕರಿಸಿದರು.
ತಕ್ಷಣ ಆಕೆಯ ಅಂಗರಕ್ಷಕರು ಎಕ್ಸ್ಕ್ಯೂಜ್ಮಿ ಮೇಡಂ ಅಂತ ಮುನ್ನುಗ್ಗಿ ಬಂದರು. ಅವರು ಆ ಲಡ್ಡನ್ನು ತಲಾ
ಒಂಚೂರು ಮುರಿದುಕೊಂಡರು. "ಒಬ್ರು ತಿಂದು ನೋಡ್ರಯ್ಯಾ ಸಾಕು, ನಮ್ಗೂ ನಮ್ಮ ಕೊಲೀಗ್ಸಿಗೂ ಉಳಿಸ್ರಯ್ಯಾ"
ಎಂದು ಪ್ರಿಯದರ್ಶಿನಿ ಕೇಳಿಕೊಂಡರು.
ಅಪ್ಪಟ ತುಪ್ಪದಲ್ಲಿ ಮಾಡಿದ್ದು. ಅವರ ಬಿಡುವರೇನು?
"ತಿಂದ ಮೇಲೂ ಬದುಕಿದ್ದೇವೆ, ದೇವರ ದಯೆ... ಮೇಡಮ್ ಇನ್ನು ತಾವು ನಿರ್ಭಯವಾಗಿ ಸ್ವೀಕರಿಸಬಹುದು" ಎಂದು
ಕ್ಯಾಪ್ಟನ್ ಸತೀಶ್ ಶರ್ಮ ಹೇಳಿದ.
ಮೇಡಂ ತಾವು ತಿಂದದ್ದು ಕಡಿಮೆ , ಬೇರೆಯವರಿಗೆ ಕೊಟ್ಟದ್ದೆ ಹೆಚ್ಚು.
ಕೊಟ್ಟದ್ದು ತನಗೆ ಅಂಥ ಸರ್ವಜ್ಞ ಹೇಳಿಲ್ಲವೆ?
ಅಂದಿನಿಂದ ಭಂ ಭೂಂ ಸಾಧು ಪ್ರಧಾನಿ ಇಂದಿರಾ ಗಾಂಧಿಯವರಆಪ್ತ ಕೂಟದ ಪ್ರಮುಖ ಸದಸ್ಯನಾಗಿಬಿಟ್ಟ. ಭಂ
ಭೂಂ ಸಾಧು ಅದೆಷ್ಟು ಪವರ್ಫುಲೆಂದು ಲೋಕಕ್ಕೆ ಗೊತ್ತಾದದ್ದು ಆತನ ಆಶ್ರಮದ ವಿವರಗಳು ಪತ್ರಿಕೆಯೊಂದರಲ್ಲಿ
ಪ್ರಕಟಗೊಂಡಾಗ, ಅದನ್ನು ವರದಿಮಾಡಿದವನು ಪುರುಷತ್ವ ಕಳೆದುಕೊಂಡು ಭಂ ಭೂಂ ಆಶ್ರಮ ಸೇರಿಬಿಟ್ಟ.
ಇದನ್ನು ಓದಿದ ರುದ್ರನಾಯಕ ಭಂ ಭೂಂ ಜೊತೆ ಅಶರೀರವಾಣಿ ಮೂಲಕ ಮಾತಾಡಿದ, ಇದೂಕೂಡ ದೊದ್ದ ಸುದ್ದಿಯೇ.
ಜಿಲ್ಲೆಯ ಇಂಡಿಕೇಟ್ ಜನರು ರುದ್ರನಾಯಕನ ಮೂಲಕ ಭಂ ಭೂಂ ಮೂಲಕ ಕಮಲಾಪತಿ ತ್ರಿಪಾಠಿಗೆ; ಕಮಲಾಪತಿ ತ್ರಿಪಾಠಿ
ಮೂಲಕ ಇಂದಿರಾಜಿಗೆ ಒಂದು ನಿಚ್ಚಣಿಕೆಯನ್ನು ನಿರ್ಮಿಸಿಕೊಂಡಿರುವರೆಂಬುದು ಸುಳ್ಳು ಸುದ್ದಿಯೇನಲ್ಲ!
ಬಂದವರೆದುರು ರುದ್ರನಾಯಕ ಶಾಸ್ತ್ರಿಗಳ ಮೇಲೆ ಚಾಡಿ ಟೊಂಗು ಟುಸುಕು ಹೇಳಿಕೊಳ್ಳುತ್ತಿದ್ದುದುಂಟು.
’ಚ ಬ್ರಾಹ್ಮಣಂ ನಾವ ಮಾನಿತಂ ವೈ ಭೂಷ್ಣುಃ ಕೃಶಾನಪಿ ಕದಾಚನ’ ಅಂತ ಹೇಳಿದೆಯಪ್ಪಾ, ಹಿ ಪುರುಷಂ ನಿರ್ಧ
ಹೇದವ ಮಾನಿತಮ್, ತಸ್ಮಾದೇ ತತ್ತ್ರಯಂ ನಿತ್ಯ ನಾವ ಮನ್ಯೇತ ಬುದ್ಧಿಮಾನ್ ಅಂತ ಹೇಳಿದೆಯಪ್ಪಾ, ಎಷ್ಟೇ
ದುರ್ಬಲನಿದ್ದರೂ ಬ್ರಾಹ್ಮಣ ಅವಮಾನಿಸಿದವರನ್ನು ನಾಶ ಮಾಡದೆ ಬಿಡೋದಿಲ್ಲವೆಂದು ಸಾಕ್ಷಾತ್ ಕೌಟಿಲ್ಯನೇ
ಹೇಲಿದಾನಪ್ಪಾ!" ಎಂದೊಬ್ಬ ಹಿರಿಯ ಆ ಶಾಸ್ತ್ರಿಗಳ ಗೊಡವೆಗೆ ಹೋಗದಿರುವಂತೆ ರುದ್ರನಾಯಕನಿಗೆ ಬುದ್ಧಿ
ಹೇಳಿದನು.
ರುದ್ರನಾಯಕನಿಗೆ ಶಾಸ್ತ್ರಿಗಳು ತುಂಬ ಬಲಿಷ್ಟರಿದ್ದಾರೆಂದೆನಿಸಿತು. ಅವರಿಗಿಂತಲು
ಬಲಿಷ್ಟವಾಗಿರುವುದು ಬ್ರಾಹ್ಮಣ್ಯ. ಬ್ರಾಹ್ಮಣ್ಯಕ್ಕೆ ರೆಕ್ಕೆ ಮೂಡಿಸಿರುವಂಥ ಸಂಸ್ಕೃತ ಬೇರೆ. ಅವರನ್ನೂ,
ಅವರ ಬ್ರಾಹ್ಮಣ್ಯವನ್ನೂ, ಅವರ ಸಂಸ್ಕೃತವನ್ನೂ ಸಮಯ ಸಿಕ್ಕಾಗ ವಿಚಾರಿಸಿಕೊಳ್ಳಬೇಕೆಂದು ನಿರ್ಧರಿಸಿದನು.
ಶಾಸ್ತ್ರಿಗಳು ಧ್ವನಿಗೆ ನಿಲುಕದ ರೀತಿಯಲ್ಲಿರುವರೆಂಬುದನ್ನು ತಿಳಿದುಕೊಂಡು ಕೆಮ್ಮುತ್ತಿದ್ದನು. ಶಾಸ್ತ್ರಿಗಳು
ಕೇಳಿಸಿಕೊಳ್ಳದವರಂತಿದ್ದಾಗ ಮತ್ತೆ ಜೋರಾಗಿ ಕ್ಯಾಕರಿಸುತ್ತಿದ್ದರು.
ಶಾಸ್ತ್ರಿಗಳಿಗೆ ಇದೆಲ್ಲಾ ತಿಳಿದಿರದೇ ಇರಲಿಲ್ಲ.
ಶಾಸ್ತ್ರಿಗಳು ಇನ್ನೇನು ಮಾಡಲು ಸಾಧ್ಯ? ತಮ್ಮಂಥ ತಾಪಸಿಗಳೆದುರು ರುದ್ರನಂಥ ತಾಮಸಿಗಳು ಸೂರ್ಯನೆದುರಿಗಿಟ್ಟ
ಸೊಡರಿನಂತೆ.
ತಮಗೆ ಬಿಡುವಿದ್ದಾಗ ಶಾಸ್ತ್ರಿಗಳು ತಮ್ಮ ಮಾನಸಹಂಸವನ್ನು ತೂರಿಬಿದುತ್ತಿದ್ದರು, ನಿರಾಕಾರ ಸ್ವರೂಪಿಯಾದ
ಅದು ನಿಶ್ಶಬ್ದದಿಂದ, ನಿರಾಡಂಬರತೆಯಿಂದ ರುದ್ರನಾಯಕನ ಯಾಂತ್ರಿಕ ಗುಹೆಯನ್ನು ಪ್ರವೇಶಿಸುತ್ತಿತ್ತು.
ಕ್ಷುದ್ರ ದೇವತೆಗಳ ಮುಂದೆ ಚೂರು ಚೂರಾದ ಆತ್ಮಗಳ ನಡುವೆ ಧ್ಯಾನಸ್ಥನಾಗಿ ಕೂತಿರುತ್ತಿದ್ದ ಆತನ ದೇಹವನ್ನು
ಪ್ರವೇಶಿಸಲು ಪಂಚೇಂದ್ರಿಯಗಳ ಪೈಕಿ ಯಾವುದಾದರೊಂದನ್ನು ಅಥವಾ ನವರಂಧ್ರಗಳ ಪೈಕಿ ಯಾವುದಾದರೊಂದನ್ನು
ಆಯ್ದುಕೊಳ್ಳುತ್ತಿತ್ತು, ಒಳಗೆ ಪ್ರವೇಶಿಸಿದ ಅದಕ್ಕೆ ಉಸಿರುಗಟ್ಟಿದ ಅನುಭವವಾಯಿತು.
ಈ ತಾಪಸಿಯ ಮನಸ್ಸು ಒಳಗ್ಡ್ದೆ ಯಾರನ್ನು ಕೇಳಿಬಂತು?
ಅಲ್ಲಿ ಯಾವ ಯಾವುದೋ ಅತಂಕಕಾರಿ ಮೀಟಿಂಗ್ ನಡೆಸಿದ್ದ ತಾಮಸೀಯ ಮನಸ್ಸುಗಳು ಗಲಿಬಿಲಿಗೊಂಡವು. ಅವೆಲ್ಲ
ತಲಾ ಒಂದೊಂದು ಆಯುಧ ಹಿಡಿದು ಅದರೆದುರು ನಿಂತು ಮೀಸೆ ತಿರುವಿದವು.
ತಾಪಸಿಯ ಮನಸ್ಸಿಗೂ; ತಾಮಸಿಯ ಮನಸ್ಸುಗಳಿಗೂ ನಡುವೆ ಘೊರ ಕಾಳಗ ನಡೆಯಿತು. ತಾಪಸೀದು ಎಷ್ಟಿದ್ದರೂ ಪುಳಿಚಾರ್
ಮನಸ್ಸು, ಆ ನಾನ್ವೆಜ್ ಮನಸ್ಸುಗಳೊಂದಿಗೆ ಅದು ಎಷ್ಟು ಹೊತ್ತು ಹೋರಾಡಲು ಸಾಧ್ಯ?
ಶಿಖಿರಾಗ್ರ ಸರಿಪಡಿಸಿಕೊಳ್ಳುತ್ತ ’ಸಾಕಪ್ಪೋ ಸಾಕು’ ಎಂದು ವಾಪಸಾಯಿತು.
ಮೀಸೆ ಮಣ್ಣು ಮಾಡಿಕೊಂಡು ಹೇಡಿಯೆಂತೆ ವಾಪಸು ಬಂದ ತಮ್ಮ ಮನಸ್ಸಿಗೆ ಮುಖ ತೋರಿಸಬೇಡ ಎಂದು ಶಾಸ್ತ್ರಿಗಳು
ಛೀಥೂ ಮಾಡಿದರು.
ರುದ್ರನಾಯಕನೆಂಬ ಮಂತ್ರವಾದಿಯೂ; ಪರಮೇಶ್ವರ ಶಾಸ್ತ್ರಿಗಳೆಂಬ ವೈದಿಕವಾದಿಗಳೂ ದಿನಂಪ್ರತಿ ಒಂದಲ್ಲಾ
ಒಂದು ನೆವ ತೆಗೆದು ಮ್ಯಾಂವ್; ಮ್ಯಾಂವ್, ಎಂದೋ ಗವ್ ಗವ್ ಎಂದೋ ಕಚ್ಚಾಡುತ್ತ ತಮ್ಮ ಚಟುವಟಿಕೆಗಳಿಗೆ
ಹಸಿರು ನಿಶಾನೆ ತೋರಿಸಿದ್ದುದು ಅನಸೂಯಾ ಎಂಬ ಹುಡುಗಿಗೂ, ಶಾಮಾಶಾಸ್ತ್ರಿ ಎಂಬ ಹುಡುಗನಿಗೂ ತುಂಬ ಒಳ್ಳೆಯದಾಗಿತ್ತು.
ಅನಸೂಯ ಎಂಬ ಚಿಕನ್ ಬಿರ್ಯಾನಿಯನ್ನು ಶಾಮ ಎಂಬ ಹೋರಿಕರು ಲಗಾಯಿಸಲಾದೀತೇನು? ಪೂರ್ತಿ ಕಬಳಿಸಿಯೇ ಬಿಡಬೇಕೆಂದು
ಅದು ಹತ್ತಿರ ಬರುತ್ತಿತ್ತು. ಮೂಸುತ್ತಿತ್ತು. ಒಂದೆರಡು ಅಗುಳು ಚಪ್ಪರಿಸುತ್ತಿತ್ತು, ಗರಂ ಮಸಾಲೆ
ಮತ್ತು ವನಸ್ಪತಿ ತೈಲ ಹೆಚ್ಚಾಗಿದೆ ಎಂದು ಪಿತುಗಿ ಬಿಡುತ್ತಿತ್ತು. ಮಲಗಿಕೊಂಡರೆ ನಿದ್ದೆ ಬರದೆ ಒದ್ದಾಡುತ್ತಿತ್ತು.
ಯಾಕೋ " ನಿದ್ದೆ ಬರ್ತಾ ಇಲ್ಲ ತಾತ" ಅಂತಿತ್ತು.
" ಮನೊಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಮ್ ಬುದ್ಧಿ ವತಾಂವರಿಷ್ಟಂ. ಅಂತ ಆಂಜನೇಯನನ್ನು ಪ್ರಾರ್ಥಿಸಪ್ಪಾ...
ನಿದ್ರಾದೇವಿ ತಾನೇ ತಾನಾಗಿ ಒಲಿಯುತ್ತಾಳೆ" ಎಂದು ಶಾಸ್ತ್ರಿಗಳು ಉತ್ಕೃಷ್ಟ ಸಲಹೆ ನೀಡುತ್ತಿದ್ದರು.
ಆದರೆ ಶಾಮು ಅನಸೂಯಳನ್ನು ಕುರಿತು ಶರದೇಂದು ವಿಕಾಸ ಮಂದ ಹಾಸೇ ಅರವಿಂದ ಮಂದ ಸುಂದರೇ; ಸ್ಯಾಮರವಿಂದಾಸನ
ಸುಂದರೇ! ಅನಸೂಯಾಂ ಭೋಜೇ ವದನಾ ವದನಾಂಬುಜೇಽಽಽ ಅಂತ ಎನೇನೋ ಹೇಳುತ್ತಿದ್ದನು.
ತಾತ ಮಲಗಿದ್ದು ಖಚಿತಪಡಿಸಿಕೊಂಡು ಆಕೆ ತನಗೆ ಬರೆದ ಪತ್ರಗಳ ಗಂಟು ಬಿಚ್ಚುತ್ತಿದ್ದನು. ಅದಲ್ಲಿನ ಒಂದೊಂದು
ಅಕ್ಷರವನ್ನು ಕಣ್ಣಿಂದ ತಿನ್ನುತ್ತಿದ್ದನು. ಹುಚ್ಚನಂತೆ ನೆಕ್ಕುತ್ತಿದ್ದನು. ಸಾಕಾದ ಮೇಲೆ ಮತ್ತೆ
ಗಂಟುಕಟ್ಟಿ ಮತ್ತೆ ಹಾಸಿಗೆಯ ಕೆಳಗೆ ಭದ್ರಪಡಿಸುತ್ತಿದ್ದನಾ ಭೂಪನು.
ಅವನಿಗೆ ನಿದ್ದೆ ಬರುತ್ತಿದ್ದುದು ಮಧ್ಯರಾತ್ರಿ ಕಳೆದ ನಂತರವೇ, ಅದು ನಿದ್ದೆ ಅಂದರೆನಿದ್ದೆ, ಕನಸುಗಳ
ಮೇಲೆ ಕನಸುಗಳು. ಒಂದು ಕನಸು ಇನ್ನೊಂದರಂತ್ತಿರುತ್ತಿರಲಿಲ್ಲ. ಕಂಡ ಕನಸುಗಳಲ್ಲಿ ಅವನೂ ದೈಹಿಕವಾಗಿ
ಪಾಲ್ಗೊಳ್ಳುತ್ತಿದ್ದ. ಅದು ಒಂದು ಹೊತ್ತಿನಲ್ಲಿ ಕೆಟ್ಟ ಅನುಭವವಾಗಿರುತ್ತಿತ್ತು. ನಿದ್ರಾ ಮಂಪರಿನಲ್ಲೂ
ಅವನು ತನ್ನ ದೇಹದ ಬಗ್ಗೆ ತಾನೇ ಬೇಸರಪಟ್ಟುಕೊಳ್ಳುತ್ತಿದ್ದನು.
ಈ ದೇಹದಿಂದ ಏನು ಸುಖ? ಇದನ್ನು ಅಗ್ನಿಗೆ ತರ್ಪಣ ನೀಡಬೇಕೆಂದುಕೊಳ್ಳುತ್ತಿರುವಾಗಲೇ ತಾತ ಉತ್ತಿಷ್ಠೋತ್ತಿಷ್ಠ
ಗೋವಿಂದ ಉತ್ತಿಷ್ಠ ಗರುಡದ್ವಜ ಎಂದು ಗೊಣಗುತ್ತಿದ್ದರು.
ಏಳೋ ಶೂದ್ರರ ಥರ ಮಲಗಿದ್ದೀಯಲ್ಲ... ಎಂದು ಏಳುವವರೆಗೆ ಅವರು ಬಿಡುತ್ತಿರಲಿಲ್ಲ. ಅವನು ಐದನೇ ಕೂಗಿನವರೆಗೆ
ಎಂದೂ ಮಲಗಿದವನಲ್ಲ. ಅವನು ಎದ್ದು ದೇಹದ ಅಗತ್ಯಗಳನ್ನು ಪೂರೈಸಿಕೊಂಡು ತಾತನೆದುರು ಕೂದ್ರುತ್ತಿದ್ದನು.
ಧ್ಯಾನಸ್ಥ ಮನಸ್ಸಿನಿಂದ ಅವರ ಮೂಗನ್ನೇ ನಿಟ್ಟಿಸುತ್ತಿದ್ದನು. ಅದು ಥೇಟ್ ಅವಳ ಮೂಗಿನ ಥರ ಇತ್ತು.
" ನನ್ನ ಮೂಗಿನ ಮೇಲೇಕೋ ನಿನಗೆ ಕಣ್ಣು, ಯಾಕೊ ಸಂಧ್ಯಾವಂದನೆ ಕಡೆ ಮೊದಲಿನಹಾಗೆ ಗಮನ ಹರಿಯುತ್ತಿಲ್ಲ.
ಅರುಣೋದಯದ ನಂತರ ಎದ್ದರೆ ಸಂಧ್ಯಾವಂದನೆ ಮಾಡಲಿಕ್ಕಾಗುವುದೇ? ಎಂದು ಅವರು ಪ್ರವರ ಪ್ರಾರಂಭಿಸುವುದು
ಮಾಮೂಲು...
"ಸಂಧ್ಯಾವಾಸಂಧ್ಯಾ ಅಂತ ಅರ್ವಾಚೀನ ಹೇಳಿದೆ ಕಣಪ್ಪಾ. ಇದರ ಅವಯವಾರ್ಥದ ಪ್ರಕಾರ ಸಂಧಿ ಕಾಲದಲ್ಲಿ ಉತ್ಪನ್ನವಾಗುವ
ಪರಮೇಶ್ವರಿ ಶಕ್ತಿಯೇ ಸಂಧ್ಯಾ ಈ ಶಕ್ತಿಯ ಉಪಾಸನೆಯೇ ಸಂಧ್ಯಾವಂದನೆ ಅಂತ ಕರೆದಿರೋದು... ನಿನ್ನ ಮುತ್ತಾತನವರು
ಅಂಥ ಪರಮೇಶ್ವರಿ ಶೇಷ್ಠ ಉಪಾಸಕರಾಗಿದ್ದುದರಿಂದಲೇ ನಮ್ಮಂಥವರ ಜನನವಾಗಿದ್ದು... " ಎಂದು ಅವರ ತಮ್ಮ
ಜನ್ಮದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದು ಮಮೂಲು...
ಶಾಮಶಾಸ್ತ್ರಿ ಒಂದು ಕಣ್ಣು ಮುಚ್ಚಿಕೊಳ್ಳುತ್ತಾನೆ.
ಪರಮೇಶ್ವರಿಯ ರೂಪ ಮೈದಾಳುತ್ತಾಳೆ ಮಾನಸ ಗುರುಗುಹದೊಳಗೆ...
ಆಕೆ ಸಾಮಾನ್ಯಳಾಗಿರುವುದಿಲ್ಲ.
ಕರ್ದಮ ಮುನಿಯಿಂದ ದೇವಹೂತಿಯ ಗರ್ಭದಲ್ಲಿ ಬೆಳೆದು ಹೊರಬಂದಾಕೆ.
ಒಂಬತ್ತು ಸಹೋದರಿಯರನ್ನು ಪಡೆದಿದ್ದಳಾಕೆ...
ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬನಾದ ಬ್ರಹ್ಮಮಾನಸಪುತ್ರನನ್ನು ಮದುವೆ ಮಾಡಿಕೊಂಡಾಕಿ.
ಬ್ರಹ್ಮ ಎಂಬ, ವಿಷ್ಣು ಎಂಬ, ಮಹೇಶ್ವರ ಎಂಬ ತ್ರಿಮೂರ್ತಿಗಳಿಂದ ಪರೀಕ್ಷೆಗೆ ಒಳಪಟ್ಟು ಗೆದ್ದು ಗೋಲ್ಡ್
ಮೆಡಲ್ ಪಡೆದಾಕಿ.
ದತ್ತಾತ್ರೇಯ, ದುರ್ವಾಸ, ಚಂದ್ರ ಅಕಲಓಕಿತ ಪರಿಶೇ ಪೈಲ್ವಾರಂಥ ಮೂರು ಮಕ್ಕಳನ್ನು ಪಡೆದು ಮೀಸೆ ತಿರುವಿದಾಕಿ.
ಶ್ರೀರಾಮನು ವನವಾಸವೆಂಬ ಹನಿಮೂನಿಗೇಂತ ಬಂದಿದ್ದಾಗ ಹಲೋ; ಹಲೋ ಜಾನಕಿಯನ್ನು ಬರಮಾಡಿಕೊಂಡು ಆಕೆಗೆ
ಅನೇಕ ಸ್ರೀ ಧರ್ಮ ರಹಸ್ಯಗಳನ್ನು ಭೋಧಿಸಿ ಆಕೆಯ ಮಾಂಗಲ್ಯ ಶಕ್ತಿಯನ್ನು ಸಮೃದ್ಧಗೊಳಿಸಿದಾಕಿ.
ಇಂಥ ಕತೆಗಳುಳ್ಳವಳಾದ ಆಕೆ ಈ ಜಂಬೂ ದೀಪದ ಛಪ್ಪನ್ನಾರು ಭಾಷೆಗಳಲ್ಲಿ ಸಿನಿಮಾ ತೆಗೆಸಿಕೊಂಡಾಕಿ...
...ಶಾಮಾಶಾಸ್ತ್ರಿಯ ಮನಸ್ಸೆಂಬ ಮಂಗಳಗ್ರಹದಲ್ಲಿ ಅನಸೂಯ ಎಂಬ ಚಂದ್ರ ಬಿಂಬವು ಪಲ್ಲವಿಸುತ್ತಿರಲು
ಶಾಸ್ತ್ರಿಗಳಿಗೆ ತಾವು ಯವಕರಾಗಿದ್ದಾಗ ಪ್ರಸಿದ್ಧ ಇಂಜಿನೀಯರ್ ಓರ್ವರ ಪತ್ನಿ ತ್ರಿಪುರ ಸುಂದರೀ ದೇವಿಯ
ಪ್ರೇಮಪಾಶದಲ್ಲಿ ಬಿದ್ದುದನ್ನು ನೆನಪು ಮಾಡಿಕೊಂಡರು.
ಆಕೆಯ ಪ್ರೀಥ್ಯಥವಾಗಿ ಹಾಡಿದ್ದ ಹಾಡೊಂದನ್ನು ನೆನಪು ಮಾಡಿಕೊಂಡರು. ತ್ರಿಪುರ ಸುಂದರೀ ದೇವಿಗೆ ಶಂಕರಾಭರಣ
ರಾಗ ಕಿವಿಗೆ ಬಿತ್ತೆಂದರೆ ಪಕ್ಕದಲ್ಲಿನ ಗಂಡನನ್ನೇ ಮರೆತು ಬಿಡುತ್ತಿದ್ದಳು. ಅದಕ್ಕೆ ಪೂರಕವಾಗಿ ಚತುಶ್ರ
ಏಕತಾಳವೆಂದರೆ ತೊಟ್ಟಿಲಲ್ಲಿನ ಮಗನನ್ನೇ ಮರೆತು ಬಿಟ್ಟೆದ್ದು ಬರುತ್ತಿದ್ದಳು... ತಂದೆಯವರೊಡನೆ ಸತ್ಯನಾರಾಯಣ
ಪೂಜಾ ವ್ರತ ಮಾಡಿಸಲೆಂದು ಅವರ ಮನೆಗೆ ಹೋಗಿದ್ದಾಗ ಪರಿಚಯವಾಗಿದ್ದು.
"ಪರಮೇಶ್ವರಽ ಪುಜೆಗೆ ಒಂದು ಹಾದು ಹೇಳಪ್ಪಾ!" ತಂದೆಯವರು ಹೊದಲ್ಲಿ ಬಂದಲ್ಲಿ ಹೀಗೆ ಅಪ್ಪಣೆ ಕೊಡಿಸುವುದು
ಸ್ವಾಭಾವಿಕವಾಗಿತ್ತು.
ಪ್ರತಿಷ್ಠಿತ ವಲಯದಲ್ಲಿ ತಮ್ಮ ಸುಪುತ್ರನನ್ನು ಪ್ರತಿಷ್ಥಾಪಿಸುವ ಸನ್ನಾಹದಲ್ಲಿ ಒಂದು ಮಾತು ಹೆಚ್ಚು
ಹೊಗಳುತ್ತಿದ್ದರು.
ಅಷ್ಟರಲ್ಲಿ ಪರಮೇಶ್ವರ ಶಾಸ್ತ್ರಿ ಇಂಜಿನಿಯರವರ ಕಣ್ಣಸೆಳೆವಿಗೆ ಕೊಚ್ಚಿ ಹೋಗಿದ್ದರು. ಆಕೆಯೂ ಶಾಸ್ತ್ರೀಯ
ಸಂಗೀತದಲ್ಲಿ ಪರಿಶ್ರಮವುಳ್ಳವಳಾಗಿದ್ದಳೆಂಬುದನ್ನು ಕೇಳಿಬಲ್ಲರು.
ಆ ಸಂದರ್ಭದಲ್ಲಿ ಪಂಚ ಮಾತಂಗ ಮುಖ ಗಣಪತಿನಾ ಹಾಡಬೇಕಿತ್ತು. ಯಾಕೋ ಅವರಿಗೆ ಸತ್ಯನಾರಾಯಣನೇ ಶಂಕರಾಭರಣದ
ಸಾಮಗಾನ ಪ್ರಿಯೆ ಹಾಡಲು ಪ್ರೇರಣೆ ನೀಡಿದ, ಎಷ್ತಾದರೂ ಅವನೂ ಒಳ್ಳೆಯ ಪ್ರೇಮಿ ಅಲ್ಲವೇ?
ಸಾಮಗಾನ ಪ್ರೀಯೇ ಕಾಮಕೋಟಿ ನಿಲಯೇ
ಶಂಕರಿ ಸುಂದರಿ ಸರತರ ಲಹರಿ
ಚಂಡಿಕೇ ನಿರ್ಯಜೇ ಕಾಮಿನಿ ಮೋದಿನಿ
ಪಾಹಿ ಗುರುಗುಹ ಜನನಿ ಕಾಮಾಕ್ಷಿ
ಎಂದು ಅದ್ಭುತ ಶಾರಿರದಿಂದ ಹಾಡಿಯೇ ಬಿಟ್ಟರು. ಆರೋಹಣ, ಅವರೊಹಣದಲ್ಲಿ
ತಿಲಮಾತ್ರ ವ್ಯತ್ಯಯವಿರಲಿಲ್ಲ.
ಇಂಜಿನಿಯರ್ರವರಂತೂ ನಾದ ಲೋಕದಲ್ಲಿ ಪಯಣಿಸಿದ್ದರು. ರೇಷ್ಮೆ ಉತ್ತರೀಯ ಹೊದಿಸಿ ಸನ್ಮಾನಿಸಿದರು. ಪರಮೇಶ್ವರ
ಶಾಸ್ತ್ರಿಗಳ ಮನೆಯಿಂದ ವಾರಕ್ಕೆರಡು ಮೂರು ಬಾರಿಯಾದರೂ ಬುಲಾವ್ ಬರುತ್ತಿತ್ತು.
ಊರಲ್ಲಿದ್ದರೆ ಇಂಜಿನಿಯರ್ರವರು ತ್ಯಾಗರಾಜರ್ ಕೀರ್ತನೆಗಳನ್ನು ಅಪೇಕ್ಷಿಸುತ್ತಿದ್ದರು. ಪತಿದೇವರು
ನಗರದಿಂದ ಹೊರಗೆ ಹೋಗಿದ್ದಾಗ ಅವರ ಪತ್ನಿ ತ್ರಿಪುರ ಸುಂದರಿ ದೇವಿಯವರಿಂದ...
ಅವರೀರ್ವರ ಸಂಗೀತ ಪ್ರೇಮಪ್ರಣಯಕ್ಕೆ ತಿರುಗಿತು. ಇಂಜಿನಿಯರ್ರವರು ಮಹಾರಾಜರಿಗೆ ತುಂಬ ಬೇಕಾಗಿದ್ದವರು,
ಅವರಿಗೂ ಇವರ ಸಂಬಂಧೀಯ ವಾಸನೆ ಹತ್ತಿತಾದರೂ ಅದರ ಬಗ್ಗೆ ಪರಿಶೋಧಿಸಿ ನೋಡುವ ಗೋಜಿಗೆ ಹೋಗಿರಲಿಲ್ಲ.
ತ್ರಿಕಾಲ ಜ್ಞಾನಗಳಾದ ಶಾಮಾಶಾಸ್ತ್ರಿಗಳು ಉಪಾಸನ ಕೋಣೆಯಲ್ಲಿ ಮಗನನ್ನು ಕುಳ್ಳರಿಸಿಕೊಂಡು ತ್ರಿನೇತ್ರನಂತೆ
ದುರುಗುಟ್ಟಿದರು. ಚಾಮುಂಡಿಯ ಕೈಯಲ್ಲಿದ್ದ ಬಾಣ ತೆಗೆದುಕೊಂಡು ಕೆಂಪಗೆ ಕಾಯಿಸಿದರು.
" ಮುಂದೆ ಎಂದಾದರೂ ನೀನು ಹಾಡಿದೀಯೆಂದರೆ ನಿನ್ನ ನಾಲಿಗೆ ಬಿದ್ದುಹೋಗಲಿ" ಎಂದವರೆ ಮಗನ ಬಾಯೊಳಗಿಂದ
ನಾಲಿಗೆ ಜಗ್ಗಿ ಬರೆ ಎಳೆದುಬಿಟ್ಟರು.
ಶಂಕರಾಭರಣದ ಸಾಮಗಾನಪ್ರಿಯೆ ತ್ರಿಪುರ ಸುಂದರಿದೇವಿ ಶಾಸ್ತ್ರಿಗಳ ನೆನಪಿನ ಉಗ್ರಾಣವನ್ನು ಸೂರೆಮಾಡತೊಡಗಿದಳು.
ಅವರಿಗೆ ಇಡೀ ಊರಿನ ಅರ್ಧ ಭಾಗಕ್ಕೆ ಕೇಳಿಸುವಂತೆ ಹಾಡುವ ಆಸೆ. ತಂದೆಯವರ ಲಕ್ಷ್ಮಣ ರೇಖೆ ನೆನಪಾಯಿತು.
ಆ ಲಕ್ಷ್ಮಣರೇಖೆ ಇರದಿದ್ದಲ್ಲಿ ಶಾಸ್ತ್ರಿಗಳು ವೈದಿಕಕ್ಕಿಂತ ಹೆಚ್ಚು ಮಹತ್ವವನ್ನು ಸಂಗೀತಕ್ಕೆ ಕೊಡುತ್ತಿದ್ದರು.
ಪ್ರಸಿದ್ಧ ಸಂಗೀತಗಾರರಾಗುತ್ತಿದ್ದರು. ತಾವು ಎಂದೂ ಯಾವ ಕಾರಣಕ್ಕೂ ಹಾಡುವಂತಿರಲಿಲ್ಲವೆಂಬುದೇನೋ ನಿಜ.
ಆದರೆ ಅಷ್ಟಕ್ಕೆ ಸುಮ್ಮನಿರಲಾದೀತೆ?
ನಗರದಲ್ಲಿ ಕೆಲವು ಕಾಲ ಇದ್ದ ನಭೋಮಣಿರಾಗದ ನರಸಿಂಹಾಚಾರ್ರವರಿಂದ ಮೊಮ್ಮಗ ಶಾಮುವಿಗೆ ಸಂಗಿತಾಭ್ಯಾಸ
ಮಾಡಿಸಿದ್ದರು ಎಂಬುದನ್ನು ಹೇಳಲು ಮರೆತಿದ್ದೆ.
"ಮಗೂ ಶಾಮೂಽಽಽ ಮುತ್ತು ಸ್ವಾಮಿ ದೀಕ್ಷಿತರ ಕೃತಿ ಸಾಮಗಾನ ಪ್ರಿಯೆ ಬತದಾ ಎಂದು ಮಗುವಿನಂತೆ ಕೇಳಿದರು.
ಬರದೆ ಏನು? ಶಾಮು ತಲೆ ಅಲ್ಲಾಡಿಸಿದ.
ಶಾಮು ಸಾಮಗಾನಪ್ರಿಯೆ ಅಂತ ಆರಂಭಿಸಿಯೇ ಬಿಟ್ಟ. ಅವನ ಸೊಗಸಾದ ಶಾರೀರ ಇಡೀ ಓಣಿಯನ್ನು ಪರವಶಗೊಳಿಸಿತು.
ಅಡುಗೆ ಮನೆ ಯಲ್ಲಿ ಬತ್ತಿ ಹೊಸೆಯುತ್ತಿದ್ದ ಅಲುಮೇಲಮ್ಮನವರು ಸೀದ ಪೂಜಾಕೋಣೆಗೆ ಹೋಗಿ ದೇವತೆ ಮುಂದೆ
ಧೀರ್ಘದಂಡ ಪ್ರಣಾಮ ಸಲ್ಲಿಸಿದರು.
...ಜನನೀ ಕಾಮಾಕ್ಷಿಽಽಽ ಎಂದು ಶಾಮು ಹಾಡುತ್ತ ಸಮ ಪಾತಳಿಗೆ ತಂದೊಡನೆಯೇ ಶಾಸ್ತ್ರಿಗಳ ದುಃಖದ ಕಟ್ಟೆ
ಒಡೆಯಿತು. ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದರು. ಮೊಮ್ಮಗನ ತೊಡೆ ಮೇಲೆ ತಲೆ ಇರುಸಿ ಗಾಢ
ನಿದ್ರೆ ಹೋದರು ಕ್ರಮೇಣ.
ಶಾಮು ತಾತನ ತಲೆ ನೇವರಿಸಿದ. ಅವರನ್ನು ಮೃದುವಾಗಿ ಚುಂಬಿಸಿದ.
ರಥ ಸಪ್ತಮಿ ನಾಳೆ ಇದ್ದುದರಿಂದ ಶಾಮ ಹನ್ನೊಂದು ವಿಧದ ಪತ್ರೆ ಆಯ್ದು ತರಲು ಬೆತ್ತದ ಬುಟ್ತಿಯೊಡನೆ
ಹೊರಟ. ಪತ್ರಿ ಮರದ ಬುಡದಲ್ಲಿರುವ ಲಕ್ಷ್ಮಿ ವಿಗ್ರಹದ ಬಗ್ಗೆ ಅಲುಮೇಲಮ್ಮಗೆ ತುಂಬ ಭಕ್ತಿ., ಪೂಜೆಯಿಂದ
ವಂಚಿತಗೊಂಡಿರುವ ಅದಕ್ಕೆ ಪೂಜೆ ಆರಂಭಿಸಿದ್ದು ಆಕೆಯೇ.
ಹಾಗೆಯೇ ಪೂಜೆ ಸಲ್ಲಿಸಲು ಮತ್ತು ಆಕೆಯ ಸನ್ನಿಧಿಯಲ್ಲಿ ಆಹಾರ ಭಕ್ಷಿಸಲು ಸಲಹೆ ನೀಡಿ ಪರಿಕರಗಳ ಗಂಟಿನೊಡನೆ
ಕಳಿಸಿದ್ದಳು ಮಗನನ್ನು.
ಶಾಮ ತಲುಪಿದ., ಮರದ ಬುಡದಲ್ಲಿರುವ ವಿಗ್ರಹಕ್ಕಾಗಿ ಹುಡುಕುತ್ತಿರುವಾಗ ಹ್ಹಾ! ಹ್ಹಾ! ಎಂದು ಚೀರುತ್ತಿದ್ದ
ಸ್ತ್ರೀಕಂಠ ಕೇಳಿಸಿತು. ಅವನು ಬರುವನೆಂದು ಖಚಿತ ಪಡಿಸಿಕೊಂಡು ಅನಸೂಯ ಅಲ್ಲಿಗೆ ಬಂದಿದ್ದಳು. ಕೇದಿಗೆ
ಪೊದೆ ಪರಿಮಳಕ್ಕೆ ಹೋಗಿ ಸಿಕ್ಕಿಹಾಕಿಕೊಂಡಿದ್ದಳು.
ಬಿಡಿಸಿ ಕರೆತಂದ. ಜೊತೆಗೆ ಒಂದು ಕೇದಿಗೆ ಹೂವೊಂದನ್ನೂ ಸಹ. ಅದರ ಒಂದು ಎಸಳನ್ನು ಆಕೆಯ ಕಪ್ಪು ಮುಡಿಯೊಳಗಿರಿಸಿದ.
ಅನಸೂಯಾಳೆಂಬ ಕರುಣಾರಸಾಲಯ ದೊರಕಿದ ಮೇಲೆ ಆಲಯವಿಲ್ಲದ ಲಕ್ಷ್ಮಿ ವಿಗ್ರಹದ ಗೊಡವೆ ತಮಗೇಕೆ?
ಅಮ್ಮ ಪೂಜೆಗೆಂದು ಕೊಟ್ಟಿದ್ದ ಸಾಮಗ್ರಿ ಬಿಚ್ಚಿದ, ರವೆಯುಂಡೆ, ಹರಳಿಟ್ಟು, ಕೋಡುಬಳೆ, ರಸಬಾಳೆ ಮುಂತಾದವು
ಕಾಗೆ ಎಂಜಲು ಮಾಡಿ ಅವೆಲ್ಲವನ್ನೂ ಅವರು ಮುಗಿಸಿದರು.
ಅನೂ ತಮ್ಮ ಭಯಾನಕ ತಂದೆಯ ಬಗ್ಗೆ ಹೇಳಿಕೊಂಡಲು.
ಶಾಮು ತಮ್ಮ ಸಾತ್ವಿಕ ತಾತನ ಬಗ್ಗೆ ಹೇಳಿಕೊಂಡ.
ಸ್ವಲ್ಪ ಹೊತ್ತು ಅನೂ ಶಾಮುನ ತೊಡೆ ಮೇಲೆ ತಲೆ ಇರಿಸಿ ಮಲಗಿದಳು.
ಶಾಮೂ ಕೂಡ ಅನೂಳ ತೊಡೆ ಮೇಲೆ ತಲೆ ಇರಿಸಿ ಮಲಗಿದ.
"ಶಾಮೂ... ನೀನದೆಷ್ಟು ಚನ್ನಾಗಿ ಹಾಡಿದಿ ಗೊತ್ತಾ?" ನೆನಪಿಸಿಕೊಂಡವಲಂತೆ ದಿಗ್ಗನೆ ಕೇಳಿದಳು. ತಾನು
ಗಟ್ಟಿಯಾಗಿ ಹಾಡಿದ್ದಕ್ಕೂ ಸಾರ್ಥಕವಾಯಿತೆಂದುಕೊಂಡ.
"ಕಾಲೇಜ್ ಡೇಗೆ ನೀನು ಹಾಡಲೇಬೇಕು!" ಪತ್ತು ಹಿಡಿದಳು ಮೀನಲೋಚನಿ, ಸಭಾ ಕಂಪನಿಯಾದ ಶಾಮನ ಎದೆ ಡವ ಡವ
ಗುಟ್ಟತೊಡಗಿತು.
ಬಂಗಾರದ ಮನುಷ್ಯದಲ್ಲಿ ರಾಜಕುಮಾರನ ತೊಡೆ ಮೇಲೆ ಭಾರತಿ ಒರಗಿರುತ್ತಾಳಲ್ಲ; ಹಾಗೆ ಒರಗಿದ್ದ ಅನಸೂಯಳನ್ನು
ನೋಡಿ ದರಾನಮತ್ಕಂಧರ ಬಂದ ಮೀಷನ್ನಿಮೀಲಿತ ಸ್ನಿಗ್ಧ ವಿಲೋಚಾಬ್ಜಮ್ ಎಂಬ ಜಗನ್ನಾಥ ಕವಿಯ ಶ್ಲೋಕ ನೆನಪಿಸಿಕೊಂಡ.
ರೋಮಾಂಚನಗೊಂಡ. ಆ ಕಮಲನಯನೆಯ ಅಂತರ್ಭಾಗದಂತೆ ಕಂಡ ಪೋರ್ಕುಳ ಶೋಬೆಯನ್ನು ಸವಿದ. ಆ ಚಿಗರೆ ಕಣ್ಣುಗಳು
ಪ್ರೇಮ ಕಟಾಕ್ಷವನ್ನು ಬೀರಿದವು.
ಅಂದು ರಥತಿರಥ ಸಂಖ್ಯಾಯನದ ದಿನ ತಾಯಿ ಅಲುಮೇಲಮ್ಮಗೆ ಮಗನ ನೆನಪು ತುಂಬಾ ಕಾಡಿತು. ಕಾಲೇಜು ಡೇ ಸಮಾರಂಭದಲ್ಲಿ
ಯಾವ ಹಾಡು ಹಾಡಿ ಅನಸೂಯಾಳ ಇಚ್ಛೆ ಪೂರೈಸಬೇಕೆಂಬ ಚಿಂತೆಯಲ್ಲಿ ಶಾಮು ಮುಳುಗಿದ್ದ. "ಅಮ್ಮಾ ನನ್ಗೆ
ನಾಚಿಕೆಯಾಗ್ತದೆ" ಎಂದರೂ ತಾಯಿ ಬಿಡಬೇಕಲ್ಲ? ಹಿತ್ತಲಲ್ಲಿ ಬಟ್ಟೆ ಸೆಳೆವ ಕಲ್ಲ ಮೇಲೆ ಮಗ ಸಂಕೋಚದಿಂದಲೇ
ಕೂತ, ತಾಯಿ ಬಲವಂತಕ್ಕೆ ಬನಿಯನ್ ಬಿಚ್ಚಿದ, ತಾಯಿ ಬಲವಂತಕ್ಕೆ ಲುಂಗಿ ಕಳಚಿದ. ಬೆಳ್ಳುಳ್ಳಿ ಬೆಂದಿದ್ದ
ಎಣ್ಣೆಯನ್ನು ಆಕೆ ಬೊಗಸೆಗೆ ಸುರುವಿಕೊಂಡಳು. ಎಷ್ಟು ಎತ್ತರ ಎಷ್ಟು ದಪ್ಪ ಆಗಿದ್ದಾನೆ. ತನ್ನ ಮಗ;
ಅವರು ಬದುಕಿದ್ದರೆ ಇಷ್ಟೆತ್ತರ ಬೆಳೆದಿರುವ ಮಗನನ್ನು ನೋಡಿ ಅದೆಷ್ಟು ಸಂತೋಷ ಪಡುತ್ತಿದ್ದರವರು!...
ಮೊದಲಿನ ಹಾಗೆ ಈಗವನು ಪೀಚಲ್ಲ, ಮೈಗೆ ಎಣ್ಣೆ ಲೇಪಿಸಿದಳು. ಕೆಲವು ಭಾಗಗಳನ್ನು ಸ್ಪರ್ಶಿಸಲು ತನಗಿವನು
ಆಸ್ಪದ ನೀಡುತ್ತಿಲ್ಲವಲ್ಲ! ತುಳಸೀ ರಾಮಾಯಣ ಪಾರಾಯಣ ಮುಗಿಯುವುದರೊಳಗೆ ಒಂದು ಒಳ್ಳೆ ಮನೆತನದ ಹೆಣ್ಣು
ನೋಡಬೇಕು. ಒಂದು ಒಳ್ಳೆ ಮುಹೂರ್ತ ನೋಡಿ ಮದುವೆ ಮಾಡಬೇಕು. ಮಗ ಸೊಸೆಯರ ಸಂಸಾರ ನೋಡಿ ಸಂತೋಷಪಡಬೇಕು.
ವರ್ಷದೊಳಗೆ ಸೊಸೆ ಹೆತ್ತು ಕೊಡುವ ಮೊಮ್ಮಗನನ್ನು ಎತ್ತಿ ಆಡುತ್ತ ಕಣ್ಣು ಮುಚ್ಚಿ ಬಿಡಬೇಕು.
ಉಸಿರಿನ ಮೇಲೆ ಉಸಿರು ಬಿಡುತ್ತ ಮಗನಿಗೆ ಸ್ನಾನ ಮಾಡಿಸಿದಳು. ತಾನೇ ಹೊಸ ಪಾಯಿಜಾಮ ಜುಬ್ಬ ತೊಡಿಸಿದಳು.ವಿವಿಧ
ಕೋನಗಳಲ್ಲಿ ನಿಂತು ಮಗನನ್ನು ನೋಡಿ ಸಂತೋಷ ಅನುಭವಿಸಿದಳು. ಆ ಸಂತೊಷ ಆಕೆಯಲ್ಲಿ ಸಾವಿರಾರು ನೆನಪುಗಳನ್ನು
ಉಕ್ಕಿಸಿತು. ಸಾವಿರಾರು ಭಾವನೆಗಳನ್ನು ಹೊರ ಚೆಲ್ಲಾಡಿತು ಆಕೆಯ ವೈಧವ್ಯದ ದುರ್ಬಲ ದೇಹ ಅಷ್ಟೊಂದು
ಉದ್ವಿಗ್ನತೆಯನ್ನು ತಡೆದುಕೊಳ್ಳುವುದಾದರೂ ಹೇಗೆ? ಕೋಣೆಗೆ ಹೋಗಿ ಗಂಡನ ಫೋತೋದ ಮುಂದೆ ಬಿದ್ದು ಗೊಳೋ
ಎಂದು ಅಳತೊಡಗಿದಳು.
ಆಕೆ ದುಃಖಿಸುತ್ತಿದುದನ್ನು ಶಾಸ್ತ್ರಿಗಳು ಗಾಯತ್ರಿ ಸಂದರ್ಭದಲ್ಲಿ ಕೇಳಿಸಿಕೊಂಡರು. ಶಿವಾಯ ವಿಷ್ಣು
ರೂಪಾಯ ಶಿವ ರೂಪಾಯ ವಿಷ್ಣುವೇ ಎಂದರು. ಶಿವ ಸಂಹೃದಯಂ ವಿಷ್ಣುಃ ಅಂದರು. ವಿಷ್ಣೋಶ್ಚ ಹೃದಯಂ ಶಿವಃ
ಅಂದರು. ಯಥಾ ಶಿವ ಮಯೋ ವಿಷ್ಣು ಎಂದು ನುಡಿಯಲಾಗಲಿಲ್ಲ. ಅಂತರಾಳದಿಂದ ಮಗನ ನೆನಪು ದೇಹದ ಸಮಸ್ತ ಇಂದ್ರಿಯಗಳನ್ನು
ಆಕ್ರಮಿಸಿ ಬಿಟ್ಟಿತ್ತು. ತನ್ನ ಸಾವನ್ನು ತಾನೇ ಆಮಂತ್ರಿಸಿಕೊಂಡಂಥ ಮಗ ಕೇವಲ ತಮಗೆ ಮಾತ್ರ ಇರಲು ಸಾಧ್ಯ.
ಅವನು ಬೆಳೆದದ್ದೂ ತಡವಾಗಲಿಲ್ಲ. ಕದ್ದು ಮಿಲಿಟರಿಗೆ ಓಡಿದ್ದೂ ತಡವಾಗಲಿಲ್ಲ. ವಂಶದ ಗೌರವವನ್ನು ಗಾಳಿಗೆ
ತೂರಿ ಮ್ಲೇಚ್ಚರ ಸವವಾಸ ಮಾಡುವುದೂ ತಡವಾಗಲಿಲ್ಲ. ಅಯ್ಯೋ ಅವನಿಗೆ ಹಠ ಹಿಡಿದು ಮದುವೆ ಮಾಡಿದ್ದಲ್ಲಿ
ಎಷ್ಟೊಂದು ಕಷ್ಟ ಅನುಭವಿಸಬೇಕಿತ್ತಲ್ಲ! ತಮ್ಮ ಶವ ಸಂಸ್ಕಾರಕ್ಕೆ ಮಗನನ್ನು ಹುಟ್ಟಿಸಿ ಕೊಟ್ಟ ಅವನಿಗೆ
ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ? ಹೌದಲ್ಲವೇ? ಎಷೊಂದು ದೊಡ್ಡವನಾಗಿದ್ದಾನೆ ತನ್ನ ಮೊಮ್ಮಗ! ಅವನು
ದೊಡ್ಡವನಾಗಿರುವುದು ತಮ್ಮಿಂದ ಗುರುತಿಸಲಾಗಲಿಲ್ಲವಲ್ಲ... ಇದು ತಮ್ಮ ಅಕ್ಷಮ್ಯ ಅಪರಾಧವೇ ಸರಿ!
"ತಾಯಿ ಅಲುಮೆಲು... ಶಾಮಾ ಶಾಸ್ತ್ರಿ ಒಳಗಡೆ ಇರುವೆಯೇನಮ್ಮಾ?" ದ್ವಿತೀಯ ಮಾರ್ಜನೆ ಮುಗಿಸಿಕೊಂಡು
ಕೂಗಿದರು ಶಾಸ್ತ್ರಿಗಳು.
ಕೋನೆಯಲ್ಲಿ ದುಃಖದ ಪರಾಕಾಷ್ಠೆ ತಲುಪಿದ್ದ ಅಲುಮೇಲಮ್ಮ ’ಸಹಸ್ರ ಪರಮಾಂ ದೇವಿ ಎಂದು ಕಣ್ಣು ಮುಚ್ಚಿಕೊಂಡಳು...
ಅದು ಕಿವಿಗೆ ಬಿದ್ದೊಡನೆ ಶಾಸ್ತ್ರಿಗಳಿಗೆ ರೋಮಾಂಚನವಾಯಿತು. ಎಷ್ಟೊಂದು ಸುಸಂಸ್ಕೃತಳಿದ್ದಾದಳ್ಳ ತಮ್ಮ
ಸೊಸೆ? ಇಂಥ ಪತ್ನಿಯೊಡನೆ ಸುದೀರ್ಘ ದಾಮ್ಪತ್ಯ ಜೀವನ ನಡೆಸಲು ಮಗ ಅಶ್ವತ್ಥ ಪುಣ್ಯ ಮಾಡಿರಲಿಲ್ಲ. ಇಂಥ
ಪ್ರಿಯವಾದ ತಮ್ಮ ಸೊಸೆ ತಮಗೆ ಪ್ರಿಯವಾದ ಶಬ್ದಗಳನ್ನು ನುಡಿದಳು!
ಸಹಸ್ರ ಪರಮಾಂ ದೇವಿ!.... ಮತ್ತೆ ಪುಲಕಿತರಾದರು ಶಾಸ್ತ್ರಿಗಳು.
ತ್ರಿಪುರ ಸುಂದರಿ ದೇವಿಯ ಮುಖ ಕಮಲವನ್ನು ಬೊಗಸೆಯಲ್ಲಿ ಹಿಡಿದು ಅದು ತಾವು ನುಡಿದ ಮಾತದು. ಸಾವಿರ
ದಳದ ಪುಷ್ಪದ ರೀತಿಯಲ್ಲಿ ಘಮ್ಮನೆ ಆರಳಿದ್ದಳು ದೇವಿ. ಅವಳಿಗಿಂತ
ಕಿರಿಯನಿದ್ದ ತನ್ನಲ್ಲಿ ಪ್ರವಾಹ ಉಕ್ಕಿಸುತ್ತಿದ್ದ ದೇವಿಯ ಮುಖ ಅದಾಗಿತ್ತು.
ಮುಖದಿಂದ್ರಶ್ಚಾಗ್ನಿಶ್ಚ ಪ್ರಾಣಾದ್ವಾಯು ರಜಾಯತ ಎಂಬೊಂದು ತನ್ನ ಪ್ರಿಯವಾಕ್ಯ ಬರಬಹುದೇನೋ? ಶಾಸ್ತಿಗಳು
ಮತ್ತೆ ಮತ್ತೆ ಪುಳಕಿತಗೊಂಡರು. ಯೌವನದ ಕ್ಷಣ ನೆನಪಿಸಿದ ಸಾಕ್ಷಾತ್ ದೇವಿಯೇ ಸರಿ...
ಅಯಾಚಿತವಾಗಿ ಮೇಲೆದ್ದು ನಡೆಯತೊಡಗಿದರು. ಅವರು ಹೋಗುವುದಕ್ಕು ಅವರ ಸೊಸೆ ತಲೆಬಾಗಿಲ ಬಳಿ ಬರುವುದಕ್ಕೂ
ಸರಿ ಹೋಯಿತು. ನಖಶಿಖಾಂತ ನೋಡಿದರು. ಕ್ಷೀರೇಣ ಸ್ಥಾಪಿತಾ ದೇವಿ ಚಂದನೇನ ವಿಲೇಪಿತೇ ಅಂದಿತು ಅವರ ಮನಸ್ಸು,
ಮೈತುಂಬ ವೈಧವ್ಯ ಲೇಪಿಸಿಕೊಂಡಿರುವ ಸೊಸೆ! ಅಪವಿತ್ರಹ್ ಪವಿತ್ರೊವಾ ವೈಧವ್ಯಕ್ಕೆ ತಾವೆಂದೂ ಒತ್ತಾಯಿಸಿರಲಿಲ್ಲ.
ಒತ್ತಾಯಿಸದೇ ಇರಲಿಲ್ಲ ಕೂಡ... ಅವರ ಅಂತರಂಗದಲ್ಲಿ ಅಪರಾಧೀ ಭಾವ ಪ್ರಜ್ವಲಿಸಿತು. ಅದಕ್ಕೆ ತಕ್ಕ ಪ್ರಾಯಶ್ಚಿತ್ತವೆಂದರೆ
ಶಂಕರಾಭರಣದ ಸಾಮಗಾನ ಪ್ರಿಯೆ ಕಾಮಕೋಟಿನಿಲಯೇ ಹಾಡಿ ಲೀಲಾಜಾಲವಾಗಿ ಬದುಕಿನಿಂದ ನಿಷ್ಕ್ರಮಿಸುವುದು...
ಛೇ! ಛೇ! ಅಲುಮೇಲುಗಾಗಿ ಹಾಡಬಾರದು, ಪಿತ್ರುವಿನ ಏಕ ಪಕ್ಷೀಯ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಿ ನಾಲಿಗೆ
ಕಲೆದುಕೊಳ್ಳದೆ ಇರುವುದು.
ಶಾಸ್ತ್ರಿಗಳ ಅವಸ್ಥೆ ಅವಳು ಎಂದೂ ಊಹಿಸಿರಲಿಲ್ಲ. ತನಗೆ ವೈಧವ್ಯ ಮೆತ್ತಿದೆಯಲ್ಲ... ಹಾಗೆ... ಬೆವರು
ಮೆತ್ತಿರುವ ಮುಖ, ಕೆದರಿದ ಶಿಖಾಗ್ರ... ಅವರ ಹೃದಯದ ಬಡಿತ ತನಗೆ ಕೇಳಿಸುತ್ತಿದೆ.
ಸ್ವಾಂತನಕ್ಕೆ ಒಂದು ಕಪ್ಪು ಗಜ್ಜರಿ ರಸ ತಂದು ಕೊಟ್ಟಳು. ತೂಗು ಮಂಚದ ಮೇಲೆ ಕೂಡ್ರಿಸಿ ಒಮ್ಮೇ ತೂಗಿದಳು.
ನವಿಲು ಗರಿ ಬೀಸಣಿಗೆಯಿಂದ ಗಾಳಿ ಬೀಸಿದಳು.
ಒಂದು ಕ್ಷಣ ಕಣ್ಣು ಮುಚ್ಚಿದರು. ತನ್ನ ತಾಯಿಯೇ ಈಕೆ ಎಂದುಕೊಂಡರು. ಉಬ್ಬರವಿಳಿತ ಆರಿದ ಸಾಗರದಂತೆ
ಕಂಗೊಳಿಸಿತು ಅವರ ಮನಸ್ಸು.
"ಮಾವನವರೇ, ತಮ್ಮಲ್ಲಿ ಒಂದು ಕೇಳಬೇಕೆಂದಿರುವೆ".
"ಅದೇನು ಕೇಳು ತಾಯಿ, ಸಂಕೋಚ ಯಾಕೆ" ಎಂದು ಉದ್ವೇಗಪೂರ್ವಕವಾಗಿ ಸಂಭೋದಿಸಿದರು.
"ಶಾಮು ಈಗ ಬೆಳೆದು ನಿಂತಿದ್ದಾನೆ, ಅವನ ನಡುವಳಿಕೆ ಕೂಡ ಮೊದಲಿನ ಹಾಗಿಲ್ಲ..."
"ಹೌದಲ್ಲಾ... ತಾಯಿ... ಅವನು ಬೆಳೆದಿರೋದು ನಮಗೆ ಗೊತ್ತಾಗಲೇ ಇಲ್ಲ ನೋಡು! ಎಲ್ಲಿದ್ದಾನವನು...?"
ಸೊಸೆಯ ಮಾತಿನ ಮರ್ಮ ಅರ್ಥ ಮಾಡಿಕೊಂಡರು.
ಮೊಮ್ಮಗನ ದೇಹದಲ್ಲಿ ಅಂಶವನ್ನು ಹಿರಿಯರಾದ ತಾವು ಗುರುತಿಸಬೇಕಲ್ಲವೇ?... ಆ ಅಂಶವನ್ನು ಗುರುತಿಸಿ
ಅದರ ಅಗತ್ಯಗಳನ್ನು ತಾವು ಸಕಾಲದಲ್ಲಿ ಪೂರೈಸದಿರಲಾದೀತೇ...
"ಶಾಮೂ... ಅಪ್ಪಾಜಿ... ಶಾಮಶಾಸ್ತ್ರೀ... ಎಲ್ಲಿರುವೆ ತಂದೆ?"...
ಕಾಲೇಜು ಡೇ ಸಮಾರಂಭಕ್ಕೆ ಅದೇ ಆಗ ಶಾಸಕರಾಗಿ ಆಯ್ಕೆಯಾಗಿದ್ದ ಗೋವಿಂದೇಗೌಡರು ತಮ್ಮ ಆಪ್ತೇಷ್ಟರೊಂದಿಗೆ
ಬಂದಿದ್ದರು. ಪ್ರತಿ ವಿದ್ಯಾರ್ಥಿ , ವಿದ್ಯಾರ್ಥಿನಿಯರ ಹೆತ್ತವರು, ಆಪ್ತರಿತ್ಯಾದಿ ಬಂದಿದ್ದರು. ಗಿಜಿ
ಗಿಜಿ ಅನ್ನುತ್ತಿರುವ ಪ್ರಾಂಗಣ. ಸಂಜಯಗಾಂಧಿ ಎಂಬ ಹೊಸತು ಕೂಸಿನ ಬಗ್ಗೆ ಹಲವರು ಅಲ್ಲಲ್ಲಿ ಮಾತಾಡುತ್ತಿದ್ದರು.
ಕಾಲೇಜಿನ ಮಾರ್ಕ್ಸ್ವಾದಿ ಶಿಕ್ಷಕ ಪ್ರಾಂಗಣದ ಒಂದು ಮೂಲೆಯಲ್ಲಿ ವಿದ್ಯಾರ್ಥಿಗಳು ಅಂದಿನ ಕವಿಗೋಷ್ಥಿಗೆಂದೇ
ಬರೆದಿದ್ದ ಕವಿತೆಗಳನ್ನು
ಪರಿಶೀಲಿಸುತ್ತಿದ್ದ. ಪ್ರತಿಯೊಂದು ಕವಿತೆಯಲ್ಲಿ ಕುಡುಗೋಲು ಕೋರೈಸುತ್ತಿತ್ತು. ಆ ಕುಡುಗೋಲುಗಳನ್ನು
ಮಸೆದು ಮೊನಚು ಮಾಡತೊಡಗಿದ್ದ. ಶಾಮು ತನ್ನ ಒಂದು ನೀಳ್ಗವಿತೆ ನೀಡಿದ, ಯಮುನಾತೀರದಲ್ಲಿಋಷ್ನನ ನಿರೀಕ್ಷೆಯಲ್ಲಿರುವ
ರಾಧೆಯ ಮನಸ್ಥಿತಿಯನ್ನು ಚಿತ್ರಿಸಿದ್ದ. "ಇಂದಿರಾಗಾಂಧಿ ಆಳುತ್ತಿರುವ ಸಂದರ್ಭದಲ್ಲಿ ಪ್ರೇಮ ಕಾಮದ
ಬಗ್ಗೆ ಬರೆಯೋದು ಸಾಧುವಲ್ಲವೆಂದು" ಶಿಕ್ಷಕ ಕವಿ ಶಾಮುವಿಗೆ ಬುದ್ಧಿ ಹೇಳಿದ, "ಈ ವಯಸ್ಸಿನಲ್ಲಿ ಕ್ರಾಂತಿ
ಬಗ್ಗೆ ಸಮಾಜದಲ್ಲಿ ತಾಂಡವವಾಡುತ್ತಿರುವ ಅಸಮಾನತೆ ಬಗ್ಗೆ ರೊಚ್ಚಿಗೆದ್ದು ಬರೆಯಬೇಕಪ್ಪಾ ಶಾಮಾಶಾಸ್ತ್ರಿ"
ಎಂದು ಭಯಂಕರ ಬುದ್ಧಿ ಹೇಳಿದ. ಶಾಮಾಶಾಸ್ತ್ರಿಗೆ ತನ್ನ ಬ್ರಹ್ಮಣ್ಯದ ಬಗ್ಗೆ ಕೀಳರಿಮೆ ಮೂಡಿತು, ಹೊಟ್ಟೆಕಿಚ್ಚು
ಮೂಡಿತು, ತಾವು ಶೂದ್ರರಾಗಿ ಹುಟ್ಟಿರುವುದೇ ಅಡ್ವಾಂಟೇಜ್ ಎಂದು ಭಾವಿಸಿದ್ದಾರೆ ಎಂದುಕೊಂಡ.
ತನ್ನ ಕವಿತೆ ಮತ್ತೊಮ್ಮೆ ಓದಿಕೊಂಡ, ಚನ್ನಾಗಿದೆ ಅನ್ನಿಸಿತು., ಪ್ರತಿಯೊಂದು ಅಕ್ಷರವನ್ನು ಸಾಣೆ ಹಿಡಿದಿದ್ದ.
ಪ್ರತಿಯೊಂದು ಶಬ್ದವನ್ನು ಪುಟ್ಟ ಪುಟ್ಟ ಆಭರಣದಂತೆ ರೂಪಿಸಿದ್ದ...
ಅದರಲ್ಲಿ ತಾನು ಕೃಷ್ಣನಾಗಿದ್ದ. ಅನಸೂಯ ರಾಧೆಯಾಗಿದ್ದಳು. ಯಮುನಾ ನದಿ ಎಂದರೆ ಹುಲುಲಿ ಹಳ್ಳ. ರಿಜರ್
ಜಾಲಿ ಗಿಡಗಳೇ ತುಳಸಿ ವನ. ಅಗಸರ ಸಾಂಬಿಯಾನ ಕತ್ತೆಗಳು; ಗೌಡರ ಕಾಲಿಲ್ಲದ ಕುದುರೆ ಮುಂತಾದುವೆಲ್ಲ
ಗೋವುಗಳು; ಶಿಳ್ಳೆಯೇ ವೇಣು... ಹೀಗೆ ಎನೇನೋ ಸಂಕೇತಗಳನ್ನು ಪ್ರತಿಮೆಗಳನ್ನು ಪೋಣಿಸಿ ಪೋಣಿಸಿ ಕವನ
ಹೆಣೆದು ತಂದಿದ್ದ...
ಬಕಪಕ್ಷಿಗಳ ನಡುವೆ ಹಂಸಪಕ್ಷಿ ಯಾವ ಪ್ರಕಾರವಾಗಿ ಶೋಭಾಯಮಾನವಾಗಿ ಗೋಚರಿಸುತ್ತದೋ ಹಾಗೆ ಸಭಸದರ ನಡುವೆ
ಅನಸೂಯಾ ದೇದಿಪ್ಯಮಾನವಾಗಿ ಹೊಳೆಯುತ್ತಿದ್ದಳು. ಎಕ್ಸ್ಟ್ರಾ ನಟಿಯರ ನಡುವೆ ಹೀರೋಯಿನ್ ಇರುತ್ತಾಳಲ್ಲ
ಹಾಗೆ.
ನೀನು ಯಾವುದೇ ಕಾರಣ ಓದದಂತಿರಬೇಡ. ನೀನು ಓದಲೇಬೇಕು...ಎಂದು ಆಕೆ ಬರೆದಿದ್ದ ಚೀಟಿ ತಲುಪಿ ಆತನಲ್ಲಿ
ಸಹಸ್ರ ಆನೆಯ ಬಲ ತುಂಬಿತು.
ಕ್ರಾಂತಿಕಾರಿ ಲೆಕ್ಚರರ್ ’ ಮೈಕ್ ಟೆಸ್ಟಿಂಗ್ ತ್ರೀಟುವನ್’ ಅಂದ, ತನ್ನ ಧ್ವನಿ ತಾನೇ ಕೇಳಿ ರೋಮಾಂಚನಗೊಂಡ.
ಆತನೇ ಕಾರ್ಯಕ್ರಮ ನಿರ್ವಾಹಕ. ಅದು ಆತನ ನೆಚ್ಚಿನ ಕೆಲಸ. ಪ್ರತಿಯೊಂದಕ್ಕೆ ಕೆಂಪು ವಂದನೆಗಳು ಅಂತ
ಹೇಳೋದೆಂದರೆ ಆತಗೆ ತುಂಬ ಇಷ್ಟ. ಅದನ್ನು ಹೇಳಲಿಕ್ಕೆಂದೇ ಹೋಚಿಮಿನ್ ಥರ ಗಡ್ಡ ಬಿಟ್ಟಿದ್ದ, ಮಾವೋನ
ರೀತಿಯಲ್ಲಿ ಹುಬ್ಬುಗಳನ್ನು ಟ್ರಿಮ್ ಮಾಡಿದ್ದ. ಕ್ಯಾಸ್ಟ್ರೋ ಥರ ಉದ್ದ ಕಾಣಿಸಬೇಕೂಂತ ’ಹೈ ಹೀಲ್ಡ್’
ಶೂ ಧರಿಸುತ್ತಿದ್ದ. ಬೊಲಿವಿಯ್ದ್ ಕ್ರಾಂತಿಕಾರಿ ಕಾರ್ಮಿಕನ ಥರ ಕಾಣಿಸಬೇಕೂಂತ ಅವರ ಶೈಲಿಯ ಹ್ಯಾಟ್
ಧರಿಸುತ್ತಿದ್ದ. ತನ್ನ ಆರು ಸಾವಿರ ರುಪಾಯಿ ಸಂಬಳದ ಪೈಕಿ ಸುಮಾರು ಐವತ್ತು ರೂಪಾಯಿಗಳನ್ನು ಕ್ರಾಂತಿಕಾರಿ
ಚಟುವಟಿಕೆಗಳಿಗೆ ಮೀಸಲಾಗಿರಿಸುತ್ತಿದ್ದ.
ಸ್ವಾಗತದಿಂದ ಹಿಡಿದು ವಂದನಾರ್ಪಣೆವರೆಗೆ ಆತನದೇ ಕೆಂಪು ಕೆಂಪು... ಆತ ಮೈಕೆದುರು ನಿಂತುಕೊಂಡನೆಂದರೆ
ಮುಟ್ಟಾಗುತ್ತಿರುವನೆಂದೇ ಅರ್ಥ.
ಕಾಮ್ರೇಡ್ ಗೋವಿಂದೇಗೌಡರಿಗೆ ಎಂದು ಸಂಭೋದಿಸಿ ಕ್ರಾಮೇಡ್ ಶೈಲಿಯಿಂದ ಆ ಶಾಸಕ ಮಹೋದಯರ ಕಡೆಗೆ ನೋಡಿದ.
ಅವರಿಗೆ ’ಕಾಮ್ರೇಡ್’ ಎಂಬ ಪದದ ಅರ್ಥವಾಗಿದ್ದರೆ ತಾನೆ?
ಆತ ನೀಡುತ್ತಿರುವ ಬಿರುದಿರಬೇಕೆಂದು ಅವರು ಭಾವಿಸಿ ಹಸನ್ಮುಖಿಯಾದರು!
ಕೆಲವು ಮಠಗಳವರು ’ಶರಣ" ಎಂಬ ಸ್ಟಿಕ್ಕರ್ ಹಚ್ಚುತ್ತಾರಲ್ಲ ಹಾಗೆ.
ಹೀಗೆ ಎಲ್ಲರಿಗೂ ಅಂಥದೊಂದು ಲೇಬಲ್ಲು ಅಂಟಿಸಿ ಪುನೀತರನ್ನಾಗಿ ಮಾಡಿದ, ಕೆಲವರಿಗೆ ಲೆನಿನ್ ಎಂದೋ,
ಏಂಗೆಲ್ಸ್ ಎಂದೋ; ಚಿಗುವೆರಾ ಎಂದೋ ಬಿರುದು ನೀಡಿ ಹಲೋ ಹಲೋ ಅನ್ನಿಸಿಕೊಂಡ.
ಪ್ರಾರ್ಥನೆ ಆತನೇ ಬರೆದ ಹಾಡನ್ನು ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಹಾಡಿ ಸಭಾಸದಸ್ಯರ ಅನುಕಂಪಕ್ಕೆ
ಪಾತ್ರರಾದರು.
ಕೆಂಪು ವಂದನಾ ಪುಷ್ಪಗಳನ್ನು ನೀಡಿ
ಕೆಂಪು ಸ್ವಾಗತ ಕೋರುವೆವು ನೋಡಿ
ಇಂಥದೊಂದು ಹಾಡು ಅದಾಗಿತ್ತು. ಮುಖ್ಯವಾಗಿ ಜಗದ್ಗುರು ಎಂಟೊಂಭತ್ತು ಸಾವಿರ ಮಠದ ಕಾಲೇಜು ಅದಾಗಿತ್ತಲ್ಲವೆ?
ಅದರ ಸಂಸ್ಥಾಪಕರಾದ ಜಗದ್ಗುರು ಶ್ರೀಮನ್ನಿರಂಜನ ಎತ್ತೇಂದ್ರ ಮಹಾಸ್ವಾಮಿಗಳ ಭಾವಚಿತ್ರ ಅನಾವರಣವನ್ನು
ಇನ್ನೊಬ್ಬ ಜಗದ್ಗುರು ಬೆಳದಿಂಗಳೇಶವರರು ಮಾಡಬೇಕಿತ್ತು.
ನಮ್ಮ ಈ ಕೆಂಪು ಲೆಕ್ಚರರು ಫೊಟೋದಲ್ಲಿದ್ದ ಜಗದ್ಗುರುವಿಗೂ ಕಾಮ್ರೇಡು ಎಂದೂ ಅದನ್ನು ಅನಾವರಣ ಮಾಡಿದವರಿಗೆ
’ಡಬಲ್ಕಾಮ್ರೇಡು’ ಎಂದು ಸಂಭೋದಿಸಿದ.
ಜಗದ್ಗುರುಗಳು ಪ್ರಿನ್ಸಿಪಾಲರ ಕಿವಿಯಲ್ಲಿ ಬಾಯಿಯಿಟ್ಟು ’ಅಂತೂ ಇವನಾದ್ರು ನಮ್ಗೆ ಕಾಮ್ರೇಡ್ ಎಂದು
ಬಿರುದು ಕೊಟ್ಟನಲ್ಲ. ನಾಳೆ ಈತನನ್ನು ನಮ್ಮ ಸನ್ನಿಧಾನಕ್ಕೆ ಕಳುಹಿಸಿ ಕೊಡಿ. ಒಂದಿಷ್ಟು ವಿಚಾರಿಸಿಕೊಳ್ಳೋದಿದೆ’
ಎಂದು ಪಿಸಿಪಿಸಿ ನುಡಿದರು.
ಕವಿಗೋಷ್ಠಿ ಮತ್ತಷ್ಟು ಕೆಂಪುವಿನಿಂದ ಕೂಡಿತ್ತು.
ಒಬ್ಬ ಕವಿ ಮಾಂಸಕ್ಕೆ ರಕ್ತ ಕಲೆಸಿ ಅದಕ್ಕೆ ಎಲುಬು ಬೆರೆಸಿ ಕಾಂಕ್ರೀಟು ಮಾಡಿ ಗುಡಿ ಕಟ್ಟಿ ಅದರಲ್ಲಿ
ಭಾರತ ಮಾತೆಯನ್ನು ಪ್ರತಿಷ್ಠಾಪಿಸಿ ಮೆಚ್ಚುಗೆ ಗಳಿಸಿದರೆ, ಮತ್ತೊಬ್ಬ ಕವಿ ’ಹೊಡಿ ಬಡಿ ಕಡಿ’ ಎಂಬೀ
ಮೂರು ಶಬ್ದಗಳನ್ನೇ ಉಪಯೋಗಿಸಿ ಸೊಗಸಾದ ಕವನ ವಾಚನ ಮಾಡಿದ. ಮಗದೊಬ್ಬ ಕವಿ ಉಳ್ಳವರ ಪಕ್ಕೆಲುಬುಗಳ ಪಟ್ಟಿ
ಮಾಡಿದ. ಕವಯತ್ರಿಯೋರ್ವಳು ಮದುವೆಯಾಗಲಿರುವ ಗಂಡನ ಮೇಲೆ ಪಕ್ಕ ಅಬುದಾಬಿಯ ಎಣ್ಣೆ ಸುರಿದು ಬೆಂಕಿ ಹಚ್ಚಿ
ಬಿಟ್ಟಳು. ಹೀಗೆ ಕವಿಗಳು ಒಬ್ಬರ ಹಿಂದೆ ಒಬ್ಬರು ನುಗ್ಗಿ ಕವಿತೆ ವಾಚಿಸಿ ಸಭಾಸದರ ಮುಖಗಳಿಗೆ ಹರಳೆಣ್ಣೆ
ಲೇಪಿಸಿದರು.
ದೂರದಿಂದ ’ಓದೋ’ ಎಂದು ಅನಸೂಯ ಕಣ್ಣು ಮಿಟಿಕಿಸುತ್ತಿದ್ದಾಳೆ, ಒಂದು ಹೆಜ್ಜೆ ಮುಂದಕ್ಕೆ ಎರಡು ಹೆಜ್ಜೆ
ಹಿಂದಕ್ಕೆ ಸರಿದು ಗೊಂದಲಕ್ಕೀಡಾದನು.
ನಗ್ನೋ ನಿಸ್ಸಂಗ ಶುದ್ಧ ಶ್ರೀಗುಣ ವಿರಹಿತೋ ಧ್ವಸ್ತ ಮೋಹಾಂದಕಾರೋ... ಅಂತ ಎನೇನೋ ಗೊಣಗಿ ಆವೇಶ ತಂದುಕೊಂಡು
ಜೈ ಭಜರಂಗ ಬಲಿ ಅಂತ ವೇದಿಕೆಗೆ ನುಗ್ಗಿಬಿಟ್ಟ. ಆತನನ್ನು ಯಾವ ಕಾಮ್ರೇಡುಗಳಿಗೂ ತಡೆಯಲಾಗಲಿಲ್ಲ.
ಸನಾತನ ಹಿಂದೂ ಧರ್ಮ ಪುನರುತ್ಥಾನದ ಬಗ್ಗೆ ಕವಿತೆ ಓದ ಬಹುದೆಂದು ಅವನ ವೇಷ ಭೂಷಣಗಳಿಂದ ಅರ್ಥೈಸಿಕೊಂಡು
ಕಾಮ್ರೇಡ್ ಜಗದ್ಗುರು ಓದಲಿ ಬಿಡಿ ಎಂದು ತಮ್ಮ ಮೂಗಿನಿಂದ ಸಂಜ್ಞೆ ಮಾಡಿದರು.
ಶಾಮು ಮೈಕ್ನೆದುರು ನಿಂತು ಗಂಟಲು ಸರಿ ಪಡಿಸಿಕೊಂಡ. ಒಮ್ಮೆ ಅನಸೂಯಳ ಕಡೆಗೆ ನೋಡಿದ, ಹಿಂದೆ ಕೂತಿದ್ದ
ಒಬ್ಬ ಆಕೆಯ ಜಡೆಗೆ ಏನೋ ಕಟ್ಟುತ್ತಿರುವುದು ನೋಡಿದ. ಸಂಜ್ಞೆಗಳ
ಮೂಲಕ ಆ ಬಗ್ಗೆ ಎಚ್ಚರಿಸಲು ಪ್ರಯತ್ನಿಸಿದ, ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷಿಯೊಳಗೆ ಎಂಬಂತೆ
ಗೊಬ್ಬರದಂಗಡಿ ಜಲಜಾಕ್ಷಿ ಸೈಡ್ ವಿಂಗಿನಿಂದ ಹೊರಬಂದು ನಿಂತಳು. ಮೀಸೆ ತಿರುವುತ್ತ ತೊಡೆತಟ್ಟುತ್ತ
ಕವಿತೆಯ ಮೂಲ ಎಳೆ ಬಗ್ಗೆ ಸೂಚಿಸಿದಳು.
ಆ ಕಡೆ ಓದು ಎನ್ನುತ್ತಿರುವ ಅನಸುಯ ಈ ಕಡೆ ಓದಿದರೆ ಮುಂಜಿ ಮಾಡಿಸ್ತೀನಿ ಎಂದು ಸೂಚಿಸುತ್ತಿರುವ ಜಲಜಾಕ್ಷಿ
ಎಂಬ ತಿಂಥಿಣಿ ದಳ ಸುಲೋಚನೆ...
ಏನಕೇನ ಪ್ರಕಾರೇಣ... ಓದಲೇಬೇಕೆಂದು ನಿರ್ಧರಿಸಿಬಿಟ್ಟ ಗಂಡುಗಲಿ.
ಹುಲುಲಿಹಳ್ಳದ ದಂಡೆ
ನೀರಬರುವುದ ಕಂಡೆ
...ಎಂದು ಓದಿದೊಡನೆ ಪ್ರೇಕ್ಷಕರು ಉಂಡೆ, ಕುಂಡೆ, ಸಂಡೆ, ಮಂಡೆ ಎಂಬಂಥ ಪ್ರಾಸ ರಸಭರಿತ ಶಬ್ದಗಳನ್ನು
ಕೂಗಿದರು. ಜಲಜಾಕ್ಷಿ ಸೀಟಿ ಹೊಡೆದರೆ ಅನಸೂಯ ಹಣೆಹಣೆ ಚಚ್ಚಿಕೊಂಡಳು. ಜಗದ್ಗುರುಗಳು ಕೂಡ ನಗುತ್ತಾ
ಸಾಕುಬಿಡಪ್ಪಾ ಎಂದರು.
ಸಾವಿಗೆ ಸಮಾನವಾದ ಇಂಥ ಅವಮಾನ ಅನುಭವಿಸುವುದಕ್ಕಿಂತ...
ಶಾಮುಗೆ ಏನು ತೋಚಿತೋ ಎನೋ...
ಸಾಮಗಾನ ಪ್ರಿಯೆ ಕಾಮ ಕೋಟಿ ನಿಲಯೇ
...ಎಂಬ ಮುತ್ತುಸ್ವಾಮಿ ದೀಕ್ಷಿತರ ಕೃತಿ ಸೊಗಸಾಗಿ ಹಾಡಿಬಿಟ್ಟನು. ಕೇಳಿದವರೆಲ್ಲ ಆನಂದ ಸಾಗರದಲ್ಲಿ
ಈಜಾಡಿದರು. ಗೊಬ್ಬರದಂಗಡಿ ಟ್ರೇಡ್ಮಾರ್ಕ್ ಅಭಿನಂದಿಸುವ ನೆಪದಲ್ಲಿ ವೇದಿಕೆಗೆ ನುಗ್ಗಿ "ನಾಳೆ ಸೂರ್ಯಾಸ್ತದೊಳಗಾಗಿ
ನಿನ್ನ ನಾನು ರೇಪ್ ಮಾಡ್ಲಿಲ್ಲ ನಾನು ಗೊಬ್ಬರದಂಗಡಿ ಗುರುಬಸಪ್ಪನ ಮಗಳೇ ಅಲ್ಲ" ಎಂದು ಪಿಸಿಪಿಸಿ ನುಡಿದಳು.
ದಯವಿಟ್ಟು ನನ್ನ ಕೊಲೆ ಮಾಡಬೇಡ ಎಂಬಂತೆ ಆತ ಆಕೆಯ ಕಡೆ ನೋಡು ನೋಡುತ್ತಿದ್ದಂತೆ ಅಳು ಬಂದು ಬಿಟ್ಟಿತು.
ಸ್ವಾಮಿಗಳು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಂಕರಾಭರಣರಾಗದ ಬಗ್ಗೆ ಪ್ರಸ್ತಾಪಿಸಿದರು. ಇದರ ಕೃತಿಕಾರ
ದೀಕ್ಷಿತರು ತಮ್ಮ ಮಠದಲ್ಲಿದ್ದ ಇತಿಹಾಸ ಬೆದಕಿದರು. ಹಾಗು ಹಾಡಿದ ಶಾಮನ ಬಗ್ಗೆ ಮೆಚ್ಚಿಗೆ ಸೂಚಿಸುತ್ತ
ಈ ತರುಣ ಸಂಗೀತ ಕಲಿಯೋದಾದ್ರೆ ಎಲ್ಲ ಖರ್ಚನ್ನು ತಾವು ಭರಿಸುತ್ತೇವೆ ಈಂದು ಹೇಳಿದರು. ಭಾರಿ ಕರತಾಡನವಾಯಿತು.
"ಶಂಕರಾಭರಣದಲ್ಲಿ ಸ್ಟಾಲಿನ್ ಬಗ್ಗೆ ಹಾಡೋದಾದ್ರೆ ಮುಂದಿನ ಕವಿಗೋಷ್ಠಿಯಲ್ಲಿ ಅವಕಾಶ ಮಾಡಿಕೊಡ್ತಿನಿ"
ಎಂತ ತನ್ನದೇ ಆದ ಶೈಲಿಯಲ್ಲಿ ಕ್ರಾಂತಿಕಾರ ಲೆಕ್ಚರರ್ ಅಭಿನಂದಿಸಿದ. ನಿನ್ನಂಥ ವಿಧ್ಯಾರ್ಥಿ ಪಡೆದಿರೋದಕ್ಕೆ
ನಾವೆಲ್ಲ ತುಂಬ ಹೆಮ್ಮೆ ಪಡ್ತೀವಿ ಶಾಮಶಾಸ್ತ್ರಿ... ಈ ವರ್ಷ ಬಿ.ಎ. ಮುಗೀತದಲ್ಲ... ಮುಂದೇನ್ಮಾಡಬೇಕೆಂದಿರುವಿ...
ಎಂದು ಪ್ರಿನ್ಸಿಪಾಲರು ಸಂತೋಷ ವ್ಯಕ್ತಪಡಿಸುತ್ತ ಮುಂದುವರಿದು ಹೇಳಿದರು. "ಅವಿವಾಹಿತ ಪ್ರತಿಭಾವಂತ
ತರುಣರೆಂದರೆ ಸ್ವಾಮಿಗಳಿಗೆ ಇಷ್ಟ... ಹಾಗಂತ ಸಂಗೀತದ ಬಗ್ಗೆ ತಲೆ ಕೆಡಿಸಿ ಕೊಂಡಿಯೆ ಜೋಕೆ..."
ಆಫೀಸ್ ಕಡೆ ಹೊರಟಿದ್ದವರು ತಡೆದು ನಿಂತು ಶಾಸ್ತ್ರಿಯನ್ನು ಕರೆದರು.
"ಯಾವಾಗಲಾದ್ರು ಬಿಡುವುಸಿಕ್ಕಾಗ ಮನೆಕಡೆ ಬಂದು ಹೋಗು!" ಎಂದು ಹೇಳಿ ಹೋದರು.
ತನ ನಂತರ ಸಿಕ್ಕ ಅನಸೂಯಗೆ ಜಲಜಾಕ್ಷಿ ಮತ್ತಿ ಪ್ರಿನ್ಸಿಪಾಲರು ಅಭಿನಂದಿಸಿದ ಬಗೆಯನ್ನು ವಿವರಿಸಿದ.
ಆಕೆಯ ಹೃದಯದ ಬಡಿತ ಹೆಚ್ಚಿತು.
"ಶಾಮೂ ಯಾಕೋ ಟೈಮು ಚೆನ್ನಾಗಿಲ್ಲ... ನನಗ್ಯಾಕೋ ಭಯ ಆಗ್ತಿದೆ... ಒಂದೆರಡು ದಿನ ಯಾರ ಕಣ್ಣಿಗೂ ಬೀಳದಂತೆ
ಮನೇಲಿರು" ಆಕೆಯ ಮಾತು ಪೂರ್ಣಗೊಂದಲದಿಂದ ಕೂಡಿ ಇರಲಿಲ್ಲ.
ಗೊಬ್ಬರದಂಗಡಿ ಜಲಜಾಕ್ಷಿಗೆ ಗ್ಲೋಬಿನಂಥ ವಕ್ಷೋಜಗಳು ಇದ್ದಮಾತ್ರಕ್ಕೆ ಆಕೆ ಪೂರ್ಣ ಮಹಿಳೆ ಅಂತ ಹೇಳಲಿಕ್ಕಾಗದು.
ದಿನಕ್ಕೆರಡು ಹೊತ್ತು ಬೀಫ್ ಲಗಾಯಿಸುವ ಆಕೆಯ ಹಿಂದೆ ನಾಕು ಮಂದಿ ಮುಂದೆ ಮೂರು ಮಂದಿ ಗಂಡಸರನ್ನು ಸದಾ
ಇಟ್ಟುಕೊಂಡಿರುತ್ತಾಳೆ... ಆಕೆ ಪೋಲಿಸ್ ಸ್ತೇಷನ್ನೆದುರಿಗೆ ಶಾಮುನನ್ನು ಹಿಡಿದೆಳೆದೊಯ್ದು ರೇಪ್ ಮಾಡಿ
ಬಿಡಲೂ ಬಹುದು.
ಇನ್ನು ಎರಡನೆಯದಾಗಿ ಪ್ರಿನ್ಚಿಪಾಲ ಶಿವರಾಮರಾಯರ ಧರ್ಮ ಪತ್ನಿ ರಾಜೇಶ್ವರಮ್ಮ ಎರಡಡಿಗೊಂದರಂತೆ ಹೆಣ್ಣು
ಹೆತ್ತು ನೆಟ್ಟಿರುವಂಥವಳು... ಸೀರಿಯಲ್ ನಂಬರ್ ಮೂರು ಮತ್ತು ಆರು ಇವೆ, ನಾಲ್ಕನೆ ನಂಬರ್ ವುಮನ್ಸ್
ಕಾಲೇಜಿದುರಿಗೆ ತಳ್ಳೋ ಬಂಡಿಯಲ್ಲಿ ಶೇಂಗಾ ಮಾರುತ್ತಿದ್ದ ರಾಜಾಸಾಬನ ಹಿಂದೆ ಬಂಡಿ ಪುರಕ್ಕೆ ಓಡಿಹೋದಳಂತೆ...
ಮೂರು ಮತ್ತು ನಾಲ್ಕು ನಂಬರಿಗಳಿಗೊಂದೊಂದು ಗಂಡು ಹುಡುಕಿ ಮೆಡಿಮಿಕ್ಸ್ ಹಚ್ಚಿ ತೊಳೆದುಕೊಂಡು ಪ್ರಿನ್ಸಿಪಾಲರು
ಶ್ರೀಶೈಲದ ಕದಳೀವನ ಪ್ರವೇಶ ಮಾಡಿ ಸಲ್ಲೇಖನ ವ್ರತ ಮಾಡಿ ಪ್ರಾಣ ತ್ಯಾಗ ಮಾಡಬೇಕೆಂದು ನಿಸ್ಚಯಿಸಿರುವರಂತೆ...
ತಮ್ಮ ಪ್ರಾಣ ಪದಕ ಅನಸೂಯ ಹೇಳಿದ್ದರಲ್ಲಿ ನಿಜವಿಲ್ಲದಿರಬಹುದು ಆದರೆ ಸುಳ್ಳಿರಲಿಕ್ಕಿಲ್ಲ. ಇವೆರಡೂ
ತನಗೆ ಭಯಾನಕ ಅಂಶಗಳೇ. ಆಕೆ ಹೇಳಿದಂತೆ ಕೋಣೆ ಪ್ರಸ್ತಾಶ್ರಮ ಪ್ರವೇಶಿಸಿದ.
"ನಾನು ನಿನಗೆ ಎಷ್ಟು ಸಾರಿ ಹೇಳಬೇಕೋ ದೀಕ್ಷಿತರ ಆ ಕೃತಿ ಹಾಡಕೂಡದಂತ..." ಶಾಸ್ತ್ರಿಗಳು ಖೇದದಿಂದ
ನುಡಿದರು ಅವರು ದೂರನಿಂತು ಕೇಳುತ್ತಿದ್ದರು. ಪ್ರತಿ ಧ್ವನಿ ವಿಲಾಸಕ್ಕೆ ಕಣ್ಣು ತೇವ ಮಾಡಿಕೊಂಡಿದ್ದರು.
ಯೌವನದ ನೆನಪುಗಳು ಒಮ್ಮೆಗೆ ಧಾಳಿ ಮಾಡಿ ಘಾಸಿಗೊಳಿಸಿಬಿಟ್ಟವು.
ಇಪ್ಪತ್ತೈದರ ಹರೆಯದ ನೆನಪುಗಳನ್ನು ಸಹಿಸುವ ಶಕ್ತಿ ಅವರ ತೊಂಬತ್ತೆರಡರ ವಯಸ್ಸಿನ ದೇಹಕ್ಕೆ ಹೇಗೆ ಸಾಧ್ಯ!?
ಆ ವಯಸ್ಸಿನಲ್ಲಿ ಆ ಚಟುವಟಿಕೆ ತಪ್ಪೋ ಸರಿಯೋ; ಅದೊಂದು ವಿಧಿ ನಿಯಮ - ಋಣಾನುಬಂಧೇ ರೂಪೇಣಾಂ...
ಕನ್ನಡಿಯಲ್ಲಿ ತಮ್ಮನ್ನು ಅಣಕಿಸುತ್ತಿರುವ ಪ್ರತಿಬಿಂಬ. ನಿಡಿದಾದ ಉಸಿರುಬಿಟ್ಟರು.
ಶಾಮಾಶಾಸ್ತ್ರಿಗೆ ನೋವಾಯಿತು.
"ನಿಮಗೆ ದುಃಖ ಆಗೋದಾದ್ರೆ... ನಾನು ದೀಕ್ಷಿತರ ಕೃತಿ ಹಾಡುವುದಿಲ್ಲ ತಾತ!"
ಮೊಮ್ಮಗನನ್ನು ಬರಸೆಳೆದು ಅಪ್ಪಿಕೊಂಡರು.
"ನಿನಗೆ ಸೊಗಸಾದ ಶಾರೀರವಿದೆ ಶಾಮೂ; ನೀನು ಹಾಡುತ್ತಲೇ ಇರಬೇಕು. ನನ್ನ ಎದೆಯಾಳದಲ್ಲಿ ಸತ್ತು ಹೋಗಿರುವ
ನೆನಪುಗಳಿಗೆ ನೀನು ಜೀವ ತುಂಬಬೇಕು, ಆ ನೆನಪುಗಳ ಸಹಾಯದಿಂದ ನಾನಿನ್ನೂ ಬದುಕಬೇಕಿದೆ ಮಗೂ"
ಈ ನಡುವೆ ಕುಮಾರಿ ಅನಸೂಯಾ ಎಂಬ ಕನ್ಯಾಮಣಿಯ ಕುಟುಂಬಕ್ಕೆ ಸಂಬಂಧಿಸಿದಂತೆ ನಡೆದ ಕೆಲವು ದಾರುಣ ಘಟನೆಗಳು
ಹೇಳುವುದು ಕೈಬಿಟ್ಟಿದ್ದೆ. ಶ್ರೇಣೀಕೃತ ಸಮಾಜದಲ್ಲಿ ಹುಟ್ಟಿ ಬೆಳೆದಿರುವ ಯಾವ ವರ್ಗದ ಪರವಾಗಿ ತಾತ್ವಿಕ
ನಿಲ್ಲುವುದು ಎಂಬ ಕನ್ಫ್ಯೂಷನ್ನಲ್ಲಿದ್ದೆ ಮತ್ತು ಈಗಲೂ ಇರುವೆ. ಬದುಕುವ ಕ್ರಮ ಯಾರಿಗೆ ಸುಲಭ ಮತ್ತು
ಯರಿಗೆ ಕಷ್ಟ ಎಂಬುವುದು ಲೇಖಕನಾಗಿ ಅರ್ಥಮಾಡಿಕೊಳ್ಳುವುದು ನನ್ನ ಜವಾಬ್ದಾರಿ, ನೀಚಸ್ಥಾನದಲ್ಲಿರುವ
ಮನುಷ್ಯನ ಬಗ್ಗೆ ತೀರ ಎತ್ತರದ ದ್ವನಿಯಲ್ಲಿ ಮಾತಾಡುತ್ತಿದ್ದ ನಾನು ಪರಮೇಶ್ವರ ಶಾಸ್ತ್ರಿಗಳ ಪರವಾಗಿ
ನಿಂತು ವಕಾಲತ್ತು ವಹಿಸಿರುವೆನೆಂದು ಗೊತ್ತು. ಬುದ್ಧಿ ಪೂರ್ವಕವಾಗಿಯೇ ಈ ಕೆಲಸ ಮಾಡಿರುವೆ ಮತ್ತು
ಮಾಡುತ್ತಿರುವೆ ಸನಾತನೆಗೆ ಶಾಕ್ ಕೊಡದ ಹೊರತು ಶೂದ್ರ ವರ್ಗದೊಳಗಿನ ಸ್ಪಂದನಗಳು, ಜೀವನೋತ್ಸಾಹಗಳು
ಫಳಫಳ ಹೊಳೆಯಲಾರವು.
ರುದ್ರನಾಯಕನಂಥ ಶೂದ್ರನಿಗೆ ಶಿಷ್ಟವರ್ಣಿಯ ನಂಬಿಕೆಗಳು: ದೇವರು ದಿಂಡರುಗಳು ಬೆಲೆ ಕೊಡೋದಿಲ್ಲ ಅವನ
ಹತ್ತಿರವೂ ಸುಳಿಯುವುದಿಲ್ಲ: ರುದ್ರನಾಯಕನಿಗೆ ಬೇಕಾಗಿದ್ದುದು ಕಂಚಿಕಾಮಕೋಟಿ ಶ್ರೀಗಳಲ್ಲ ಮೈಗೆಲ್ಲ
ಬೂದಿಬಳಕೊಂಡು ಸುಡುಗಾಡಲ್ಲಿ ವಾಸಮಾಡೋ ಸಾಧುಗಳು, ಅವಧೂತರು. ಮಾಟ ಮಂತ್ರ ಮಾಡಬೇಕು, ಉಳ್ಳವರನ್ನು
ಮರಳು ಮಾಡಬೇಕು. ಹೀಗೆ ಮಾಡಿ ಮಾಡಿ ತಾನು ಉಳ್ಳವನಾಗಬೇಕು, ತಾನೂ ಚುಕ್ ಚುಕ್ ಮೋಟಾರು ಗಾಡಿಯಲ್ಲಿ
ತಿರುಗಾಡಬೇಕು, ಹೆಂಡತಿ ರುಕ್ಮಿಣಿ ತನ್ನ ಕೈಹಿಡಿದು ಪಡಬಾರದ ಕಷ್ಟ ಪಟ್ಟು ತನ್ನ ಏಳ್ಗೆಗಾಗಿ ಸವೆದ
ಶ್ರೀಗಂಧದ ಕೊರಡು, ಆಕೆಯ ಜೀವನವನ್ನು ಸುಖದ ಸುಪ್ಪತ್ತಿಗೆ ಮೇಲಿಟ್ಟು ಮೆರಸಬೇಕು. ಏಕಮಾತ್ರ ಪುತ್ರಿ
ಅನಸೂಯ ತುಂಬ ಜಾಣೆ, ಚುರುಕು. ತಮಗೆ ಒಂದಿಷ್ಟು ಕಡಿಮೆ ಮಾಡಿಕೊಂಡು ಶಕ್ತಿ ಮೀರಿ ಓದಿಸಿದ್ದಾಯಿತು.
ಸರಕಾರಿ ಸಂಬಳ ತಿಂಬೋ ವರನನ್ನು ಹುಡುಕಿ ಮದುವೆ ಮಾಡಬೇಕು, ವರದಕ್ಷಿಣೆ ಎಷ್ಟಾದರೂ ಸರಿಯೇ. ಮಗಳು ಸುಖವಾಗಿರಬೇಕು.
ತಾನು ಗಳಿಸಿರುವ ಆಸ್ತಿಯಾದರೂ ಏನು? ಹಾಳಾದ ಭೂತಗಳು ಬಾಟಿಲಿಯಿಂದ ತಪ್ಪಿಸಿಕೊಳ್ಳದಿದ್ದರೆ ಚೆನ್ನಾಗಿತ್ತು.
ಅವುಗಳನ್ನು ಹುಣಸೆ ಮರದ ಕೊಂಬೆಗೆ ಬಂಧಿಸಿಟ್ಟು, ಅವುಗಳಿಂದ ಎಲ್ಲೋ ಕೆಲಸ ಮಾಡಿಸಬಹುದಿತ್ತು. ಹಾಳಾದ
ಶಾಸ್ತ್ರಿ ತನ್ನ ದುಡಿಮೆಗೆ ಕಲ್ಲು ಹಾಕಿರುವನಲ್ಲ! ಅಗ್ರಹಾರದಲ್ಲಿರುವವರು ಶೂದ್ರಕೇರಿಗೆ ಬಂದುಬಿಟ್ಟರೆ
ಹೀಗೇ ಆಗುವುದು, ಮದ್ಯ ಅಮೇಧ್ಯದಿಂದ ಜಾತಿ ಬ್ರಷ್ಟನಾಗಿದ್ದ ಅಶ್ವತ್ಥಗೆ ತಾನೇ ಅಲ್ಲವೆ ಪ್ರಸಾದನನ್ನು
ಪರಿಚಯಿಸಿದ್ದು, ಏನೋ ಪಾಪ ಸನಾತನ ತಂದೆಯನ್ನು ದೂರ ಮಾಡಿಕೊಂಡು ಬಂದಿದ್ದಾನಂತ, ಸತಿಸಾವಿತ್ರಿಯಂಥ
ಹೆಂಡತಿಯನ್ನು; ಲೋಹಿತಾಶ್ವನಂಥ ಮಗನನ್ನು ಕಟ್ಟಿಕೊಂಡು ಅದೆಷ್ಟು ಒದ್ದಾಡುತ್ತಿದ್ದ. ಮಗನ ಮೇಲೆ ಕಕ್ಕುಲಾತಿಯಿಂದ
ಶಾಸ್ತ್ರಿ ಅಗ್ರಹಾರವನ್ನು ತೊರೆದು ಬಿಡುವುದೇನು! ಕರುಳು ಎಲ್ಲಾ ಶಾಸ್ರ ಸಂಹಿತೆ, ಧರ್ಮ ಜಾತಿ ಮೀರಿ
ಬೆಳೆಯುತ್ತದೆ., ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ., ಶಾಸ್ತ್ರಿ ಇಡೀ ಊರಿಗೆ ಅದ್ಯಾವ ಗಾಳಿ ಹಾಕಿರುವನೋ?
ಗ್ರಹ, ನಕ್ಷತ್ರಗಳಿಗೆಲ್ಲ ತಾನೇ ವರಸುದಾರನೆಂಬಂತೆ ವರ್ತಿಸುತ್ತಿದ್ದಾನೆ. ಇಷ್ಟು ವಯಸ್ಸಾದರೂ ಹೇಗಿದ್ದಾನಲ್ಲ?
ಹಲ್ಲು ಉದುರಿಲ್ಲ, ಜುಟ್ಟು ಮಾಸಿಲ್ಲ, ಬೆನ್ನೆಲುಬು ಬಾಗಿಲ್ಲ. ಮೈಖಂಡಗಳು ಎಲ್ಲೆಲ್ಲಿ ಎಷ್ಟೆಷ್ಟಿರಬೇಕೋ
ಅಷ್ಟಷ್ಟೇ ಇವೆ, ಕಣ್ಣುಗಳು ಮಂಕಾಗಿಲ್ಲ.
ದೆವ್ವ ಪಿಶಾಚಿಗಳನ್ನು ವಾಕಿಂಗ್ ಹೋಗುವುದನ್ನು ವಾಕಿಂಗಿಗೆ; ಹನಿಮೂನಿಗೆ ಹೋಗುವುದನ್ನು ಹನಿಮೂನಿಗೆ
ಕಳಿಸಿ ಬಿಡುವು ದೊರತಾಗಲೆಲ್ಲ ತನ್ನ ಅರ್ಥಿಕ ಸ್ಥಿತಿಗೆ ಶಾಸ್ತ್ರಿಯೇ
ಕಾರಣವೆಂದು ಅಶಾಸ್ತ್ರೀಯವಾಗಿ ಯೋಚಿಸಿದ್ದ ರುದ್ರನಾಯಕನಿಗೆ ಅಲುಮೇಲಮ್ಮನ ಮೇಲೆ ಅಪಾರಗೌರವ ಇತ್ತು.
ಅದು ಹೇಳಿ ಕೇಳಿ ಮುಠ್ಠಾಳರು ವಾಸಿಸುತ್ತಿದ್ದ ಓಣಿ... ಎಲ್ಲರೂ ಸಜ್ಜನರೆಂದು ಹೇಳಳಿಕ್ಕಾಗದು, ಕೆಲವರು
ಕುಡಿದ ಅಮಲಿನಲ್ಲಿ ಅಲುಮೇಲಮ್ಮನನ್ನು ಚುಡಾಯಿಸಿದ್ದಿದುಂಟು., ಕೆಲವರು ಎಳೆದಳಿರ ಮೃದುತಲ್ಪಕ್ಕೆ ಕಣ್ಸನ್ನೆಯಿಂದ
ಆಮಂತ್ರಿಸುದ್ದಿದುಂಟು. ಅಂಥವರ ಪೈಕಿ ಕೆಲವರನ್ನು ಪತ್ತೆ ಮಾಡಿ ರುದ್ರನಾಯಕ ಮಗ್ಗುಲು ಮುರಿದು ಬುದ್ಧಿ
ಕಲಿಸಿದ್ದ. ಒಂದಿಬ್ಬರಿಗೆ ಆತ ಮಾಟ ಮಾಡಿದನೋ! ಮಂತ್ರ ಹಾಕಿದನೋ! ಒಟ್ಟಿನಲ್ಲಿ ಅವರು ಹೆಳವರಾಗಿ ಬಸ್ನಿಲ್ದಾಣವನ್ನು
ತಮ್ಮ ಖಾಯಂ ನಿವಾಸ ಸ್ಥಾನವನ್ನಾಗಿ ಮಾಡಿಕೊಂಡಿರುವರು. ಆದ್ದರಿಂದ ಅಲುಮೇಲಮ್ಮ ಇರೊ ಮನೆ ಕಡೆ ಯಾರೊಬ್ಬರೂ
ಕೆಟ್ಟಕಣ್ಣಿನಿಂದ ನೋಡುವ ಸಾಹಸ ಮಾಡುವುದಿಲ್ಲ. ಅವರ ಮಗ ಶಾಮನಿಗೆ ಕೂಡ ರುದ್ರನಾಯಕ ಅಪ್ರತ್ಯಕ್ಷವಾಗಿ
ನೆರವು ನೀಡಿರುವುದುಂಟು. ಇಲ್ಲದಿದ್ದರೆ ಗೊಬ್ಬರದಂಗಡಿಯ ಜಲಜಾಕ್ಷಿಯ ಗರಡಿ ಮನೆಯ ಪಡ್ಡೆಗಳು ಅಟಕಾಯಿಸಿ
ತೊಂದರೆ ಮಾಡುತ್ತಿದ್ದರು. ಆದರೆ "ನಾನೇ ಮಾಡ್ದೆ" ಎಂದು ರುದ್ರನಾಯಕ ದನಿ ಎತ್ತರಿಸಿ ಹೇಳುವ ಜಾಯಿಮಾನದವನಲ್ಲ.
ಆತ ಮೇಲ್ನೋಟಕ್ಕೆ ಭಯಾನಕವೆಂಬಂತೆ ಇದ್ದರೂ ಒಳಗಡೆ ಎಲ್ಲೋ ಒಂದು ಕಡೆ ಮಗುವಿನ ಮನಸ್ಸು ಇತ್ತು. ಅದು
ಅವನನ್ನು ಮನುಷ್ಯನನ್ನಾಗಿ ಮಾಡಿತ್ತು. ಸ್ವಭಾವತಃ ಒಳ್ಳೆಯ ಮನಸ್ಸಿನವನಾದ ಆತ ಅದನ್ನು ಸಹಜವಾಗಿ ಎಲ್ಲೂ
ಪ್ರಕಟಿಸುತ್ತಿರಲಿಲ್ಲ. ಮೇಲೆ ಮೇಲೆ ತನಗೆ ಎಲ್ಲರೂ ಹೆದರಬೇಕೆಂದು ಬಯಸುತ್ತಿದ್ದ. ಯಾರಲ್ಲೂ ಇಲ್ಲದ
ಅತೀಂದ್ರಿಯ ಶಕ್ತಿ ತನಗಿರುವುದೆಂದು ತಿಳಿದುಕೊಡಿದ್ದ. ದೆಹಲಿಯ ಭಂಭೂಂ ಸಾಧುಗೆ ಅವರಿಂದ ಪತ್ರ ಬರೆಸುತ್ತಲೇ
ಇದ್ದ. ಪ್ರಧಾನ ಮಂತ್ರಿಗೆ ಪ್ರಿಯವಾಗಿರುವ ಆತನಿಂದ ಒಂದಾದರೂ ಪತ್ರ ಬರಬಹುದೆಂದು ಕಾಯುತ್ತಿದ್ದ. ಆ
ಅಂಥ ಪತ್ರವೇನಾದರೂ ಬಂದರೆ ಅದನ್ನೇ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದೆಂದು ಯೋಚಿಸಿದ.
ಆತ ಬರೆಯುತ್ತಿದ್ದುದು ಅನೇಕರಿಗೆ ಗೊತ್ತು.
"ಏನ್ರೀ ರುದ್ರನಾಯಕರೇ ದೆಹಲಿಯಿಂದ ಪತ್ರ ಬಂತೋ?’ ಎಂದು ವ್ಯಂಗ ಮಿಶ್ರಿತ ಧ್ವನಿ ಆಲಾಪಿಸುತ್ತಿದ್ದ
ಹಿತೈಷಿಗಳಿಗೆ ಕೊರತೆ ಇರಲಿಲ್ಲ.
ಅವನೇನಾದರೂ ಸ್ವಲ್ಪ ಸಂತೋಷದಲ್ಲಿದ್ದನೆಂದರೆ -
"ಏನ್ರಿ ಸ್ವಾಮಿ, ಭಂಭೂಂ ಸಾಧು ಮಹಾರಾಜರಿಂದ ಸಂದೇಶ ಬಂದಂತಿದೆ" ಎಂದು ತಮ್ಮಷ್ಟಕ್ಕೆ ತಾವೇ ನಗೆಯಾಡುತ್ತಿದ್ದರು.
ಪ್ರತಿದಿನ ಇಂಥಾ ಒಂದಲ್ಲಾ ಒಂದು ಪ್ರಶ್ನೆಗಳನ್ನು ಆತ ನಿಭಾಯಿಸಬೇಕಾಗಿತ್ತು. ಈ ಇಂಥ ನಿಭಾಯಿಸುವಿಕೆಯಿಂದಾಗಿ
ರಸ ವಿದ್ಯೆಯೂ ಅವನಿಗೆ ಕೈಕೊಟ್ಟಿತ್ತು. ಆ ಪಟ್ಟಣದಲ್ಲಿ ಆತನ ಬಗ್ಗೆ ಅನೇಕರು ಗುಸುಗುಸು ಮಾತಾಡುತ್ತಿದ್ದರು.
ಯಾರಿಗಾದರೂ ಕಾಲಿನಲ್ಲಿ ಸೆಳವುಕಾಣಿಸಿಕೊಂಡು ಅದು ಬಿದ್ದು ಹೋಯಿತೆಂದಿಟ್ಟುಕೊಳ್ಳಿ. ಹಾಗೆ ಕಾಲು ಕಳೆದುಕೊಂಡವರು
ರುದ್ರನಾಯಕನು ಮಾಡಿರಬಹುದಾದ ಮಾಟವೇ ಕಾರಣವಿರಬಹುದೆಂದು ಮಾತಾಡಿಬಿಡಲಾರಂಭಿಸುವರು. ಇನ್ನೊಬ್ಬ ತನ್ನ
ಹೆಂಡತಿಯ ಗರ್ಭಪಾತಕ್ಕೆ ಕಾರಣ ಹುಡುಕಲು ಸೀದ ಮಾಳಿಗೆ ಮೇಲೆ ಹೋಗುವನು. ಅಲ್ಲಿ ಅವನಿಗೆ ಬಾಡಿದ ಲಿಂಬೆ
ಹಣ್ಣು ಸಿಗುವುದು; ಅದನ್ನು ರುದ್ರನಾಯಕನೇ ತನ್ನ ಕಡೆಯವರಿಂದ ಎಸೆಸಿರಬಹುದೆಂದು ಮಾತಾಡಿಕೊಳ್ಳುವನು.
ಇನ್ನೊಬ್ಬನ
ದೈತ್ಯಗಾತ್ರದ ಹಸು ಇದ್ದಕ್ಕಿದ್ದಂತೆ ಸತ್ತುಹೋದುದಕ್ಕೂ ಕಾರಣ ರುದ್ರನಾಯಕನೇ; ಮತ್ತೊನ್ನನ ಮಗಳು ಪ್ರೇಮ
ಪ್ರಕರಣಕ್ಕೆ ಸಿಲುಕಿ ನಿಮ್ನ ಜಾತಿಯವನೊಂದಿಗೆ ಓಡಿಹೋದದ್ದಕ್ಕೂ ಕಾರಣ ರುದ್ರನಾಯಕನೇ, ಹೀಗೆ ಎಲ್ಲಾ
ಅನಾಹುತಗಳಿಗೂ ಕಾರಣ ರುದ್ರನಾಯಕನೇ ಇರಬಹುದೆಂದು ಪಟ್ಟಣದ ಸಭ್ಯ ನಾಗರೀಕರು ಗುಸುಗುಸು ಮಾತಾಡಿಕೊಳ್ಳರಾರಂಭಿಸಿದರು.
ಆದರೆ ಅವರಾರಿಗೂ ಅವನ ಕೊರಳಪಟ್ಟಿ ಹಿಡಿದು ಕೇಳುವ ಧೈರ್ಯವಂತೂ ಇರಲಿಲ್ಲ. ಕೆಲವರು ಕೇಳಿಯೇ ಬಿಡುವುದೆಂದೇನೋ
ಮೀಸೆ ಮೇಲೇರಿಸಿಕೊಂಡು ಹೋಗೇನೋ ಹೋಗುತ್ತಿದ್ದರು. ಆದರೆ ನಾಯಕನ ಗಿರಿಜಾ ಮೀಸೆ , ಪೊದೆ ಹುಬ್ಬು, ಗುಳಾಪು
ಕಣ್ಣು ನೋಡಿದೊಡನೆ ಧೋತರ ತಣ್ಣಿಗೆ ಮಾಡಿಕೊಂಡು ಮರಳಿ ಬಿಡುತ್ತಿದ್ದರು. ಅದರ ಪೈಕಿ ಒಂದಿಬ್ಬರು ರುದ್ರನಾಯಕನು
ತನ್ನ ಕಣ್ನೋಟ ಮಾತ್ರದಿಂದ ತಮ್ಮ ಪುರುಷತ್ವ ನಾಶ ಮಾಡಿದನೆಂದು ತಂತಮ್ಮ ಹೆಂಡಂದಿರೆದುರುಲಬೋ ಲಬೋ ಬಾಯಿ
ಬಡಿದುಕೊಂಡಿದ್ದು ಹೇಗೋ ಪಟ್ಟಣದ ತುಂಬ ದೊಡ್ಡ ಗುಲ್ಲಾಗಿಬಿಟ್ಟಿತು. ಚರಾಸ್ತಿನೂ ಕಳಕೊಂಡಾರು; ಸ್ಥಿರಾಸ್ತಿನೂ
ಕಳಕೊಂಡಾರು; ಆದರೆ ಪುರುಷತ್ವವನ್ನು ಕಳಕೊಂಡು ಬದುಕಲು ಯಾರು ತಾನೆ ಸಿದ್ದ?
ಪಟ್ಟಣದಲ್ಲಿ ನಡೆಯುವ ಕಳ್ಳ ಸಾಗಾಣಿಕೆದಾರರ ಗುಂಪಿಗೂ; ರುದ್ರ ನಾಯಕನಿಗೂ ರಹಸ್ಯ ಒಪ್ಪಂದ ಏರ್ಪಟ್ಟಿದೆ
ಎಂಬ ಸುದ್ದಿ ಕಿಯಿಯಿಂದ ಕಿವಿಗೆ ಹರಡಿತು. ಪೋಲೀಸ್ ಮೇಲಾಧಿಕಾರಿಗಳೂ ಈ ಕುರಿತು ತನಿಖೆ ನಡೆಸಿ ತಕ್ಕ
ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಠಾಣೆಗೆ ರಹಸ್ಯ ಸಂದೇಶ ಕಳುಹಿಸಿದರು. ಸ್ಥಳೀಯ ಠಾಣೆಯ ಇನ್ಸ್ಪೆಕ್ಟರ್
ದಮ್ಮಡಿ ಈರಪ್ಪ ಮಹಾನಾಸ್ತಿಕ ವಾದಿ, ದೇವರು ದಿಂಡರುಗಳೆಲ್ಲ ತನ್ನ ಹಾಸಿಗೆ ಕೆಳಗೆ ಎಂಬಂತೆ; ದೆವ್ವ
ಪಿಶಾಚಿಗಳೆಲ್ಲ ತಲೆದಿಂಬಿನೊಳಗೆ ಎಂಬಂತೆ ಮಾತಾಡುತ್ತಿದ್ದ, ದಡಿಯನಾಗಿದ್ದ. ತಮ್ಮ ಪೋಲೀಸ್ ಇಲಾಖೆಯ
ಮಹಾನಾಸ್ತಿ ಈಕಮೇವ ಮಹಾನಾಸ್ತಿಕನೆಂದರೆ ಕೊಟ್ಟೂರು ಪಟ್ಟಣದ ಠಾಣೆಯ ದಮ್ಮಡಿ ಈರಪ್ಪ ಮಾತ್ರನೆಂದು ರಾಜಧಾನಿಯ
ಐಜಿಪಿ, ಡಿಐಜಿ ಕೇಡರಿನ ಅಧಿಕಾರಿಗಳೇ ಮಾತಾಡಿಕೊಳ್ಳುತ್ತಿದ್ದರು. ಅಂಥವರೇ ರುದ್ರನಾಯಕನಂಥ ವಾಮಾಚಾರಿಯನ್ನು
ವಿಚಾರಿಸಿಕೋ ಎಂದು ಗ್ರೀನ್ ಸಿಗ್ನಲ್ ತೋರಿಸಿದರೆಂದರೆ ಏನಾಗಬೇಡ? ಹೇಗ್ಹಾಡಬೇಡ?
ಎಲೈ ಮಾನ್ನವಾ... ನಿನ್ನ ದೇಹದ ಸಮಸ್ತ ರೋಮಗಳನ್ನು ಬೋಳಿಸಿ ನಿನ್ನ ಹೊಟ್ಟೆಗೆ ಕಳಿಸದಿದ್ದರೆ ನಾನು
ಕ್ಯಾಪ್ಟನ್ ದಮ್ಮಡಿ ಈರಪ್ಪನೇ ಅಲ್ಲ.ವೆಂದು ತಿಳಿಯಲೈಸಾರಥಿ ಅತಿಜಾಗ್ರತಿ" ಮಿಲಿಟರಿಯಲ್ಲಿ ಅತ್ಯುತ್ತಮ
ಸೇವೆ ಸಲ್ಲಿಸಿ ಕ್ಷಿಪ್ರ ವೇಗದಲ್ಲಿ ಕ್ಯಾಪ್ಟನ್ ಪದವಿ ಅಲಂಕರಿಸಿ; ಅಷ್ಟೇ ಕ್ಷಿಪ್ರವೇಗದಲ್ಲಿ ನಿವೃತ್ತಿ
ಪಡೆದು ಅಷ್ಟೇ ಕ್ಷಿಪ್ರ ವೇಗದಲ್ಲಿ ಸಬ್ಇನ್ಸ್ಪೆಕ್ತರನೆಂಬ ರಾಜ್ಯ ಸರಕಾರಿ ನವುಕರಿ ಪಡೆದದ್ದೂ ಒಂದು
ಇತಿಹಾಸವೇ!
ಭಾರತಿಯ ಕಾಲಮಾನದ ಪ್ರಕಾರ ಯಾರಾದಾರೂ ಹಂತಹಂತವಾಗಿ ಮೇಲೇರಿದಂತೆ ಅಪ್ಪಟ ಆಸ್ತಿಕರಾಗಿ ದೈವಭಕ್ತರಾಗಿ
ಪರಿವರ್ತನೆಗೊಳ್ಳುವುದು ಸಾಮಾನ್ಯ; ಆದರೆ ಈ ಮಿಲಿಟರಿ ರಿಟರ್ನ್ಡ್ದು ತದ್ವಿರುದ್ಧ.
ಅವನನ್ನು ಎಳೆದುತರುವಂತೆ ಪ್ಯಾದೆಗಳಿಗೆ ಆಜ್ಞಾಪಿಸಿದ. ಅವು ’ನಾವು ಹೋಗೋದಿಲ್ಲ ನಮಗೆ ಡ್ಯೂಟಿಗಿಂತ
ಪುರುಷತ್ವ ಮುಖ್ಯ’ ಎಂದುಬಿಡುವುದೇ.
ದಮ್ಮಡಿ ಈರಪ್ಪನೇ ರಿವಲ್ವಾರನ್ನು ಲೋಡು ಮಾಡಿಕೊಂಡು ಹೊರಟು ಬಿಟ್ಟ.
"ಬೇಡಿ ಸಾರ್ ದಯವಿಟ್ಟು ಬೇಡ... ನಿಮ್ಗಿನ್ನೂ ಮಕ್ಕಳಗಿಲ್ಲ... ಮರಿ ಆಗಿಲ್ಲ... ವಂಶೋದ್ಧಾರ
ಆಗೋದು ಬೇಡವೇ" ಎಂದು ಪ್ಯಾದೆಗಳು ಪರಿಪರಿಯಿಂದ ಕೇಳಿಕೊಂಡವು.
’ವಂಶ ಸೈ... ಸೊಂಟ ಸೈ... ಎಂದವನೆ ದಪ್ ದಪ್ ಹೆಜ್ಜೆ ಹಾಕುತ್ತ... ಇಕ್ಕೆಲದ ಮನೆಗಳನ್ನು ಗಡ ಗಡ ನಡುಗಿಸುತ್ತ
ಹುಣಸೆ ಮರದ ತಣ್ಣೆಳನಲ್ಲಿದ್ದ ಆ ಮನೆ ಮುಂದು ನಿಂತು "ಎಲವೋ" ಎಂದು ಗರ್ಜಿಸಿದ.
ದೇವಿ ಉಪಾಸನೆಯಲ್ಲಿದ್ದ ನಾಯಕ. ತಾನೇ ಒಳಗಡೆ ಹೋದ, ರುಕ್ಮಿಣಿ ಮಾಂಗಲ್ಯವನ್ನು ಕಣ್ಣಿಗೆ ಒತ್ತಿಕೊಂಡಳು.
ಏಕಮಾತ್ರ ಪುತ್ರಿ ಅನಸೂಯಾ ತನ್ನ ಪ್ರಿಯಕರ ಶಾಮಾಶಾಸ್ತ್ರಿಯನ್ನು ಸಂಧಿಸಿ ತಮ್ಮ ಪ್ರಣಯಕ್ಕೆ ವಿವಾಹ
ರೂಪ; ಪೂರ್ವವಿಧಿಗಳ ಕುರಿತು ಚರ್ಚಿಸಲು ಕಡಲೇರ ತೋಪಿಗೆ ಹೋಗಿದ್ದಳು.
ಹೊರಗಡೆ ಅಂಗಳದಲ್ಲಿ ಓಣಿಯ ಕೆಲವು ಗಣ್ಯರು ನೆರೆದು ಉಸಿರು ಬಿಗಿಹಿಡಿದು ನಿಂತಿದ್ದರು.
ಒಂದು ಗಂಟೆ ಕಳೆಯಿತು, ಕಳೆದವು ಎರಡು ಗಂಟೆ, ರುದ್ರನ್ ನಾಯಕ ಮತ್ತು ಕ್ಯಾಪ್ಟನ್ ದಮ್ಮಡಿ ಈರಪ್ಪ ಪರಸ್ಪರ
ಹೆಗಲಮೇಲೆ ಕೈಹಾಕಿಕೊಂಡು ಹೊರಬಂದು ಎಲ್ಲರನ್ನು ಆಶ್ಚರ್ಯದ ಕಡಲಲಿನಲ್ಲಿ ನೂಕಿದರು.
ಆಕ್ಷಣದಿಂದ ದಮ್ಮಡಿ ಈರಪ್ಪನಲ್ಲಿ ಅನೇಕ ಬದಲಾವಣೆಗಳಾದವು. ಆತನು ಅಪ್ಪಟ ದೈವಭಕ್ತನಾದ ಬಗ್ಗೆ; ಹೆಂಡತಿಯನ್ನು
ತೊರೆದುದರ ಬಗ್ಗೆ; ಕಾಷಾಯಂಬರ ಧರಿಸಿದುದರ ಬಗ್ಗೆ; ವಾಯವ್ಯ ದಿಕ್ಕಿನ ಕಡೆ ಹೆಜ್ಜೆ ಹಾಕುತ್ತ ನಡೆದೂ
ನಡೆದು ಕಣ್ಮರೆಯಾದುದರ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.
ಇದೊಂದು ಕೊಟ್ಟೂರು ಪಟ್ಟಣದ ಇತಿಹಾಸದಲ್ಲಿ ನಡೆದ ಕಂಡರಿಯದ; ಕೇಳದ ಅದ್ಭುತ ಪವಾಡವೇ ಸರಿ ಎಂದು ಜನ
ಮಾತಾಡಿಕೊಂಡರು.
ಒಂದು ದಿನ ಬೆಳೆಗ್ಗೆ ರುದ್ರನಾಯಕ ಅದ್ಭುತವಾದ ಡ್ರೆಸ್ ಮಾಡಿಕೊಂಡು ಮನೆಯಿಂದ ಹೊರಗಡೆ ಬಂದ. ತಮ್ಮ
ಗುರು ಭಂ ಭೂಂ ಸಾಧು ಕನಸಿನಲ್ಲಿ ಕಾಣಿಸಿಕೊಂಡು ದೆಹಲಿಯ ಕಡೆ ಪಯಣಿಸುವಂತೆ ಅಪ್ಪಣೆ ನೀಡಿದನೆಂದು ಹೇಳಿಕೊಂಡ.
ಮಾಗಳನ್ನು ಸರಿಯಾಗಿ ನೋಡಿಕೊಳ್ಳುವಂತೆ ಮತ್ತು ಅನುರೂಪನಾದ ವರ ನೋಡಿ ಮದುವೆ ಮಾಡಿ ಬಿಡುವಂತೆ ಮತ್ತೆ
ತಾನು ಮೂರು ತಿಂಗಳೊಳಗೆ ವಾಪಸ್ಸು ಬಾರದಿದ್ದಲ್ಲಿ ತವರು ಮನೆಗೆ ಹೋಗಿ ಆಶ್ರಯಪಡೆಯುವಂತೆ ಮತ್ತು ಸಂಬಂಧದ
ಬಗ್ಗೆ ಹೆಚ್ಚಿಗೆ ಕುರಿತು ರೋಧಿಸದಿರುವಂತೆ ಹೇಳಿದ.
ಅಷ್ಟೇನೂ ದೊಡ್ಡದಲ್ಲದ ಒಂದು ಗಂಟಿನೊಡನೆ ರೇಲ್ವೇ ನಿಲ್ದಾಣದ ಕಡೆ ಹೆಜ್ಜೆ ಹಾಕಿದ. ಆತ ಏರಿದ ರೈಲು
ಚಕ್ಬುಷ್ ಶಬ್ದ ಮಾಡುತ್ತ ಕಣ್ಮರೆಯಾಗುವ ತನಕ ತಾವು ನೋಡಿದ್ದಾಗಿ ಕೆಲವರು ಮಾತಾಡಿದರು.
ಪಟ್ಟಣದ ಬಹುಪಾಲು ನಾಗರೀಕರು ಸಮಾಧಾನದ ನಿಟ್ಟುಸಿರು ಬಿಟ್ಟರು ಎಂದ ಮಾತ್ರಕ್ಕೆ ರುಕ್ಮಿಣಿ ಅಂಡ್ ಕಂಪನಿ
ಸಮಾಧಾನದಿಂದಿದ್ದರು ಎಂದು ಹೇಳುವಂತಿರಲಿಲ್ಲ.
ಪುರುಷ ಪ್ರಧಾನ ಸಮಾಜದಲ್ಲಿ ವಯಸ್ಸಿಗೆ ಬಂದಿರುವ ಮಗಳನ್ನು ಕಟ್ಟಿಕೊಂಡು ಏಗುವುದೆಂದರೆ ತಮಾಷೆಯ ಮಾತೇನು?
ಸಮಾಜದ ಗೌರವ ಕಾಪಾಡಲಿಕ್ಕಾಗಿಯೇ ಗಳಿಗೆಗೊಂದು ಕಂಟಕಗಳು ಎದುರಾಗ ತೊಡಗಿದವು.
ಕಷ್ಟಗಳು ಮನುಷ್ಯಗೆ ಬರದೆ ಮರಕ್ಕೆ ಬರುವುದೇನಮ್ಮಾ ಎಂದೆನ್ನುತ್ತಿದ್ದವರೆಷ್ಟೋ? ಸ್ವಲ್ಪ
ಬದುಕುವ ಧೈರ್ಯ ಪ್ರಕಟಿಸಿದ್ದರೆ ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗೆ ಎಂಬಂಥ ಗಾದೆ ಮಾತುಗಳನ್ನು ಜ್ಞಾಪಿಸುತ್ತಿದ್ದವರೆಷ್ಟೋ?
ಮೂರು ತಿಂಗಳು ಅಂತ ಹೇಳಿದ್ದಾನಲ್ಲ... ಮೂರು ತಿಂಗಳು ನೋಡು ನಂತರ ನಿನ್ನ ದಾರಿ ನೀನು ನೋಡಿಕೋ ಎಂದು
ಹೇಳುತ್ತಿದ್ದವರೆಷ್ಟೋ? ಆಕೆ ಕುಂತರೊಂದು ತಪ್ಪು ನಿಂತರೊಂದು ತಪ್ಪು ಕಂಡು ಹಿಡಿಯುತ್ತಿದ್ದವರೆಷ್ಟೋ?
ಆಕೆಯ ಕಿವಿಗೆ ಬೀಳುವಂತೆ ಮಾತಿನಿಂದ ಕುಟುಕೀ ಕುಟುಕೀ ತಾವೂ ವೃಶ್ಚಿಕ ರಾಶಿಗೆ ಸೇರಿದವರೆಂದು ಸಾಬೀತು
ಮಾಡುತ್ತಿದ್ದವರೆಷ್ಟೊ?
ರುಕ್ಮಿಣಿ ನಿಮ್ನ ಜಾತಿಯಲ್ಲಿ ಹುಟ್ಟಿರಬಹುದು. ಆದರೆ ಸೂಕ್ಷ್ಮ ಪ್ರವೃತ್ತಿಯ ಹೆಂಗಸು. ಆಕೆ ಬಡತನ
ಅನುಭವಿಸಿರಬಹುದು. ಆದರೆ ಹೃದಯ ಶ್ರೀಮಂತಿಕೆಗೆ ಕೊರತೆ ಇರಲಿಲ್ಲ. ಆಕೆಗೆ ಸರಿಸುಮಾರು ಐವತ್ತರಷ್ಟು
ವಯಸ್ಸಾಗಿರಬಹುದು. ಆದರೆ ಮೂವತ್ತೈದರ ಹರೆಯದವಳಂತಿದ್ದಳು. ಆಕೆ ಸುಶಿಕ್ಷಿತಳಲ್ಲದಿರಬಹುದು. ಆದರೆ
ಯಾವುದೇ ಸುಶಿಕ್ಷಿತರಿಗಿಂತ ಕಡಿಮೆ ಇರಲಿಲ್ಲ. ಆಕೆ ಗಂಡನ ಮುಖ ಸರಿಯಾಗಿ ನೋಡಿರದೆ ಇರಬಹುದು. ಆದರೆ
ತನ್ನ ಕಾಲ ಹೆಬ್ಬೆರಳಿನ ಉಗುರಿನಲ್ಲಿ ಗಂಡನ ಪ್ರತಿಬಿಂಬವನ್ನು ನೋಡದೆ ಇರಲಿಲ್ಲ. ಅಕೆ ಸಾರ್ವತ್ರಿಕವಾಗಿ
ಅಳದೆ ಇರಬಹುದು. ಆದರೆ ಆಕೆಯ ಹೃದಯವೆಂಬ ಪೌಲ್ಟ್ರಿಯಲ್ಲಿ ದುಃಖದ ಮೊಟ್ಟೆಗಳಿಗೆ ಬರವಿರಲಿಲ್ಲ.
ತನ್ನ ಪತಿಪರಮೇಶ್ವರನಿಂದ ಪತ್ರ ಇಂದು ಬಂದೀತು, ನಾಳೆ ಬಂದೀತು; ಬಂದೀತು ನಾಡಿದ್ದು ಎಂದು ರುಕ್ಮೀಣಿ
ಕಾದಳು. ಪತ್ರ ಇಲ್ಲ ಗಿತ್ರ ಇಲ್ಲ ಶುಭಂ ಇಲ್ಲ. ದಿನಗಳೆದಂತೆ ಆಕೆಯ ಬದುಕಿನ ಬೇರುಗಳು ನಿತ್ರಾಣವಾಗ
ತೊಡಗಿದವು. ಕ್ರಮೇಣ ಬದುಕೆಂಬ ಗಿಡ ಸೊರಗ ತೊಡಗಿತು. ಅದು ಇನ್ನಷ್ಟು ಒಣಗುವಂತೆ ಪಟ್ಟಣದ ಕೆಲವರು ಆಕೆಯ
ಮನೆಗೆ ಎಡತಾಕ ತೊಡಗಿದರು. ನಿನ್ನ ಗಂಡ ನಮ್ಮ ಹತ್ತಿರ ಇಷ್ಟು ಸಾಲ ಮಾಡಿದ್ದಾನೆ; ಅಷ್ಟು ಸಾಲ ಮಾಡಿದ್ದಾನೆ,
ಇಷ್ಟು ಅಂತ ಪೀಡಿಸತೊಡಗಿದರು. ಕೆಲವರು ಸಾಲಮುಟ್ಟಿಸಬಹುದಾದ, ಪ್ರಾಂಸರಿ ನೋಟುಗಳನ್ನು ಚೂರುಚೂರು ಮಾಡಿ
ಮಾನ್ಸೂನಿಗೆ ತೂರಬಹುದಾದ ಸುಲಭ ಹಾದಿಯನ್ನು ಹೇಳತೊಡಗಿದರು.
ಶಾಸ್ತ್ರಿಯ ಮೊಮ್ಮಗ ಶಾಮು ದಿನದ ಬಹುಪಾಲು ವೇಳೆಯನ್ನು ಅಲ್ಲಿ ಕಳೆಯುತ್ತಾನೆ ಸರೆ! ಇಲ್ಲವಾದರೆ ಗತಿ
ಏನು! ಅವನಲ್ಲಿ ಟೈಂಬಾಂಬುಥರ ಇರುತ್ತಿದ್ದುದು ಕೆಲವರಿಗೆ ಭಯ ಮೂಡಿಸಿತ್ತು.
ಆಡುವ ಮಾತಿನಲ್ಲಿ ಸೌಜನ್ಯದ ಕೊರತೆಯನ್ನು ಅವನು ಕೂಡಲೆ ಗುರುತಿಸಿ ಬಿಡುತ್ತಿದ್ದ. ಅದಕ್ಕೆ ತೀಕ್ಷ್ಣವಾಗಿ
ಪ್ರತಿಕ್ರಿಯಿಸಿಬಿಡುತ್ತಿದ್ದ.
ತನ್ನ ಕಣ್ಣಿನೆದುರಿಗೆ ಅನಸೂಯಳ ಕುಟುಂಬದ ಪತನವನ್ನು ಸಹಿಸುವುದಾದರು ಹೇಗೆ?
’ಸಣ್ಣ ತಮ್ಮ ಇದ್ದಿದ್ದರೆ ಅವನೀ ಹೊತ್ಗೆ ನಿನ್ನಷ್ಟೆತ್ತರ ಇತಿದ್ದ’ ಅಂತ ಒಮ್ಮೆ ರುಕ್ಮಿಣಿ ಹೇಳಿದ್ದಳು.
ಹೌದು ರುಕ್ಮಿಣಿಗೆ ಒಬ್ಬ ಎಂಟನೆ ನಂಬರಿನ ತಮ್ಮ ಇಲ್ಲದಿರಲಿಲ್ಲ ಶಾಮನಂಥದೇ ಮೂಗು ಅವನಿಗೂ ಇತ್ತು.
ಅವನ ಕೈಕಾಲು ಬೆರಳು ನೋಡಿದ ಯಾರಿಗಾದರೂ ಅವನು ತುಂಬ ಎತ್ತರಕ್ಕೆ ಬೆಳೆಯುತ್ತಾನೆ ಎಂದು ನುಡಿಯದೆ ಇರಲಿಲ್ಲ.
ಆದರೆ ಅವನು ಅಮೃತಾಪುರದ ಮಾರೆಮ್ಮನ ಕೊಳ್ಳದಲ್ಲಿ ಉರುಳಿ ಕಾಣೆಯಾಗಿದ್ದ.
ರುಕ್ಮಿಣಿ ಶಾಮನಲ್ಲಿ ತಮ್ಮನನ್ನು ಕಂಡುಕೊಡಿದ್ದಳು, ಅವನು ಅಕ್ಕಾ ಎಂದು ಕರೆದೊಡನೆ ಪುಳಕಿತಗೊಳ್ಳುತ್ತಿದ್ದಳು.
ಶಾಮ ತನ್ನ ಅನಸೂಯಳೊಂದಿಗೆ ಮಾತಾಡುವುದು ತಿರುಗಾಡುವುದು ಅವಳಿಗೆ ತುಂಬ ಪ್ರಿಯವಾಗಿತ್ತು. ಅದಕ್ಕೆ
ಅವಕಾಶ ತಾನೇ ಕಲ್ಪಿಸಿಕೊಡುತ್ತಿದ್ದುದೂ ಉಂಟು. ತಮ್ಮ ಪತಿದೇವನಿಂದ
ಒದಗಬಹುದಾದ ಅಪಾಯಗಳನ್ನು ಕೇರಿಯ ಆರ್ಯನ್ ಶಾಸ್ತ್ರಿಗಳಿಂದುದ್ಭವಿಸಬಹುದಾದ ಅಪಾಯಗಳನ್ನು ತಾನೇ ಉಪಾಯಾಂತರದಿಂದ
ಪರಿಹರಿಸಿತ್ತಿದ್ದುದುಂಟು.
ಮೊದ ಮೊದಲು ಶಾಮು ಅವರ ಮನೆಗೆ ಶುಕ್ಲ ಪಕ್ಷಕ್ಕೊಮ್ಮೆ ಕೃಷ್ಣ ಪಕ್ಷಕ್ಕೊಮ್ಮೆ ಬರುತ್ತಿದ್ದ. ಶುಕ್ಲ
ಪಕ್ಷಕ್ಕೆ ಬಂದ ಶಾಮುನಿಗೆ ಒಣ ಕೊಬ್ಬರಿ ಕಲ್ಲು ಸಕ್ಕರೆ ಸಿಕ್ಕರೆ, ಕೃಷ್ಣ ಪಕ್ಷಕ್ಕೆ ತುಪ್ಪದಲ್ಲಿ
ನೆನೆದ ಉತ್ತುತ್ತಿ ಹಣ್ಣು ಸಿಗುತ್ತಿತ್ತು. ದಕ್ಷಿಣ ದಿಕ್ಕಿನಿಂದ ಬಂದು ಮನೆಯ ನೈರುತ್ಯ ದಿಕ್ಕಿನ
ಮೂಲೆಯಲ್ಲಿ ಕೂತುಸದ್ದಾಗದಂತೆ ತಿಂದು ಈಶಾನ್ಯ ಭಾಗದ ಮೂಲಕ ಹೊರ ಪುಸಗಿ ಬಿಡುತ್ತಿದ್ದ. ಒಮ್ಮೊಮ್ಮೆ
ಅವನು ಬರಲಿಲ್ಲವೆಂದರೆ ಅನಸೂಯ ಯಾವುದಾದರೊಂದು ವಸ್ತುವಿನೊಳಗೆ ತಿನ್ನುವ ವಸ್ತುವನ್ನು ಅಡಗಿಸಿಟ್ಟುಕೊಂಡು
ಅವನಿರುವಲ್ಲಿ ಹೋಗಿ ಕೊಡುತ್ತಿದ್ದಳು. ಅವನು ದಿಗಿಲಿನಿಂದ ತಿನ್ನುವುದನ್ನು ನೋಡಿ ಸಂತೋಷಪಡುತ್ತಿದ್ದಳು.
"ಶೂದ್ರರಿರೋ ಕಡೆ ಗಾಳಿ ಸೇವನೆ ಕೂಡ ವರ್ಜ್ಯ ಕಣೋ , ನಾಲಿಗೆ ಚಟಕ್ಕೆ ಬಿದ್ದು ಆಚಾರಕ್ಕೆ ಅಪಚಾರ ಮಾಡೀಯೆ
ಜೋಕೆ?" ಶಾಸ್ತ್ರಿಗಳು ಮೊಮ್ಮಗನನ್ನು ಎಚ್ಚರಿಸದ ದಿನ ಯಾವುದು?
ಕದ್ದು ತಿನ್ನುವುದರಲ್ಲಿ, ಮಡಿವಂತಿಕೆಯ ಉಲ್ಲಂಘನೆಯಲ್ಲಿ ಸಿಗುವ ರೋಮಾಂಚನ ಆ ಯಯೊವೃದ್ಧರಿಗೆ ಅದು
ಹೇಗೆ ತಿಳಿದೀತು?
ಐದು ಸಹಸ್ರ ವರ್ಷಗಳಿಂದ ಸ್ಪರ್ಷಕ್ಕೆ ಅನರ್ಹವೆಂದು ಭಾವಿಸುವ ಜಾತಿಯಿಂದ ಬಂದವನಾದ ತಾನು ನಿಮ್ನ ಜಾತಿಯ
ಗೌರವ ವರ್ಣದ ಸುಕೋಮಲ ಕಾಯ ಸ್ಪರ್ಶಿಸಿ ಪಡೆಯುತ್ತಿರುವ ಆನಂದ ಆ ಜ್ಞಾನ ವೃದ್ಧರಿಗೆ ಅರ್ಥವಾದೀತಾದರೂ
ಹೇಗೆ?
ಇಂಥ ಸ್ವೀಕಾರಕ್ಕೆ ಅರ್ಹವಲ್ಲದ ಸ್ಪರ್ಶದ ಸೆಳೆವಿಲ್ಲದಿದ್ದರೆಲ್ಲಿ ಶಾಕುಂತಳೆ ಹುಟ್ಟುತ್ತಿದ್ದಳು?
ರುದ್ರನಾಯಕನ ಅಗಲುವಿಕೆಯಿಂದಾಗಿ ಸ್ಪರ್ಶ ಮಮಕಾರದ ರೂಪ ಪಡೆದಿತ್ತು. ರೋಮಾಂಚನ ವಿರುವ ಕಡೆ ಅಂತಃಕರಣ
ಕರಗುತ್ತಿತ್ತು.
"ಅಯ್ಯೋ ಪಾಪ!... ವಾಮಾಚಾರ ಅವಲಂಸಿದವರಿಗೆ ಹೆಂಡತಿ ಏಕೆ? ಮಕ್ಕಳು ಏಕೆ? ತಾವೇನಾದರೂ ಆಗಲಿ... ವಯಸ್ಕ
ಮಗಳೊಂದಿಗೆ ಆ ಸಾಧ್ವಿ ಈ ಸಮಾಜದಲ್ಲಿ ಈಜುವಳಾದರೂ ಹೇಗೆ?" ಶಾಸ್ತ್ರಿಗಳು ಅನುಕಂಪ ವ್ಯಕ್ತ ಪಡಿಸದ
ದಿನವೇ ಇಲ್ಲ.
ಶಾಸ್ತ್ರಿಗಳಂತೆ ಅವರ ಸೊಸೆಯೂ ಅಷ್ಟೆ,
ಅದನ್ನು ಕೊಟ್ಟು ಬಾ ಇದನ್ನು ಕೊಟ್ಟು ಬಾ ಎಂದು ಮಗನ ಕೈಲಿ ಏನಾದರೊಂದು ಕೊಟ್ಟು ಕಳಿಸುತ್ತಿದ್ದಳು
ಅಲುಮೇಲು...
ಇದು ತನ್ನ ಬದುಕಿನ ಸುವರ್ಣ ಅಧ್ಯಾಯವೆಂದೇ ಶಾಮಶಾಸ್ತ್ರಿ ಭಾವಿಸಿದ. ದಿನದ ಬಹುಪಾಲು ಸಮಯವನ್ನು ಅವರ
ಮನೆಯಲ್ಲಿಯೇ ಕಳೆಯುತ್ತಿದ್ದ. ರುದ್ರನಾಯಕನಿಂದ ಬರಬಹುದಾದ ಪತ್ರವನ್ನು ತಾನೇ ಒಡೆದು ಓದಿ ಅವರಿಗೆ
ಹೆಚ್ಚಿನ ಸಂತೋಷ ಉಂಟು ಮಾಡಬೇಕೆಂದುಕೊಂಡಿದ್ದ.
ಮೂರು ತಿಂಗಳು ಏಕೆ ಆರು ತಿಂಗಳು ಕಳೆದವು.
ರೈಲಿನಲ್ಲಿ ಪಯಣಿಸಿದ ಆತನ ಪತ್ರ ಬರಲೇ ಇಲ್ಲ. ಬರುವಖಾತ್ರಿಯೂ ಇರಲಿಲ್ಲ.
"ಮನಸ್ಸು ಕಲ್ಲು ಮಾಡಿಕೊಂಡು ಬದುಕಬೇಕಮ್ಮಾ" ನಾಯಕ ಮಾಡಿರುವ ಸಾಲ ನೆನೆಪಿಸುವ ನೆಪದಲ್ಲಿ ಮನೆಗೆ ಬಂದಿದ್ದ
ಬಡ್ಡಿಲೇವಾದೇವಿಗಾರ ಮೂಲಿಮಣಿ ಚಂದ್ರಪ್ಪ ಸಂತೈಸಿದ. "ಎಷ್ಟು ಬೇಡವೆಂದರೂ ಕೇಳದೆ ಮನೆ ಒತ್ತೆ ಇಟ್ಟು
ಐದು ಸಾವಿರ ರುಪಾಯಿ ಸಾಲವನ್ನು ಪಡೆದು ಐದು ವರ್ಷಗಳೇ ಆದವು ತಾಯಿ" ಮೊದಲೇ ಆತ ಆಸ್ತಮಾ ರೋಗಿ. ಕೊಕ್ಕೊಕ್
ಕೆಮ್ಮುತ್ತ ಹೇಳಿದ. ಯಾವ
ಪುರುಷಾರ್ಥಕ್ಕೆ ಯಾವ ಸುಖ ಸಂತೋಷಕ್ಕೆ ತಾನಿಷ್ಟೊಂದು ಸಂಪಾಸಿದೆನಮ್ಮಾ? ಎಂದು ಮರುಗಿದ. ಅನಸೂಯ ತಂದುಕೊಟ್ಟ
ಚಹ ನಿರಾಕರಿಸಿದ್ದಕ್ಕೆ ತನ್ನ ದೇಹದೊಳಗೆ ವಾಸಮಾಡಿಕೊಂಡಿರುವ ವಾಸಿಯಾಗದ ಖಾಯಿಲೆಗ ಬಗ್ಗೆ ವಿವರಿಸಿದ.
ಯಾವ ಯಾವ ಖಾಯಿಲೆ ಯಾವ ಯಾವ ವಯಸ್ಸಿನಲ್ಲಿ ಬಂತೆಂಬುದನ್ನೂ ಬಿಡದೆ ಹೇಳಿದ.
ತನ್ನ ಗಂಡ ಯಾವ ಕಾರಣಕ್ಕಾಗಿ ಐದು ಸಾವಿರ ಸಾಲ ಮಾಡಿರುವನೆಂಬುದು ರುಕ್ಮಿಣಿಗೆ ಅರ್ಥವಾಗಲಿಲ್ಲ. ಗಂಡಸರ
ವ್ಯವಹಾರದಲ್ಲಿ ತಾನೆಂದಾದರೂ ಮೂಗು ತೂರಿಸಿರುವುದುಂಟೆ?
"ಸಾವ್ಕಾರ್ರೆ ಹಣಕಾಸಿನ ವ್ಯವಹಾರ ನನ್ಗೊಂದು ಅರ್ಥ ಆಗೋದಿಲ್ಲ... ಅವರು ಬಂದೇ ಬರ್ತಾರೆ. ಬರೋವಗೂ..."
ಬಾಗಿಲ ಮರೆಯಲ್ಲಿ ಬಾಯಿಗೆ ಸೆರಗು ಅಡ್ಡ ಇಟ್ಟು ಹೇಳಿದಳು.
"ತಾಯಿ... ಇದೆಂಥ ಮಾತು ಆಡ್ತಿದ್ದೀಯಮ್ಮಾ... ನನ್ನೆಪ್ಪತ್ತು ವರ್ಷದ ಜೀವಮಾನದಲ್ಲಿ ನಾನೆಂದಾದ್ರೂ
ದುಡ್ಡಿಗೆ ಆಸೆ ಪಟ್ಟಿದ್ದೇನಮ್ಮಾ... ಬಡ್ಡಿ ವ್ಯಾಪಾರ ಮಾಡ್ತಿರೋದೇ ನಾಕು ಮಂದೀಗೆ ಒಳ್ಳೇದಾಗ್ಲೀ
ಅಂತ... ಬಂದ ಲಾಭದಲ್ಲಿ ನಗರೇಶ್ವರ ದೇವಾಲಯ ಕಟ್ಟೋದಕ್ಕೆ ಹತ್ತು ಸಾವ್ರ ಕೊಟ್ಟಿಡ್ಡೀನಮ್ಮಾ ಹತ್ತು
ಸಾವ್ರ... ನೀನೆಂದಾದ್ರು ದೇವಸ್ತಾನಕ್ಕೆ ಕಲ್ಲಲ್ಲಿ ಕೆತ್ತಿರೋ ನನ್ನ ಹೆಸರು ಓದ್ಕೋ... ಅರ್ಥ ಆಗ್ತದೆ...
ಹಸಿವು ಅಂತ ಬಂದೋರ್ಗೆ ಒಂದ್ತುತ್ತು ಹಾಕ್ದೆ ಎಂದೂ ವಾಪಸ್ ಕಳಿಸಿದ ವಂಶ ಅಲ್ಲಮ್ಮಾ ನಮ್ದು!..." ಚಂದ್ರಪ್ಪ
ನಿಟ್ಟುಸಿರು ಬಿಟ್ಟು ಮುಂದುವರೆದು ಹೇಳಿದ "ನಾನೇಂದೂ ತೊಂದರೆಲ್ಲಿರೋಗೆ ಕಾಟ ಕೊಟ್ಟೋನಲ್ಲ... ಇಷ್ಟೊಂದು
ವಯಸ್ಸಾಗದಿದ್ದಲ್ಲಿ ಅನುಕೂಲವಾದಾಗ ಕೊಡಿ ಅಂತ ಸುಮ್ನಿದ್ದು ಬಿಡ್ತಿದ್ದೆ... ಆದ್ರೆ ವಯಸ್ಸು ಬೇರೆ
ಅಗಿಬಿಟ್ಟಿದೆಯಲ್ಲ... ಮನೇಲಿ ನನ್ಗಿಂತ ಎತ್ರ ಬೆಳ್ದಿರೋ ಮಕ್ಳು ಬೇರೆ ಮನೇಲಿದ್ದಾರೆ. ಅವರೂ ನನ್ನಂತೆ
ತುಂಬ ಒಳ್ಳೆವರೆಂದ್ರೇ ಇಟ್ಕೋ... ಆದ್ರ್ ಅವ್ರ ಹೆಂಡ್ರು ಸುಮ್ಕಿರಬೇಕಲ್ಲ. ಆ ನನ್ ಸೊಸೆಯಂದಿರೂ ಒಳ್ಳೆಯವರಂತ
ಇಟ್ಕೋ... ಆದ್ರೆ ಅವ್ರು ಹಡೆದಿರೋ ಮಕ್ಕಳು ಸುಮ್ಕಿರಬೇಕಲ್ಲ. ಆ ನನ್ ಮೊಮ್ಮಕ್ಳೂನಿ ಒಳ್ಳೆಯವ್ರುಂತ
ಇಟ್ಕೋ. ಆದ್ರೆ ಅವರ ಮುಂದಿನ ಭವಿಷ್ಯ ಸುಮ್ಕಿರಬೇಕಲ್ಲ... ಆ ಅವ್ರ ಭವಿಷ್ಯ ಒಳ್ಳೆಯದೆಂದಿಟ್ಕೋ...
ಆದ್ರೆ " ಚಂದ್ರಪ್ಪ ಇನ್ನೂ ಮಾತಾಡಬೇಕೆಂದಿದ್ದ... ಅಷ್ಟರಲ್ಲಿ ರುಕ್ಮಿಣಿ ಪೆಟಾರಿಯಲ್ಲಿ ಅಡಗಿಸಿಟ್ಟಿದ್ದ
ಒಂಚೂರು ಬಂಗಾರದ ಒಡವೆ ತಂದು ಆತನ ಮುಂದಿಟ್ಟಳು.
ಚಂದ್ರಪ್ಪ ತನ್ನ ಕಣ್ಣುಗಳೆಂಬ ಪಗಡಿಗಳಲ್ಲಿ ಚಿನ್ನ ತಿಕ್ಕಿ ನೋಡಿದ. ತನ್ನ ನೆತ್ತಿ ಮೇಲಿನ ತುಪ್ಪಳದ
ತೂಕವೂ ಅದಕ್ಕಿಲ್ಲವೆಂದುಕೊಂಡ.
ಚಂದ್ರಪ್ಪ ತನ್ನ ಕಣ್ಣುಗಳೆಂಬ ಒರೆಗಲ್ಲಿಗೆ ಚಿನ್ನ ತಿಕ್ಕಿ ನೋಡಿದ. ಅವುಗಳಲ್ಲಿ ಚಿನ್ನಕ್ಕಿಂತ ಬೇರೆ
ಲೋಹಗಳ ಪ್ರಭಾವೇ ಹೆಚ್ಚು . ತನ್ನ ಎಂಟನೇ ಮೊಮ್ಮಗನ ಅಂಗಾಲಿಗಿರುವ ಕಳೆ ಕೂಡ ಅವಕ್ಕಿಲ್ಲವೆಂದುಕೊಂಡ.
ಅನಧಿಕೃತ ಸಂಬಂಧೀ ಫಲವಾಗಿ ಹುಟ್ಟಿರುವ ಹೆಣ್ಣು ಕೂಸನ್ನು ವಿಶ್ವಾಮಿತ್ರ ನಿರಾಕರಿಸಿದ ಭಂಗಿಯಲ್ಲಿಯೇ
ನವರಸಾಭಿನಯ ಪರಿಣಿತನಾದ ಚಂದ್ರಪ್ಪ ಭಗವದ್ಗೀತೆಯಂತೆ ಮುಖ ಮಾಡಿಕೊಂಡ.
"ಛೇ ಛೇ... ನಿನ್ನಂಥ ಪತಿವ್ರತೆಯ ಬಂಗಾರ ತಗೊಂಡು ನಾನ್ಯಾವ ನರಕಕ್ಕೋಗ್ಲಿ ತಾಯಿ... ಶಿವ ಶಿವಾ, ನಾನು
ನಿನ್ಗೆ ಏನು ಅಪಚಾರ ಮಾಡಿದ್ದೀನಮ್ಮಾ... ನಿನ್ನ ಪರಮ ಭಕ್ಟನಾದ ನನ್ನನ್ನು ಇಂಥ ಅಗ್ನಿ ಪರೀಕ್ಷೆಗೆ
ಯಾಕೆ ಗುರಿ ಮಾಡ್ತಿದ್ದೀ... ಶಿವ ಶಿವಾ..." ಚಂದ್ರಪ್ಪ ಗದ್ಗದಿತನಾದ. ಕಣ್ಣಲ್ಲಿ ನೀರು
ಮಿಂಚಿದವು. ಜೋಲು ಬಿದ್ದ ಗಲ್ಲದ ಮಾಂಸಖಂಡಗಳು ಕಂಪಿಸತೊಡಗಿದವು. ಇನ್ನೇನು ಈ ಭೂಮಿ ಬಯ್ಬಿರಿದು ತನ್ನನ್ನು
ನುಂಗೇ ಬಿಡುತ್ತದೆ ಎನ್ನುವಂತೆ ಅಭಿನಯಿಸಿದ.
ರುಕ್ಮಿಣಿಗೆ ಒಂಥರಾ ಆಯಿತು. ಇಂಥಾ ಸಜ್ಜನರೂ ಭೂಮಿ ಮೇಲೆ ಇದ್ದಾರಲ್ಲ!... ಅದಕ್ಕೆ ಮಳೆ ಬೆಳೆ ಚೆನ್ನಾಗಿ
ಆಗುತ್ತಿರುವುದು ಎಂದುಕೊಂಡಳು. ಮಾತಾಡುವ ಶಕ್ತಿ ಆಕೆ ಕಳೆದುಕೊಂಡಳು. ಆತನ ಸೌಜನ್ಯಕ್ಕೆ ಅಕೆಯ ಅಂತಃಕರಣ
ಕರಗಿ ನೀರಾಗಿ ಹರಿಯಲಾರಂಭಿಸಿತು.
ಇಂಥ ಒಳ್ಳೆ ವ್ಯಕ್ತಿಯನ್ನು ನೋಡೋಕೆ ಮಗಳು ಬೇರೆ ಮನೆಯಲ್ಲಿ ಇಲ್ಲವಲ್ಲಾ... ಬರೀ ಬೇಟೆಗಾರರಿಂದ; ಸಂಚುಗಾರರಿಂದ
ಪ್ರಪಂಚ ತುಂಬಿ ಹೋಗಿದೆ ಎನ್ನುತ್ತಿದ್ದ ಮಗಳು ಬೇರೆ ಮನೆಯಲ್ಲಿ ಇಲ್ಲವಲ್ಲಾ!...
ಅನಸೂಯಾಽಽ...
ಅಷ್ಟೊತ್ತಿಗಾಗಲೇ ಒಂದೆರಡು ಕಡೆ ನೌಕರಿಗೆ ಪ್ರಯತ್ನಿಸಿ. ಒಂಥರಾ ಇರುಸು ಮುರುಸಾಗಿ ಟಿಫಿನ್ ಬಾಕ್ಸ್ನಲ್ಲಿದ್ದ
ಚಿತ್ರಾನ್ನದೊಡನೆ ಗವಿಮಠದ ಕಡೆ ಸೈಕಲ್ ಮೇಲೆ ಹೊರಟಿದ್ದ ಅನಸೂಯಾಳಿಗೆ ತಾಯಿಯ ಕೂಗು ಕೇಳಿಸಿತಾದರೂ
ಹೇಗೆ?...
"ಮಗಳ ಹೆಸರೇನಮ್ಮಾ ಅದು! ಈಗಾಗ್ಲೆ ಆಕೆ ಸಾಕಷ್ಟು ಬೆಳೆದು ಮದುವೆ ವಯಸ್ಸಿಗೆ ಬಂದಿರಬಹುದಲ್ವೇ? ಅಂತೂ
ನೀನೇ ಪುಣ್ಯವಂತೆಯಮ್ಮಾ... ನೀನು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೆಯೋ... ಅಂತೂ ಆ ದೇವ್ರು ಮಗಳೊಬ್ಬಳನ್ನು
ನಿನಗೆ ಕೊಟ್ಟಿದ್ದಾನೆ... ನನಗೆ ಆ ದೇವ್ರು ಒಂದೇ ಒಂದು ಹೆಣ್ಣು ಸಂತಾನ ಕೊಡ್ಲಿಲ್ಲ ನೋಡು..." ನಿಟ್ಟುಸಿರು
ಬಿಟ್ಟ ಚಂದ್ರಪ್ಪ ಹೆಣ್ಣು ಹಡೆದೀ ಅಂದ್ರೆ ಕುತ್ತಿಗೆ ಹಿಚುಗಿ ಸಾಯಿಸ್ತೀನಿ ಹುಷಾರ್ ಎಂದು ಪ್ರತಿಗರ್ಭ
ಧರಿಸಿದಾಗಲೂ ತನ್ನ ಧರ್ಮಪತ್ನಿಯನ್ನು ತಪ್ಪದೆ ಬೆದರಿಸುತ್ತಿದ್ದ. ಅಂತೂ ಆಕೆಯ ಪುಣ್ಯ ಆಯುಷ್ಯ ಗಟ್ಟಿ,
ಒಂದರ ಹಿಂದೆ ಒಂದರಂತೆ ಸಾಲಾಗಿ ಒಂಬತ್ತು ಗಂಡು ಮಕ್ಕಳನ್ನು ಹಡೆದು ಕೊಟ್ಟಳು. ಹತ್ತನೆಯದನ್ನು ಹಡೆಯುವಾಗ
ಸತ್ತು ಸ್ವರ್ಗಕ್ಕೆ ಹೋದಳೋ ನರಕಕ್ಕೆ ಹೊದಳೋ! ಹೆತ್ತು ಕೊಟ್ಟ ಸಂತಾನದ ಪೈಕಿ ಎರಡು ಅಕಾಲ ಮರಣಕ್ಕೆ
ತುತ್ತಾಗಿದ್ದವು. ಮೂರು ಕೈಕಾಲು ಸೊಟ್ಟ ಬಟ್ಟ ಒಂಥರಾ ಇದ್ದವು. ಎರಡರ ಪೈಕಿ ಒಂದು ಕಿವುಡು, ಇನ್ನೊಂದು
ಮೂಕು, ಇನ್ನೊಂದರ ತಲೆ ಲೂಜು, ಇನ್ನೊಂದರ ದೇಹದ ಮೇಲೆ ಎಲ್ಲೂ ಒಂದು ರೋಮ ಇಲ್ಲವೇ ಇಲ್ಲ... ಅಂದರೆ
ಚಂದ್ರಪ್ಪ ಗಂಡು ಸಂತಾನದ ನೇತಾರನೆಂದು ಹೆಮ್ಮೆಯಿಂದ ಕೊಕ್ ಕೊಕ್ ಕೆಮ್ಮಿ ಒಂದೊಂದು ಕಪ್ಪು ಕಫ ಕಕ್ಕುತ್ತಿದ್ದ.
ಸಾಕಷ್ಟು ದೂರದೃಷ್ಟಿಯಿಂದ ಕೆಲವಕ್ಕೆ ವರೋಪಚಾರ ಪಡೆಯದೆ ಒಂದೇ ಒಂದು ಹೆಣ್ಣು ಸಂತಾನವಿರುವ ಶ್ರೀಮಂತರ
ಹೆಣ್ಣು ತೆಗೆದಿದ್ದ... ಕೆಲವಕ್ಕೆ ಬೀಗರಿಂದ ಒಂದೆರಡು ಪುಟ್ಟ ವರದಕ್ಷಿಣೆ ಕಕ್ಕಿಸಿದ್ದ. ಹೀಗಾಗಿ
ಆತನ ಮನೆ ಎಂಬೋ ಮನೆ ಗಿಜಿಗಿಜಿ ಅನ್ನುತ್ತಿರುವುದು ಲೋಕವಿದಿತ.
"ನನ್ಗೂ ಆ ದೇವ್ರು ಹೆಣ್ಣು ಕೊಟ್ಟಿದ್ರೆ ಅನಸೂಯ ಅಂತಾನೆ ಹೆಸರಿಡುತ್ತಿದ್ದೆನಮ್ಮಾ!" ಮತ್ತೊಂದು ನಿಟ್ಟುಸಿರು
ದೂಡಿದನಾ ಮೆತ್ತನ್ನ ಮೆದಿಗಳ್ಳ. "ಅಲ್ಲಮ್ಮಾ ತಾಯಿ ಮಗ್ಳು ಓದ್ಕೊಂಡಿದ್ದಾಳಂತ ಕೇಳಿದ್ದೀನಿ... ಇದ್ನೆಲ್ಲಾ
ಯಾಕೆ ಹೇಳ್ದೆ ಅಂದ್ರೆ... ಗಂಡು ನೋಡಿ ಮದುವೆ ಮಾಡಿ ಕೈ ತೊಳ್ಕೋ ಬಹುದಿತ್ತಲ್ಲಾಂತ. ಮನೇಲಿ ಕೈಗೆ
ಬಂದಿರೋ ಮಗಳಿರೋದು ಅಂದ್ರೆ ಉಡೀಲಿ ಕೆಂಡ ಇಟ್ಕೊಂಡಂತೆಯೇ ಸರಿ... ಆ ದೇವರೇನಾದ್ರು ನನ್ಗೂ ಒಂದು ಹೆಣ್ಣು
ಕೂಸು ಕೊಟ್ಟಿದ್ದ ಅಂದ್ರೆ
ಮೈನೆರೆಯೋಕೂ ಮೊದ್ಲೆ ಮದ್ವೆ ಮಾಡಿ ಮೈ ನೆರೆಯುತ್ಲೆ ಮದ್ವೆ ಮಾಡಿ ಗಂಡನ ಮನೆಗೆ ಕಳಿಸಿಬಿಡುತ್ತಿದ್ದೆ
ಕಣಮ್ಮಾ..."ಚಂದ್ರಪ್ಪ ನಿಟ್ಟುಸಿರು ಬಿಟ್ಟ.
ಚಂದ್ರಪ್ಪ ಶೆಟ್ಟಿಯ (ಗ್ರಾಮದ ದೈವಸ್ಥರ ಪೈಕಿ ಒಂದಾದ ಕಶೆಟ್ಟರ ಗುಂಪಿಗೆ ಸೇರಿದ ಶಿವಪೂಜೆ ಶೆಟ್ರು
ಕೊಟ್ರ ಬಸಪ್ಪನ ಮೊಮ್ಮಗನೀ ಚಂದ್ರಪ್ಪನು) ಮಾತುಗಳ ಮೊನೆಯಲ್ಲಿದ್ದ ಚೂರಿಗಳು ರುಕ್ಮಿಣಿಯನ್ನು ಅಣಕಿಸಿದವು.
"ನಮ್ಮಂಥ ಬಡವ್ರ ಮಗಳನ್ನು ತಂದುಕೊಳ್ಳೋ ದೊಡ್ಡ ಮನಸ್ಸು ಯಾರ್ಗಿದೇ ಸಾವ್ಕಾರ್ರೇ" ತನ್ನ ಕಣ್ಣ ಕೊನೆಗೆ
ಇಣುಕಿ ಹಲೋ ಹಲೊ ಎಂದು ವಿಷ್ ಮಾಡುತ್ತಿದ್ದ ನೀರಿನ ಹನಿಯನ್ನು ಒರೆಸಿಕೊಂಡಳು.ರುಕ್ಮಿಣಿ ಅಲಿಯಾಸ್
ರುಕ್ಕಮ್ಮ. "ನೀವೇ ಗಂಡು ಹುಡುಕಿ ಪುಣ್ಯ ಕಟ್ಟಿಕೊಳ್ಳಬಾರದೇ?"
"ಎನಮ್ಮಾ ತಾಯಿ, ಎಂಥ ಮಾತಾಡ್ತಿದ್ದೀ... ಮೈನೆರದು ಒಂಬತತ್ತು ವರ್ಷ ಆಗಿರೋ ಹುಡುಗಿ ಗಂಡು ಹುಡ್ಕೊಂಡಿರೋದಿಲ್ಲೇನು.
ಮೇಲಾಗಿ ವಿದ್ಯಾವಂತೆ" ಚಂದ್ರಪ್ಪ ತನ್ನ ಮೋಹಕ ಸಂಭಾಷಣೆಗೆ ತಾನೇ ಪರವಶನಾದ, ನಗು ಬಂತು ನಕ್ಕ. "ಇದ್ಕೆ
ಸೂಕ್ತವಾದ ವ್ಯಕ್ತಿ ಎಂದರೆ ಪರಮೇಶ್ವರ ಶಾಸ್ತ್ರಿಗಳು ಕಣಮ್ಮಾ, ಅವನ ಒಂದು ಕೇಳಿದಿ ಅಂದ್ರೆ..."
"ಹ್ಹಾಂ... ಪರಮೇಶ್ವರ ಶಾಸ್ತ್ರಿಗಳೇ... ಅವ್ರೆಲ್ಲಿ ನಾವೆಲ್ಲಿ?". ರುಕ್ಕಮ್ಮ ದಿಗ್ಭಾಂತಳಾದಳು.
ಆಕೆಗೇನು ಗೊತ್ತು ತನ್ನ ಮಗಳು ಅನಸೂಯ ಶಾಮಾಶಾಸ್ತ್ರಿಯ ಮೈಗೆ ಮೈ ಅಂಟಿಸಿ ಕೂತು ಇದೇ ವಿಷಯ ಚರ್ಚಿಸುತ್ತಿರುವ
ಸಂಗತಿ
"ಅನೂ... ನಮ್ಮಿಬ್ಬರ ಮದುವೆಗೆ ಈ ಹಾಳಾದ ಜಾತಿ ಬೇರೆ ಅಡ್ಡ ಬತಿದೆಯಲ್ಲಾ..." ಶಾಮು ಆಕೆಯ ಮುಂಗುರುಳು
ನೇವರಿಸಿದ , ಮೂಗನ್ನು ಮೃದುವಾಗಿ ಹಿಂಡಿದ.
"ಹಾಗಾದ್ರೆ ನನ್ಗಿಂತ ನಿನ್ ಜಾತೀನೆ ನಿನ್ಗೆ ಇಷ್ಟ ಏನು?" ಕೊಂಚ ದೂರ ಸರಿದು ಕೂತಳು... ಕಾದ ಬಾಣಿಲೆಯಿಂದ
ಆಚೆ ಕಡೆಗೆ ಕುಪ್ಪಳಿಸಿದ ಹಕ್ಕಿಯಂತೆ.
"ಹಾಗೇನಿಲ್ಲ... ತಾತ ತನ್ನ ಬೇಕಾದ್ರೆ ಬಿಟ್ಟಾರು ಬ್ರಾಹ್ಮಣ್ಯಕ್ಕೆ ಅಪಚಾರ ಮಾಡೋರಲ್ಲ"
"ನಿಮ್ತಾಯಿ!!"
"ಆಕೆ ಬ್ರಾಹ್ಮಣ್ಯದ ಅವತಾರ ಕಣೇ!"
ಪಾಪ! ಶಾಮನಿಗೇನು ಗೊತ್ತು, ತಮ್ಮ ತಾತನವರಾದ ಶಾಸ್ತ್ರಿಗಳು ತಮ್ಮ ಮನೆಯ ತೂಗು ಮಂಚದಮೇಲೆ ಕೂತಿರುವುದು!
ಕೆಳಗೆ ಅಂದರೆ ನರಸಿಂಹದೇವರು ದರ್ಶನ ಕೊಟ್ಟಿರುವನೆನ್ನಲಾದ ಕಂಭಕ್ಕಾತು ಅಮ್ಮ ಕೂತಿರುವುದು! ಅವರೀರ್ವರು
ತಮ್ಮ ಕಣ್ಮಣಿಯಂತಿರುವ ಶಾಮನ ಮದುವೆ ಕುರಿತು ಚರ್ಚಿಸುತ್ತಿರುವುದು.
ಶಾಸ್ತ್ರಿಗಳು ತಮ್ಮ ಮುಂದೆ ಛಪ್ಪನ್ನಾರು ಕುಟುಂಬಗಳಿಂದ ಬಂದಿದ್ದ ಜಾತಕಗಳನ್ನು ಹರಡಿ ಕೂತಿದ್ದರು.
ಪ್ರತಿಯೊಂದು ಜಾತಕದ ಗ್ರಹ ತಾರೆ ನೀಹಾರಿಕೆಗಳನ್ನು ಅಷ್ಟೊತ್ತಿಗಾಗಲೇ ವಿವರಿಸಿ ಹೇಳಿದ್ದರು. ಪ್ರತಿಯೊಂದು
ಕುಟುಂಬದ ಆರ್ಥಿಕ ಸ್ಥಿತಿಗತಿ ಬಗ್ಗೆ ತಾವು ನಿಗೂಢ ವಲಯಗಳಿಂದ ಸಂಗ್ರಹಿಸಿದ್ದ ವಿವರಗಳನ್ನು ಹೇಳಿದ್ದರು.
ಆಷ್ಟೊತ್ತಿಗೆ ಪ್ರತಿಯೊಂದು ಕುಟುಂಬದ ಆಯಾ ಸದಸ್ಯರು ಪಡೆದಿರೋ ಸಂಸ್ಕೃತ ಮೂಲದ ಶಿಕ್ಷಣದ ಬಗ್ಗೆ; ಆಯಾ
ಸದಸ್ಯರ ಆಚಾರ ವಿಚಾರದ ಬಗ್ಗೆ; ಆಯಾ ಕುಟುಂಬದ ಹಿರಿಯರು ಪ್ರಾಣಾಯಾಮಕ್ಕೆ ತೆಗೆದುಕೊಳ್ಳುವ ಸಮಯದ ಬಗ್ಗೆ,
ಗಾಯತ್ರಿ ಪಠನೆಗೆ ತೆಗೆದುಕೊಳ್ಳುವ ಏಕಾಗ್ರತೆ ಬಗ್ಗೆ; ಪ್ರತಿಯೊಂದು ಕುಟುಂಬ
ವಾಸಿಸುವ ಮನೆ ಮುಂದೆ ಇರುವ ತುಳಸೀ ಕಟ್ಟೆಯ ಒಳ, ಹೊರ ವಿನ್ಯಾಸದ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ್ದರು
ಅಷ್ಟೊತ್ತಿಗೆ.
"ಅಮ್ಮಾ ನಾನಿರುವಾಗ ನೀನೇಕೆ ಚಿಂತೆ ಮಾಡುತ್ತಿರುವಿ ತಾಯಿ. ಪ್ರಾಚೀನ ಕಾಲದಲ್ಲಿ ಗಂಡನ ಚಿತೆಯೊಳಗೆ
ಸಹಗಮನ ಮಾಡುತ್ತಿದ್ದರು. ಅಂಥ ಹೇಣ್ಣನ್ನು ತಂದು ಮದುವೆ ಮಾಡ್ತೀನಿ, ನೋಡ್ತಿರು". ಒಂದು ಚಿಟಕೆ ನಶ್ಯವನ್ನು
ಬೆಳ್ಳಿ ಭರಣಿಯಿಂದ ತೆಗೆದು ಚಿನ್ನದ ಭರಣಿಯಂಥ ಮೂಗಿನೊಳಗೆ ಲೇಪಿಸಿಕೊಂಡರು. (ಮೂಗು ಕಟ್ಟುವ ಸಮಸ್ಯೆ
ನಿವಾರಣೆಗೆ ಕೆಂಜನಗೂಡು ಕೆಂಪ ಹನುಮಂತರಾಯರಿಂದ ಇತ್ತೀಚಿಗೆ ರೂಡಿಸಿಕೊಂಡಿದ್ದರು ಆ ಚಟವನ್ನು)
ಶುಭಸುಚಕವಾಗಿ ಎರಡು ಸೀನುಗಳು ಹೊರಬಂದವು.
ಯಾವತ್ತು ಹೊರಡ್ತೀರಿ... ಗುಣಸಾಗರದ ಅಗ್ರಹಾರಕ್ಕೆ... ದಶಾವಧಾನಿ ಶಿವರಾಮಯ್ಯನೋರು ಹಾಸಿಗೆ ಹಿಡಿದಿದ್ದಾರಂತೆ.
ಮಗಳ ಮದುವೆ ಮಾಡಿ ವೈಕುಂಟ ಸೇರಬೇಕಂದೇ ಜೀವ ಹಿಡಿದಿರುವರಂತೆ". ಇತ್ತೀಚೆಗೆ ಅಲುಮೇಲಮ್ಮ ಪ್ರತಿಯೊಂದು
ಮಾತಿಗೂ ಅಂತೆ ಕಂತೆ ಸೇರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು.
"ಮುಂದಿನ ಗುರುವಾರದ ಹೊತ್ತಿಗೆ ಶತತಾರ ನಕ್ಷತ್ರ ದ್ವಾದಶ ತಿಥಿಗೆ ಬರುತ್ತಲಿದೆ... ಅದಿರಲಿ ತಾಯಿ,
ಅಗ್ರಹಾರದ ಶಿವರಾಮಯ್ಯನವರೇನೋ ದಶಾವಧಾನಿಗಳೆಂದು ನಾನೂ ಒಪ್ಪಿಕೊಳ್ಳುತ್ತೇನೆ. ಅವರ ಜಾತಕ ಕುಂಡಲಿ
ಪ್ರಶಸ್ತವಾಗಿದೆ ಎಂದು ನಾನೂ ಒಪ್ಪಿಕೊಳ್ತೇನೆ... ಆದರೆ ಆ ಮಹಾನುಭಾವರು ತಮ್ಮ ಮಗಳು ಋತುಮತಿಯಾದ ತಿಥಿ
ವಾರ ನಕ್ಷತ್ರಗಳನ್ನು ವಿವರ ಕಳಿಸಿಲ್ಲವಲ್ಲ... ಅದಕ್ಕೆ ಏನು ಮಾಡುವುದಮ್ಮಾ?" ಶಾಸ್ತ್ರಿಗಳು ಇನ್ನೊಂದು
ಚಿಟಿಕೆ ನಶ್ಯೆ ಏರಿಸಿದರು. ತಮ್ಮ ಹೃದಯವೇ ಮೂಗಿನ ಮೂಲಕ ಹೊರ ಬಿದ್ದಿತೇನೋ ಎಂಬಂತೆ ಒಂಟಿ ಸೀನಿ ಸೀತರು.
ಅದು ಅಶುಭ ಸೂಚಕ. ಅದರ ಆಯುರ್ವೇದಯುಕ್ತ ಪರಿಮಳ ಮನೆತುಂಬ ಹರಡಿತು.
ತಾನು ಶ್ರಾವಣ ಮಾಸದಲ್ಲಿ, ಶುಕ್ಲಪಕ್ಷದ ಐದನೇ ದಿನದಲ್ಲಿ, ಅಂದರೆ ಶುಕ್ರವಾರ ಪ್ರಾತಃಕಾಲ ಪುನರ್ವಸು
ನಕ್ಷತ್ರದಲ್ಲಿ ಋತುಮತಿಯಾಗಿದ್ದನ್ನು ಪರಿಶೀಲಿಸಿದ ಮೇಲಲ್ಲವೆ ಶಾಸ್ತ್ರಿಗಳು ಮಗನಿಗೆ ತಂದುಕೊಂಡದ್ದು.
ಈ ಶಾಸ್ತ್ರ ಫಲದಿಂದಲೇ ತಾನು ಚೊಚ್ಚಲು ಗಂಡು ಮಗುವನ್ನು ಹೆತ್ತಿಂದಂತೆ.
ಲುಮೇಲಮ್ಮ ನಿಡಿದಾದ ಉಸಿರು ಬಿಟ್ಟಳು.
ಆಕೆಗೆ ಏನು ಉತ್ತರಿಸಬೇಕೋ ಅರ್ಥವಾಗಲಿಲ್ಲ.
"ನೀನೇನು ಯೋಚಿಸಬೇಡ ತಾಯಿ ನಾನೀಗಲೇ ಗುಣಸಾಗರಕ್ಕೆ ಹೋಗಿ ಬರುವೆನು. ಹಾಗೆ ಗುಟ್ಟಾಗಿ ಆಕೆ ಪುಷ್ಪವತಿಯಾದ
ಕಾಲ ತಿಳಿದುಕೊಂಡು ಉಳಿದಿದ್ದನ್ನು ಆಮೇಲೆ ನಿರ್ಧರಿಸಿದರಾಯಿತು. ಒಟ್ಟಿನಲ್ಲಿ ಕುಂಭರಾಶಿಯವನಾದ ನಮ್ಮ
ಶಾಮುವಿಗೆ ಮಾರ್ಗಶಿರ ಮಾಸದ ಅಭಿಜಿನ್ ಮುಹೂರ್ತದಲ್ಲಿ ಮದುವೆ ಮುಗಿಸುವ ಜವಾಬ್ದಾರಿ ನನಗೆ ಬಿಟ್ಟು
ನೀನು ನಿಶ್ಚಿಂತೆಯಿಂದಿರು" ಎಂದು ಶಾಸ್ತ್ರಿಗಳು ಸ್ವಲ್ಪ ನರಳುತ್ತಿರುವಂತೆ ಕಂಡುಬಂದರು. ಮಾತಾಡಿ
ಮಾತಾಡಿ ದವಡೆಯ ಎಡಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು.
"ಮಧ್ಯಾನ್ನದ ಊಟಕ್ಕೆ ಸ್ವಲ್ಪ ಉಪ್ಪು ಹಾಕಿ ಗಂಜಿ ಮಾಡಿಬಿಡಮ್ಮಾ...... ನಿನ್ನೆ ಸಾಹುಕಾರ ಗೋವಿಂದೇಗೌಡರ
ಶ್ರಾದ್ಧ ಮಾಡಿದ ಸುಸ್ತು ಇನ್ನೂ ಕಡಿಮೆಯಾಗಿಲ್ಲ. ಪುಳಿಯೋಗರೆ, ವಾಸನೆ ತಲೆ ಆವರಿಸಿಬಿಟ್ಟಿದೆ". ತೂಗು
ಮಂಚದ ಮೇಲೆ ’ವಿದ್ಯಾದಾನಂತು ದೇಹಿ ಮೇ’ ಎಂದು
ಗೊಣಗುತ್ತ ಕಣ್ಣು ಮುಚ್ಚಿದರು. ಅವರ ಕಮರುಡೇಗನ್ನು ಗುರುತಿಸಿ ಅಲುಮೇಲಮ್ಮ ಗಂಜಿ ಮಾಡಿಟ್ಟಿದ್ದಳು.
ಎರಡು ಅಗುಳು ಉಪ್ಪುಹಾಕಿ ಕದಡಿದಳು.
ಗಲ್ಲ ಮತ್ತು ಮೂಗಿನ ಮೇಲೆ ನವೆ. ಅಲ್ಲಿ ಪುಟ್ಟ ಗುಳ್ಳೆಗಳು, ಮಾಸಿಕ ಮೈಲಿಗೆ ಮುನ್ಸೂಚಕವಾಗಿ ಮೂಡಿವೆ
ರಾಯಭಾರಿಗಳಂತೆ. ಇನ್ನು ಇಷ್ಟು ಹೀಗೆ ಎಷ್ಟು ಕಾಲ ಮೈಲಿಗೆಯಾಗುತ್ತಿರಬೇಕೋ! ಮುಟ್ಟು ನಿಂತು ಹಲ್ಲು
ಉದುರಿ, ಸೊಂಟ ಬಾಗಿ ಚರ್ಮ ಸುಕ್ಕು ಗಟ್ಟಿ ಕುರೂಪಿಯಾಗಿ ರಾಮ ರಾಮಾ ಅಂತ ಮೂಲೆ ಹಿಡಿದು ಕೂಡ್ರುವ ಕಾಲ
ಇನ್ನೆಷ್ಟು ದೂರವಿರುವುದೋ.
ಹೊರಗಡೆ ಹೆಜ್ಜೆ ಇಟ್ಟರೆ ಸಾಕು, ಜೊಲ್ಲು ಸುರಿಸುವ ಆ ಗಂಡಸರ ಕಣ್ಣುಗಳ ದೃಷ್ಟಿ ಇಂಗಿ ಬಿಡಬಾರದೆ!
ತನ್ನಮ್ಥ ಬೋಳಾದ ಮುಂಡೆಯಲ್ಲೂ ಸೌಂದರ್ಯ ಹುಡುಕೋ ಈ ಗಂಡಸರನ್ನು ಏನೆಂತ ಶಪಿಸುವುದು ದೇವರೇ!
ಇದ್ದಕ್ಕಿದ್ದಂತೆ ಅಲುಮೇಲಮ್ಮಗೆ ಮಗ ನೆನಪಾಗಿ ಬಿಟ್ಟ. ಅವನ ಸಮಕ್ಷಮದಲ್ಲಿ ಸ್ನಾನ ಮಾಡದೆ ಅವನಿಂದ
ಬೆನ್ನು ಉಜ್ಜಿಸಿಕೊಳ್ಳದೆ ಎಷ್ಟೊಂದು ದಿನಗಳದವಲ್ಲ! ಅವನನ್ನು ತಬ್ಬಿಕೊಂಡು ಮಲಗದೆ ಎಷ್ಟೊಂದು ದಿನಗಳದವಲ್ಲ!
ಅವನಿಗೆ ಕೈ ತುತ್ತು ಮಾಡಿ ಉಣಿಸದೆ ಎಷ್ಟೊಂದು ದಿನಗಳದವಲ್ಲ! ತನ್ನ ಮಗನನ್ನು ಬಚ್ಚಲಲ್ಲಿ ಪೂರ್ತಿ
ಬತ್ತಲೆ ಮಾಡಿ ಸ್ನಾನ ಮಾಡಿಸದೆ ಎಷ್ಟೊಂದು ದಿನಗಳಾದವಲ್ಲ!
ಅಯ್ಯೋ ದೇವರೆ, ಅವನನ್ನು ಏಕೆ ದೊಡ್ಡವನನ್ನಾಗಿ ಮಾಡಿದೆ! ಎಂದೂ ಇಲ್ಲದ ನಾಚಿಕೆ ಸಂಕೋಚ ಅವನಿಗೆ ಯಾಕೆ
ಕೊಟ್ಟೆ? ಅವನು ಎಷ್ಟೇ ದೊಡ್ಡವನಾಗಲಿ; ಅವನು ನನ್ನ ಮಗ ನನಗೆ ಎಂದೆಂದೂ ಅವನು ಅಂಗೆಗಾಲಿಟ್ಟಾಡುವ ಮಗುವೆ,
ಅವನನ್ನು ನನ್ನಿಂದ ದೂರ ಮಾಡಬೇಡ ತಂದೆಯೇ!
ಆಕೆಯ ಕಣ್ಣುಗಳಿಂದ ನೀರು ಇದ್ದಕ್ಕಿಂತೆ ದುಮ್ಮಿಕ್ಕ ತೊಡಗಿತು. ಆಕೆಯ ಸ್ತನಗಳು ಒದ್ದೆಯಾದವು. ಎದೆಯೊಳಗೆ
ಉದ್ವೇಗಕ್ಕೆ ಸಿಲುಕಿ ಆಕೆಯ ವಕ್ಷ ಒಂದೇಸಮನೆ ಏರಿಳಿಯ ತೊಡಗಿದವು. ಆ ಸ್ತನಗಳೊಂದಿ ಆಟವಾಡಿದ ಗಂಡ ಮತ್ತು
ಮಗ ಒಟ್ಟಿಗೆ ನೆನಪಾದರು.
ಗಂಡನಂತೂ ಇಲ್ಲ. ನಡು ನೀರಿನಲ್ಲಿ ಕೈ ಬಿಟ್ಟ, ಬಯಲಲ್ಲಿ ಬಯಲಾಗಿಬಿಟ್ಟ.
ಮಗನಿರುವನಲ್ಲ ಅವನು ಆ ಹಾಳಾದ ಹುಡುಗಿ ಜೊತೆ ಎಲ್ಲೆಲ್ಲಿ ಸುತ್ತುತ್ತಿರುವನೋ ಏನೋ ಛೇ!... ಛೇ!...
ಅವನೂ ಅಷ್ಟೇ! ಅವಳು ಅಷ್ಟೇ! ಎಂದೂ ಸಭ್ಯತೆ ಮೀರಿ ವರ್ತಿಸುವವ್ವರಲ್ಲ.
"ಅಮ್ಮಾ ದ್ವಿವೇದುಲರವರ ಸಂಸ್ಕೃತ ಗ್ರಂಥಾಲಯಕ್ಕೆ ಹೋಗಿ ಕೌಟಿಲ್ಯನ ಅರ್ಥಶಾಸ್ತ್ರದ ಹದಿನೆಂಟನೆ ಅಧ್ಯಾಯ
ನೋಡಿಕೊಂಡು ಬತೇನೆ... ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕಕ್ಕೆ ಕೌಟಿಲ್ಯನ ಬಗ್ಗೆ ಲೇಖನ ಕೇಳಿದ್ದಾರೆ"
ಮಗ ಹೊರಡುವ ಮುನ್ನ ಮೊದಲು ಆಡಿದ್ದ ಮಾತುಗಳು.
ಈಗವನು ಲೈಬ್ರರಿಯಲ್ಲಿರಬಹುದು. ಮುಂದೆ ಹತ್ತಾರು ಗ್ರಂಥಗಳನ್ನು ಹರಡಿಕೊಂಡಿರ ಬಹುದು; ಟಿಪ್ಪಣಿ ಮಾಡಿಕೊಳ್ಳುವುದರಲ್ಲಿ
ಮಗ್ನನಾಗಿರಬಹುದು... ಎಂದೆಲ್ಲ ಊಹಿಸಿ ಸಮಾಧಾನದ ಉಸಿರನ್ನು ಬಿಡುತ್ತಿದ್ದ ಆ ಸಾಧ್ವಿಗೇನು ಗೊತ್ತು...
ಶಾಮು ಮತ್ತು ಅನಸೂಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳ ಅಮೃತ ಶಿಲೆಯಿಂದ ಕಟ್ಟಿದ ಸಮಾದಿ
ಮರೆಗೆ ಸರಿದು ಸರಿಸಮಾನವಾಗಿ ಬಿಕ್ಕುತ್ತಿದ್ದುದು.
"ನನ್ನ ನೀನೆ ಮದುವೆಯಾಗಬೇಕು ಕಣೋ ಶಾಮು... ನೀನಿಲ್ದೆ ಬದುಕೋ ಶಕ್ತಿ
ನನಗಿಲ್ಲ... ಯಾರೇ ಎದುರು ಬಿದ್ರೂ ಸರಿಯೆ ನಾವಿಬ್ರು ಜೊತೆಗೂಡಿ ಬಾಳಬೇಕು" ಅನಸೂಯ ಅವನ ಎದೆಮೇಲೆ
ಮುಖವಿರಿಸಿ ಒಂದೇ ಸಮನೆ ಬಿಕ್ಕುತ್ತಿದ್ದಳು.
"ನನಗೂ ನಿನ್ ಜೊತೆ ಬಾಳಬೇಕೂಂತ ಆಸೆ ಇಲ್ಲಂತ ತಿಳಿಕೊಂಡಿದ್ದೀಯೇನೆ? ನಾನೋ ಅಥ್ವಾ ನೀನೋ... ಇಬ್ಬ್ರೂ
ಒಂದೇ ಜಾತೀಲಿ ಹುಟಿಬಿಟ್ಟಿದ್ವೀ ಅಂದ್ರೆ ಇಷ್ಟೆಲ್ಲ ಸಮಸ್ಯೆ ಇತಿರಲಿಲ್ಲ..."
"ಈಗ ಹುಟ್ಟಿಬಿಟ್ಟಿದ್ದೀವಲ್ಲ. ಸಾಹಿತ್ಯದ ಬಗ್ಗೆ ಪ್ರೀತಿ ಇಟ್ಟುಕೊಂಡಿರೋನು ಯಾವಾಗ್ಲೂ ಮನುಷ್ಯನ
ಬಗ್ಗೆ ಪ್ರೀತಿ ಇಟ್ಕೊಂಡಿತಾನೆ ಎಂಬ ಮಾತನ್ನು ನಿನ್ನಂಥೋರು ನಿಜ ಮಾಡ್ಬೇಕೋ ಶಾಮು. ನನ್ಗೆ ನೀನು ಮುಖ್ಯ
ಆಗಬೇಕು ನಿನ್ಗೆ ನಾನು ಮುಖ್ಯ ಆಗ ಬೇಕು ಅಷ್ಟೇ. ನಮ್ಮಂಥೋಗೆ ಜಾತಿ ಕಂದಾಚಾರ ಮುಖ್ಯ ಆಗಬಾದು... "
"ಈಗ ನಾನೇನು ಮಾಡ್ಬೇಕಂತ ಬಿಡಿಸಿಹೇಳು... ನಾನು ಸಾಹಿತಿಯಾಗಿರಬಹ್ದು. ಆದ್ರೆ ನನ್ಗೆ ಸಾಹಿತ್ಯದ ಪರಿಭಾಷೆ
ಅರ್ಥ ಆಗೊದಿಲ್ಲ"
ನಾವು ಜಾತಿ ವ್ಯವಸ್ಥೆಯನ್ನು ಉಲ್ಲಂಗಿಸಬೇಕು. ಅದ್ಕೆ ನಾವಿಬ್ರು ಪರಸ್ಪರ ಮದುವೆಯಾಗಬೇಕು"
"ಇದ್ಕೆ ನಿಮ್ ತಾಯಿ ಒಪ್ತಾರೇನು?"
"ಅವರನ್ನು ಒಪ್ಸೋ ಜವಾಬ್ದಾರಿ ನನ್ಗೆ ಬಿಡು... ನಿಮ್ಮ ಮನೇಲಿ ನಿನ್ತಾತನವನ ಮತ್ತು ನಿನ್ತಾಯಿಯವರ್ನ
ಒಪ್ಪಿಸಬೇಕು".
"ಅವ್ರು ಒಪ್ಪದಿದ್ರೆ?"
"ಒಪ್ಪದಿದ್ರೇನಾಯ್ತು ನಾವಿಬ್ರು ಎಲ್ಲೋ ಒಂದು ಕಡೆ ಹೋಗೋಣ, ಮದುವೆಯಾಗೋಣ, ಇಬ್ರೂ ನೌಕರಿ ಸೇರೋಣ.
ಜೀವನ ಸಾಗಿಸೋಣ. ಏನಂತಿ!"
"ನನ್ಗೊಂದ್ ಅರ್ಥ ಆಗ್ತಾ ಇಲ್ಲ!"
"ನೀನು ಹೀಗೆಯೋಚ್ನೆ ಮಾಡಿದ್ರೆ ಹೆಣ್ಣಾದ ನನ್ನ ಗತಿ ಏನು!"
"ಆಗ್ಲಿ ಅಮ್ಮನ್ನ ಒಂದು ಮಾತು ಕೇಳಿ ನೋಡ್ತೀನಿ’
"ಬರೀ ಕೇಳೊದಲ್ಲ... ಒತ್ತಾಯಿಸಬೇಕು!"
"..." ನಿಟ್ಟುಸಿರು ಬಿಟ್ಟ. ಅದನ್ನು ಕೇಳಿಸಿಕೊಂಡ ಗುಬ್ಬಿಯೊಂದು ಪುರ್ರನೆ ಸೀದ ಅವರ ಮನೆಗೆ ಹಾರಿತು.
"ನಿನ್ನ ಒಡಹುಟ್ಟಿದವಯಾರೂ ಇಲ್ವೇನಮ್ಮಾ... " ಎಂದು ಪ್ರಶ್ನಿಸುತ್ತಿದ್ದ ಕಶೆಟ್ಟಿ ಚಂದ್ರಪ್ಪನ ತಲೆ
ಮೇಲೆ ಒಂದು ಸುತ್ತು ಗಸ್ತು ಹಾಕಿತು. ಹಾಗೆಯೇ ರುಕ್ಕಮ್ಮನ ತಲೆಯ ಮೇಲೂ, ಅಯ್ಯೋ, ಈ ಹಾಳಾದ ಹುಲು ನರರು
ನಾನು ಹೇಳೋದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ ಎಂದು ನೆಲುವಿನ ಮೇಲೆ ಕೂತು ಒಂದೇ ಸಮನೆ ಚೀವ್
ಚೀವ್ ಅಂತು. ಅವರದ್ದು ಅವರಿಗಾಗಿದೆ ನಿನ್ನದೇನು ವರಾತ ಎಂದು ಒಲೆಯ ಮೇಲಿದ್ದ ಬೆಕ್ಕು ವರಾತ ತೆಗೆಯಿತು.
ರುಕ್ಕಮ್ಮ ಗುಬ್ಬಿ ಮತ್ತು ಬೆಕ್ಕನ್ನು ಗದರಿಸಲು ಪ್ರಯತ್ನಿಸಿ ಹೇಳಿದಳು,
"ಇದ್ದಾರೆ ಚಂದ್ರಪ್ಪನವ್ರೆ, ನನ್ಗೆ ಒಡಹುಟ್ಟಿದ ತಮ್ಮನೊಬ್ಬ ಇದ್ದಾನೆ. ಅವನು ಬೆಂಗಳೂರಲ್ಲೋ ಮೈಸೂರಲ್ಲೋ
ಸಣ್ಣ ಪುಟ್ಟ ದಂಧೆ ಮಾಡ್ಕೊಂಡಿದ್ದಾನೆ".
"ಅವನ ಮದ್ವೆ ಇನ್ನೂ ಆಗಿಲ್ಲ ತಾನೆ!" ಎಂದು ನುಡಿದ ಚಂದ್ರಪ್ಪನನೇ ಮ್ಯಾವ್ ಗುಟ್ಟುತ್ತ ದಿಟ್ಟಿಸಿತು
ಬೆಕ್ಕು.
ಒಳ್ಳೆ ಮಾತಿನಿಂದ ಎದ್ದು ಹೋಗ್ತೀಯೋ... ಇಲ್ಲಾಂದ್ರೆ ಪರಚಿ ಬಿಡ್ಲೋ ಎಂಬರ್ಥದ ನೋಟ ಬೀರಿತು.
"ಆಗಿಲ್ಲ ಸಾಹುಕಾರ್ರೆ..."
"ಮತ್ತಿನ್ನೇನು ಪತ್ರ ಬರೆಸಿಬಿಡು... ಬಂದು ಬಿಡ್ಲಿ"
"ಮಗಳು ಒಪ್ಪಬೇಕಲ್ಲ!"
"ಯಾರಾದ್ರು ಕುರಿ ಕೇಳಿ ಮಸಾಲೆ ಅರಿತಾರೇನಮ್ಮಾ..." ಚಂದ್ರಪ್ಪ ಅಷ್ಟು ಹೊತ್ತು ಒಂಟಿ ಹೆಂಗಸೆದುರು
ಕೂತು ಮಾತಾಡಿದ ಅನುಭವದವನಲ್ಲ. ಗಂಡನನ್ನು ದೂರ ಕಳಿಸಿ ಕೈಗೆ ಬಂದಿರೋ ಮಗ್ಳೊಡನೆ ಬದುಕುತ್ತಿರುವ ಹೆಣ್ಣು.
ಸಾಲವನ್ನೇ ಕೊಟ್ಟಿರುವ ತಮಗೆ ಕರುಳು ಇಲ್ಲದೀತೆ! ಸಾಲ ಪಡೆದೋರು ಸುಖವಾಗಿದ್ದರೆ ಮಾತ್ರ ಸಾಲ ಕೊಟ್ಟವರುಸುಖವಾಗಿರುವರು
ಎಂದು ನಂಬಿದಂಥ ಕಶೆಟ್ಟಿ ವಂಶ ತಮ್ಮದು. "ಏನೋ ತಾಯಿ ವಯಸ್ನಲ್ಲಿ ಹಿರಿಯ ಅಂತ ನಾಕು ಮಾತಾಡ್ದೆ...
ನಿನ್ ಮಗ್ಳು ನಿಮ್ಮಾತು... ಕರೆದಾಗ ಬಂದು ಕೈಲಾದಷ್ಟು ಕೊಟ್ಟು ಅಕ್ಷತೆ ಹಾಕೋರು ನಾವು... ಅಂದ ಹಾಗೆ...
ಮನೆ ಒತ್ತೆ ಇಟ್ಟು ಪಡೆದಿರೋ ಸಾಲದ ಬಗ್ಗೆ ಮತ್ತೊಮ್ಮೆ ನೆನಪಿಸ್ತಿದ್ದೀನಿ... ಕೊಟ್ಟಿರೋ ಸಾಲ ವಸೂಲಿ
ಮಾಡ್ಕೊಂಡು ಬಂದ್ರೆ ಮಾತ್ರ ಈ ಮುದುಕ್ನೀಗೆ ಒಂದ್ತುತ್ತು ಅನ್ನ ಸಿಕ್ಕೋದು ಕಣಮ್ಮಾ... ಏನು ಮಾಡೋದು
ಹೇಳು... ಕಾಲ ಹಂಗಿದೆ. ನಾನು ಬರ್ತೀನಿ ತಾಯಿ..." ಎಂದು ಎದ್ದು ಹೊರಟ. ದಾಟುವಾಗ ಬಾಗಿಲಿಗೆ ತಲೆ
ಬಡಿಯಿತು. ಅಮ್ಮಾ ಅಂದರು. ಮನಸ್ಸು ಸಂತೆಯಾಗಿತ್ತು. ಆದ್ದರಿಂದ ನೋವಿನ ಅನುಭವ ಆಗಲಿಲ್ಲ.
ಓಂದೊಂದು ರೀತಿಯ ಹೆಜ್ಜೆ ಇಡುತ್ತ... ನಡೆದೂ ನಡೆದೂ ಆತನೇನೋ ಮರೆಯಾದ. ಆದರೆ ಆತ ತಮ್ಮನನ್ನು ನೆನಪಿಸಿದ್ದು
ಮಾತ್ರ ಮರೆಯಾಗಲಿಲ್ಲ.
ಚಂದ್ರಪ್ಪ ತನ್ನ ಒಂದೇ ಮಾತಿನಲ್ಲಿ ಅಕ್ಕನ ಹೃದಯದೊಳಗೆ ತಮ್ಮನನ್ನು ಕೆತ್ತಿ ನಿಲ್ಲಿಸಿಬಿಟ್ಟಿದ್ದ.
ಅಪ್ಪ ಸತ್ತಾಗ ಬಂದಿರಲಿಲ್ಲ. ಪತ್ರ ತಂತಿ ಸಕಾಲಕ್ಕೆ ಮುಟ್ಟಲಿಲ್ಲವಂತೆ ತಿಥಿ ದಿನ ಬಂದಿದ್ದ. ಊಟ ಮಾಡುತ್ತಿದ್ದವರು
ಆತನನ್ನು ಸಿನಿಮಾ ನಟನಿಗೆ ಹೋಲಿಸಿದರು. ಅವನು ಹಾಗಿದ್ದ. ಹಾಗೆ ಬೆಳೆದಿದ್ದ.
"ಭಿಕ್ಷೆ ಬೇಡೋಗೆ ಮಗಳ್ನ ಕೊಟ್ಟು ಮದ್ವೆ ಮಾಡೇನು! ಆದ್ರೆ ಆ ನಿನ್ನ ತಮ್ಮನಿಗೆ ಮಾತ್ರ ನನ್ಮಗಳ್ನ
ಕೊಡೋದಿಲ್ಲ" ರುದ್ರನಾಯಕ ಮಾತಿಗೆ ಮಾತು ಬಂದಾಗ ಹೇಳುತ್ತಲೇ ಇದ್ದ. ಮೊದಲಿಂದಲೂ ಅಷ್ಟೆ, ಅವರಿಬ್ಬರು
ಪರಸ್ಪರ ಹಾವು ಮುಂಗುಸಿಯಂತೆ ಬುಸುಗುಟ್ಟುತ್ತಿದ್ದರು.
ಆದರೆ ಈಗ ಬುಸುಗುಟ್ಟುವವರು ಇಲ್ಲವಲ್ಲ. ಅವನೇನು ಕಡೇಲಲ್ಲ... ಒಡ ಹುಟ್ಟಿದ ತಮ್ಮಂದಿರ ಪೈಕಿ ಅವನೂ
ಒಬ್ಬ . ಬಂಧು ಬಳಗ, ತಂದೆ ತಾಯಿ, ಒಡಹುಟ್ಟಿದವರು...ಎಲ್ಲರಿಂದ ಸಿಡಿದು ಸ್ವತಂತ್ರ ರೀತಿಯಲ್ಲಿ ಬದುಕುತ್ತಿರುವ
ತಮ್ಮನವನು. ಅವನಿಗ್ರ್ ಮಗಳನ್ನು ಕಟ್ಟಿಹಾಕಿ ಕೈ ತೊಳೆದುಕೊಂಡರಾಯಿತು. ಹೀಗೆ ನಿರ್ಧರಿಸಿದ ಆಕೆಗೆ
ಗುಬ್ಬಿ ಏನೋ ಸಲಹೆ ನೀಡಲು ಪ್ರಯತ್ನಿಸಿತು. ಬೆಕ್ಕು ಏನೋ ಸೂಚಿಸಲು ಎಚ್ಚರಿಸಲು ಪ್ರಯತ್ನಿಸಿತು.
ಅವನ ವಿಳಾಸ ಎಲ್ಲಿರುವುದೋ ಏನೋ? ಯಾವುದೇ ಸಾಮಾನು ಇಟ್ಟಲ್ಲಿ ಇರುತ್ತಿರಲಿಲ್ಲ. ನಗಂದಿ ಮೇಲೆ; ಟ್ರಂಕುಗಳೊಳಗೆ,
ಸ್ಟಾಂಡಿನ ಮೇಲೆ; ಬೀರುವಾಗಳೊಳಗೆ ವಿಳಾಸಕ್ಕಾಗಿ ಬೆದಕಾಡತೊಡಗಿದಳು. ಸಾಮಾನುಗಳೆಲ್ಲ ಆಕೆಗೆ ಅರಿವಿಲ್ಲದಂತೆ
ನೆಲದ ಮೇಲಲ್ಲ ಚಲ್ಲಾಪಿಲ್ಲಿಯಾಗಿದ್ದವು
"ಏನಮ್ಮಾ ಏನು ಮಾಡ್ತಿದ್ದಿ?" ಅದೇ ತಾನೆ ಬಂದ ಅನುಗೆ ಆಶ್ಚರ್ಯ. "ಅದೇನು
ಹುಡುಕುತ್ತಿದ್ದೀ ಹೇಳು... ನಾನೂ ಸಹಾಯ ಮಾಡ್ತೀನಿ" ಎಂದು ಆಕೆ ಒಂದೊಂದು ವಸ್ತುವನ್ನು ನೀಟಾಗಿ ಜೋಡಿಸಿದ
ತೊಡಗಿದಳು.
"ಅದು ನೀನು ಹುಡುಕಿದ್ರೆ ಸಿಗುವಂಥ ವಸ್ತು ಅಲ್ಲ ಬಿಡಮ್ಮಾ... " ರುಕ್ಕಮ್ಮ ಅಷ್ಟು ಸುಲಭವಾಗಿ ಗುಟ್ಟು
ಬಿಟ್ಟುಕೊಡವ ಪೈಕಿ ಅಲ್ಲ.
ಆದರೆ ಗುಟ್ಟನ್ನು ಎಷ್ಟುಹೊತ್ತು ಹೊಟ್ಟೆಯಲ್ಲಿಟ್ಟುಕೊಳ್ಳಬಳ್ಳಳು! ಹಾಗೆ ನೋಡಿದರೆ ಯಾವ ಗುಟ್ಟೂ ಆಕೆಯ
ಹೊಟ್ಟೆಯಲ್ಲಿರಲಿಲ್ಲ... ಅದನ್ನು ಹೊರಹಾಕದೆ ಆಕೆ ನಿದ್ರೆ ಮಾಡಲಾರಳು.
"ನಿನ್ನ ರಘೂ ಮಾವನ ಅಡ್ರಸ್ಸು ಹುಡುಕ್ತಿದೀನಮ್ಮಾ"
ತಾಯಿ ಮಾತು ಕೇಳಿ ಅನಸುಯ ಬೆಚ್ಚಿದಳು.
ಅವನನ್ನು ಚಿಕ್ಕವಳಿದ್ದಾಗ ನೋಡಿದ ನೆನಪು. ಆತನ ಸಾಹಸಗಳನ್ನು ಆಕೆ ಕೇಳಿಬಲ್ಲಳು. ತಾಯಿ ಮಗಳು ತಂತಮ್ಮ
ಹೊಟ್ಟೆಯಲ್ಲಿದ್ದನ್ನು ಹೊರಹಾಕಿ ಮಾತಾಡಿದರು. ಹೆಣ್ಣಿಗೊಂದು ಗಂಡಿನ ಅಗತ್ಯದ ಬಗ್ಗೆ ಅವರೀರ್ವರಿಗೂ
ಒಮ್ಮತ ಇತ್ತು.
"ಶಾಮುನ ಅಭಿಪ್ರಾಯ ಏನೂಂತ ತಿಳ್ಕೊಂಡ ನಂತರ ನೀನು ನಿನ್ನ ತಮ್ಮನ ಬಗ್ಗೆ ಯೋಚ್ನೆ ಮಾಡುವಿಯಂತೆ...
" ಅನಸೂಯ ಕುಂಬಳಕಾಯಿ ಕುಡುಗೋಲು ಎರಡನ್ನೂ ತಾಯಿಗೆ ಒಪ್ಪಿಸಿ ನಿಡಿದಾದ ಉಸಿರುಬಿಟ್ಟಳು.
"ಅವ್ನೇನೋ ಒಳ್ಳೆ ಹುಡುಗ, ಆದ್ರೆ ಅವನ ಮಾತ್ನ ಅವನ ತಾಯಿ ತಾತ ಕೇಳ್ತಾರಂತ ಏನು ಖಾತ್ರಿ?" ರುಕ್ಕಮ್ಮ
ಸಮಸ್ಯೆ ಮುಂದಿಟ್ಟಳು.
"ಯಾರು ಒಳ್ಳೆಯವ್ರೋ ಯಾರು ಕೆಟ್ಟೋರೋ... ಒಂದೂ ಅರ್ಥ ಆಗೋದಿಲ್ಲಮ್ಮಾ... ನನ್ನ ಹಣೇಯಲ್ಲಿ ವಿಧಿ ಏನು
ಬರೆದಿದೆಯೋ ಅದರಂತೆ ಬದುಕಬೇಕು ತಾನೆ... " ಇನ್ನೊಂದು ನಿಟ್ಟುಸಿರು ಬಿಟ್ಟು ತಾಯಿಗೆ ಹತ್ತಿರ ಸರಿದುಕೂತಳು.
"ಅಮ್ಮಾ... ನನಗೆ ತಾನೆ ಯಾರಿದ್ದಾರೆ ಮಗ ಅಂದ್ರೂ ನಾನೆ ಮಗ್ಳೂ ಅಂದ್ರೆ ನಾನೆ... ನಾನೆ ಎಲ್ಲಾದರೂ
ನೌಕರಿ ಸೇರಿ ನಿನ್ನ ನೋಡ್ಕೊಳ್ತೀನಿ, ನನ್ನ ಮದುವೆ ಆಗು ಅಂತ ಮಾತ್ರ ಒತ್ತಾಯಿಸಬೇಡ."
"ಅಂದ್ರೆ ನಿನಗೆ ಮದ್ವೆ ಮಕ್ಳು ಬೇಡವೇನು?"
ಮನಸ್ಸ ಯಾರ್ಗೋ ಕೊಟ್ಟು ದೇಹಾನ ಯಾರ್ಗೋ ಒಪ್ಪಿಸುವಂಥ ಮದುವೆ ನನಗೆ ಬೇಡಮ್ಮಾ ತೀಟೆಗೆ ಹುಟ್ಟೋ ಮಕ್ಳು
ಮೊದಲೇ ಬೇಡ".
ಮಗಳು ಎಂದೂ ನೊಂದು ಮಾತಾಡಿರಲಿಲ್ಲ
ಆಕೆ ಸಮಾಧಾನ ಇದ್ದಾಗ ಪ್ರಸ್ತಾಪಿಸಿದರಾಯಿತೆಂದು ರುಕ್ಕಮ್ಮ ಸುಮ್ಮನಾದಳು.
ಶಾಮು ಕೊಟ್ಟಿದ್ದ ಪತ್ರಿಕೆ ಎದುರಿಗಿತ್ತು. ಅದರಲ್ಲಿ ಅವನದೊಂದು ಕಥೆ ಪ್ರಕಟವಾಗಿತ್ತು. ಆ ಇಡೀ ಕಥೆ
ಒಂದೇ ವಾಕ್ಯದಿಂದ ಹೆಣೆಯಲ್ಪಟ್ಟಿತ್ತು. ಯಾವುದೇ ಪ್ಯಾರಾಗಳಿರಲಿಲ್ಲ. ಫೂರ್ಣ ಪ್ರಮಾಣದ ಪಾತ್ರಗಳಿರಲಿಲ್ಲ.
ಯಾವ ಪಾತ್ರಕ್ಕೂ ಖಚಿತ ಉದ್ದೇಶವಿರಲಿಲ್ಲ. ಅಕ್ಷರ ಶಬ್ದವಾಗುವಂತಿರಲಿಲ್ಲ. ಶಬ್ದ ವಾಕ್ಯವಾಗುವಂತಿರಲಿಲ್ಲ.
ಆದರೂ ವಿಲಕ್ಷಣವಾದ ಆಕರ್ಷಣೆ ಆ ಕಥೆಯೊಳಗಿತ್ತು. ಆ ಕಥೆ ಕಥೆಗಾರನ ಅರಿವಿಗೂ ದಕ್ಕುವಂತಿರಲಿಲ್ಲ. ಕಥೆಗಾರನೊಳಗೆ
ಕಥೆ ಇತ್ತೋ; ಕಥೆಯೊಳಗೆ ಕಥೆಗಾರನಿದ್ದನೋ;
ಕಿಟಕಿಯಿಂದ ಗಾಳಿಗೆ ಪತ್ರಿಯ ಪುಟಗಳು ಕದಲತೊಡಗಿದವು. ಎರಡನೆ ಪುಟದಲ್ಲಿ ಶಾಮನ ಭಾವಚಿತ್ರವಿತ್ತು.
ಅಳುಕುತ್ತಲೇ ಅವನು ತೆಗೆಸಿಕೊಂಡಿದ್ದ ಛಾಯಾಚಿತ್ರ
ಅದಾಗಿತ್ತು. ತಾನು ಮಹಾನ್ ಕಥೆಗಾರನೆಂಬ ಅಹಂ ಅವನ ಕಣ್ಣುಗಳಲ್ಲಿತ್ತು. ಯಾರೋ ಫೋಟೋದಲ್ಲಿ ಶಾಮು ಸುಂದರವಾಗಿ
ಬೀಳುವುದಿಲ್ಲ. ಅವನದು ಫೋಟೋಝನಿಕ್ ಫೇಸ್ ಅಲ್ಲವೇ ಅಲ್ಲ...
ಅನಸೂಯಳಿಗೆ ಕೂತಲ್ಲಿ ಕೂಡ್ರಲಾಗಲಿಲ್ಲ... ನಿಂತಲ್ಲಿ ನಿಲ್ಲಲಾಗಲಿಲ್ಲ. ಒಂಥರಾ ಚಡಪಡಿಕೆ. ಅವನ ಮನ
ಗೆಲ್ಲಲು ತಾನು ಎಷ್ಟೊಂದು ಪೋಲಿ ಪೋಲಿಯಾಗಿ ವರ್ತಿಸುತ್ತಿದುದು ಸಭ್ಯತೆ ಮೀರಿ ಪ್ರವರ್ತಿಸುತ್ತಿದ್ದುದು
ಎಲ್ಲವನ್ನು ನೆನಪು ಮಾಡಿಕೊಂಡಳು. ತನ್ನ ಬಗ್ಗೆ ತನಗೇ ಹೇಸಿಗೆ ಅನ್ನಿಸಿತು ಒಂದು ಕ್ಷಣ. ಸೂರ್ಯನ ಕಿರಣಗಳಿಗೆ
ಹೊಗೆ ಮಂಜು ಕರಗಿದಂತೆ ಚೆಲ್ಲುತನವೆಲ್ಲ ಕರಗಿ ತನ್ನಲ್ಲಿ ವಿಶಿಷ್ಟ ಗಾಂಭೀರ್ಯ ಮೂಡಿದೆ.
ಬೇಟೆಗಾರನ ಗುರಿಯ ನೇರದಲ್ಲಿ ಬಂಧಿತವಾಗಿರುವ ಬಣ್ಣಬಣ್ಣದ ರೆಕ್ಕೆ ತೊಯ್ದ ಹಕ್ಕಿ ಯಂತೆ ಚಡಪಡಿಸ ತೊಡಗಿದಳು.
ಹಿತ್ತಲಿಗೆ ಹೋದಳು. ಕಿಟಕಿ ತೆರದೇನೋ ಇತ್ತು. ಆದರೆ ಅದರಾಚೆ ಶಾಮನ ಛಾಯೆ ಮಾತ್ರ ಇರಲಿಲ್ಲ ಈಗವನು
ಮನೆಯಲ್ಲಿರುವುದೇನೊ ಖಚಿತ. ಹೆಂಗರುಳಿನ ಅವನೀಗ ಏನು ಮಾಡುತ್ತಿರಬಹುದು? ತಾಯಿಯ ಸೆರಗಿನಲ್ಲಿ ಮುದುಡುವ
ಬದಲು ಅವನು ತಾತಗೆ ತಾಯಿಗೆ ಪ್ರಶ್ನೆ ಕೇಳಿರಬಹುದೇ???...
...ಅವನ ಚಡಪಡಿಕೆ ಏನೂ ಕಡಿಮೆಯದ್ದಾಗಿರಲಿಲ್ಲ. ಮನೆ ಪ್ರವೇಶಿಸುವಾಗಲೆ ಅವನು ಇಟ್ಟ ಒಂದೊಂದು ಹೆಜ್ಜೆ
ಕಂಪಿಸುತ್ತಿತ್ತು. ತಾತನೆಲ್ಲಿ ಎದುರಾಗಿ ಬಿಡುವನೋ ಎಂಬ ಆತಂಕ ಅವನ ಪುಣ್ಯಕ್ಕೆ ಅವರು ಮನೆಯಲ್ಲಿರಲಿಲ್ಲ.
ತನಗೆಂದೇ ಕನ್ಯಾನ್ವೇಷಣೆಗಾಗಿ ಗುಣಸಾಗರದ ಅಗ್ರಹಾರಕ್ಕೆ ಅವರು ಹೋಗಿರುವ ಸಂಗತಿ ಹೇಳಲೆಂದೇ ಗೋಡೆ ಮೇಲಿದ್ದ
ಹಲ್ಲಿ ಲೊಚಗುಟ್ಟಿತು.
ಹತ್ತು ಹೆಜ್ಜೆ ಕ್ರಮಿಸಿ ಪಡಸಾಲೆ ಪ್ರವೇಶಿಸುವಷ್ಟರಲ್ಲಿ ಬೆವರಿಂದ ನೆನೆದು ಬನಿಯನ್ನು ಮೈಗೆ ಅಂಟಿಬಿಟ್ಟಿತ್ತು.
ಬಾಯಿ ಒಣಗಿತ್ತು. ನಾಲಿಗೆ ನೀರಿಂದ ಹೊರ ಉಳಿದ ಮೀನಿನಂತಾಗಿತ್ತು. ಅಮ್ಮಾಽಽ ಎಂದು ಕೂಗಲೆಂದೇನೋ ಬಾಯಿ
ತೆರೆದ, ಶಬ್ದ ಹೊರಡಲಿಲ್ಲ.
ಅಷ್ಟರಲ್ಲಿ ಅವನ ಹೆಜ್ಜೆ ಸದ್ದು ಕೇಳಿಸಿಕೊಂದು, ಅದು ತನ್ನ ಮಗನದೇ ಎಂದು ಕರುಳಿನಿಂದ ಗುರಿತಿಸಿಕೊಂಡು
ಅಳುಮೆಲಮ್ಮ ಓಡಿ ಬಂದಳು. ಆಕೆ ಅಡುಗೆ ಮನೆಯಲ್ಲಿದ್ದಳೋ; ದೇವರ ಕೋಣೆಯಲ್ಲಿದ್ದಳೋ! ಕೈಲಿದ್ದುದು ಲತ್ತುಡಿಯೋ;
ಬತ್ತಿ ಹೊಸೆದ ಅರಳೆಯೋ ಕಿಮುಟು ಹಿಡಿದ ರಾಮಾಯಣದ ಕಟ್ಟೋ...
ತನ್ನ ಕರುಳಿನ ಕುಡಿ ಗಂಟೆಗಟ್ಟಲೆ ಹೋಗಿಬಿಡುವುದೇನು? ನತದೃಷ್ಟ ತಾಯಿ ಮನೆಯಲ್ಲಿ ಒಂಟಿಯಾಗಿರುವಳೆಂಬ
ಜ್ಞಾನವಾದರೂ ಇರಬಾರದೇನು?
ಮಗೂ; ಶಾಮೂ; ಎಷ್ಟು ಹೊತ್ತೋ ನೀನು ಹೋಗುವುದು. ನನ್ನ ಹಾಳಾದ ಬಲಗಣ್ಣು ಬೇರೆ ಒಂದೇ ಸಮನೆ ಬಡ್ಕೊಳ್ತಿತ್ತು
ತಂದೆಯೇ... ಮತ್ತೆ ಬಂದು ಮುಖ ತೋರಿಸಿ ಹೋಗಿದ್ರೆ ನಾನು ಇಷ್ಟೊಂದು ಹೆದತಿರಲಿಲ್ಲ... ಅಲುಮೇಲಮ್ಮ
ಓಡಿಬಂದವಳೇ ಮಗನನ್ನು ಗಟ್ಟಿಯಾಗಿ ಅಪ್ಪಿಕೊಂಡು ಬಿಟ್ಟಳು. ಅವನ ಗಲ್ಲಕ್ಕೆ ಮುದ್ದಿಸಿದಾಗ ಗೊತ್ತಾಯಿತಾಕೆಗೆ
ಗಡ್ಡ ಬಿಟ್ಟಿರುವ ಸಂಗತಿ... ಛೇ! ಎಷ್ಟೊಂದು ಸೊರಗಿರುವನಲ್ಲ ತನ್ನ ಮಗ...
ಆಕೆಯ ಕಣ್ಣುಗಳಿಂದ ಒಂದೇ ಸಮನೆ ನೀರು ಹರಿಯಿತು.
ತಾಯಿಯ ಉದ್ವಿಗ್ನತೆಗೆ ಅವನು ಏನೆಂದು ಪ್ರತಿಕ್ರಿಯಿಸಿಯಾನು? ಆ ವಾತ್ಸಲ್ಯಪೂರ್ಣ
ಭಾವನೆಗಳು ಅಕ್ಷರದ ಚಿಮುಟಿಗೆ ಸಿಕ್ಕುವಂತಹುಗಳಲ್ಲ...
"ಕೇಳಿಬಿಡೋ ಶಾಮು... ಅಂಜಬೇಡ" ಮನದ ಮೂಲೆಯಿಂದ ಅನಸೂಯ ಕೂಗಿ ಎಚ್ಚರಿಸಿದಳು. ಆಕೆಯ ನೆನಪು ನಾಲಗೆಗೆ
ಶಕ್ತಿ ನೀಡಿತು.
"ಅಮ್ಮಾ ನಿನ್ಗೆ ನಾನು ಸಂತೋಷವಾಗಿರೋದು ಬೇಕು ತಾನೆ?" ಪೀಠಿಕೆ ಹಾಕಿದ.
"ಹೌದಪ್ಪಾ... ನಿನ್ನಂಥ ಮಗ ಸಂತೋಷವಾಗಿರಬೇಕೆಂದೇ ಅಲ್ವೆ ನಾವಿನ್ನೂ ಬದುಕಿರೋದು?"
"ಹಾಗಿದ್ರೆ ಒಂದು ಕೇಳಲೇನು!"
"ಕೇಳೋ ಅದಕ್ಯಾಕೆ ಹಿಂಜರಿಕೆ!" ಎಂದು ಮಾತಾಡುತ್ತಲೆ ನೀರಿನ ಒಲೆಯಿಂದ ಬೆಂಕಿ ಹಿಡಿದಳು. ನಿಗಿ ನಿಗಿ
ಉರಿಯುತ್ತಿದ್ದ ಕೆಂಡದುಂಡೆಗಳಿಗೆ ನೀರು ಸುರಿದಳು. ಅವು ಸುಯ್ ಎಂದು ಕಪ್ಪು ಬಣ್ಣಕ್ಕೆ ತಿರುಗಿ ಇದ್ದಿಲಿನ
ರೂಪ ಧರಿಸಿದವು.
ನುಡಿಯಲೆಂದು ಅವನು ಬಾಯಿತೆರೆದ. ಆದರೆ ಕ್ಷೀಣ ಸ್ವರ ಬಚ್ಚಲಿನಲ್ಲಿ ಬತ್ತಲೆ ಕೂತಿದ್ದ ತಾಯಿಗೆ ಕೇಳಿಸೀತಾದರೂ
ಹೇಗೆ!
"ಮಗೂ... ಯಾಕೆ ಅಲ್ಲೇ ನಿಂತಿದ್ದೀಯಾ; ನಿನ್ನ ಕೈಯಿಂದ ಬೆನ್ನು ಉಜ್ಜಿಸಿಕೊಳ್ಳದೆ ಎಷ್ಟು ದಿನಗಳಾದ್ವೋ!
ಕೂಗಿದಳು ತಾಯಿ ಬಚ್ಚಲೊಳಗಿಂದ
ಶಾಮುಗೆ ಸಂಕಟ ಸುರುವಾಯಿತು.
"ಅಮ್ಮಾ ನಾನೀಗ ಬೆಳೆದು ನಿಂತಿದ್ದೀನಿ!"
"ನನ್ನ ಶವಕ್ಕೆ ಚಿತೆ ಅಂಟಿಸುವ ಕ್ಷಣದಿಂದ ನೀನು ದೊಡ್ಡವನಾಗುವಿ ಮಗು, ಅಲ್ಲಿಯವರೆಗೆ ನೀನು ನನಗೆ
ಮಗುವೆ" ತಾಯಿಯ ಆತುರಕ್ಕೆ ಕೊನೆ ಎಂಬುದಿರಲಿಲ್ಲ.
ಹೋಗದಿದ್ದಲ್ಲಿ ತಾಯಿ ತನ್ನನ್ನು ಎಲ್ಲಿ ಒಳಗೆ ಎಳೆದೊಯ್ಯುವಳೋ! ಅಳುಕಿದ.
ವಾತ್ಸಲ್ಯದ ಮಹಾಪೂರಕ್ಕೆ ಸಿಲುಕಿದ ಅದು ಅವನನ್ನು ಕೊಚ್ಚಿ ಕೊಂಡೊಯ್ಯಿತು ಸ್ನಾನದ ಕೋಣೆಗೆ; ಜ್ಞಾನದ
ಸ್ನಾನದ ಕೋಣೆಗೆ, ಧ್ಯಾನ ಸ್ನಾನದ ಕೋಣೆಗೆ.
ಅವನು ಎಂದೂ ಅಷ್ಟು ವೇಗವಾಗಿ ಹೋದವನಲ್ಲ... ಹೋದ, ಹೋಗಿ ನೋಡಿದ, ಸಕಲ ತೀರ್ಥಗಳಿಂದ ತುಂಬಿ ತುಳುಕಾಡುತ್ತಿರುವ
ಬಕೆಟ್.
ಎಷ್ಟು ಚಂದ ಕೂತಿರುವಳು ತಾಯಿ?
ಮೈಮೇಲೆ ಒಂಚೂರು ಬಟ್ಟೆ ಬರೆ ಇಲ್ಲವಲ್ಲ ವೇದ ಶಾಸ್ತ್ರಾದಿ ಸ್ಫೂರ್ಥೆಯ ಮೈಮೇಲೆ, ನಾಚಿಕೆ ಸಂಕೋಚದ
ಬಂಧನದ ಬಿಡುಗಡೆ... ಈಕೆ ಸಾಮಾನ್ಯಳಲ್ಲ. ಮಾಧವ ಸೋದರಿ! ಮಹಿಷಾಸುರಾದಿ ಮರ್ಧಿನಿ! ಮಹಾ ಕೈಲಾಸ ವಾಸ
ಪ್ರಿಯಕರಿ! ಮಹಾ ಕಾಮೇಶ್ವರಿ ಸಂಪತ್ಕರೀ!
ಕಾಮನೆಗಳನ್ನು; ಇಷ್ಟಾರ್ಥಗಳನ್ನು ಪೂರೈಸುವ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ನಗ್ನಳಾಗಿದ್ದಾಳೆನ್ನಿಸಿತು.
ವಾತ್ಸಲ್ಯಪೂರ್ಣೆಯಾದ ಆದಿಶಕ್ತಿಯೇ ಬಚ್ಚಲಲ್ಲಿ ಬೆತ್ತಲೆಯಾಗಿದ್ದಾಳೆನ್ನಿಸಿತು. ಶುಂಭ ನಿಶುಂಭ ರಕ್ತಾಸುರ
ಮಹಿಷಾಸುರರೇ ಮೊದಲಾದ ರಕ್ಕಸರನ್ನು ಸಂಹರಿಸುವ ಮೊದಲು ಶ್ರೀಗೌರಿ ಪವಿತ್ರ ಸ್ನಾನ ಮುಗಿಸಿದಳಲ್ಲ ಹಾಗೆ;
ಏಷ್ಟೊಂದು ಸುಂದರಿ ನನ್ನ ತಾಯಿ!
ತಾಯಿ ಅಗ್ನಿಯಿಂದ ಮಾಡಲ್ಪಟ್ಟವಳು. ಮುಟ್ಟಿದರೆ ಭಸ್ಮವಾದೀಯೆ ಜೋಕೆ! ಹೃತ್ಕರ್ಣದ
ಕವಾಟ ಡಭಾರನೆ ಬಾಗಿಲು ಮುಚ್ಚಿಕೊಂಡಿತು.
ತಾಯಿ ಸ್ವರ್ಣಪುತ್ಥಳಿಯಂಥವಳೇನೋ! ಅಪವಿತ್ರಗೊಳಿಸಿದೆ ಎಂದರೆ ರೌರವ ನರಕ ಪ್ರಾಪ್ತವಾದೀತು ಜೋಕೆ! ಹೃತ್ಕಾಟದ
ಕಿಟಕಿ ಪಟಾರನೆ ಮುಚ್ಚಿಕೊಂಡಿತು.
ತನ್ನನ್ನೀ ಸ್ಥಿತಿಯಲ್ಲಿ ನೋಡಿ ಅದೆಷ್ಟು ದಿಗ್ಭ್ರಮೆ ಗೊಂಡಿರುವನಲ್ಲ ತನ್ನ ಮಗ . ಹೀಗೆ ಅವನೆಂದೂ
ತನ್ನ ದೇಹವನ್ನು ನೋಡಿರಲಿಲ್ಲ. ದೇಹದ ನರನಾಡಿಯಲ್ಲಿ ರೋಮಾಂಚನ ಹರಿದಾಡಿತು. ಶ್ವೇತ ರಂದ್ರಗಳು ನಾಚಿಕೆಯ
ಚಿಲುಮೆಯನ್ನು ಅರಳಿಸಿದವು. ದೇಹದ ಸಮಸ್ತ ರಕ್ತ ಸ್ತನಗಳಿಗೆ ಮತ್ತು ಕೆನ್ನೆಗಳಿಗೆ ನುಗ್ಗಿ ತುಂಬಿಕೊಂದಿತು.
ಅಲುಮೇಲಮ್ಮ ಆ ವಿಚಿತ್ರ ಮನಸ್ಥಿತಿಯಲ್ಲೂ ಮಗನ ಮುಖ ನೋಡಲು ಪ್ರಯತ್ನಿಸಿದಳು. ಅರೆ! ಅವನು ಮಗನಲ್ಲ
ಮಗನ ಮುಖವಾಡ ಧರಿಸಿರುವ ಧರಿಸಿ ನಿಂತಿರುವ ತನ್ನ ಗಂಡ. ಅದೇ ಕಣ್ಣು, ಅದೇ ಗಡುಸು ಮುಖ, ಅವೇ ಭಾವನೆಗಳು;
ಒಂದು ಕ್ಷಣ ವಿಚಲಿತಳಾದಳು. ಪರವಶಳಾದಳು ಮೂರ್ಚೆಹೋದಂತಾಗಿ ಮತ್ತೆ ಚೇತರಿಸಿಕೊಂಡಳು.
"ಅಮ್ಮಾ!ಽಽ..." ಶಾಮು ತಾಯಿಯ ಅಂತಃಕರಣವನ್ನು ಮಾತಿನಿಂದ ಸ್ಪರ್ಶಿಸಿದ. ವಾಸ್ತವಕ್ಕೆ ಜರಿದಳು ತಾಯಿ.
ನಾಚಿಕೆ, ಸಂಕೋಚ ಪಲ್ಲವಿಸಿದವು.
"ಮಗೂ ಶಾಮೂ..." ಸ್ತನಗಳನ್ನು ತನ್ನೆರಡು ಕೈಗಳಿಂದ ಬಿಗಿ ಹಿಡಿದು ಮರೆಮಾಚಿದಳು. ಮೊಣಕಾಲ ಚಿಪ್ಪಿನಲ್ಲಿ
ಮುಖ ಹುದುಗಿಸಿದಳು... "ಬೇಡ... ಬೇಡ... ನೀನಿಲ್ಲಿ ನಿಲ್ಲಬೇಡ... ಹೊರಟು ಹೋಗು... ನೀನು ನನ್ನ ಶಾಮನಲ್ಲ...
ನೀನು ದೊಡ್ಡವನಂತೆ ನೋಡುತ್ತಿರುವಿ... ನೀನಿಲ್ಲಿ ಇನ್ನೊಂದು ಕ್ಷಣ ನಿಂತಿದ್ದೇ ಆದರೆ ನಾನು ನಾಚಿಕೆಯಿಂದ
ಸತ್ತೇ ಹೋಗ್ತೀನೆ..." ಮಾತೇನೋ ಆಡಿದಳು... ಮಾತುಗಳನ್ನು ಒರೆಹಚ್ಚಿದಳು... ಹೋಗಲಿದ್ದ ಮಗನನ್ನು ಮತ್ತೆ
ತಡೆದಳು.
"ಇಲ್ಲ... ಮಗು... ಇಲ್ಲ... ನೀನು ಬೆಳೆದು ನಿಂತವನಲ್ಲ... ನೀನೊಬ್ಬ ಪುಟ್ಟ ಮಗುವೆ ನಿನ್ನೆರಡು ಪುಟ್ಟ
ಕೈಗಳಿಂದ ಬೆನ್ನು ಉಜ್ಜು... ತಾಯ್ತನವ ಸ್ಪರ್ಶಿಸು, ತಾಯ್ತನವನೆಚ್ಚರಿಸು... " ಆಜ್ಞಾಪಿಸಿದಳು ತಾಯಿ.
ತಾಯಿ ಎಳೆದ ಗೆರೆದಾಟುವುದುಂಟೆ ತಾನು!... ಸ್ಪರ್ಶಿಸುವ ಆಸೆಗೆ ಸಾವಿರ ರೆಕ್ಕೆಗಳು ಮೂಡಿದವು. ಎಷ್ಟೊಂದು
ಬಣ್ಣ ತಳೆದಂತಿದೆ!
ಮುಟ್ಟಿದ, ಮಹಾಕಾವ್ಯ ಮುಟ್ಟುತ್ತಿರುವಂಥ ಅನುಭವವಾಯಿತವನಿಗೆ.
ಸೌಂದರ್ಯಾರಾಧನೆ, ಸೌಂದರ್ಯಾನುಭವ, ರಮಣೀಯತೆ, ಮಾಮವೀಯತೆ , ಲಾವಣ್ಯೀಯತೆಗಳ ಸಂಗಮದಾಳದಲ್ಲಿ ಮುಳುಗಿದ.
ಓo ಜoubಣ ಣhe meಣಚಿಟ is sಣಡಿoಟಿgeಡಿ ಣhಚಿಟಿ ಣhe ಠಿeಣಚಿಟ
ಃuಣ ಚಿಣ ಣimes ಣhe ಠಿeಣಚಿಟ is sಣಡಿoಟಿgeಡಿ ಣhಚಿಟಿ ಣhe meಣಚಿಟ
ವಿಗ್ರಹದ ಕಾಠಿಣ್ಯದೊಳಗಿಂದ ಪುಷ್ಪದೊಳಗಿಂದ ಕೋಮಲತೆ ಆವಿರ್ಭವಿಸುತ್ತದೆ. ಪುಷ್ಪದಳದ ಮೇಲೆ ತುಷಾರ
ಧವಳ ಹರಿದಾಡುತ್ತಿರುವ ಅನುಭವ.
ಶನೈಃ ಶನೈಃ ಯನ್ನಾವತಾ ಮುಪೈತಿ
ತದೇವ ರೂಪಂ ಲಾವಣ್ಯತಾಂ...
ಕೋಮಲ ಭಾವನೆಗಳನ್ನು ಪಲ್ಲವಿಸುತ್ತಿರುವ ಮಾತೃಸ್ವರುಪ ಎಷ್ಟೊಂದು ಸುಂದರ? ಆ ಸೌಂದರ್ಯ ಅವನ ಮನಸ್ಸಿನೊಳಗೆ
ನಂದನವನವನ್ನು ಸೃಷ್ಟಿಸಿತು. ಆ ನಂದನವನವದ ಮರ, ಗಿಡ, ಲತೆ ಹರಿದ್ವರ್ಣದೊಡಲಿಂದ ಸಕಲರಾಗಗಳು ತಾಳಲಯ
ಶೃತಿ ಮೀರಿ ನುಡಿಯ ತೊಡಗಿದವು. ವ್ಯಕ್ತ ಜಗತ್ತು; ಅವ್ಯಕ್ತ ಜಗತ್ತು ಎರಡೂ ಒಂದಾಗುತ್ತಿರುವಂಥ ಅನುಭೂತಿ.
ಸಕಲ ಪವಿತ್ರ ನದಿಗಳ ಮಹಾಪೂರದಲ್ಲಿ ಕೊಚ್ಚಿಹೋಗುತ್ತಿರುವಂಥ ರಸಾನುಭೂತಿ...
ಸ್ಪರ್ಶದ ಉತ್ತುಂಗದ ಮೇಲೆ ವಿರಾಜಮಾನಳಾಗಿರುವ ತಾಯಿ ಸಸ್ಯಶಾಮಲತೆಯ ತಪ್ಪಲಿನಲ್ಲಿ ಅಂಬೆಗಾಲಿಟ್ಟು
ಅಡ್ಡಾಡುತ್ತ ತಂಗಾಳಿಯೊಡನೆ ಸಂಭಾಷಿಸುತ್ತಿರುವ ಮಗ, ಮೂಕ ಪ್ರೇಕ್ಷಕನಂತಾಗಿತುವ ಅಲಕಾಪುರಿಯಂಥ ಸ್ನಾನದ
ಕೋಣೆ...
"ಮಗೂ... ಎಚ್ಚರಾಗು ಮಗು ನನ್ನ ದೇಹ ಹಂಚಿಕೊಂಡು ರೂಪ ಪಡೆದಿರುವ ನಿನ್ನೊಳಗೆ ನಾನಿದ್ದೇನೆ ಕಣಪ್ಪಾ...
ನಿನ್ನ ಬಾಲ್ಯ ಲೀಲೆಗಲಿಗೆ ಮೈದಾನವಾಗಿದ್ದ ಈ ದೇಹ ನಿನ್ನ ಪ್ರೌಡ ಸ್ಪರ್ಶದಿಂದ ಎಷ್ಟೊಂದು ಹಸನಾಯಿತಲ್ಲ!..."
ತಾಯಿ ಎದ್ದು ನಿಂತಳು. ಮಳೆ ಬಿಲ್ಲು ನೆಲ ಮುಗಿಲೇಕವಾಗಿ ನಿಂತಂತೆ. ಅಸುರರ ರಕ್ತ ತರ್ಪಣದಿಂದ ಭೂಮಿಯನ್ನು
ಫಲವತ್ತು ಮಾಡಿದ ಅಂಬೆಯಂತೆ. ಪರಿಮಳ ಪಲ್ಲವಿಸುವ ಶ್ರೀಗಂದ ವೃಕ್ಷದಂತೆ, ದೇವಲೋಕದ ಪಾರಿಜಾತದ ತರುವಿನಂತೆ...
"ಮಗು ಅದೇನೋ ಕೇಳಬೇಕೆಂದುಕೊಂಡಿದ್ದೆಯಲ್ಲ..." ಬಟ್ಟೆ ಧರಿಸಿದಳು ತಾಯಿ. ಸಹ್ಯಾದ್ರಿ ಹಸಿರು ಧರಿಸಿದಂತೆ,
ಸಪ್ತವರ್ಣ ಸಮ್ಮಿಳಿತಧವಳಕಾಂತಿಯಂತೆ "ಯಾಕೆ ಸಂಕೋಚ ಮಗು ಕೇಳು..."
ಏನು ಕೇಳಬೇಕೆಂದಿದ್ದವನು ತಾನು! ನೆನಪಿನ ಕತ್ತು ಹಿಚುಕಿದ ಶಕ್ತಿಯ ಪ್ರಶ್ನೆಗೆ ಉತ್ತರವೆಲ್ಲಿದೆ ತನ್ನಲ್ಲಿ?
ತಡಕಾಡಿದ ಶಾಮು...
"ನೆನಪು ಮಾಡಿಕೋ ಮಗು... ನೆನಪು ಮಾಡಿಕೋ... ನೆನಪು ಮಾಡಿಕೊಳ್ಳದಿದ್ದರೆ ನನ್ನ ಮೇಲಾಣೆ" ರವಿಕೆ ಧರಿಸಿದಳು
ತಾಯಿ, ಅಯ್ಯೋ ತಾಯಿ ರವಿಕೆ ಧರಿಸಿದಳು...
ಪ್ರಶ್ನೆಯನ್ನು ಕೊಲ್ಲುವ ಶಕ್ತಿಯೇ ಪ್ರಶ್ನಿಸುವಂತೆ ಒತ್ತಾಯಿಸುತ್ತಿದೆಯಲ್ಲ!
ಆಸೆಯ ಮೇಲೆ ಗದಾ ಪ್ರಹಾರ